← Ch 5  ·  Contents  ·  Ch 7 →

Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11 · Ch 12

ಅಧ್ಯಾಯ ೬ — ನಾಮಪದಗಳ ಸ್ವರೂಪ

↑ ಒಳಪಿಡಿಗೆ ಹಿಂತಿರುಗಿ


ನಾಮಪದಗಳ ಸ್ವರೂಪ

Eke →

೬.೧ ನಾಮಪದಗಳ ವಿಭಜನೆ

ಹಳೆಗನ್ನಡದಲ್ಲಿ ಬಳಕೆಯಾಗುವ ನಾಮಪದಗಳ ವಿಭಜನೆಗೆ ಎರಡು ವಿಷಯಗಳು ಆಧಾರವಾಗಬಲ್ಲುವು: ಅವುಗಳಿಗೆ ಎಂತಹ ಒಳರಚನೆಯಿದೆ ಎಂಬುದು ಒಂದು, ಮತ್ತು ವಾಕ್ಯದಲ್ಲಿ ಬಳಕೆಯಾಗುವಾಗ ಅವು ಎಂತಹ ಗುಣಧರ್ಮಗಳನ್ನೆಲ್ಲ ತೋರಿಸುತ್ತವೆ ಎಂಬುದು ಇನ್ನೊಂದು. ಇವುಗಳಲ್ಲಿ ಮೊದಲನೆಯ ವಿಷಯವನ್ನಾಧರಿಸಿ ಹಳೆಗನ್ನಡದ ನಾಮಪದಗಳನ್ನು ಹೇಗೆ ವಿಂಗಡಿಸಬಹುದು ಎಂಬುದನ್ನು ಈ ಅಧ್ಯಾಯದಲ್ಲೂ, ಎರಡನೆಯ ವಿಷಯವನ್ನಾಧರಿಸಿ ಹೇಗೆ ವಿಂಗಡಿಸಬಹುದು ಎಂಬುದನ್ನು ಮುಂದಿನ (ಏಳನೇ) ಅಧ್ಯಾಯದಲ್ಲೂ ಪರಿಶೀಲಿಸಲಾಗುವುದು.

೬.೧.೧ “ಲಿಂಗ” ಪದದ ಅವಶ್ಯಕತೆ

ಸಂಸ್ಕೃತದಲ್ಲಿ ವಿಭಕ್ತಿ ಮತ್ತು ವಚನಗಳನ್ನು ಒಂದೇ ಪ್ರತ್ಯಯ ಸೂಚಿಸುವುದಾದ ಕಾರಣ, ದ್ವಿವಚನ ಮತ್ತು ಬಹುವಚನಗಳನ್ನು ಮಾತ್ರವಲ್ಲದೆ ಏಕವಚನವನ್ನು ಸೂಚಿಸುವುದಕ್ಕಾಗಿಯೂ ಆ ಭಾಷೆಯಲ್ಲಿ ಪ್ರತ್ಯಯದ ಬಳಕೆಯಾಗುತ್ತದೆ. ಹಾಗಾಗಿ, ವಿಭಕ್ತಿ-ವಚನ ಪ್ರತ್ಯಯವನ್ನು ಸೇರಿಸದೆ ಯಾವ ನಾಮಪದವನ್ನೂ ಸಂಸ್ಕೃತದ ವಾಕ್ಯಗಳಲ್ಲಿ ಬಳಸಲು ಸಾಧ್ಯವಾಗುವುದಿಲ್ಲ.

ಉದಾಹರಣೆಗಾಗಿ, ಸಂಸ್ಕೃತದ ಕಾಂತೇನ ಪದದಲ್ಲಿರುವ ಏನ ಎಂಬ ತೃತೀಯಾ- ಏಕವಚನ ಪ್ರತ್ಯಯವನ್ನು ತೆಗೆದಾಗ ಉಳಿಯುವ ಕಾಂತ್‌ (ಇಲ್ಲವೇ ಕಾಂತ) ರೂಪಕ್ಕೆ ವ್ಯಾಕರಣದಲ್ಲಿ ಮಾತ್ರ ಸ್ಥಾ ನವಿದೆಯಲ್ಲದೆ ನಿಜಕ್ಕೂ ವಾಕ್ಯದಲ್ಲಿ ಸ್ಥಾನವಿಲ್ಲ. ಅದು ವೈಯಾಕರಣಿಗಳು ಕಲ್ಪಿಸಿಕೊಂಡಿರುವ ಪದರೂಪ ಮಾತ್ರ.

ಈ ಕಾರಣಕ್ಕಾಗಿ, ಸಂಸ್ಕೃತ ವ್ಯಾಕರಣಗಳಲ್ಲಿ ನಾಮಪದದಿಂದ ವಿಭಕ್ತಿ-ವಚನ ಪ್ರತ್ಯಯವನ್ನು ತೆಗೆದಾಗ ಉಳಿಯುವ ಅಂಶಕ್ಕೆ ಬೇರೆಯೇ ಒಂದು ಹೆಸರನ್ನು ಕೊಡುವ ಅವಶ್ಯಕತೆಯಿದೆ. ಇದನ್ನು ಕೆಲವರು (ಪಾಣಿನಿಯೇ ಮೊದಲಾದವರು) “ಪ್ರಾತಿಪದಿಕ’ ಎಂದು ಕರೆದಿದ್ದಾರೆ, ಮತ್ತು ಬೇರೆ ಕೆಲವರು (ಜೈನ ವೈಯಾಕರಣಿಗಳು) “ಲಿಂಗ’ ಎಂದು ಕರೆದಿದ್ದಾರೆ.

ಹಳೆಗನ್ನಡದ ನಾಮಪದಗಳಲ್ಲಿ ವಚನವನ್ನು ಸೂಚಿಸುವ ಪ್ರತ್ಯಯ ವಿಭಕ್ತಿ ಯನ್ನು ಸೂಚಿಸುವ ಪ್ರತ್ಯಯದಿಂದ ಭಿನ್ನವಾಗಿದೆ; ಹಾಗಾಗಿ, ಬಹುವಚನವನ್ನು ಸೂಚಿಸುವುದಕ್ಕಾಗಿ ಮಾತ್ರ ಹಳೆಗನ್ನಡದ ನಾಮಪದಗಳಿಗೆ, ವಚನ ಪ್ರತ್ಯಯವನ್ನು ಸೇರಿಸಬೇಕಾಗುತ್ತದೆ. ನಾಮಪದದೊಂದಿಗೆ ಯಾವ ಪ್ರತ್ಯಯವನ್ನೂ ಬಳಸದಿದ್ದಾಗ ಅದಕ್ಕೆ ಏಕವಚನದ ಅರ್ಥ ಬರುತ್ತದೆ.

ಕಾರಣಕ್ಕಾಗಿ, ಹಳೆಗನ್ನಡದಲ್ಲಿ ನಾಮಪದದ ಪದರೂಪವೊಂದರಿಂದ ವಿಭಕ್ತಿ ಇಲ್ಲವೇ

ಈ ವಚನ ಪ್ರತ್ಯಯವನ್ನು ತೆಗೆದಾಗ ಉಳಿಯುವ ಅಂಶ ನಾಮಪದವೇ ಆಗಿರುತ್ತದೆ. ಹಾಗಾಗಿ,

ಹಳೆಗನ್ನಡ ವ್ಯಾಕರಣದಲ್ಲಿ “ನಾಮಪದ’ ಎಂಬುದಕ್ಕಿಂತ ಭಿನ್ನವಾಗಿರುವ “ಪ್ರಾತಿಪದಿಕ’ ಇಲ್ಲವೇ “”ಲಿಂಗ’ ಎಂಬ ಪದವನ್ನು ಬಳಸುವ ಅವಶ್ಯಕತೆಯೇ ಇಲ್ಲ.

ಉದಾಹರಣೆಗಾಗಿ, ಒಡಲಂ ಎಂಬುದರಿಂದ ಅಂ ವಿಭಕ್ತಿ ಪ್ರತ್ಯಯವನ್ನು ತೆಗೆದಾಗ ಉಳಿಯುವ ಒಡಲ್‌ ಎಂಬುದು, ಇಲ್ಲವೇ ಕನಸುಗಳ್‌ ಎಂಬುದರಿಂದ ಗಳ್‌ ಬಹುವಚನ ಪ್ರತ್ಯಯವನ್ನು ತೆಗೆದಾಗ ಉಳಿಯುವ ಕನಸು ಎಂಬುದು, ಇವೆರಡೂ ವಾಕ್ಯಗಳಲ್ಲಿ ಬರಬಲ್ಲ ನಾಮಪದ ರೂಪಗಳಲ್ಲದೆ ಕಲ್ಪಿತ ರೂಪಗಳಲ್ಲ.

ಹೀಗಿದ್ದರೂ, ಸಂಸ್ಕೃತ ವ್ಯಾಕರಣಗಳಲ್ಲಿ “ಲಿಂಗ’ ಎಂಬ ಪಾರಿಭಾಷಿಕ ಪದದ ಬಳಕೆಯಾಗಿದೆಯೆಂಬ ಕಾರಣಕ್ಕಾಗಿ, ಕನ್ನಡದ ಪ್ರಾಚೀನ ವೈಯಾಕರಣಿಗಳು ಅದನ್ನು ಹಳೆಗನ್ನಡ ವ್ಯಾಕರಣಗಳಲ್ಲೂ ಬಳಸಿದ್ದಾರೆ.

೬.೧.೨ ಕೃದಂತ ಮತ್ತು ತದ್ದಿತಾಂತ

ಸಂಸ್ಕೃತದಲ್ಲಿ ಕೃದಂತ, ತದ್ದಿತಾಂತ ಮತ್ತು ಸಮಾಸ ಎಂಬುದಾಗಿ ಮೂರು ವಿಧದ ಪ್ರಾತಿಪದಿಕಗಳು (ಲಿಂಗಗಳು) ಮಾತ್ರ ಇವೆ ಎಂದು ಹೇಳಲು ಸಾಧ್ಯವಿದೆ. ಯಾಕೆಂದರೆ, ಸಂಸ್ಕೃತದಲ್ಲಿ ಬಳಕೆಯಾಗುವ ಹೆಚ್ಚುಕಡಿಮೆ ಎಲ್ಲಾ ನಾಮಪದಗಳಿಗೂ ಮೂಲದಲ್ಲಿ (ಕ್ರಿಯಾ)ಧಾತುವೊಂದನ್ನು ಕಾಣಲು ಸಾಧ್ಯವಿದೆ. ಇಂತಹ ಧಾತುವಿಗೆ ಒಂದು ಇಲ್ಲವೇ ಹೆಚ್ಚು ಪ್ರತ್ಯಯಗಳನ್ನು ಸೇರಿಸುವುದರ ಮೂಲಕ, ಇಲ್ಲವೇ ಎರಡು ಅಥವಾ ಹೆಚ್ಚು ನಾಮಪದಗಳನ್ನು ಒಟ್ಟಿಗೆ ಸೇರಿಸುವುದರ ಮೂಲಕ ಅದರ ನಾಮಪದಗಳನ್ನು ಸಾಧಿಸಲಾಗುತ್ತದೆ.

ಹಾಗಾಗಿ, ಸಂಸ್ಕೃತದ ನಾಮಪದಗಳನ್ನು (೧) (ಕ್ರಿಯಾ)ಧಾತುಗಳಿಗೆ ಒಂದು ಪ್ರತ್ಯಯವನ್ನು ಸೇರಿಸಿರುವ ಕೃದಂತ, (೨) ಒಂದಕ್ಕಿಂತ ಹೆಚ್ಚು ಪ್ರತ್ಯಯಗಳನ್ನು ಸೇರಿಸಿರುವ ತದ್ದಿತಾಂತ, ಮತ್ತು (೩) ಎರಡು ಅಥವಾ ಹೆಚ್ಚು ನಾಮಪದಗಳನ್ನು ಒಟ್ಟು ಸೇರಿಸಿರುವ ಸಮಾಸ ಎಂಬುದಾಗಿ ವಿಭಜಿಸಲು ಸಾಧ್ಯವಾಗುತ್ತ ಜೆ;

ಹಳೆಗನ್ನಡದ ವೈಯಾಕರಣಿಗಳು ಇದೇ ವಿಭಜನೆಯನ್ನು ಹಳೆಗನ್ನಡಕ್ಕೂ ಅಳವಡಿಸಲು ಪ್ರಯತ್ನಿಸಿದ್ದಾರೆ. ಆದರೆ, ಹಳೆಗನ್ನಡ ನಾಮಪದಗಳ ಒಳರಚನೆ ಸಂಸ್ಕೃತದ ನಾಮಪದಗಳ ಒಳರಚನೆಗಿಂತ ತೀರ ಭಿನ್ನವಾಗಿದೆಯಾದ ಕಾರಣ, ತೊಂದರೆಯಾಗಿದೆ.

(೧) ಹಳೆಗನ್ನಡದಲ್ಲಿ ಕ್ರಿಯಾಧಾತುಗಳಿಂದ ಸಾಧಿಸಲು ಸಾಧ್ಯವಾಗದಂತಹ ನಾಮಪದಗಳು ಬೇಕಾದಷ್ಟಿವೆ. ಹಾಗಾಗಿ ಕೃದಂತ, ತದ್ದಿತಾಂತ ಮತ್ತು ಸಮಾಸ ಎಂಬ ಮೂರು ಪದವರ್ಗಗಳು ಮಾತ್ರವಲ್ಲದೆ, “ನಾಮ’ ಎಂಬ ನಾಲ್ಕನೆಯ ಪದವರ್ಗವನ್ನೂ ನಾಮಪದಗಳ ವಿಭಜನೆಯಲ್ಲಿ ಬಳಸಬೇಕಾಗಿದೆ (ಕೇಶಿರಾಜನ ಸೂ. ೮೨ ನೋಡಿ).

(೨) ಹಳೆಗನ್ನಡದಲ್ಲಿ ಕ್ರಿಯಾಪದಗಳಿಗೆ ಒಂದಕ್ಕಿಂತ ಹೆಚ್ಚು ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ ನಾಮಪದಗಳು ಬಹಳ ಕಡಿಮೆ. ಹೆಚ್ಚಿನ ನಾಮಪದಗಳ ಒಳರಚನೆಯಲ್ಲೂ ಒಂದು ಪದಪ್ರತ್ಯಯ ಮಾತ್ರ ಕಾಣಿಸಿಕೊಳ್ಳುತ್ತದೆ. ಆದರೆ, ಸಂಸ್ಕೃತದಲ್ಲಿ ಎರಡು ಅಥವಾ ಹೆಚ್ಚು ಪದಪ್ರತ್ಯಯಗಳನ್ನು ಬಳಸಿ ರಚಿಸಿರುವ ನಾಮಪದಗಳು ಬೇಕಾದಷ್ಟಿವೆ.

ಈ ಕಾರಣಕ್ಕಾಗಿ, ಕೃದಂತ ಮತ್ತು ತದ್ದಿತಾಂತ ಎಂಬ ಸಂಸ್ಕೃತದ ಪಾರಿಭಾಷಿಕ ಪದಗಳನ್ನು ಹಳೆಗನ್ನಡ ವ್ಯಾಕರಣಗಳಲ್ಲಿ ಬಳಸಲಾಗಿದೆಯಾದರೂ, ಅವಕ್ಕೆ ಬೇರೆಯೇ ಅರ್ಥವನ್ನು ಕೊಡಬೇಕಾಗಿದೆ. ಇಲ್ಲಿ ಒಂದು ಮುಖ್ಯವಾದ ವಿಷಯವನ್ನು ಗಮನಿಸುವುದು ಅವಶ್ಯ:

ಸಾಮಾನ್ಯವಾಗಿ, ಭಾಷೆಗಳಲ್ಲಿ ಪದ ಮತ್ತು ಪದರೂಪ ಎಂಬವುಗಳೊಳಗೆ ವ್ಯತ್ಯಾಸವಿರುತ್ತದೆ. ಪ್ರತ್ಯಯಗಳ ಮೂಲಕ ಒಂದು ಪದವರ್ಗಕ್ಕೆ ಸೇರಿದ ಪದಗಳಿಂದ ಬೇರೊಂದು ಪದವರ್ಗಕ್ಕೆ ಸೇರಬಲ್ಲ “ಪದ’ಗಳನ್ನಾಗಲಿ, ಇಲ್ಲವೇ ಬೇರೊಂದು ಪದವರ್ಗದ ಕೆಲಸದಲ್ಲಿ ಬಳಕೆಯಾಗುವುದಿದ್ದ. ರೂ ಅದೇ ಪದ ವರ್ಗದಲ್ಲಿ ಉಳಿಯುವ “ಪದರೂಪ’ಗಳನ್ನಾಗಲಿ ತಯಾರಿಸಲು ಸಾಧ್ಯವಿದೆ (೫. ೨.೧ ನೋಡಿ).

ಉದಾಹರಣೆಗಾಗಿ, ಹಳೆಗನ್ನಡದಲ್ಲಿ ಸಾಮಾನ್ಯವಾಗಿ ಒಂದು ಘಟನೆಯನ್ನು ಸೂಚಿಸುವ ಕೆಲಸವನ್ನು ಕ್ರಿಯಾಪದಗಳು ಮಾಡುತ್ತವೆ, ಮತ್ತು ಆ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸುವ ಕೆಲಸವನ್ನು ನಾಮಪದಗಳು ಮಾಡುತ್ತವೆ. ಕಾಂತಕಂ ಕಾರಾಗೃಹಕ್ಕೆ ಪೋದಂ ಎಂಬ ವಾಕ್ಯದಲ್ಲಿ ಘಟನೆಯನ್ನು ಸೂಚಿಸುವ ಕೆಲಸವನ್ನು ಪೋಗು ಕ್ರಿಯಾಪದ ಮಾಡುತ್ತದೆ, ಮತ್ತು ಆ ಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿ ಮತ್ತು ವಸ್ತುಗಳನ್ನು ಗುರುತಿಸುವ ಕೆಲಸವನ್ನು ಕಾಂತಕಂ ಮತ್ತು ಕಾರಾಗೃಹಂ ನಾಮಪದಗಳು ನಡೆಸುತ್ತವೆ.

ಆದರೆ, ಕೆಲವು ವಿಶಿಷ್ಟವಾದ ಸಂದರ್ಭಗಳಲ್ಲಿ ವ್ಯಕ್ತಿ, ವಸ್ತು, ವಿಷಯ ಮೊದಲಾದುವನ್ನು ಗುರುತಿಸುವ ಕೆಲಸವನ್ನು ಕ್ರಿಯಾಪದಗಳ ಮೂಲಕವೂ ನಡೆಸಲು ಸಾಧ್ಯವಿದೆ. ಹಳೆಗನ್ನಡದಲ್ಲಿ ಇದಕ್ಕೆ ಎರಡು ವಿಧಾನಗಳು ಬಳಕೆಯಾಗುತ್ತವೆ: ಕ್ರಿಯಾಪದಗಳನ್ನು ಅವುಗಳ “ನಾಮರೂಪ’ಕ್ಕೆ ಬದಲಾಯಿಸುವುದು ಒಂದು ವಿಧಾನ, ಮತ್ತು ಅವನ್ನೇ ಬೇರೊಂದು “ನಾಮಪದ’ವಾಗಿ ಬದಲಾಯಿಸುವುದು ಇನ್ನೊಂದು ವಿಧಾನ.

ಉದಾಹರಣೆಗಾಗಿ, ಕೂರದನ್‌ ಇದನ್‌ ಒಡ್ಡಿದನ್‌ “ಪ್ರೀತಿಸದವನು ಇದನ್ನು ಒಡ್ಡಿದ್ದಾನೆ’ ಎಂಬ ವಾಕ್ಯದಲ್ಲಿ ಕೂರ್‌ ಕ್ರಿಯಾಪದದ ಕೂರದನ್‌ ನಾಮರೂಪದ ಮೂಲಕ ಒಬ್ಬ ವ್ಯಕ್ತಿಯನ್ನು ಗುರುತಿಸಲಾಗಿದೆ, ಮತ್ತು ಉಡೆಯನುಟ್ಟು ಬಂದಂ “ಬಟ್ಟೆಯನ್ನು ಧರಿಸಿ ಬಂದ’ ಎಂಬ ವಾಕ್ಯದಲ್ಲಿ ಉಡು ಕ್ರಿಯಾಪದದಿಂದ ಉಡೆ ನಾಮಪದವನ್ನು ತಯಾರಿಸಿ, ಅದರ ಮೂಲಕ ಒಂದು ವಸ್ತು(ಬಟ್ಟೆ)ವನ್ನು ಗುರುತಿಸಲಾಗಿದೆ.

ಸಂಸ್ಕೃತದ ವ್ಯಾಕರಣಗಳಲ್ಲಿ ಪದ ಮತ್ತು ಪದರೂಪಗಳ ನಡುವಿರುವ ಈ ವ್ಯತ್ಯಾಸವನ್ನು ಸಾಮಾನ್ಯವಾಗಿ ಕಡೆಗಣಿಸಲಾಗಿದೆ. ಹೀಗೆ ಮಾಡಲು ಸಂಸ್ಕೃತದಲ್ಲಿ ಈ ವ್ಯತ್ಯಾಸ ಹೆಚ್ಚಿನ ಮಟ್ಟಿಗೆ ಅಳಿದುಹೋಗಿರುವುದೇ ಕಾರಣವಿರಬೇಕು (೫.೨.೧ ನೋಡಿ). ವೇದಕಾಲದ ಸಂಸ್ಕೃತದಲ್ಲಿ ಈ ವ್ಯತ್ಯಾಸ ಸ್ಪಷ್ಟವಾಗಿ ಕಾಣಿಸುತ್ತಿತ್ತು; ಆದರೆ, ಕ್ರಮೇಣ ಕಾವ್ಯಗಳ ಕಾಲಕ್ಕೆ ಬರುತ್ತಿದ್ದಂತೆ, ಅದು ಅಳಿದು ಹೋಗುತ್ತಾ ಬಂದಿದೆ.

ಸಂಸ್ಕೃತ ಭಾಷೆ ಮಾತಿನ ಬಳಕೆಯಿಂದ ಬೇರ್ಪಟ್ಟು ಬರಿಯ ಬರಹದ ಬಳಕೆಯಲ್ಲಿ ಮಾತ್ರ ಉಳಿದಿರುವುದೇ ಇಂತಹ ಭಾಷೆಯ ಸಹಜತೆಗೆ ಸಂಬಂಧಿಸಿದ ಹಲವು ಸೂಕ್ಷ್ಮ ವ್ಯತ್ಯಾಸಗಳು ಅದರಿಂದ ಕಾಣೆಯಾಗಿರುವುದಕ್ಕೆ ಮುಖ್ಯ ಕಾರಣ.

ಮೇಲೆ ಸೂಚಿಸಿದ ಹಾಗೆ, ಸಂಸ್ಕೃತದ ವ್ಯಾಕರಣಗಳಲ್ಲಿ ಕೃದಂತ ಮತ್ತು ತದ್ಧಿ ತಾಂತಗಳೆಂಬುದಾಗಿ ಕ್ರಿಯಾಧಾತುಗಳಿಂದ ಸಿದ್ದ ವಾಗುವ ನಾಮಪದಗಳನ್ನು ವಿಭಜಿಸಿರುವಲ್ಲಿ ಪದ ಮತ್ತು ಪದರೂಪಗಳ ನಡುವಿರುವ ವ್ಯತ್ಯಾಸವನ್ನು ಕಡೆಗಣಿಸಲಾಗಿದೆ. ಸಿದ್ದವಾಗಿರುವ ನಾಮಪದಗಳಲ್ಲಿ ಪ್ರತ್ಯಯಗಳೆಷ್ಟಿವೆ ಎಂಬ ಒಂದು ಅಂಶಕ್ಕೆ ಮಾತ್ರವೇ ಪ್ರಾಧಾನ್ಯತೆಯನ್ನು ಕೊಡಲಾಗಿದೆ. ಉದಾಹರಣೆಗಾಗಿ, ಕ್ರಿಯಾಧಾತುವಿಗೆ ಒಂದೇ ಪ್ರತ್ಯಯವನ್ನು ಸೇರಿಸಿ ತಯಾರಿಸಿರುವ ಹಲವು ರೀತಿಯ ನಾಮಪದಗಳನ್ನು ಕೃದಂತ ಎಂಬ ಹೆಸರಿನಿಂದ ಕರೆಯಲಾಗಿದೆ.

ಭೂ “ಆಗು’ ಧಾತುವಿನಿಂದ ತಯಾರಾದ ಭವತ್‌, ಭವಿಷ್ಯತ್‌, ಭೂತ, ಭವಿತವ್ಯ, ಭಾವ, ಭಾವಿನ್‌, ಭವನ ಮೊದಲಾದವುಗಳು, ಭೀ ಧಾತುವಿನಿಂದ ತಯಾರಾದ ಭಯ, ವದ್‌ ಧಾತುವಿನಿಂದ ಬಂದ ವದನ “ಮುಖ, ವಿಶ್‌ ಧಾತುವಿನಿಂದ ತಯಾರಾದ ವೇಶ್ಮನ್‌ “ಮನೆ’, ಬುಧ್‌ ಧಾತುವಿನಿಂದ ತಯಾರಾದ ಬುದ್ಧಿ, ಗ್ರಹ್‌ ಧಾತುವಿನಿಂದ ತಯಾರಾದ ಗ್ರಾಹಕ, ಇಂತಹವೆಲ್ಲವೂ ಸಂಸ್ಕೃತದಲ್ಲಿ ಕೃದಂತಗಳೆಂದೆನಿಸುತ್ತವೆ.

ಆದರೆ, ಹಳೆಗನ್ನಡದಲ್ಲಿ ಕೃದಂತ ಮತ್ತು ತದ್ದಿತಾಂತ ಪದಗಳನ್ನು ಈ ಅರ್ಥದಲ್ಲಿ ಬಳಸುವುದು ಅಷ್ಟೊಂದು ತೃಪ್ತಿಕರವಾಗಲಾರದು. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಹಳೆಗನ್ನಡದಲ್ಲಿ ಒಂದಕ್ಕಿಂತ ಜಾಸ್ತಿ ಪ್ರ ತ್ಯಯಗಳಿರುವ ಸಾಧಿತ ನಾಮಪದಗಳು ಬಹಳ ಕಡಿಮೆ. ಬಹುಶಃ ಈ ಕಾರಣಕ್ಕಾಗಿ, ಹಳೆಗನ್ನಡದ ವೈಯಾಕರಣಿಗಳು ಕ್ರಿಯಾಪದಗಳ ನಾಮರೂಪಗಳನ್ನು (ಕೂರದನ್‌ ಎಂಬಂತಹವನ್ನು) ಕೃಲ್ಲಿಂಗಗಳೆಂದೂ, ಕ್ರಿಯಾಪದಗಳಿಂದ (ಇಲ್ಲವೇ ನಾಮಪದ ಮತ್ತು ಗುಣಪದಗಳಿಂದ) ಸಿದ್ದ ವಾದ ನಾಮಪದಗಳನ್ನು ತದ್ದಿ ತ ಲಿಂಗಗಳೆಂದೂ ಕರೆದಿರಬೇಕು.

ಆದರೆ, ಕನ್ನಡ ಕೈಪಿಡಿಯಲ್ಲಿ (ಪು. ೧೫) ಕ್ರಿಯಾಧಾತುಗಳಿಗೆ ಸೇರುವ ಪ್ರತ್ಯಯಗಳನ್ನು ಕೃತ್‌ ಪ್ರತ್ಯಯಗಳೆಂದೂ ಇತರ (ನಾಮ ಇಲ್ಲವೇ ಗುಣ) ಧಾತುಗಳಿಗೆ ಇಲ್ಲವೇ ಕೃದಂತಗಳಿಗೆ ಸೇರುವ ಪ್ರತ್ಯಯಗಳನ್ನು ತದ್ಧಿ ತ ಪ್ರತ್ಯಯಗಳೆಂದೂ ವಿಭಜಿಸಲಾಗಿದೆ. ಈ ವಿಭಜನೆಯಲ್ಲಿ ಮೇಲೆ ಸೂಚಿಸಿದ ಪದ ಮತ್ತು ಪದರೂಪಗಳ ನಡುವಿನ ವ್ಯತ್ಯಾಸವನ್ನು ಕಡೆಗಣಿಸಲಾಗಿದೆ (೬.೧.೩ ನೋಡಿ).

೬.೧.೩ ಕೃಲ್ಲಿಂಗಗಳು

ಹಳೆಗನ್ನಡ ವ್ಯಾಕರಣಗಳಲ್ಲಿ ಕ್ರಿಯಾಪದಗಳ ಭೂತ ಮತ್ತು ಭವಿಷ್ಯತ್ಕಾಲದ ನಾಮರೂಪಗಳನ್ನು (ನಲಿದಂ, ಬೇಡುವಂ) ಮಾತ್ರ ಕೃಲ್ಲಿ ೦ಗಗಳೆಂದು ಕರೆದಿರುವ ಹಾಗೆ ಕಾಣಿಸುತ್ತದೆ (ಕೇಶಿರಾಜನ ಸೂ. ೮೩ ನೋಡಿ). (ಭಟ್ಟಾಕಳಂಕನು ದಪ ಪ್ರತ್ಯಯದಿಂದ ತಯಾರಾದ ರೂಪವನ್ನೂ ಇವಕ್ಕೆ ಸೇರಿಸಿದ್ದಾನೆ). ಮೇಲೆ ಸೂಚಿಸಿದ ಹಾಗೆ, ಹಳೆಗನ್ನಡದಲ್ಲಿ ಇವು ಸ್ಪಷ್ಟವಾಗಿ ನಾಮಪದಗಳ ಕೆಲಸದಲ್ಲಿ ಬಳಸುವುದಕ್ಕಾಗಿ ತಯಾರಾದ ಕ್ರಿಯಾಪದಗಳ ಪದರೂಪಗಳಲ್ಲದೆ ಅವುಗಳಿಂದ ಸಿದ್ಧವಾದ ನಾಮಪದಗಳಲ್ಲ. |

ಇದಕ್ಕೆ ಬದಲು, ನಡುಕ (ಕೇಶಿರಾಜನ ಸೂ. ೨೨೪), ಕೇಡು (ಕಿಡು), ಈಡು (ಇಡು), ಆಟ (ಆಡು) (ಸೂ. ೨೨೪) ಮೊದಲಾದವುಗಳಲ್ಲಿ ಕ್ರಿಯಾಧಾತುಗಳಿಗೆ ಒಂದೇ ಪ್ರತ್ಯಯ ಸೇರಿದೆಯಾದರೂ, ಅವನ್ನು ತದ್ಧಿತ ಲಿಂಗಗಳೆಂದು ಕರೆಯಲಾಗಿದೆ. ಇವು ಕ್ರಿಯಾಪದಗಳಿಂದ ತಯಾರಾದ ನಾಮಪದಗಳಲ್ಲ ದೆ, ಅವುಗಳ ಪದರೂಪಗಳಲ್ಲ ವೆಂಬುದೇ ಇದಕ್ಕೆ ಕಾರಣವಿರಬಹುದು.

ನಾಮಪದಗಳ ವಿಭಜನೆಗಾಗಿ ಸಂಸ್ಕೃತ ವ್ಯಾಕರಣ ನಿಯಮಗಳನ್ನು ಹಾಗೆಯೇ ಅಳವಡಿಸುವ ಪ್ರಯತ್ನ ನಡೆಸಿದುದರಿಂದಾಗಿ, ಹಳೆಗನ್ನಡ ವ್ಯಾಕರಣಗಳಲ್ಲಿ ಇನ್ನೊಂದು ತಪ್ಪು ಸಂಭವಿಸಿದೆ: ಹಳೆಗನ್ನಡದ ಮಾಡಿದ, ಪೇಲ್ದಿ, ಪೋದ ಮೊದಲಾದ ಕೃದಂತಗಳು ಸಂಸ್ಕೃತದ ಕೃತ, ಉಕ್ತ, ಗತ ಮೊದಲಾದ ಕೃದಂತಗಳಿಂದ ಎರಡು ವಿಷಯಗಳಲ್ಲಿ ಭಿನ್ನವಾಗಿವೆ.

ಮೊದಲನೆಯದಾಗಿ, ಸಂಸ್ಕೃತದಲ್ಲಿ ಇವನ್ನು ಕ್ರಿಯಾಪದಕ್ಕೆ ತ ಎಂಬ ಒಂದು ಪ್ರತ್ಯಯವನ್ನು ಮಾತ್ರವೇ ಸೇರಿಸಿ ತಯಾರಿಸಲಾಗಿದೆ; ಆದರೆ ಹಳೆಗನ್ನಡದಲ್ಲಿ ಇವನ್ನು ಕ್ರಿಯಾಪದಕ್ಕೆ ಹಿಂದಿನ ಸಮಯವನ್ನು ಸೂಚಿಸುವ ದ್‌ ಪ್ರತ್ಯಯವನ್ನು ಮತ್ತು ಸಂಬಂಧವನ್ನು ಸೂಚಿಸುವ ಅ ಪ್ರತ್ಯಯವನ್ನು

ಸೇರಿಸಿ ತಯಾರಿಸಲಾಗಿದೆ. ಕೇಶಿರಾಜನು ಹೇಳಿದ ಹಾಗೆ (ಸೂ. ೮೨), ಭೂತ ಕಾಲದ ಕ್ರಿಯಾರೂಪಗಳಿಂದ ಆಗಮವನ್ನುಳಿಸಿಕೊಂಡು ಆಖ್ಯಾತ ಪ್ರತ್ಯಯವನ್ನು ತೆಗೆದಾಗ ಈ ರೂಪಗಳು ಲಭಿಸುವುದಿಲ್ಲ.

ಎರಡನೆಯದಾಗಿ, ಸಂಸ್ಕೃತದಲ್ಲಿ ಕೃದಂತಗಳು ನೇರವಾಗಿ ವಿಭಕ್ತಿ ಪ್ರತ್ಯಯಗಳನ್ನು ಪಡೆಯಬಲ್ಲುವು; ಹಾಗಾಗಿ, ಅವನ್ನು ಲಿಂಗಗಳೆಂದಾಗಲಿ, ಇಲ್ಲ ವೇ ಪ್ರಾತಿಪದಿಕಗಳೆಂದಾಗಲಿ ಕರೆಯುವುದರಲ್ಲಿ ತೊಂದರೆಯಿಲ್ಲ. ಆದರೆ, ಹಳೆಗನ್ನಡದಲ್ಲಿ ಇವು ನೇರವಾಗಿ ವಿಭಕ್ತಿ ಪ್ರತ್ಯಯಗಳನ್ನು ಪಡೆಯಲಾರವು. ಯಾಕೆಂದರೆ, ಹಳೆಗನ್ನಡದಲ್ಲಿ ಇವು ಕ್ರಿಯಾಪದವನ್ನು ನಾಮಪದದೊಂದಿಗೆ ಸಂಬಂಧಿಸುವುದಕ್ಕಾಗಿ ಬಳಕೆಯಾಗುವ ಪದರೂಪಗಳು (ಎಂದರೆ, ಕ್ರಿಯಾಪದಗಳ ಗುಣರೂಪಗಳು). ಇವಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಬೇಕಿದ್ದಲ್ಲಿ, ಮೊದಲಿಗೆ ಲಿಂಗ-ವಚನಗಳನ್ನು ಸೂಚಿಸುವ ಅನ್‌, ಅಳ್‌, ಅರ್‌, ಉದು, ಉವು ಎಂಬ ಪ್ರತ್ಯಯಗಳಲ್ಲೊ ೦ದನ್ನು ಸೇರಿಸಿ ಅವನ್ನು ನಾಮರೂಪಕ್ಕೆ ಬದಲಾಯಿಸಿಕೊಳ್ಳಬೇಕಾಗುತ್ತದೆ (೪.೨.೧ ನೋಡಿ).

೬.೧.೪ ಗುಣಪದಗಳು

ಸಂಸ್ಕೃತದಲ್ಲಿ ಗುಣಪದಗಳು (ಗುಣವಾಚಕಗಳು) ನೇರವಾಗಿ ವಿಭಕ್ತಿ ಪ್ರತ್ಯಯಗಳನ್ನು ಪಡೆಯಬಲ್ಲುವು (೪.೨.೨ ನೋಡಿ). ಹಾಗಾಗಿ, ಅವನ್ನು “ಲಿಂಗ’ಗಳೆಂದು ಕರೆಯುವುದರಲ್ಲಿ ತೊಂದರೆಯಿಲ್ಲ. ಆದರೆ, ಹಳೆಗನ್ನಡದಲ್ಲಿ ಗುಣಪದಗಳು ವಿಭಕ್ತಿ ಪ್ರತ್ಯಯಗಳೊಂದಿಗೆ ಬರಬೇಕಿದ್ದಲ್ಲಿ, ಅವಕ್ಕೆ ಮೊದಲಿಗೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸುವ ಅವಶ್ಯಕತೆಯಿದೆ.

ಸರ್ವನಾಮ ಮತ್ತು ಸಂಖ್ಯಾವಾಚಕಗಳ ಬಳಕೆಯಲ್ಲೂ ಇಂತಹದೇ ವ್ಯತ್ಯಾಸ ಹಳೆಗನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಕಾಣಿಸುತ್ತದೆ: ಸಂಸ್ಕೃತದಲ್ಲಿ ಇವೆಲ್ಲವನ್ನೂ ನಾಮಪದವೆಂಬ ಒಂದೇ ವರ್ಗದಲ್ಲಿ ಸೇರಿಸಿ ಹೇಳಲು ಸಾಧ್ಯವಿದೆ; ಆದರೆ, ಹಳೆಗನ್ನಡದಲ್ಲಿ ಇವಕ್ಕೆ ನಾಮಪದ ಮತ್ತು ಗುಣಪದಗಳೆಂಬ ಎರಡು ವರ್ಗಗಳಿಗೆ ಸೇರಬಲ್ಲ ರೂಪಗಳಿವೆ. ಇತರ ಗುಣಪದಗಳ ಹಾಗೆ, ಇವುಗಳಲ್ಲೂ ಗುಣರೂಪಗಳಿಗೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ನಾಮರೂಪಗಳನ್ನು ಪಡೆಯಬೇಕಾಗುತ್ತದೆ (೬.೨ ನೋಡಿ).

ಈ ಎಲ್ಲಾ ಸಂದರ್ಭಗಳಲ್ಲೂ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ನೇರವಾಗಿ ಕನ್ನಡಕ್ಕೆ ಅಳವಡಿಸುವ ಪ್ರಯತ್ನವನ್ನು ನಡೆಸಿರುವುದರಿಂದಾಗಿ ಹಳೆಗನ್ನಡ ವೈಯಾಕರಣಿಗಳು ಎಡವಿದ್ದಾರೆ ಎಂಬುದನ್ನು ಮುಂದೆ ನೋಡಲಿರುವೆವು.

Eke →

೬.೨ ಕೃಲ್ಲಿಂಗಗಳ ಸ್ವರೂಪ

ಮೇಲೆ (೬.೧.೩)ರಲ್ಲಿ ಸೂಚಿಸಿದ ಹಾಗೆ, ಕ್ರಿಯಾಪದಗಳ ನಾಮರೂಪಗಳನ್ನು ಎಂದರೆ ವಾಕ್ಯಗಳಲ್ಲಿ ನಾಮಪದಗಳ ಜಾಗದಲ್ಲಿ ಬರಬಲ್ಲ ಕ್ರಿಯಾಪದಗಳ ಪದರೂಪಗಳನ್ನು, “ಕೃಲ್ಲಿಂಗ’ಗಳೆಂದು ಕರೆಯಲಾಗಿದೆ. ಹಳೆಗನ್ನಡದಲ್ಲಿ ಇವು ಕ್ರಿಯಾಪದಗಳ ನಾಮರೂಪಗಳಾಗಿದ್ದು, ಇವಕ್ಕೂಕ್ರಿಯಾಪದಗಳ ಗುಣರೂಪಗಳಿಗೂ ನಡುವೆ ಒಂದು ಮುಖ್ಯವಾದ ವ್ಯತ್ಯಾಸವಿದೆ ಎಂಬುದನ್ನು ನಾವು (೬.೧.೩)ರಲ್ಲಿ ನೋಡಿರುವೆವು.

ಕ್ರಿಯಾಪದಗಳ ಗುಣರೂಪವನ್ನು ಸಾಧಿಸಲು ಅವುಗಳೊಂದಿಗೆ ಸಂಬಂಧವನ್ನು ಸೂಚಿಸುವ ಅ ಪ್ರತ್ಯಯವನ್ನು ಬಳಸಬೇಕಾಗುತ್ತದೆ. ಇದಲ್ಲದೆ, ಈ ಕ್ರಿಯಾರೂಪಗಳಲ್ಲಿ ಹಿಂದಿನ ಇಲ್ಲವೇ ಮುಂದಿನ ಸಮಯವನ್ನು ಸೂಚಿಸುವ ಪ್ರತ್ಯಯ, ಅಥವಾ ಅಲ್ಲಗಳೆಯುವ ಪ್ರತ್ಯಯ ಬರಬೇಕಾಗುತ್ತದೆ.

ಕಟ್ಟಿದ ಕಟ್ಟುಗಳ್‌ ಕಟ್ಟುವ ಕಟ್ಟುಗಳ್‌ ಕಟ್ಟದ ಕಟ್ಟುಗಳ್‌

ಕಟ್ಟು ಕ್ರಿಯಾಪದದ ಗುಣರೂಪವನ್ನು ತಯಾರಿಸುವುದಕ್ಕಾಗಿ ಇಲ್ಲಿ ಅದಕ್ಕೆ ದ್‌, ವ್‌ ಇಲ್ಲವೇ ಅದ್‌ ಪ್ರತ್ಯಯವನ್ನು ಸೇರಿಸಲಾಗಿದೆ, ಮತ್ತು ಅದರ ಬಳಿಕ ಅ ಪ್ರತ್ಯಯವನ್ನು ಸೇರಿಸಲಾಗಿದೆ.

ಇಂತಹ ಕ್ರಿಯಾಪದಗಳ ಗುಣರೂಪಗಳಿಗೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಿದಾಗ ಅವುಗಳ ನಾಮರೂಪ ಸಿದ್ಧಿ ಸುತ್ತದೆ. ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ಬಳಕೆಗಳನ್ನು ಗಮನಿಸಬಹುದು:

(೧ಕ) ಪೋದರನ್‌ ಒಡಗೊಂಡು ಬರಲ್‌ ಪೋದರ್‌…. (೮.೪೫) “ಹೋದವರನ್ನು ಕರೆದುಕೊಂಡು ಬರಲು ಹೋದವರು…’

(೧ಖ) ಪೆಅ ಪಿಂಗುವನಂ ಮುರಿದಡಸಿ ಪಿಡಿದು (೧೩.೩೦) “ಹಿಂದಕ್ಕೆ ಹೋಗುವವನನ್ನು ಹಿಂದಿರುಗಿ ಹಿಡಿದು’

(೧ಗ) ಕೂರದನ್‌ ಇದನ್‌ ಒಡ್ಡಿದನ್‌ (೩.೪) “ಇದನ್ನು ಪ್ರೀತಿಸದವನು ಒಡ್ಡಿದ್ದಾನೆ’

(೧ಕ)ದಲ್ಲಿ ಪೋಗು ಕ್ರಿಯಾಪದದ ಸಂಬಂಧಿಸುವ ರೂಪವಾದ ಪೋದ ಎಂಬುದಕ್ಕೆ ಲಿಂಗ- ವಚನಗಳನ್ನು ಸೂಚಿಸುವ ಅರ್‌ ಪ್ರತ್ಯಯವನ್ನು ಸೇರಿಸಿದ ಮೇಲೇನೇ ವಿಭಕ್ತಿ ಪ್ರತ್ಯಯವನ್ನು (ಅನ್‌ ಎಂಬುದನ್ನು) ಸೇರಿಸಲಾಗಿದೆ. ಇದೇ ರೀತಿಯಲ್ಲಿ, (೧ಖ)ದಲ್ಲಿ ಪಿಂಗು ಕ್ರಿಯಾಪದದ ಸಂಬಂಧಿಸುವ ರೂಪವಾದ ಪಿಂಗುವ ಎಂಬುದಕ್ಕೆ ಲಿಂಗ-ವಚನಗಳನ್ನು ಸೂಚಿಸುವ ಅನ್‌ ಪ್ರತ್ಯಯವನ್ನು ಸೇರಿಸಿದ ಮೇಲೇನೇ ಅನ್‌ ಪ್ರತ್ಯಯವನ್ನು ಸೇರಿಸಲಾಗಿದೆ.

ಇಂತಹ ಪ್ರಯೋಗಗಳಲ್ಲಿ ಕ್ರಿಯಾಪದದ ಸಂಬಂಧಿಸುವ ರೂಪ(ಗುಣರೂಪ)ಕ್ಕೆ ಲಿಂಗ- ವಚನ ಪ್ರತ್ಯಯಗಳನ್ನು ಸೇರಿಸಲಾಗುತ್ತದಲ್ಲದೆ, ನೇರವಾಗಿ ಕ್ರಿಯಾಪದಗಳಿಗೆ ಸಮಯ ಪ್ರತ್ಯಯ ಇಲ್ಲವೇ ಅಲ್ಲಗಳೆಯುವ ಪ್ರತ್ಯಯವನ್ನು ಸೇರಿಸಿ, ಅದಕ್ಕೆ ಈ ಪ್ರತ್ಯಯಗಳನ್ನು ಸೇರಿಸಲಾಗುವುದಿಲ್ಲ ಎಂಬುದನ್ನು (೧ಗ)ದಲ್ಲಿ ಕಾಣಿಸುವ ಬಳಕೆ ಸ್ಪಷ್ಟಪಡಿಸುತ್ತದೆ. ಇಲ್ಲಿ ಕೂರ್‌ ಕ್ರಿಯಾಪದಕ್ಕೆ ಅಲ್ಲಗಳೆಯುವ ಪ್ರತ್ಯಯ ಮತ್ತು ಸಂಬಂಧಿಸುವ ಪ್ರತ್ಯಯಗಳೆರಡನ್ನೂ ಸೇರಿಸಿರುವ ಕೂರದ ಎಂಬ ರೂಪಕ್ಕೆ ಲಿಂಗ-ವಚನ ಪ್ರತ್ಯಯವನ್ನು (ಅನ್‌ ಎಂಬುದನ್ನು) ಸೇರಿಸಲಾಗಿದೆ.

ಇದು ನೇರವಾಗಿ ಕ್ರಿಯಾಪದಕ್ಕೆ ಅಲ್ಲಗಳೆಯುವ ಪ್ರತ್ಯಯವನ್ನು, ಮತ್ತು ಘಟಕವನ್ನು ಸೂಚಿಸುವ ಅನ್‌ ಪ್ರತ್ಯಯವನ್ನು ಸೇರಿಸಿರುವ ಕ್ರಿಯಾರೂಪಕ್ಕಿಂತ ಭಿನ್ನವಾಗಿದೆ ಎಂಬುದನ್ನು (೧ಘ)ದಲ್ಲಿ ಕಾಣಬಹುದು.

(೧ಘ) ಆ ಘಟಸಂಭವಂ ಎನಗೆ ಕೂರ್ಪುದನ್‌ ನಿನಗೆ ಕೂರನ್‌ (೧೨.೩೬) “ಆ ದ್ರೋಣಾಚಾರ್ಯನು ನನ್ನನ್ನು ಪ್ರೀತಿಸುವಷ್ಟು ನಿನ್ನನ್ನು ಪ್ರೀತಿಸಲಿಲ್ಲ

(೧ಘ)ದಲ್ಲಿ ಬಂದಿರುವ ಕೂರನ್‌ ಎಂಬುದು ಅಲ್ಲಗಳೆಯುವ ಕ್ರಿಯಾರೂಪ. ಇದರಲ್ಲಿ ಕೂರ್‌ ಕ್ರಿಯಾಪದಕ್ಕೆ ಅಲ್ಲಗಳೆಯುವ ಅ ಪ್ರತ್ಯಯವನ್ನು ಮತ್ತು ಘಟಕವನ್ನು ಸೂಚಿಸುವ ಅನ್‌ ಪ್ರತ್ಯಯವನ್ನು

(೧ಗ)ದಲ್ಲಿ ಬಂದಿರುವ ಕೂರದನ್‌ ಎಂಬುದು ಇದಕ್ಕಿಂತ ತೀರ ಭಿನ್ನವಾಗಿರುವ ಕೃಲ್ಲಿಂಗ (ನಾಮರೂಪ). ಅದರಲ್ಲಿ ಕೂರ್‌ ಕ್ರಿಯಾಪದದೊಂದಿಗೆ ಅಲ್ಲ ಗಳೆಯುವ ಅದ್‌ ಪ್ರತ್ಯಯ ಬಂದಿದ್ದು, ಅದರೊಂದಿಗೆ ಸಂಬಂಧಿಸುವ ಅ ಪ್ರತ್ಯಯವೂ ಬಂದಿದೆ, ಮತ್ತು ಅದರ ಅನಂತರ ಲಿಂಗ-ವಚನ ಪ್ರತ್ಯಯ ಅನ್‌ ಬಂದಿದೆ.

ಈ ಅಲ್ಲಗಳೆಯುವ ಅದ್‌ ಪ್ರತ್ಯಯ ಸಂಬಂಧಿಸುವ ಅ ಪ್ರತ್ಯಯದೊಂದಿಗೆ ಮಾತ್ರ ಬರುತ್ತದೆ ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ.

ಹಳೆಗನ್ನಡದ ಒಳ್‌ (ಉಳ್‌) ಕ್ರಿಯಾಪದದ ಕ್ರಿಯಾರೂಪಗಳನ್ನು ಮತ್ತು ಕೃಲ್ಲಿಂಗ ರೂಪಗಳನ್ನು ಸಾಧಿಸುವಲ್ಲೂ ಈ ವ್ಯತ್ಯಾಸವನ್ನು ಸ್ಪಷ್ಟವಾಗಿ ಕಾಣಬಹುದು. ಈ ಕ್ರಿಯಾಪದಕ್ಕೆ, ಒಳನ್‌, ಒಳರ್‌, ಒಳೆನ್‌, ಒಳಯ್‌ ಮೊದಲಾದ ಕ್ರಿಯಾರೂಪಗಳಿದ್ದು, ಇವನ್ನು ಒಳ್‌ ಕ್ರಿಯಾಪದಕ್ಕೆ ನೇರವಾಗಿ ಆಖ್ಯಾತ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆ. ಈ ಕ್ರಿಯಾಪದದೊಂದಿಗೆ ಸಮಯ ಪ್ರತ್ಯಯ ಬರುವುದಿಲ್ಲ (೧೧.೫ ನೋಡಿ).

ಈ ಕ್ರಿಯಾಪದದ ಕೃಲ್ಲಿಂಗ ರೂಪಗಳು (ಉಳ್ಳನ್‌, ಉಳ್ಳರ್‌, ಉಳ್ಳಳ್‌ ಮೊದಲಾದವು) ಮೇಲೆ ಕೊಟ್ಟಿರುವ ಕ್ರಿಯಾರೂಪಗಳಿಂದ ಭಿನ್ನವಾಗಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಭಾರತದ ವಾಕ್ಯಗಳನ್ನು ಗಮನಿಸಬಹುದು:

(೨5) ಮಕ್ಕಳೆನಗೈವರ್‌ ಒಳರ್‌ (೩.೨೬) “ನನಗೆ ಐವರು ಮಕ್ಕಳಿದ್ದಾ ರೆ”

(೨ಖ) ರಣರಂಗದೊಳ್‌ ಉಳ್ಳರೆಲ್ಲ ರುಂ ಮಡಿದೊಡಂ (೧೩.೮೩) “(ಉಳಿದು) ಇರುವವರೆಲ್ಲರೂ ರಣರಂಗದಲ್ಲಿ ಸತ್ತ ರೂ’

(೨ಕ)ದಲ್ಲಿ ಒಳ್‌ (ಉಳ್‌) ಕ್ರಿಯಾಪದದ ಕ್ರಿಯಾರೂಪ (ಒಳರ್‌) ಬಂದಿದೆ, ಮತ್ತು (೨ಖ)ದಲ್ಲಿ ಅದೇ ಕ್ರಿಯಾಪದದ ಕೃಲ್ಲಿಂಗ ರೂಪ (ಉಳ್ಳರ್‌) ಬಂದಿದೆ.

ಈ ವ್ಯತ್ಯಾಸವನ್ನು ವಿವರಿಸುವುದಕ್ಕಾಗಿ ಒಳನ್‌, ಒಳರ್‌ ಮೊದಲಾದ ಕ್ರಿಯಾರೂಪಗಳನ್ನು ನೇರವಾಗಿ ಕ್ರಿಯಾಪದಕ್ಕೆ ಆಖ್ಯಾತ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಸಾಧಿಸಬೇಕಾಗುತ್ತದೆ, ಮತ್ತು ಉಳ್ಳನ್‌, ಉಳ್ಳರ್‌ ಮೊದಲಾದ ಕೃಲ್ಲಿಗ ರೂಪಗಳನ್ನು ಈ ಕ್ರಿಯಾಪದದ ಉಳ್ಳ “ಇರುವ’ ಸಂಬಂಧಿಸುವ ರೂಪಕ್ಕೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸುವ ಮೂಲಕ ತಯಾರಿಸಬೇಕಾಗುತ್ತದೆ.

೬.೨.೧ ಲಿಂಗ-ವಚನ ಪ್ರತ್ಯಯ

ಕೃಲ್ಲಿಂಗಗಳಲ್ಲಿ ಕಾಣಿಸುವ ಲಿಂಗ-ವಚನ ಪ್ರತ್ಯಯಕ್ಕೂ, ಕ್ರಿಯಾರೂಪಗಳಲ್ಲಿ ಕಾಣಿಸುವ ಘಟಕವನ್ನು ಸೂಚಿಸುವ “ಆಖ್ಯಾತ’ ಪ್ರತ್ಯಯಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ. ಹಳೆಗನ್ನಡ ವೈಯಾಕರಣಿಗಳು ಇವನ್ನು ಸರಿಯಾಗಿ ಗಮನಿಸಿರುವ ಹಾಗೆ ಕಾಣಿಸುವುದಿಲ್ಲ.

(೧) ಮೇಲೆ ಸೂಚಿಸಿದ ಹಾಗೆ, ಲಿಂಗ-ವಚನ ಪ್ರತ್ಯಯ ಕ್ರಿಯಾಪದದ ಸಂಬಂಧಿಸುವ ರೂಪದ ಅನಂತರ ಬರುತ್ತದೆ; ಆದರೆ, ಘಟಕವನ್ನು ಸೂಚಿಸುವ ಪ್ರತ್ಯಯ ನೇರವಾಗಿ ಹಿಂದಿನ ಮತ್ತು ಮುಂದಿನ ಸಮಯದ ಪ್ರತ್ಯಯಗಳ ಅನಂತರ, ಇಲ್ಲವೇ ಅಲ್ಲಗಳೆಯುವ ಪ್ರತ್ಯಯದ ಅನಂತರ ಬರುತ್ತದೆ. ಮಾಡುವನ್‌ “ಮಾಡುವವನು’ ನಾಮರೂಪ (ಕೃಲ್ಲಿಂಗ) ಮತ್ತು ಮಾಡುವನ್‌ “ಮಾಡುತ್ತಾನೆ’ ಕ್ರಿಯಾರೂಪ ಇವೆರಡೂ ಒಂದೇ ರೀತಿ ಇವೆಯಾದರೂ, ಎರಡನೆಯದರಲ್ಲಿಲ್ಲ

ದಂತಹ ಸಂಬಂಧಿಸುವ ಅ ಪ್ರತ್ಯಯವೊಂದು ಮೊದಲನೆಯದರಲ್ಲಿದೆ ಎಂದು ಹೇಳುವ ಅವಶ್ಯಕತೆಯಿದೆ.

ಈ ವ್ಯತ್ಯಾಸ ಅಲ್ಲಗಳೆಯುವ ಕೃಲ್ಲಿಂಗರೂಪದಲ್ಲಿ ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ ಎಂಬುದನ್ನು ನಾವು ಮೇಲೆ ನೋಡಿರುವೆವು. ಮಾಡು ಕ್ರಿಯಾಪದದ ಅಲ್ಲಗಳೆಯುವ ರೂಪಗಳಲ್ಲೂ ಈ ವ್ಯತ್ಯಾಸವನ್ನು ಕಾಣಬಹುದು. ಮಾಡದನ್‌ “ಮಾಡದವನು’ ಎಂಬ ಅಲ್ಲಗಳೆಯುವ ನಾಮರೂಪ ಮಾಡನ್‌ “ಮಾಡಲಿಕ್ಕಿಲ್ಲ ‘ಎಂಬ ಅಲ್ಲಗಳೆಯುವ ಕ್ರಿಯಾರೂಪಕ್ಕಿಂತ ತೀರ ಭಿನ್ನವಾಗಿದೆ.

(೨) ಲಿಂಗ-ವಚನ ಪ್ರತ್ಯಯಗಳು ಪುರುಷಭೇದವನ್ನು ಸೂಚಿಸುವುದಿಲ್ಲ; ಆದರೆ, ಘಟಕವನ್ನು ಸೂಚಿಸುವ “ಆಖ್ಯಾತ’ ಪ್ರತ್ಯಯಗಳು ಪುರುಷಭೇದವನ್ನು ಸೂಚಿಸುತ್ತವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಪಂಪಭಾರತದ ಬಳಕೆಯನ್ನು ಗಮನಿಸಬಹುದು:

(೩) ಇಂದು ಮೊದಲಾಗಿರೆ ಪೆಂಡಿರೆಂಬರೊಳ್‌ ಕೂಡುವನ್‌ ಅಲ್ಲೆನ್‌ (೧.೭೩) “(ನಾನು) ಈ ದಿನ ಮೊದಲಾಗಿ ಹೆಂಗಸು ಎನ್ನುವವರಲ್ಲಿ ಕೂಡುವವನು ಅಲ್ಲ’

(೩)ನೇ ವಾಕ್ಯದಲ್ಲಿ ಕೂಡುವನ್‌ ಕೃಲ್ಲಿಂಗರೂಪ ಉತ್ತಮಪುರುಷ ವ್ಯಕ್ತಿಯನ್ನು (ಎಂದರೆ ಆ ವಾಕ್ಯದ ಆಡುಗನನ್ನು) ಸೂಚಿಸುತ್ತಿದೆಯಾದರೂ, ಅದರಲ್ಲಿ ಪುಲ್ಲಿಂಗ ಏಕವಚನದ ಅನ್‌ ಪ್ರತ್ಯಯ ಬಂದಿದೆ. ಈ ವ್ಯಕ್ತಿ ಹೆಂಗಸಾದರೆ ಇಂತಹ ಕೃಲ್ಲಿಂಗದಲ್ಲಿ ಅಳ್‌ ಪ್ರತ್ಯಯವೂ (ಆನ್‌ ಕೂಡುವಳ್‌ ಅಲ್ಲೆನ್‌), ಮತ್ತು ಆಡುಗನೊಂದಿಗೆ ಬೇರೊಂದು ವ್ಯಕ್ತಿ ಸೇರಿದೆಯಾದರೆ (ಬಹುವಚನವಾದರೆ) ಅರ್‌ ಪ್ರತ್ಯಯವೂ (ಆಮ್‌ ಕೂಡುವರ್‌ ಅಲ್ಲೆಮ್‌) ಬಳಕೆಯಾಗಬೇಕಾಗುತ್ತದೆ.

ಮಧ್ಯಮಪುರುಷ ವ್ಯಕ್ತಿಯನ್ನು (ಕೇಳುಗನನ್ನು) ಸೂಚಿಸುವ ಸಂದರ್ಭದಲ್ಲೂ ಇದೇ ರೀತಿಯಲ್ಲಿ ಕೃಲ್ಲಿಂಗದೊಂದಿಗೆ ಬರುವ ಲಿಂಗ-ವಚನ ಪ್ರತ್ಯಯ ಪುರುಷ ಭೇದವನ್ನು ಸೂಚಿಸುವುದಿಲ್ಲ; ಅದು ಲಿಂಗ-ವಚನ ಭೇದವನ್ನು ಮಾತ್ರ ಸೂಚಿಸುತ್ತದೆ. ಉದಾಹರಣೆಗಾಗಿ, ನೀನ್‌ ಕೂಡುವನ್‌ ಅಲ್ಲಯ್‌ ಎಂಬುದನ್ನು ಅಂತಹ ವ್ಯಕ್ತಿ ಗಂಡುಸಾಗಿರುವಾಗ ಬಳಸಲಾಗುತ್ತದೆ, ಮತ್ತು ನೀನ್‌ ಕೂಡುವಳ್‌ ಅಲ್ಲಯ್‌ ಎಂಬುದನ್ನು ಹೆಂಗುಸಾಗಿರುವಾಗ ಬಳಸಲಾಗುತ್ತದೆ. ಈ ರೂಪಗಳು ಮೇಲೆ ಕೊಟ್ಟಿರುವ ಉತ್ತಮ ಪುರುಷ ಪದದೊಂದಿಗೆ ಬರುವ ರೂಪಗಳಿಗಿಂತ ಭಿನ್ನವಾಗಿಲ್ಲ ಎಂಬುದನ್ನು ಗಮನಿಸಬಹುದು.

ಆದರೆ, ಕ್ರಿಯಾರೂಪಗಳಲ್ಲಿ ಬರುವ ಆಖ್ಯಾತ ಪ್ರತ್ಯಯಗಳು ಉತ್ತಮ ಪುರುಷ ಇಲ್ಲ ವೇ ಮಧ್ಯಮ ಪುರುಷಗಳಲ್ಲಿ ಲಿಂಗಭೇದವನ್ನು ಸೂಚಿಸುವುದಿಲ್ಲ; ಅವು ಪುರುಷ ಮತ್ತು ವಚನಭೇದಗಳನ್ನು ಮಾತ್ರ ಸೂಚಿಸುತ್ತವೆ. ಉತ್ತಮ ಪುರುಷದ ವ್ಯಕ್ತಿ ಹೆಂಗಸಾದರೂ ಸರಿಯೇ, ಗಂಡಸಾದರೂ ಸರಿಯೇ, ಆನ್‌ ಕೂಡುವೆನ್‌ ಎಂಬುದೇ ಬಳಕೆಯಾಗುತ್ತದೆ; ಅದು ಬಹುವಚನದಲ್ಲಿದೆಯಾದರೆ ಮಾತ್ರ ಆಮ್‌ ಕೂಡುವೆಮ್‌ ಎಂಬುದು ಬಳಕೆಯಾಗುತ್ತದೆ. ಮಧ್ಯಮ ಪುರುಷದ ನೀನ್‌ ಕೂಡುವಯ್‌ ಮತ್ತು ನೀಮ್‌ ಕೂಡುವಿರ್‌ ಎಂಬವುಗಳು ಇವಕ್ಕಿಂತ ಭಿನ್ನವಾಗಿವೆ.

(೩) ಘಟಕವನ್ನು ಸೂಚಿಸುವ ಪ್ರಥಮಪುರುಷ-ನಪುಂಸಕಲಿಂಗ-ಏಕವಚನ ಪ್ರತ್ಯಯಕ್ಕೆ ಹಿಂದಿನ ಸಮಯದ (ಭೂತಕಾಲದ) ಕ್ರಿಯಾರೂಪಗಳಲ್ಲಿ ಉದು ಮತ್ತು ತು ಎಂಬ ಎರಡು ರೂಪಗಳಿವೆ (ಇಕ್ಕಿದುದು, ಇಕ್ಕಿತು; ಆದುದು, ಆಯ್ತು; ಮೂಡಿದುದು, ಮೂಡಿತು; ಸಂದುದು; ಪೋಯ್ತು; ಆದರೆ, ಕೃಲ್ಲಿಂಗಗಳಲ್ಲಿ ಲಿಂಗ-ವಚನ ಭೇದವನ್ನು ಸೂಚಿಸುವ ನಪುಂಸಕ-ಏಕವಚನ

ಪ್ರತ್ಯಯಕ್ಕೆ ಕಿಯಾಪದಗಳ ಎಲ್ಲಾ ರೀತಿಯ ನಾಮರೂಪಗಳಲ್ಲೂ ಉದು ರೂಪ ಮಾತ್ರ ಇದೆಯಲ್ಲ ದೆ ಹೆ ಆ [ee

ತು ರೂಪ ಇರುವ ಹಾಗೆ ಕಾಣಿಸುವುದಿಲ್ಲ. ಇದನ್ನು ಕೆಳಗೆ ಕೊಟ್ಟಿರುವ ಪಂಪಭಾರತದ (೪ಕ- ಗ) ವಾಕ್ಯಗಳಲ್ಲಿ ಕಾಣಬಹುದು:

(೪ಕ) ಶಿಶುಗೆ ಪೆಸರನ್ವರ್ಥಂ ಆಯ್ತು (೧.೧೨೮) “ಶಿಶುವಿಗೆ (ಭೀಮನೆಂಬ) ಹೆಸರು ಅನ್ವರ್ಥವಾಯಿತು’

(೪ಖ) ಕುಂತಿ ಮಾದ್ರಿಗಳೊಳ್‌ ಪಾಂಡುರಾಜನಾ ವಿವಾಹ ಮಂಗಳಮದು ಅಚ್ಚ ರಿಯಾದುದು (೧.೧೦೭) “ಪಾಂಡುರಾಜ ಮತ್ತು ಕುಂತಿಮಾದ್ರಿಯರ ವಿವಾಹ ಮಂಗಳ ಕಾರ್ಯ ಆಶ್ಚ ರ್ಯಕರವಾಯಿತು’

(೪ಗ) ಪರಲೋಕ ಪ್ರಾಪ್ತನಾದುದನಜುತು (೨.೧೯ವ) “ಪರಲೋಕ ಪ್ರಾಪ್ತನಾದುದನ್ನು ತಿಳಿದು’

ಆಗು ಕ್ರಿಯಾಪದಕ್ಕೆ ಆಯ್ತು ಕ್ರಿಯಾರೂಪವಿರುವುದನ್ನು (೪ಕ) ವಾಕ್ಯದಲ್ಲೂ, ಆದುದು ಕ್ರಿಯಾರೂಪವಿರುವುದನ್ನು (೪ಖ) ವಾಕ್ಯದಲ್ಲೂ ಕಾಣಬಹುದು. ಆದರೆ, ಇದಕ್ಕೆ (೪ಗ) ವಾಕ್ಯದಲ್ಲಿ ಕಾಣಿಸಿದ ಹಾಗೆ, ಆದುದು ನಾಮರೂಪ (ಕೃಲ್ಲಿಂಗ) ಮಾತ್ರ ಇರುವ ಹಾಗೆ ಕಾಣುತ್ತದೆ.

ಈ ವ್ಯತ್ಯಾಸಕ್ಕೂ ಮೇಲೆ ಸೂಚಿಸಿದ ವ್ಯತ್ಯಾಸವೇ ಕಾರಣವಿರಬೇಕು. ಹೆಚ್ಚಿನ ಕ್ರಿಯಾಪದಗಳ ಸಂಬಂಧಿಸುವ ರೂಪಗಳೂ ಒಂದೇ ರೀತಿ ದ ಎಂಬುದರಲ್ಲಿ ಕೊನೆಗೊಳ್ಳುವುವಾದ ಕಾರಣ (ಇಕ್ಕಿದ, ಆದ, ಮೂಡಿದ, ಸಂದ, ಪೋದ) ಅವುಗಳ ಅನಂತರ ನಪುಂಸಕ ಏಕವಚನದಲ್ಲಿ ಉದು ಪ್ರತ್ಯಯ ಮಾತ್ರ ಬರುತ್ತದೆ.

(೪) ಕ್ರಿಯಾರೂಪಗಳಲ್ಲಿ ಘಟಕವನ್ನು ಸೂಚಿಸುವ ಆಖ್ಯಾತ ಪ್ರತ್ಯಯ ವಾಕ್ಯದ ಒಂದು ವಿಶಿಷ್ಟವಾದ ಘಟಕವನ್ನು ಮಾತ್ರ ಸೂಚಿಸಬಲ್ಲುದು. ವಾಕ್ಯದಲ್ಲಿ ಆಗುಗ ಮಾತ್ರ ಇದೆಯಾದರೆ ಅದು ಆಗುಗವನ್ನು ಸೂಚಿಸುತ್ತ ದೆ, ಆಗುಗ ಮತ್ತು ಮಾಡುಗಗಳೆರಡೂ ಇವೆಯಾದರೆ ಮಾಡುಗವನ್ನು ಸೂಚಿಸುತ್ತದೆ, ಮತ್ತು ಪ್ರೇರಕ ಇದೆಯಾದರೆ ಪ್ರೇರಕವನ್ನು ಸೂಚಿಸುತ್ತದೆ.

ಉದಾಹರಣೆಗಾಗಿ, ಅಟಾದನ್‌ “ಸತ್ತ’ ಎಂಬುದರಲ್ಲಿರುವ ಅನ್‌ ಪ್ರತ್ಯಯ ಸತ್ತ ವ್ಯಕ್ತಿ(ಆಗುಗ)ವನ್ನು ಸೂಚಿಸುವುದಾದರೆ, ಕೊಂದನ್‌ ಎಂಬುದರಲ್ಲಿರುವ ಅನ್‌ ಪ್ರತ್ಯಯ ಸಾಯಿಸಿದ ವ್ಯಕ್ತಿ (ಮಾಡುಗ)ನನ್ನು ಸೂಚಿಸುತ್ತ ದೆ, ಮತ್ತು ಕೊಲಿಸಿದನ್‌ ಕ್ರಿಯಾರೂಪದಲ್ಲಿರುವ ಅನ್‌ ಪ್ರತ್ಯಯ ಸಾಯಿಸುವಂತೆ ಪ್ರೇರೇಪಿಸಿದ ವ್ಯಕ್ತಿ(ಪ್ರೇರಕ)ನನ್ನು ಸೂಚಿಸುತ್ತದೆ (೯.೩ ನೋಡಿ).

ಆದರೆ, ಕ್ರಿಯಾಪದಗಳ ನಾಮರೂಪ(ಕೃಲ್ಲಿಂಗ)ಗಳಲ್ಲಿ ಬರುವ ಲಿಂಗ-ವಚನ ಪ್ರತ್ಯಯ ವಾಕ್ಯದ ಇತರ ಘಟಕಗಳನ್ನೂ ಸೂಚಿಸಬಲ್ಲುದು. ಉದಾಹರಣೆಗಾಗಿ, ಮಾಡಿದುದು ಎಂಬುದರಲ್ಲಿ ಬಂದಿರುವ ಉದು ಲಿಂಗ-ವಚನ ಪ್ರತ್ಯಯ ಮಾಡಿದ ವ್ಯಕ್ತಿ, ಮಾಡಿದ ವಸ್ತು ಇಲ್ಲವೇ ಮಾಡಿದ ಕೆಲಸ ಇವುಗಳಲ್ಲಿ ಯಾವುದನ್ನು ಬೇಕಿದ್ದ ರೂ ಸೂಚಿಸಬಲ್ಲುದು. ಉದಾಹರಣೆಗಾಗಿ, ಪಂಪಭಾರತದ ಕೆಳಗಿನ ಬಳಕೆಗಳನ್ನು ಗಮನಿಸಬಹುದು:

(೫ಕ) ಅಟ್ಟುದಂ ಭುಜಬಲದಿಂ ಎತ್ತಿದಂತೆ (೯.೧೫) “ಮುಳುಗಿದ (ಭೂಮಿಯನ್ನು) ಭುಜಬಲದಿಂದ ಎತ್ತಿದ ಹಾಗೆ’ (೫ಖ) ಅಜ್ಞಾತವಾಸ ಮಾಡಿದುದುಮಂ ನೆನೆದು (೧೨.೧೭ವ) “ಅಜ್ಞಾತವಾಸ ಮಾಡಿದುದನ್ನೂ ನೆನೆದು’

(೫ಕ)ದಲ್ಲಿ ಬಂದಿರುವ ಉದು ಪ್ರತ್ಯಯ ಅಟ್‌ ಕ್ರಿಯಾಪದ ತಿಳಿಸುವ ಘಟನೆಯ ಆಗುಗವನ್ನು (ಭೂಮಿಯನ್ನು) ಸೂಚಿಸುತ್ತದೆ, ಆದರೆ (೫ಖ)ದಲ್ಲಿ ಬಂದಿರುವ ಅದೇ ಪ್ರತ್ಯಯ ಮಾಡು ಕ್ರಿಯಾಪದ ತಿಳಿಸುವ ಘಟನೆಯನ್ನೇ ಸೂಚಿಸುತ್ತದೆ. ಈ ವ್ಯತ್ಯಾಸ ಕ್ರಿಯಾಪದಗಳಲ್ಲಿ ಬರುವ ಆಖ್ಯಾತ ಪ್ರತ್ಯಯಗಳ ಬಳಕೆಯಲ್ಲಿಲ್ಲ.

ಕೃಲ್ಲಿಂಗಗಳನ್ನು ಕ್ರಿಯಾಪದಗಳ ಸಂಬಂಧಿಸುವ ರೂಪದಿಂದ ಪಡೆಯುವ ಮೂಲಕ, ಅವಕ್ಕೂ ಕ್ರಿಯಾರೂಪಗಳಿಗೂ ನಡುವಿರುವ ಈ ಅರ್ಥವ್ಯತ್ಯಾಸವನ್ನು ಸುಲಭವಾಗಿ ವಿವರಿಸಲು ಸಾಧ್ಯವಿದೆ: ಕ್ರಿಯಾಪದಗಳ ಸಂಬಂಧಿಸುವ ರೂಪಗಳು ವಾಕ್ಯದ ಬೇರೆ ಬೇರೆ ಘಟಕಗಳೊಂದಿಗೆ ಇಲ್ಲವೇ ಘಟನೆಯನ್ನು ಸೂಚಿಸುವ ನಾಮಪದದೊಂದಿಗೆ ಬರಬಲ್ಲುವಾಗಿದ್ದು, ಕೃಲ್ಲಿಂಗದ ಕೊನೆಯಲ್ಲಿ ಬರುವ ಲಿಂಗ-ವಚನ ಪ್ರತ್ಯಯಗಳು ಈ ನಾಮಪದಗಳಿಗೆ ಬದಲಾಗಿ ಬಂದಿವೆಯೆಂದು ಹೇಳುವುದರ ಮೂಲಕ ಈ ವ್ಯತ್ಯಾಸವನ್ನು ವಿವರಿಸಬಹುದು.

(೬ಕ) ಆತನ್‌ ಕಂಡ ಪೂ ಆತನ್‌ ಕಂಡುದು (೬ಖ) ಆತನನ್‌ ಕಂಡ ಪುಲಿ ಆತನನ್‌ ಕಂಡುದು (೬ಗ) ಆತನನ್‌ ಕಂಡ ಕಾಣ್ಕೆ ಆತನ್‌ ಕಂಡುದು (೬ಘ) ಆತನನ್‌ ಕಂಡ ಪೆಣ್‌ ಆತನನ್‌ ಕಂಡಳ್‌

(೬ಕ)ದಲ್ಲಿ ಕಂಡ ಎಂಬ ಸಂಬಂಧಿಸುವ ರೂಪದಲ್ಲಿರುವ ಅ ಪ್ರತ್ಯಯ ಅದನ್ನು ಪೂ ಎಂಬುದರೊಂದಿಗೆ (ಆ ಕ್ರಿಯೆಯ ಆಗುಗದೊಂದಿಗೆ) ಸಂಬಂಧಿಸುತ್ತದೆ, ಮತ್ತು ಕಂಡುದು ಎಂಬುದರಲ್ಲಿರುವ ಉದು ಪ್ರತ್ಯಯವೂ ಹೂವನ್ನು (ಎಂದರೆ ಆಗುಗವನ್ನು) ಸೂಚಿಸುತ್ತದೆ.

ಇದಕ್ಕೆ ಬದಲು, (೬ಖ)ದಲ್ಲಿ ಇದೇ ಕಂಡ ಎಂಬುದರಲ್ಲಿ ಬಂದಿರುವ ಅ ಪ್ರತ್ಯಯ ಅದನ್ನು ಪುಲಿ ಎಂಬುದರೊಂದಿಗೆ (ಆ ಕ್ರಿಯೆಯ ಮಾಡುಗದೊಂದಿಗೆ) ಸಂಬಂಧಿಸುತ್ತದೆ, ಮತ್ತು ಕಂಡುದು ಎಂಬುದರಲ್ಲಿರುವ ಉದು ಪ್ರತ್ಯಯವೂ ಅದೇ ಮಾಡುಗವನ್ನು (ಎಂದರೆ ಹುಲಿಯನ್ನು) ಸೂಚಿಸುತ್ತದೆ.

೬.೨.೨ ಹಿಂದಿನ ವ್ಯಾಕರಣಗಳ ಸಮಸ್ಯೆಗಳು

ಕ್ರಿಯಾರೂಪಗಳಲ್ಲಿ ಘಟಕವನ್ನು ಸೂಚಿಸುವುದಕ್ಕಾಗಿ ಬರುವ ಪ್ರತ್ಯಯ, ಮತ್ತು ಕ್ರಿಯಾಪದಗಳ ನಾಮರೂಪ(ಕೃಲ್ಲಿಂಗ)ಗಳಲ್ಲಿ ಲಿಂಗ-ವಚನಗಳನ್ನು ಸೂಚಿಸುವು ದಕ್ಕಾಗಿ ಬರುವ ಪ್ರತ್ಯಯ - ಇವೆರಡರ ನಡುವೆ ಮೇಲೆ (೬.೨.೧)ರಲ್ಲಿ ಸೂಚಿಸಿರುವಂತಹ ಮುಖ್ಯವಾದ ವ್ಯತ್ಯಾಸಗಳಿರುವುದನ್ನು ಗಮನಿಸದುದರಿಂದಾಗಿ, ಹಳೆಗನ್ನಡ ವ್ಯಾಕರಣವನ್ನು ವಿವರಿಸುವ ವಿದ್ವಾಂಸರ ಪ್ರಯತ್ನಗಳಲ್ಲಿ ಹಲವು ದೋಷಗಳನ್ನು ಕಾಣಬಹುದು.

(೧) ವೆಂಕಟಾಚಲ ಶಾಸ್ತ್ರಿ ಗಳು (೧೯೯೪:೩೫) ಸೂಚಿಸಿದಂತೆ, ಕೇಶಿರಾಜನು ಕೃಲ್ಲಿಂಗಗಳಿಗಾಗಿ ಕೊಟ್ಟಿರುವ ಹಲವು ಪ್ರಯೋಗಗಳಲ್ಲಿ ಕೃಲ್ಲಿಂಗಗಳೇ ಇಲ್ಲ (೮೨-೧, ೨, ೮೩-೧, ೨, ೪, ೫). ಈ ಪ್ರಂಯೋಗಗಳಲ್ಲೆಲ್ಲ ಕ್ರಿಯಸಾರೂಪಗಳು ಬಂದಿವೆಂಯಲ್ಲದೆ ಕ್ರಿಯಾಪದಗಳ ಕೃಲ್ಲಿಂಗ(ನಾಮರೂಪ)ಗಳು ಬಂದಿಲ್ಲ.

ಉದಾಹರಣೆಗಾಗಿ, ಸೂತ್ರ ೮೨ರಲ್ಲಿ ಭೂತವತಿಗೆ (ಹಿಂದಿನ ಸಮಯಕ್ಕೆ) ಕೊಟ್ಟಿರುವ ಬಾಕ್ಸಿನೆಂದು ಮದನಂ ನಲಿದಂ ನಡೆ ನೋಡಿ ಚೂತಮಂ ಎಂಬ ಪ್ರಯೋಗದಲ್ಲಿ ನಲಿದಂ

“ಕುಣಿದನು’ ಎಂಬುದು ಹಿಂದಿನ ಕಾಲದ ಘಟನೆಯೊಂದನ್ನು ಸೂಚಿಸುವ ಕ್ರಿಯಾರೂಪವಲ್ಲದೆ, ಆ ಘಟನೆಯನ್ನು ನಡೆಸಿದ ವ್ಯಕ್ತಿ ಯನ್ನು ವರ್ಣಿಸುವ ನಲಿದಂ “ಕುಣಿದವನು’ ಎಂಬ ನಾಮರೂಪವಲ್ಲ. (೨) ಅಲ್ಲಗಳೆಯುವ ಕೃಲ್ಲಿಂಗಗಳ ಬಳಕೆಯನ್ನು ಕೇಶಿರಾಜನೇ ಮೊದಲಾದ ಪ್ರಾಚೀನ ವೈಯಾಕರಣಿಗಳು ಗಮನಿಸಿದಂತಿಲ್ಲ. ಹಾಗೆ ಗಮನಿಸಿದ್ದರೆ, ಅವಕ್ಕೂ, ಅಲ್ಲಗಳೆಯುವ ಕ್ರಿಯಾರೂಪಗಳಿಗೂ ನಡುವಿರುವ ವ್ಯತ್ಯಾಸ ಅವರ ಗಮನಕ್ಕೆ ಬರುತ್ತಿತ್ತು.

(೩) ಕೇಶಿರಾಜನೇ ಮೊದಲಾದವರು ಕ್ರಿಯಾಪದಗಳ ಸಂಬಂಧಿಸುವ ರೂಪಗಳನ್ನೇ ಕೃಲ್ಲಿಂಗಗಳೆಂದು ಪರಿಗಣಿಸಿದ್ದಾರೆ (ಶಬ್ದಮಣಿದರ್ಪಣ, ಸೂ. ೮೩ ನೋಡಿ). ಇದು ಸಂಸ್ಕೃತದ ವ್ಯಾಕರಣ ನಿಯಮವನ್ನು ಹಾಗೆಯೇ ಕನ್ನಡಕ್ಕೆ ಹಚ್ಚಿ ದುದರ ಫಲ. ಮೇಲೆ ೬.೧.೩ರಲ್ಲಿ ವಿವರಿಸಿದ ಹಾಗೆ, ಈ ವಿಷಯದಲ್ಲಿ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ನಡುವೆ ಮುಖ್ಯವಾದ ವ್ಯತ್ಯಾಸವಿದೆ:

ಸಂಸ್ಕೃತದಲ್ಲಿ ವಿಭಕ್ತಿ ಪ್ರತ್ಯಯಗಳನ್ನು ನೇರವಾಗಿ ಕ್ರಿಯಾಪದಗಳ ಸಂಬಂಧಿಸುವ ರೂಪಕ್ಕೆ ಸೇರಿಸಲು ಸಾಧ್ಯವಿದೆ. ಗುಣಪದ ಮತ್ತು ನಾಮಪದಗಳ ನಡುವೆ ಸಂಸ್ಕೃತದಲ್ಲಿ ಯಾವ ವ್ಯತ್ಯಾಸವೂ ಇಲ್ಲದಿರುವುದೇ ಇದಕ್ಕೆ ಕಾರಣ. ನಿಜಕ್ಕೂ ಸಂಸ್ಕೃತದಲ್ಲಿ “ಸಂಬಂಧಿಸುವ ರೂಪ’ ಎಂಬುದೇ ಇಲ್ಲ; ಅದರಲ್ಲಿ ಕೃದಂತಗಳೇ ನಾಮಪದಗಳಾಗಿ ಬಳಕೆಯಾಗುತ್ತವೆ.

ಆದರೆ, ಹಳೆಗನ್ನಡದಲ್ಲಿ ಕೃದಂತಗಳು ಗುಣಪದಗಳು; ಅವಕ್ಕೆ ಲಿಂಗ-ವಚನ ಪ್ರತ್ಯಯಗಳನ್ನು ಸೇರಿಸಿದಾಗ ಮಾತ್ರ, ಅವು ನಾಮಪದಗಳ ಜಾಗದಲ್ಲಿ ಬಳಕೆಯಾಗಬಲ್ಲುವು, ಮತ್ತು ವಿಭಕ್ತಿ ಪ್ರತ್ಯಯಗಳನ್ನು ಪಡೆಯಬಲ್ಲುವು.

ಇಲ್ಲಿ ಇನ್ನೊಂದು ವಿಷಯವನ್ನೂ ಗಮನಿಸುವ ಅವಶ್ಯಕತೆಯಿದೆ: ಸಂಸ್ಕೃತದಲ್ಲಿ ಕೃಲ್ಲಿಂಗದೊಂದಿಗೆ ಬರುವ ಲಿಂಗ-ವಚನ ಪ್ರತ್ಯಯಗಳು ವಿಭಕ್ತಿ ಪ್ರತ್ಯಯಗಳಿಗಿಂತ ಭಿನ್ನವಾದುವಲ್ಲ; ಆದರೆ, ಹಳೆಗನ್ನಡದಲ್ಲಿ ಇವೆರಡು ಪ್ರತ್ಯಯಗಳೂ ಬೇರೆ ಬೇರಾಗಿವೆ. ಉದಾಹರಣೆಗಾಗಿ, ಕೆಳಗೆ ಕೊಟ್ಟಿರುವ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ಕೃಲ್ಲಿಂಗಗಳಿಗಿರುವ ವಿಭಕ್ತಿರೂಪಗಳನ್ನು ಹೋಲಿಸಿ ನೋಡಬಹುದು:

ಸಂಸ್ಕೃತ ಹಳೆಗನ್ನಡ ಗತೇಭ್ಯಃ ಪೋದರ್ಗೆ ಗತೇನ ಪೋದನಿನ್‌ ಗತಾಯೈ ಪೋದಳ್ಗೆ

ಗತಯಾ ಪೋದಳಿನ್‌

ಮೇಲೆ ಕೊಟ್ಟಿರುವ ಹಳೆಗನ್ನಡದ ಕೃಲ್ಲಿಂಗ ರೂಪಗಳಲ್ಲಿ ಆರ್‌, ಅನ್‌ ಮತ್ತು ಅಳ್‌ ಎಂಬ ಲಿಂಗ-ವಚನ ಪ್ರತ್ಯಯಗಳು ಅವುಗಳ ಅನಂತರ ಬರುವ ಗೆ ಮತ್ತು ಇನ್‌ ಎಂಬ ವಿಭಕ್ತಿ ಪ್ರತ್ಯಯಗಳಿಂದ ಬೇರಾಗಿ ಉಳಿದಿವೆ; ಆದರೆ ಸಂಸ್ಕೃತದ ಕೃಲ್ಲಿಂಗ (ಕೃದಂತ) ರೂಪಗಳಲ್ಲಿ ಈ ರೀತಿ ಲಿಂಗ-ವಚನ ಪ್ರತ್ಯಯಗಳನ್ನು ವಿಭಕ್ತಿ ಪ್ರತ್ಯಯಗಳಿಂದ ಬೇರ್ಪಡಿಸಲು ಸಾಧ್ಯವಾಗದು.

ಉದಾಹರಣೆಗಾಗಿ, ಗತೇಭ್ಯಃ ಎಂಬ ರೂಪದಲ್ಲಿ ಚತುರ್ಥಿ ವಿಭಕ್ತಿ ಯನ್ನು ಮಾತ್ರವಲ್ಲದೆ ಪುಲ್ಲಿಂಗ-ಬಹುವಚನವನ್ನು ಸೂಚಿಸುವ ಕೆಲಸವನ್ನೂ ಭ್ಯಃ ಪ್ರತ್ಯಯವೇ ಮಾಡಬೇಕಾಗಿದೆ.

ನಾಮಪದಗಳ ಸ್ನರೂಪ ಹ್‌

(೪) ಮಧ್ಯಮಪುರುಷ ಮತ್ತು ಉತ್ತಮಪುರುಷಕ್ರಿಯೆಗಳು ಕೃಲ್ಲಿಂಗಗಳಾಗವು ಎಂಬುದಾಗಿ ಕೇಶಿರಾಜನೇ ಮೊದಲಾದವರು (ಶಬ್ದಮಣಿದರ್ಪಣ, ಸೂ. ೮೩) ಹೇಳಿರುವುದೂ ಸಂಪೂರ್ಣ ಸರಿಯಲ್ಲ.

ಯಾಕೆಂದರೆ, ಹಳೆಗನ್ನಡದಲ್ಲಿ ಉತ್ತಮಪುರುಷ ಮತ್ತು ಮಧ್ಯಮಪುರುಷ ವ್ಯಕ್ತಿಗಳಿಗೆ ಸಂಬಂಧಿಸಿದಂತೆಯೂ ಕೃಲ್ಲಿಂಗಗಳನ್ನು ಬಳಸಲು ಸಾಧ್ಯವಿದೆ (ಇದಕ್ಕೆ ಉದಾಹರಣೆಗಳನ್ನು ಮೇಲೆ ೬.೧.೩ರಲ್ಲಿ ಕೊಡಲಾಗಿದೆ). ಆದರೆ, ಹೀಗೆ ಬಳಸುವಾಗ, ಅವು ಲಿಂಗ-ವಚನ ಭೇದಗಳನ್ನು ಮಾತ್ರ ಸೂಚಿಸುತ್ತವೆಯಲ್ಲದೆ ಪುರುಷಭೇದವನ್ನು ಸೂಚಿಸುವುದಿಲ್ಲ ಎಂಬುದೇ ಹಳೆಗನ್ನಡದಲ್ಲಿರುವ ನಿರ್ಬಂಧ.

(೫) ಕೃಲ್ಲಿಂಗಗಳನ್ನು ಕ್ರಿಯಾಪದಗಳ ಸಂಬಂಧಿಸುವ ರೂಪದಿಂದ ಸಾಧಿಸುವ ಅವಶ್ಯಕತೆಯನ್ನು ಕಿಟ್ಟೆಲ್‌ (೧೯೦೩:೨೧೮) ಕಂಡುಕೊಂಡಿದ್ದಾರೆ; ಆದರೆ, ಸಾಮಾನ್ಯ ಕ್ರಿಯಾರೂಪಗಳನ್ನೂ ಅವರು ಇಂತಹ ಸಂಬಂಧಿಸುವ ರೂಪಗಳಿಂದಲೇ ಸಾಧಿಸುವ ಕಾರಣ (೧೯೦೩:೧೩೭, ೧೪೨), ಅವಕ್ಕೂ ಕೃಲ್ಲಿಂಗಗಳಿಗೂ ನಡುವಿರುವ ವ್ಯತ್ಯಾಸಗಳನ್ನು ವಿವರಿಸಲು ಅವರಿಗೂ ತೊಂದರೆಯಾಗಿದೆ.

ಉದಾಹರಣೆಗಾಗಿ, ನಪುಂಸಕ ಏಕವಚನದ ಇತು, ಇತ್ತು ಪ್ರತ್ಯಯವನ್ನು ಬಳಸಿ ತಯಾರಿಸಿದ ಮಾಡಿತು, ತೀಡಿತ್ತು ಎಂಬಂತಹ ಹಿಂದಿನ ಸಮಯದ ಕ್ರಿಯಾರೂಪಗಳನ್ನು ಇತರ ಕ್ರಿಯಾರೂಪಗಳ ಹಾಗೆ ಮಾಡಿದ, ತೀಡಿದ ಮೊದಲಾದ ಸಂಬಂದಿಸುವ ಕ್ರಿಯಾರೂಪಗಳಿಂದ ಸಾಧಿಸಲು ಸಾಧ್ಯವಾಗುವುದಿಲ್ಲ . ಹಾಗಾಗಿ, ಇಂತಹ ಕ್ರಿಯಾರೂಪಗಳಲ್ಲಿ ಇತು, ಇತ್ತು ಪ್ರತ್ಯಯವನ್ನು ಸಂಬಂಧಿಸುವ ಕ್ರಿಯಾರೂಪಗಳಿಗೆ ಸೇರಿಸುವ ಬದಲು ಮಾಡಿ, ತೀಡಿ ಮೊದಲಾದ ಜೋಡಿಸುವ ಕ್ರಿಯಾರೂಪಗಳಿಗೆ ಸೇರಿಸಲಾಗುತ್ತದೆಯೆಂದು ಇವರು ಹೇಳಬೇಕಾಗಿದೆ (ಕಿಟ್ಟೆಲ್‌ ೧೯೦೩:೧೩೭ ನೋಡಿ). |

ಇದೇ ರೀತಿಯಲ್ಲಿ, ಅಲ್ಲಗಳೆಯುವ ಕ್ರಿಯಾರೂಪಗಳಿಗೂ ಅಲ್ಲಗಳೆಯುವ ಕೃಲ್ಲಿಂಗಗಳಿಗೂ ನಡುವಿರುವ ವ್ಯತ್ಯಾಸವನ್ನು ವಿವರಿಸುವುದಕ್ಕಾಗಿ, ಅವರು ಅಲ್ಲಗಳೆಯುವ ಕ್ರಿಯಾರೂಪಗಳನ್ನು ಇತರ ಕ್ರಿಯಾರೂಪಗಳ ಹಾಗೆ ಕ್ರಿಯಾಪದಗಳ ಸಂಬಂಧಿಸುವ ರೂಪದಿಂದ ಸಾಧಿಸುವ ಬದಲು, ಇರ, ಕೇಳ, ಮಾಡ ಎಂಬಂತಹ “ಕ್ರಿಯಾರ್ಥ’ ರೂಪದಿಂದ ಸಾಧಿಸಬೇಕಾಗಿದೆ (ಕಿಟ್ಟೆಲ್‌ ೧೯೦೩:೧೫೭ ನೋಡಿ).

ಕ್ರಿಯಾರೂಪಗಳಲ್ಲಿ ಬರುವ ಆಖ್ಯಾತ ಪ್ರತ್ಯಯಗಳು ವಾಕ್ಯದ ಒಂದು ಘಟಕವನ್ನು ಮಾತ್ರ ಸೂಚಿಸಬಲ್ಲುವು; ಆದರೆ, ಕೃಲ್ಲಿಂಗಗಳಲ್ಲಿ ಬರುವ ಲಿಂಗ-ವಚನ ಪ್ರತ್ಯಯಗಳು ಇತರ ಘಟಕಗಳನ್ನೂ ಸೂಚಿಸಬಲ್ಲುವು ಎಂಬ ಮೇಲೆ (೬.೨.೧(೪)ರಲ್ಲಿ) ಸೂಚಿಸಿದ ವ್ಯತ್ಯಾಸವನ್ನು ಕ್ರಿಯಾರೂಪ ಮತ್ತು ಕೃಲ್ಲಿಂಗಗಳೆರಡನ್ನೂ ಕ್ರಿಯಾಪದದ ಸಂಬಂಧಿಸುವ ರೂಪದಿಂದ ಸಾಧಿಸ ಹೊರಟಿರುವ ಕಿಟ್ಟೆಲ್‌ ಅವರಿಗೆ ವಿವರಿಸಲು ಸಾಧ್ಯವಾಗಲಿಕ್ಕಿಲ್ಲ.

(೬) ಏಕವಚನದ ನಾಮಪದಗಳನ್ನು ಮಾತ್ರವಲ್ಲದೆ, ಬಹುವಚನದ ನಾಮಪದಗಳನ್ನೂ ಲಿಂಗಗಳೆಂದು ಕರೆಯಬಹುದಿತ್ತಲ್ಲವೇ? (ಯಾಕೆಂದರೆ ಏಕವಚನದ ನಾಮಪದಗಳ ಹಾಗೆ ಬಹುವಚನದ ನಾಮಪದಗಳೂ ವಿಭಕ್ತಿ ಪ್ರತ್ಯಯಗಳನ್ನು ಸ್ವೀಕರಿಸಲು ಸಮರ್ಥವಾಗಿವೆಯಲ್ಲ) ಎಂಬುದಾಗಿ ವೆಂಕಟಾಚಲ ಶಾಸ್ತ್ರಿಗಳು (೧೯೯೪:೩೫) ಪ್ರಶ್ನಿಸಿದ್ದಾರೆ.

ಕೇಶಿರಾಜನು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಅನುಸರಿಸಿ, ಬಹುವಚನ ಪ್ರತ್ಯಯವನ್ನು

ವಿಭಕ್ತಿ ಪ್ರತ್ಯಯಗಳೊಂದಿಗೆ ಬರುವ “ಆಗಮ’ಗಳೆಂದು ಪರಿಗಣಿಸಿರುವುದೇ (ಸೂ. ೧೦೫) ಈ ರೀತಿ ಬಹುವಚನದ ನಾಮಪದಗಳನ್ನು ಲಿಂಗಗಳೆಂದು ಪರಿಗಣಿಸದಿರಲು ಕಾರಣ. ಅವನ ಮಟ್ಟಿಗೆ ಸಂಸ್ಕೃತದಲ್ಲಿರುವ ಹಾಗೆ, ಹಳೆಗನ್ನಡದಲ್ಲೂ ವಿಭಕ್ತಿ ಪ್ರತ್ಯಯಕ್ಕಿಂತ ಭಿನ್ನವಾದ ವಚನ ಪ್ರತ್ಯಯವಿಲ್ಲ. ಆದರೆ, ಹೀಗೆ ಮಾಡಿರುವಲ್ಲಿ ಹಳೆಗನ್ನಡದ ವೈಶಿಷ್ಟ ವೊಂದನ್ನು ಆತ ಕಡೆಗಣಿಸಿದ್ದಾನೆ.

ಮುಂದೆ ೭.೩.೨ರಲ್ಲಿ ಸೂಚಿಸಿದ ಹಾಗೆ, ಕಿಟ್ಟೆಲ್‌ ಅವರೂ ಹಳೆಗನ್ನಡದ ಈ ವೈಶಿಷ್ಟ್ಯವನ್ನು ಕಂಡುಕೊಳ್ಳುವಲ್ಲಿ ಎಡವಿದ್ದಾ ರೆ. ಗ್ರೀಕ್‌, ಲ್ಯಾಟಿನ್‌ ಮೊದಲಾದ ಭಾಷೆಗಳ ವ್ಯಾಕರಣವನ್ನನುಸರಿಸ ಹೋಗಿ, ಅವರು ಬಹುವಚನ ಪ್ರತ್ಯಯವನ್ನು ಪ್ರಥಮಾ ವಿಭಕ್ತಿ ಪ್ರತ್ಯಯವೆಂದು ಕರೆದಿದ್ದಾರೆ; ಆದರೆ, ಈ ಪ್ರತ್ಯಯ ಇತರ ವಿಭಕ್ತಿ ರೂಪಗಳಲ್ಲೂ ಯಾಕೆ ಬರುತ್ತದೆ ಎಂಬುದನ್ನು ವಿವರಿಸಿದ ಹಾಗಿಲ್ಲ.

Eke →

೬.೩ ಸಾರಾಂಶ

ಹಳೆಗನ್ನಡದಲ್ಲಿ ಎಂತಹ ಪದಗಳನ್ನೆಲ್ಲ ನಾಮಪದಗಳೆಂದು ಕರೆಯಬಹುದು ಎಂಬುದನ್ನು ವಿವರಿಸಿ ಹೇಳುವಲ್ಲಿ ಹಳೆಗನ್ನಡದ ವೈಯಾಕರಣಿಗಳು ಹಲವು ರೀತಿಯ ಗೊಂದಲಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇವುಗಳಲ್ಲಿ ಹೆಚ್ಚಿನವೂ ಸಂಸ್ಕೃತ ಮತ್ತು ಹಳೆಗನ್ನಡ ಭಾಷೆಗಳ ನಡುವೆ ವ್ಯಾಕರಣದ ಮೂಲತತ್ವಗಳಲ್ಲೇನೇ ಕಾಣಿಸುವಂತಹ ವ್ಯತ್ಯಾಸಗಳನ್ನು ಗಮನಿಸದುದರ ಫಲ ಎಂಬುದನ್ನು ಈ ಅಧ್ಯಾಯದಲ್ಲಿ ತೋರಿಸಿಕೊಡಲಾಗಿದೆ.