Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಅಯ್ದನೇ ಪಸುಗೆ — ನಲ್ಬರಹಗಳು ಮತ್ತು ಸೊಲ್ಲರಿಮೆ
5.1 ಮುನ್ನೋಟ
ಕತೆ, ಕವಿತೆ, ನಾಟಕ, ಕಾದಂಬರಿ ಮೊದಲಾದ ನಲ್ಬರಹಗಳನ್ನು ಬರೆಯು ವವರಿಗೆ, ಮತ್ತು ಅವನ್ನು ಓದಿ ವಿಮರ್ಶಿಸುವವರಿಗೆ ಕನ್ನಡ ನುಡಿಯ ಸೊಲ್ಲರಿಮೆ ಯನ್ನು ತಿಳಿಯುವುದರಿಂದ ಯಾವ ರೀತಿಯಲ್ಲಿ ನೆರವು ಸಿಗಬಲ್ಲುದು ಎಂಬುದನ್ನು ಈ ಪಸುಗೆಯಲ್ಲಿ ಪರಿಶೀಲಿಸಲಾಗಿದೆ. ತಮ್ಮ ಕೆಲಸಕ್ಕೆ ಅದರಿಂದ ಯಾವ ನೆರವೂ ಸಿಗಲಾರದೆಂಬ ಅನಿಸಿಕೆ ಅಂತಹ ಹಲವು ಮಂದಿ ಬರಹಗಾರ ರಲ್ಲಿ ಮತ್ತು ವಿಮರ್ಶಕರಲ್ಲಿದೆ.
ಇದಲ್ಲದೆ, ಇನ್ನೂ ಒಂದು ಅನಿಸಿಕೆಯೂ ಕೆಲವರು ನಲ್ಬರಹಗಾರರಲ್ಲಿದೆ: ಸೊಲ್ಲರಿಮೆ ಒಂದು ಒಣ ವಿಶಯ; ನಲ್ಬರಹ (ಸಾಹಿತ್ಯ) ಅದಕ್ಕೆ ತೀರ ಬೇರಾಗಿರುವಂತಹದು. ನಗು, ಅಳಲು, ಹೆದರಿಕೆ, ಬೆರಗು ಮೊದಲಾದ ಹಲವು ಬಗೆಯ ಅನಿಸಿಕೆಗಳನ್ನು ಬಳಸಿಕೊಂಡು, ಅದು ಓದುಗರಿಗೆ ಮನೋರಂಜನೆ ಯನ್ನು ಒದಗಿಸಬೇಕು, ಮತ್ತು ಆ ಮೂಲಕ ತಿಳಿವನ್ನೂ ಕೊಡಬೇಕು. ಹಾಗಾಗಿ, ನಲ್ಬರಹಗಳನ್ನು ಬರೆಯಬೇಕೆಂದಿರುವವರ ಮೇಲೆ ಸೊಲ್ಲರಿಮೆಯಂತಹ ಒಣವಿಶಯವನ್ನು ಹೊರಿಸಿದೆವಾದಲ್ಲಿ, ಅವರಲ್ಲಿರುವ ನೆನಸಿಕೆ(ಕಲ್ಪನೆ)ಯ ಇಲ್ಲವೇ ಉಂಟುಮಾಡುವಿಕೆಯ ಅಳವೇ ಇಲ್ಲವಾಗಬಹುದೆಂಬ ವಾದವನ್ನೂ ಕೆಲವರು ನಮ್ಮ ಮುಂದಿಡುತ್ತಾರೆ.
ಸೊಲ್ಲರಿಮೆಯ ಕಟ್ಟಲೆಗಳು ಹೆಚ್ಚಿನವರಲ್ಲೂ ಎಡಮಿದುಳಿನಲ್ಲಿ (ಮಿದುಳಿನ ಎಡಬಾಗದಲ್ಲಿ) ಒಂದುಗೂಡಿರುತ್ತವೆ ಮತ್ತು ಅಲ್ಲಿಂದಲೇ ಅವುಗಳ ಬಳಕೆ ಯಾಗುತ್ತಿರುತ್ತದೆ. ಬೆಳಕಿನರಿಮೆ, ತಳಿಯರಿಮೆ, ಎಣಿಕೆಯರಿಮೆ ಮೊದಲಾದ ಇತರ ಒಣವಿಶಯಗಳ ತಿಳಿವೂ ಎಡಮಿದುಳಿನಲ್ಲೇನೇ ಕಲೆತಿರುತ್ತದೆ. ಇದಕ್ಕೆ ಬದಲು, ನಲ್ಬರಹಗಳನ್ನು ಹುಟ್ಟಿಸುವ ಕೆಲಸ ಹೆಚ್ಚಿನ ಮಟ್ಟಿಗೆ ಬಲಮಿದುಳಿನಲ್ಲಿ ನಡೆಯುತ್ತದೆ. ಸಂಗೀತ, ಚಿತ್ರಕಲೆ ಮೊದಲಾದ ಬೇರೆ ಹುಟ್ಟಿಸುವ ಕೆಲಸಗಳೂ ಬಲಮಿದುಳಿನಲ್ಲೇನೇ ನಡೆಯುತ್ತವೆ. ನಲ್ಬರಹಗಳ ಬರವಣಿಗೆಗೆ
ನಲ್ಬರಹಗಳು ಮತ್ತು ಸೊಲ್ಲರಿಮೆ
ಸೊಲ್ಲರಿಮೆಯ ತಿಳಿವು ಬೇಡ ಎನ್ನುವುದಕ್ಕೆ ಇದನ್ನೂ ಒಂದು ಕಾರಣವಾಗಿ ಕೊಡಲಾಗುತ್ತದೆ.
ಆದರೆ, ಒಂದು ಮುಕ್ಯ ವಿಶಯದಲ್ಲಿ ಸಂಗೀತ, ಚಿತ್ರಕಲೆ, ಕೆತ್ತನೆ ಮೊದಲಾದ ಬಲಮಿದುಳಿನ ಕೆಲಸಗಳಿಂದ ನಲ್ಬರಹಗಳ ಬರವಣಿಗೆ ಬೇರಾಗಿದೆ. ಎತ್ತುಗೆಗಾಗಿ, ಚಿತ್ರಕಲೆ ಬಲಮಿದುಳಿನಲ್ಲಿ ಮೂಡಿಬಂದು, ಅಲ್ಲಿಂದಲೇ ನೇರವಾಗಿ ಕಾಗದದ ಮೇಲೆ ಹುಟ್ಟಿಸಿಕೊಳ್ಳಬಲ್ಲುದು. ಆದರೆ, ಕತೆ, ಕವಿತೆ ಮೊದಲಾದ ನಲ್ಬರಹಗಳು ಬಲಮಿದುಳಿನಲ್ಲಿ ಮೂಡಿಬಂದರೂ ಎಡಮಿದುಳಿನ ನೆರವಿಲ್ಲದೆ ಅವಕ್ಕೊಂದು ರೂಪ ಸಿಗಲಾರದು. ಯಾಕೆಂದರೆ, ನಲ್ಬರಹಗಳನ್ನು ಯಾವುದಾದರೊಂದು ನುಡಿಯಲ್ಲಿ ಬರೆಯಬೇಕಾಗುತ್ತದೆ, ಮತ್ತು ಇದಕ್ಕಾಗಿ ಎಡಮಿದುಳಿನಲ್ಲಿರುವ ಸೊಲ್ಲರಿಮೆಯ ಕಟ್ಟಲೆಗಳನ್ನು ಬಳಸಬೇಕಾಗುತ್ತದೆ. ಕೆಲವರು ಹುಟ್ಟುಕವಿಗಳು ಇಲ್ಲವೇ ಕತೆಗಾರರು ಇದನ್ನು ಸುಳುವಾಗಿ, ಯಾವ ಹೆಚ್ಚಿನ ಕಲಿಕೆಯೂ ಇಲ್ಲದೆ ನಡೆಸಬಲ್ಲರೇನೋ ನಿಜ; ಆದರೆ, ಅಂತಹ ಅಳವು ಎಲ್ಲರಲ್ಲೂ ಇರುವುದಿಲ್ಲ. ಮನಸ್ಸಿನಲ್ಲಿ ಒಂದು ಚಂದವಾದ ಕತೆ ಮೂಡಿಬಂದಿದೆಯಾದರೂ, ಅದನ್ನು ಬರಹಕ್ಕಿಳಿಸುವುದಕ್ಕಾಗಿ ಹೆಚ್ಚಿನವರೂ ತುಂಬಾ ಕಶ್ಟಪಡಬೇಕಾಗುತ್ತದೆ.
ಹಲವು ಜನರಿಗೆ ತುಂಬಾ ಸ್ವಾರಸ್ಯವಾದ ವಿಶಯಗಳು ಹೊಳೆಯುತ್ತಿರುತ್ತವೆ; ಆದರೆ, ಅವನ್ನು ಇತರರಿಗೆ ತಿಳಿಯುವ ಹಾಗೆ ಬರೆಯುವುದು ಹೇಗೆ ಎಂದು ಗೊತ್ತಾಗುವುದಿಲ್ಲ. ಒಳ್ಳೊಳ್ಳೆಯ ಕತೆಗಳು ಅವರ ಮನಸ್ಸಿನಲ್ಲಿ ಮೂಡುತ್ತಿರು ತ್ತವೆ; ಆದರೆ ಓದುಗರನ್ನು ಸೆಳೆಯುವ ಹಾಗೆ ಅವನ್ನು ಬರೆಯಲಾರರು. ಕತೆ, ಕವಿತೆ ಮೊದಲಾದುವನ್ನು ಕಲ್ಪಿಸಿಕೊಳ್ಳುವಶ್ಟೇ ಓದುಗರಿಗೆ ತಲಪುವ ಹಾಗೆ ಅವನ್ನು ಬರೆಯುವುದೂ ಮುಕ್ಯವಾದ ಕೆಲಸವಾಗಿದೆ.
ಈ ಎರಡನೇ ಕೆಲಸವನ್ನು ನಡೆಸುವುದು ಹೇಗೆ ಎಂಬುದನ್ನು ಕಲಿಯ ಬೇಕೆಂದಿರುವವರಿಗೆ ಸೊಲ್ಲರಿಮೆಯ ಅರಿವು ಹಲವು ರೀತಿಯಲ್ಲಿ ನೆರವಿಗೆ ಬರಬಲ್ಲುದು. ಎತ್ತುಗೆಗಾಗಿ, ಹಲವು ಮಂದಿ ಬರಹ ಕಲಿಯುವವರು ತಮಗೆ ಮೆಚ್ಚುಗೆಯಾಗಿರುವ ಒಬ್ಬ ಕವಿ ಇಲ್ಲವೇ ಕತೆಗಾರನ ಬರಹವನ್ನು ಅನುಕರಣೆ ಮಾಡಲು ಹೊರಡುತ್ತಾರೆ. ಆದರೆ, ಹಾಗೆ ಮಾಡುವ ಮೂಲಕ, ಅವರಿಗೆ ಉತ್ತಮ ಬರಹಗಾರರಾಗಲು ಬರುವುದಿಲ್ಲ.
ಇದಕ್ಕೆ ಬದಲು, ತಮ್ಮ ಮೆಚ್ಚಿನ ಕತೆಗಳಲ್ಲಿ ಇಲ್ಲವೇ ಕವಿತೆಗಳಲ್ಲಿ ಸೊಲ್ಲರಿಮೆಯ ಕಸುವನ್ನು ಅವುಗಳ ಬರಹಗಾರರು ಯಾವ ರೀತಿಯಲ್ಲಿ ಬಳಸಿಕೊಂಡಿದ್ದಾರೆ ಎಂಬುದನ್ನು ಕಂಡುಕೊಂಡು, ಅದನ್ನು ತಮ್ಮ ಬರವಣಿಗೆ
ಯಲ್ಲಿ ಬಳಸಿಕೊಳ್ಳಲು ತೊಡಗಿದಲ್ಲಿ, ಅದು ಬರಿಯ ಅನುಕರಣೆಯಾಗಲಾರದು. ಆದರೆ, ಹೀಗೆ ಮಾಡಬೇಕಿದ್ದಲ್ಲಿ ಅವರಿಗೆ ಸೊಲ್ಲರಿಮೆಯ ತಿಳಿವು ಬೇಕಾಗು
ಎರಡನೆಯದಾಗಿ, ಹಲವು ಮಂದಿ ಬರಹಗಾರರಿಗೆ ತಮ್ಮ ಬರಹವನ್ನು ಸಾವಗಿಸುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ಅವುಗಳಲ್ಲಿ ಬರುವ ಕೆಲವು ಕುರಳು(ಪಾರಾ)ಗಳನ್ನು ಅವರು ಒಂದೆರಡು ಪುಟಗಳಶ್ಟು ಉದ್ದಕ್ಕೂ ಎಳೆಯುತ್ತಿರುತ್ತಾರೆ. ಇದರಿಂದ ಅವನ್ನು ಓದುವವರಿಗೆ ಉಸಿರುಕಟ್ಟಿದ ಹಾಗಾಗುತ್ತದೆ. ಇದಲ್ಲದೆ, ತಡೆ(,), ಅರೆಕೊನೆ(;), ಅಡ್ಡಗೆರೆ(-) ಮೊದಲಾದ ಬರಹದ ಗುರುತುಗಳನ್ನೂ ಅವರು ಸರಿಯಾಗಿ ಬಳಸುವುದಿಲ್ಲ. ಹಾಗಾಗಿ, ಅವರ ಬರಹಗಳು ಚನ್ನಾಗಿದ್ದರೂ ಹೆಚ್ಚಿನ ಓದುಗರಿಗೂ ತೊಡಕಿನವಾಗಿ ಕಾಣಿಸುತ್ತವೆ.
ಬರಹದ ಗುರುತುಗಳನ್ನು ಸರಿಯಾಗಿ, ಓದುಗರಿಗೆ ನೆರವಾಗುವ ಹಾಗೆ ಬಳಸಬೇಕಿದ್ದಲ್ಲಿ, ಅದಕ್ಕೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ ಎಂಬುದನ್ನು ಹಿಂದೆ ಮೂರನೇ ಪಸುಗೆಯಲ್ಲಿ ತೋರಿಸಿಕೊಡಲಾಗಿದೆ.
ಕಲೆಗಾರರು ಹಲವು ಬಗೆಯ ಬಣ್ಣಗಳನ್ನು ಬಳಸಿ ತಮ್ಮ ಚಿತ್ರಗಳನ್ನು ಬಿಡಿಸುವ ಹಾಗೆ, ನಲ್ಬರಹಗಳನ್ನು ಬರೆಯುವವರು ಸೊಲ್ಲರಿಮೆಯ ಕಟ್ಟಲೆ ಗಳನ್ನು ಬಳಸಿ ತಮ್ಮ ಕತೆ, ಕವಿತೆ, ನಾಟಕ ಮೊದಲಾದುವನ್ನು ಬರೆಯುತ್ತಾರೆ. ಬಣ್ಣಗಳ ಅರಿವು ಕಲೆಗಾರರಿಗೆ ಹೇಗೆ ನೆರವು ನೀಡಬಲ್ಲುದೋ ಹಾಗೆಯೇ ಸೊಲ್ಲುಗಳ ಅರಿವು ನಲ್ಬರಹಗಾರರಿಗೂ ನೆರವು ನೀಡಬಲ್ಲುದು.
5.2 ನಲ್ಬರಹಗಳಲ್ಲಿ ಸೊಲ್ಲುಗಳ ಬಳಕೆ
ಕನ್ನಡದಲ್ಲಿ ಎಂತಹ ಸೊಲ್ಲುಗಳೆಲ್ಲ ಬಳಕೆಯಲ್ಲಿವೆ, ಅವುಗಳ ನಡುವಿನ ವ್ಯತ್ಯಾಸಗಳು ಎಂತಹವು, ಎಂತಹ ಸೊಲ್ಲನ್ನು ಬಳಸಿದಲ್ಲಿ ಎಂತಹ ಹುರುಳು ದೊರಕುತ್ತದೆ ಮತ್ತು ಓದುಗರ ಮೇಲೆ ಅವು ಎಂತಹ ಪರಿಣಾಮವನ್ನು ಬೀರುತ್ತವೆ, ಬಗೆ ಬಗೆಯ ನುಡಿಯೊಡ್ಡವ(ಶಯ್ಲಿ)ಗಳನ್ನು ಹೇಗೆ ಸೊಲ್ಲುಗಳ ಆಯ್ಕೆಯ ಮೂಲಕ ನಮ್ಮ ಹಿಡಿತದಲ್ಲಿರಿಸಿಕೊಳ್ಳಬಹುದು ಮೊದಲಾದ ಹಲವಾರು ಬರಹಗಾರರಿಗೆ ಬೇಕಾಗುವ ವಿಶಯಗಳನ್ನು ಕಲಿತುಕೊಳ್ಳುವಲ್ಲಿ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
ಇಂತಹ ವಿಶಯಗಳನ್ನು ತಿಳಿಯಲು ಒಂದು ಸುಳುವಾದ ಹೊಲಬು (ವಿದಾನ) ಇದೆ: ಒಳ್ಳೇ ಬರಹಗಾರರ ಬರಹಗಳನ್ನು ಹೆಚ್ಚು ಹೆಚ್ಚು ಓದಬೇಕು, ಮತ್ತು ಅವುಗಳಲ್ಲಿ ತುಂಬಾ ಚನ್ನಾಗಿದೆಯೆಂದು ಅನಿಸಿದವುಗಳನ್ನು ಹಲವು ಬಾರಿ ಓದಬೇಕು. ಈ ರೀತಿ ಓದಿದಶ್ಟೂ ಅವುಗಳಲ್ಲಿ ಬಳಕೆಯಾಗುವ ಪದಗಳು, ಪದಕಂತೆಗಳು, ತುಂಡುಸೊಲ್ಲುಗಳು, ಮತ್ತು ನುಡಿಗಟ್ಟುಗಳು ತಾವಾಗಿಯೇ ನಮ್ಮ ನೆನಪಿನಲ್ಲಿ ಸೇರಿಕೊಳ್ಳುತ್ತವೆ, ಮತ್ತು ಬರೆಯುತ್ತಿರುವಾಗ ಅವು ಸುಳು ವಾಗಿ ನಮ್ಮ ಗಮನಕ್ಕೆ ಬರುತ್ತಿರುತ್ತವೆ.
ತಮಗೆ ಮೆಚ್ಚುಗೆಯಾಗಿರುವ ಬರಹಗಳನ್ನು ಮೂರು-ನಾಲ್ಕು ಬಾರಿ ಓದುವವರು ಅವುಗಳಿಂದ ಬೇರೆ ರೀತಿಯಲ್ಲೂ ನೆರವನ್ನು ಪಡೆಯಬಲ್ಲರು. ಮೊದಲನೆಯ ಬಾರಿ ಓದುವಾಗ, ಅವರ ಗಮನವೆಲ್ಲ ಅವು ತಿಳಿಸುವ ವಿಶಯದ ಮೇಲೆ ಇಲ್ಲವೇ ಅವು ಹೇಳುವ ಕತೆಯ ಮೇಲೆ ಇರುತ್ತದೆ. ಆದರೆ ಎರಡನೆಯ ಇಲ್ಲವೇ ಮೂರನೆಯ ಬಾರಿ ಓದುವಾಗ, ಅವುಗಳಲ್ಲಿ ವಿಶಯವನ್ನು ತಿಳಿಸಲು ಇಲ್ಲವೇ ಕತೆಯನ್ನು ಹೇಳಲು ಬರಹಗಾರನು ಎಂತಹ ಹೊಲಬುಗಳನ್ನು ಬಳಸಿದ್ದಾನೆ ಎಂಬುದನ್ನು ಗಮನಿಸಬಹುದು. ಈ ರೀತಿ ಗಮನಿಸುತ್ತಾ ಹೋದಲ್ಲಿ, ಕತೆ ಬರೆಯುವಲ್ಲಿ ಬಳಸಬಹುದಾದ ಹಲವು ಬಗೆಯ ಜಾಣ್ಮೆಗಳು ಓದುವವರ ಕಯ್ಸೇರುತ್ತವೆ.
5.2.1 ನಲ್ಬರಹಗಳು ಮತ್ತು ಉಳಿದ ಬರಹಗಳು
ನಲ್ಬರಹಗಳಿಗೂ ಬೇರೆ ಬಗೆಯ ಬರಹಗಳಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಇವುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ. ನಲ್ಬರಹಗಳನ್ನು ಬರೆಯಬೇಕೆಂದಿರುವವರಿಗೆ, ಮತ್ತು ಅವನ್ನು ಓದಿ ಆನಂದಿಸಬೇಕೆಂದಿರು ವವರಿಗೆ ಈ ವ್ಯತ್ಯಾಸಗಳ ತಿಳಿವು ನೆರವಿಗೆ ಬರಬಲ್ಲುದು:
(1) ವಿಶಯವನ್ನು ತಿಳಿಸುವಲ್ಲಿ ವ್ಯತ್ಯಾಸ: ಕಯ್ಪಿಡಿಗಳು, ಅಡಿಗೆಯ ಪುಸ್ತಕಗಳು, ಅರಿಮೆಯ ಬರಹಗಳು ಮೊದಲಾದ ಬೇರೆ ಬಗೆಯ ಬರಹಗಳು ಓದುಗರಿಗೆ ನೇರವಾಗಿ ಯಾವುದಾದರೊಂದು ವಿಶಯವನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ. ಆದರೆ, ನಲ್ಬರಹಗಳು ನೇರವಾಗಿ ಅಂತಹ ಯಾವ ಕೆಲಸಕ್ಕೂ ಬಳಕೆಯಾಗುವುದಿಲ್ಲ. ಓದುಗನನ್ನು ಕಲ್ಪಿತವಾಗಿರುವ ಬೇರೆಯೇ ಒಂದು ನೆಲೆಗೆ ಕರೆದುಕೊಂಡು ಹೋಗಲು, ಮತ್ತು ಆ ಮೂಲಕ ತನ್ನ ನೆಲೆಯ ತೊಂದರೆಗಳನ್ನು ಮತ್ತು ನೋವುಗಳನ್ನು ಆತನು ಮರೆಯುವ ಹಾಗೆ ಮಾಡಲು ಅವನ್ನು ಬಳಸಲಾಗುತ್ತದೆ.
ನಲ್ಬರಹಗಳಲ್ಲಿ ಬರುವುದೆಲ್ಲ ಕಟ್ಟುಕತೆ. ನಿಜಜೀವನದ ಸಂಗತಿಗಳನ್ನು ಅವು ಸೂಚಿಸಬಲ್ಲುವಾದರೂ, ಅವುಗಳಲ್ಲಿ ಬರುವ ಪಾಂಗು(ಪಾತ್ರ)ಗಳು, ಎಸಕಗಳು, ವಿಶಯಗಳು, ಮತ್ತು ಮಾತುಗಳು ಬರಹಗಾರನ ನೆನಸಿಕೆಯಲ್ಲಿ ಹುಟ್ಟಿಕೊಂಡಿರುತ್ತವೆ.
ಈ ಕಲ್ಪಿತವಾದ ನೆಲೆಯನ್ನು ಓದುಗನ ನೆಲೆಯಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಲು ಬಳಸಬಹುದು; ಇಲ್ಲವೇ ಓದುಗನ ನೆಲೆ ನಿಜಕ್ಕೂ ಹೇಗಿರಬೇಕು, ಹೇಗಿರಬಲ್ಲುದು, ಅದನ್ನು ಹೇಗೆ ಬದಲಾಯಿಸಬಲ್ಲೆವು ಎಂಬಂತಹ ಸಂಗತಿಗಳನ್ನು ಸೂಚಿಸುವುದಕ್ಕಾಗಿಯೂ ಬಳಸಬಹುದು. ಈ ನೇರವಲ್ಲದ ಹೊಲಬಿನ (ವಿದಾನದ) ಮೂಲಕ, ಜನರಿಗೆ ದಾರಿಯನ್ನು ತೋರಿಸುವ, ಅವರನ್ನು ಹುರಿದುಂಬಿಸುವ, ಮತ್ತು ಅವರ ಮೇಲೆ ಒತ್ತಡ ಹೇರುವ ಕೆಲಸವನ್ನು ನಡೆಸಲೂ ಅವುಗಳನ್ನು ಬಳಸಬಹುದು.
(2) ಸೊಲ್ಲರಿಮೆಯಲ್ಲಿ ವ್ಯತ್ಯಾಸ: ನಲ್ಬರಹಗಳ ಮೂಲಕ ನೇರವಾಗಿ ಜನರಿಗೆ ನೆರವಾಗುವಂತಹ ಯಾವ ವಿಶಯವನ್ನೂ ತಿಳಿಸುವುದಿಲ್ಲವಾದ ಕಾರಣ, ಓದುಗರನ್ನು ತಮ್ಮೆಡೆಗೆ ಸೆಳೆಯಲು ಅವುಗಳಲ್ಲಿ ಬೇರೆ ಕೆಲವು ಸಂಚುಗಳನ್ನು ಹೂಡಬೇಕಾಗುತ್ತದೆ. ಬರಹದ ಓದೇ ಓದುಗರ ಕುತೂಹಲವನ್ನು ಕೆರಳಿಸುವಂತೆ ಮಾಡುವುದು ಅವುಗಳಲ್ಲಿ ಬಳಕೆಯಾಗುವ ಇಂತಹ ಒಂದು ಸಂಚಾಗಿದೆ.
ಮಾರ್ಪುರುಳಿನ ಪದ, ಹೋಲಿಕೆಯ ಪದ, ಕಟಕಿ ನುಡಿ (ವ್ಯಂಗ್ಯ) ಮೊದಲಾ ದವುಗಳನ್ನು ಇತರ ಬರಹಗಳಿಗಿಂತ ನಲ್ಬರಹಗಳಲ್ಲಿ ಹೆಚ್ಚು ಬಳಸಲಾಗುತ್ತದೆ; ಪದಗಳ ಓರಣವನ್ನು ಬದಲಾಯಿಸುವುದು, ಸೊಲ್ಲರಿಮೆಯ ಕಟ್ಟಲೆಗಳನ್ನು ಮುರಿಯುವುದು ಮೊದಲಾದುವನ್ನೂ ಅವುಗಳಲ್ಲಿ ಹೆಚ್ಚು ನಡೆಸಲಾಗುತ್ತದೆ. ಇವು ಓದುಗರಿಗೆ ಬರಹದಲ್ಲಿ ಹೆಚ್ಚಿನ ಕುತೂಹಲವುಂಟಾಗುವಂತೆ ಮಾಡುತ್ತವೆ. ಎತ್ತುಗೆಗಾಗಿ, ಕವಿತೆಗಳಲ್ಲಿ ಹಲವು ಬಗೆಯ ಸೊಲ್ಲರಿಮೆಯ ಕಟ್ಟಲೆಗಳನ್ನು ಮುರಿಯಲಾಗುತ್ತದೆ. ಬೇರೆ ಬಗೆಯ ಬರಹಗಳಲ್ಲಿ ಬಾರದಿರುವಂತಹ ತುಂಡುಸೊಲ್ಲುಗಳು ಕವಿತೆಗಳಲ್ಲಿ ಬರಬಲ್ಲುವು. ಸೊಲ್ಲುಗಳಲ್ಲಿ ಬರುವ ಪದ ಇಲ್ಲವೇ ಪದಕಂತೆಗಳ ಓರಣವನ್ನೂ ಅವುಗಳಲ್ಲಿ ಬದಲಾಯಿಸಿಕೊಳ್ಳ ಲಾಗುತ್ತದೆ. ಬೇರೆ ಬರಹಗಳಲ್ಲಿ ಸೊಲ್ಲುಗಳ ಒಳಗೆ ಇಲ್ಲವೇ ಕೊನೆಯಲ್ಲಿ ಬಳಸಬೇಕಾಗಿರುವ ಬರಹದ ಗುರುತುಗಳನ್ನು ಕವಿತೆಗಳಲ್ಲಿ ಬಳಸುವುದಿಲ್ಲ. ಆದರೆ, ಎಲ್ಲಾ ಬಗೆಯ ಸೊಲ್ಲರಿಮೆಯ ಕಟ್ಟಲೆಗಳನ್ನೂ ಮುರಿಯಲು ಬರುವುದಿಲ್ಲ. ಈ ವಿಶಯದಲ್ಲಿ ಬರಹಗಾರರು ಎಶ್ಟರ ಮಟ್ಟಿಗೆ ಮುಂದುವರಿಯ
ಬಲ್ಲರು ಎಂಬುದನ್ನು ಕಂಡುಕೊಳ್ಳಬೇಕಿದ್ದಲ್ಲಿ, ಮೊದಲಿಗೆ ಒಳ್ಳೇ ನಲ್ಬರಹ ಗಳಲ್ಲಿ ಎಂತಹ ಕಟ್ಟಲೆಗಳನ್ನು ಮುರಿಯಲಾಗಿದೆ, ಮತ್ತು ಹಾಗೆ ಮುರಿಯುವ ಮೂಲಕ ಓದುಗರ ಮೇಲೆ ಎಂತಹ ಪರಿಣಾಮಗಳನ್ನು ಬೀರಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಈ ಕೆಲಸವನ್ನು ನಡೆಸ ಬೇಕಿದ್ದಲ್ಲಿ, ಸೊಲ್ಲರಿಮೆಯ ಕಟ್ಟಲೆಗಳು ಎಂತಹವು ಎಂಬುದನ್ನು ತಿಳಿದಿರ ಬೇಕಾಗುತ್ತದೆ.
ನಲ್ಬರಹಗಳಲ್ಲಿ ಆಗಾಗ ಬಳಕೆಯಾಗುತ್ತಿರುವ ಮಾರ್ಪುರುಳು (ರೂಪಕ) ಮತ್ತು ಹೋಲಿಕೆ(ಉಪಮಾನ)ಗಳ ನಡುವಿನ ವ್ಯತ್ಯಾಸವೂ ಸೊಲ್ಲರಿಮೆಯ ವ್ಯತ್ಯಾಸವನ್ನವಲಂಬಿಸಿದೆ ಎಂಬುದನ್ನು ಇಲ್ಲಿ ಗಮನಿಸಬಹುದು: ಮಾರ್ಪುರುಳಿ ನಲ್ಲಿ ಒಂದು ಪದದ ಬದಲು ಇನ್ನೊಂದನ್ನು ಬಳಸಲಾಗುತ್ತದೆ (ಅವನೊಂದು ಕೋತಿ); ಇದಕ್ಕೆ ಬದಲು, ಹೋಲಿಕೆಯಲ್ಲಿ ಎರಡು ಪದಗಳನ್ನು ಅಂತಹ, ಹಾಗೆ, ಅಂತೆ ಮೊದಲಾದವುಗಳ ಮೂಲಕ ಜೋಡಿಸಲಾಗುತ್ತದೆ (ಅವನೊಂದು ಕೋತಿಯ ಹಾಗೆ).
(3) ಹುರುಳು ಪಡೆಯುವ ಬಗೆಯಲ್ಲಿ ವ್ಯತ್ಯಾಸ: ನಲ್ಬರಹಗಳಿಗೂ ಬೇರೆ ಬಗೆಯ ಬರಹಗಳಿಗೂ ನಡುವಿರುವ ವ್ಯತ್ಯಾಸ ಅವುಗಳಿಂದ ಓದುಗರು ಹುರುಳುಗಳನ್ನು ಯಾವ ರೀತಿಯಲ್ಲಿ ಪಡೆಯಬಲ್ಲರು ಎಂಬುದರಲ್ಲೂ ಕಾಣಿಸಿ ಕೊಳ್ಳುತ್ತದೆ. ಬೇರೆ ಬಗೆಯ ಬರಹಗಳಲ್ಲಿ ಬರುವ ಸೊಲ್ಲುಗಳಿಗೆ ಒಂದು ನಿಶ್ಚಿತವಾದ ಹುರುಳಿರುತ್ತದೆ. ಬರಹಗಾರರು ಎಂತಹ ತಿಳಿವನ್ನು ತಿಳಿಸುವು ದಕ್ಕಾಗಿ ಅವನ್ನು ಬರೆದಿರುತ್ತಾರೋ ಅದನ್ನೇ ಓದುಗರೂ ಪಡೆಯಬೇಕಾಗುತ್ತದೆ; ಇಲ್ಲವಾದರೆ, ಅವರಿಗೆ ಆ ಬರಹ ಗೊತ್ತಾಗಿಲ್ಲವೆಂದೇ ಹೇಳಬೇಕಾಗುತ್ತದೆ. ಎತ್ತುಗೆಗಾಗಿ, ಎಣ್ಣುಕ(ಕಂಪ್ಯೂಟರ್)ವನ್ನು ಬಳಸುವ ಬಗೆ ಹೇಗೆ ಎಂಬುದನ್ನು ವಿವರಿಸುವ ಒಂದು ಕಯ್ಪಿಡಿಯಲ್ಲಿ ಬರಹಗಾರನು ಏನು ಹೇಳಿದ್ದಾನೆ ಎಂಬುದನ್ನು ಸರಿಯಾಗಿ ತಿಳಿದುಕೊಂಡಲ್ಲಿ ಮಾತ್ರ ಓದುಗನಿಗೆ ತಾನು ಕೊಂಡುಕೊಂಡಿರುವ ಎಣ್ಣುಕವನ್ನು ಸರಿಯಾಗಿ ಬಳಸಲು ಗೊತ್ತಾಗ ಬಲ್ಲುದು. ಕಯ್ಪಿಡಿ ಹೇಳುವುದನ್ನು ತಪ್ಪುತಪ್ಪಾಗಿ ತಿಳಿದುಕೊಂಡಲ್ಲಿ, ಇಲ್ಲವೇ ಅದರಲ್ಲಿ ತನ್ನದೇ ಆದ ಹುರುಳನ್ನು ಕಂಡುಕೊಳ್ಳಲು ಹೋದಲ್ಲಿ, ಆತ ತನ್ನ ಎಣ್ಣುಕವನ್ನೇ ಕೆಡಿಸಿಬಿಟ್ಟಾನು.
ಇದಕ್ಕೆ ಬದಲು, ನಲ್ಬರಹಗಳಲ್ಲಿ ಬರುವ ಸೊಲ್ಲುಗಳಿಗೆ ಆ ರೀತಿ ಒಂದು ನಿಶ್ಚಿತವಾದ ಹುರುಳಿರುವುದಿಲ್ಲ. ಒಬ್ಬೊಬ್ಬ ಓದುಗನು ಅವುಗಳಿಂದ ಒಂದೊಂದು ಬಗೆಯ ತಿಳಿವನ್ನು ಪಡೆಯಬಹುದು. ಬರಹಗಾರನ
ಮನಸ್ಸಿನಲ್ಲಿಲ್ಲದಿದ್ದಂತಹ ಹುರುಳನ್ನೂ ಕೆಲವರು ಓದುಗರು ಅದರಲ್ಲಿ ಕಾಣಬಹುದು. ಅವುಗಳ ನೇರ ಹುರುಳನ್ನು ತಿಳಿದುಕೊಳ್ಳುವುದಕ್ಕಿಂತಲೂ ಈ ರೀತಿ ನೇರವಲ್ಲದ ಹುರುಳುಗಳನ್ನು ಕಂಡುಕೊಳ್ಳುವುದೇ ಹೆಚ್ಚು ಮುಕ್ಯ ವಾದುದು.
5.2.2 ಮುಂಜರಿಸುವುದು
ಸಾಮಾನ್ಯವಾಗಿ ಒಂದು ಬರಹವನ್ನು ಓದುವಾಗ, ಓದುಗರ ಗಮನವೆಲ್ಲ ಅದು ತಿಳಿಸುವ ವಿಶಯದ ಮೇಲಿರುತ್ತದೆ. ಆ ವಿಶಯ ಅವರಿಗೆ ಎಶ್ಟರ ಮಟ್ಟಿಗೆ ನೆರವಾಗಬಲ್ಲುದೋ, ಅಶ್ಟರ ಮಟ್ಟಿಗೆ ಅವರ ಗಮನ ಅದರಲ್ಲಿ ನೆಲೆನಿಂತಿರುತ್ತದೆ. ಆದರೆ ಮೇಲೆ ಸೂಚಿಸಿದ ಹಾಗೆ, ನಲ್ಬರಹಗಳು ಜನರಿಗೆ ನೇರವಾಗಿ ನೆರವಾಗಬಲ್ಲಂತಹ ಯಾವ ವಿಶಯವನ್ನೂ ತಿಳಿಸುವುದಿಲ್ಲ. ಹಾಗಾಗಿ, ಅವುಗಳೆಡೆಗೆ ಓದುಗರ ಗಮನವನ್ನು ಸೆಳೆಯಲು, ಮತ್ತು ಆಮೇಲೆ ಅದನ್ನು ಉಳಿಸಿಕೊಳ್ಳಲು, ಬರಹಗಾರರು ತಮ್ಮ ಬರಹದ ಬೇರೆ ಅಂಶಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಇಂತಹ ಅಂಶಗಳು ಎದ್ದುಕಾಣುವ ಹಾಗೆ ಮಾಡುವ ಮೂಲಕ ಓದುಗರ ಗಮನವನ್ನು ಸೆಳೆಯಬೇಕಾಗುತ್ತದೆ. ಇದನ್ನು ಮುಂಜರಿಸುವುದು (ಎಂದರೆ, ಬರಹದ ಬೇರೊಂದು ಅಂಶವನ್ನು ಓದುಗರ ಮುಂದಕ್ಕೆ ಸರಿಸುವುದು) ಎಂಬುದಾಗಿ ಕರೆಯಬಹುದು.
ಈ ಕೆಲಸವನ್ನು ನಡೆಸುವುದಕ್ಕಾಗಿ, ಬರಹದ ಒಂದು ಅಂಶವನ್ನು ಎರಡೆರಡು ಬಾರಿ ಬರೆಯುವುದು, ಮತ್ತು ಅದರ ಯಾವಾಗಿನ ರೂಪವನ್ನು ಬದಲಾಯಿಸು ವುದು ಎಂಬುದಾಗಿ ಎರಡು ಹೊಲಬು(ವಿದಾನ)ಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಮೊದಲನೇ ಬಗೆಯ ಹೊಲಬಿಗೆ ನೀವಲ್ಲಿಗೆ ಹೋಗಬೇಕು, ಹೋಗಬೇಕು; ಬನ್ನಿ, ಬನ್ನಿ; ದೊಡ್ಡ ದೊಡ್ಡ ಮರಗಳು ಮೊದಲಾದ ಬಳಕೆಗಳನ್ನು ಎತ್ತುಗೆಯಾಗಿ ಕೊಡಬಹುದು.
ಎರಡನೇ ಬಗೆಯ ಹೊಲಬಿನ ಬಳಕೆಯೆಂತಹದು ಎಂಬುದನ್ನು ತಿಳಿದು ಕೊಳ್ಳುವಲ್ಲಿ ಯಾವಾಗಿನ ರೂಪ ಎಂಬುದು ತುಸು ತೊಂದರೆ ಕೊಡಬಲ್ಲುದು. ಯಾಕೆಂದರೆ, ಪದಗಳ ಇಲ್ಲವೇ ಸೊಲ್ಲುಗಳ ಬಳಕೆಯಲ್ಲಿ ಹಲವಾರು ಬಗೆ ಗಳಿದ್ದು, ಒಂದೊಂದು ಕಡೆ ಒಂದೊಂದು ರೂಪ ಬಳಕೆಯಾಗುತ್ತಿರುತ್ತದೆ; ಇವುಗಳಲ್ಲಿ ಯಾವುದು ಯಾವಾಗಿನ ರೂಪ ಎಂಬುದನ್ನು ತೀರ್ಮಾನಿಸುವುದು ಸುಲಬದ ಕೆಲಸವಲ್ಲ. ಆದರೆ, ಒಂದೊಂದು ಬಗೆಯ ಬರಹದಲ್ಲೂ ಒಂದು ಬಗೆಯ ಪದ ಇಲ್ಲವೇ ಸೊಲ್ಲು ಯಾವಾಗಿನದು ಎಂಬ ಅನಿಸಿಕೆ ನಮ್ಮಲ್ಲಿರು
ತ್ತದೆ. ನಲ್ಬರಹಗಳು ಈ ಅನಿಸಿಕೆಗೆ ಹೊಂದಿಕೊಳ್ಳದಂತಹ ಪದ ಇಲ್ಲವೇ ಸೊಲ್ಲುಗಳನ್ನು ಬಳಸುವ ಮೂಲಕ ಮುಂಜರಿಸುವುದನ್ನು ನಡೆಸುತ್ತವೆ.
ಎತ್ತುಗೆಗಾಗಿ, ಕತೆ-ಕಾದಂಬರಿಗಳಲ್ಲಿ ಸಾಮಾನ್ಯವಾಗಿ ಹೆಸರು ಪದಗಳೊಂದಿಗೆ ಒಂದಲ್ಲ ಒಂದು ಪರಿಚೆ ಪದ ಬಂದಿರುತ್ತದೆ (ಚಿಕ್ಕ ಹುಡುಗಿ, ತುಂಬಾ ಜನರು, ಹೊಸಾ ಬಟ್ಟೆ, ಕಪ್ಪು ಕೂದಲು). ಹೀಗಿರುವಾಗ, ಬರಹವೊಂದರಲ್ಲಿ ಹೆಸರು ಪದಗಳೊಂದಿಗೆ ಒಂದು ಕಡೆಯೂ ಪರಿಚೆ ಪದಗಳನ್ನು ಬಳಸದೇ ಇದ್ದಲ್ಲಿ, ಅದೊಂದು ಎದ್ದುಕಾಣುವ ಬರಹವೆಂದು ಅನಿಸದಿರದು.
ಹೋಲಿಕೆಯ ಸೊಲ್ಲುಗಳನ್ನು ಬರೆಯುವಾಗ, ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳನ್ನು ಇಲ್ಲವೇ ಎರಡು ವಸ್ತುಗಳನ್ನು ಬಳಸಿಕೊಳ್ಳಲಾಗುತ್ತದೆ (ಅವನು ನನ್ನಶ್ಟು ದೊಡ್ಡವನು; ಈ ಪುಸ್ತಕ ಆ ಪುಸ್ತಕದಶ್ಟೇ ದಪ್ಪ). ಈ ಯಾವಾಗಿನ ಬಳಕೆಯನ್ನು ಬದಲಿಸಿ, ಒಬ್ಬ ವ್ಯಕ್ತಿಯನ್ನು ಆ ವ್ಯಕ್ತಿಯೊಂದಿಗೇನೇ ಹೋಲಿಸಹೊರಟಲ್ಲಿ, ಅದು ಓದುಗರ ಗಮನವನ್ನು ಸೆಳೆಯಬಲ್ಲುದು (ಅವನಶ್ಟು ಕೆಟ್ಟವನು ಅವನೇ).
ಈ ರೀತಿ, ಹಲವಾರು ಬಗೆಗಳಲ್ಲಿ ಯಾವಾಗಿನ ರೂಪವನ್ನು ಬದಲಾ ಯಿಸುವ ಮೂಲಕ, ಮತ್ತು ಮಾತಿನ ಕಟ್ಟಲೆಗಳನ್ನು ಮುರಿಯುವ ಮೂಲಕ, ಬರಹವನ್ನು ಮುಂಜರಿಸಲಾಗುತ್ತದೆ. ಕವಿತೆಗಳಲ್ಲಿ ಇದನ್ನು ಬೇರೆಲ್ಲಾ ಬರಹ ಗಳಿಗಿಂತಲೂ ಹೆಚ್ಚು ನಡೆಸಲಾಗುತ್ತದೆ. ಎಶ್ಟು ಹೆಚ್ಚೆಂದರೆ, ಕೆಲವೊಮ್ಮೆ ಅವು ಏನು ಹೇಳುತ್ತಿವೆಯೆಂಬುದು ಸಾಮಾನ್ಯ ಓದುಗರಿಗೆ ಗೊತ್ತೇ ಆಗುವು
ಮುಂಜರಿಸುವ ಕೆಲಸವನ್ನು ನಗೆಬರಹಗಳು ಮತ್ತು ನಗೆಹನಿಗಳು ಬೇರೆಯೇ ಒಂದು ರೀತಿಯಲ್ಲಿ ನಡೆಸುತ್ತವೆ. ಬಳಕೆಯಲ್ಲಿರುವ ಪದ, ಪದಕಂತೆ, ಸೊಲ್ಲಿನ ಇಟ್ಟಳ ಮೊದಲಾದವುಗಳಲ್ಲಿ ಒಂದನ್ನು ಮೊದಲಿಗೆ ಯಾವಾಗಿನ ಬಳಕೆ ಯಲ್ಲಿರುವ ಹಾಗೆ ಕಾಣಿಸಿ, ಆಮೇಲೆ ಇದ್ದಕ್ಕಿದ್ದಂತೆ ಬಳಕೆ ತಪ್ಪಿಸುವ ಮೂಲಕ ಓದುಗರು ಬೆರಗಾಗುವಂತೆ ಅವು ಮಾಡುತ್ತವೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲನ್ನು ಗಮನಿಸಬಹುದು:
(1) ಅವನು ಹೊಗೆಸೊಪ್ಪಿನಿಂದಾಗುವ ಕೆಟ್ಟ ಪರಿಣಾಮಗಳ ಕುರಿತು ಎಶ್ಟು ಓದಿದ್ದನೆಂದರೆ, ಇನ್ನು ಮುಂದೆ ತಾನು ಓದಲೇ ಬಾರದೆಂಬ ತೀರ್ಮಾನಕ್ಕೆ ಬಂದಿದ್ದ.
ಈ ಸೊಲ್ಲನ್ನು ಓದುತ್ತಿರುವಂತೆ, ಓದುಗನು ಎದುರುನೋಡುವುದು ಹೊಗೆಸೊಪ್ಪಿನ ಕುರಿತಾಗಿ ಆತ ಏನಾದರೂ ಒಂದು ತೀರ್ಮಾನಕ್ಕೆ ಬರಬಹು ದೆಂಬುದನ್ನಲ್ಲದೆ, ಓದಿನ ಕುರಿತಲ್ಲ. ಓದುಗನ ಈ ಎದುರು ನೋಡುವಿಕೆಗೆ ಅಡ್ಡಿಯುಂಟಾಗಿರುವುದೇ ಇಲ್ಲಿ ಬೆರಗಿಗೆ ಮತ್ತು ನಗುವಿಗೆ ಕಾರಣವಾಗುತ್ತದೆ (7.4 ನೋಡಿ).
5.2.3 ಸೊಲ್ಲರಿಮೆ ಮತ್ತು ನುಡಿಯೊಡ್ಡವ
ಓದುಗರಲ್ಲಿ ಹಲವು ಬಗೆಯ ಪರಿಣಾಮಗಳನ್ನುಂಟುಮಾಡಲು ಯಾವ ಬಗೆಯ ಸೊಲ್ಲುಗಳನ್ನು ಬಳಸಬೇಕು ಎಂಬುದನ್ನು ನುಡಿಯೊಡ್ಡವ (ಶಯ್ಲಿ) ತಿಳಿಸುತ್ತದೆ. ಎತ್ತುಗೆಗಾಗಿ, ಓದುಗರಿಗೆ ಒಬ್ಬ ವ್ಯಕ್ತಿಯ ಪರಿಚೆ ಎಂತಹದು ಎಂಬುದನ್ನು ತಿಳಿಸಬೇಕಿದ್ದಲ್ಲಿ, ಎಸಕ(ಕ್ರಿಯಾ)ಪದಗಳಿಲ್ಲದ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಬಹುದು ಎಂಬುದನ್ನು ಕೆಳಗೆ ಕೊಟ್ಟಿರುವ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹಾವಿನ ಅಯ್ಯ ಕತೆಯ ಕುರಳಿನಲ್ಲಿ ಕಾಣಬಹುದು:
ಆಗ ಆತನಿಗೆ ವಯಸ್ಸು ಮೂವತ್ತು ಆಗಿತ್ತು. ಅರೋಗ ದೃಢಕಾಯವಾದ ದೇಹ. ಕಂಬಿಯ ಪಂಚೆಯನ್ನು ಪಂಚೆಕಚ್ಚೆಯಾಗಿ ಉಟ್ಟ ಠೀವಿ. ಲಕ್ಷಣವಾಗಿ ಏರಿಸಿದ ಹನ್ನೆರಡು ನಾಮ. ಮುಖದಲ್ಲಿ ತೋರುತ್ತಿದ್ದ ವೈದಿಕತೆಯ ತೇಜಸ್ಸು. ಎಲೆ ಅಡಿಕೆ ಅಗಿದು ಕೆಂಪಾದ ತುಟಿಗಳು. ತಲೆ ಜುಟ್ಟಿನಲ್ಲಿ ಘಮಘಮಿಸುತ್ತಿದ್ದ ಹೂವು. ದೇವರ ಪೂಜೆ ಮಾಡುವಾಗ ತೊಡೆದುಕೊಂಡ, ಎದೆಯ ಮೇಲೆ ತೋರುತ್ತಿದ್ದ
ಇದಕ್ಕೆ ಬದಲು, ಎಸಕ ಪದಗಳಿರುವಂತಹ ಚಿಕ್ಕ ಚಿಕ್ಕ ಸೊಲ್ಲುಗಳನ್ನು ಬಳಸಿದಲ್ಲಿ ಕತೆ ಬಹಳ ಬೇಗನೆ ಮುಂದೆ ಹೋಗುತ್ತದೆ. ಇದನ್ನು ಶಿವರಾಮ ಕಾರಂತರ ಅಳಿದ ಮೇಲೆ ಕಾದಂಬರಿಯ ಕೆಳಗಿನ ಎತ್ತುಗೆಯಲ್ಲಿ ಕಾಣ ಬಹುದು:
ಎರಡೇ ಎರಡು ದಿನಗಳಲ್ಲಿ … ಭಗವಂತಯ್ಯನ ಹಳೆ ಮನೆಯ ಅಡಿ ಚೊಕ್ಕವಾಯಿತು. ಬಿದಿರು ಬಲ್ಲೆಗಳನ್ನು ಸವರಿ, ದೂರ ಒಟ್ಟಿ, ರಾಶಿ ಹಾಕಿದ್ದಾಯಿತು. ಹಳೆ ಮನೆಯ ಪಂಚಾಂಗದ ಮಗ್ಗುಲನ್ನು ಸವರಿ, ಚೊಕ್ಕ ಮಾಡಿ, ಅಲ್ಲಿ ಕಂಬಗಳನ್ನು ನಟ್ಟು, ತಟ್ಟಿಗಳನ್ನು ಬಿಗಿದು, ಎರಡೇ ಎರಡು ದಿನಗಳಲ್ಲಿ ಒಂದು ಜೋಪಡಿಯ ನಿರ್ಮಾಣವಾಯಿತು.
ಇಲ್ಲಿ ಬಂದಿರುವ ಚಿಕ್ಕ ಚಿಕ್ಕ ಸೊಲ್ಲುಗಳಲ್ಲಿ ಕೆಲವನ್ನು ಅವುಗಳ ಬಳಿಕ ಬರುವ ಇನ್ನೊಂದು ಚಿಕ್ಕ ಸೊಲ್ಲಿನೊಂದಿಗೆ ಜೋಡಿಸಲಾಗಿದೆ, ಮತ್ತು ಇದಕ್ಕಾಗಿ ಅವುಗಳ ಕೊನೆಯಲ್ಲಿ ಬರುವ ಎಸಕಪದವನ್ನು ಅದರ ಜೋಡಿಸುವ ರೂಪಕ್ಕೆ (ಸವರಿದರು> ಸವರಿ, ಒಟ್ಟಿದರು> ಒಟ್ಟಿ, ಚೊಕ್ಕಮಾಡಿದರು> ಚೊಕ್ಕಮಾಡಿ, ನಟ್ಟರು> ನಟ್ಟು, ಬಿಗಿದರು> ಬಿಗಿದು) ಬದಲಾಯಿಸಲಾಗಿದೆ. ಇದರಿಂದಾಗಿ ಕತೆಯ ವೇಗ ಇನ್ನಶ್ಟು ಹೆಚ್ಚಿದೆ.
ಚಿಕ್ಕ ಸೊಲ್ಲುಗಳ ಬದಲು, ಹಲವಾರು ಒಳಸೊಲ್ಲುಗಳಿರುವ ಉದ್ದುದ್ದವಾದ ಸಿಕ್ಕಲು ಸೊಲ್ಲುಗಳನ್ನು ಬಳಸಿದಲ್ಲಿ, ಕತೆಯ ವೇಗ ಕಡಿಮೆಯಾಗಿ, ಅದು ತುಂಬಾ ಮೆಲ್ಲನೆ ಸಾಗುವಂತಾಗುತ್ತದೆ.
ಎಸಕ ಪದಗಳಲ್ಲಿ ಕೆಲವು ತೀರಾ ಬಡವಾಗಿರುತ್ತವೆ; ಆದರೆ ಇನ್ನು ಕೆಲವು ತುಂಬಾ ಹುಲುಸಾಗಿದ್ದು, ಎಸಕಗಳನ್ನು ಎದ್ದುಕಾಣುವಂತೆ ಓದುಗರ ಮುಂದಿರಿಸ ಬಲ್ಲುವು. ಎತ್ತುಗೆಗಾಗಿ, ಇರು, ಮಾಡು, ಆಗು, ಹೇಳು, ತಿನ್ನು, ಕುದಿ, ಬೀಳು, ನಡೆ, ಬರು ಮೊದಲಾದುವು ತೀರಾ ಬಡವಾಗಿರುವ ಎಸಕ ಪದಗಳು. ಅವನ್ನು ಬಳಸಿರುವಲ್ಲಿ ಎಸಕಗಳು ಎದ್ದುಕಾಣಿಸಬೇಕಿದ್ದಲ್ಲಿ, ಅವಕ್ಕೆ ಯಾವುದಾದರೊಂದು ಪರಿಚೆ ಪದವನ್ನು ಸೇರಿಸಬೇಕಾಗುತ್ತದೆ (ಕತಕತನೆ ಕುದಿಯಿತು, ದೊಪ್ಪನೆ ಬಿತ್ತು, ತಟಕ್ಕನೆ ಹೇಳಿದಳು).
ಆದರೆ ಈ ರೀತಿ ಪರಿಚೆ ಪದಗಳನ್ನು ಸೇರಿಸಿ ಹೇಳುವುದಕ್ಕಿಂತಲೂ, ಅಂತಹ ಪರಿಚೆಗಳನ್ನು ಒಳಗೊಂಡಿರುವಂತಹ ಎಸಕ ಪದಗಳನ್ನು ಬಳಸುವುದು ಇನ್ನಶ್ಟು ಒಳ್ಳೆಯದು. ನುಗ್ಗು, ಮುತ್ತು, ಚಿವುಟು, ದುಮುಕು, ನುಸುಳು, ರೇಗು, ಜಾರು ಮೊದಲಾದುವು ಇಂತಹ ಪರಿಚೆಗಳನ್ನು ಒಳಗೊಂಡಿರುವ ಎಸಕ ಪದಗಳು. ಅವನ್ನು ಬಳಸಿರುವಲ್ಲಿ ಸೊಲ್ಲುಗಳು ಹೆಚ್ಚು ಅಡಕವಾಗಿಯೂ ಇರುತ್ತವೆ. ಎತ್ತುಗೆಗಾಗಿ, ಜನರು ಒಳಗೆ ಹೋದರು ಎಂಬ ಸೊಲ್ಲು ತಿಳಿಸುವ ಎಸಕವನ್ನೇ ಜನರು ಒಳಗೆ ನುಗ್ಗಿದರು ಎಂಬುದು ಹೆಚ್ಚು ಚನ್ನಾಗಿ, ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ. ಇಂತಹದೇ ವ್ಯತ್ಯಾಸವನ್ನು ಅವನು ಕೆಳಗೆ ಹಾರಿದ ಎನ್ನುವುದಕ್ಕೂ ಅವನು ಕೆಳಗೆ ದುಮುಕಿದ ಎನ್ನುವುದಕ್ಕೂ ನಡುವೆ ಕಾಣಬಹುದು. ಸನ್ನಿವೇಶಕ್ಕೆ ತಕ್ಕ ಹಾಗೆ ಇಂತಹ ಹೆಚ್ಚು ಹೆಚ್ಚು ಹುಲುಸಾಗಿರುವ ಪದಗಳನ್ನು ಆರಿಸಿಕೊಳ್ಳುವ ಜಾಣ್ಮೆ ಬರಹಗಾರರಿಗಿರಬೇಕು.
ಸನ್ನಿವೇಶಕ್ಕೆ ಪೂರ್ತಿ ತಕ್ಕುದಾದ ಪದವನ್ನು ಬಳಸುವುದಕ್ಕೂ, ಹೆಚ್ಚುಕಡಿಮೆ ಸರಿಹೊಂದುವ ಪದವನ್ನು ಬಳಸುವುದಕ್ಕೂ ನಡುವಿನ ವ್ಯತ್ಯಾಸವೆಂದರೆ, ಮಿಂಚಿಗೂ ಮಿಂಚುಹುಳಕ್ಕೂ ನಡುವಿನ ವ್ಯತ್ಯಾಸದ ಹಾಗೆ ಎಂಬುದಾಗಿ ಮಾರ್್ಕ
ಟ್ವಯ್್ನ ಹೇಳಿರುವುದನ್ನು ಇಲ್ಲಿ ನೆನಪಿಸಬಹುದು. ಈ ಅಳವನ್ನು ಪಡೆಯುವಲ್ಲಿ ಬರಹಗಾರರಿಗೆ ಹುರುಳರಿಮೆ ನೆರವು ನೀಡಬಲ್ಲುದು.
ತನ್ನೊಳಗೆ ಪರಿಚೆಯನ್ನು ಒಳಗೊಂಡಿರುವಂತಹ ಎಸಕ ಪದ ಸಿಗದಿದ್ದಲ್ಲಿ ಅಣಕು ಪದಗಳನ್ನು ಬಳಸಬೇಕಾಗುತ್ತದೆ. ಕನ್ನಡದಲ್ಲಿ ಇಂತಹ ಎರಡು ಬಗೆಯ ಅಣಕು ಪದಗಳು ಬಳಕೆಯಲ್ಲಿವೆ: ಚಿಲ್ಲನೆ, ತಟ್ಟನೆ, ದೊಪ್ಪನೆ, ದುಡು ಮ್ಮನೆ, ಗಬಕ್ಕನೆ ಮೊದಲಾದ ಒತ್ತುಬರಿಗೆ (ಒತ್ತಕ್ಶರ) ಇರುವ (ಇಲ್ಲವೇ ತಟಾರನೆ, ದಿಡೀರನೆ ಮೊದಲಾದ ಉದ್ದ ತೆರೆಯುಲಿ (ದೀರ್ಗಸ್ವರ) ಇರುವ) ಪದಗಳು ಮತ್ತು ಚಟಚಟನೆ, ದಡದಡನೆ, ಪಳಪಳನೆ, ಗಳಗಳನೆ ಮೊದಲಾದ ಒತ್ತುಬರಿಗೆಯಿಲ್ಲದ (ಇಲ್ಲವೇ ಉದ್ದ ತೆರೆಯುಲಿಯಿಲ್ಲದ) ಪದಗಳು.
ಈ ಎರಡು ಬಗೆಯ ಅಣಕು ಪದಗಳ ನಡುವೆ ಹುರುಳಿನಲ್ಲಿ ವ್ಯತ್ಯಾಸವಿದೆ. ಮೊದಲನೇ ಬಗೆಯ ಪದಗಳು ಒಮ್ಮೆಗೇನೇ ನಡೆದು ಹೋಗುವ ಎಸಕಗಳ ಪರಿಚೆಯನ್ನು ಸೂಚಿಸಲು ಬಳಕೆಯಾಗುತ್ತವೆ; ಇದನ್ನು ದೊಪ್ಪನೆ ಕೆಳಗೆ ಬಿತ್ತು, ಗಬಕ್ಕನೆ ಬಾಯಿ ಹಾಕಿತು, ಬುರ್ರನೆ ಹಾರಿಹೋಯಿತು ಮೊದಲಾದ ಎತ್ತುಗೆಗಳಲ್ಲಿ ಕಾಣಬಹುದು. ಇದಕ್ಕೆ ಬದಲು, ಎರಡನೇ ಬಗೆಯ ಪದಗಳು ತುಸು ಹೊತ್ತು ನಡೆಯುತ್ತಿರುವ ಎಸಕಗಳ ಪರಿಚೆಯನ್ನು ಸೂಚಿಸಲು ಬಳಕೆಯಾಗುತ್ತವೆ. ಎಲ್ಲರೂ ದಡದಡನೆ ಇಳಿದು ಬಂದರು, ಪಳಪಳನೆ ಹೊಳೆಯುತ್ತಿತ್ತು, ಗಬಗಬನೆ ತಿಂದುಮುಗಿಸಿದ ಮೊದಲಾದ ಎತ್ತುಗೆಗಳಲ್ಲಿ ಇದನ್ನು ಕಾಣಬಹುದು.
ಈ ವ್ಯತ್ಯಾಸವನ್ನು ಗಮನಿಸದಿದ್ದಲ್ಲಿ ಹೇಗೆ ತೊಂದರೆಯಾಗುತ್ತದೆ ಎಂಬುದಕ್ಕೆ ನಾ. ಡಿಸೋಜ ಅವರ ಒಂದು ಜಲಪಾತದ ಸುತ್ತ ಎಂಬ ಕಾದಂಬರಿಯ ಪುಟ (63)ರಲ್ಲಿ ಬಂದಿರುವ ದಡಕ್ಕೆಂದು ಗಾಡಿ ಕೊರಕಲಲ್ಲಿ ಬಿದ್ದು ಎದ್ದು ಕುಲುಕಾಡುತ್ತ ಸಾಗಿತ್ತು ಎಂಬ ಸೊಲ್ಲನ್ನು ಗಮನಿಸಬಹುದು. ಬಿದ್ದು ಎದ್ದು ಕುಲುಕಾಡುತ್ತ ಸಾಗು ಎಂಬುದು ತುಸು ಹೊತ್ತು ನಡೆಯುತ್ತಿರುವ ಎಸಕವನ್ನು ಸೂಚಿಸುತ್ತದೆ; ಅದರೊಂದಿಗೆ ಇಲ್ಲಿ ಒಮ್ಮೆಗೇನೇ ನಡೆದು ಹೋಗುವಂತಹ ಎಸಕದ ಪರಿಚೆಯನ್ನು ಸೂಚಿಸಬಲ್ಲ ದಡಕ್ಕನೆ ಎಂಬ ಅಣಕು ಪದವನ್ನು ಬಳಸಲಾಗಿದೆ. ಆದರೆ, ಇವೆರಡು ಸರಿಯಾಗಿ ಹೊಂದಿಕೊಳ್ಳುವುದಿಲ್ಲ. ಅದಕ್ಕಿಂತ ತುಸು ಹೊತ್ತು ನಡೆಯುವಂತಹ ಎಸಕದ ಪರಿಚೆಯನ್ನು ತಿಳಿಸುವ ದಡದಡನೆ ಎಂಬಂತಹ ಅಣಕು ಪದವನ್ನು ಬಳಸಿದಲ್ಲಿ ಅದು ಹೆಚ್ಚು ಚನ್ನಾಗಿ ಮೇಲಿನ ಸೊಲ್ಲಿನಲ್ಲಿ ಹೊಂದಿಕೊಳ್ಳಬಲ್ಲುದು.
ಬರಹದಲ್ಲಿ ಬರುವ ಕೆಲವು ಸೊಲ್ಲುಗಳು ಯಾಕೆ ಅಶ್ಟು ಚನ್ನಾಗಿ ಓದಿಸಿ ಕೊಂಡು ಹೋಗುತ್ತವೆ, ಮತ್ತು ಬೇರೆ ಕೆಲವು ಸೊಲ್ಲುಗಳು ಯಾಕೆ ಆ ರೀತಿ ಓದಿಸಿಕೊಂಡು ಹೋಗುವುದಿಲ್ಲ ಎಂಬುದನ್ನು ತಿಳಿಯಲು, ಮತ್ತು ಚನ್ನಾಗಿ ಓದಿಸಿಕೊಂಡು ಹೋಗದಿರುವ ಸೊಲ್ಲೊಂದು ತಮ್ಮ ಬರಹದಲ್ಲಿ ಬಂದಿದೆ ಯಾದರೆ, ಅದನ್ನು ಬದಲಾಯಿಸುವುದು ಹೇಗೆ ಎಂಬುದನ್ನು ತಿಳಿಯಲು ಸೊಲ್ಲರಿಮೆಯ ತಿಳಿವು ಈ ರೀತಿ ಬರಹಗಾರರ ನೆರವಿಗೆ ಬರಬಲ್ಲುದು.
5.3 ನಾಟಕದ ಮಾತು
ನಾಟಕಗಳಿಗೂ ಕತೆ, ಕವಿತೆ ಮೊದಲಾದ ಬೇರೆ ನಲ್ಬರಹಗಳಿಗೂ ನಡುವೆ ಒಂದು ಮುಕ್ಯವಾದ ವ್ಯತ್ಯಾಸವಿದೆ: ಕತೆ, ಕವಿತೆ ಮೊದಲಾದವುಗಳಲ್ಲಿ ವ್ಯಕ್ತಿ, ವಸ್ತು, ಜಾಗ, ಅನಿಸಿಕೆ ಮೊದಲಾದುವನ್ನು ನೇರವಾಗಿ ವಿವರಿಸಲು ಬರುತ್ತದೆ; ನಿಜಕ್ಕೂ ಅಂತಹ ವಿವರಣೆಗಳೇ ಅವುಗಳಲ್ಲಿ ಮುಕ್ಯ ಪಾತ್ರ ವಹಿಸುತ್ತವೆ. ಕೆಲವೊಮ್ಮೆ ಜನರ ನಡುವಿನ ಮಾತುಗಳನ್ನೂ ಅವುಗಳಲ್ಲಿ ಎತ್ತಿ ಕೊಡಲಾಗು ತ್ತದೆಯಾದರೂ, ಓದುಗರಿಗೆ ತಿಳಿಸಬೇಕೆಂದಿರುವ ಹೆಚ್ಚಿನ ಸಂಗತಿಗಳನ್ನೂ ವಿವರಣೆಗಳ ಮೂಲಕವೇನೇ ತಿಳಿಸಲಾಗುತ್ತದೆ. ಈ ವಿವರಣೆಗಳು ಬರಹ ಗಾರರಿಗೆ ಓದುಗರೊಂದಿಗೆ ನೇರವಾದ ಸಂಪರ್ಕವನ್ನು ಒದಗಿಸುತ್ತವೆ.
ಆದರೆ, ನಾಟಕಗಳಲ್ಲಿ ನೋಡುಗರಿಗೆ ಇಲ್ಲವೇ ಓದುಗರಿಗೆ ತಿಳಿಸಬೇಕಾದು ದೆಲ್ಲವನ್ನೂ ಪಾಂಗು(ಪಾತ್ರ)ಗಳ ಮಾತಿನ ಮೂಲಕವೇನೇ ತಿಳಿಸಬೇಕಾಗುತ್ತದೆ. ಹಾಗಾಗಿ, ನಾಟಕಗಳ ನೋಡುಗ ಇಲ್ಲವೆ ಓದುಗರಿಗೂ ಬರಹಗಾರರಿಗೂ ನಡುವೆ ನೇರವಾಗಿ ಯಾವ ರೀತಿಯ ಸಂಪರ್ಕವೂ ಸಿಗುವುದಿಲ್ಲ. ಇದು ನಾಟಕ ವನ್ನು ಬರೆಯುವವರ ಮೇಲೆ ಒಂದು ಬಲವಾದ ಕಟ್ಟುಪಾಡನ್ನು ಹೊರಿಸುತ್ತದೆ. ನಾಟಕವನ್ನು ನೋಡುವವರಿಗೆ ಪಾಂಗುಗಳ ಉಡುಗೆತೊಡುಗೆಗಳು ಮತ್ತು ಅಟ್ಟಲಿನ (ರಂಗಸ್ತಳದ) ನೋಟಗಳು ಸ್ವಲ್ಪಮಟ್ಟಿಗೆ ಈ ತೊಡಕನ್ನು ಕಡಿಮೆಮಾಡಬಲ್ಲುವು; ಆದರೆ, ಓದುಗರಿಗೆ ಇವು ಯಾವುವೂ ಸಿಗುವುದಿಲ್ಲ. ಅವರು ಎಲ್ಲವನ್ನೂ ಪಾಂಗುಗಳ ಮಾತಿನಿಂದಲೇ ಪಡೆಯಬೇಕಾಗುತ್ತದೆ. ನಾಟಕದ ಬರಹಗಾರರು ನಟರಿಗಾಗಿ ಮತ್ತು ನಾಟಕವನ್ನು ನೆಗಳ್ಚುವವರಿಗಾಗಿ ಕೊಡುವ ಸುಳಿವುಗಳು ಮಾತ್ರ ಓದುಗರಿಗೆ ಕೆಲವು ಹೆಚ್ಚಿನ ವಿಶಯಗಳನ್ನು ತಿಳಿಸಬಲ್ಲುವು.
ಪಾಂಗುಗಳ ಮಾತಿನ ಮೂಲಕ ನಾಟಕದ ನೋಡುಗರಿಗೆ ಇಲ್ಲವೇ ಓದುಗರಿಗೆ ಮೇಲೆ ವಿವರಿಸಿದಂತಹ ವಿಶಯಗಳನ್ನು ತಿಳಿಸಲು ಹಲವು ಬಗೆಯ
ಸಂಚುಗಳನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಆತ್ಮಗತ ಇಲ್ಲವೇ ಸ್ವಗತ ಎಂದು ಕೊಟ್ಟಿರುವ ಮಾತುಗಳನ್ನು ನಾಟಕದ ನೋಡುಗರು ಮಾತ್ರವೇ ಗಮನಿಸುತ್ತಿರುವಂತೆ ಮಾಡಲಾಗುತ್ತದೆ. ಅವನ್ನು ಪಕ್ಕದಲ್ಲಿರುವ ಪಾಂಗುಗಳು ಗಮನಿಸುವ ಹಾಗಿಲ್ಲ. ನಾಟಕಗಳಲ್ಲಿ ಬರುವ ಸೂತ್ರದಾರರ ಮೂಲಕವೂ ಬರಹಗಾರರು ನೋಡುಗರೊಂದಿಗೆ ನೇರವಾದ ಸಂಪರ್ಕವನ್ನು ಪಡೆಯಲು ಹೋಗುತ್ತಾರೆ. ಆದರೆ ಇವೆಲ್ಲ ನಾಟಕದ ಮೂಲ ಉದ್ದೇಶವನ್ನು ಕೆಡಿಸಿ ಬಿಡುತ್ತವೆ. ಹಾಗಾಗಿ, ನೋಡುಗರಿಗೆ ತಿಳಿಸಬೇಕೆಂದಿರುವುದನ್ನೆಲ್ಲ ಬರಹಗಾರರು ಪಾಂಗುಗಳ ನಡುವೆ ನಡೆಯುವ ಮಾತುಗಳ ಮೂಲಕ ನೇರವಲ್ಲದ ರೀತಿಯಲ್ಲಿ ತಿಳಿಸುವುದೇ ಸರಿಯಾದ ದಾರಿ.
ಕತೆ-ಕಾದಂಬರಿಗಳ ಮತ್ತು ಸಿನಿಮಾಗಳ ಬರಹಗಾರರು ಹಿನ್ನೋಟಗಳನ್ನು ತುಂಬಾ ಜಾಣ್ಮೆಯಿಂದ ಬಳಸಿಕೊಳ್ಳಬಲ್ಲರು. ನಾಟಕಗಳ ಬರಹಗಾರರಿಗೆ ಇವೂ ದೊರಕುವುದಿಲ್ಲ. ಜಾಗ ಮತ್ತು ಸಮಯಗಳೆರಡರ ವಿಶಯದಲ್ಲೂ ಅವರ ಮೇಲೆ ಹೆಚ್ಚು ಅಡೆತಡೆಗಳಿವೆ.
ಒಂದು ರೀತಿಯಲ್ಲಿ ಈ ಅಡೆತಡೆಗಳು ನಾಟಕದ ಬರಹಗಾರರಿಗೆ ನೆರವನ್ನೂ ಒದಗಿಸುತ್ತವೆ. ಯಾಕೆಂದರೆ, ನೋಡುಗರೆದುರು ನಿಲ್ಲಿಸಬಲ್ಲ ಕೆಲವೇ ಕೆಲವು ನೋಟಗಳಿಗೆ ಅವರ ಬರಹ ಸೀಮಿತವಾಗಿರಬೇಕಾಗಿದೆಯಾದ ಕಾರಣ, ಅದರಲ್ಲಿ ಬಿಗಿತವನ್ನು ಉಳಿಸಿಕೊಳ್ಳಲು ಹೆಚ್ಚು ಸುಳುವಾಗುತ್ತದೆ.
5.3.1 ಸೂಳುನುಡಿ ಮತ್ತು ನಡುನುಡಿ
ಜನರ ಮಾತಿಗೂ ನಾಟಕದ ಮಾತಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ವಿವರಿಸುವುದಕ್ಕಾಗಿ, ಜನರ ನಡುವಿನ ಮಾತನ್ನು ಸೂಳುನುಡಿ (ಸಂಬಾಶಣೆ) ಎಂಬುದಾಗಿ, ಮತ್ತು ಅದಕ್ಕಿಂತ ಬೇರಾಗಿರುವ ನಾಟಕದ ಪಾಂಗು (ಪಾತ್ರ)ಗಳ ನಡುವಿನ ಮಾತನ್ನು ನಡುನುಡಿ ಎಂಬುದಾಗಿ ಇಲ್ಲಿ ಹೆಸರಿಸ
(1) ನಿಜವಾದ ಮಾತುಗಳಲ್ಲ: ನಡುನುಡಿಯಲ್ಲಿ ಬರುವ ಮಾತುಗಳು ನಿಜವಾದ ಮಾತುಗಳಲ್ಲ; ನಾಟಕವನ್ನು ನೋಡುವವರಿಗೆ ಅವು ನಿಜವಾದು ವೆಂದು ಅನಿಸುವುದಾದರೂ, ಬೇರೆ ಕಡೆಗಳಲ್ಲಿ ಅವನ್ನು ಬಳಸಿದೆವಾದರೆ ಅವು ತೀರಾ ವಿಚಿತ್ರವಾಗಿ ಕೇಳಿಸಬಲ್ಲುವು. ಇದೇ ರೀತಿಯಲ್ಲಿ, ಜನರ ನಡುವೆ ನಡೆಯುವ ಸೂಳುನುಡಿಯನ್ನು ಹಾಗೆಯೇ ಯಾರಾದರೂ ಬರೆದಿರಿಸಿದಲ್ಲಿ,
ಅದನ್ನು ಓದಿನೋಡಿ, ಅದರಲ್ಲಿ ಏನು ಹೇಳಲಾಗಿದೆಯೆಂಬುದನ್ನು ತಿಳಿದುಕೊಳ್ಳುವುದೂ ತುಂಬಾ ತೊಡಕಿನ ಕೆಲಸವೆಂದು ಅನಿಸದಿರದು.
ನಡುನುಡಿಯ ಮಾತುಗಳನ್ನು ಕೇಳಿದಾಗ, ಅವನ್ನಾಡುವ ನಟರು ನಟರಲ್ಲ, ನಟರು ನಿಂತಿರುವ ಅಟ್ಟಲು (ರಂಗಸ್ತಳ) ಅಟ್ಟಲಲ್ಲ, ಅಟ್ಟಲ ಮೇಲೆ ನಿಂತು ಕೊಂಡು ಅವರು ನುಡಿಯುವ ಮಾತುಗಳು ಬರಹಗಾರರು ಬರೆದ ಮಾತು ಗಳಲ್ಲ, ನೇರವಾಗಿ ಪಾಂಗುಗಳೇ ಆಡುತ್ತಿರುವ ಮಾತುಗಳು ಎಂಬ ಅನಿಸಿಕೆ ನೋಡುಗರಲ್ಲಿ ಉಂಟಾಗುವ ಹಾಗೆ ಈ ಮಾತುಗಳನ್ನು ಬರೆಯಲಾಗುತ್ತದೆ. ನೋಡುಗರೂ ಇಂತಹದೊಂದು ನಂಬುಗೆಯನ್ನು ತಮ್ಮಲ್ಲಿ ಬೆಳೆಸಿಕೊಳ್ಳಲು ತಯಾರಾಗಿಯೇ ನಾಟಕಕ್ಕೆ ಬಂದಿರುವುದು ಬರಹಗಾರರಿಗೆ ಅವರಲ್ಲಿ ಈ ಅನಿಸಿಕೆಯನ್ನು ಮೂಡಿಸಲು ನೆರವನ್ನೀಯುತ್ತದೆ. ಆದರೆ, ಇವೆಲ್ಲ ಬರೀ ನಟನೆ, ನಿಜವಾಗಿಯೂ ನಡೆಯುತ್ತಿರುವ ಸಂಗತಿಗಳಲ್ಲ ಎಂಬ ತಿಳಿವನ್ನು ನೋಡುಗರು ಪೂರ್ತಿ ಬಿಟ್ಟುಕೊಟ್ಟಿರುವುದಿಲ್ಲ. ಹಾಗಾಗಿ, ಅವರಿಗೆ ನಾಟಕವೊಂದು ಅಳುವಿನಲ್ಲಿ ಕೊನೆಗೊಳ್ಳುತ್ತದೆಯಾದರೂ ಅದನ್ನು ನೋಡಿ ಆನಂದಿಸಲು ಬರುತ್ತದೆ.
(2) ನುಡಿಯ ಹತೋಟಿ ಒಬ್ಬನ ಕಯ್ಯಲ್ಲಿದೆ: ಸೂಳುನುಡಿಯ ಮಾತುಗಳೆಲ್ಲ ಅವನ್ನು ಆಡುವ ಜನರ ಹಿಡಿತದಲ್ಲಿರುತ್ತವೆಯಾದರೆ, ನಡುನುಡಿಯ ಮಾತುಗಳೆಲ್ಲ ಒಬ್ಬನೇ ಒಬ್ಬ ಬರಹಗಾರನ ಹಿಡಿತದಲ್ಲಿರುತ್ತವೆ. ಇದೇ ರೀತಿಯಲ್ಲಿ, ಸೂಳುನುಡಿಯ ಮಾತುಗಳು ಹಲವಾರು ಜನರ ಮನಸ್ಸುಗಳಲ್ಲಿ ಮೂಡಿ ಬರುವಂತಹವಾದರೆ, ನಾಟಕದಲ್ಲಿ ಬರುವ ಎಲ್ಲಾ ಮಾತುಗಳೂ ಒಬ್ಬನೇ ಒಬ್ಬ ಬರಹಗಾರನ ಮನಸ್ಸಿನಲ್ಲಿ ಮೂಡಿಬರು ವಂತಹವು. ಇದರಿಂದಾಗಿಯೂ, ಸೂಳುನುಡಿ ಮತ್ತು ನಡುನುಡಿಗಳ ನಡುವೆ ಹಲವು ಬಗೆಯ ವ್ಯತ್ಯಾಸಗಳು ಮೂಡಿಬರುತ್ತವೆ.
ನಡುನುಡಿಯ ಮಾತುಗಳನ್ನು ಬರಹಗಾರರು ಮೊದಲಿಗೇನೇ ಬರೆದು ಇರಿಸಿರುತ್ತಾರೆ, ಮತ್ತು ಹಲವು ಬಾರಿ ತಿದ್ದಿ ಸರಿಪಡಿಸಿರುತ್ತಾರೆ. ಹಾಗಾಗಿ, ಸೂಳುನುಡಿಯಲ್ಲಿ ಕಾಣಿಸುವಂತಹ ತಪ್ಪುತೊಡಗುವಿಕೆಗಳು, ದಾರಿತಪ್ಪು ವಿಕೆಗಳು, ಇರ್ನುಡಿಹ(ಪುನರುಕ್ತಿ)ಗಳು ಮೊದಲಾದುವು ಯಾವುವೂ ಅದರಲ್ಲಿ ಇರುವುದಿಲ್ಲ. ಹಾಗೇನಾದರೂ ಅಂತಹವು ಇದ್ದರೂ ಅವನ್ನು ಬಳಸಿರುವುದಕ್ಕೆ ಯಾವುದಾದರೊಂದು ಕಾರಣವಿರುತ್ತದೆ. ಅದರಲ್ಲಿ ಬರುವ ಒಂದೊಂದು ಮಾತಿಗೂ ಬೆಲೆಯಿರುತ್ತದೆ. ಒಳ್ಳೆಯ ನಾಟಕಗಳಲ್ಲಿ ಬೇಡದಿರುವ ಮಾತು ಒಂದೂ ಇರುವುದಿಲ್ಲ.
ನಾಟಕದ ಮಾತುಗಳನ್ನು ಬರೆದ ಮೇಲೆ, ಅವನ್ನು ಹಲವು ಬಾರಿ ಓದಿ ನೋಡಲು, ಮತ್ತು ತಿದ್ದಿ ಸರಿಪಡಿಸಲು ಬರುತ್ತದೆ. ಬರಹಗಾರರು ಈ ವಿಶಯ ದಲ್ಲಿ ಬೇರೆ ಜನರ, ಅದರಲ್ಲೂ ನಾಟಕವನ್ನು ನಡೆಸಲಿರುವವರ, ನೆರವನ್ನೂ ಪಡೆಯಬಲ್ಲರು. ಹಾಗಾಗಿ, ಅದರಲ್ಲಿ ಬರುವ ಸೊಲ್ಲುಗಳ ಇಟ್ಟಳ ತುಂಬಾ ಚನ್ನಾಗಿರುವಂತೆ, ಮತ್ತು ಸೊಲ್ಲುಗಳೆಲ್ಲ ಒಂದಕ್ಕೊಂದು ಸರಿಯಾಗಿ ಹೊಂದಿಕೊಂಡಿರುವಂತೆ ಅವರು ನೋಡಿಕೊಳ್ಳಬಲ್ಲರು.
ಯಾರು ಯಾವಾಗ ಮಾತನಾಡಬೇಕು, ಎಶ್ಟು ಮಾತನಾಡಬೇಕು, ಏನು ಮಾತನಾಡಬೇಕು ಎಂಬುದನ್ನೆಲ್ಲ ನಡುನುಡಿಯಲ್ಲಿ ಬರಹಗಾರರೇ ತೀರ್ಮಾನಿಸು ತ್ತಾರೆ. ಹಾಗಾಗಿ, ಅವೆಲ್ಲವೂ ತುಂಬಾ ಚೊಕ್ಕಟವಾಗಿ ನಡೆಯುತ್ತವೆ. ಸೂಳು ನುಡಿಯಲ್ಲಿ ಕಾಣಿಸುವಂತಹ ಗೊಂದಲಗಳು (ಒಟ್ಟಿಗೆ ಮಾತನಾಡುವುದು, ನಡುವೆ ಮಾತು ಸೇರಿಸುವುದು ಮೊದಲಾದುವು) ನಡುನುಡಿಯಲ್ಲಿ ಕಾಣಿಸುವು
(3) ಮಾತುಗಳಿಗೆ ಬಾಳಿಕೆಯಿದೆ: ಸೂಳುನುಡಿಯ ಮಾತುಗಳು ಆಡುತ್ತಿರುವ ಹಾಗೆಯೇ ಕಾಣೆಯಾಗುತ್ತಿರುತ್ತವೆ. ಹಾಗಾಗಿ, ಹಿಂದೆ ಹೇಳಿದು ದನ್ನು ನೆನಪಿನಲ್ಲಿರಿಸಿಕೊಂಡಲ್ಲಿ ಮಾತ್ರ, ಅದನ್ನು ಮುಂದೆ ಹೇಳುವುದ ರೊಂದಿಗೆ ಹೋಲಿಸಿನೋಡಬಲ್ಲೆವು. ಆದರೆ, ನಡುನುಡಿಯ ಮಾತುಗಳು ಬರಹರೂಪದಲ್ಲಿದ್ದು, ಅವಕ್ಕೆ ಬಾಳಿಕೆಯಿರುತ್ತದೆ. ಓದುಗರು ಅವನ್ನು ತಿರುತಿರುಗಿ ಓದಿನೋಡಬಲ್ಲರು, ಮತ್ತು ಬರಹಗಾರರು ಹಿಂದೆ ಬರೆದುದನ್ನು ಈಗ ಬರೆಯುತ್ತಿರುವುದರೊಂದಿಗೆ ಹೋಲಿಸಿನೋಡಬಲ್ಲರು. ನಾಟಕವನ್ನು ನಡೆಸುತ್ತಿರುವ ಸಮಯದಲ್ಲಿಯೂ ಕೂಡ, ನೋಡುಗರ ಮಟ್ಟಿಗೆ ಅವು ಸೂಳುನುಡಿಯ ಮಾತಿನ ಹಾಗೆ ಆಡಿದೊಡನೆ ಕಾಣೆಯಾಗುವಂತಹವಾದರೂ, ಅವನ್ನಾಡುವ ನಟರ ಬಳಿ ಅವು ಅಳಿಯದ ರೂಪದಲ್ಲಿರುತ್ತವೆ.
(4) ನೋಡುಗರ ಇರವು ಹೆಚ್ಚಿನದು: ಸೂಳುನುಡಿಗೂ ನಡುನುಡಿಗೂ ನಡುವಿರುವ ಇನ್ನೊಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ಸೂಳುನುಡಿ ಯೊಂದು ನಡೆಯುತ್ತಿರುವಾಗ, ಅದರಲ್ಲಿ ಪಾಲ್ಗೊಳ್ಳುವ ಆಡುಗರು ಮತ್ತು ಕೇಳುಗರು ಮಾತ್ರ ಇರುತ್ತಾರೆ. ಅದರಲ್ಲಿ ಬರುವ ಮಾತುಗಳನ್ನೆಲ್ಲ ನೇರವಾಗಿ ಆಡುಗರು ತಮ್ಮ ಕೇಳುಗರಿಗಾಗಿ ಆಡುತ್ತಿರುತ್ತಾರೆ. ಆದರೆ ನಡುನುಡಿಯೊಂದು ನಡೆಯುತ್ತಿರುವಾಗ, ಅದರಲ್ಲಿ ಪಾಲ್ಗೊಳ್ಳುವ ಪಾಂಗುಗಳು (ಆಡುಗರು ಮತ್ತು ಕೇಳುಗರು) ಮಾತ್ರವಲ್ಲದೆ ನೋಡುಗರೂ ಇರುತ್ತಾರೆ. ನಿಜಕ್ಕೂ ನಡುನುಡಿ ಯಲ್ಲಿ ಬರುವ ಎಲ್ಲಾ ಮಾತುಗಳನ್ನೂ ಅದರ ನೋಡುಗರಿಗಾಗಿ ಆಡಲಾಗು
ತ್ತದೆ. ಅವುಗಳಲ್ಲಿ ಕೆಲವು ಮಾತುಗಳನ್ನಂತೂ ನೋಡುಗರಿಗಾಗಿ ಮಾತ್ರವೇ ಆಡಲಾಗುತ್ತದೆ.
ಈ ಕಾರಣಕ್ಕಾಗಿ, ನಡುನುಡಿಯಲ್ಲಿ ಬರುವ ಮಾತುಗಳು ಎರಡು ಮುಕ್ಯ ಕೆಲಸಗಳನ್ನು ನಡೆಸಬೇಕಾಗುತ್ತದೆ: ನಾಟಕದ ಕಲ್ಪಿತ ಜಗತ್ತಿನಲ್ಲಿ ಕತೆ ಮುಂದುವರಿಯುವಂತೆ ಮಾಡುವುದು ಒಂದು ಕೆಲಸ, ಮತ್ತು ನಾಟಕವನ್ನು ನೋಡುತ್ತಿರುವವರಿಗೆ ಈ ಕಲ್ಪಿತ ಜಗತ್ತಿನ ಕುರಿತು ಮತ್ತು ಅದರ ಪಾಂಗುಗಳ ಕುರಿತು ಮಾಹಿತಿಗಳನ್ನು ಒದಗಿಸುತ್ತಿರುವುದು ಇನ್ನೊಂದು ಕೆಲಸ. ಈ ಎರಡು ಬಗೆಯ ಕೆಲಸಗಳನ್ನು ನಡೆಸುವುದಕ್ಕಾಗಿ, ನಾಟಕದ ಮಾತುಗಳಿಗೆ ಎರಡು ಮಟ್ಟಗಳಲ್ಲಿ ಹುರುಳುಗಳಿರಬೇಕಾಗುತ್ತದೆ.
ಸಾಮಾನ್ಯವಾಗಿ, ನಾಟಕದ ಪಾಂಗುಗಳಿಗೆ ತಿಳಿದಿರುವ ವಿಶಯಗಳಿಗಿಂತ ನೋಡುಗರಿಗೆ ಹೆಚ್ಚು ವಿಶಯ ತಿಳಿದಿರುತ್ತದೆ. ಎತ್ತುಗೆಗಾಗಿ, ಸಂಸ ಅವರ ವಿಗಡ ವಿಕ್ರಮರಾಯ ನಾಟಕದಲ್ಲಿ ನಿರೀಶನು ಮಹಿಶೂರಪುರದ ಪಟ್ಟಣಿಗ ರೊಂದಿಗೆ ರಣದೀರನ ಕುರಿತಾಗಿ ಹೇಳುವ ಮಾತುಗಳು ಅವರನ್ನು ರೊಚ್ಚಿಗೆಬ್ಬಿಸುತ್ತದೆ; ಆದರೆ, ನೋಡುಗರಿಗೆ ಅದು ತಮಾಶೆಯಾಗಿ ಕಾಣಿಸುತ್ತದೆ. ಯಾಕೆಂದರೆ, ನಿಜಕ್ಕೂ ಆತನು ಬೇಕೆಂದೇ ಜನರನ್ನು ಬಡಿದೆಬ್ಬಿಸಲು ಆ ಮಾತುಗಳನ್ನು ಹೇಳುತ್ತಿದ್ದಾನಲ್ಲದೆ, ರಣದೀರನ ಕುರಿತಾಗಿ ಅಂತಹ ಅನಿಸಿಕೆ ಗಳಾವುವೂ ಆತನ ಮನಸ್ಸಿನಲ್ಲಿಲ್ಲ ಎಂಬುದನ್ನು ನಾಟಕದ ನೋಡುಗರು ಮೊದಲೇ ತಿಳಿದುಕೊಂಡಿರುತ್ತಾರೆ.
ನಾಟಕದ ಪಾಂಗುಗಳು ತಮ್ಮಶ್ಟಕ್ಕೇ ನುಡಿಯುವ (ಸ್ವಗತ) ಮಾತುಗ ಳಿಂದಲೂ ನೋಡುಗರಿಗೆ ಅವರ ಅನಿಸಿಕೆ, ಉದ್ದೇಶ, ನಿಲುವು ಮೊದಲಾದುವು ಗೊತ್ತಾಗುತ್ತವೆ. ಅವರೆದುರು ನೋಡುಗರಿದ್ದಾರೆಂಬುದೇ ಇಂತಹ ಮಾತು ಗಳನ್ನು ನಾಟಕದಲ್ಲಿ ಸೇರಿಸಿರುವುದಕ್ಕೆ ಮೂಲ ಕಾರಣ. ಸೂಳುನುಡಿಗಳಲ್ಲಿ ಇಂತಹ ಒರ್ಸೂಳುಗಳು ಬರುವುದಿಲ್ಲ.
(5) ನಾಟಕವೂ ಒಂದು ನಲ್ಬರಹ: ನಾಟಕವೊಂದು ನಲ್ಬರಹ (ಸಾಹಿತ್ಯ ಬರಹ) ಎಂಬುದೂ ಅದನ್ನು ಸಾಮಾನ್ಯ ಮಾತಿನಿಂದ ಬೇರಾಗಿರುವಂತೆ ಮಾಡುತ್ತದೆ. ನಲ್ಬರಹಗಳಲ್ಲಿ ಕಂಡುಬರುವ ಪರಿಚೆಗಳೆಲ್ಲವೂ ನಾಟಕದ ನಡುನುಡಿಗಳಲ್ಲೂ ಬರುತ್ತವೆ. ಎತ್ತುಗೆಗಾಗಿ, ಅದರಲ್ಲಿ ಬರುವ ಪಾಂಗುಗಳೆಲ್ಲ ಕಲ್ಪಿತವಾದುವು, ಮತ್ತು ಈ ಪಾಂಗುಗಳ ಮಾತುಕತೆ, ಅನಿಸಿಕೆ, ನಡವಳಿಕೆ ಮೊದಲಾದವೂ ಕಲ್ಪಿತವಾದುವು.
ನಲ್ಬರಹಗಳಲ್ಲಿ ಸೊಲ್ಲುಗಳನ್ನು ಓದುಗರು ಗಮನಿಸುವ ಹಾಗೆ ಬರೆಯ ಲಾಗುತ್ತದೆ ಮತ್ತು ಇದಕ್ಕಾಗಿ ಅವನ್ನು ಯಾವಾಗಿನ ಬಳಕೆಯಲ್ಲಿರುವ ಹಾಗೆ ಬಳಸದೆ, ಬೇರೆ ಬಗೆಗಳಲ್ಲಿ ಬಳಸಲಾಗುತ್ತದೆ. ಒಳಹುರುಳು, ಕಟಕಿ(ವ್ಯಂಗ್ಯ) ನುಡಿ, ಇಪ್ಪುರುಳು, ಮಾರ್ಪುರುಳು ಮೊದಲಾದವು ಅವುಗಳಲ್ಲಿ ಹೆಚ್ಚು ಬಳಕೆಯಾಗುತ್ತವೆ. ನಾಟಕಗಳಲ್ಲಿಯೂ ಹೀಗೆಯೇ. ಮೇಲೆ ಸೂಚಿಸಿದ ಹಾಗೆ, ಅವುಗಳಲ್ಲಿ ಬರುವ ಮಾತುಗಳನ್ನು ಬೇರೆ ಕಡೆಗಳಲ್ಲಿ ಬಳಸಿದೆವಾದರೆ ಅದು ತೀರಾ ಅಸಹಜವೆಂದಿನಿಸದಿರದು.
5.3.2 ನಡುನುಡಿಯಲ್ಲಿ ಸೂಳುನುಡಿಯ ಕಟ್ಟಲೆಗಳ ಬಳಕೆ
ಪಾಂಗುಗಳ ನಡುವೆ ಬಳಕೆಯಾಗುವ ನಡುನುಡಿಗೂ ಜನರ ನಡುವೆ ಬಳಕೆ ಯಾಗುವ ಸೂಳುನುಡಿಗೂ ನಡುವೆ ಮೇಲೆ ವಿವರಿಸಿದಂತಹ ಹಲವಾರು ವ್ಯತ್ಯಾಸಗಳಿವೆಯಾದರೂ, ನಲ್ಬರಹಗಳಲ್ಲೆಲ್ಲ ಸೂಳುನುಡಿಗೆ ತುಂಬಾ ಹತ್ತಿರದವಾಗಿರುವವುಗಳು ನಾಟಕಗಳೇ. ಯಾಕೆಂದರೆ, ದೂರುವುದು, ಬಯ್ಯುವುದು, ಹೊಗಳುವುದು, ಒಪ್ಪುವುದು, ಅಲ್ಲಗಳೆಯುವುದು, ಸುಳ್ಳು ಹೇಳುವುದು ಮೊದಲಾದ ಸೂಳುನುಡಿಯಲ್ಲಿ ಕಾಣಿಸಿಕೊಳ್ಳುವ ಹಲವಾರು ಬಗೆಯ ಮಾತಿನ ಕೆಲಸಗಳು ಬೇರೆ ಬಗೆಯ ನಲ್ಬರಹಗಳಿಗಿಂತ ನಾಟಕಗಳಲ್ಲಿ ಹೆಚ್ಚು ಬಳಕೆಯಾಗುತ್ತಿರುತ್ತವೆ. ಈ ಕಾರಣಕ್ಕಾಗಿ, ಸೂಳುನುಡಿಗಳ ಒಳಗುಟ್ಟನ್ನರಿಯಲು ಸೊಲ್ಲರಿಗರು ಬಳಸುವ ಹಲವು ಹೊಲಬು(ವಿದಾನ) ಗಳನ್ನು ನಾಟಕದ ಒಳಗುಟ್ಟನ್ನರಿಯುವಲ್ಲೂ ಬಳಸಲು ಬರುತ್ತದೆ.
ಎತ್ತುಗೆಗಾಗಿ, ಜನರು ಮಾತನಾಡುವಾಗ ಸಾಮಾನ್ಯವಾಗಿ ಕೆಲವು ಕಟ್ಟಲೆ ಗಳನ್ನು ಮುರಿಯದಿರುತ್ತಾರೆ, ಮತ್ತು ತಮ್ಮ ಕೇಳುಗರೂ ಅವನ್ನು ಮುರಿಯದಿರಬಹುದೆಂದು ಎದುರುನೋಡುತ್ತಿರುತ್ತಾರೆ. ಪಾಲ್ ಗ್ರಯ್್ಸ ಎಂಬ ಅರಿಮೆಯರಿಗರು ಇಂತಹ ನಾಲ್ಕು ಮುಕ್ಯ ಕಟ್ಟಲೆಗಳನ್ನು ಹೆಸರಿಸಿದ್ದಾರೆ: ನಿಜವನ್ನೇ ಹೇಳುವುದು; ಬೇಕಾದಶ್ಟೇ ಹೇಳುವುದು; ತಕ್ಕುದಾದುದನ್ನೇ ಹೇಳುವುದು; ಮತ್ತು ತಿಳಿಯುವಂತೆ ಹೇಳುವುದು. ಈ ಕಟ್ಟಲೆಗಳನ್ನು ಸೂಳುನುಡಿಗಳಲ್ಲಿ ಮುರಿಯಬಾರದೆಂದೇನಿಲ್ಲ; ಜನರು ಆಗಾಗ ಇವನ್ನು ಮುರಿಯುತ್ತಿರುತ್ತಾರೆ; ಆದರೆ ಹಾಗೆ ಮುರಿದಾಗ, ಹಲವಾರು ತೊಡಕುಗಳು ಕಾಣಿಸಿಕೊಳ್ಳುತ್ತವೆ.
ಈ ಕಟ್ಟಲೆಗಳು ಎಂತಹವು ಎಂಬುದನ್ನು ತಿಳಿಯಲು ಕೆಲವು ಎತ್ತುಗೆಗಳನ್ನು ಗಮನಿಸಬಹುದು: ಗಣಪತಿ ದೇವಾಲಯಕ್ಕೆ ಇಲ್ಲಿಂದ ಎಶ್ಟು ದೂರ?
ಎಂದು ಯಾರಾದರೂ ಕೇಳಿದರೆ, ನೀವು ನಿಮಗೆ ಗೊತ್ತಿದ್ದಂತೆ ಸರಿಯಾದ ದೂರವನ್ನೇ ತಿಳಿಸುತ್ತೀರಿ, ಮತ್ತು ಆ ಮೂಲಕ ಮೊದಲನೆಯ ಕಟ್ಟಲೆಯನ್ನು ಮುರಿಯದಿರುತ್ತೀರಿ. ಇದಲ್ಲದೆ, ಕೇಳಿದ ಕೇಳ್ವಿಗೆ ಹೊಂದಿಕೆಯಾಗುವಂತಹ ವಿಶಯಗಳನ್ನು ಮಾತ್ರವೇ ಸಾಮಾನ್ಯವಾಗಿ ತಿಳಿಸುತ್ತೀರಲ್ಲದೆ, ಬೇರೆ ಹೊಂದಿಕೆ ಯಾಗದ ವಿಶಯಗಳನ್ನು ತಿಳಿಸಲು ಹೋಗುವುದಿಲ್ಲ. ಆದರೆ, ಬೇಕೆಂದೇ ಈ ಕಟ್ಟಲೆಗಳನ್ನು ಮುರಿಯುವವರೂ ಕೆಲವರಿರುತ್ತಾರೆ.
ಕೆಲವರು ಒಂದು ಕೇಳ್ವಿಗೆ ಉತ್ತರ ಕೊಡಲು ಮನಸ್ಸಿಲ್ಲದಿರುವಾಗ, ಬೇರೇನ ನ್ನಾದರೂ ಹೇಳುತ್ತಾರೆ; ಹೀಗೆ ಮಾಡುವ ಮೂಲಕ, ಅವರು ಮೂರನೇ ಕಟ್ಟಲೆಯನ್ನು ಮುರಿಯುತ್ತಾರೆ. ಇನ್ನು ಕೆಲವರು ಹೇಳುವುದನ್ನು ತಿಳಿಯಾಗಿ, ಇಪ್ಪುರುಳುಗಳು ತಲೆಹಾಕದ ಹಾಗೆ ಹೇಳುವ ಬದಲು, ಬೇಕೆಂದೇ ಕೇಳುಗರಿಗೆ ಗೊಂದಲವುಂಟಾಗುವ ಹಾಗೆ ಮಾತನಾಡುತ್ತಾರೆ; ಇವರು ನಾಲ್ಕನೆಯ ಕಟ್ಟಲೆ ಯನ್ನು ಮುರಿಯುತ್ತಾರೆ.
ಸಾಮಾನ್ಯವಾಗಿ, ಕೇಳುಗರು ನಮ್ಮನ್ನು ತಪ್ಪಾಗಿ ತಿಳಿಯಬಾರದೆಂಬ ಬಯಕೆ ನಮ್ಮಲ್ಲಿರುತ್ತದೆ. ಹಾಗಾಗಿ, ಮಾತನಾಡುವಾಗ ನಾವು ಮೇಲಿನ ಕಟ್ಟಲೆಗಳನ್ನು ಮುರಿಯಲು ಹೋಗುವುದಿಲ್ಲ. ಆದರೆ, ಹಲವು ಕಡೆಗಳಲ್ಲಿ ಇವನ್ನು ಬೇರೆ ಕಾರಣಕ್ಕಾಗಿ ಮುರಿಯಬೇಕಾಗುತ್ತದೆ: ಕೆಲವೊಮ್ಮೆ ಕೇಳುಗರಿಗೆ ಬೇಸರವಾಗುವ ಹಾಗಿದ್ದಲ್ಲಿ ಸುಳ್ಳು ಹೇಳಬೇಕಾಗುತ್ತದೆ; ಮನಸ್ಸಿನ ದುಗುಡವನ್ನು ಅಡಗಿಸಲು ಏನೇನೋ ಹರಟಬೇಕಾಗುತ್ತದೆ; ಮತ್ತು ಕೆಲವೊಮ್ಮೆ ಹೇಳಬೇಕೆಂದಿರುವುದನ್ನು ಓರೆಯಾಗಿ ಇಲ್ಲವೇ ಇಪ್ಪುರುಳುಗಳು ಕಾಣಿಸಿಕೊಳ್ಳುವಂತೆ ಹೇಳಬೇಕಾಗುತ್ತದೆ. ನಾಟಕಗಳ ನಡುನುಡಿಯನ್ನು ಬರೆಯುವ ಬರಹಗಾರರು ಬೇಕೆಂದೇ ಈ ಕಟ್ಟಲೆಗಳನ್ನು ತಮ್ಮ ಪಾಂಗುಗಳು ಆಗಾಗ ಮುರಿಯುತ್ತಿರುವಂತೆ ಮಾಡುತ್ತಾರೆ. ಇದಕ್ಕೆ ಕಾರಣವೇನೆಂದರೆ, ನಾಟಕಗಳಲ್ಲಿ ಪಾಂಗುಗಳ ನಡುವೆ ಆಗಾಗ ತಿಕ್ಕಾಟ ವುಂಟಾಗುವ ಹಾಗೆ ಮಾಡಬೇಕಾಗುತ್ತದೆ, ಮತ್ತು ಅದರಿಂದಾಗಿ ಸನ್ನಿವೇಶದಲ್ಲಿ ಬಿಗಿತ ಕಾಣಿಸಿಕೊಳ್ಳುವ ಹಾಗೆ ಮಾಡಬೇಕಾಗುತ್ತದೆ. ಹಾಗೆ ಮಾಡದಿದ್ದರೆ, ನಾಟಕಗಳು ಓದುಗರ ಇಲ್ಲವೇ ನೋಡುಗರ ಆಸಕ್ತಿಯನ್ನು ಉಳಿಸಿಕೊಳ್ಳ ಲಾರವು. ಮೇಲೆ ವಿವರಿಸಿದಂತಹ ಮಾತಿನ ಕಟ್ಟಲೆಗಳನ್ನು ಮುರಿಯುವ ಮೂಲಕ, ಅವು ನೋಡುಗರ ಇಲ್ಲವೇ ಓದುಗರ ಕುತೂಹಲವನ್ನು ಕೆರಳಿಸು ತ್ತವೆ.
ಎತ್ತುಗೆಗಾಗಿ, ಜಡಬರತ ಅವರ ಮೂಕಬಲಿ ನಾಟಕದಲ್ಲಿ ಸೀತಕ್ಕ ತನ್ನ ಮಗಳನ್ನು ಗಂಡನ ಮನೆಯವರು ಕಳಿಸುತ್ತಾರೋ ಇಲ್ಲವೋ ಎಂದು ಕೇಳಿದಾಗ
ಶೀನಪ್ಪನು ನೇರವಾದ ಮರುನುಡಿಯನ್ನು ಕೊಡುವ ಬದಲು, ಸೀತಕ್ಕನ ಮಗಳ ಗಂಡನ ಮನೆಯನ್ನು ವರ್ಣಿಸಲು ತೊಡಗುತ್ತಾನೆ. ಇದು ಮೂರನೆಯ ಕಟ್ಟಲೆ ಯನ್ನು ಮುರಿಯುವುದಾದರೂ, ನೋಡುಗರಿಗೆ ಆ ಮನೆಯ ಪರಿಚಯವನ್ನು ಒದಗಿಸಿ, ಮುಂದೆ ನಡೆಯಲಿರುವ ಎಸಕಕ್ಕೆ ಮುನ್ನುಡಿಯಾಗುತ್ತದೆ.
ಟಿ.ಪಿ. ಕಯ್ಲಾಸಂ ಅವರ ಪೋಲಿಕಿಟ್ಟಿ ನಾಟಕದಲ್ಲಿ ಬರುವ ಕೆಳಗಿನ ನಡುನುಡಿಯಲ್ಲಿ ಸೂಳುನುಡಿಯ ಎರಡನೇ ಕಟ್ಟಲೆಯನ್ನು ಮುರಿಯಲಾಗಿದೆ:
ಮುದುಕ: … ಒಂದು ವಾರ್ದಲ್ಲಿ ನಾಕ್ ಜನಾನ್ನ ಕಳ್ಕೊಂಡೇ ಬುದ್ದಿ! … ದೊಡ್ಮಾರಿ ಬಾಯಿಗೆ ತುತ್ತಿಟ್ಟು … ಕಿಟ್ಟಿ: (ಅಣಕಿಸುವುದನ್ನು ಬಿಟ್ಟು) ನಾಕು ಜನಾನು! ಒಂದೇ ವಾರ್ದಲ್ಲೇ! … ಮಾರಿ ಬಾಯಿಗೆ ತುತ್ತಿಟ್ಟು! ಯಾವ ಮಾರಿಗಯ್ಯ?
ಈ ನಡುನುಡಿಯಲ್ಲಿ ಕಿಟ್ಟಿ ಮುದುಕ ಹೇಳಿದುದನ್ನೇ ಹೇಳುವ ಹಾಗೆ, ಮತ್ತು ಸೂಳುನುಡಿಯ ಎರಡನೇ ಕಟ್ಟಲೆಯನ್ನು ಮುರಿಯುವ ಹಾಗೆ ಮಾಡ ಲಾಗಿದೆ. ಆದರೆ, ಆ ಮೂಲಕ ಅವನಿಗೆ ತನ್ನ ಬೆರಗನ್ನು ತುಂಬಾ ಚನ್ನಾಗಿ ಸೂಚಿಸಲು ಸಾದ್ಯವಾಗಿದೆ.
ನಾಟಕಗಳಲ್ಲಿ ಬರುವ ಪಾಂಗುಗಳು ಒಂದಕ್ಕಿಂತ ಒಂದು ಬೇರಾಗಿ ಕಾಣಿಸುವ ಹಾಗೆ ಮಾಡುವಲ್ಲಿಯೂ ಮಾತಿನ ಕಟ್ಟಲೆಗಳನ್ನು ಬಳಸಿಕೊಳ್ಳಲು ಬರುತ್ತದೆ. ಎತ್ತುಗೆಗಾಗಿ, ಒಬ್ಬ ವ್ಯಕ್ತಿ ಯಾವಾಗಲೂ ಬೇರೆಯವರು ಮಾತನಾಡುತ್ತಿರುವಾಗ ನಡುವೆ ಏನಾದರೂ ಹೇಳುತ್ತಿರುವಂತೆ, ಮತ್ತು ಬೇರೆಯವರ ಮಾತನ್ನು ತುಂಡಿಸುತ್ತಿರುವಂತೆ ತೋರಿಸಬಹುದು. ಹೀಗೆ ಮಾಡುವ ಮೂಲಕ, ಆತನೊಬ್ಬ ತುಂಬಾ ಒರಟನಾದ ವ್ಯಕ್ತಿಯೆಂಬುದಾಗಿ ಕಾಣಿಸಬಹುದು. ಇನ್ನೊಬ್ಬ ವ್ಯಕ್ತಿ ಯಾವಾಗಲೂ ಬೇರೆಯವರು ಹೇಳಿದುದನ್ನು ಹಾಗೆಯೇ ಹೇಳುತ್ತಿರಬಹುದು, ಮತ್ತು ಹಾಗೆ ಹೇಳುವುದೇ ಆತನ ಪರಿಚೆಯಾಗ ಬಲ್ಲುದು. ಈ ಎರಡು ಕಡೆಗಳಲ್ಲೂ ಮಾತಿನ ಕಟ್ಟಲೆಗಳನ್ನು ಮುರಿಯಲಾಗಿದೆ ಎಂಬುದನ್ನು ಗಮನಿಸಬಹುದು.
5.3.2 ಆಡುನುಡಿ ಮತ್ತು ಒಳನುಡಿಗಳ ಬಳಕೆ
ನಾಟಕದಲ್ಲಿ ಒಂದು ಪಾಂಗಿನ (ಪಾತ್ರದ) ಮಾತುಗಳನ್ನು ಬರೆಯುವಾಗ, ಅದು ಎಂತಹವರನ್ನು ಸೂಚಿಸುತ್ತದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳುವುದು
ಅವಶ್ಯ. ಆತ ಎಶ್ಟು ಕಲಿತಿದ್ದಾನೆ, ಯಾವ ಊರು ಮತ್ತು ಪಂಗಡಕ್ಕೆ ಸೇರಿದ್ದಾನೆ, ಆತನ ವಯಸ್ಸೆಶ್ಟು, ಎಂತಹ ಕೆಲಸದಲ್ಲಿದ್ದಾನೆ ಮೊದಲಾದ ಹಲವು ಬಗೆಯ ವಿಶಯಗಳನ್ನು ಗಮನದಲ್ಲಿರಿಸಿಕೊಂಡು, ಅದಕ್ಕೆ ತಕ್ಕುದಾಗುವ ಹಾಗೆ ಆ ಪಾಂಗಿನ ಮಾತುಗಳನ್ನು ಬರೆಯಬೇಕಾಗುತ್ತದೆ.
ಎಲ್ಲರಿಗೂ ಅವರದೇ ಆದ ಅನುಬವ, ತಿಳುವಳಿಕೆ, ಅನಿಸಿಕೆ, ಮತ್ತು ನಡವಳಿಕೆಗಳಿರುತ್ತವೆ. ಇವನ್ನೆಲ್ಲ ಒಟ್ಟಿಗೆ ಅವರ ಪರಿಚೆ ಎಂದು ಕರೆಯ ಬಹುದು. ಅವರು ಆಡುವ ಮಾತುಗಳಲ್ಲಿ ಈ ಪರಿಚೆ ಹಲವು ಬಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಾಟಕವನ್ನು ಬರೆಯುವವರು ಅದರಲ್ಲಿ ಬರುವ ಪಾಂಗುಗಳ ಪರಿಚೆಯನ್ನು ಅವರ ಮಾತುಗಳು ಸರಿಯಾಗಿ ತೋರಿಸಿಕೊಡುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ, ನೋಡುಗರಿಗೆ ಆ ಪಾಂಗುಗಳು ನಂಬಬಲ್ಲ ವೆಂದು ಅನಿಸಲಾರವು.
ಇದಲ್ಲದೆ, ಒಂದು ಪಾಂಗಿಗೆ ಒಂದು ಬಗೆಯ ಮಾತನ್ನು ಒಮ್ಮೆ ಕೊಟ್ಟ ಮೇಲೆ ನಾಟಕದುದ್ದಕ್ಕೂ ಅಂತಹದೇ ಮಾತನ್ನು ಅದಕ್ಕೆ ಕೊಡುತ್ತಿರಬೇಕಾಗು ತ್ತದೆ. ಎತ್ತುಗೆಗಾಗಿ, ಶ್ರೀರಂಗರ ಹರಿಜನ್ವಾರ ನಾಟಕದಲ್ಲಿ ವೇದಕ್ಕನ ಮಾತು ಗಳನ್ನು ಗಮನಿಸಬಹುದು. ಇವುಗಳಲ್ಲಿ ಬಳಕೆಯಾಗುವ ಪದಗಳಲ್ಲಿ ಉದ್ದಕ್ಕೂ ಇಕಾರ ಇಲ್ಲವೇ ಎಕಾರದ ಮೊದಲು ಬರುವ ವಕಾರ ಬಿದ್ದುಹೋಗುವುದನ್ನು, ಮತ್ತು ಅದರ ಬದಲು ಯಕಾರ ಬರುವುದನ್ನು ಕಾಣಬಹುದು (ವಿಚಾರ> ಯಿಚಾರ, ವಿಶ್ವಾಸ>ಯಿಶ್ವಾಸ, ವೇಣಕ್ಕ>ಯೇಣಕ್ಕ). ಬೇರೆ ಯಾವ ಪಾಂಗುಗಳ ಮಾತಿನಲ್ಲೂ ಈ ಬದಲಾವಣೆ ಕಾಣಿಸುವುದಿಲ್ಲ. ಹಾಗಾಗಿ, ನಾಟಕದ ಓದುಗರಿಗೆ ಇಲ್ಲವೇ ನೋಡುಗರಿಗೆ ಇದು ಆ ಪಾಂಗಿನ ಒಂದು ಪರಿಚೆಯಾಗಿ ಕಾಣಿಸುತ್ತದೆ.
ಊರಿನಿಂದ ಊರಿಗೆ ಮತ್ತು ಪಂಗಡದಿಂದ ಪಂಗಡಕ್ಕೆ (ಇಲ್ಲವೇ ಜಾತಿ ಯಿಂದ ಜಾತಿಗೆ) ಆಡುಮಾತು ಬೇರೆ ಬೇರಾಗಿರುತ್ತದೆ. ನಾಟಕದಲ್ಲಿ ಪಾಂಗಿನ ಊರು ಮತ್ತು ಪಂಗಡಗಳನ್ನು ಸೂಚಿಸುವುದಕ್ಕಾಗಿ ಆಡುಮಾತನ್ನು ಬಳಸ ಲೇನೋ ಸಾದ್ಯವಿದೆ; ಆದರೆ, ಇದರಿಂದಾಗಿ ಹೆಚ್ಚಿನ ಓದುಗ ಇಲ್ಲವೇ ನೋಡುಗರಿಗೂ ಆ ಪಾಂಗು ಏನು ಹೇಳುತ್ತಿದೆಯೆಂಬುದೇ ಗೊತ್ತಾಗದ ಹಾಗೆ ಆಗಬಲ್ಲುದು. ಹಾಗಾಗಿ, ಆಡುಮಾತನ್ನು ಪೂರ್ತಿಯಾಗಿ ಬಳಸುವ ಬದಲು, ಆಡುಮಾತೆಂಬ ಅನಿಸಿಕೆಯನ್ನು ಕೊಡಬಲ್ಲ ಕೆಲವು ಪದ ಮತ್ತು ಪದರೂಪಗಳನ್ನು ಇಲ್ಲವೇ ಸೊಲ್ಲುಗಳ ಇಟ್ಟಳಗಳನ್ನು ಮಾತ್ರವೇ ನಾಟಕದ ನಡುನುಡಿಗಳಲ್ಲಿ ಬಳಸಹೋಗುವುದು ಒಳ್ಳೆಯದು.
ನುಡಿಗಳಿಗಿರುವ ಒಳನುಡಿಗಳನ್ನೂ ಇದೇ ಬಗೆಯಲ್ಲಿ ಬಳಸಬಹುದು: ಬೇರೆ ಬೇರೆ ಕೆಲಸಗಳಲ್ಲಿರುವ ಜನರು ಬೇರೆ ಬೇರೆ ಬಗೆಯ ಒಳನುಡಿಗಳನ್ನು ಬಳಸುತ್ತಾರೆ. ಎತ್ತುಗೆಗಾಗಿ, ವಕೀಲರು, ಡಾಕ್ಟರುಗಳು ಇಲ್ಲವೇ ಇಂಜಿನಿಯರು ಗಳು ತಮ್ಮ ತಮ್ಮೊಳಗೆ ಮಾತನಾಡುವಾಗ, ತಮ್ಮದೇ ಆದ ಒಳನುಡಿಗಳನ್ನು ಬಳಸುತ್ತಿರುತ್ತಾರೆ. ನಾಟಕದಲ್ಲೂ ಕೂಡ, ಇಂತಹ ಪಾಂಗುಗಳು ತಮ್ಮೊಳಗೆ ಮಾತನಾಡುವ ಸಮಯದಲ್ಲಿ ಈ ತಮ್ಮದೇ ಆದ ಒಳನುಡಿಗಳನ್ನು ಬಳಸುವ ಹಾಗೆ ಮಾಡಬಹುದು. ಆದರೆ ಈ ಬಳಕೆಯನ್ನೂ, ಆಡುನುಡಿಯ ಬಳಕೆಯ ಹಾಗೆ, ಹದ್ದಿನಲ್ಲಿರಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಈ ಪಾಂಗುಗಳು ಏನು ಹೇಳುತ್ತಿದ್ದಾರೆಂಬುದು ನಾಟಕದ ನೋಡುಗರಿಗೆ ಗೊತ್ತಾಗದು.
5.4 ನಾಟಕದಲ್ಲಿ ನುಡಿಯೊಡ್ಡವ
ನಾಟಕಗಳನ್ನು ಬರೆಯುವವರಿಗೆ ಮತ್ತು ಬರೆದ ನಾಟಕಗಳನ್ನು ಒರೆದು ನೋಡು ವವರಿಗೆ (ವಿಮರ್ಶಕರಿಗೆ) ಎರಡು ಬಗೆಯ ಸೊಲ್ಲರಿಮೆಯ ತಿಳಿವುಗಳು ನೆರವಿಗೆ ಬರಬಲ್ಲುವು: ಸೊಲ್ಲುಗಳ ನಡುವಿನ ಪತ್ತುಗೆ(ಸಂಬಂದ)ಯೆಂತಹದು, ಎಂತಹ ಪತ್ತುಗೆಯಿದ್ದರೆ ಬರಹ ಚನ್ನಾಗಿರಬಲ್ಲುದು ಎಂಬುದರ ಕುರಿತಾದ ತಿಳಿವು ಒಂದು ಬಗೆಯದು, ಮತ್ತು ಸೊಲ್ಲುಗಳಿಗೆ ಯಾವ ಬಗೆಯ ಹುರುಳುಗಳೆಲ್ಲ ಇರಬಲ್ಲುವು, ಮತ್ತು ಈ ಹುರುಳುಗಳನ್ನು ಬಳಸಿಕೊಂಡು ನೋಡುಗರ ಆಸಕ್ತಿ ಯನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಕುರಿತಾದ ತಿಳಿವು ಇನ್ನೊಂದು ಬಗೆಯದು. ಈ ಎರಡು ಬಗೆಯ ತಿಳಿವುಗಳೂ ನಾಟಕದ ನುಡಿಯೊಡ್ಡವ(ಶಯ್ಲಿ) ವನ್ನು ಕಲ್ಪಿಸಿಕೊಳ್ಳುವಲ್ಲಿ ನೆರವಿಗೆ ಬರುತ್ತವೆ.
5.4.1 ಸೊಲ್ಲುಗಳ ನಡುವಿನ ಪತ್ತುಗೆ
ಎರಡು ಇಲ್ಲವೇ ಹೆಚ್ಚು ಮಂದಿ ಒಟ್ಟಿಗೆ ಸೇರಿ ಮಾತನಾಡುತ್ತಿರುವಾಗ, ಯಾರು, ಯಾವಾಗ, ಮತ್ತು ಹೇಗೆ ಮಾತಿನಲ್ಲಿ ತೊಡಗುತ್ತಾರೆ ಎಂಬ ವಿಶಯದಲ್ಲಿ ಹಲವು ಬಗೆಯ ಅರಕೆ(ಸಂಶೋದನೆ)ಗಳು ನಡೆದಿವೆ. ಇವನ್ನು ಒಟ್ಟಾಗಿ ಪಾಳಿಹಿಡಿಯುವುದು ಇಲ್ಲವೇ ಪಾಳಿಯೆತ್ತುವುದು ಎಂಬುದಾಗಿ ಕರೆಯಬಹುದು. ಈ ಅರಕೆಗಳ ಮೂಲಕ ಈಗಾಗಲೇ ಕಂಡು ಹಿಡಿದಿರುವ ಸಂಗತಿಗಳು ನಾಟಕಗಳ ನಡುನುಡಿಗಳಲ್ಲಿ ಬರುವ ಸೊಲ್ಲುಗಳ ನಡುವಿನ ಪತ್ತುಗೆಯನ್ನು ವಿವರಿಸುವಲ್ಲಿ ನೆರವಿಗೆ ಬರಬಲ್ಲುವು.
ಒಬ್ಬನ ಮಾತು ಮುಗಿದ ಮೇಲೆ ಉಳಿದವರಲ್ಲಿ ಮಾತನಾಡುವ ಪಾಳಿ ಯಾರದು ಎಂಬುದನ್ನು ಕಣ್ಣುಸನ್ನೆಯ ಮೂಲಕ ಇಲ್ಲವೇ ಹೆಸರನ್ನೆತ್ತುವ ಮೂಲಕ ಅವನೇ ಸೂಚಿಸಬಹುದು, ಇಲ್ಲವೇ ಮಾತನಾಡುವವನು ತಾನೇ ಪಾಳಿಯನ್ನೆತ್ತಿಕೊಳ್ಳಬಹುದು. ಸಾಮಾನ್ಯವಾಗಿ, ಈ ಪಾಳಿಹಿಡಿಯುವ ಕೆಲಸ ಸಲೀಸಾಗಿ, ಹೆಚ್ಚಿನ ಅಡೆತಡೆಗಳಿಲ್ಲದೆ, ನಡೆಯುತ್ತಿರುತ್ತದೆ. ಆದರೆ ಕೆಲವೊಮ್ಮೆ ತೊಡಕುಗಳೂ ಕಾಣಿಸಿಕೊಳ್ಳುತ್ತವೆ.
ಎತ್ತುಗೆಗಾಗಿ, ಕೆಲವೊಮ್ಮೆ ಇಬ್ಬರು ಒಟ್ಟೊಟ್ಟಿಗೆ ಮಾತನಾಡಲು ತೊಡಗು ತ್ತಾರೆ; ಆದರೆ ಸಾಮಾನ್ಯವಾಗಿ, ಅವರಲ್ಲೊಬ್ಬನು ತನ್ನ ಪಾಳಿಯನ್ನು ಬಿಟ್ಟುಕೊಡುವ ಮೂಲಕ, ಈ ತೊಡಕನ್ನು ಬಗೆಹರಿಸುತ್ತಾನೆ. ಒಬ್ಬನ ಮಾತು ಮುಗಿಯುವ ಮೊದಲೇ ಇನ್ನೊಬ್ಬನು ಮಾತಿನಲ್ಲಿ ತೊಡಗುವುದೂ ಇದೆ. ಆತನ ಮಾತು ತನಗೆ ಒಪ್ಪಿಗೆಯಾಗುವುದಿಲ್ಲ ಎಂಬುದನ್ನು ಸೂಚಿಸುವುದಕ್ಕಾಗಿ ಈ ರೀತಿ ಮಾಡಬಹುದು, ಇಲ್ಲವೇ ಆತನು ಹೇಳುತ್ತಿರುವುದಕ್ಕೆ ತನ್ನ ಒಪ್ಪಿಗೆ ಯನ್ನು ಸೂಚಿಸುವುದಕ್ಕಾಗಿಯೂ ಹೀಗೆ ಮಾಡಬಹುದು. ಈ ಎರಡು ಬಗೆ ಯಲ್ಲೂ ಒಬ್ಬನು ಮಾತನಾಡುತ್ತಿರುವಾಗ ನಡುವೆ ಇನ್ನೊಬ್ಬ ತನ್ನ ಮಾತನ್ನು ಸೇರಿಸಲು ಹೋಗಬಹುದು.
ಸಾಮಾನ್ಯವಾಗಿ, ಪಾಳಿಗಳು ನುಡಿ ಮತ್ತು ಮರುನುಡಿ ಎಂಬ ಜೋಡಿಗಳಾಗಿ ಬರುತ್ತಿರುತ್ತವೆ. ಕೇಳ್ವಿ-ಮರುನುಡಿ, ದೂರು-ತಪ್ಪಪ್ಪಿಗೆ, ತೆಗಳಿಕೆ-ಅಲ್ಲಗಳೆತ, ಹದುಳೊರೆ(ಶುಬಾಶಯ)-ಹದುಳೊರೆ ಮೊದಲಾದುವು ಇಂತಹ ಜೋಡುಪಾಳಿಗಳು. ಇವುಗಳಲ್ಲಿ ಕೆಲವು ಬಗೆಯ ಮರುನುಡಿಗಳನ್ನು ಆಡುಗರು ಎದುರುನೋಡುತ್ತಿರುತ್ತಾರೆ. ಹಾಗೆ ಎದುರುನೋಡುತ್ತಿರುವ ಮಾತಿಗಿಂತ ಬೇರಾಗಿರುವ ಮಾತಿನ ಬಳಕೆಯಾದಾಗ ತಿಕ್ಕಾಟವುಂಟಾಗುತ್ತದೆ.
ನಾಟಕದ ನಡುನುಡಿಯಲ್ಲಿ ಪಾಂಗುಗಳ ನಡುವೆ ಪಾಳಿಹಿಡಿಯುವ ಕೆಲಸ ಹೇಗೆ ನಡೆಯಬೇಕು ಎಂಬುದನ್ನು ಬರಹಗಾರರೇ ತೀರ್ಮಾನಿಸುತ್ತಾರೆ. ಪಾಂಗು ಗಳ ಪರಿಚೆಯನ್ನು ಸೂಚಿಸುವುದಕ್ಕಾಗಿ, ಮತ್ತು ಸನ್ನಿವೇಶದಲ್ಲಿ ಬಿಗಿತವ ನ್ನುಂಟುಮಾಡುವುದಕ್ಕಾಗಿ ಅವರು ಅದನ್ನು ತಮಗೆ ಬೇಕಾದ ಹಾಗೆ ಹಲವು ಬಗೆಗಳಲ್ಲಿ ಬದಲಾಯಿಸಿಕೊಳ್ಳಬಲ್ಲರು. ಈ ಕೆಲಸವನ್ನು ನಡೆಸುವಲ್ಲಿಯೂ ಪಾಳಿಹಿಡಿಯುವ ಕುರಿತಾಗಿ ತಿಳಿವಿಗರು ನಡೆಸಿರುವ ಅರಕೆಗಳು ನೆರವಿಗೆ ಬರಬಲ್ಲುವು.
ಎತ್ತುಗೆಗಾಗಿ, ಟಿ.ಪಿ. ಕಯ್ಲಾಸಂ ಅವರ ತಾಳೀಕಟ್ಟೋಕ್ಕೂಲೀನೇ ಎಂಬ
ನಾಟಕದಲ್ಲಿ ಬರುವ ಕೆಳಗಿನ ನಡುನುಡಿಯನ್ನು ಗಮನಿಸಬಹುದು:
ಲಕ್ಷ್ಮಿ: ಬಂದ್ರಾ…? ನಾಗತ್ತೆ: ಇಲ್ಲ! ಇನ್ನೂ ಊರಲ್ಲೇ ಇಧೇನೆ! …. ಇದೇನು ಜಾಣತನದ ಪ್ರಶ್ನೆಯೋ? … ಊರು ಬಿಟ್ಟು ಊರಿಗೆ ಬಂದು ಎದುರಿಗೆ ನಿಂತಿರೋವ್ರನ್ನ ನೋಡಿ ಬಂದ್ರಾ ಅಂದ್ರೆ, ಏನು ಬುದ್ಧಿಮಂದಾನೋ, ಇಲ್ಲ ದೃಷ್ಟಿ ಮಧ್ಯಸ್ಥಾನೋ, ನನಗೇನ್ಗೊತ್ತು!…?
ಹದುಳೊರೆಯಾಗಿ ಹೇಳಿದ ಮಾತನ್ನು ಹದುಳೊರೆಯೆಂದು ತಿಳಿಯದೆ, ಅದಕ್ಕೆ ನೇರ ಹುರುಳನ್ನು ಕೊಡುವ ಮೂಲಕ ಇಲ್ಲಿ ನೋಡುಗರು ನಗುವಂತೆ ಮಾಡಲಾಗಿದೆ.
ಕೇಳುಗನಿಗೆ ಮದಿಪನ್ನು (ಗವ್ರವವನ್ನು) ಕೊಡುವುದಕ್ಕಾಗಿ ನೀನು ಪದದ ಬದಲು ನೀವು ಪದವನ್ನು ಬಳಸಲಾಗುತ್ತದೆ. ಈ ಯಾವಾಗಿನ ಬಳಕೆಯನ್ನು ಮುರಿಯುವ ಮೂಲಕವೂ ನಡುನುಡಿಯಲ್ಲಿ ತಿಕ್ಕಾಟವನ್ನುಂಟುಮಾಡಲು ಬರುತ್ತದೆ. ಹೀಗೆ ಮಾಡಿರುವುದನ್ನು ಟಿ.ಪಿ.ಕಯ್ಲಾಸಂರವರ ತಾಳೀಕಟ್ಟೋ ಕ್ಕೂಲಿನೇ ನಾಟಕದಲ್ಲಿ ಕಾಣಬಹುದು. ಅದರಲ್ಲಿ ಉದ್ದಕ್ಕೂ ನರಸಿಂಹಯ್ಯನು ರಾಮಣ್ಣನೊಡನೆ ಮಾತನಾಡುವಾಗ ನೀವು ಪದವನ್ನು ಬಳಸುತ್ತಿದ್ದು, ನಾಟಕದ ಕೊನೆಯಲ್ಲಿ, ಇದ್ದಕ್ಕಿದ್ದ ಹಾಗೆ, ಮದಿಪು ಕೆಡಿಸುವ ನೀನು ಪದವನ್ನು ಬಳಸುತ್ತಾನೆ. ವರದಕ್ಶಿಣೆಯ ವಿಶಯದಲ್ಲಿ ಆತನಲ್ಲುಂಟಾದ ಕೋಪ, ನಿರಾಶೆ, ತಿರಸ್ಕಾರ ಮೊದಲಾದ ಅನಿಸಿಕೆಗಳನ್ನು ಈ ಮೂಲಕ ತುಂಬಾ ಚನ್ನಾಗಿ ಸೂಚಿಸಲಾಗಿದೆ.
5.4.2 ಸೊಲ್ಲುಗಳ ಹುರುಳುಗಳು
ಸೊಲ್ಲುಗಳಿಗೆ ಅವುಗಳ ಎಲ್ಲಾ ಬಳಕೆಗಳಲ್ಲೂ ಕಾಣಿಸುವಂತಹ ಅವುಗಳದೇ ಆದ ಹುರುಳು (ಅರ್ತ) ಮಾತ್ರವಲ್ಲದೆ, ಒಂದೊಂದು ಬಳಕೆಗೂ ತಕ್ಕುದಾದ ಹುರುಳುಗಳೂ ಇರುತ್ತವೆ. ಎತ್ತುಗೆಗಾಗಿ, ಇವತ್ತು ತುಂಬಾ ತಡವಾಯಿತು ಎಂಬ ಸೊಲ್ಲನ್ನು ರಾತ್ರಿ ಬಹಳ ಹೊತ್ತು ಹರಟೆ ಹೊಡೆಯುತ್ತಾ ಕುಳಿತವರಲ್ಲೊಬ್ಬನು ಹೇಳಿದನಾದರೆ, ಮಾತು ಮುಗಿಸಿ ಮಲಗಲು ಹೋಗೋಣ ಎಂಬ ಹುರುಳು ಸಿಗುತ್ತದೆ. ಇದಕ್ಕೆ ಬದಲು, ಅದೇ ಸೊಲ್ಲನ್ನು ಮನೆಯಲ್ಲಿ ಸಿನಿಮಾಕ್ಕೆ ಹೋಗಲು ಅಣಿಯಾಗಿ ಕಾದು ಕುಳಿತಿರುವ ಹೆಂಡತಿಗೆ ಕೆಲಸದಿಂದ ಹಿಂದಿರುಗಿದ ಗಂಡ ಹೇಳಿದನಾದರೆ, ಸಿನಿಮಾಕ್ಕೆ ಹೋಗಲು ಇವತ್ತು ಸಾದ್ಯವಾಗದು ಎಂಬ ಹುರುಳು ಸಿಗುತ್ತದೆ.
ಈ ರೀತಿ ಒಂದು ಸೊಲ್ಲಿಗೆ ನೇರವಾಗಿ ಅದರದೇ ಆದ ಹುರುಳಿದ್ದರೂ, ಬಳಕೆಯ ಕುಳ್ಳಿಹ(ಸಂದರ್ಬ)ವನ್ನವಲಂಬಿಸಿ ಬೇರೆಯೇ ಹುರುಳು ಸಿಗಬಲ್ಲುದು. ಇದು ಬಳಕೆಯೊಂದರಲ್ಲಿ ಸೊಲ್ಲಿಗೆ ಆಡುಗನು ಕೊಡುವ ಹುರುಳಾದ ಕಾರಣ, ಇದನ್ನು ಆಡುಗನ ಹುರುಳು ಎಂಬುದಾಗಿ ಕರೆಯಬಹುದು.
ಒಳ್ಳೇ ನಾಟಕಗಳಲ್ಲಿ ಸೊಲ್ಲುಗಳನ್ನು ನೇರವಾಗಿ ಅವುಗಳದೇ ಆದ ಹುರುಳಿ ನಲ್ಲಿ ಬಳಸುವುದಕ್ಕಿಂತಲೂ, ಮೇಲೆ ಸೂಚಿಸಿದಂತಹ ಆಡುಗನ ಹುರುಳಿನಲ್ಲಿ ಬಳಸುವುದೇ ಹೆಚ್ಚು. ಎತ್ತುಗೆಗಾಗಿ, ಟಿ.ಪಿ. ಕಯ್ಲಾಸಂ ಅವರ ಪೋಲಿಕಿಟ್ಟಿ ನಾಟಕದಲ್ಲಿ, ಕಿಟ್ಟಿ ಹೇಳುವ ಮಾತನ್ನು ಗಮನಿಸಬಹುದು:
ಅಮ್ಮಾ, ಮಗೂನ್ ಸಾಯಿಸ್ಬೇಕೂ ಅಂದ್ರೆ, ಮನೇಲಿ ಭಾವಿಯಿಲ್ವೇ? … ಬೀದೀಲಿ ಹೋಗೋ ಬಂಡಿಗಳ ಮುಂದೆ ಹಾಕಿ … ಇಷ್ಟು ಜನಕ್ಕೆ ತೊಂದರೆ … ಬದ್ಲಾಗಿ ಮನೇ ಭಾವೀಲೇ ದಬ್ಬಿಟ್ರೆ ಎಲ್ರಿಗೂ ಸಲೀಸು.
ಈ ಮಾತುಗಳಿಗಿರುವ ನೇರವಾದ ಹುರುಳು ಇಲ್ಲಿ ಮುಕ್ಯವಲ್ಲ, ಅವಕ್ಕೆ ಆಡುಗನು ಕೊಟ್ಟಿರುವ ಹುರುಳೇ ಮುಕ್ಯ. ಮಾತುಗಳ ಕುಳ್ಳಿಹದಿಂದ ಇದು ಗೊತ್ತಾಗುತ್ತದೆ.
ನಾಟಕಗಳಲ್ಲಿ ಕೆಲವು ನೋಡುಗರನ್ನು ನಗುವಿನಲ್ಲಿ ಮುಳುಗಿಸಬಹುದು, ಮತ್ತು ಇನ್ನು ಕೆಲವು ಅವರು ಕಣ್ಣೀರು ಸುರಿಸುವಂತೆ ಮಾಡಬಹುದು. ಈ ಎರಡು ಬಗೆಯ ನಾಟಕಗಳಲ್ಲೂ ಹೆಚ್ಚುಕಡಿಮೆ ಒಂದೇ ಬಗೆಯ ಕತೆಗಳನ್ನು ಬಳಸಲಾಗುತ್ತದೆ. ಎರಡರಲ್ಲೂ ಪಾಂಗುಗಳ ನಡುವಿನ ತಿಕ್ಕಾಟ ಮತ್ತು ಅದರಿಂದ ಮೂಡಿಬರುವ ಬಿಗಿತಗಳು ಬಳಕೆಯಾಗುತ್ತಿರುತ್ತವೆ. ಹಾಗಿದ್ದರೂ, ಅವುಗಳಲ್ಲಿ ಒಂದು ಬಗೆಯ ಬರಹ ನೋಡುಗರಲ್ಲಿ ಅಳುವನ್ನುಂಟು ಮಾಡು ತ್ತದೆ, ಮತ್ತು ಇನ್ನೊಂದು ಬಗೆಯ ಬರಹ ನಗುವನ್ನುಂಟುಮಾಡುತ್ತದೆ. ಅವುಗಳ ನಡುವಿನ ಈ ವ್ಯತ್ಯಾಸ ಮುಕ್ಯವಾಗಿ ಅವುಗಳಲ್ಲಿ ಬರಹಗಾರರು ನಡುನುಡಿ ಯನ್ನು ಬರೆದಿರುವ ಬಗೆಯನ್ನು ಅವಲಂಬಿಸಿದೆ.
ಎತ್ತುಗೆಗಾಗಿ, ಮುಂದೆ ಆರನೇ ಪಸುಗೆಯಲ್ಲಿ (6.4ರಲ್ಲಿ) ವಿವರಿಸಿರುವ ಹಾಗೆ, ನಗುಬರಹಗಳಲ್ಲಿ ಇಪ್ಪುರುಳಿನ ಸೊಲ್ಲುಗಳನ್ನು ತುಂಬಾ ಜಾಣ್ಮೆಯಿಂದ ಬಳಸಲಾಗುತ್ತದೆ. ಮೊದಲಿಗೆ ಓದುಗರು ಅವುಗಳಿಗಿರುವ ಎರಡು ಹುರುಳು ಗಳಲ್ಲಿ ಒಂದನ್ನು ಪಡೆಯುವ ಹಾಗೆ ಮಾಡಲಾಗುತ್ತದೆ; ಆಮೇಲೆ, ನಿಜಕ್ಕೂ ಸೊಲ್ಲಿಗಿರುವುದು ಆ ಹುರುಳೋ ಇಲ್ಲವೇ ಬೇರೆ ಹುರುಳೋ ಎಂಬ
ವಿಶಯದಲ್ಲಿ ಸಂಶಯ ಹುಟ್ಟುವ ಹಾಗೆ ಮಾಡಲಾಗುತ್ತದೆ, ಮತ್ತು ಕೊನೆಯದಾಗಿ, ಒಮ್ಮೆಗೇನೇ ಅದರ ಎದುರು ನಿಲ್ಲುವ ಇನ್ನೊಂದು ಹುರುಳಿಗೆ ಓದುಗರು ನೆಗೆಯುವಂತೆ ಮಾಡಲಾಗುತ್ತದೆ. ಈ ನೆಗೆತ ಅವರನ್ನು ಬೆರಗು ಗೊಳಿಸುತ್ತದೆ, ಮತ್ತು ನಗೆಯಲ್ಲಿ ಮುಳುಗಿಸುತ್ತದೆ.
ಬಳಕೆಯಲ್ಲಿರುವ ನಾಣ್ಣುಡಿಯೊಂದನ್ನು ತಿರುಚುವ ಮೂಲಕವೂ ಓದುಗ ರನ್ನು ಇಲ್ಲವೇ ನೋಡುಗರನ್ನು ಬೆರಗುಗೊಳಿಸಿ, ಅವರು ನಗುವಂತೆ ಮಾಡ ಬಹುದು. ಎತ್ತುಗೆಗಾಗಿ, ಶ್ರೀರಂಗ ಅವರು ಬರೆದ ಶೋಕಚಕ್ರ ನಾಟಕದಲ್ಲಿ ಹೆಂಗಸರ ಬುದ್ದಿ ಮೊಳಕಾಲ ಕೆಳಗೆ ಎಂಬ ನಾಣ್ಣುಡಿಯನ್ನು ತಿರುಚಿ ಕೆಳಗಿನ ಸೊಲ್ಲನ್ನು ಉಂಟುಮಾಡಲಾಗಿದೆ:
ರಂಗಮ್ಮ: … “ಈ ಹೊತ್ತಾದ್ರೂ ಮೊಳಕಾಲ ಮ್ಯಾಲಿನ ಧೋತರ ಬಿಟ್ಟು ಈ ಅಗಲ ಧೋತರ ಉಟ್ಟುಗೋರಿ” ಅಂತ ಹೇಳಿದ್ರೆ, “ಗಂಡಸಿನ ಬುದ್ದಿ ಮೊಳಕಾಲ ಕೆಳಗೆ ಇಲ್ಲ, ಮುಚ್ಚಿಗೋಳಿಕ್ಕೆ” ಅಂದ್ರು.
ಅಳು, ನಗು ಮೊದಲಾದ ಹಲವು ಬಗೆಯ ಅನಿಸಿಕೆಗಳನ್ನು ಮಾತಿನ ಮೂಲಕ ನೋಡುಗರಲ್ಲಿ ಮೂಡಿಸಬೇಕೆಂದಿರುವ ಬರಹಗಾರರಿಗೆ ಮಾತಿನ ಒಳಗುಟ್ಟನ್ನು ತಿಳಿಸುವ ಸೊಲ್ಲರಿಮೆ ಹಲವು ಬಗೆಗಳಲ್ಲಿ ನೆರವಿಗೆ ಬರಬಲ್ಲುದು.
5.7 ತಿರುಳು
ನಲ್ಬರಹಗಳನ್ನು ಬರೆಯುವಲ್ಲಿ ಮತ್ತು ಅವನ್ನು ಒರೆಹಚ್ಚುವಲ್ಲಿ ಸೊಲ್ಲರಿಮೆಯ ತಿಳಿವು ಹೇಗೆ ನೆರವಿಗೆ ಬರಬಲ್ಲುದು ಎಂಬುದನ್ನು ಈ ಪಸುಗೆಯಲ್ಲಿ ಪರಿಶೀಲಿಸಲಾಗಿದೆ.
(1) ಒಳ್ಳೇ ನಲ್ಬರಹಗಾರರು ತಮ್ಮ ಬರಹಗಳಲ್ಲಿ ಪದ, ಪದಕಂತೆ, ಸೊಲ್ಲಿನ ಇಟ್ಟಳ ಮೊದಲಾದವುಗಳ ಆಯ್ಕೆಯನ್ನು ಹೇಗೆ ಮಾಡಿದ್ದಾರೆ, ಮತ್ತು ಅವುಗಳ ಮೂಲಕ ತಮ್ಮ ಬರಹಗಳನ್ನು ಮೇಲೆತ್ತಲು ಅವರಿಗೆ ಹೇಗೆ ಸಾದ್ಯವಾಗಿದೆ ಎಂಬುದನ್ನು ತಿಳಿಯಲು ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ.
(2) ನಲ್ಬರಹಗಳಲ್ಲಿ ಹಲವು ಬಗೆಯ ಸೊಲ್ಲರಿಮೆಯ ಕಟ್ಟಲೆಗಳನ್ನು ಮುರಿಯುವ ಮೂಲಕ ಓದುಗರ ಗಮನವನ್ನು ಬರಹದ ಹುರುಳಿನಿಂದ ಬರಹದೆಡೆಗೆ ಹರಿಯುವಂತೆ ಮಾಡಲಾಗುತ್ತದೆ. ಇದಕ್ಕಾಗಿ ಎಂತಹ
ಕಟ್ಟಲೆಗಳನ್ನು ಮುರಿಯಬಲ್ಲೆವು ಎಂಬುದನ್ನು ತಿಳಿಯುವಲ್ಲಿ ಈ ಕಟ್ಟಲೆಗಳ ತಿಳಿವು ನೆರವಿಗೆ ಬರುತ್ತದೆ.
(3) ನಾಟಕಗಳಲ್ಲಿ ಬರುವ ನಡುನುಡಿಗಳನ್ನು ಬರೆಯುವಲ್ಲಿ ಸೂಳುನುಡಿಯ ಹಲವು ಕಟ್ಟಲೆಗಳನ್ನು ಮುರಿಯಬೇಕಾಗುತ್ತದೆ. ಇದನ್ನು ನಡೆಸುವಲ್ಲಿ ಸೂಳುನುಡಿಯ ಕಟ್ಟಲೆಗಳ ತಿಳಿವು ನೆರವಿಗೆ ಬರಬಲ್ಲುದು.
(4) ಇದಲ್ಲದೆ, ನಾಟಕಗಳಲ್ಲಿ ಆಡುನುಡಿ ಇಲ್ಲವೇ ಒಳನುಡಿಗಳನ್ನು ಪೂರ್ತಿಯಾಗಿ ಬಳಸುವ ಬದಲು, ಪಾಂಗುಗಳ ಮಾತಿನಲ್ಲಿ ಅವುಗಳ ಬಳಕೆ ಯಾಗಿದೆ ಎಂಬ ಅನಿಸಿಕೆಯನ್ನು ನೋಡುಗರಲ್ಲಿ ಮೂಡಿಸುವಶ್ಟರ ಮಟ್ಟಿಗೆ ಮಾತ್ರ ಅವನ್ನು ಬಳಸಬೇಕಾಗುತ್ತದೆ. ಇದಕ್ಕೂ ಈ ಆಡುನುಡಿ ಮತ್ತು ಒಳನುಡಿಗಳ ಸೊಲ್ಲರಿಮೆಯ ತಿಳಿವಿದ್ದರೆ ಒಳ್ಳೆಯದು.