Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಆರನೇ ಪಸುಗೆ — ಇಪ್ಪುರುಳಿನ ತೊಡಕುಗಳು
6.1 ಮುನ್ನೋಟ
ಎರಡು ಇಲ್ಲವೇ ಹೆಚ್ಚು ಹುರುಳು(ಅರ್ತ)ಗಳನ್ನು ಕೊಡಬಲ್ಲ ಸೊಲ್ಲುಗಳನ್ನು ಇಪ್ಪುರುಳಿನ ಸೊಲ್ಲುಗಳೆಂದು ಕರೆಯಬಹುದು. ಎತ್ತುಗೆಗಾಗಿ, ಹುಲಿಯ ಬಾಯಿಗೆ ಬಿದ್ದ ದನದ ಕರು ಕೂಗಾಡುತ್ತಿದೆ ಎಂಬುದು ಒಂದು ಇಪ್ಪುರುಳಿನ ಸೊಲ್ಲು. ಅದಕ್ಕೆ ಕೆಳಗೆ ಕೊಟ್ಟಿರುವ ಎರಡು ಹುರುಳುಗಳಿದ್ದು, ಓದುಗರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಹುರುಳನ್ನು ಅದು ಕೊಡಬಲ್ಲುದು:
(1ಕ) ದನ ಹುಲಿಯ ಬಾಯಿಗೆ ಬಿದ್ದಿದೆ; ಹಾಗಾಗಿ, ಅದರ ಕರು
ಕೂಗಾಡುತ್ತಿದೆ.
(1ಗ) ದನದ ಕರು ಹುಲಿಯ ಬಾಯಿಗೆ ಬಿದ್ದಿದೆ; ಹಾಗಾಗಿ, ಅದು
ಕೂಗಾಡುತ್ತಿದೆ.
ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಕಾಣಿಸಿಕೊಳ್ಳುವ ಇಂತಹ ಇಪ್ಪುರುಳಿನ ಸೊಲ್ಲುಗಳು ಕೆಲವರ ಬರಹಗಳಿಗೆ ತೊಡಕಾಗಿರುತ್ತವೆಯಾದರೆ, ಬೇರೆ ಕೆಲವರ ಬರಹಗಳಿಗೆ ಒತ್ತಾಸೆಯಾಗಿಯೂ ಇರುತ್ತವೆ. ಎತ್ತುಗೆಗಾಗಿ, ಕಾನೂನುಗಳಲ್ಲಿ ಇಲ್ಲವೇ ಒಪ್ಪಂದಗಳಲ್ಲಿ ಇಪ್ಪುರುಳಿನ ಸೊಲ್ಲುಗಳು ಸೇರಿಕೊಂಡಲ್ಲಿ ಅವು ಹಲವು ಬಗೆಯ ಜಗಳಗಳಿಗೆ ದಾರಿಮಾಡಿಕೊಡಬಲ್ಲುವು (6.3.1 ನೋಡಿ). ಆದರೆ, ಕತೆ, ಕವಿತೆ, ನಾಟಕ ಮೊದಲಾದ ನಲ್ಬರಹಗಳಲ್ಲಿ ಬೇಕೆಂದೇ ಅವುಗಳನ್ನು ಬಳಸಿ, ಓದುಗರಿಗೆ ಹೆಚ್ಚು ಹೆಚ್ಚು ಹುರುಳುಗಳು ದೊರಕುವಂತೆ ಮಾಡಲು ಬರುತ್ತದೆ, ಮತ್ತು ಆ ಮೂಲಕ ಓದುಗರು ಆ ಬರಹಗಳನ್ನು ಹೆಚ್ಚು ಹೆಚ್ಚು ಮೆಚ್ಚುವಂತೆಯೂ ಮಾಡಲು ಬರುತ್ತದೆ.
ಮೊದಲಿಗೆ ಸೊಲ್ಲುಗಳ ಒಂದು ಹುರುಳನ್ನು ಓದುಗರ ಮನಸ್ಸಿನಲ್ಲಿ ಮೂಡಿಸಿ, ಆಮೇಲೆ ಅವುಗಳ ಇನ್ನೊಂದು ಸೊಲ್ಲಿಗೆ ನೆಗೆಯುವ ಮೂಲಕ
ಇಪ್ಪುರುಳಿನ ತೊಡಕುಗಳು
ಅವರನ್ನು ನಗಿಸುವುದು ನಲ್ಬರಹಗಳಲ್ಲಿ ಕಾಣಿಸುವ ಇಂತಹ ಒಂದು ಇಪ್ಪುರುಳಿನ ಬಳಕೆ. ಕೆಳಗೆ ಕೊಟ್ಟಿರುವ ನಗೆಹನಿಯಲ್ಲಿ ಇದನ್ನು ಗಮನಿಸ ಬಹುದು:
ಆತ: ನಿನ್ನ ಹತ್ತಿರ ಮಾತನಾಡಲು ನನ್ನ ಕಯ್ಯಲ್ಲಾಗದು. ಈತ: ಕಯ್ಯಲ್ಲಿ ಮಾತನಾಡಬೇಡ; ಬಾಯಲ್ಲಿ ಮಾತನಾಡು.
ಇಪ್ಪುರುಳಿನ ಸೊಲ್ಲುಗಳನ್ನು ಬಳಸಿದಾಗ, ಓದುಗರಿಗೆ ಅವು ಹೆಚ್ಚಿನೆಡೆ ಗಳಲ್ಲೂ ಇಪ್ಪುರುಳಿನ ಸೊಲ್ಲುಗಳೆಂದು ಅನಿಸುವುದೇ ಇಲ್ಲ. ಅವನ್ನು ಬಳಸಿರುವ ಜಾಗ, ತಮ್ಮ ಅನುಬವ ಮೊದಲಾದವುಗಳನ್ನವಲಂಬಿಸಿ, ಅವಕ್ಕಿರುವ ಹುರುಳುಗಳಲ್ಲಿ ಒಂದನ್ನು ಅವರು ತಾವಾಗಿಯೇ ಕಂಡುಕೊಳ್ಳುತ್ತಾರೆ.
ಆದರೆ, ಜನರ ಅನುಬವಗಳು ಎಲ್ಲರಲ್ಲೂ ಒಂದೇ ಹಾಗೆ ಇರುವುದಿಲ್ಲ. ಹಾಗಾಗಿ, ಬೇರೆ ಬೇರೆ ಜನರಿಗೆ ಅಂತಹ ಸೊಲ್ಲುಗಳು ಬೇರೆ ಬೇರೆ ಹುರುಳನ್ನು ಕೊಡಬಲ್ಲುವು. ಓದುಗರು ಕಂಡುಕೊಳ್ಳುವ ಹುರುಳು ಬರೆದವರ ಮನಸ್ಸಿನಲ್ಲಿದ್ದ ಹುರುಳಿಗಿಂತ ಬೇರಾಗಿರಬಲ್ಲುದೆಂಬುದೇ ಇಲ್ಲಿ ತೊಡಕನ್ನುಂಟುಮಾಡಬಲ್ಲ ಸಂಗತಿಯಾಗಿದೆ.
ಎತ್ತುಗೆಗಾಗಿ, ಒಬ್ಬ ಹುಡುಗ ತನ್ನ ಮೇಶ್ಟ್ರಿಗೆ ಬರೆದ ಕಾಗದದಲ್ಲಿ ವಾಸುದೇವರಾಯರಿಗೆ ತಮ್ಮ ಅಂಗಡಿಯಲ್ಲಿ ಮೋಸವಾಗಿದೆಯಂತೆ ಎಂಬ ಸೊಲ್ಲೊಂದನ್ನು ಬಳಸಿರಬಹುದು. ಇದು ಇಪ್ಪುರುಳಿನ ಸೊಲ್ಲಾಗಿದೆ. ಹಾಗಾಗಿ, ಹುಡುಗನ ಮನಸ್ಸಿನಲ್ಲಿರುವ ಹುರುಳಿಗಿಂತ ತೀರ ಬೇರಾಗಿರುವ ಹುರುಳನ್ನು ಅದು ಆತನ ಮೇಶ್ಟ್ರ ಮನಸ್ಸಿನಲ್ಲಿ ಮೂಡಿಸಬಲ್ಲುದು, ಮತ್ತು ಇದರಿಂದಾಗಿ ಅವರಿಬ್ಬರಲ್ಲಿ ಮನಸ್ತಾಪವುಂಟಾಗಬಲ್ಲುದು.
ಈ ಸೊಲ್ಲಿನಲ್ಲಿ ಬಂದಿರುವ ತಮ್ಮ ಅಂಗಡಿಯಲ್ಲಿ ಎಂಬ ಪದಕಂತೆಗೆ ಮೇಶ್ಟ್ರ ಅಂಗಡಿಯಲ್ಲಿ ಎಂಬ ಹುರುಳೂ ಇರಬಲ್ಲುದು ಮತ್ತು ವಾಸುದೇವರಾಯರ ಅಂಗಡಿಯಲ್ಲಿ ಎಂಬ ಹುರುಳೂ ಇರಬಲ್ಲುದು. ಯಾಕೆಂದರೆ, ಕನ್ನಡದಲ್ಲಿ ತಾವು ಎಂಬ ಪದ ಕೇಳುಗನನ್ನು ಇಲ್ಲವೇ ಓದುಗನನ್ನು (ಮೇಲಿನ ಎತ್ತುಗೆಯಲ್ಲಿ ಮೇಶ್ಟ್ರನ್ನು) ಸೂಚಿಸುತ್ತಿರಬಹುದು, ಇಲ್ಲವೇ ಅದು ಬಳಕೆಯಾಗಿರುವ ಸೊಲ್ಲಿನಲ್ಲೇನೇ ಹೆಸರಿಸಿರುವಂತಹ
ವ್ಯಕ್ತಿಯೊಬ್ಬನನ್ನು (ವಾಸುದೇವರಾಯರನ್ನು) ಸೂಚಿಸುತ್ತಿರಬಹುದು. ಇದು ಮೇಲಿನ ಸೊಲ್ಲು ಇಪ್ಪುರುಳಿನ ಸೊಲ್ಲಾಗಿ ಕಾಣಿಸಲು ಕಾರಣ.
ಇಲ್ಲಿ ಇನ್ನೊಂದು ವಿಶಯವೂ ಬರೆಯುವವರನ್ನು ಮತ್ತು ಅವರ ಓದುಗರನ್ನು ತೊಂದರೆಯಲ್ಲಿ ಸಿಲುಕಿಸುತ್ತದೆ. ಇಪ್ಪುರುಳಿನ ಸೊಲ್ಲುಗಳಿಗಿರುವ ಎರಡು (ಇಲ್ಲವೇ ಹೆಚ್ಚು) ಹುರುಳುಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳುವ ಕೆಲಸ ಓದುಗರ ಮಿದುಳಿನಲ್ಲಿ ಅವರ ಅರಿವಿಗೆ ಬಾರದ ಹಾಗೆ ನಡೆಯುತ್ತದೆ. ಅವರ ಮಿದುಳು ಯಾವ ಹುರುಳನ್ನು ಆರಿಸಿ ಕೊಂಡಿದೆಯೋ ಅದು ಮಾತ್ರ ಅವರ ಅರಿವಿಗೆ ಬರುತ್ತದೆ.
ಹಾಗಾಗಿ, ತಮ್ಮ ಅರಿವಿಗೆ ಬಂದಿರುವ (ಎಂದರೆ ತಮ್ಮ ಮಿದುಳು ಆರಿಸಿ ಕೊಂಡಿರುವ) ಹುರುಳಿಗಿಂತ ತೀರ ಬೇರಾಗಿರುವ ಇನ್ನೊಂದು ಹುರುಳು ಆ ಸೊಲ್ಲಿಗಿರಬಹುದು ಎಂಬ ವಿಶಯ ಅವರ ಮನಸ್ಸಿಗೆ ಹೊಳೆಯುವುದೇ ಇಲ್ಲ. ಕೆಲವೊಮ್ಮೆ ಅದನ್ನು ಎತ್ತಿ ತೋರಿಸಿದಾಗಲೂ ಅವರು ಅದನ್ನು ಒಪ್ಪದಿರ ಬಹುದು; ತಮ್ಮ ಮನಸ್ಸಿಗೆ ಮೊದಲು ಹೊಳೆದಿದ್ದ ಹುರುಳು ಮಾತ್ರವೇ ಆ ಸೊಲ್ಲಿನ ಹುರುಳು ಎಂಬುದಾಗಿ ಅವರು ವಾದಿಸಬಹುದು.
ಇಂತಹ ಕಡೆಗಳಲ್ಲಿ, ಆ ಸೊಲ್ಲಿನಲ್ಲಿ ಬಳಕೆಯಾಗಿರುವ ಪದವೊಂದಕ್ಕೆ ಹೇಗೆ ಎರಡು ಬೇರೆ ಬೇರೆ ಹುರುಳುಗಳಿರಬಲ್ಲುವು ಎಂಬುದನ್ನು ತೋರಿಸಿಕೊಡ ಬೇಕಾಗುತ್ತದೆ, ಇಲ್ಲವೇ ಆ ಸೊಲ್ಲಿನ ತಯಾರಿಕೆಯಲ್ಲಿ ಹೇಗೆ ಎರಡು ಇಟ್ಟಳ (ಒಳರಚನೆ)ಗಳು ಬಳಕೆಯಾಗಿರಬಲ್ಲುವು, ಮತ್ತು ಅವುಗಳಿಂದಾಗಿ ಆ ಸೊಲ್ಲಿಗೆ ಹೇಗೆ ಎರಡು ಹುರುಳುಗಳು ಬರಬಲ್ಲುವು ಎಂಬುದನ್ನು ತೋರಿಸಿಕೊಡ ಬೇಕಾಗುತ್ತದೆ. ಆಗ ಮಾತ್ರ ಅವರಿಗೆ ತಾವು ತಿಳಿದುಕೊಂಡಿರುವ ಹುರುಳಿಗಿಂತ ಬೇರಾಗಿರುವ ಹುರುಳು ಅದನ್ನು ಹೇಳಿದವರ ಇಲ್ಲವೇ ಬರೆದವರ ಮನಸ್ಸಿನಲ್ಲಿ ಇರಬಲ್ಲುದು ಎಂಬುದರ ಅರಿವು ಉಂಟಾಗುತ್ತದೆ.
6.2 ಇಪ್ಪುರುಳಿನ ಸೊಲ್ಲುಗಳ ಬಗೆಗಳು
ಒಂದು ಸೊಲ್ಲು ಇಪ್ಪುರುಳಿನ ಸೊಲ್ಲಾಗಿ ಕಾಣಿಸಲು ಎರಡು ಮುಕ್ಯ ಕಾರಣ ಗಳಿವೆ: ಅದರಲ್ಲಿ ಒಂದಕ್ಕಿಂತ ಹೆಚ್ಚು ಹುರುಳುಗಳಿರುವ ಪದದ ಬಳಕೆ ಯಾಗಿರುವುದು ಒಂದು ಕಾರಣ; ಮತ್ತು ಅದಕ್ಕೆ ಒಂದಕ್ಕಿಂತ ಹೆಚ್ಚು ಇಟ್ಟಳ (ಒಳರಚನೆ)ಗಳಿರುವುದು ಇನ್ನೊಂದು ಕಾರಣ.
ಎತ್ತುಗೆಗಾಗಿ, ಅವನ ಕಣ್ಣಿಗೆ ಹಾಲು ಚಿಮ್ಮಿತು ಎಂಬ ಸೊಲ್ಲಿನಲ್ಲಿ ದನದ ಹಾಲು ಮತ್ತು ಗಿಡದ ಹಾಲು (ಇಲ್ಲವೇ ಸೊನೆ) ಎಂಬ ಎರಡು
ಹುರುಳುಗಳಿರುವ ಹಾಲು ಪದ ಬಳಕೆಯಾಗಿದೆ. ಹಾಗಾಗಿ, ಈ ಸೊಲ್ಲಿಗೆ ಕಣ್ಣಿಗೆ ದನದ ಹಾಲು ಚಿಮ್ಮಿತು ಎಂಬ ಹುರುಳಾಗಲಿ, ಇಲ್ಲವೇ ಕಣ್ಣಿಗೆ ಗಿಡದ ಸೊನೆ ಚಿಮ್ಮಿತು ಎಂಬ ಹುರುಳಾಗಲಿ ಬರಬಲ್ಲುದು, ಮತ್ತು ಈ ಕಾರಣಕ್ಕಾಗಿ ಅದನ್ನು ಒಂದು ಇಪ್ಪುರುಳಿನ ಸೊಲ್ಲೆಂದು ಕರೆಯಬಹುದು. ಇಪ್ಪುರುಳಿನ ಎರಡನೆಯ ಬಗೆಗೆ ನಾನು ಮತ್ತು ನೀನು ಇಲ್ಲವೇ ರಾಮು ಇವತ್ತು ಬೆಂಗಳೂರಿಗೆ ಹೋಗಬೇಕು ಎಂಬ ಸೊಲ್ಲನ್ನು ಎತ್ತುಗೆಯಾಗಿ ಕೊಡಬಹುದು. ಇದನ್ನು ಉಂಟುಮಾಡುವಲ್ಲಿ ಎರಡು ಹಂತಗಳನ್ನು ಬಳಸಬೇಕಾಗುತ್ತಿದ್ದು, ಅವುಗಳ ಓರಣವನ್ನವಲಂಬಿಸಿ ಅದಕ್ಕೆ ಕೆಳಗಿನ ಎರಡು ಇಟ್ಟಳಗಳನ್ನು ಕೊಡಬಲ್ಲೆವು:
(ಕ) ಮತ್ತು ಎಂಬ ಪದ ಮೊದಲನೆಯ ಹಂತದಲ್ಲಿಯೂ, ಇಲ್ಲವೇ
ಎಂಬ ಪದ ಎರಡನೆಯ ಹಂತದಲ್ಲಿಯೂ ಬಳಕೆಯಾಗಿರಬಹುದು;
(ಚ) ಇಲ್ಲವೇ ಎಂಬ ಪದ ಮೊದಲನೆಯ ಹಂತದಲ್ಲಿಯೂ, ಮತ್ತು
ಎಂಬ ಪದ ಎರಡನೆಯ ಹಂತದಲ್ಲಿಯೂ ಬಳಕೆಯಾಗಿರಬಹುದು.
ಈ ವ್ಯತ್ಯಾಸವನ್ನು, ಕೆಳಗೆ ಕೊಟ್ಟಿರುವ ಹಾಗೆ, ಕಂಸಗಳ ಮೂಲಕವೂ
ಸೂಚಿಸಬಲ್ಲೆವು:
(ಕ) (ನಾನು ಮತ್ತು ನೀನು) ಇಲ್ಲವೇ ರಾಜು (ಚ) ನಾನು ಮತ್ತು (ನೀನು ಇಲ್ಲವೇ ರಾಜು)
ಮೇಲೆ ಕೊಟ್ಟಿರುವ ಸೊಲ್ಲಿಗಿರುವ ಈ ಎರಡು ಇಟ್ಟಳಗಳಿಂದಾಗಿ, ಅದು ಇಪ್ಪುರುಳಿನ ಸೊಲ್ಲಾಗಿ ಕಾಣಿಸಿಕೊಳ್ಳುತ್ತದೆ: ಕೆಲವರಿಗೆ ಅದು ಬೆಂಗಳೂರಿಗೆ ಆಡುಗನೊಂದಿಗೆ ಕೇಳುಗ ಹೋಗಬೇಕು ಇಲ್ಲವೇ ರಾಜು ಮಾತ್ರ ಹೋಗಬೇಕು ಎಂಬ (ಕ) ಹುರುಳನ್ನು ಕೊಡಬಲ್ಲುದು, ಮತ್ತು ಬೇರೆ ಕೆಲವರಿಗೆ ಬೆಂಗಳೂರಿಗೆ ಆಡುಗನೊಂದಿಗೆ ಕೇಳುಗ ಹೋಗಬೇಕು ಇಲ್ಲವೇ ಆಡುಗನೊಂದಿಗೆ ರಾಜು ಹೋಗಬೇಕು ಎಂಬ (ಚ) ಹುರುಳನ್ನು ಕೊಡಬಲ್ಲುದು.
ಇದರ ಮೊದಲಿಗೆ (6.1)ರಲ್ಲಿ ಕೊಟ್ಟಿದ್ದ ಹುಲಿಯ ಬಾಯಿಗೆ ಬಿದ್ದ ದನದ ಕರು ಕೂಗಾಡುತ್ತಿದೆ ಎಂಬ ಸೊಲ್ಲಿನಲ್ಲೂ ಇಪ್ಪುರುಳು
ಕಾಣಿಸಿಕೊಳ್ಳಲು ಅದಕ್ಕೆ ಎರಡು ಇಟ್ಟಳಗಳಿರಬಲ್ಲುವು ಎಂಬುದೇ ಕಾರಣ: ಅದರಲ್ಲಿ ಬಂದಿರುವ ಹುಲಿಯ ಬಾಯಿಗೆ ಬಿದ್ದ ಎಂಬ ತುಂಡುಸೊಲ್ಲು ದನ ಎಂಬ ಪದದ ಪರಿಚೆ(ವಿಶೇಶಣ)ಯಾಗಿರುವುದು ಒಂದು ಇಟ್ಟಳ, ಮತ್ತು ದನದ ಕರು ಎಂಬ ಪದಕಂತೆಯ ಪರಿಚೆಯಾಗಿರುವುದು ಇನ್ನೊಂದು ಇಟ್ಟಳ.
6.2.1 ಪದದ ಇಪ್ಪುರುಳು
ಸೊಲ್ಲುಗಳಲ್ಲಿ ಬಳಕೆಯಾಗುವ ಹೆಚ್ಚಿನ ಪದಗಳಿಗೂ ಒಂದಕ್ಕಿಂತ ಹೆಚ್ಚು ಹುರುಳುಗಳಿರುತ್ತವೆ. ಒಂದು ಪದನೆರಕೆ(ಪದಕೋಶ)ಯನ್ನು ಬಿಡಿಸಿನೋಡಿದಲ್ಲಿ ಈ ವಿಶಯ ಗೊತ್ತಾಗಬಲ್ಲುದು. ಅದರಲ್ಲಿ ಕೊಟ್ಟಿರುವ ಹೆಚ್ಚಿನ ಪದಗಳಿಗೂ ಒಂದಕ್ಕಿಂತ ಹೆಚ್ಚು ಹುರುಳುಗಳಿರುವುದನ್ನು ಕಾಣಬಹುದು. ಆದರೆ, ಸಾಮಾನ್ಯವಾಗಿ ಈ ಪದಗಳನ್ನು ಬಳಸಿರುವ ಸೊಲ್ಲುಗಳಲ್ಲಿ ಹೆಚ್ಚಿನವಕ್ಕೂ ಯಾವುದಾದರೂ ಒಂದು ಹುರುಳನ್ನು ಮಾತ್ರ ಆರಿಸಿಕೊಳ್ಳಲು ಬರುತ್ತದೆ. ಆ ರೀತಿ ಆರಿಸಿಕೊಳ್ಳಲು ನೇರವಾಗಿ ನೆರವು ನೀಡದಿರುವ ಸೊಲ್ಲುಗಳು ಮಾತ್ರ ಇಪ್ಪುರುಳಿನ ಸೊಲ್ಲುಗಳಾಗಿ ಕಾಣಿಸಿಕೊಳ್ಳುತ್ತವೆ.
ಎತ್ತುಗೆಗಾಗಿ, ಹಾಲು ಪದಕ್ಕಿರುವ ಎರಡು ಹುರುಳುಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕು ಎಂಬುದನ್ನು ಮೇಲೆ ಕೊಟ್ಟಿರುವ ಆತನ ಕಣ್ಣಿಗೆ ಹಾಲು ಚಿಮ್ಮಿತು ಎಂಬ ಸೊಲ್ಲು ನೇರವಾಗಿ ಸೂಚಿಸುವುದಿಲ್ಲವಾದ ಕಾರಣ, ಅದು ಇಪ್ಪುರುಳಿನ ಸೊಲ್ಲಾಗಿದೆ. ಇದಕ್ಕೆ ಬದಲು, ಅವನು ಒಂದು ಗ್ಲಾಸು ಹಾಲು ಕುಡಿದ ಎಂಬ ಸೊಲ್ಲಿನಲ್ಲಿ ಹಾಲು ಪದ ಬಂದಿದೆಯಾದರೂ ಅದು ಇಪ್ಪುರುಳಿನ ಸೊಲ್ಲಾಗಿ ಕಾಣಿಸುವುದಿಲ್ಲ. ಯಾಕೆಂದರೆ, ಸಾಮಾನ್ಯವಾಗಿ ಜನರು ಗಿಡದ ಸೊನೆಯನ್ನು ಗ್ಲಾಸಿನಲ್ಲಿ ಹಾಕಿ ಕುಡಿಯುವುದಿಲ್ಲ.
6.2.2 ಪದರೂಪದ ಇಪ್ಪುರುಳು
ಪದಗಳಲ್ಲಿಲ್ಲದ ಕೆಲವು ಬಗೆಯ ಇಪ್ಪುರುಳುಗಳು ಅವುಗಳ ಪದರೂಪಗಳಲ್ಲಿ ಕಾಣಿಸಿಕೊಳ್ಳಬಲ್ಲುವು. ಎತ್ತುಗೆಗಾಗಿ, ಎಸಕ(ಕ್ರಿಯಾ)ಪದಗಳಿಗೆ ಬಹುದು ಎಂಬುದನ್ನು ಸೇರಿಸಿ ರಚಿಸಿದ ಪದರೂಪಗಳಿಗೆ ಆಡುಗನ ಊಹೆಯನ್ನು ತಿಳಿಸುವ ಹುರುಳು ಇಲ್ಲವೇ ಆತನ ಒಪ್ಪಿಗೆಯನ್ನು ಸೂಚಿಸುವ ಹುರುಳು ಎಂಬುದಾಗಿ ಎರಡು ಹುರುಳುಗಳಿರಬಲ್ಲುವು. ಇದನ್ನು ಕೆಳಗೆ ಕೊಟ್ಟಿರುವ ಸೊಲ್ಲಿನಲ್ಲಿ ಕಾಣಬಹುದು:
(2) ಈ ಕೋಣೆಯಲ್ಲಿ ಮೂವರು ಇರಬಹುದು.
ಈ (2)ನೇ ಸೊಲ್ಲಿನ ಮೂಲಕ ಆ ಕೋಣೆಯಲ್ಲಿ ಎಶ್ಟು ಮಂದಿ ಇರ ಬಲ್ಲರು ಇಲ್ಲವೇ ಇದ್ದಾರೆ ಎಂಬ ವಿಶಯದಲ್ಲಿ ಆಡುಗನು ತನ್ನ ಊಹೆಯನ್ನು ತಿಳಿಸುತ್ತಿರಬಹುದು ಇಲ್ಲವೇ ಅದರಲ್ಲಿ ಮೂರು ಮಂದಿ ಇರಲು ಮಾತ್ರ ತನ್ನ ಒಪ್ಪಿಗೆಯಿದೆ ಎಂಬುದಾಗಿ ಆತನು ತನ್ನ ಒಪ್ಪಿಗೆಯನ್ನು ತಿಳಿಸುತ್ತಿರ ಬಹುದು.
ಎಸಕಪದದೊಂದಿಗೆ ಬಹುದು ಎಂಬುದನ್ನು ಸೇರಿಸಿ ರಚಿಸಿರುವ ಪದರೂಪಗಳು ಕೆಲವು ಸೊಲ್ಲುಗಳಲ್ಲಿ ಮಾತ್ರ ಈ ರೀತಿ ಊಹೆ ಮತ್ತು ಒಪ್ಪಿಗೆ ಎಂಬುದಾಗಿ ಎರಡೆರಡು ಹುರುಳುಗಳನ್ನು ಕೊಡುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲಿಗೆ ಒಪ್ಪಿಗೆಯ ಹುರುಳು ಮಾತ್ರ ಇದೆಯಲ್ಲದೆ ಊಹೆಯ ಹುರುಳಿಲ್ಲ.
(3)
ನೀವು ಈಗ ಮನೆಗೆ ಹೋಗಬಹುದು.
ಈ (3)ನೇ ಸೊಲ್ಲಿನಲ್ಲಿ ಬಳಕೆಯಾಗಿರುವ ನೀವು ಪದ ಅದಕ್ಕೆ ಊಹೆಯ ಹುರುಳು ಬಾರದಂತೆ ನೋಡಿಕೊಳ್ಳುತ್ತದೆ. ತಾನು ಏನು ಮಾಡಲಿದ್ದೇನೆ ಎಂಬುದನ್ನು ಕೇಳುಗನು ತಿಳಿದಿರಬಲ್ಲನಾದ ಕಾರಣ, ಅದರ ಕುರಿತು ಆಡುಗನು ತನ್ನ ಊಹೆಯನ್ನು ಆತನಿಗೆ ತಿಳಿಸಬೇಕಾಗಿಲ್ಲವಲ್ಲ!
ಎಸಕಪದದೊಂದಿಗೆ ಬಹುದು ಎಂಬುದನ್ನು ಬಳಸಿದಲ್ಲಿ ಇಪ್ಪುರುಳು ಕಾಣಿಸಿಕೊಳ್ಳಬಹುದೆಂಬ ಸಂಶಯವಿದೆಯಾದರೆ, ಕೆಳಗೆ ಸೂಚಿಸಿದ ಹಾಗೆ ಅದನ್ನು ಬದಲಾಯಿಸಬಹುದು, ಇಲ್ಲವೇ ಅದಕ್ಕೆ ಬದಲು ಬೇರೆ ಬಗೆಯ ಸೊಲ್ಲನ್ನು ಬಳಸಬಹುದು.
(2ಕ) ಈ ಕೋಣೆಯಲ್ಲಿ ಮೂವರು ಇರಬಹುದೆಂದು ತೋರುತ್ತದೆ. (2ಚ) ಈ ಕೋಣೆಯಲ್ಲಿ ಮೂವರು ಇರುವುದಕ್ಕೆ ಒಪ್ಪಿಗೆಯಿದೆ.
(2ಕ) ಸೊಲ್ಲಿಗೆ ಊಹೆಯ ಹುರುಳು ಮಾತ್ರ ಇರಬಲ್ಲುದು ಮತ್ತು
(2ಚ) ಸೊಲ್ಲಿಗೆ ಒಪ್ಪಿಗೆಯ ಹುರುಳು ಮಾತ್ರ ಇರಬಲ್ಲುದು.
ಎಸಕಪದದೊಂದಿಗೆ ಬೇಕು ಎಂಬುದನ್ನು ಸೇರಿಸಿದಾಗಲೂ ಇಂತಹದೇ
ಇನ್ನೊಂದು ರೀತಿಯ ಇಪ್ಪುರುಳು ಕಾಣಿಸಿಕೊಳ್ಳುತ್ತದೆ.
(4)
ಹುಡುಗ ಕೋಣೆಯೊಳಗೆ ಹೋಗಿರಬೇಕು.
(4)ನೇ ಸೊಲ್ಲು ಆಡುಗನ ಊಹೆಯನ್ನಾಗಲಿ, ಇಲ್ಲವೇ ಅಪ್ಪಣೆಯನ್ನಾಗಲಿ ಸೂಚಿಸುತ್ತಿರಬಲ್ಲುದು. ಅದಕ್ಕಿರುವ ಈ ಎರಡು ಹುರುಳುಗಳನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು.
ಹುಡುಗ ಕೋಣೆಯೊಳಗೆ ಹೋಗಿರಬೇಕು; ಹೊರಗೆಲ್ಲೂ ಕಾಣಿಸುವುದಿಲ್ಲ.
(4ಚ) ಹುಡುಗ ಕೋಣೆಯೊಳಗೆ ಹೋಗಿರಬೇಕು; ಹೊರಗೆಲ್ಲೂ
ನಿಂತಿರಬಾರದು.
ಎಸಕಪದಗಳ ಪರಿಚೆರೂಪಕ್ಕೆ ಅಲ್ಲಗಳೆಯುವ ಹುರುಳಿದೆಯಾದಲ್ಲಿ, ಅವಕ್ಕೆ ಮುಂಬೊತ್ತಿನ (ಬವಿಶ್ಯತ್ಕಾಲದ) ಇಲ್ಲವೇ ಹಿಂಬೊತ್ತಿನ (ಬೂತಕಾಲದ) ಹುರುಳು ಬರಬಲ್ಲುದಾಗಿದ್ದು, ಇಪ್ಪುರುಳು ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು:
(5)
ಶಾಲೆಗೆ ಹೋಗದ ಹುಡುಗನಿಗೆ ಚಾಕಲೇಟ್ ಇಲ್ಲ.
(5)ನೇ ಸೊಲ್ಲು ಎರಡು ಹುರುಳುಗಳಲ್ಲಿ ಬಳಕೆಯಾಗಿರಬಲ್ಲುದು. ಅದರ ಮೂಲಕ ಆಡುಗನು ಶಾಲೆಗೆ ಹೋಗದೆ ಕುಳಿತಿರುವ ಹುಡುಗನಿಗೆ ಚಾಕಲೇಟ್ ಕೊಡುವುದಿಲ್ಲ ಎಂಬುದಾಗಿ ತಿಳಿಸುತ್ತಿರಬಹುದು ಇಲ್ಲವೇ ಹುಡುಗ ಶಾಲೆಗೆ ಹೋಗದಿದ್ದರೆ ಆತನಿಗೆ ಚಾಕಲೇಟ್ ಕೊಡುವುದಿಲ್ಲ ಎಂಬುದಾಗಿ ಎಚ್ಚರಿಸುತ್ತಿರಬಹುದು.
ಹೋಗದ, ಮಾಡದ, ಇಲ್ಲದ, ಆಗದ ಮೊದಲಾದ ಅಲ್ಲಗಳೆಯುವ ಪದರೂಪಗಳಿಗೆ (ಕ) ಹಿಂಬೊತ್ತಿನ ಎಸಕ (ಹೋಗದಿದ್ದ, ಮಾಡದಿದ್ದ, ಇಲ್ಲದಿದ್ದ, ಆಗದಿದ್ದ), ಮತ್ತು (ಚ) ಮುಂಬೊತ್ತಿನ ಎಸಕ (ಹೋಗದಿರುವ, ಮಾಡದಿರುವ, ಇಲ್ಲದಿರುವ, ಆಗದಿರುವ) ಎಂಬುದಾಗಿ ಎರಡು ಬಗೆಯ ಎಸಕಗಳನ್ನು ಸೂಚಿಸುವ ಹುರುಳುಗಳಿರುವುದೇ ಈ (5)ನೇ ಸೊಲ್ಲಿನ
ಇಪ್ಪುರುಳಿಗೆ ಕಾರಣ. ಇದೇ ಇಪ್ಪುರುಳನ್ನು ಕೊಡುವ ಬೇರೆ ಕೆಲವು ಸೊಲ್ಲುಗಳನ್ನು ಕೆಳಗೆ ಕೊಡಲಾಗಿದೆ.
(6ಕ) ಊಟ ಮಾಡದವರು ಉಪ್ಪರಿಗೆಯಲ್ಲಿ ಕುಳಿತಿದ್ದಾರೆ. (6ಚ) ಬೊಂಬಾಯಿಗೆ ಹೋಗದವರು ಮಯ್ಸೂರಿಗೆ ಹೋಗಲಿ. (6ಟ) ಪುಸ್ತಕ ಇಲ್ಲದವರು ತರಗತಿಗೆ ಬರುವುದು ಬೇಡ. ಮದುವೆಯಾಗದವರು ಇಲ್ಲಿಗೆ ಬರಕೂಡದು.
ಈ ಇಪ್ಪುರುಳು ಬಾರದ ಹಾಗೆ ಮಾಡಲು, ಪರಿಚೆ ರೂಪದ ಬದಲು
ಪರಿಚೆ ಸೊಲ್ಲನ್ನು ಬಳಸಬಹುದು.
ಯಾವ ಹುಡುಗ ಶಾಲೆಗೆ ಹೋಗಲಿಲ್ಲವೋ ಅವನಿಗೆ ಚಾಕಲೇಟ್ ಇಲ್ಲ.
(5ಚ) ಯಾವ ಹುಡುಗ ಶಾಲೆಗೆ ಹೋಗುವುದಿಲ್ಲವೋ ಅವನಿಗೆ
ಚಾಕಲೇಟ್ ಇಲ್ಲ.
ಕನ್ನಡದಲ್ಲಿ ಬೇರೆಯೂ ಹಲವು ಬಗೆಯ ಪದರೂಪಗಳು ಇಪ್ಪುರುಳಿಗೆ ಎಡೆಮಾಡಿಕೊಡುತ್ತವೆ. ಎತ್ತುಗೆಗಾಗಿ, ಎಸಕ ಪದಗಳ ಪರಿಚೆ ರೂಪದಲ್ಲಿ ಬರುವ ವ ಒಟ್ಟು(ಪ್ರತ್ಯಯ) ಮುಂಬೊತ್ತಿನ ಎಸಕಗಳನ್ನು ಮಾತ್ರವಲ್ಲದೆ ಈಪೊತ್ತಿನ (ವರ್ತಮಾನ ಕಾಲದ) ಎಸಕಗಳನ್ನೂ ಸೂಚಿಸಬಲ್ಲುದು; ಇದರಿಂದಾಗಿಯೂ ಇಪ್ಪುರುಳು ಕಾಣಿಸಿಕೊಳ್ಳುತ್ತದೆ.
ಇದನ್ನು ಈ ಮನೆಯಲ್ಲಿರುವುದು ರಾಮಮೂರ್ತಿ ಎಂಬ ಸೊಲ್ಲಿನಲ್ಲಿ ಕಾಣಬಹುದು. ಅದಕ್ಕೆ ಈ ಮನೆಯನ್ನು ಕಟ್ಟಿ ಮುಗಿಸಿದ ಮೇಲೆ ಅದರಲ್ಲಿರುವುದು ರಾಮಮೂರ್ತಿ ಎಂಬ ಮುಂಬೊತ್ತಿನ ಹುರುಳಾಗಲಿ, ಇಲ್ಲವೇ ಈಗ ಈ ಮನೆಯಲ್ಲಿರುವುದು ರಾಮಮೂರ್ತಿ ಎಂಬ ಈಪೊತ್ತಿನ ಹುರುಳಾಗಲಿ ಬರಬಲ್ಲುದು.
ಎಸಕಪದಗಳನ್ನು ಹೆಸರುಪದಗಳಾಗಿ ಮಾರ್ಪಡಿಸುವಲ್ಲಿ ಬಳಕೆಯಾಗುವ ಉದು ಒಟ್ಟು ಒಂದು ಎಸಕವನ್ನಾಗಲಿ, ಇಲ್ಲವೇ ಅದರಿಂದ ಉಂಟಾದ ವಿಶಯವನ್ನಾಗಲಿ ಸೂಚಿಸಬಲ್ಲುದಾದ ಕಾರಣ, ಇಪ್ಪುರುಳು ಕಾಣಿಸಿಕೊಳ್ಳು ತ್ತದೆ. ಎತ್ತುಗೆಗಾಗಿ, ಅವನು ಹೇಳಿರುವುದು ಸುಳ್ಳು ಎಂಬ ಸೊಲ್ಲಿನಲ್ಲಿ ಸುಳ್ಳು ಎಂಬ ಪದ ಹೇಳುವ ಎಸಕವನ್ನು ಅಲ್ಲಗಳೆಯಬಹುದು (ಅವನು
ಏನೂ ಹೇಳಲಿಲ್ಲ) ಇಲ್ಲವೇ ಹೇಳಿರುವ ವಿಶಯವನ್ನು ಅಲ್ಲಗಳೆಯಬಹುದು (ಅವನು ಸುಳ್ಳು ಹೇಳಿದ್ದಾನೆ).
ಯಾವಾಗಲೂ ಎಂಬ ಪದರೂಪ ಎಡೆಬಿಡದೆ ನಡೆಯುವ ಒಂದು ಎಸಕ ವನ್ನಾಗಲಿ, ಇಲ್ಲವೇ ಒಂದು ಗಡುವಿನಲ್ಲಿ ಯಾವಾಗ ಬೇಕಿದ್ದರೂ ನಡೆಯಬಲ್ಲ ಒಂದು ಎಸಕವನ್ನಾಗಲಿ ಸೂಚಿಸಬಲ್ಲುದಾದ ಕಾರಣ, ಇಪ್ಪುರುಳು ಕಾಣಿಸಿ ಕೊಳ್ಳುತ್ತದೆ. ಎತ್ತುಗೆಗಾಗಿ, ಈ ನಳದಲ್ಲಿ ಯಾವಾಗಲೂ ನೀರು ಬರುತ್ತಿರು ತ್ತದೆ ಎಂಬ ಸೊಲ್ಲಿಗೆ ನಳ ಕೆಟ್ಟುಹೋದುದರಿಂದಾಗಿ ನೀರು ಸೋರುತ್ತಿದೆ ಎಂಬ ಹುರುಳಾಗಲಿ, ಇಲ್ಲವೇ ನಳವನ್ನು ಯಾವಾಗ ತೆರೆದರೂ ಅದರಲ್ಲಿ ನೀರು ಬರುತ್ತದೆ ಎಂಬ ಹುರುಳಾಗಲಿ ಸಿಗಬಲ್ಲುದು.
6.2.3 ಇಟ್ಟಳಗಳ ಇಪ್ಪುರುಳು
ಸೊಲ್ಲುಗಳಲ್ಲಿ ಬರುವ ಪದಗಳ ನಡುವೆ ಎರಡು ಇಲ್ಲವೇ ಹೆಚ್ಚು ಬಗೆಯ ಪತ್ತುಗೆ(ಸಂಬಂದ)ಗಳಿರಲು ಸಾದ್ಯವಿರುವಲ್ಲೆಲ್ಲ ಇಪ್ಪುರುಳು ಕಾಣಿಸಿಕೊಳ್ಳ ಬಲ್ಲುದು. ಈ ಪತ್ತುಗೆಗಳು ಸೊಲ್ಲಿನ ಇಟ್ಟಳವನ್ನು ಅವಲಂಬಿಸಿವೆಯಾದ ಕಾರಣ, ಅದನ್ನು ಇಲ್ಲಿ ಇಟ್ಟಳದ ಇಪ್ಪುರುಳು ಎಂಬುದಾಗಿ ಹೆಸರಿಸಲಾಗಿದೆ. ಇಟ್ಟಳದ ಇಪ್ಪುರುಳು ಒಂದು ಪದಕಂತೆಯೊಳಗೆ ಕಾಣಿಸಿಕೊಳ್ಳಬಹುದು ಇಲ್ಲವೇ ಪದಕಂತೆಯ ಹೊರಗೆ (ಆದರೆ ಸೊಲ್ಲಿನ ಒಳಗೆ) ಕಾಣಿಸಿಕೊಳ್ಳ ಬಹುದು; ಇದಲ್ಲದೆ, ಅದು ಸೊಲ್ಲಿನ ಹೊರಗೂ ಕಾಣಸಿಕೊಳ್ಳಬಹುದು. ಈ ವ್ಯತ್ಯಾಸದ ಮೇಲೆ, ಇಟ್ಟಳದ ಇಪ್ಪುರುಳುಗಳನ್ನು ಪದಕಂತೆಯ ಇಪ್ಪುರುಳು, ಸೊಲ್ಲಿನ ಇಪ್ಪುರುಳು ಮತ್ತು ಹೊರಗಿನ ಇಪ್ಪುರುಳು ಎಂಬುದಾಗಿ ಮೂರು ಗುಂಪುಗಳಲ್ಲಿ ವಿಂಗಡಿಸಬಹುದು.
ಪದಕಂತೆಗಳಲ್ಲಿ ಒಂದು ಹೆಸರು(ನಾಮ)ಪದದೊಂದಿಗೆ ಒಂದಕ್ಕಿಂತ ಹೆಚ್ಚು ಪರಿಚೆಗಳನ್ನು ಬಳಸಿದಲ್ಲಿ ಅವನ್ನು ಹೆಸರು ಪದದ ಮೇಲೆ ಒಂದೊಂದಾಗಿ ಹೊರಿಸಲಾಗಿದೆಯೋ ಇಲ್ಲವೇ ಒಟ್ಟಾಗಿ ಹೊರಿಸಲಾಗಿದೆಯೋ ಎಂಬ ವಿಶಯ ದಲ್ಲಿ ಸಂಶಯವೇಳಬಲ್ಲುದು ಮತ್ತು ಇದರಿಂದಾಗಿ ಇಪ್ಪುರುಳು ಕಾಣಿಸಿಕೊಳ್ಳ ಬಲ್ಲುದು. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ (7)ನೇ ಸೊಲ್ಲನ್ನು ಗಮನಿಸ ಬಹುದು:
(7)
ಹಣಕಟ್ಟಿದ ಮತ್ತು ತೇರ್ಗಡೆಯಾದ ಹುಡುಗರು ಹಣಕಟ್ಟಿ ತೇರ್ಗಡೆಯಾದ ಹುಡುಗರು
(7ಚ) ಹಣಕಟ್ಟಿದ ಹುಡುಗರು ಮತ್ತು ತೇರ್ಗಡೆಯಾದ ಹುಡುಗರು
(7)ನೇ ಪದಕಂತೆಗೆ ಎರಡು ಹುರುಳುಗಳಿರಬಲ್ಲುವು; ಇವನ್ನು (7ಕ) ಮತ್ತು (7ಚ)ಗಳಲ್ಲಿ ಸೂಚಿಸಲಾಗಿದೆ. (7)ನೇ ಸೊಲ್ಲಿನಲ್ಲಿ ಬಂದಿರುವ ಹಣಕಟ್ಟಿದ ಮತ್ತು ತೇರ್ಗಡೆಯಾದ ಎಂಬ ಎರಡು ಪರಿಚೆಗಳನ್ನು ಹುಡುಗರ ಮೇಲೆ ಒಟ್ಟಿಗೆ ಹೊರಿಸಲಾಗಿದೆಯಾದರೆ ಅದಕ್ಕೆ (7ಕ) ಹುರುಳು ಬರುತ್ತದೆ, ಮತ್ತು ಬೇರೆ ಬೇರಾಗಿ ಹೊರಿಸಲಾಗಿದೆಯಾದರೆ (7ಚ) ಹುರುಳು ಬರುತ್ತದೆ. ಈ ಇಪ್ಪುರುಳು ಕಾಣಿಸದ ಹಾಗೆ ಮಾಡಲು ಎರಡು ಹೊಲಬು(ವಿದಾನ) ಗಳಿವೆ: (7ಕ)ದಲ್ಲಿ ಕಾಣಿಸುವ ಹಾಗೆ, ಪರಿಚೆಯಾಗಿ ಪದರೂಪವನ್ನು ಬಳಸುವ ಬದಲು ತುಂಡು ಸೊಲ್ಲನ್ನು ಬಳಸಬಹುದು; ಹಾಗೆ ಮಾಡಿದಲ್ಲಿ, ಎರಡು ಪರಿಚೆಗಳನ್ನೂ ಒಟ್ಟಾಗಿ ಹೆಸರಿನೊಂದಿಗೆ ಸಂಬಂದಿಸಿರುವ ಹುರುಳು ಸಿಗುತ್ತದೆ. ಇದಕ್ಕೆ ಬದಲು, (7ಚ)ದಲ್ಲಿ ಕಾಣಿಸುವ ಹಾಗೆ, ಹೆಸರು ಪದವನ್ನು ಎರಡು ಪರಿಚೆ ಪದಗಳೊಂದಿಗೂ ಬೇರೆ ಬೇರಾಗಿ (ಎಂದರೆ ಎರಡು ಬಾರಿ) ಬಳಸಬಹುದು; ಹಾಗೆ ಮಾಡಿದಲ್ಲಿ, ಆ ಪರಿಚೆಗಳನ್ನು ಹೆಸರುಗಳೊಂದಿಗೆ ಬೇರೆ ಬೇರಾಗಿ ಸಂಬಂದಿಸಿರುವಂತಹ ಎರಡನೆಯ ಹುರುಳು ದೊರಕುತ್ತದೆ. ಈ ಎರಡು ಹೊಲಬುಗಳ ಮೂಲಕವೂ ಮೇಲಿನ ಇಪ್ಪುರುಳನ್ನು ಹೋಗ ಲಾಡಿಸಬಲ್ಲೆವು.
ಒಂದು ಪರಿಚೆಯನ್ನು ಎರಡು ಹೆಸರುಗಳೊಂದಿಗೆ ಬಳಸಿದಾಗ, ಯಾವ ಹೆಸರಿನೊಂದಿಗೆ ಅದನ್ನು ಸಂಬಂದಿಸಬೇಕು ಎಂಬ ವಿಶಯದಲ್ಲಿ ಸಂಶಯ ವೇಳಬಲ್ಲುದು ಮತ್ತು ಇದರಿಂದಾಗಿಯೂ ಇಪ್ಪುರುಳು ಕಾಣಿಸಿಕೊಳ್ಳಬಲ್ಲುದು. ಇಂತಹ ಪದಕಂತೆಗಳಲ್ಲಿ ಬಳಕೆಯಾಗುವ ಹೆಸರುಗಳು ಎರಡು ರೀತಿಯ ಪತ್ತುಗೆಗಳಲ್ಲಿ ಬರಬಲ್ಲುವು:
(ಕ) ಪದಕಂತೆಯಲ್ಲಿ ಬರುವ ಹೆಸರುಗಳನ್ನು ಮತ್ತು ಪದದ ಮೂಲಕ ಜೋಡಿಸಿದೆಯಾದಲ್ಲಿ, ಅವುಗಳ ಮೊದಲು ಬರುವ ಪರಿಚೆಯನ್ನು ಮೊದಲನೆಯ ಹೆಸರಿನ ಮೇಲೆ ಮಾತ್ರವೇ ಹೊರಿಸಿರಬಹುದು, ಇಲ್ಲವೇ ಎರಡರ ಮೇಲೂ ಹೊರಿಸಿರಬಹುದು.
ಎತ್ತುಗೆಗಾಗಿ, ದೊಡ್ಡ ಹುಡುಗರು ಮತ್ತು ಹುಡುಗಿಯರು ಎಂಬ ಪದಕಂತೆಗೆ ಹುಡುಗಿಯರು ಮತ್ತು ದೊಡ್ಡ ಹುಡುಗರು ಎಂಬ ಹುರುಳಾಗಲಿ, ಇಲ್ಲವೇ ದೊಡ್ಡ ಹುಡುಗರು ಮತ್ತು ದೊಡ್ಡ ಹುಡುಗಿಯರು ಎಂಬ ಹುರುಳಾಗಲಿ ಬರಬಲ್ಲುದು.
(ಚ) ಪದಕಂತೆಯಲ್ಲಿರುವ ಎರಡು ಹೆಸರುಪದಗಳಲ್ಲಿ ಒಂದು ಇನ್ನೊಂದರ ಪರಿಚೆಯಾಗಿರಬಹುದು. ಇಂತಹ ಕಡೆಗಳಲ್ಲೂ ಇಪ್ಪುರುಳು ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ಮೇಲೆ (7.1)ರಲ್ಲಿ ಕೊಟ್ಟಿದ್ದ ಹುಲಿಯ ಬಾಯಿಗೆ ಬಿದ್ದ ದನದ ಕರು ಎಂಬ ಪದಕಂತೆಯಲ್ಲಿ ದನ ಎಂಬ ಹೆಸರುಪದ ಕರು ಎಂಬ ಇನ್ನೊಂದು ಹೆಸರುಪದದ ಪರಿಚೆಯಾಗಿ ಬಳಕೆಯಾಗಿದೆ, ಮತ್ತು ಅವೆರಡಕ್ಕೂ ಒಟ್ಟಿಗೆ ಹುಲಿಯ ಬಾಯಿಗೆ ಬಿದ್ದ ಎಂಬ ತುಂಡುಸೊಲ್ಲು ಪರಿಚೆಯಾಗಿ ಬಂದಿದೆ. ಈ ಪರಿಚೆಯನ್ನು ಆ ಎರಡು ಹೆಸರುಪದಗಳಲ್ಲಿ ಯಾವುದರ ಮೇಲೆ ಹೊರಿಸಲಾಗಿದೆ ಎಂಬ ವಿಶಯದಲ್ಲಿ ಸಂಶಯವೇಳಬಲ್ಲುದಾದ ಕಾರಣ, ಅಲ್ಲಿ ಇಪ್ಪುರುಳು ಕಾಣಿಸಿಕೊಳ್ಳುತ್ತದೆ.
ಪದಕಂತೆಯಲ್ಲಿ ಎರಡು ಕೂಡುಗೆ(ಸಮುಚ್ಚಯಪದ)ಗಳನ್ನು ಬಳಸಿದಲ್ಲಿ, ಅವುಗಳೊಳಗೆ ಯಾವುದು ಯಾವ ಹಂತದಲ್ಲಿ ಬರುತ್ತದೆ ಎಂಬ ವಿಶಯದಲ್ಲಿ ಸಂಶಯವೇಳಬಲ್ಲುದು. ಇದನ್ನು ಮೇಲೆ (6.2)ರಲ್ಲಿ ಕೊಟ್ಟಿರುವ ನಾನು ಮತ್ತು ನೀನು ಇಲ್ಲವೇ ರಾಮು ಎಂಬ ಪದಕಂತೆಯಲ್ಲಿ ಕಾಣಬಹುದು. ಈ ಪದಕಂತೆಯ ಮೊದಲನೇ ಹಂತದಲ್ಲಿ ಮತ್ತು ಎಂಬ ಕೂಡುಗೆ ಬಂದಿದೆಯಾದರೆ ಒಂದು ಹುರುಳು ದೊರಕುತ್ತದೆ; ಇಲ್ಲವೇ ಎಂಬ ಕೂಡುಗೆ ಬಂದಿದೆಯಾದರೆ ಇನ್ನೊಂದು ಹುರುಳು ದೊರಕುತ್ತದೆ.
ಪದಕಂತೆಯ ಹೊರಗೆ (ಸೊಲ್ಲಿನೊಳಗೆ) ಕಾಣಿಸಿಕೊಳ್ಳಬಲ್ಲ ಇಟ್ಟಳದ ಇಪ್ಪುರುಳಿಗೆ ಕೆಳಗೆ ಕೊಟ್ಟಿರುವ (8)ನೇ ಸೊಲ್ಲನ್ನು ಎತ್ತುಗೆಯಾಗಿ ಕೊಡ ಬಹುದು:
ಅವನು ಪುಣೆಗೆ ಹೋಗಿ ಮೇಶ್ಟ್ರನ್ನು ಕಾಣಲಿಲ್ಲ. (8) (8ಕ) ಅವನು ಪುಣೆಗೆ ಹೋಗಿದ್ದ; ಆದರೆ ಮೇಶ್ಟ್ರನ್ನು ಕಾಣಲಿಲ್ಲ. (8ಚ) ಅವನು ಪುಣೆಗೆ ಹೋಗದೆ ಮೇಶ್ಟ್ರನ್ನು ಕಂಡ (ಅವರು
ಊರಲ್ಲೇ ಸಿಕ್ಕಿದ್ದರು).
(8ಟ) ಅವನು ಪುಣೆಗೂ ಹೋಗಲಿಲ್ಲ, ಮೇಶ್ಟ್ರನ್ನೂ ಕಾಣಲಿಲ್ಲ.
(8)ನೇ ಸೊಲ್ಲಿನಲ್ಲಿ ಬಂದಿರುವ ಇಲ್ಲ ಪದ ಪದಕಂತೆಯ ಒಳಗಿರುವ ಕಾಣು ಪದವನ್ನು ಮಾತ್ರವೇ ಅಲ್ಲಗಳೆಯುತ್ತಿದೆಯಾದರೆ (8ಕ) ಹುರುಳು ದೊರಕುತ್ತದೆ; ಆ ಪದಕಂತೆಯ ಹೊರಗಿರುವ ಹೋಗು ಪದವನ್ನು ಮಾತ್ರವೇ ಅದು ಅಲ್ಲಗಳೆಯುತ್ತಿದೆಯಾದರೆ (8ಚ) ಹುರುಳು ದೊರಕುತ್ತದೆ; ಮತ್ತು
ಅವೆರಡನ್ನೂ ಅಲ್ಲಗಳೆಯುತ್ತಿದೆಯಾದರೆ (8ಟ) ಹುರುಳು ದೊರಕುತ್ತದೆ. ಇಲ್ಲ ಪದವನ್ನು ಬಳಸಿರುವ ಇಂತಹ ಸೊಲ್ಲುಗಳಲ್ಲಿ ಅದಕ್ಕೆ ಮೂರು ಬಗೆಯ ಹರವುಗಳಿರಬಲ್ಲುದು ಎಂಬುದೇ ಇಲ್ಲಿ ಮೂರು ಬಗೆಯ ಇಟ್ಟಳದ ಇಪ್ಪುರುಳು ಗಳು ಕಾಣಿಸಲು ಕಾರಣ.
ಈ ಇಪ್ಪುರುಳು ಬಾರದ ಹಾಗೆ ಮಾಡಲು, ಮೇಲೆ (8)ನೇ ಸೊಲ್ಲಿನ ಮೂರು ಹುರುಳುಗಳನ್ನು ಸೂಚಿಸುವುದಕ್ಕಾಗಿ (8ಕ, ಚ, ಮತ್ತು ಟ)ಗಳಲ್ಲಿ ಬಳಸಿರುವಂತಹ ಇಟ್ಟಳಗಳನ್ನು ಆಯ್ದುಕೊಳ್ಳಬಹುದು.
ಇಟ್ಟಳದ ಇಪ್ಪುರುಳು ಸೊಲ್ಲಿನ ಹೊರಗೂ ಸಾಗಬಲ್ಲುದೆಂಬುದಕ್ಕೆ ಕೆಳಗಿನ
ಸೊಲ್ಲನ್ನು ಎತ್ತುಗೆಯಾಗಿ ಕೊಡಬಹುದು:
(9)
ನೀನು ಇವತ್ತೇ ಬೊಂಬಾಯಿಗೆ ಹೋಗಬೇಕೆಂದು ರಾಜು ಹೇಳಿದ್ದಾನೆ.
(9)ನೇ ಸೊಲ್ಲಿನಲ್ಲಿ ಬಂದಿರುವ ನೀನು ಪದ ಆ ಸೊಲ್ಲಿನ ಆಡುಗನನ್ನು (ಎಂದರೆ ರಾಜುವಿನ ಕೇಳುಗನನ್ನು) ಸೂಚಿಸಬಲ್ಲುದು, ಇಲ್ಲವೇ ಆ ಸೊಲ್ಲಿನ ಕೇಳುಗನನ್ನೂ ಸೂಚಿಸಬಲ್ಲುದು. ಇವುಗಳಲ್ಲಿ ಎರಡನೆಯ ಹುರುಳು ಆ ಪದಕ್ಕೆ ಸೊಲ್ಲಿನ ಹೊರಗಿರುವ ವ್ಯಕ್ತಿಯೊಂದಿಗೂ ಪತ್ತುಗೆಯಿರಬಲ್ಲುದು ಎಂಬುದನ್ನು ಸೂಚಿಸುತ್ತದೆ.
ಈ ಇಪ್ಪುರುಳಿನ ತೊಡಕನ್ನು ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ ಅನುವಾದಿಸಿದ ಹೆನ್ರಿ ಚಾರೇರ್ ಅವರ ಪ್ಯಾಪಿಲಾನ್ (1) ಪುಸ್ತಕದ ಪುಟ (75)ರಲ್ಲಿ ಬರುವ ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು:
(10)
ಕುಬ್ಜ … ಹಿಂದಿರುಗುವ ಮೊದಲು, ನಮ್ಮ ಹಳೆಯ ದೋಣಿಯನ್ನು ನನಗೆ ಕೊಡಿ ಎಂದು ಕೇಳಿಕೊಂಡ.
ಕನ್ನಡದಲ್ಲಿ ನೇರ ಎತ್ತುಗೆಗೂ ನೇರವಲ್ಲದ ಎತ್ತುಗೆಗೂ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಮೇಲಿನ ಸೊಲ್ಲಿನಲ್ಲಿ ಕುಬ್ಜ ಕೇಳಿದ್ದು, ನಿಮ್ಮ ಹಳೆಯ ದೋಣಿಯನ್ನು ನನಗೆ ಕೊಡಿ ಎಂದಿರಬೇಕು. ಬರಹದ ಕುಳ್ಳಿಹ(ಸಂದರ್ಬ) ದಿಂದ ಇದು ಗೊತ್ತಾಗುತ್ತದೆ. ಕುಬ್ಜನ ಈ ಕೋರಿಕೆಯ ಮೊದಲ ಬಾಗವನ್ನು (ನಿಮ್ಮ ಹಳೆಯ ದೋಣಿಯನ್ನು ಎಂಬುದನ್ನು) ಹೊರಗೆ ಹಾಕಿ, ಉಳಿದ
ಬಾಗವನ್ನು (ನನಗೆ ಕೊಡಿ ಎಂಬುದನ್ನು) ಮಾತ್ರ ನೇರ ಎತ್ತುಗೆಯಾಗಿ ಕೊಟ್ಟಿರುವುದು, ಮತ್ತು ಎತ್ತುಗೆಯ ಗುರುತುಗಳನ್ನು ಬಳಸದಿರುವುದು ಇಲ್ಲಿ ಗೊಂದಲಕ್ಕೆಡೆಮಾಡಿದೆ.
ಈ ಗೊಂದಲವನ್ನು ಇಲ್ಲವಾಗಿಸಬೇಕಿದ್ದಲ್ಲಿ, (10ಕ) ಮತ್ತು (10ಚ)ಗಳಲ್ಲಿ ತೋರಿಸಿದ ಹಾಗೆ, ನೇರ ಎತ್ತುಗೆ ಯಾವುದು ಎಂಬುದನ್ನು ಸೂಚಿಸುವುದಕ್ಕಾಗಿ ಎತ್ತುಗೆಯ ಗುರುತುಗಳನ್ನು ಬಳಸಬೇಕಾಗುತ್ತದೆ.
(10ಕ) ಕುಬ್ಜ … ಹಿಂದಿರುಗುವ ಮೊದಲು, “ನಿಮ್ಮ ಹಳೆಯ ದೋಣಿಯನ್ನು ನನಗೆ ಕೊಡಿ” ಎಂದು ಕೇಳಿಕೊಂಡ. (10ಚ) ಕುಬ್ಜ … ಹಿಂದಿರುಗುವ ಮೊದಲು ನಮ್ಮ ಹಳೆಯ ದೋಣಿಯನ್ನು, “ನನಗೆ ಕೊಡಿ” ಎಂದು ಕೇಳಿಕೊಂಡ.
ನನಗೆ ಎಂಬುದನ್ನು ತನಗೆ ಎಂಬುದಾಗಿ ಬದಲಾಯಿಸುವ (ಎಂದರೆ, ಸೊಲ್ಲಿನ ಯಾವ ಅಂಶವನ್ನೂ ನೇರ ಎತ್ತುಗೆಯಾಗಿ ಬಳಸದಿರುವ) ಮೂರನೆಯ ಹೊಲಬನ್ನೂ ಇಲ್ಲಿ ಬಳಸಲು ಬರುತ್ತದೆ; ಇದನ್ನು (10ಟ)ದಲ್ಲಿ ಕಾಣಬಹುದು.
(10ಟ) ಕುಬ್ಜ … ಹಿಂದಿರುಗುವ ಮೊದಲು ನಮ್ಮ ಹಳೆಯ ದೋಣಿಯನ್ನು ತನಗೆ ಕೊಡಿ ಎಂದು ಕೇಳಿಕೊಂಡ.
ಹಾಗೆ ಮಾಡದಿದ್ದರೆ, ಕೊಡಬೇಕಾಗಿರುವ ದೋಣಿ ಸೊಲ್ಲಿನ ಆಡುಗನದೋ ಇಲ್ಲವೇ ಕುಬ್ಜನದೋ ಎಂಬ ವಿಶಯದಲ್ಲಿ ಇಪ್ಪುರುಳು ಕಾಣಿಸಿಕೊಳ್ಳುತ್ತದೆ.
6.3 ಇಪ್ಪುರುಳು ತೊಡಕಾಗಿರುವುದು
ಮೇಲೆ ಸೂಚಿಸಿದ ಹಾಗೆ, ಇಪ್ಪುರುಳೆಂಬುದು ಕೆಲವರಿಗೆ ಒಂದು ತೊಡಕಾಗಿ ಕಾಣಿಸುತ್ತದೆ; ಆದರೆ ಬೇರೆ ಕೆಲವರಿಗೆ ಅದೊಂದು ಒತ್ತಾಸೆಯಾಗಿಯೂ ಕಾಣಿಸುತ್ತದೆ.
ಸಾಮಾನ್ಯವಾಗಿ, ಹೆಚ್ಚಿನವರಿಗೂ ತಮ್ಮ ಅನಿಸಿಕೆಗಳನ್ನು ಇನ್ನೊಬ್ಬರಿಗೆ ಚೊಕ್ಕಟವಾಗಿ ತಿಳಿಸಬೇಕೆಂದಿರುತ್ತದೆ. ಅಂತಹವರಿಗೆಲ್ಲ ಅವರು ಬಳಸುವ ಸೊಲ್ಲುಗಳಲ್ಲಿ ಅವರ ಅರಿವಿಗೆ ಬಾರದ ಹಾಗೆ ಸೇರಿಕೊಳ್ಳುವ ಇಪ್ಪುರುಳು ಒಂದು ತೊಡಕಾಗುತ್ತದೆ.
ಆದರೆ, ತಮ್ಮ ಮಾತಿನ ಇಲ್ಲವೇ ಬರಹದ ಮೂಲಕ ಜನರನ್ನು ಬೆರಗಾಗಿಸ ಬೇಕೆಂದಿರುವವರಿಗೆ, ನಗೆಯಲ್ಲಿ ಮುಳುಗಿಸ ಬೇಕೆಂದಿರುವವರಿಗೆ, ಇಲ್ಲವೇ ಮೋಸಮಾಡಬೇಕೆಂದಿರುವವರಿಗೆ ಅದು ಒತ್ತಾಸೆಯಾಗುತ್ತದೆ. ಯಾಕೆಂದರೆ, ಇಂತಹ ಕೆಲಸಗಳನ್ನು ನಡೆಸುವುದಕ್ಕಾಗಿ ಅವರು ಇಪ್ಪುರುಳಿನ ಸೊಲ್ಲುಗಳನ್ನು ತಮ್ಮ ಮಾತಿನಲ್ಲಿ ಇಲ್ಲವೇ ಬರಹದಲ್ಲಿ ಬೇಕೆಂದೇ ಬಳಸಿಕೊಳ್ಳಬಲ್ಲರು.
6.2.1 ಕಾನೂನುಗಳನ್ನು ಬರೆಯುವುದು
ಕಟ್ಟುವಳಿ ಇಲ್ಲವೇ ಕಾನೂನುಗಳನ್ನು ಬರೆಯುವವರಿಗೆ ಇಪ್ಪುರುಳಿನ ಸೊಲ್ಲುಗಳು ತುಂಬಾ ತೊಂದರೆ ಕೊಡುತ್ತವೆ. ಯಾಕೆಂದರೆ, ಅವರು ಬರೆಯುವ ಕಾನೂನುಗಳಲ್ಲಿ ಅವು ಅವರಿಗೆ ತಿಳಿಯದ ಹಾಗೆಯೇ ಸೇರಿಕೊಳ್ಳಬಲ್ಲುವು. ಆ ರೀತಿ ಸೇರಿಕೊಂಡಾಗ, ಅಂತಹ ಕಟ್ಟುವಳಿ ಇಲ್ಲವೇ ಕಾನೂನುಗಳು ಕೊಡುವ ಎರಡು ಹುರುಳುಗಳಲ್ಲಿ ಯಾವುದನ್ನು ಒಪ್ಪಬೇಕು ಮತ್ತು ಯಾವುದನ್ನು ಬಿಡಬೇಕು ಎಂಬ ವಿಶಯದಲ್ಲಿ ಜಗಳಗಳುಂಟಾಗುತ್ತವೆ ಮತ್ತು ಅವನ್ನು ಬಗೆಹರಿಸುವುದಕ್ಕಾಗಿ ನ್ಯಾಯಾಲಯಗಳೂ ಸಾಕಶ್ಟು ಸಮಯವನ್ನು ಹಾಳುಮಾಡಬೇಕಾಗುತ್ತದೆ.
ಎತ್ತುಗೆಗಾಗಿ, ಕ್ಲಬ್ಬೊಂದಕ್ಕೆ ಸಂಬಂದಿಸಿದ ಹಾಗೆ, ಕೆಳಗೆ ಕೊಟ್ಟಿರುವ
ಕಟ್ಟುವಳಿಯೊಂದನ್ನು ಬರೆದಿರಬಹುದು:
(11) ಮದುವೆಯಾದವರು ಮತ್ತು ಇಪ್ಪತ್ತು ವರ್ಶ ದಾಟಿದವರು
ಮಾತ್ರ ಈ ಕ್ಲಬ್ಬಿಗೆ ಸೇರಬಹುದು.
ಈ ಕಟ್ಟುವಳಿಗೆ ಕೆಳಗೆ ಸೂಚಿಸಿದ ಹಾಗೆ ಎರಡು ಹುರುಳುಗಳಿರಬಲ್ಲು ದಾಗಿದ್ದು, ಅವುಗಳಲ್ಲಿ ಮೊದಲನೆಯದನ್ನು ಕ್ಲಬ್ಬಿನ ಅದಿಕಾರಿಗಳು ಮತ್ತು ಎರಡನೆಯದನ್ನು ಕ್ಲಬ್ಬಿಗೆ ಸೇರಬೇಕೆಂದಿರುವವರು ಆರಿಸಿಕೊಳ್ಳಬಲ್ಲರಾದ ಕಾರಣ, ಜಗಳವುಂಟಾಗಬಲ್ಲುದು.
(11ಕ) ಈ ಕ್ಲಬ್ಬಿಗೆ ಸೇರಬೇಕಾದರೆ ಮದುವೆಯಾಗಿರಬೇಕು
ಮಾತ್ರವಲ್ಲ, ಇಪ್ಪತ್ತು ವರ್ಶವೂ ದಾಟಿರಬೇಕು.
(11ಚ) ಈ ಕ್ಲಬ್ಬಿಗೆ ಸೇರಬೇಕಾದರೆ ಮದುವೆಯಾಗಿರಬೇಕು ಇಲ್ಲವೇ
ಇಪ್ಪತ್ತು ವರ್ಶ ದಾಟಿರಬೇಕು.
ಕಾನೂನುಗಳು ಇಪ್ಪುರುಳಿನವಾಗಿದ್ದಲ್ಲಿ, ಅವನ್ನು ಯಾರ ನೆರವಿಗಾಗಿ ಮಾಡಲಾಗಿದೆಯೋ ಅವರಲ್ಲಿ ಹೆಚ್ಚಿನವರ ನೆರವಿಗೂ ಅವು ಬಾರದೆ ಹೋಗು ತ್ತವೆ. ಯಾಕೆಂದರೆ, ಅವಕ್ಕೆ ಒಳಪಡಬೇಕಾದವರು ಅವುಗಳಿಗಿರುವ ಹುರುಳು ಗಳಲ್ಲಿ ತಮಗೆ ಅನುಕೂಲವಾದುದನ್ನು ಮಾತ್ರವೇ ಆರಿಸಿಕೊಂಡು ಕಾನೂನಿನ ಹರಹು ತೀರಾ ಕಡಿಮೆಯಾಗುವ ಹಾಗೆ ಮಾಡಿಬಿಡುತ್ತಾರೆ. ಹಾಗಾಗಿ, ಕಾನೂನು ಗಳನ್ನು ಬರೆಯುವವರು ಇಪ್ಪುರುಳುಗಳನ್ನು ದೂರ ಇರಿಸಬೇಕು.
ಒಪ್ಪಂದಗಳಲ್ಲಿ ಇಪ್ಪುರುಳಿನ ಸೊಲ್ಲುಗಳು ಸೇರಿಕೊಂಡಿವೆಯಾದರೆ, ಅವು ಮುಂದೆ ತೊಂದರೆಯನ್ನು ಕೊಡದಿರವು. ಎತ್ತುಗೆಗಾಗಿ, ಮನೆಯೊಂದರ ತೊಟ್ಟಿಯಲ್ಲಿ ಬಲ್ಬುಗಳನ್ನು ಹಾಕಿಸುವುದಕ್ಕಾಗಿ ಮಾಡಿದ ಒಪ್ಪಂದದಲ್ಲಿ ಕೆಳಗೆ (12)ರಲ್ಲಿ ಕೊಟ್ಟಿರುವ ಸೊಲ್ಲು ಬಂದಿರಬಹುದು. ಅದಕ್ಕೆ, (12ಕ) ಮತ್ತು (12ಚ)ಗಳಲ್ಲಿ ಕಾಣಿಸಿದ ಹಾಗೆ, ಎರಡು ಹುರುಳುಗಳಿರಬಲ್ಲುವಾದ ಕಾರಣ, ಅದೊಂದು ಇಪ್ಪುರುಳಿನ ಸೊಲ್ಲು.
(12) ಎಲ್ಲಾ ಬಲ್ಬುಗಳಿಗೂ ಒಂದು ಸ್ವಿಚ್ ಇರಬೇಕು. (12ಕ) ಎಲ್ಲಾ ಬಲ್ಬುಗಳಿಗೂ ಒಂದೊಂದು ಸ್ವಿಚ್ ಇರಬೇಕು. (12ಚ) ಎಲ್ಲಾ ಬಲ್ಬುಗಳಿಗೂ ಒಟ್ಟಿಗೆ ಒಂದು ಸ್ವಿಚ್ ಇರಬೇಕು.
ತೊಟ್ಟಿಗೆ ಬಲ್ಬುಗಳನ್ನು ಹಾಕಿಸುವವನ ಮನಸ್ಸಿನಲ್ಲಿ (12ಕ) ಹುರುಳು ಇದ್ದಿರಬಹುದು; ಆದರೆ, ಅವನ್ನು ಹಾಕುವ ವ್ಯಕ್ತಿ ತನಗೆ ವೆಚ್ಚ ಕಡಿಮೆ ಮಾಡುವ (12ಚ) ಹುರುಳನ್ನು ಆರಿಸಿಕೊಳ್ಳಬಹುದು, ಮತ್ತು ಇದರಿಂದಾಗಿ, ಅವರೊಳಗೆ ಜಗಳವುಂಟಾಗಬಲ್ಲುದು. ಆದರೆ, ಇಲ್ಲಿ ಬಳಕೆಯಾಗಿರುವ ಸೊಲ್ಲೇ ಇಪ್ಪುರುಳಿನದಾದ ಕಾರಣ, ಬಲ್ಬು ಹಾಕಿದವನು ತಪ್ಪು ಮಾಡಿದ್ದಾ ನೆಂದು ತೋರಿಸಲು ಬರುವುದಿಲ್ಲ.
6.3.2 ಅರಿಮೆಯ ಬರಹಗಳು
ಅರಿಮೆಯ (ವಿಜ್ನಾನದ) ಬರಹಗಳಲ್ಲಿಯೂ ಇಪ್ಪುರುಳಿನ ಸೊಲ್ಲುಗಳು ಬರಲೇ ಬಾರದು. ಅವನ್ನು ದೂರ ಇರಿಸುವುದಕ್ಕಾಗಿ ಅರಿವಿಗರು ತಮ್ಮವೇ ಆದ ಅರಿಮೆಯ (ಪಾರಿಬಾಶಿಕ) ಪದಗಳನ್ನು ಉಂಟುಮಾಡಿಕೊಳ್ಳುತ್ತಾರೆ, ಮತ್ತು ಅವಕ್ಕೆ ಕಟ್ಟುನಿಟ್ಟಾದ ಹುರುಳುಗಳನ್ನೂ ಕೊಡುತ್ತಾರೆ. ಹೀಗೆ ಮಾಡುವುದರಿಂದ ಅವರಿಗೆ ಪದಗಳ ಇಪ್ಪುರುಳು ಕಾಣಿಸದ ಹಾಗೆ ಮಾಡಲು ಬರುತ್ತದೆ.
ಇದಲ್ಲದೆ, ಇಟ್ಟಳದ ಇಪ್ಪುರುಳುಗಳನ್ನು ಹೋಗಲಾಡಿಸುವುದಕ್ಕಾಗಿ, ಅವರು ಹೆಚ್ಚಿನೆಡೆಗಳಲ್ಲೂ ಒಂದೇ ಬಗೆಯ ಸೊಲ್ಲುಗಳನ್ನು ಬಳಸಹೋಗುತ್ತಾರೆ. ಅವುಗಳಲ್ಲಿ ಇನ್ನುಡಿಹ(ಪುನರುಕ್ತಿ)ಗಳು ಹೆಚ್ಚಿರುವಂತೆ ನೋಡಿಕೊಳ್ಳುವು ದರಿಂದಲೂ ಕೆಲವು ಬಗೆಯ ಇಪ್ಪುರುಳುಗಳನ್ನು ಕಡಿಮೆ ಮಾಡಲು ಬರುತ್ತದೆ. ಎತ್ತುಗೆಗಾಗಿ, ಪದಕಂತೆಯೊಂದನ್ನು ಇನ್ನೊಮ್ಮೆ ಬಳಸಬೇಕಾದಾಗ, ಅದಕ್ಕೆ ಬದಲು ಅದು ಎಂಬ ತೋರುಪದವನ್ನು ಬಳಸಿದಲ್ಲಿ ಇಪ್ಪುರುಳು ಕಾಣಿಸಿಕೊಳ್ಳ ಬಲ್ಲುದು. ಹಾಗಾಗಿ, ಅರಿಮೆಯ ಬರಹಗಳಲ್ಲಿ ಪದಕಂತೆಗಳನ್ನೇ ತಿರುತಿರುಗಿ ಬಳಸಲಾಗುತ್ತದೆ.
ಆದರೆ, ಅರಿಮೆಯ ಬರಹಗಳು ತಿಳಿಸಬೇಕೆಂದಿರುವ ವಿಶಯವನ್ನು ತುಂಬಾ ಅಡಕವಾಗಿ ತಿಳಿಸಬೇಕಾಗುವುದರಿಂದಾಗಿ, ಬೇರೆ ಹಲವು ಬಗೆಯ ಇಪ್ಪುರುಳು ಗಳು ಅವುಗಳಲ್ಲಿ ಸೇರಿಕೊಳ್ಳುತ್ತವೆ. ಎತ್ತುಗೆಗಾಗಿ, ಅಂತಹ ಬರಹಗಳಲ್ಲಿ ತುಂಬಾ ಹೆಚ್ಚು ಬಳಕೆಯಾಗುವ ಸೊಲ್ಲರಿಮೆಯ ಮಾರ್ಪುರುಳುಗಳು ಇಪ್ಪುರುಳು ಗಳನ್ನೂ ತಂದುಹಾಕುತ್ತವೆ (4.4 ನೋಡಿ). ಈ ಕಾರಣಕ್ಕಾಗಿ, ಎಲ್ಲರಿಗೂ ಅರಿಮೆಯ ಬರಹಗಳನ್ನು ಓದಿ ಅದರಲಿ ಏನು ಹೇಳಿದೆಯೆಂಬುದನ್ನು ಸುಳು ವಾಗಿ ತಿಳಿದುಕೊಳ್ಳಲು ಬರುವುದಿಲ್ಲ.
ಸೊಲ್ಲುಗಳ ಮೂಲಕ ವಿಶಯವೊಂದನ್ನು ಗೊಂದಲವುಂಟಾಗದ ಹಾಗೆ ತಿಳಿಸಬೇಕೆಂದಿರುವವರಿಗೆಲ್ಲ ಈ ರೀತಿ ಅವನ್ನು ಕಾಡುವ ಇಪ್ಪುರುಳುಗಳು ತೊಡಕಾಗಿರುತ್ತವೆ.
6.3.3 ಎಣ್ಣುಕಗಳಲ್ಲಿ ಇಪ್ಪುರುಳು
ನಾವು ಕೊಡುವ ತಿಳುವಳಿಕೆಗಳು ಸೊಲ್ಲಿನ ರೂಪದಲ್ಲಿರುವಲ್ಲೆಲ್ಲ ಎಣ್ಣುಕ (ಕಂಪ್ಯೂಟರ್)ಗಳು ಹಲವು ಬಗೆಯ ತೊಂದರೆಗಳಿಗೆ ಒಳಗಾಗುತ್ತಿರುತ್ತವೆ. ಇದಕ್ಕೆ ಕಾರಣವೇನೆಂದರೆ, ನಮ್ಮ ಹಾಗೆ ಅವು ಸೊಲ್ಲುಗಳಿಗಿರುವ ಎರಡು (ಇಲ್ಲವೇ ಹೆಚ್ಚು) ಹುರುಳುಗಳಲ್ಲಿ ಒಂದನ್ನು ಅವುಗಳ ಕುಳ್ಳಿಹ(ಸಂದರ್ಬ) ವನ್ನಾಗಲಿ, ಇಲ್ಲವೇ ಹಿಂದಿನ ಅನುಬವವನ್ನಾಗಲಿ ಬಳಸಿ ತಾವಾಗಿಯೇ ಆರಿಸಿಕೊಳ್ಳಲಾರವು.
ಎತ್ತುಗೆಗಾಗಿ, ಮಳೆಯಲ್ಲಿ ನೆನೆದ ಹುಡುಗನ ಚೀಲ ಎಂಬ ಪದಕಂತೆ ಮೂರು ಹುರುಳುಗಳನ್ನು ಕೊಡಬಲ್ಲುದು: ಅದು ಹೆಸರಿಸುವ ಚೀಲ ಮಾತ್ರ ಮಳೆಯಲ್ಲಿ ನೆನೆದಿರಬಹುದು; ಹುಡುಗ ಮಾತ್ರ ನೆನೆದಿರಬಹುದು; ಇಲ್ಲವೇ ಹುಡುಗನೊಂದಿಗೆ ಚೀಲವೂ ನೆನೆದಿರಬಹುದು.
ಆದರೆ, ಊಟ ಮಾಡಿದ ಹುಡುಗನ ಚೀಲ ಎಂಬ ಅಂತಹದೇ ಇನ್ನೊಂದು ಪದಕಂತೆಗೆ ಆ ರೀತಿ ಮೂರು ಹುರುಳುಗಳಿರಬಲ್ಲುವೆಂದು ನಮಗೆ ಅನಿಸುವುದಿಲ್ಲ. ಯಾಕೆಂದರೆ, ಊಟವನ್ನು ಮಾಡಿರುವುದು ಹುಡುಗನಲ್ಲದೆ ಚೀಲವಾಗಿರಲು ಬರುವುದಿಲ್ಲ. ಆದರೆ, ನಾವು ಮಾಡುವ ಈ ತೀರ್ಮಾನ ನಮ್ಮ ಅನುಬವದ ಮೇಲೆ ಇಲ್ಲವೇ ಪ್ರಪಂಚದ ಕುರಿತಾಗಿ ನಮಗಿರುವ ತಿಳಿವಿನ ಮೇಲೆ ಅವಲಂಬಿಸಿದೆ. ಎಣ್ಣುಕಗಳಿಗೆ ನಮ್ಮ ಹಾಗೆ ಅನುಬವ ಇಲ್ಲವೇ ಪ್ರಪಂಚದ ತಿಳಿವು ಇರುವುದಿಲ್ಲವಾದ ಕಾರಣ, ಅದು ಹಿಂದಿನ ಪದಕಂತೆಯ ಹಾಗೆ ಈ ಪದಕಂತೆಗೂ ಮೂರು ಹುರುಳುಗಳಿರಬಹುದೆಂಬ ತೀರ್ಮಾನಕ್ಕೆ ಬರುತ್ತದೆ.
ಇಂಟರ್ನೆಟ್ನ ಸರ್ವರ್ಗಳಿಗೆ ಇಪ್ಪುರುಳಿರುವ ಒಂದು ಪದ ಇಲ್ಲವೇ ಪದಕಂತೆಯನ್ನು ಕೊಟ್ಟು, ಅದಕ್ಕೆ ಸಂಬಂದಿಸಿದ ಬರಹಗಳನ್ನು ತೋರಿಸಲು ಸೂಚಿಸಿದಾಗ, ಅವುಗಳ ಎಣ್ಣುಕಗಳು ಎದುರಿಸುವ ಈ ತೊಡಕು ನಮ್ಮ ಕಣ್ಣಿಗೆ ಬೀಳುತ್ತದೆ: ಅವು ನಮಗೆ ಬೇಕಾಗಿರುವ ಹುರುಳಿಗೆ ಸಂಬಂದಿಸಿದಂತಹ ಬರಹಗಳನ್ನು ಮಾತ್ರವಲ್ಲದೆ, ಬೇಡದಿರುವ ಹುರುಳುಗಳಿಗೆ ಸಂಬಂದಿಸಿದಂತಹ ಬರಹಗಳನ್ನೂ ನಮ್ಮೆದುರು ತಂದಿರಿಸುತ್ತವೆ. ಅವು ಹಾಗೆ ಮಾಡದಿರಬೇಕಾದರೆ, ನಮಗೆ ಬೇಕಾಗಿರುವ ಹುರುಳು ಯಾವುದು ಎಂಬುದನ್ನು ಇನ್ನಶ್ಟು ಸ್ಪಶ್ಟವಾಗಿ, ಎಂದರೆ ಇಪ್ಪುರುಳು ಕಾಣಿಸಿಕೊಳ್ಳದ ಹಾಗೆ, ಬರೆದು ತಿಳಿಸಬೇಕಾಗುತ್ತದೆ. ಒಂದು ನುಡಿಯ ಬರಹವನ್ನು ಇನ್ನೊಂದು ನುಡಿಗೆ ನುಡಿಮಾರು(ಅನುವಾ ದಿಸು)ವುದಕ್ಕಾಗಿ ಎಣ್ಣುಕಗಳನ್ನು ಬಳಸಬೇಕೆಂದಿರುವವರಿಗೂ ಅವುಗಳ ಈ ಇಪ್ಪುರುಳಿನ ಕೊರತೆ ಒಂದು ತೊಡಕಾಗಿ ಕಾಣಿಸುತ್ತದೆ. ಯಾಕೆಂದರೆ, ಇಪ್ಪುರುಳಿನ ಪದಗಳು ಇಲ್ಲವೇ ಸೊಲ್ಲುಗಳು ಕಾಣಿಸಿಕೊಳ್ಳುವಲ್ಲೆಲ್ಲ, ಅವು ಕೊಡುವ ಹುರುಳುಗಳಲ್ಲಿ ಯಾವುದನ್ನು ಆರಿಸಬೇಕು ಮತ್ತು ಯಾವುದನ್ನು ಬಿಡಬೇಕು ಎಂಬುದನ್ನು ಎಣ್ಣುಕಗಳು ತೀರ್ಮಾನಿಸಲಾರವು.
ಎಣ್ಣುಕಗಳ ಮಟ್ಟಿಗೆ ಇದು ನಿಜಕ್ಕೂ ಒಂದು ದೊಡ್ಡ ತೊಡಕು. ಸೊಲ್ಲುಗಳ ಹುರುಳನ್ನು ಹೆಚ್ಚಿನೆಡೆಗಳಲ್ಲೂ ನಾವು ಸುಳುವಾಗಿ ಕಂಡುಕೊಳ್ಳಬಲ್ಲೆವು. ಅವಕ್ಕೆ ಒಂದಕ್ಕಿಂತ ಹೆಚ್ಚು ಹುರುಳುಗಳಿರಬಹುದೆಂದು ಹೆಚ್ಚಿನೆಡೆಗಳಲ್ಲೂ ನಮಗೆ ಅನಿಸುವುದೇ ಇಲ್ಲ. ಅದರೆ ಎಣ್ಣುಕಗಳಿಗೆ ಎಲ್ಲಾ ಸೊಲ್ಲುಗಳೂ ಇಪ್ಪುರುಳಿನ ಸೊಲ್ಲುಗಳಾಗಿ ಕಾಣಿಸುತ್ತವೆ. ನಮಗೆ ಬಹಳ ಸರಳವಾಗಿ ಕಾಣಿಸುವ ಒಂದು ಸೊಲ್ಲಿನಲ್ಲಿ ನೂರಾರು ಇಟ್ಟಳಗಳು ಮತ್ತು ಅವಕ್ಕನುಗುಣವಾಗಿ ನೂರಾರು ಹುರುಳುಗಳು ಅವಕ್ಕೆ ಕಾಣಿಸುತ್ತವೆ.
ಎಣ್ಣುಕಗಳು ಎದುರಿಸುವ ಈ ತೊಡಕನ್ನು ಬಗೆಹರಿಸುವುದಕ್ಕಾಗಿ ಹಲವು ಬಗೆಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇವುಗಳಲ್ಲಿ ಕೆಲವನ್ನು ಕೆಳಗೆ ಸೂಚಿಸಲಾಗಿದೆ:
ಕೆಲವು ಮಂದಿ, ನಮಗೆ ಅನುಬವಗಳ ಮೂಲಕ ದೊರೆಯುವಂತಹ ಪ್ರಪಂಚದ ತಿಳುವಳಿಕೆ ಎಣ್ಣುಕಗಳಿಗೂ ಸಿಗುವ ಹಾಗೆ ಮಾಡಲು ಪ್ರಯತ್ನಿಸು ತ್ತಿದ್ದಾರೆ. ಈ ತಿಳುವಳಿಕೆಯನ್ನು ಬಳಸಿ, ಎಣ್ಣುಕಗಳೂ ನಮ್ಮ ಹಾಗೆ ಪದಗಳ ಹಲವು ಹುರುಳುಗಳಲ್ಲಿ ಒಂದನ್ನು ಆರಿಸಿಕೊಳ್ಳುವಂತಾಗಬಹುದೆಂಬುದು ಅವರ
ಇನ್ನು ಕೆಲವರು, ಪದಗಳ ಇಪ್ಪುರುಳನ್ನು ಬಗೆಹರಿಸುವುದಕ್ಕಾಗಿ ಅಂಕಿ ಅಂಶಗಳನ್ನು ಬಳಸುವ ಪ್ರಯತ್ನ ನಡೆಸಿದ್ದಾರೆ: ಪದಗಳಿಗಿರುವ ಎರಡು ಇಲ್ಲವೇ ಹೆಚ್ಚು ಹುರುಳುಗಳಲ್ಲಿ ಯಾವುದು ಹೆಚ್ಚು ಬಳಕೆಯಲ್ಲಿದೆಯೋ ಅದನ್ನೇ ಎಣ್ಣುಕಗಳು ಆರಿಸಿಕೊಳ್ಳುವ ಹಾಗೆ ಮಾಡುವುದೇ ಈ ಪ್ರಯತ್ನ. ಎತ್ತುಗೆಗಾಗಿ, ಹಾಲು ಎಂಬ ಪದ ಬಂದಾಗ, ಬೇರೆ ಕಾರಣಗಳಿಲ್ಲದಿದ್ದರೆ, ಹಸುವಿನ ಹಾಲು ಎಂಬುದನ್ನೇ ಎಣ್ಣುಕಗಳು ಈ ತಿಳಿವಿನ ಮೂಲಕ ಆರಿಸಿಕೊಳ್ಳಬಲ್ಲುವು. ಬೇರೆ ಕೆಲವರು, ಇಟ್ಟಳದ ಇಪ್ಪುರುಳುಗಳಿರುವ ಸೊಲ್ಲುಗಳನ್ನು ಬೇರೊಂದು ನುಡಿಗೆ ನುಡಿಮಾರ(ಅನುವಾದಿಸ)ಬೇಕಾದಾಗ, ಎಣ್ಣುಕಗಳು ಮೂಲ ನುಡಿಯ ಹಾಗೆ ಈಡು ನುಡಿಯಲ್ಲೂ ಇಟ್ಟಳದ ಇಪ್ಪುರುಳುಗಳಿರುವ ಸೊಲ್ಲುಗಳನ್ನೇ ಕೊಡುವ ಹಾಗೆ ಮಾಡುವ ಪ್ರಯತ್ನವನ್ನು ನಡೆಸಿದ್ದಾರೆ. ಇಲ್ಲಿ ಸರಿಯಾದ ಹುರುಳನ್ನು ಆರಿಸಿಕೊಳ್ಳುವ ಕೆಲಸವನ್ನು ಎಣ್ಣುಕಗಳು ನಡೆಸುವ ಬದಲು ಓದುಗನಿಗೇನೇ ಬಿಟ್ಟುಕೊಡಲಾಗುತ್ತದೆ.
ಆದರೆ, ಈ ಯಾವ ಪ್ರಯತ್ನದಲ್ಲೂ ತಮ್ಮ ಗುರಿಯನ್ನು ತಲುಪಲು ಎಣ್ಣುಕದ ತಿಳಿವಿಗರಿಗೆ ಇನ್ನೂ ಸಾದ್ಯವಾಗಿಲ್ಲ. ಅವು ನೆರವಾಗಬಲ್ಲುವೆಂದಶ್ಟೇ ಅವರಿಗೆ ಗೊತ್ತಾಗಿದೆ. ಇಪ್ಪುರುಳಿನ ತೊಡಕನ್ನು ಬಗೆಹರಿಸುವುದು ಎಣ್ಣುಕಗಳ ಮಟ್ಟಿಗೆ ಒಂದು ತುಂಬಾ ಮುಕ್ಯವಾದ ಸಂಗತಿಯಾದ ಕಾರಣ, ಪ್ರಯತ್ನ ವನ್ನಂತೂ ನಡೆಸುತ್ತಲೇ ಇರಬೇಕಾಗಿದೆ.
6.4 ಇಪ್ಪುರುಳು ಒತ್ತಾಸೆಯಾಗಿರುವುದು
ಸೊಲ್ಲುಗಳನ್ನು ತಮ್ಮ ಓದುಗರ ಮನೋರಂಜನೆಗಾಗಿ ಬಳಸಬೇಕೆಂದಿರುವ ಬರಹಗಾರರಿಗೆ ಇಪ್ಪುರುಳಿನ ಸೊಲ್ಲುಗಳು ಹಲವಾರು ಬಗೆಗಳಲ್ಲಿ ನೆರವಿಗೆ
ಬರುತ್ತವೆ. ಒಳ್ಳೇ ನಲ್ಬರಹಗಳಲ್ಲಿ, ಅದರಲ್ಲೂ ಕವಿತೆಗಳಲ್ಲಿ, ಇಪ್ಪುರುಳಿಗೇನೇ ಹೆಚ್ಚಿನ ಮಹತ್ವ ಕೊಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ಹುರುಳುಗಳನ್ನು ಓದುಗರು ಪಡೆಯುವಂತೆ ಮಾಡುವುದರಲ್ಲೇ ಕವಿತೆಗಳ ಕಸುವಿದೆ. ಹಾಗಾಗಿ, ಅಂತಹ ಬರಹಗಳಿಗೆಲ್ಲ ಬಗೆಬಗೆಯ ಇಪ್ಪುರುಳುಗಳಿರುವ ಸೊಲ್ಲುಗಳು ತುಂಬಾ ನೆರವನ್ನು ನೀಡಬಲ್ಲುವು.
ತಿಳಿವಿನ ಬರಹಗಳಲ್ಲಿ ಇಪ್ಪುರುಳು ಕಾಣಿಸಿಕೊಂಡಾಗ, ಅದು ಕೊಡುವ ಹಲವು ಹುರುಳುಗಳಲ್ಲಿ ಒಂದನ್ನು (ಎಂದರೆ, ಬರಹಗಾರರು ಯಾವ ಹುರುಳನ್ನು ತಿಳಿಸಬೇಕೆಂದಿರುವರೋ ಅದನ್ನು) ಓದುಗರು ಆರಿಸಿಕೊಳ್ಳಬೇಕಾಗಿದೆ; ಆದರೆ, ನಲ್ಬರಹಗಳಲ್ಲಿ ಆ ರೀತಿ ಮಾಡುವ ಬದಲು, ಓದುಗರು ಎಲ್ಲಾ ಹುರುಳು ಗಳನ್ನೂ ಕಂಡುಕೊಳ್ಳಬೇಕಾಗಿದೆ, ಮತ್ತು ಅವುಗಳ ನಡುವಿರುವ ಪತ್ತುಗೆ (ಸಂಬಂದ)ಯನ್ನು ತಿಳಿದುಕೊಳ್ಳಬೇಕಾಗಿದೆ. ಒಂದು ನಲ್ಬರಹದಲ್ಲಿ ಓದುಗರು ಕಾಣಬಲ್ಲ ಹುರುಳುಗಳು ಹೆಚ್ಚಿದಾಗ, ಅವರಿಗೆ ಅದರ ಆಳದ ಅರಿವಾಗುತ್ತದೆ. ನಗೆಹನಿ ಇಲ್ಲವೇ ನಗೆಬರಹಗಳಿಗೂ ಬೇರೆ ಬಗೆಯ ನಲ್ಬರಹಗಳಿಗೂ ನಡುವೆ ಇಪ್ಪುರುಳನ್ನು ಬಳಸಿಕೊಳ್ಳುವ ಬಗೆಯಲ್ಲಿ ವ್ಯತ್ಯಾಸವಿದೆ: ಎತ್ತುಗೆಗಾಗಿ, ಕವಿತೆಗಳು ಅವುಗಳಿಗಿರುವ ಎಲ್ಲಾ ಹುರುಳುಗಳನ್ನೂ ಓದುಗರು ಒಟ್ಟಾಗಿ ಗಮನಿಸುವಂತೆ ಮಾಡಬಲ್ಲುವು; ಯಾಕೆಂದರೆ, ಅವೆಲ್ಲವೂ ಅದರ ಹುರುಳು ಗಳೇ ಆಗಿರುತ್ತವೆ. ಆದರೆ, ನಗೆಹನಿ ಇಲ್ಲವೇ ನಗೆಬರಹಗಳು ಮೊದಲಿಗೆ ಓದುಗರು ಒಂದು ಹುರುಳನ್ನು ಗಮನಿಸುವಂತೆ ಮಾಡಿ, ಆಮೇಲೆ ಇನ್ನೊಂದನ್ನು ಗಮನಿಸುವ ಹಾಗೆ ಮಾಡುತ್ತವೆ; ಇದಲ್ಲದೆ, ಅವು ಬಳಸುವ ಹುರುಳುಗಳು ಒಂದಕ್ಕೊಂದು ಎದುರಾಗಿರುತ್ತವೆ, ಮತ್ತು ಅವುಗಳಲ್ಲಿ ಎರಡನೆಯ ಹುರುಳೇ ಸರಿಯಾದುದಾಗಿರುತ್ತದೆ.
ಮೊದಲಿಗೆ ಸೊಲ್ಲಿನ ಒಂದು ಹುರುಳು ಓದುಗರ ಮನಸ್ಸಿನಲ್ಲಿ ಚನ್ನಾಗಿ ಮೂಡುವ ಹಾಗೆ ಅವು ಮಾಡುತ್ತವೆ; ಆಮೇಲೆ, ಆ ಹುರುಳಿನ ಕುರಿತು ಅವರಲ್ಲಿ ಸಂಶಯವುಂಟಾಗುವ ಹಾಗೆ ಮಾಡುತ್ತವೆ, ಮತ್ತು ಒಡನೆಯೇ ಎರಡನೆಯ ಹುರುಳನ್ನು ಅವರೆದುರು ತಂದು ನಿಲ್ಲಿಸಿ, ಅವರು ನಗುವಿನಲ್ಲಿ ಇಲ್ಲವೇ ಬೆರಗಿನಲ್ಲಿ ಮುಳುಗಿಬಿಡುವಂತೆ ಮಾಡುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ನಗೆಹನಿಯನ್ನು ಗಮನಿಸಬಹುದು.
ರಾಜು: ನಿಮ್ಮೂರು ಬಂತೋ? ಹರಿ: ಅದು ನಾವಿದ್ದಲ್ಲಿಗೆ ಬರುವುದಿಲ್ಲ; ನಾವೇ ಅಲ್ಲಿಗೆ ಹೋಗಬೇಕು.
ಕನ್ನಡದಲ್ಲಿ ಬರು ಪದಕ್ಕೆ ಹತ್ತಿರವಾಗು ಎಂಬ ಹುರುಳಾಗಲಿ ಇಲ್ಲವೇ ಹತ್ತಿರ ಹೋಗು ಎಂಬ ಹುರುಳಾಗಲಿ ಇರಬಲ್ಲುದು. ಮೇಲೆ ಕೊಟ್ಟಿರುವ ರಾಜುವಿನ ಮಾತನ್ನು ಓದುತ್ತಿದ್ದಂತೆ, ಓದುಗನ ಮನಸ್ಸಿನಲ್ಲಿ ಬರು ಪದಕ್ಕಿರುವ ಈ ಎರಡು ಹುರುಳುಗಳಲ್ಲಿ ಕುಳ್ಳಿಹಕ್ಕೆ ತಕ್ಕುದಾದ (ನಿಮ್ಮ ಊರು ಹತ್ತಿರ ವಾಗುತ್ತಿದೆಯೇ ಎಂಬ) ಮೊದಲನೆಯ ಹುರುಳು ಮೂಡುತ್ತದೆ; ಆದರೆ ಹರಿಯ ಮಾತನ್ನು ಓದುತ್ತಿದ್ದಂತೆ, ಓದುಗರಲ್ಲಿ ಅದು ಸರಿಯಾದ ಹುರುಳಲ್ಲ ಎಂಬ ಅನಿಸಿಕೆಯುಂಟಾಗುತ್ತದೆ, ಮತ್ತು ಅದು ನಾವಿದ್ದಲ್ಲಿಗೆ ಬರುವುದಿಲ್ಲ ಎಂಬ ಸೊಲ್ಲಿನಿಂದಾಗಿ, ಬರು ಪದದ ಎರಡನೆಯ ಹುರುಳಿಗೆ ಅವರು ನೆಗೆಯಬೇಕಾಗುತ್ತದೆ. ಈ ನೆಗೆತವೇ ಅವರಲ್ಲಿ ನಗುವನ್ನು ಹುಟ್ಟಿಸುತ್ತದೆ. ಓದುಗರು ತನ್ನ ಅನುಬವ, ಪ್ರಪಂಚದ ತಿಳಿವು, ನುಡಿಗಟ್ಟು ಮತ್ತು ಗಾದೆಮಾತುಗಳ ತಿಳಿವು, ನಂಬಿಕೆಗಳು, ನಿಲುವುಗಳು, ನಡವಳಿಕೆಗಳು, ಮುನ್ನೊಲವುಗಳು, ಮೊದಲಾದವುಗಳನ್ನವಲಂಬಿಸಿ, ನಗೆಬರಹಗಳಲ್ಲಿ ಬರುವ ಸೊಲ್ಲಿನ ಮೊದಲನೇ ಹುರುಳನ್ನು ಪಡೆಯುತ್ತಾರೆ. ಆಮೇಲೆ, ಆ ಹುರುಳಿಗಿಂತ ತೀರ ಬೇರಾಗಿರುವ ಹುರುಳಿಗೆ ಅವರು ನೆಗೆಯುವ ಹಾಗೆ ಮಾಡುವುದರಲ್ಲೇ ನಗೆಬರಹಗಳನ್ನು ಬರೆಯುವ ಬರಹಗಾರರ ಜಾಣ್ಮೆಯಿರುತ್ತದೆ.
6.5 ತಿರುಳು
ಎರಡು ಇಲ್ಲವೇ ಹೆಚ್ಚು ಹುರುಳುಗಳಿರುವ ಪದ ಇಲ್ಲವೇ ಪದರೂಪಗಳನ್ನು ಬಳಸಿರುವ ಸೊಲ್ಲುಗಳು, ಮತ್ತು ಎರಡು ಇಲ್ಲವೇ ಹೆಚ್ಚು ಇಟ್ಟಳ(ಒಳರಚನೆ) ಗಳಿರುವ ಸೊಲ್ಲುಗಳು ಇಪ್ಪುರುಳಿನ ಸೊಲ್ಲುಗಳಾಗಿ ಕಾಣಿಸಿಕೊಳ್ಳುತ್ತವೆ. ಒಬ್ಬೊಬ್ಬ ಓದುಗನಿಗೆ ಒಂದೊಂದು ಬಗೆಯ ಹುರುಳನ್ನು ಕೊಡಬಲ್ಲು ವಾದುದರಿಂದ, ಈ ಸೊಲ್ಲುಗಳು ಕೆಲವು ಬಗೆಯ ಬರಹಗಳಲ್ಲಿ ತೊಡಕನ್ನು ತಂದೊಡ್ಡುತ್ತವೆ, ಮತ್ತು ಬೇರೆ ಕೆಲವು ಬಗೆಯ ಬರಹಗಳಲ್ಲಿ ನೆರವನ್ನೂ ಒದಗಿಸುತ್ತವೆ.
ಕಾನೂನುಗಳನ್ನು ಇಲ್ಲವೇ ಒಪ್ಪಂದಗಳನ್ನು ಬರೆಯುವಲ್ಲಿ, ಅರಿಮೆಯ ಬರಹಗಳನ್ನು ಬರೆಯುವಲ್ಲಿ, ಮತ್ತು ಎಣ್ಣುಕ(ಕಂಪ್ಯೂಟರ್)ಗಳಿಗೆ ತಿಳಿವನ್ನು ಒದಗಿಸುವಲ್ಲಿ ಇವು ತೊಡಕಿನವಾಗಿ ಕಾಣಿಸುತ್ತವೆ. ಇದಕ್ಕೆ ಬದಲು, ನಲ್ಬರಹಗಳ ಬರವಣಿಗೆಯಲ್ಲಿ ಇವುಗಳಿಂದ ನೆರವನ್ನೂ ಪಡೆಯಬಹುದು. ಈ ಎರಡು ಬಗೆಯ ಕೆಲಸಗಳನ್ನು ನಡೆಸುವಲ್ಲೂ ಸೊಲ್ಲುಗಳಲ್ಲಿ ಬರಬಲ್ಲ ಇಪ್ಪುರುಳುಗಳು ಎಂತಹವು, ಯಾವ ರೀತಿಯಲ್ಲಿ ಅವು ಬಾರದಂತೆ ನೋಡಿ
ಕೊಳ್ಳಬಲ್ಲೆವು, ಇಲ್ಲವೇ ಯಾವ ರೀತಿಯಲ್ಲಿ ಅವುಗಳಿಂದ ನೆರವನ್ನು ಪಡೆಯಬಲ್ಲೆವು ಎಂಬ ತಿಳುವಳಿಕೆಯಿದ್ದರೆ ಒಳ್ಳೆಯದು. ಇಂತಹ ತಿಳುವಳಿಕೆಯನ್ನು ಪಡೆಯುವಲ್ಲಿ ನುಡಿಯ ಸೊಲ್ಲರಿಮೆ ನೆರವಿಗೆ ಬರುತ್ತದೆ.