Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ಮೂರನೇ ಪಸುಗೆ — ಬರೆಯುವುದರಲ್ಲಿ ಹೆಚ್ಚಿನ ಕಲಿಕೆ
3.1 ಮುನ್ನೋಟ
ಹಯ್ಸ್ಕೂಲು ಇಲ್ಲವೇ ಕಾಲೇಜಿನ ವರೆಗೆ ಬಂದು ಮುಟ್ಟಿದರೂ ಇವತ್ತು ಹಲವು ಮಂದಿ ಹುಡುಗ-ಹುಡುಗಿಯರಿಗೆ ಕನ್ನಡದಲ್ಲಿ ಸರಿಯಾಗಿ ಬರೆಯಲು ತಿಳಿದಿರುವುದಿಲ್ಲ. ಇವರು ತಮ್ಮ ಬರವಣಿಗೆಯನ್ನು ಹೇಗೆ ಸರಿಪಡಿಸಿಕೊಳ್ಳ ಬಲ್ಲರು ಮತ್ತು ಅದಕ್ಕೆ ಹೇಗೆ ಕನ್ನಡದ ಸೊಲ್ಲರಿಮೆಯ ತಿಳಿವು ನೆರವಾಗ ಬಲ್ಲುದು ಎಂಬುದನ್ನು ಈ ಪಸುಗೆಯಲ್ಲಿ ವಿವರಿಸಲಾಗಿದೆ.
ಇವತ್ತಿನ ಸಮಾಜದಲ್ಲಿ ಬರೆಯಲು ಬಾರದವರು ಹಲವು ಬಗೆಯಲ್ಲಿ ಹಿಂದೆ ಬೀಳಬೇಕಾಗುತ್ತದೆ. ಯಾಕೆಂದರೆ, ಎಲ್ಲಾ ಬಗೆಯ ಕೆಲಸಗಳಲ್ಲೂ ಇವತ್ತು ಮುಂದೆ ಹೋಗಬೇಕೆಂದಿದ್ದರೆ ಚನ್ನಾಗಿ ಬರೆಯಲು ತಿಳಿದಿರ ಬೇಕಾಗುತ್ತದೆ. ತಮ್ಮ ಕೆಲಸದ ವರದಿ ಬರೆಯುವುದು, ಮೇಲಿನ ಕೆಲಸಕ್ಕೆ ಅರ್ಜಿ ಹಾಕುವುದು, ರಜೆ ಅರ್ಜಿ ಬರೆಯುವುದು, ತಮ್ಮ ಹೊಸ ಯೋಜನೆಗಳನ್ನು ಇಲ್ಲವೇ ಕೆಲಸದಲ್ಲಿ ಮೂಡಿಬರುವ ತೊಡರುಗಳನ್ನು ವಿವರವಾಗಿ ಬರೆದು ತಿಳಿಸುವುದು - ಹೀಗೆ ಹಲವಾರು ಕಡೆಗಳಲ್ಲಿ ಚನ್ನಾಗಿ ಬರೆಯಲು ಗೊತ್ತಿರು ವವರು ಮಾತ್ರ ತಮ್ಮ ಕುರಿತಾಗಿ ಮೇಲಾಳುಗಳಲ್ಲಿ ಒಳ್ಳೆಯ ಅನಿಸಿಕೆ ಯುಂಟಾಗುವ ಹಾಗೆ ಮಾಡಬಲ್ಲರು.
ತಿಳಿಸಬೇಕೆಂದಿರುವುದನ್ನು ತಪ್ಪಿಲ್ಲದೆ, ತಿಳಿಯಾಗಿ ಮತ್ತು ಬೇಗನೆ ಬರೆದು ತಿಳಿಸಲು ಬಾರದವರಿಗೆ ಇವತ್ತು ಕಾಸಗಿ ಕಂಪೆನಿಗಳಲ್ಲಿ ಕೆಲಸ ಸಿಗುವುದು ತುಂಬಾ ಕಶ್ಟ. ಅಂತಹ ಕಂಪೆನಿಗಳು ತಮ್ಮಲ್ಲಿ ಈಗಾಗಲೇ ಕೆಲಸಕ್ಕಿರುವ ಜನರ ಬರವಣಿಗೆಯನ್ನು ಒಳ್ಳೆಯದಾಗಿಸಲು ಮಿಲಿಯಗಟ್ಟಲೆ ಹಣ ಕರ್ಚುಮಾಡುತ್ತಿರುತ್ತವೆ. ಅವುಗಳಲ್ಲಿ ಕೆಲಸ ಮಾಡುವ ಜನರಲ್ಲಿ ಹೆಚ್ಚಿನವರಿಗೂ ಬರೆಯುವ ಕೆಲಸಗಳಿರುತ್ತವೆ, ಮತ್ತು ತಮ್ಮ ಕೆಲಸದಲ್ಲಿ ಮೇಲಕ್ಕೆ ಏರಿದಂತೆಲ್ಲ
ಅವರ ಬರೆಯುವ ಕೆಲಸವೂ ಹೆಚ್ಚುತ್ತಾ ಹೋಗುತ್ತದೆ. ಇವರೆಲ್ಲ ಚನ್ನಾಗಿ ಬರೆಯಬಲ್ಲವರಾದರೆ ಮಾತ್ರ ಕಂಪೆನಿಯ ಏಳಿಗೆಯಾಗಬಲ್ಲುದು.
ಇವತ್ತಿನ ಎಣ್ಣುಕ(ಕಂಪ್ಯೂಟರ್)ಯುಗದಲ್ಲಂತೂ ಬರವಣಿಗೆಗೆ ಇನ್ನಶ್ಟು ಮಹತ್ವ ಬಂದಿದೆ. ಇವತ್ತು ದೂರವಾಣಿಯನ್ನು ಬಳಸುವುದಕ್ಕಿಂತಲೂ ಮಿಂಚಂಚೆಯನ್ನು ಬಳಸುವುದು ಹೆಚ್ಚಾಗಿದೆ. ಆದರೆ, ಅದನ್ನು ಬಳಸಬೇಕಿದ್ದಲ್ಲಿ ಸರಿಯಾಗಿ, ತಿಳಿಯಾಗಿ, ಮತ್ತು ಚುಟುಕಾಗಿ ಬರೆಯಲು ತಿಳಿದಿರಬೇಕು. ಮಿಂಚಂಚೆಗಳನ್ನು ತಪ್ಪು ತಪ್ಪಾಗಿ ಇಲ್ಲವೇ ಗೊಂದಲವುಂಟಾಗುವ ಹಾಗೆ ಬರೆಯುವವರಿಂದಾಗಿ ಅವರ ಮತ್ತು ಅದನ್ನು ಓದಬೇಕಾಗಿರುವವರ ಸಮಯ ಹಾಳಾಗುತ್ತದೆ ಮಾತ್ರವಲ್ಲ, ಅವರೊಳಗೆ ತಪ್ಪು ತಿಳುವಳಿಕೆಗಳೂ ಮೂಡುತ್ತವೆ. ಚನ್ನಾಗಿ ಬರೆಯಲು ಕಲಿಯುವುದರಿಂದ ಬೇರೆಯೂ ಹಲವು ಪ್ರಯೋಜನ ಗಳಿವೆ. ಎತ್ತುಗೆಗಾಗಿ, ಒಳ್ಳೇ ಬರಹಗಾರರಲ್ಲಿ ಆಲೋಚನೆಯ ಕಸುವು ಹೆಚ್ಚಿರುತ್ತದೆ. ಒಳ್ಳೇ ಬರಹಗಾರರು ಬರೆದುದನ್ನು ತಿರುತಿರುಗಿ ಓದಿ, ಅವುಗಳಲ್ಲಿ ಮಾರ್ಪಾಡುಗಳನ್ನು ಮಾಡಲು ಕಲಿತಿರುತ್ತಾರೆ; ಹಾಗಾಗಿ, ಮನಸ್ಸಿನಲ್ಲಿ ಮೂಡುವ ಅನಿಸಿಕೆಗಳನ್ನು ಬಿಡಿಸಿನೋಡುವ ಮತ್ತು ಅವುಗಳಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳುವ ಅಳವೂ ಅವರಿಗೆ ಬಂದಿರುತ್ತದೆ. ಹಾಗಾಗಿ, ಬರಹದ ಕಲಿಕೆ ಉತ್ತಮ ಬರಹಗಾರರನ್ನು ಮಾತ್ರವಲ್ಲದೆ ಉತ್ತಮ ಆರಯ್ಯುಗರನ್ನೂ ಉಂಟು ಮಾಡುತ್ತದೆ.
ತಮ್ಮ ತಾಯ್ನುಡಿಯಲ್ಲಿ ಚನ್ನಾಗಿ ಬರೆಯಲು ಕಲಿತವರು ಆ ಚಳಕವನ್ನು ಇಂಗ್ಲಿಶ್ನಂತಹ ಬೇರೆ ನುಡಿಗಳಿಗೂ ಸುಳುವಾಗಿ ಮಾರೆಡೆಗೊಳಿಸಬಲ್ಲರು ಎಂಬುದನ್ನು ನಾವು ಮುಂದೆ ಆರನೇ ಪಸುಗೆಯಲ್ಲಿ ನೋಡಲಿರುವೆವು. ಹಾಗಾಗಿ, ಇಂಗ್ಲಿಶ್ನಲ್ಲಿ ಚನ್ನಾಗಿ ಬರೆಯಲು ಕಲಿಯಬೇಕೆಂದಿರುವವರಿಗೂ ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ಚನ್ನಾಗಿ ಬರೆಯಲು ಕಲಿಯುವುದು ಒಂದು ಒಳ್ಳೇ ಅಡಿಗಲ್ಲಾಗಬಲ್ಲುದು.
3.1.1 ಬರಹಗಾರರಲ್ಲಿ ಎರಡು ಬಗೆ
ಕೆಲವರು ಬರಹಗಾರರು ಏನು ಬರೆಯಬೇಕು, ಹೇಗೆ ಬರೆಯಬೇಕು ಎಂಬುದನ್ನೆಲ್ಲ ಮೊದಲಿಗೆ ಮನಸ್ಸಿನಲ್ಲೇ ತೀರ್ಮಾನಿಸಿ, ಆಮೇಲೆ ಬರೆಯಲು ತೊಡಗುತ್ತಾರೆ. ಇವರು ಒಮ್ಮೆ ಬರೆಯಲು ತೊಡಗಿದರೆಂದರೆ, ಇಡೀ ಬರಹವನ್ನು ಉದ್ದಕ್ಕೂ ನಿಲ್ಲಿಸದೆ ಬರೆದು ಮುಗಿಸುತ್ತಾರೆ.
ಬರೆಯುವುದರಲ್ಲಿ ಹೆಚ್ಚಿನ ಕಲಿಕೆ
ಆದರೆ, ಬೇರೆ ಕೆಲವರು ಮೊದಲು ಬರೆಯಲು ತೊಡಗುತ್ತಾರೆ, ಮತ್ತು ಹೀಗೆ ಬರೆಯುತ್ತಿದ್ದಂತೆ ಹೊಸ ಹೊಸ ವಿಶಯಗಳು ಅವರ ಮನಸ್ಸಿನಲ್ಲಿ ಮೂಡುತ್ತಿರುತ್ತವೆ. ಹಾಗಾಗಿ, ಇವರಿಗೆ ತಾವು ಬರೆದುದನ್ನು ಹಲವು ಬಾರಿ ಬದಲಾಯಿಸುತ್ತಿರಬೇಕಾಗುತ್ತದೆ; ಎಂಟು-ಹತ್ತು ಬಾರಿ ತಿದ್ದಿ, ತಿರುತಿರುಗಿ ಬರೆಯಬೇಕಾಗುತ್ತದೆ. ಕೆಲವೊಮ್ಮೆ ಇವರು ಮೊದಲಿಗೆ ಬರೆದುದನ್ನು ಹರಿದುಹಾಕಿ, ಆಮೇಲೆ ಹೊಸದಾಗಿ ಬರೆಯಹೊರಡುತ್ತಾರೆ.
ಸಾಮಾನ್ಯವಾಗಿ, ಈ ಎರಡು ಬಗೆಯ ಬರಹಗಾರರಲ್ಲಿ ಮೊದಲಿನವರೇ ಒಳ್ಳೆಯ ಬರಹಗಾರರೆಂದು ಅನ್ನಿಸಿಕೊಳ್ಳುತ್ತಾರೆ. ಬರೆದುದನ್ನು ಹಲವು ಬಾರಿ ತಿದ್ದಬೇಕಾದವರು ಮತ್ತು ತುಂಬಾ ಕಶ್ಟದಿಂದ ಅದನ್ನು ಮುಗಿಸಬೇಕಾದವರು ಅಶ್ಟೊಂದು ಒಳ್ಳೆಯ ಬರಹಗಾರರೆಂದು ಅನ್ನಿಸಿಕೊಳ್ಳುವುದಿಲ್ಲ.
ಆದರೆ, ನಿಜಕ್ಕೂ ಇವು ಬರಹಗಾರರು ಬಳಸುವ ಎರಡು ಬಗೆಯ ಹೊಲಬು(ವಿದಾನ)ಗಳು ಮಾತ್ರ. ಅವುಗಳಲ್ಲಿ ಒಂದು ಇನ್ನೊಂದರಿಂದ ಒಳ್ಳೆಯದು ಎಂದು ಹೇಳಲು ಯಾವ ಆದಾರವೂ ಇಲ್ಲ. ಕೆಲವರು ಏನು ಬರೆಯಬೇಕು ಮತ್ತು ಹೇಗೆ ಬರೆಯಬೇಕು ಎಂಬುದನ್ನು ತೀರ್ಮಾನಿಸುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ, ಮತ್ತು ಬೇರೆ ಕೆಲವರು ಅದೇ ಸಮಯದಲ್ಲಿ ಬರೆಯುವುದನ್ನೇ ನಡೆಸುತ್ತಾರೆ ಎಂಬುದೇ ಇಲ್ಲಿರುವ ವ್ಯತ್ಯಾಸ. ಇದಲ್ಲದೆ, ಎಲ್ಲರೂ ಒಂದೇ ಹೊಲಬನ್ನು ಬಳಸಲು ಸಾದ್ಯವೂ ಇಲ್ಲ. ಒಬ್ಬೊಬ್ಬರೂ ತಮಗೆ ಅನುಕೂಲವಾಗಿರುವ ಹೊಲಬು ಯಾವುದು ಎಂಬುದನ್ನು ಕಂಡುಕೊಂಡು, ಅದಕ್ಕನುಗುಣವಾಗಿ ತಮ್ಮ ಬರಹವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಇದು ಸ್ವಲ್ಪ ಮಟ್ಟಿಗೆ ಬರಹದ ಬಗೆಯನ್ನೂ ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಕತೆ-ಕಾದಂಬರಿಗಳನ್ನು ಬರೆಯುವವರಲ್ಲಿ ಹೆಚ್ಚು ಮಂದಿ ಮೊದಲಿನ ಹೊಲಬನ್ನು ಬಳಸುತ್ತಾರೆ ಮತ್ತು ಬೇರೆ ಬಗೆಯ ಬರಹಗಳನ್ನು ಬರೆಯುವವರಲ್ಲಿ ಹೆಚ್ಚು ಮಂದಿ ಎರಡನೆಯ ಹೊಲಬನ್ನು ಬಳಸುತ್ತಾರೆ.
ಹಮ್ಮುಗೆ, ಬರವಣಿಗೆ ಮತ್ತು ಮರುನೋಟ ಎಂಬುದಾಗಿ ಬರಹವೊಂದನ್ನು ಉಂಟುಮಾಡುವಲ್ಲಿ ಮೂರು ಹಂತಗಳಿರುತ್ತವೆ. ಮೇಲೆ ಸೂಚಿಸಿದ ಹಾಗೆ, ಕೆಲವರು ಹಮ್ಮುಗೆಯನ್ನು ಮೊದಲು ಮುಗಿಸಿ, ಆಮೇಲೆ ಬರವಣಿಗೆಗೆ ತೊಡಗುತ್ತಾರೆ, ಮತ್ತು ಕೆಲವರು ಅವು ಮೂರನ್ನೂ ಒಟ್ಟೊಟ್ಟಿಗೆ ನಡೆಸಹೋಗುತ್ತಾರೆ.
ಕೆಲವರು ತಾವು ಬರೆದುದನ್ನು ಮರುನೋಟಕ್ಕೆ ಒಳಪಡಿಸಬೇಕಾಗುವುದೇ ಇಲ್ಲ; ಅದುವೇ ತಮ್ಮ ಕೊನೆಯ ಬರವಣಿಗೆಯಾಗಿರುತ್ತದೆ ಎಂಬುದಾಗಿ ಹೇಳಿಕೊಳ್ಳಬಹುದು; ಆದರೆ ಇದು ಪೂರ್ತಿ ನಿಜವಿರಲಾರದು. ಯಾಕೆಂದರೆ, ಬರೆದುದನ್ನೊಮ್ಮೆ ಓದಿ ನೋಡಿದಾಗ, ಅದರಲ್ಲಿ ಕೆಲವಾದರೂ ಬದಲಾವಣೆ ಗಳನ್ನು ಮಾಡಬೇಕೆಂದು ಅನಿಸದಿರದು. ಇದಲ್ಲದೆ, ತಡೆ(,), ಅರೆಕೊನೆ(;), ಕೊಗೆತ(:) ಮೊದಲಾದ ಬರಹದ ಗುರುತುಗಳನ್ನು ಸಾಮಾನ್ಯವಾಗಿ ಬರೆಯು ವಾಗಲೇ ಹಾಕುತ್ತಿರಲು ಬರುವುದಿಲ್ಲ; ಬರೆದುದನ್ನು ಓದಿ ನೋಡುವಾಗ ಅವನ್ನು ಸೇರಿಸಿಕೊಳ್ಳಬೇಕಾಗುತ್ತದೆ.
3.1.2 ಬರಹದ ಒಳಗುಟ್ಟು
ಹೆಚ್ಚಿನವರಿಗೂ ಬರೆಯುವ ಕೆಲಸ ತಮ್ಮ ತಾಯ್ನುಡಿಯಲ್ಲೂ ತುಂಬಾ ತೊಡಕಿನದೆಂದು ಅನಿಸುತ್ತದೆ. ಇದಕ್ಕೆ ಕಾರಣವೇನೆಂದರೆ, ಮಾತನ್ನು ಹಾಗೆಯೇ ಬರೆದುಬಿಟ್ಟರೆ ಅದು ಬರಹವಾಗುವುದಿಲ್ಲ. ಮನಸ್ಸಿನಲ್ಲಿ ಮೂಡಿದ ಅನಿಸಿಕೆ ಇಲ್ಲವೇ ತಿಳುವಳಿಕೆಯನ್ನು ಒಂದು ನಿಶ್ಚಿತವಾದ ಇಟ್ಟಳವಿರುವ ಬರಹವಾಗಿ ಮಾರ್ಪಡಿಸಬೇಕಾಗುತ್ತದೆ. ಇದಕ್ಕಾಗಿ ಬರಹಗಾರರು ಹಲವು ಬಗೆಯ ಚಳಕ(ಕವ್ಶಲ್ಯ)ಗಳನ್ನು ಕಲಿತುಕೊಳ್ಳಬೇಕಾಗುತ್ತದೆ.
(1) ತಾವು ಮನಸ್ಸಿನಲ್ಲೊಬ್ಬ ಓದುಗನನ್ನು ಕಲ್ಪಿಸಿಕೊಂಡು, ಆತನಿಗೆ ತಿಳಿದಿರುವ ಸಂಗತಿ ಯಾವುದು, ಮತ್ತು ತಿಳಿಯದುದು ಯಾವುದು ಎಂಬುದನ್ನು ಊಹಿಸಿಕೊಂಡು, ಅದಕ್ಕನುಸಾರವಾಗಿ ತಮ್ಮ ಬರಹವನ್ನು ಹೊಂದಿಸಿಕೊಳ್ಳಲು ತಿಳಿದಿರಬೇಕು;
(2) ಗುರಿಗೆ ತಕ್ಕುದಾದ ಒಡ್ಡವವನ್ನು (ಶಯ್ಲಿಯನ್ನು) ಬಳಸಲು
ತಿಳಿದಿರಬೇಕು;
(3) ಮುಕ್ಯ ವಿಶಯವನ್ನು ಮುಕ್ಯವಲ್ಲದ ವಿಶಯದಿಂದ ಬೇರ್ಪಡಿಸಲು, ಮತ್ತು ಮುಕ್ಯ ವಿಶಯದ ಮೇಲೆ ಹೆಚ್ಚಿನ ಒತ್ತು ಬೀಳುವಂತೆ ನೋಡಿಕೊಳ್ಳಲು ತಿಳಿದಿರಬೇಕು;
(4) ಬರಿಗೆ(ಅಕ್ಶರ)ಗಳನ್ನು ಮತ್ತು ಬರಹದ ಗುರುತುಗಳನ್ನು ಬಳಸುವಲ್ಲಿ
ತಪ್ಪುಗಳನ್ನು ಮಾಡದೆ ಬರೆಯಲು ತಿಳಿದಿರಬೇಕು.
ಈ ಚಳಕಗಳಲ್ಲಿ ಮುಕ್ಯವಾದ ಕೆಲವನ್ನು ತಮ್ಮದಾಗಿಸಿಕೊಳ್ಳುವುದು ಹೇಗೆ
ಎಂಬುದನ್ನು ಕೆಳಗೆ ವಿವರಿಸಲಾಗಿದೆ.
32 ಬರಹಗಾರರು ಮತ್ತು ಓದುಗರು ಬರಹಗಾರರಿಗೆ ಸಾಮಾನ್ಯವಾಗಿ ತಮ್ಮ ಓದುಗರು ಯಾರು ಎಂಬುದು ಗೊತ್ತಿರುವುದಿಲ್ಲ. ಅವರ ಅನುಬವ ಎಂತಹದು, ಅವರಿಗೆ ಎಶ್ಟು ತಿಳಿದಿದೆ, ತಾವು ಬರೆದುದನ್ನು ಓದುವಾಗ ಅವರಲ್ಲಿ ಎಂತಹ ಸಂಶಯಗಳು ಏಳಬಹುದು, ತಮ್ಮ ಬರಹವನ್ನು ಅವರು ಯಾಕಾಗಿ ಓದಬಹುದು ಎಂಬಂತಹ ವಿಶಯಗಳೂ ಅವರಿಗೆ ಗೊತ್ತಿರುವುದಿಲ್ಲ. ಹೀಗಿದ್ದರೂ, ಓದುಗರೊಬ್ಬರನ್ನು ಅವರು ತಮ್ಮ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬೇಕಾಗುತ್ತದೆ, ಮತ್ತು ಅವರಿಗೆ ಅನುಕೂಲವಾಗುವ ಹಾಗೆ ತಮ್ಮ ಬರಹವನ್ನು ಉಂಟುಮಾಡಬೇಕಾಗುತ್ತದೆ.
ಹೀಗೆ ಕಲ್ಪಿಸಿಕೊಂಡಿರುವ ಓದುಗರಿಗೆ ತಾವು ಬರೆಯುತ್ತಿರುವ ವಿಶಯದಲ್ಲಿ ತಮಗಿಂತ ಸ್ವಲ್ಪ ಕಡಿಮೆ ಗೊತ್ತಿರುತ್ತದೆಯೆಂದು ಬರಹಗಾರರು ತಿಳಿದುಕೊಳ್ಳ ಬೇಕಾಗುತ್ತದೆ. ಯಾಕೆಂದರೆ, ಅಂತಹ ವ್ಯತ್ಯಾಸ ಇಲ್ಲವಾದರೆ, ಓದುಗರಿಗೆ ಅವರ ಬರಹದಲ್ಲಿ ಯಾವ ಆಸಕ್ತಿಯೂ ಮೂಡಲಾರದು. ಬರಹಗಾರರ ಈ ಕಲ್ಪನೆ ಅವರ ಬರಹದಲ್ಲೂ ಸ್ಪಶ್ಟವಾಗಿ ಕಾಣಿಸುತ್ತಿರಬೇಕು.
ಬರಹಗಾರರು ಮೊದಲಿಗೆ ತಾವು ಬರೆಯುತ್ತಿರುವ ವಿಶಯದ ಕುರಿತು ತಮ್ಮ ಕಲ್ಪಿತ ಓದುಗರಿಗೆ ಗೊತ್ತಿರಬಹುದೆಂದು ಎಣಿಸಿರುವ ಸಂಗತಿಗಳನ್ನು ಅಡಕವಾಗಿ ಸೂಚಿಸಬೇಕು. ಇದು ಅವರ ಬರಹಕ್ಕೆ ಅಡಿಗಲ್ಲಾಗುತ್ತದೆ. ಆಮೇಲೆ, ಹೊಸದಾಗಿ ಹೇಳಬೇಕೆಂದಿರುವುದನ್ನು ಹೆಚ್ಚು ವಿವರವಾಗಿ ತಿಳಿಸಿಕೊಡಬೇಕು.
ತಿಳಿದಿರುವುದನ್ನು ಮೊದಲು ತಿಳಿಸಿ, ಅದರ ನೆಲೆಯ ಮೇಲೆ ತಿಳಿಯದುದನ್ನು ತಿಳಿಸಿಹೇಳುವ ಈ ಹೊಲಬು ಒಳ್ಳೇ ಬರಹಗಳಲ್ಲಿ ಹಲವೆಡೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅವುಗಳ ಹೆಚ್ಚಿನ ಸೊಲ್ಲುಗಳಲ್ಲೂ ಮೊದಲಿಗೆ ಓದುಗರಿಗೆ ತಿಳಿದಿರುವ ಸಂಗತಿ ಬರುತ್ತದೆ, ಮತ್ತು ಆಮೇಲೆ ತಿಳಿಯದಿರುವ ಹೊಸ ಸಂಗತಿ ಬರುತ್ತದೆ. ಒಂದು ಸೊಲ್ಲಿಗೂ ಅದರ ಮುಂದಿರುವ ಸೊಲ್ಲಿಗೂ ನಡುವಿರುವ ಪತ್ತುಗೆ(ಸಂಬಂದ)ಯೂ ಈ ತಿಳಿದುದು-ತಿಳಿಯದುದು ಎಂಬ ವ್ಯತ್ಯಾಸವನ್ನು ಕೊಂಡಿಯಾಗಿ ಬಳಸಿಕೊಂಡಿರುತ್ತದೆ.
ಈ ವಿಶಯದಲ್ಲಿ ಮಾತಿಗೂ ಬರಹಕ್ಕೂ ನಡುವೆ ಮುಕ್ಯವಾದ ವ್ಯತ್ಯಾಸವಿದೆ. ಮಾತನಾಡುವವರು ತಾವು ಹೇಳಬೇಕೆಂದಿರುವುದನ್ನು ಮೊದಲಿಗೆ ಅಡಕವಾಗಿ ಹೇಳಿಬಿಡುತ್ತಾರೆ. ಆಮೇಲೆ ಅವರ ಕೇಳುಗರು ಆ ವಿಶಯದ ಕುರಿತಾಗಿ ತಮಗೆ ತಿಳಿಯಬೇಕೆಂದಿರುವ ಹೆಚ್ಚಿನ ಸಂಗತಿಗಳನ್ನು ಹಲವು ಬಗೆಯ ಕೇಳ್ವಿಗಳನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಆದರೆ, ಬರಹದಲ್ಲಿ ಓದುಗರಿಗೆ
ಬರಹಗಾರರನ್ನು ಹಾಗೆ ಕೇಳಿ ತಿಳಿದುಕೊಳ್ಳಲು ಬರುವುದಿಲ್ಲ. ಯಾಕೆಂದರೆ, ಬರಹಗಾರರು ಅವರ ಎದುರಿಗೆ ಇರುವುದಿಲ್ಲವಲ್ಲ! ಹಾಗಾಗಿ, ಓದುಗರಲ್ಲಿ ಮೂಡಬಹುದಾದ ಕೇಳ್ವಿಗಳನ್ನು ಬರಹಗಾರರು ತಾವೇ ಮೊದಲಿಗೆ ಊಹಿಸಿಕೊಂಡು ಅವನ್ನೆಲ್ಲ ಬಗೆಹರಿಸುವ ಹಾಗೆ, ಇಲ್ಲವೇ ಅಂತಹ ಕೇಳ್ವಿಗಳು ಬಾರದೇ ಇರುವ ಹಾಗೆ ತಮ್ಮ ಬರಹವನ್ನು ಸಾವಗಿಸಿಕೊಳ್ಳಬೇಕಾಗುತ್ತದೆ.
3.2.1 ಸೊಲ್ಲುಗಳ ನೆಲೆ ಮತ್ತು ತಿಳಿವು
ಸೊಲ್ಲುಗಳನ್ನು ಸಾಮಾನ್ಯವಾಗಿ ನೆಲೆ ಮತ್ತು ತಿಳಿವು ಎಂಬುದಾಗಿ ವಿಂಗಡಿಸಲು ಬರುತ್ತದೆ. ಇವುಗಳಲ್ಲಿ ನೆಲೆ ಎಂಬುದು ಒಂದು ವಿಶಯವನ್ನು ಓದುಗರ ಮುಂದಿರಿಸುತ್ತದೆ ಮತ್ತು ತಿಳಿವು ಎಂಬುದು ಆ ವಿಶಯದ ಕುರಿತಾಗಿ ಅವರಿಗೆ ಸಂಗತಿಯೊಂದನ್ನು ತಿಳಿಸುತ್ತದೆ. ಎತ್ತುಗೆಗಾಗಿ, ಆಡುನುಡಿಗಳು ಊರಿಂದೂರಿಗೆ ಬೇರಾಗಿರುತ್ತವೆ ಎಂಬ ಸೊಲ್ಲಿನಲ್ಲಿ ಆಡುನುಡಿಗಳು ಎಂಬುದು ನೆಲೆ ಮತ್ತು ಊರಿಂದೂರಿಗೆ ಬೇರಾಗಿರುತ್ತವೆ ಎಂಬುದು ಆ ನೆಲೆಯ ಕುರಿತಾಗಿ ಓದುಗರಿಗೆ ಸಂಗತಿಯೊಂದನ್ನು ತಿಳಿಸುವ ತಿಳಿವು.
ಕನ್ನಡದಲ್ಲಿ ಸಾಮಾನ್ಯವಾಗಿ ಸೊಲ್ಲಿನಲ್ಲಿ ಮೊದಲಿಗೆ ಬರುವ ಪದ ಇಲ್ಲವೇ ಪದಕಂತೆ ಅದರ ನೆಲೆಯಾಗಿರುತ್ತದೆ. ಇದು ಸೊಲ್ಲಿನಲ್ಲಿ ಬರುವ ಆಗುಗ, ಮಾಡುಗ, ಈಡು(ಅನ್ನು), ಸುರು(ಇಂದ), ಗುರಿ(ಇಗೆ), ಮತ್ತು ಜಾಗ(ಅಲ್ಲಿ) ಎಂಬ ಆರು ಪಾಂಗುಗಳಲ್ಲಿ ಯಾವುದೂ ಆಗಿರಬಲ್ಲುದು. ಎತ್ತುಗೆಗಾಗಿ, ಕೆಳಗೆ ಕೊಟ್ಟ ಕುರಳಿನಲ್ಲಿ ಬೇರೆ ಬೇರೆ ಪಾಂಗುಗಳಲ್ಲಿರುವ ವ್ಯಕ್ತಿ ಸೊಲ್ಲುಗಳ ನೆಲೆಯಾಗಿ ಬಂದಿರುವುದನ್ನು ಗಮನಿಸಬಹುದು:
ರಮೇಶ ಸಂಜೆ ಆರು ಗಂಟೆಗೆ ಊರಿಗೆ ಬಂದು ತಲಪಿದ್ದ. ಅವನನ್ನು ಎದುರುಗೊಳ್ಳಲು ಸ್ಟೇಶನಿಗೆ ಯಾರೂ ಬಂದಿರಲಿಲ್ಲ. ಅವನೇ ತನ್ನ ಹೋಲ್ಡಾಲನ್ನು ಎತ್ತಿಕೊಂಡು ಹೊರಗೆ ಬಂದ. ಅಲ್ಲಿ ಹಳೇ ಕಾಲದ ಜಟಕಾವೊಂದು ಅವನಿಗಾಗಿ ಕಾಯುತ್ತಿತ್ತು.
ಮೇಲಿನ ಕುರಳಿನಲ್ಲಿ ಮಾಡುಗ ಪಾಂಗಿನಲ್ಲಿರುವ ರಮೇಶ ಎಂಬ ಪದ ಮೊದಲನೇ ಸೊಲ್ಲಿನ ನೆಲೆಯಾಗಿ ಬಂದಿದೆ; ಅದೇ ವ್ಯಕ್ತಿಯನ್ನು ಗುರುತಿಸುವ ಅವನು ಎಂಬ ಪದ ಮುಂದಿನ ಎರಡು ಸೊಲ್ಲುಗಳಲ್ಲೂ ನೆಲೆಯಾಗಿ ಬಂದಿದೆ. ಆದರೆ, ಇದು ಎರಡನೇ ಸೊಲ್ಲಿನಲ್ಲಿ ಈಡು ಪಾಂಗಾಗಿದೆ ಮತ್ತು ಮೂರನೆಯ
ಸೊಲ್ಲಿನಲ್ಲಿ ಮಾಡುಗ ಪಾಂಗಾಗಿದೆ. ಕೊನೆಯ ಸೊಲ್ಲಿನಲ್ಲಿ ಮಾತ್ರ ಜಾಗವನ್ನು ಗುರುತಿಸುವ ಅಲ್ಲಿ ಎಂಬ ಬೇರೊಂದು ಪದ ನೆಲೆಯಾಗಿ ಬಂದಿದೆ.
ಒಳ್ಳೇ ಬರಹಗಳ ಸೊಲ್ಲುಗಳಲ್ಲಿ ಬರುವ ನೆಲೆಗಳು ಯಾರನ್ನು ಇಲ್ಲವೇ ಯಾವುದನ್ನು ಸೂಚಿಸುತ್ತವೆ ಎಂಬುದನ್ನು ಓದುಗರು ಸುಳುವಾಗಿ ಹಿಂದಿನ ಸೊಲ್ಲಿನಿಂದ, ಅವನ್ನು ಬಳಸಿರುವ ಕುಳ್ಳಿಹ(ಸಂದರ್ಬ)ದಿಂದ, ಇಲ್ಲವೇ ತಮ್ಮ ಅನುಬವದಿಂದ ಪಡೆಯಲು ಸಾದ್ಯವಿರುವಂತಿರುತ್ತದೆ.
ಒಂದು ಸೊಲ್ಲಿನಲ್ಲಿ ನೆಲೆಯಾಗಿ ಬಂದಿರುವ ಪದ ಇಲ್ಲವೇ ಪದಕಂತೆ ಆ ಸೊಲ್ಲನ್ನು ಹಿಂದಿನ ಸೊಲ್ಲಿನೊಂದಿಗೆ ಸಂಬಂದಿಸುವ ಕೊಂಡಿಯಾಗಿರುತ್ತದೆ. ಇಂತಹ ಕೊಂಡಿಗಳನ್ನು ಓದುಗರು ಎದುರುನೋಡುತ್ತಿರುತ್ತಾರೆ. ಹಾಗಾಗಿ, ಒಂದು ಸೊಲ್ಲಿನಲ್ಲಿ ಬರುವ ನೆಲೆ ನಿಜಕ್ಕೂ ಯರನ್ನು ಇಲ್ಲವೇ ಏನನ್ನು ಗುರುತಿಸುತ್ತಿದೆ ಎಂಬುದನ್ನು ಹಿಂದಿನ ಸೊಲ್ಲಿನಿಂದ ಇಲ್ಲವೇ ಅದರ ಕುಳ್ಳಿಹ ದಿಂದ ತಿಳಿಯಲು ಬರುವುದಿಲ್ಲವಾದಲ್ಲಿ, ಅಂತಹ ಬರಹಗಳು ಓದುಗರಿಗೆ ತೊಡಕಿನವಾಗಿ ಕಾಣಿಸುತ್ತವೆ.
ಕುರಳುಗಳಲ್ಲಿ ಬರುವ ಸೊಲ್ಲುಗಳಲ್ಲಿ ನೆಲೆಯ ಮುನ್ನಡೆತ ಯಾವ ರೀತಿಯಲ್ಲಿ ಸಾಗಬೇಕು ಎಂಬುದನ್ನು ಬರಹಗಾರರು ತಮ್ಮ ಹತೋಟಿಯ ಲ್ಲಿರಿಸಿಕೊಳ್ಳಬೇಕು. ಸೊಲ್ಲುಗಳ ನೆಲೆಯನ್ನು ಹಲವು ಬಗೆಗಳಲ್ಲಿ ಮುನ್ನಡೆಸಲು ಬರುತ್ತದೆ: ಕುರಳಿನಲ್ಲಿರುವ ಎಲ್ಲಾ ಸೊಲ್ಲುಗಳಿಗೂ ಒಂದೇ ನೆಲೆ ಇರಬಹುದು, ಇಲ್ಲವೇ ಒಂದೊಂದು ಸೊಲ್ಲಿನ ನೆಲೆಯನ್ನೂ ಅದರ ಹಿಂದಿರುವ ಸೊಲ್ಲಿನ ತಿಳಿವಿನಿಂದ ಹೊಸದಾಗಿ ಆರಿಸಿಕೊಂಡಿರಬಹುದು.
ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಕುರಳಿನಲ್ಲಿ ಎಲ್ಲಾ ಸೊಲ್ಲುಗಳಿಗೂ ಹೆಗಡೆಯವರು ಎಂಬುದೇ ನೆಲೆಯಾಗಿರುವುದನ್ನು ಕಾಣಬಹುದು. ಕನ್ನಡದಲ್ಲಿ ಈ ರೀತಿ ಹಲವು ಸೊಲ್ಲುಗಳಲ್ಲಿ ಒಂದೇ ಪದ ನೆಲೆಯಾಗಿ ಬಂದಾಗ, ಅದನ್ನು ಮೊದಲನೆಯ ಸೊಲ್ಲಿನಲ್ಲಿ ಮಾತ್ರ ಬಳಸಿ, ಆಮೇಲೆ ಬಳಸದಿರಲು ಬರುತ್ತದೆ.
ಹೆಗಡೆಯವರು ಹೊರಗೆ ಹೋಗಿ, ಮನೆಯ ಕಟ್ಟೆಯ ಮೇಲೆ ಕುಳಿತರು. ಕುಳಿತಲ್ಲಿಂದಲೇ ಹೆಂಡತಿಯನ್ನು ಕರೆದು ಒಂದು ಲೋಟೆ ಕಾಪಿ ತರಲು ಹೇಳಿದರು. ಕಾಪಿ ಕುಡಿಯುತ್ತ, ಆವತ್ತು ಮಾಡಬೇಕಿದ್ದ ಕೆಲಸಗಳ ಕುರಿತು ಆಲೋಚಿಸತೊಡಗಿದರು.
ಸೊಲ್ಲುಗಳಲ್ಲಿ ಬೇರೆ ಬೇರೆ ನೆಲೆಗಳು ಬಂದಿರುವುದನ್ನು ಕೆಳಗೆ ಕೊಟ್ಟಿರುವ ಕುರಳಿನಲ್ಲಿ ಕಾಣಬಹುದು. ಇದರ ಮೊದಲನೇ ಸೊಲ್ಲಿನಲ್ಲಿ ಕಿವುಡರು ಎಂಬುದು ನೆಲೆ; ಎರಡನೆಯದರಲ್ಲಿ ಮೊದಲನೇ ಸೊಲ್ಲಿನ ತಿಳಿವಿನಿಂದ ಪಡೆದಿರುವ ಸನ್ನೆನುಡಿ ಎಂಬುದು ನೆಲೆ; ಮತ್ತು ಮೂರನೆಯದರಲ್ಲಿ ಎರಡನೇ ಸೊಲ್ಲಿನ ತಿಳಿವಿನಿಂದ ಪಡೆದಿರುವ ವ್ಯತ್ಯಾಸಗಳು ಎಂಬುದು ನೆಲೆ.
ಕಿವುಡರು ಮಾತಿನ ಬದಲು ಸನ್ನೆನುಡಿಯನ್ನು ಬಳಸುತ್ತಾರೆ. ಇದಕ್ಕೂ ಮಾತಿನ ನುಡಿಗೂ ನಡುವೆ ಹಲವು ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ.
ಮೊದಲನೇ ಸೊಲ್ಲಿನ ತಿಳಿವಿನಲ್ಲಿ ಹಲವು ನೆಲೆಗಳಿಗೆ ಮೂಲವಿದ್ದು, ಅವುಗಳಲ್ಲಿ ಒಂದೊಂದನ್ನು ಆರಿಸಿಕೊಂಡು ಮುಂದಿನ ಸೊಲ್ಲುಗಳನ್ನು ಕಟ್ಟಲೂ ಬರುತ್ತದೆ. ಇದನ್ನು ಕೆಳಗಿನ ಕುರಳಿನಲ್ಲಿ ಕಾಣಬಹುದು:
ರಾಜುವಿಗೆ ಇಬ್ಬರು ಮಕ್ಕಳು. ಅವರಲ್ಲಿ ದೊಡ್ಡವನು ಮದುವೆಯಾಗಿ ತನ್ನನ್ನು ಬೇಸಾಯದಲ್ಲೇ ತೊಡಗಿಸಿಕೊಂಡಿದ್ದಾನೆ. ಚಿಕ್ಕವನಿಗಿನ್ನೂ ಮದುವೆಯಾಗಿಲ್ಲ. ಅವನು ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ.
ಸೊಲ್ಲುಗಳಲ್ಲಿ ನೆಲೆಯ ಮುನ್ನಡೆತ ಹೇಗೆ ಸಾಗುತ್ತದೆ ಎಂಬುದು ಸ್ವಲ್ಪ ಮಟ್ಟಿಗೆ ಬರಹದ ಬಗೆಯನ್ನೂ ಅವಲಂಬಿಸಿರುತ್ತದೆ. ಎತ್ತುಗೆಗಾಗಿ, ಕತೆಗಳಲ್ಲಿ ಬರುವ ಕುರಳುಗಳಲ್ಲಿ ಸಾಮಾನ್ಯವಾಗಿ ಒಂದೇ ನೆಲೆ ತಿರುತಿರುಗಿ ಆಯ್ಕೆಯಾಗು ತ್ತಿದ್ದು, ಅದರ ಎಲ್ಲಾ ಸೊಲ್ಲುಗಳೂ ಆ ನೆಲೆಯ ಕುರಿತಾಗಿಯೇ ತಿಳಿವನ್ನು ಕೊಡುತ್ತಿರುತ್ತವೆ. ಇದರಿಂದಾಗಿ ಕತೆ ಬೇಗನೆ ಮುಂದೆ ಸಾಗುತ್ತದೆ. ಇದಕ್ಕೆ ಬದಲು, ಅರಿಮೆಯ ಬರಹಗಳಲ್ಲಿ ಒಂದು ಸೊಲ್ಲಿನ ತಿಳಿವಿನಿಂದ ಇನ್ನೊಂದು ಸೊಲ್ಲಿಗೆ ನೆಲೆಯನ್ನು ಪಡೆಯುವಂತಹ ಮುನ್ನಡೆತವನ್ನೇ ಹೆಚ್ಚಾಗಿ ಕಾಣ ಬಹುದು.
ಆದರೆ, ಯಾವುದೇ ಬಗೆಯ ಬರಹದಲ್ಲೂ ನೆಲೆಯ ಮುನ್ನಡೆತ ಒಂದೇ ಬಗೆಯದಾಗಿದ್ದರೆ ಬರಹ ತೀರಾ ಸಪ್ಪೆಯಾಗಿಬಿಡುತ್ತದೆ. ಒಳ್ಳೆಯ ಬರಹಗಾರರು ಹಲವು ಬಗೆಯ ಮುನ್ನಡೆತಗಳನ್ನು ತಮ್ಮ ಬರಹದಲ್ಲಿ ಅಳವಡಿಸ ಬಲ್ಲವರಾಗಿರುತ್ತಾರೆ.
ಎತ್ತುಗೆಗಾಗಿ, ಒಂದು ಕತೆಯನ್ನು ಬರೆಯುವಲ್ಲಿ ನೆಲೆಯನ್ನು ಬದಲಿಸುವ ಮೂಲಕ, ಒಂದೇ ವ್ಯಕ್ತಿ ನಡೆಸುವ ಎಸಕವನ್ನೂ ಹಲವು ಕೋನಗಳಿಂದ ತೋರಿಸಲು ಬರುತ್ತದೆ. ಇದಲ್ಲದೆ, ಒಂದು ಸೊಲ್ಲಿಗೆ ಅದರ ಹಿಂದಿರುವ ಸೊಲ್ಲಿನ ತಿಳಿವಿನಿಂದ ಹೊಸದೊಂದು ನೆಲೆಯನ್ನು ಆರಿಸಿಕೊಂಡಲ್ಲಿ, ಹಿಂದಿನ ಸೊಲ್ಲಿನಲ್ಲಿ ತಿಳಿಸಿರುವ ಎಸಕದ ಕುರಿತು ಹೆಚ್ಚಿನ ವಿವರಗಳನ್ನು ಕೊಡಲು ಬರುತ್ತದೆ. ಹೀಗೆ ಮಾಡುವ ಮೂಲಕ ಕತೆಯ ವೇಗವನ್ನೂ ಕಡಿಮೆ ಮಾಡಲು ಬರುತ್ತದೆ.
ಹೆಚ್ಚಿನೆಡೆಗಳಲ್ಲೂ ಹಿಂದಿನ ಸೊಲ್ಲಿನಿಂದ ಇಲ್ಲವೇ ಕುಳ್ಳಿಹ(ಸಂದರ್ಬ)ದಿಂದ ಸುಳುವಾಗಿ ಪಡೆಯಬಲ್ಲ ವಿಶಯವನ್ನೇ ಸೊಲ್ಲಿನ ನೆಲೆಯಾಗಿ ಆರಿಸಿಕೊಳ್ಳ ಲಾಗುತ್ತದೆ. ಆದರೆ, ಕೆಲವೊಮ್ಮೆ ಆ ರೀತಿ ಪಡೆಯಲು ಬಾರದಂತಹ ವಿಶಯ ವನ್ನೂ ನೆಲೆಯಾಗಿ ಬಳಸಿಕೊಳ್ಳಲು ಬರುತ್ತದೆ. ಎತ್ತುಗೆಗಾಗಿ, ರಾಜುವಿನ ಮಗ ಈ ಕೆಲಸವನ್ನು ಮಾಡಿದ್ದು ಎಂಬ ಸೊಲ್ಲಿನಲ್ಲಿ ಹಿಂದಿನ ಸೊಲ್ಲಿನಿಂದ ಇಲ್ಲವೇ ಕುಳ್ಳಿಹದಿಂದ ಪಡೆಯಬಲ್ಲ ವಿಶಯ ಈ ಕೆಲಸವನ್ನು ಯಾರೋ ಮಾಡಿದ್ದಾರೆ ಎಂಬುದಲ್ಲದೆ ರಾಜುವಿನ ಮಗ ಎಂಬುದಲ್ಲ.
ಒಂದು ವಿಶಯವನ್ನು ಓದುಗರ ಮುಂದಿಟ್ಟು ಅದರ ಕುರಿತಾಗಿ ವಿವರಗಳನ್ನು ಕೊಡುವ ಇಟ್ಟಳ ಚೆನ್ನಾಗಿ ಬರೆದ ಸೊಲ್ಲುಗಳಲ್ಲಿ ಮಾತ್ರವಲ್ಲದೆ, ಕುರಳು ಗಳಲ್ಲೂ ಇರುತ್ತದೆ. ಅವುಗಳಲ್ಲಿ ಮೊದಲು ಬರುವ ಸೊಲ್ಲು ಓದುಗರ ಮುಂದೆ ಒಂದು ವಿಶಯವನ್ನು ಇರಿಸುತ್ತದೆ; ಇದನ್ನು ಕುರಳಿನ ಗುರಿ ಎಂದು ಕರೆಯಬಹುದು. ಇಡೀ ಕುರಳಿನಲ್ಲಿ ಹೇಳುವುದೇನು ಎಂಬುದನ್ನು ಈ ಸೊಲ್ಲು ಚುಟುಕಾಗಿ ತಿಳಿಸುತ್ತದೆ. ಆಮೇಲೆ ಬರುವ ಸೊಲ್ಲುಗಳೆಲ್ಲ ಅದನ್ನೇ ಕೊಂಡಿಯಾಗಿರಿಸಿಕೊಂಡು, ಅದರ ಕುರಿತು ಹೆಚ್ಚಿನ ವಿವರಗಳನ್ನು ಕೊಡುತ್ತವೆ. ಇದಕ್ಕೆ ಬದಲು, ಅಶ್ಟೊಂದು ಚೆನ್ನಾಗಿ ಬರೆಯದಿರುವ ಕುರಳುಗಳಲ್ಲಿ ಈ ರೀತಿ ಗುರಿಯನ್ನು ಗುರುತಿಸಲು ಬರುವುದಿಲ್ಲ; ಓದುಗರು ಮೊದಲನೇ ಸೊಲ್ಲನ್ನು ಗುರಿಯೆಂದು ತಿಳಿದು ಮುಂದೆ ಓದಲು ಹೊರಟಾಗ, ಅದಕ್ಕೂ ಆಮೇಲಿನ ಸೊಲ್ಲುಗಳಿಗೂ ನಡುವೆ ಎಂತಹ ಪತ್ತುಗೆಯಿದೆ ಎಂಬುದೇ ಅವರಿಗೆ ಗೊತ್ತಾಗುವುದಿಲ್ಲ. ಇದರಿಂದಾಗಿ ಅವರು ಗೊಂದಲಕ್ಕೊಳಗಾಗುತ್ತಾರೆ.
ಚನ್ನಾಗಿ ಬರೆಯಲು ಕಲಿಯುವವರು ಸೊಲ್ಲುಗಳಿಗೆ ಬೇಕಾಗುವ ನೆಲೆಗಳನ್ನು ಮತ್ತು ಕುರಳುಗಳಿಗೆ ಬೇಕಾಗುವ ಗುರಿಗಳನ್ನು ಸರಿಯಾಗಿ ಆರಿಸಿಕೊಳ್ಳಲು ಕಲಿಯಬೇಕು, ಮತ್ತು ಅವುಗಳ ನಡುವಿನ ಕೊಂಡಿ ತಪ್ಪಿಹೋಗದಂತೆ ನೋಡಿ ಕೊಳ್ಳಲು ಕಲಿಯಬೇಕು. ತಾವು ಬರೆದಿರುವ ಬರಹದಲ್ಲಿ ಇಂತಹ ಹೊಂದಾಣಿಕೆ
ಕಾಣಿಸಿಕೊಳ್ಳುವುದಿಲ್ಲವಾದರೆ, ಸೊಲ್ಲುಗಳನ್ನು ಬದಲಾಯಿಸಿ, ಹೊಂದಾಣಿಕೆ ಬರುವ ಹಾಗೆ ಮಾಡಲು ಕಲಿಯಬೇಕು. ಹೀಗೆ ಮಾಡುವಲ್ಲಿ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
3.2.2 ಇಟ್ಟಳಗಳ ಆಯ್ಕೆ
ಯಾವುದೇ ಒಂದು ಸಂಗತಿಯನ್ನು ಹಲವು ಬಗೆಗಳಲ್ಲಿ ತಿಳಿಸಲು ಬರುತ್ತದೆ. ಎತ್ತುಗೆಗಾಗಿ, ಒಂದು ಸೊಲ್ಲಿನಲ್ಲಿ ಬರುವ ಪದಗಳ ಇಲ್ಲವೇ ಪದಕಂತೆಗಳ ಜಾಗವನ್ನು ಬದಲಾಯಿಸಿ, ಅದನ್ನು ಹಲವು ಬಗೆಗಳಲ್ಲಿ ಬರೆಯಲು ಬರುತ್ತದೆ. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
ರಾಜು ಜಾನಕಿಗೊಂದು ಪುಸ್ತಕ ಕೊಟ್ಟ (1) ಜಾನಕಿಗೆ ಒಂದು ಪುಸ್ತಕವನ್ನು ರಾಜು ಕೊಟ್ಟ (1ಚ) ಒಂದು ಪುಸ್ತಕವನ್ನು ರಾಜು ಜಾನಕಿಗೆ ಕೊಟ್ಟ (1ಟ) ಒಂದು ಪುಸ್ತಕವನ್ನು ಜಾನಕಿಗೆ ರಾಜು ಕೊಟ್ಟ
ಈ ಎಲ್ಲಾ ಸೊಲ್ಲುಗಳೂ ಒಂದೇ ಎಸಕವನ್ನು (ಎಂದರೆ, ರಾಜು ಕೊಡುವವ ನಾಗಿ, ಪುಸ್ತಕ ಕೊಡುವ ವಸ್ತುವಾಗಿ, ಮತ್ತು ಜಾನಕಿ ಅದನ್ನು ಪಡೆಯುವ ವ್ಯಕ್ತಿಯಾಗಿ ಇರುವಂತಹ ಎಸಕವನ್ನು) ತಿಳಿಸುತ್ತವೆ. ಆದರೆ, ಅವುಗಳ ನಡುವೆ ಕೆಲವು ನವಿರಾದ ಹುರುಳಿನ ವ್ಯತ್ಯಾಸಗಳಿರುವ ಕಾರಣ, ಬರೆಯುತ್ತಿರುವಾಗ ಕುಳ್ಳಿಹ(ಸಂದರ್ಬ)ಕ್ಕೆ ತಕ್ಕ ಹಾಗೆ ಅವುಗಳಲ್ಲೊಂದನ್ನು ಆರಿಸಿಕೊಳ್ಳಬೇಕಾಗುತ್ತದೆ. ಎತ್ತುಗೆಗಾಗಿ, ಜಾನಕಿಗೆ ಸಿಕ್ಕಿದ ಹಲವು ಪುಸ್ತಕಗಳಲ್ಲಿ ಒಂದನ್ನು ರಾಜು ಕೊಟ್ಟ ಎಂಬ ಹೆಚ್ಚಿನ ಹುರುಳು (1ಕ) ಸೊಲ್ಲಿಗಿದೆ; ಅಲ್ಲಿದ್ದ ಹಲವು ಪುಸ್ತಕ ಗಳಲ್ಲಿ ಒಂದನ್ನು ರಾಜು ಜಾನಕಿಗೆ ಕೊಟ್ಟ (ಮತ್ತು ಇನ್ನೊಂದನ್ನು ಬೇರಾರಿಗೋ ಕೊಟ್ಟ) ಎಂಬ ಹುರುಳು (1ಚ) ಸೊಲ್ಲಿಗಿದೆ; ಮತ್ತು ಅಲ್ಲಿದ್ದ ಪುಸ್ತಕಗಳಲ್ಲಿ ಒಂದನ್ನು ಜಾನಕಿಗೆ ಕೊಟ್ಟುದು ರಾಜು (ಮತ್ತು ಇನ್ನೊಂದನ್ನು ಆಕೆಗೆ ಬೇರಾರೋ ಕೊಟ್ಟುದು) ಎಂಬ ಹುರುಳು (1ಟ) ಸೊಲ್ಲಿಗಿದೆ. ಇವುಗಳಲ್ಲಿ ಯಾವ ಹುರುಳು ತನ್ನ ಬರಹಕ್ಕೆ ತಕ್ಕುದಾದುದು ಎಂಬುದನ್ನು ತಿಳಿದುಕೊಂಡು, ಅದನ್ನು ಕೊಡಬಲ್ಲ ಸೊಲ್ಲನ್ನು ಬರಹಗಾರನು ಆರಿಸಿಕೊಳ್ಳಬೇಕಾಗುತ್ತದೆ. (1)ನೇ ಸೊಲ್ಲಿನಲ್ಲಿ ಬರುವ ಎಸಕ ಪದವನ್ನು ಹೆಸರು ಪದವಾಗಿ ಬದಲಾಯಿಸಿದಲ್ಲಿ, ಅದರ ಪದ ಮತ್ತು ಪದಕಂತೆಗಳ ಜಾಗವನ್ನು ಬೇರೆಯೂ
ಹಲವು ಬಗೆಗಳಲ್ಲಿ ಬದಲಾಯಿಸಲು ಬರುತ್ತದೆ, ಮತ್ತು ಈ ಬದಲಾವಣೆಗಳ ಮೂಲಕವೂ ಹಲವು ನವಿರಾದ ಹುರುಳಿನ ವ್ಯತ್ಯಾಸಗಳನ್ನು ಸೂಚಿಸಲು ಬರುತ್ತದೆ. ಇದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
ಜಾನಕಿಗೆ ಒಂದು ಪುಸ್ತಕ ಕೊಟ್ಟುದು ರಾಜು (1ಪ) ಒಂದು ಪುಸ್ತಕವನ್ನು ಜಾನಕಿಗೆ ಕೊಟ್ಟುದು ರಾಜು ರಾಜು ಒಂದು ಪುಸ್ತಕ ಕೊಟ್ಟುದು ಜಾನಕಿಗೆ (1ಜ) ಒಂದು ಪುಸ್ತಕವನ್ನು ರಾಜು ಕೊಟ್ಟುದು ಜಾನಕಿಗೆ ರಾಜು ಜಾನಕಿಗೆ ಕೊಟ್ಟುದು ಒಂದು ಪುಸ್ತಕ (1ದ) ಜಾನಕಿಗೆ ರಾಜು ಕೊಟ್ಟುದು ಒಂದು ಪುಸ್ತಕ
ಎಸಕಪದವನ್ನು ಹೆಸರುಪದವಾಗಿ ಬದಲಾಯಿಸಿದ ಮೇಲೆ, ಅಂತಹ ಸೊಲ್ಲನ್ನು ಬೇರೆ ಸೊಲ್ಲಿನ ಅಂಗವಾಗಿಯೂ ಬಳಸಲು ಬರುತ್ತದೆ (ರಾಜು ಜಾನಕಿಗೆ ಒಂದು ಪುಸ್ತಕ ಕೊಟ್ಟುದನ್ನು ಯಾರೂ ಗಮನಿಸಲಿಲ್ಲ). ಇದಲ್ಲದೆ, ಎಸಕಪದವನ್ನು ಇನ್ನೊಂದು ಹೆಸರು ಪದದ ಇಲ್ಲವೇ ಎಸಕ ಪದದ ಪರಿಚೆ ಪದವಾಗಿ ಬದಲಾಯಿಸಿಯೂ ಆ ಸೊಲ್ಲನ್ನು ಇನ್ನೊಂದು ಸೊಲ್ಲಿನ ಅಂಗವಾಗಿ ಬಳಸಲು ಬರುತ್ತದೆ. ಇದನ್ನು ಕೆಳಗಿನ ಎರಡು ಸೊಲ್ಲುಗಳಲ್ಲಿ ಕಾಣಬಹುದು:
(1ಬ) ಜಾನಕಿಗೆ ಒಂದು ಪುಸ್ತಕ ಕೊಟ್ಟ ಹುಡುಗ (ರಾಜು)
ರಾಜು ಜಾನಕಿಗೆ ಕೊಟ್ಟ ಪುಸ್ತಕ
ಹೆಸರು ಪದಗಳೊಂದಿಗೆ ಸೊಲ್ಲಿನ ಪರಿಚೆ ಪದಕಂತೆಯನ್ನು ಬಳಸುವುದಕ್ಕೂ ಅದರ ಹೆಸರು ಪದಕಂತೆಯನ್ನು ಬಳಸುವುದಕ್ಕೂ ನಡುವೆ ವ್ಯತ್ಯಾಸವಿದೆ. ಎತ್ತುಗೆಗಾಗಿ, ಹುಡುಗ ಬೊಂಬಾಯಿಗೆ ಹೋಗಿದ್ದಾನೆ ಎಂಬ ಸೊಲ್ಲಿನಿಂದ ಇಂತಹ ಎರಡು ಬಗೆಯ ಪದಕಂತೆಗಳನ್ನು ಉಂಟುಮಾಡಿ ಬಳಸಿರುವುದನ್ನು ಕೆಳಗಿನ ಸೊಲ್ಲುಗಳಲ್ಲಿ ಕಾಣಬಹುದು:
ಬೊಂಬಾಯಿಗೆ ಹೋದ ಹುಡುಗ ನಾಳೆ ಬರುತ್ತಾನಂತೆ
(2ಚ) ಹುಡುಗ, ಬೊಂಬಾಯಿಗೆ ಹೋದವನು, ನಾಳೆ ಬರುತ್ತಾನಂತೆ
(2ಕ)ದಲ್ಲಿ ಯಾವ ಹುಡುಗನ ಕುರಿತು ಸುದ್ದಿಯನ್ನು ತಿಳಿಸಲಾಗಿದೆ ಎಂಬುದನ್ನು ಅದರಲ್ಲಿ ಬಂದಿರುವ ಬೊಂಬಾಯಿಗೆ ಹೋದ ಎನ್ನುವ ಪರಿಚೆ ಪದಕಂತೆ ಗೊತ್ತುಮಾಡುತ್ತದೆ; ಆದರೆ (2ಚ)ದಲ್ಲಿ ಬರುವ ಬೊಂಬಾಯಿಗೆ ಹೋದವನು ಎಂಬ ಪದಕಂತೆ ಹುಡುಗನ ಕುರಿತು ಹೆಚ್ಚಿನ ಸಂಗತಿಯೊಂದನ್ನು ತಿಳಿಸುತ್ತದಲ್ಲದೆ ಆ ಹುಡುಗ ಯಾರು ಎಂಬುದನ್ನು ಗೊತ್ತುಮಾಡಲು ಹೋಗುವುದಿಲ್ಲ. ಅದನ್ನು ಹಿಂದಿನ ಸೊಲ್ಲಿನಿಂದ ಇಲ್ಲವೇ ಕುಳ್ಳಿಹದಿಂದ ತಿಳಿದುಕೊಳ್ಳಬೇಕಾಗುತ್ತದೆ.
ಈ ರೀತಿ, ಒಂದೇ ಸಂಗತಿಯನ್ನು ಹಲವು ಬಗೆಯಲ್ಲಿ ಬರೆಯಲು ಬರುತ್ತದೆ ಎಂಬುದನ್ನು, ಮತ್ತು ಅವುಗಳ ಮೂಲಕ ಹಲವು ನವಿರಾದ ಹುರುಳುಗಳನ್ನು ಸೂಚಿಸಲು ಬರುತ್ತದೆ ಎಂಬುದನ್ನು ತಿಳಿದುಕೊಂಡಲ್ಲಿ, ಬರೆಯುವಾಗ ಅವುಗಳಲ್ಲಿ ಒಂದು ಬಗೆಯ ಸೊಲ್ಲಿನ ಬದಲು ಇನ್ನೊಂದು ಬಗೆಯ ಸೊಲ್ಲನ್ನು ಆಯ್ದುಕೊಳ್ಳುವ ಮೂಲಕ ಬರಹಗಾರರಿಗೆ ತಮ್ಮ ಮನಸ್ಸಿನಲ್ಲಿರುವ ಅನಿಸಿಕೆಯನ್ನು ಹೆಚ್ಚು ಚನ್ನಾಗಿ ತಿಳಿಸಲು ಬರುತ್ತದೆ.
ಇದಲ್ಲದೆ, ಉದ್ದಕ್ಕೂ ಒಂದೇ ಬಗೆಯ ಸೊಲ್ಲುಗಳನ್ನು ಬರೆದಲ್ಲಿ, ಅಂತಹ ಬರಹವನ್ನು ಓದುವವರಿಗೆ ಬೇಸರವಾಗುತ್ತದೆ. ಸೊಲ್ಲುಗಳು ಬಗೆಬಗೆಯವು ಗಳಾಗಿರಬೇಕು. ಮೇಲೆ ವಿವರಿಸಿದಂತಹ ಮಾರ್ಪಾಡುಗಳನ್ನು ಮಾಡುವ ಮೂಲಕ ಬರಹದಲ್ಲಿ ಬರುವ ಸೊಲ್ಲುಗಳು ಹಲವು ಬಗೆಯವುಗಳಾಗುವ ಹಾಗೆ ಮಾಡಿ, ಓದುಗರಿಗೆ ಅದರಲ್ಲಿ ಕುತೂಹಲವುಂಟಾಗುವಂತೆ ಮಾಡಬಹುದು.
ಬರೆಯಲು ಕಲಿಯುವವರು ಒಳ್ಳೇ ಬರಹಗಳನ್ನು ಎರಡನೇ ಇಲ್ಲವೇ ಮೂರನೇ ಬಾರಿ ಓದುವಾಗ, ಅವುಗಳಲ್ಲಿ ಸೊಲ್ಲುಗಳ ಆಯ್ಕೆಯನ್ನು ಹೇಗೆ ಮಾಡಲಾಗಿದೆ ಎಂಬುದನ್ನು ಗಮನಿಸಬೇಕು, ಮತ್ತು ಈ ಆಯ್ಕೆಯ ಮೂಲಕ, ಹೇಗೆ ಸೊಲ್ಲುಗಳು ಒಂದಕ್ಕೊಂದು ಹೊಂದಿಕೊಳ್ಳುವಂತೆ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಇಂತಹ ತಿಳಿವು ಬರೆಯುವ ಕೆಲಸವನ್ನು ನಡೆಸುವಲ್ಲಿ, ಮತ್ತು ಬರೆದುದನ್ನು ತಿದ್ದಿ ಸರಿಪಡಿಸುವಲ್ಲಿ ನೆರವಿಗೆ ಬರ ಬಲ್ಲುದು.
3.2.3 ಸರಿತೆರಪಿನ ಇಟ್ಟಳಗಳು
ಒಂದೇ ಬಗೆಯ ಎರಡು ಇಲ್ಲವೇ ಹೆಚ್ಚು ವಿಶಯಗಳನ್ನು ಸೂಚಿಸಬೇಕಾದಾಗ, ಸರಿತೆರಪಿನ ಇಟ್ಟಳಗಳನ್ನು ಬಳಸಲಾಗುತ್ತದೆ. ಎತ್ತುಗೆಗಾಗಿ, ಅವನು ಆಪೀಸಿಗೂ ಹೋಗಲಿಲ್ಲ, ಮದುವೆಗೂ ಬರಲಿಲ್ಲ ಎಂಬ ಸೊಲ್ಲಿನಲ್ಲಿ
ಎರಡು ವಿಶಯಗಳನ್ನು ಎದುರೆದುರಾಗಿ ನಿಲ್ಲಿಸಿ ಹೇಳಲಾಗಿದೆ, ಮತ್ತು ಇದಕ್ಕಾಗಿ ಸರಿತೆರಪಿನ ಇಟ್ಟಳವನ್ನು ಬಳಸಲಾಗಿದೆ. ಇಂತಹ ಇಟ್ಟಳಗಳಲ್ಲಿ ವಿಶಯಗಳನ್ನು ಜೋಡಿಸುವುದಕ್ಕಾಗಿ ಕನ್ನಡದಲ್ಲಿ ಮತ್ತು, ಇಲ್ಲವೇ, ಆಗಲಿ, ಊ, ಇಂತ ಮೊದಲಾದ ಪದ ಇಲ್ಲವೇ ಒಟ್ಟುಗಳನ್ನು ಬಳಸಲಾಗುತ್ತದೆ. ಅವುಗಳ ಮೂಲಕ ಸೂಚಿಸಬೇಕಾಗಿರುವ ವಿಶಯಗಳು ಎರಡಕ್ಕಿಂತ ಹೆಚ್ಚು ಇದ್ದಲ್ಲಿ, ಅವನ್ನು ಒಂದು ಪಟ್ಟಿಯಾಗಿಯೂ ಕೊಡಲಾಗುತ್ತದೆ.
ಸರಿತೆರಪಿನ ಇಟ್ಟಳಗಳಲ್ಲಿ ಬರುವ ವಿಶಯಗಳನ್ನು ಪದ, ಪದಕಂತೆ ತುಂಡು ಸೊಲ್ಲು, ಇಲ್ಲವೇ ಸೊಲ್ಲುಗಳ ಮೂಲಕ ಸೂಚಿಸಲಾಗುತ್ತದೆ. ಇಲ್ಲಿ ಬರಹ ಗಾರರು ಮುಕ್ಯವಾಗಿ ಗಮನಿಸಬೇಕಾಗಿರುವ ವಿಶಯವೇನೆಂದರೆ, ಇವುಗಳಲ್ಲಿ ಬರುವ ನುಡಿತಗಳು ಒಂದೇ ಬಗೆಯವಾಗಿರಬೇಕು. ಯಾಕೆಂದರೆ, ಅವು ಬೇರೆ ಬೇರೆ ಬಗೆಯವಾಗಿದ್ದರೆ ಓದುಗರಿಗೆ ತೊಂದರೆಯಾಗುತ್ತದೆ.
ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಎಲ್ಲಾ ನುಡಿತಗಳೂ ಒಂದೇ
ಬಗೆಯವಾಗಿಲ್ಲ:
ಇವತ್ತು ನಾವು ಮಾಡಿರುವ ಕೆಲಸಗಳು:
- ವಿಳಾಸಗಳನ್ನೆಲ್ಲ ಎಣ್ಣುಕದಲ್ಲಿ ಸೇರಿಸಿ ಅಚ್ಚು ಹಾಕಿದೆವು
- ಹೊದಿಕೆಗಳಿಗೆ ವಿಳಾಸಗಳನ್ನು ಅಂಟಿಸಿ ಸುತ್ತೋಲೆಗಳನ್ನು
ಅವುಗಳೊಳಗೆ ಹಾಕಿದೆವು
- ಅಂಚೆಯಲ್ಲಿ ಕಳಿಸಬೇಕಾದುವನ್ನು ಬೇರೆ ಇರಿಸಲಾಯಿತು
- ಇಪ್ಪತ್ತಯ್ದು ಕಡೆಗಳಿಗೆ ಸುತ್ತೋಲೆ ಮುಟ್ಟಿಸಿದ್ದು
ಈ ಎತ್ತುಗೆಯಲ್ಲಿ ಮೊದಲ ಮೂರು ನುಡಿತಗಳು ಸೊಲ್ಲುಗಳು; ಆದರೆ, ನಾಲ್ಕನೆಯದು ಒಂದು ಪದಕಂತೆ. ಇದಲ್ಲದೆ, ಮೂರನೇ ಸೊಲ್ಲಿನ ಇಟ್ಟಳ ಮೊದಲ ಎರಡು ಸೊಲ್ಲುಗಳ ಇಟ್ಟಳಕ್ಕಿಂತ ಬೇರಾಗಿದೆ. ಈ ವ್ಯತ್ಯಾಸಗಳಿಂದಾಗಿ ಮೇಲಿನ ಸರಿತೆರಪಿನ ಬರಹ ಓದುಗರಿಗೆ ತೊಂದರೆ ಕೊಡುತ್ತದೆ ಎಂಬುದನ್ನು ಗಮನಿಸಬಹುದು.
ವಿ.ಎಸ್. ಸಂಪತ್ಕುಮಾರಾಚಾರ್ ಅವರು ಬರೆದ ತ್ಯಾಗರಾಜ ಕ್ರುತಿ ಮಂಜರಿಯಲ್ಲಿ ಬಂದಿರುವ ಕೆಳಗಿನ ಸೊಲ್ಲಿನಲ್ಲಿಯೂ ಸರಿತೆರಪಿನ ಇಟ್ಟಳ ಸರಿಯಾಗಿಲ್ಲ ಮತ್ತು ಇದರಿಂದಾಗಿ ಅದು ಚನ್ನಾಗಿ ಓದಿಸಿಕೊಂಡು ಹೋಗುವು
…..ಕೆಲವರು ಆನಂದದಿಂದ ಮುದ್ದುಮಾಡುತ್ತಾ, ಕೆಲವರು ಯಮುನಾದೇವಿಯನ್ನು ಪ್ರಾರ್ಥಿಸುತ್ತಾ, ಮತ್ತೆ ಕೆಲವರ ಮುತ್ತಿನ ಸರಗಳು ಹೊಳೆಯುತ್ತಲೂ, ಕೆಲವರ ಸ್ತನಗಳು ಅಲ್ಲಾಡುತ್ತಲೂ …. ದೋಣಿಯನ್ನು ನಡೆಸುವ ದೃಶ್ಯವನ್ನು ನೋಡಿರಿ.
ಈ ಸೊಲ್ಲಿನಲ್ಲಿ ಮೊದಲ ಎರಡು ತುಂಡುಸೊಲ್ಲುಗಳು ಗೋಪಿಯರು ಏನು ಮಾಡುತ್ತಿದ್ದಾರೆ ಎಂಬುದನ್ನು ಸೂಚಿಸುತ್ತವೆ, ಮತ್ತು ಮುಂದಿನ ಎರಡು ತುಂಡುಸೊಲ್ಲುಗಳು ಅವರ ಒಡವೆಗಳು ಇಲ್ಲವೇ ಅಂಗಗಳು ಹೇಗಿವೆ ಎಂಬು ದನ್ನು, ಇಲ್ಲವೇ ಅವಕ್ಕೆ ಏನಾಗುತ್ತಿದೆ ಎಂಬುದನ್ನು ಸೂಚಿಸುತ್ತವೆ. ಮೊದಲ ಎರಡು ತುಂಡುಸೊಲ್ಲುಗಳು ಉತ್ತಾ ಒಟ್ಟಿನಲ್ಲಿ ಕೊನೆಗೊಳ್ಳುತ್ತವೆ, ಮತ್ತು ಮುಂದಿನ ಎರಡು ಸೊಲ್ಲುಗಳು ಉತ್ತಲೂ ಎಂಬುದರಲ್ಲಿ ಕೊನೆಗೊಳ್ಳುತ್ತವೆ. ಸರಿತೆರಪಿನ ಇಟ್ಟಳಗಳಲ್ಲಿ ಇಂತಹ ವ್ಯತ್ಯಾಸಗಳಿರಬಾರದು. ಅವುಗಳಿಂದಾಗಿ ಓದು ಎಡವುತ್ತದೆ.
ಇಲ್ಲಿ ತೊಂದರೆಯೇನೆಂದರೆ, ಇಂತಹ ವ್ಯತ್ಯಾಸಗಳು ತಮ್ಮ ಬರಹದಲ್ಲಿ ಸೇರಿಕೊಂಡಿವೆಯೆಂಬುದು ಬರೆಯುವವರಿಗೆ ಸಾಮಾನ್ಯವಾಗಿ ಗೊತ್ತೇ ಆಗುವುದಿಲ್ಲ. ಅವು ಗಮನಕ್ಕೆ ಬರಬೇಕಿದ್ದಲ್ಲಿ ಬರಹವನ್ನು ಗಟ್ಟಿಯಾಗಿ ಓದಿ ನೋಡಬೇಕು, ಇಲ್ಲವೇ ಬೇರೊಬ್ಬರ ಹತ್ತಿರ ಓದಲು ಹೇಳಬೇಕು. ಬರಹ ಗಳಲ್ಲಿ ಬರುವ ಇಟ್ಟಳಗಳ ತಿಳಿವೂ ಇಂತಹ ತಪ್ಪುಗಳನ್ನು ಗುರುತಿಸುವಲ್ಲಿ, ಮತ್ತು ಅವನ್ನು ಸರಿಪಡಿಸುವಲ್ಲಿ ಬರಹಗಾರರ ನೆರವಿಗೆ ಬರುತ್ತದೆ.
32.4 ತೋರುಪದಗಳ ಬಳಕೆ
ಸೊಲ್ಲುಗಳಲ್ಲಿ ಒಂದೇ ಹೆಸರುಪದವನ್ನು ಹಲವು ಬಾರಿ ಬಳಸಿದಲ್ಲಿ ಅದು ಅಶ್ಟೊಂದು ಚನ್ನಾಗಿ ಕಾಣಿಸುವುದಿಲ್ಲ. ಕೆಲವು ಸಂದರ್ಬಗಳಲ್ಲಿ ಅವನ್ನು ಬಳಸದಿದ್ದರೂ ಹುರುಳು ಗೊತ್ತಾಗುತ್ತದೆ, ಮತ್ತು ಬೇರೆ ಕೆಲವು ಸಂದರ್ಬಗಳಲ್ಲಿ ಅವುಗಳ ಬದಲು ಅವನು, ಅವಳು, ಅದು, ಇವನು, ಅಲ್ಲಿ, ಆಗ ಮೊದಲಾದ ತೋರುಪದಗಳನ್ನು ಬಳಸಲು ಬರುತ್ತದೆ.
ಆದರೆ, ಈ ಎರಡು ಬಗೆಯ ಬಳಕೆಗಳನ್ನು ನಡೆಸುವಲ್ಲೂ ಕೆಲವು ವಿಶಯಗಳ ಮಟ್ಟಿಗೆ ಎಚ್ಚರದಿಂದಿರಬೇಕಾಗುತ್ತದೆ. ಎತ್ತುಗೆಗಾಗಿ, ಕೆಲವೊಮ್ಮೆ ಇವು ಯಾವ ಹೆಸರುಪದವನ್ನು ಸೂಚಿಸುತ್ತವೆ ಎಂಬ ವಿಶಯದಲ್ಲಿ ಸಂಶಯ ವುಂಟಾಗಬಲ್ಲುದು, ಮತ್ತು ಅದರಿಂದಾಗಿ ಇಪ್ಪುರುಳು ಕಾಣಿಸಿಕೊಳ್ಳಬಲ್ಲುದು.
ಒಂದು ಸೊಲ್ಲಿನಲ್ಲಿ ಬಂದಿರುವ ನೆಲೆಯೇ ಅದರ ಮುಂದೆ ಬಂದಿರುವ ಸೊಲ್ಲಿನಲ್ಲಿಯೂ ನೆಲೆಯಾಗಿ ಬಂದಿದೆಯಾದರೆ, ಅದನ್ನು ಗುರುತಿಸದಿರ ಬಹುದು, ಇಲ್ಲವೇ ಒಂದು ತೋರುಪದದ ಮೂಲಕ ಗುರುತಿಸಬಹುದು. ಆದರೆ, ನೆಲೆ ಬದಲಾವಣೆಯಾಗಿರುವಲ್ಲೂ ಅದನ್ನು ಗುರುತಿಸದೆ ಬಿಟ್ಟರೆ, ಇಲ್ಲವೇ ತೋರುಪದದಿಂದ ಗುರುತಿಸಹೋದರೆ, ಸೊಲ್ಲುಗಳ ನಡುವಿನ ಹೊದ್ದಿಕೆ ತಪ್ಪಿಹೋಗುತ್ತದೆ, ಮತ್ತು ಓದುಗರಿಗೆ ತೊಂದರೆಯಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಸೊಲ್ಲುಗಳನ್ನು ಗಮನಿಸಬಹುದು:
ರಾಜು ಹರಿಗೆ ಮನೆ ಕಟ್ಟುವಲ್ಲಿ ನೆರವು ನೀಡಿದ (3ಚ) ಆತ ಗಾರೆ ಕೆಲಸ ಮಾಡಿದ, ಮತ್ತು ಹರಿ ಮರದ ಕೆಲಸ ಮಾಡಿದ
(3ಟ) ಆತ ಮೊದಲಿಗೆ ಗಾರೆ ಕಲಿಸತೊಡಗಿದ (3ತ) ಆತ ಮೊದಲಿಗೆ ಹಲಿಗೆಗಳನ್ನು ತುಂಡಿಸತೊಡಗಿದ.
(3ಚ) ಸೊಲ್ಲಿನ ಬಳಿಕ (3ಟ) ಸೊಲ್ಲನ್ನು ಬಳಸಿದಲ್ಲಿ ಹೊದ್ದಿಕೆ ತಪ್ಪುವು ದಿಲ್ಲ. ಇದಕ್ಕೆ ಬದಲು, (3ಚ) ಸೊಲ್ಲಿನ ಬಳಿಕ (3ತ) ಸೊಲ್ಲನ್ನು ಬಳಸಿದಲ್ಲಿ ಹೊದ್ದಿಕೆ ತಪ್ಪುತ್ತದೆ. (3ತ)ದಲ್ಲಿ ನೆಲೆ ಬದಲಾಗಿರುವುದೇ ಇದಕ್ಕೆ ಕಾರಣ. (3ಕ) ಮತ್ತು (3ಚ) ಸೊಲ್ಲುಗಳಲ್ಲಿ ರಾಜು ಪದ ನೆಲೆಯಾಗಿ ಬಂದಿದೆ; (3ಟ) ಸೊಲ್ಲಿನಲ್ಲಿ ಇದೇ ಪದ ನೆಲೆಯಾಗಿ ಬಂದಿದ್ದು, ಅದನ್ನು ಗುರುತಿಸಲು ಆತ ಪದವನ್ನು ಬಳಸಿರುವ ಕಾರಣ ತೊಂದರೆಯಿಲ್ಲ.
ಆದರೆ, (3ತ) ಸೊಲ್ಲಿನಲ್ಲಿ ನೆಲೆಯಾಗಿ ಹರಿ ಪದ ಬರಬೇಕಾಗಿದೆ; ಯಾಕೆಂದರೆ, ಹಲಿಗೆಯನ್ನು ತುಂಡಿಸುತ್ತಿರುವುದು ಹರಿಯಲ್ಲದೆ ರಾಜುವಲ್ಲ; ಈ ಬದಲಾಗಿರುವ ನೆಲೆಯನ್ನು ಆತ ಪದದ ಮೂಲಕ ಗುರುತಿಸಲು ಹೊರಟಕಾರಣ, ಇಲ್ಲಿ ಹೊದ್ದಿಕೆ ತಪ್ಪುತ್ತದೆ.
3.2.5 ಹೊದ್ದಿಕೆಯ ಗುರುತುಗಳು
ಬರಹಗಳಲ್ಲಿ ಆದರೆ, ಅಲ್ಲದೆ, ಹಾಗಾಗಿ, ಯಾಕೆಂದರೆ ಮೊದಲಾದ ಕೆಲವು ಬಗೆಯ ಹೊದ್ದಿಕೆಯ ಗುರುತುಗಳನ್ನು ಬಳಸಲಾಗುತ್ತದೆ. ಈ ಗುರುತು ಗಳು ಒಂದು ಸೊಲ್ಲು ತಿಳಿಸುವ ವಿಶಯ ಅದರ ಬಳಿಕ ಬರುವ ಇನ್ನೊಂದು ಸೊಲ್ಲು ತಿಳಿಸುವ ವಿಶಯದೊಂದಿಗೆ ಹೊಂದಿಕೊಳ್ಳುವ ಹಾಗೆ ಮಾಡುತ್ತವೆ
ಮತ್ತು ಅವುಗಳ ನಡುವಿನ ಪತ್ತುಗೆ (ಸಂಬಂದ) ಎಂತಹದು ಎಂಬುದನ್ನು ಓದುಗರು ಸುಳುವಾಗಿ ಕಂಡುಕೊಳ್ಳುವ ಹಾಗೆ ಮಾಡುತ್ತವೆ.
ವಿಶಯಗಳ ನಡುವಿನ ಪತ್ತುಗೆಗಳು ಮತ್ತು ಅವನ್ನು ಸೂಚಿಸುವ ಗುರುತು ಗಳು ಹಲವು ಬಗೆಯವಾಗಿರಬಲ್ಲುವು. ಅವುಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಕೊಡಲಾಗಿದೆ:
(1) ಎರಡು ವಿಶಯಗಳನ್ನು ಜೋಡಿಸುವವು: ಅಲ್ಲದೆ, ಇದಲ್ಲದೆ,
ಮೊದಲನೆಯದಾಗಿ …. ಕೊನೆಯದಾಗಿ
(2) ಎರಡರ ನಡುವಿನ ವ್ಯತ್ಯಾಸವನ್ನು ತೋರಿಸುವವು: ಆದರೆ,
ಆದರೂ, ಹೀಗಿದ್ದರೂ, ಇಲ್ಲವಾದರೆ (3) ಕಾರಣ ತಿಳಿಸುವವು: ಯಾಕೆಂದರೆ (4) ಒತ್ತಿಹೇಳುವವು: ನಿಜಕ್ಕೂ, ಕಂಡಿತವಾಗಿಯೂ
ಬರಹಗಳಲ್ಲಿ ಇವನ್ನು ಎಲ್ಲಿ ಮತ್ತು ಹೇಗೆ ಬಳಸಬೇಕು ಎಂಬುದನ್ನು ಬರಹಗಾರರು ತಿಳಿದಿರಬೇಕು. ಬರಹ ಒಂದೇ ಬಗೆಯದಾಗದ ಹಾಗೆ, ಕೆಲವೊಮ್ಮೆ ಇಂತಹ ಹೊದ್ದಿಕೆಯ ಗುರುತುಗಳ ಬದಲು, ಎರಡು ಸೊಲ್ಲು ಗಳನ್ನು ಒಟ್ಟುಸೇರಿಸಿಯೂ ಬರೆಯಬಹುದು.
ಎತ್ತುಗೆಗಾಗಿ, ರಾಜು ಮದುವೆಗೆ ಬಂದಿದ್ದ. ಆದರೆ, ನಾನು ಅವನನ್ನು ಮಾತನಾಡಿಸಲಿಲ್ಲ ಎಂಬುದಾಗಿ ಬರೆಯುವ ಬದಲು, ರಾಜು ಮದುವೆಗೆ ಬಂದಿದ್ದರೂ ನಾನು ಅವನನ್ನು ಮಾತನಾಡಿಸಲಿಲ್ಲ ಎಂಬುದಾಗಿ ಬರೆಯಬಹುದು.
ಸೊಲ್ಲುಗಳು ತಿಳಿಸುವ ವಿಶಯಗಳ ನಡುವಿನ ಪತ್ತುಗೆಯ ಹಾಗೆ, ಕುರಳು ಗಳು ತಿಳಿಸುವ ವಿಶಯಗಳ ನಡುವಿನ ಪತ್ತುಗೆಯನ್ನೂ ಹೊದ್ದಿಕೆಯ ಗುರುತುಗಳ ಮೂಲಕ ಸೂಚಿಸಬೇಕಾಗುತ್ತದೆ. ಆದರೆ, ಸಾಮಾನ್ಯವಾಗಿ ಕುರಳಿನಲ್ಲಿ ಬರುವ ಮೊದಲನೆಯ ಸೊಲ್ಲನ್ನು ಇದಕ್ಕಾಗಿ ಬಳಸಲಾಗುತ್ತದೆ.
ಎತ್ತುಗೆಗಾಗಿ, ಒಂದು ಕುರಳು ಅದಕ್ಕಿಂತ ಹಿಂದಿನ ಕುರಳು ಹೇಳಿದ್ದಕ್ಕಿಂತ ತೀರ ಬೇರಾಗಿರುವ ವಿಶಯವನ್ನು ತಿಳಿಸುವುದಿದ್ದಲ್ಲಿ, ಆ ಕುರಳನ್ನು ಆದರೆ, ಎಲ್ಲರೂ ಈ ಮಾತನ್ನು ಒಪ್ಪುವುದಿಲ್ಲ ಎಂಬಂತಹ ಸೊಲ್ಲಿನಿಂದ ಸುರುಮಾಡಬಹುದು. ಇಂತಹ ಹೊದ್ದಿಕೆಯ ಗುರುತುಗಳ ಮೂಲಕ ಓದುಗರು ಕುರಳಿನಿಂದ ಕುರಳಿಗೆ ಸುಳುವಾಗಿ ಸಾಗುವ ಹಾಗೆ ಮಾಡಬಹುದು.
3.3 ಬರಹದ ಗುರಿ
ಬರಹದ ಗುರಿಯೇನು ಎಂಬುದರ ಮೇಲೆಯೂ ಅದರಲ್ಲಿ ಬರುವ ಪದಗಳ ಬಗೆ, ಸೊಲ್ಲುಗಳ ಇಟ್ಟಳ, ಕುರಳುಗಳ ಬಗೆ, ನೆಲೆಗಳ ಮುನ್ನಡೆತ, ಸೊಲ್ಲುಗಳ ತಿಣ್ಮೆ(ನಿಬಿಡತೆ) ಮೊದಲಾದುವು ಅವಲಂಬಿಸಿರುತ್ತವೆ. ಹಾಗಾಗಿ, ಬರಹ ಗಾರರು ತಮ್ಮ ಬರಹದ ಗುರಿಯೇನು ಎಂಬುದನ್ನು ಮನಸ್ಸಿನಲ್ಲಿರಿಸಿಕೊಂಡು, ಅದನ್ನು ಈಡೇರಿಸುವ ಹಾಗೆ ತಮ್ಮ ಬರಹವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ. ಬರಹಗಳನ್ನು ಮುಕ್ಯವಾಗಿ ನಾಲ್ಕು ಬಗೆಗಳಲ್ಲಿ ಹಂಚಬಹುದು: ಕಯ್ಪಿಡಿ, ಒರೆತ(ವಿಮರ್ಶೆ), ಕಿರುಬರಹ ಮೊದಲಾದ ತಿಳಿವಿನ ಬರಹಗಳು, ಹೇಳಿವೆ (ವರದಿ), ಸುದ್ದಿ ಮೊದಲಾದ ಕೊಗೆತ(ನಿರೂಪಣೆ)ಗಳು, ಬಯಲರಿಕೆ (ಜಾಹೀ ರಾತು), ಕೋರಿಕೆ, ಕಿತ್ತರಿಕೆ(ಕರಪತ್ರ) ಮೊದಲಾದ ಒಲಿಕೆಗಳು (ಒಲಿಸಿಕೊಳ್ಳುವ ಬರಹಗಳು), ಮತ್ತು ಕತೆ, ಕವಿತೆ ಮೊದಲಾದ ನಲ್ಬರಹಗಳು. ಇವುಗಳಲ್ಲಿ ಒಂದೊಂದು ಬಗೆಯಲ್ಲೂ ಹಲವು ಒಳಬಗೆಗಳನ್ನು ಕಾಣಬಹುದು.
ಎತ್ತುಗೆಗಾಗಿ, ಜನಸಾಮಾನ್ಯರಿಗಾಗಿ ಬರೆದ ತಿಳಿವಿನ ಬರಹಗಳಿಗೂ ಅರಿವಿಗರಿಗಾಗಿ ಬರೆದ ತಿಳಿವಿನ ಬರಹಗಳಿಗೂ ನಡುವೆ ಬರಹದ ಇಟ್ಟಳದಲ್ಲಿ ಮತ್ತು ಪದಗಳ ಆಯ್ಕೆಯಲ್ಲಿ ಹಲವು ವ್ಯತ್ಯಾಸಗಳಿರುತ್ತವೆ. ಅರಿವಿಗರಿಗಾಗಿ ಬರೆದ ಬರಹಗಳಲ್ಲಿ ಪದಗಳ ತಿಣ್ಮೆ ಹೆಚ್ಚು. ಅವುಗಳಲ್ಲಿ ಹಲವಾರು ಅರಿಮೆಯ (ಪಾರಿಬಾಶಿಕ) ಪದಗಳೂ ಬಳಕೆಯಾಗುತ್ತಿರುತ್ತವೆ. ಇವುಗಳ ಮೂಲಕ ವಿಶಯ ವನ್ನು ಅಡಕವಾಗಿ ಮತ್ತು ಇಪ್ಪುರುಳಿನ ತೊಡಕಿಲ್ಲದಂತೆ ತಿಳಿಸಲು ಬರುತ್ತದೆ. ಜನಸಾಮಾನ್ಯರಿಗೆ ಬರೆದ ತಿಳಿವಿನ ಬರಹಗಳಲ್ಲಿ ಇಂತಹ ಪದಗಳು ಬರುವುದು ಅಪರೂಪ.
ಅರಿವಿಗರಿಗಾಗಿ ಬರೆದ ಬರಹಗಳಲ್ಲಿ ಎಸಕಗಳನ್ನು ಹೆಸರುಗಳಾಗಿ ಮಾರ್ಪಡಿ ಸಿರುವ ಸೊಲ್ಲರಿಮೆಯ ಮಾರ್ಪುರುಳುಗಳನ್ನು ಆಗಾಗ ಬಳಸುತ್ತಿರಬೇಕಾಗುತ್ತದೆ. ಎಸಕ(ಕ್ರಿಯೆ)ಗಳನ್ನು ತುಂಬಾ ಅಡಕವಾಗಿ ಬರೆಯಲು, ವಿಶಯಗಳಾಗಿ ಕಾಣಲು, ಮತ್ತು ಅವುಗಳ ಕುರಿತು ಇನ್ನೂ ಹೆಚ್ಚಿನ ಸಂಗತಿಗಳನ್ನು ತಿಳಿಸಲು ಈ ಮಾರ್ಪಾಡು ನೆರವಿಗೆ ಬರುತ್ತದೆ. ಆದರೆ, ಜನಸಾಮಾನ್ಯರಿಗಾಗಿ ಬರೆದ ಬರಹ ಗಳಲ್ಲಿ ಎಸಕಗಳನ್ನು ಎಸಕಗಳಾಗಿಯೇ ಬರೆಯಬೇಕಾಗುತ್ತದೆ. ಇಲ್ಲವಾದರೆ ಅವರಿಗೆ ಬರಹಗಳಿಂದ ತಿಳಿವನ್ನು ಪಡೆಯಲು ತೊಂದರೆಯಾಗುತ್ತದೆ.
ನಲ್ಬರಹ ಮತ್ತು ಇತರ ಬರಹಗಳ ನಡುವೆಯೂ ಪದಗಳ ಮತ್ತು ಸೊಲ್ಲಿಟ್ಟಳಗಳ ಆಯ್ಕೆಯಲ್ಲಿ ಹಲವು ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೂ ಈ ಎರಡು ಬಗೆಯ ಬರಹಗಳಿಗೆ ಬೇರೆ ಬೇರೆ ಗುರಿಗಳಿರುವುದೇ
ಮುಕ್ಯ ಕಾರಣ. ಬೇರೆ ಬಗೆಯ ಬರಹಗಳಲ್ಲಿ ಕಾಣಿಸದಿರುವಂತಹ ಸೂಳುನುಡಿ (ಸಂಬಾಶಣೆ)ಗಳ ಬಳಕೆಯನ್ನು ಕತೆ-ಕಾದಂಬರಿಗಳಲ್ಲಿ ಮತ್ತು ನಾಟಕಗಳಲ್ಲಿ ಕಾಣಬಹುದು. ಸೊಲ್ಲುಗಳಿಗೆ ಜೀವ ತುಂಬಿಸುವಂತಹ ಪರಿಚೆ ಪದಗಳು, ಮಾರ್ಪುರುಳುಗಳು, ಹೋಲಿಕೆಯ ಪದಗಳು, ಅಣಕುಪದಗಳು ಮೊದಲಾದು ವನ್ನು ಬೇರೆ ಬರಹಗಳಿಗಿಂತಲೂ ನಲ್ಬರಹಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಬರೆಯಲು ಕಲಿಯುವವರು ತಮ್ಮ ಮುಂದಿರುವ ಗುರಿಗೆ ಬರವಣಿಗೆಯನ್ನು ಹೊಂದಿಸಿಕೊಳ್ಳಲು ಕಲಿಯಬೇಕಾಗುತ್ತದೆ. ಬೇರೆ ಬೇರೆ ಗುರಿಗಳಿಗಾಗಿ ಬರೆಯ ಲಾಗಿರುವ ಬರಹಗಳನ್ನು ಓದಿ ನೋಡಿ, ಅವು ಹೇಗೆ ಆ ಗುರಿಗಳನ್ನು ತಲಪುವು ದಕ್ಕಾಗಿ ನುಡಿಯನ್ನು ಬಳಸಿಕೊಂಡಿವೆ ಎಂಬುದನ್ನು ಅವರು ತಿಳಿದುಕೊಳ್ಳ ಬೇಕಾಗುತ್ತದೆ. ಹೀಗೆ ತಿಳಿದುಕೊಳ್ಳುವಲ್ಲಿ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
3.4 ಬರಹದ ಮರುನೋಟ
ಬರಹವನ್ನೊಮ್ಮೆ ಬರೆದು ಮುಗಿಸಿದ ಮೇಲೆ, ಅದನ್ನು ಮರುನೋಟಕ್ಕೆ ಎತ್ತಿ ಕೊಳ್ಳಬೇಕು. ಈ ಸಮಯದಲ್ಲಿ ಬರಹಗಾರರು ತಮ್ಮ ಬರಹವನ್ನು ಓದುಗರು ಯಾವ ಬಗೆಯಲ್ಲಿ ಕಾಣಬಹುದೋ ಅದೇ ಬಗೆಯಲ್ಲಿ ಕಾಣಲು ಪ್ರಯತ್ನಿಸು ತ್ತಾರೆ. ಬರೆಯುತ್ತಿರುವ ಸಮಯದಲ್ಲಿ ಅವರಿಗೆ ಈ ಓದುಗರ ನೋಟ ದೊರೆಯುವುದಿಲ್ಲ.
ತಮ್ಮ ಬರಹವನ್ನು ಬರೆದು ಮುಗಿಸಿದ ಕೂಡಲೇ ಅದನ್ನು ಮರುನೋಟಕ್ಕೆ ಎತ್ತಿಕೊಳ್ಳುವ ಬದಲು, ಕೆಲವು ದಿನಗಳ ಮಟ್ಟಿಗಾದರೂ ಅದನ್ನು ಬದಿಗಿರಿಸಿ, ಆಮೇಲೆ ತೊಡಗಬೇಕು. ಇದರಿಂದ ಬರೆದವರಿಗೆ ಓದುಗರ ನೋಟ ದೊರಕಲು ಹೆಚ್ಚು ಸುಳುವಾಗುತ್ತದೆ. ಇದಲ್ಲದೆ, ತಾವು ಬರೆದುದನ್ನು ಗಟ್ಟಿಯಾಗಿ ಓದುವ ಮೂಲಕವೂ ಅವರು ಓದುಗರ ನೋಟ ಎಂತಹದಿರಬಹುದು ಎಂಬುದನ್ನು ಕಂಡುಕೊಳ್ಳಬಹುದು.
ಮರುನೋಟದ ಸಮಯದಲ್ಲಿ ಬರಹ ಯಾವ ರೀತಿಯಲ್ಲಿ ಓದಿಸಿಕೊಂಡು ಹೋಗುತ್ತದೆ, ಅದರಲ್ಲಿ ವಿಶಯಗಳನ್ನು ಕೊಟ್ಟಿರುವ ಓರಣ ಸರಿಯಾಗಿದೆಯೇ, ಬರಹ ಎಲ್ಲಾದರೂ ಮುಕ್ಯ ವಿಶಯವನ್ನು ಮುಂದುವರಿಸುವಲ್ಲಿ ದಾರಿ ತಪ್ಪಿದೆಯೇ, ಒಮ್ಮೆ ಹೇಳಿದ್ದನ್ನೇ ಇನ್ನೊಮ್ಮೆ ಹೇಳಲಾಗಿದೆಯೇ, ಮುಕ್ಯ ವಿಶಯಕ್ಕೆ ಯಾವ ರೀತಿಯಲ್ಲೂ ಸಂಬಂದಿಸದಂತಹ ವಿಶಯಗಳು ಅದರಲ್ಲಿ ಸೇರಿಕೊಂಡಿವೆಯೇ ಎಂಬಂತಹ ಸಂಗತಿಗಳ ಕಡೆಗೆ ಗಮನಹರಿಸಬೇಕಾಗುತ್ತದೆ.
ಬರಹದ ಮುನ್ನೋಟ ಮತ್ತು ಮುಕ್ತಾಯಗಳನ್ನು ಒಟ್ಟಿಗೆ ಓದಿನೋಡಿ, ಅವು ಒಂದಕ್ಕೊಂದು ಪೂರಕವಾಗಿವೆಯೇ ಎಂಬುದನ್ನು ಗಮನಿಸಬೇಕು. ಮುನ್ನೋಟದಲ್ಲಿ ಬರಹದ ಗುರಿಯೇನು ಎಂಬುದನ್ನು ಸ್ಪಶ್ಟವಾಗಿ ತಿಳಿಸಿರಬೇಕು, ಮತ್ತು ಮುಕ್ತಾಯದಲ್ಲಿ ಬರಹ ಯಾವ ರೀತಿಯಲ್ಲಿ ಈ ಗುರಿಯನ್ನು ಈಡೇರಿಸಿದೆ ಎಂಬುದನ್ನು ತಿಳಿಸಿರಬೇಕು.
ಇದಲ್ಲದೆ ಬರಹವನ್ನು ಓದಿನೋಡುತ್ತಿರುವಾಗ, ನಿಜಕ್ಕೂ ಅದು ತನ್ನ ಗುರಿಯನ್ನು ಸರಿಯಾಗಿ ಗಮನದಲ್ಲಿರಿಸಿಕೊಂಡು ಮುಂದುವರಿಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವಿಶಯದಿಂದ ಇನ್ನೊಂದು ವಿಶಯಕ್ಕೆ ಅದು ಸಲೀಸಾಗಿ ನೆಗೆಯುತ್ತಿರಬೇಕು, ಮತ್ತು ಒಂದೊಂದು ವಿಶಯಕ್ಕೂ ಅದನ್ನು ಬೆಂಬಲಿಸುವಂತಹ ಎತ್ತುಗೆಗಳನ್ನು ಮತ್ತು ಪುರಾವೆಗಳನ್ನು ಸಾಕಶ್ಟು ಕೊಡುತ್ತಿರಬೇಕು. ಹೀಗೆ ಕೊಟ್ಟಿಲ್ಲವಾದಲ್ಲಿ, ಅವನ್ನು ಸೇರಿಸಿಕೊಳ್ಳುವ ಕೆಲಸವನ್ನು ಮರುನೋಟದ ಸಮಯದಲ್ಲಿ ನಡೆಸಬಹುದು.
ಅಶ್ಟೊಂದು ಮುಕ್ಯವಲ್ಲದ ವಿಶಯದ ಕುರಿತು ತುಂಬಾ ಬರೆದಿದೆಯಾದರೆ, ಅದನ್ನು ಬರಹದಿಂದ ತೆಗೆದುಹಾಕಬೇಕು. ಈ ಬಾಗವನ್ನು ಬರಹಗಾರರು ತುಂಬಾ ಚನ್ನಾಗಿ ಬರೆದಿರಬಹುದು. ಹಾಗಿದ್ದರೂ, ಅದು ಮುಕ್ಯ ವಿಶಯವನ್ನು ಬೆಳೆಸುವುದಿಲ್ಲವಾದರೆ, ಅದನ್ನು ಹೊಡೆದು ಹಾಕಲು ಹಿಂಜರಿಯಬಾರದು. ಬರಹದಲ್ಲಿ ಹಲವಾರು ವಿಶಯಗಳು ತುಂಬಿಕೊಂಡಿವೆಯಾದರೆ, ಮತ್ತು ಬರಹದ ಇಟ್ಟಳ ತುಂಬಾ ತೊಡಕಿನದಾಗಿದೆಯಾದರೆ, ಅದರ ಅಡಕಬರಹ ವೊಂದನ್ನು ತಯಾರಿಸಿಕೊಳ್ಳುವುದು ಒಳ್ಳೆಯದು. ಇದಕ್ಕಾಗಿ ಅದರಲ್ಲಿ ಬರುವ ವಿಶಯಗಳನ್ನೆಲ್ಲ ಒಂದೊಂದಾಗಿ, ಚಿಕ್ಕ ಚಿಕ್ಕ ಸೊಲ್ಲುಗಳ ಮೂಲಕ, ಬೇರೊಂದು ಕಾಗದದಲ್ಲಿ ಗುರುತಿಸುತ್ತಾ ಹೋಗಬೇಕು.
ಇಂತಹ ಅಡಕಬರಹದಿಂದ ಬರಹದಲ್ಲಿ ಬರುವ ವಿಶಯಗಳ ಓರಣ ಸರಿಯಾಗಿದೆಯೇ ಎಂಬುದನ್ನು ಕಂಡುಹಿಡಿಯಲು, ಮತ್ತು ಓರಣ ಸರಿಯಾಗಿಲ್ಲ ವಾದರೆ ವಿಶಯಗಳ ಜಾಗವನ್ನು ಬದಲಾಯಿಸುವ ಮೂಲಕ ಅದನ್ನು ಸರಿಪಡಿಸಲು ಬರುತ್ತದೆ. ಇದಲ್ಲದೆ, ಮುಕ್ಯ ವಿಶಯಕ್ಕೆ ಸಂಬಂದಿಸದಂತಹ ವಿಶಯಗಳು ಬರಹದಲ್ಲಿ ಬಂದಿವೆಯಾದರೆ, ಅವನ್ನು ಗುರುತಿಸಿ ಬರಹದಿಂದ ತೆಗೆದುಹಾಕುವುದರಲ್ಲೂ ಇಂತಹ ಅಡಕಬರಹ ನೆರವಾಗುತ್ತದೆ.
ಬರಹಕ್ಕೆ ಒಳಒಕ್ಕಣೆ(ಒಳ ತಲೆಬರಹ)ಗಳನ್ನು ಕೊಟ್ಟಲ್ಲಿ, ಮತ್ತು ಈ ಒಳಒಕ್ಕಣೆಗಳಿಗೆ, ಈ ಪುಸ್ತಕದಲ್ಲಿ ಮಾಡಿದ ಹಾಗೆ, ಅಂಕೆಗಳನ್ನು ಕೊಟ್ಟಲ್ಲಿ, ಅದರಲ್ಲಿ ವಿಶಯಗಳನ್ನು ಕೊಟ್ಟಿರುವ ಬಗೆ ಸರಿಯಾಗಿದೆಯೇ ಎಂಬುದನ್ನು
ಕಂಡುಕೊಳ್ಳಲು ಸುಳುವಾಗುತ್ತದೆ. ಒಂದು ಪಸುಗೆಯ (ಅದ್ಯಾಯದ) ಎಲ್ಲಾ ಒಳಒಕ್ಕಣೆಗಳನ್ನೂ ಒಟ್ಟುಸೇರಿಸಿ ಪರಿಶೀಲಿಸಿದಾಗ ಈ ವಿಶಯ ಗೊತ್ತಾಗುತ್ತದೆ. ಮರುನೋಟವನ್ನು ಎಣ್ಣುಕ(ಕಂಪ್ಯೂಟರ್)ದಲ್ಲೇನೇ ನಡೆಸಹೋದರೆ, ಅದು ಅಶ್ಟೊಂದು ಸರಿಯಾಗಿ ನಡೆಯಲಾರದು. ಯಾಕೆಂದರೆ, ಎಣ್ಣುಕದಲ್ಲಿ ಒಮ್ಮೆಗೆ ಒಂದೆರಡು ಕುರಳುಗಳನ್ನು ಮಾತ್ರ ನೋಡಲು ಬರುತ್ತದೆ. ಇಡೀ ಬರಹ ಕಣ್ಣೆದುರು ನಿಲ್ಲಬೇಕಿದ್ದಲ್ಲಿ, ಅದನ್ನು ಕಾಗದದ ಮೇಲೆ ಅಚ್ಚುಮಾಡಿಸಿಕೊಳ್ಳ ಬೇಕಾಗುತ್ತದೆ. ಹೀಗೆ ಅಚ್ಚುಮಾಡಿಸಿಕೊಂಡ ಬರಹವನ್ನು ಒಂದು ಪುಸ್ತಕದ ಹಾಗೆ ಜೋಡಿಸಿಕೊಂಡರೆ ಇನ್ನೂ ಒಳ್ಳೆಯದು.
ಮರುನೋಟದ ಸಮಯದಲ್ಲಿ ಬರಹವನ್ನು ಮಾರ್ಪಡಿಸಿದಶ್ಟೂ ಅದು ಒಳ್ಳೆಯದಾಗುತ್ತಾ ಹೋಗುತ್ತದೆ. ಹಾಗಾಗಿ, ಅದರಲ್ಲಿ ಮಾರ್ಪಾಡುಗಳನ್ನು ಮಾಡಲು ಹಿಂಜರಿಯಬಾರದು. ಕೆಲವೊಮ್ಮೆ ಇಡೀ ಬರಹವನ್ನು ಇಲ್ಲವೇ ಬರಹದ ಒಂದು ಇಡೀ ಪಸುಗೆಯನ್ನು ಹೊಸದಾಗಿ ಬರೆಯಬೇಕೆಂದೂ ಬರಹ ಗಾರರಿಗೆ ಅನಿಸಬಹುದು.
ಕೆಲವರು ಬರಹಗಾರರು ತಮ್ಮ ಬರವಣಿಗೆ ಮುಂದುವರಿಯುತ್ತಿರು ವಂತೆಯೇ ಆಗಾಗ ಬರೆದುದನ್ನು ಓದಿ ನೋಡಿ, ಅದರಲ್ಲಿ ಮಾರ್ಪಾಡುಗಳನ್ನು ಮಾಡುತ್ತಾ ಹೋಗುತ್ತಿರಬಹುದು. ಹೀಗೆ ಮಾಡುವವರೂ ಕೂಡ, ಬರಹವನ್ನು ಮುಗಿಸಿದ ಮೇಲೆ ಅದನ್ನೊಮ್ಮೆ ಕಾಗದದ ಮೇಲೆ ಪೂರ್ತಿ ಅಚ್ಚುಹಾಕಿಸಿಕೊಂಡು, ಮೇಲೆ ವಿವರಿಸಿದಂತಹ ಮರುನೋಟಕ್ಕೆ ಒಳಪಡಿಸುವುದು ಒಳ್ಳೆಯದು.
3.5 ತಿದ್ದಿ ಸರಿಪಡಿಸುವುದು
ಕೊನೆಯದಾಗಿ, ಬರಹವನ್ನು ತಿದ್ದಿ ಸರಿಪಡಿಸುವ ಕೆಲಸವನ್ನು ನಡೆಸಬೇಕಾಗು ತ್ತದೆ. ಬರಹದಲ್ಲಿ ಬಳಕೆಯಾಗಿರುವ ತಡೆ (,), ಅರೆಕೊನೆ (;), ಕೊಗೆತ (:) ಎತ್ತುಗೆ (“ ”) ಮೊದಲಾದ ಬರಹದ ಗುರುತುಗಳು ಸರಿಯಾಗಿ ಬಳಕೆ ಯಾಗಿವೆಯೇ ಎಂಬುದನ್ನು ಈ ಸಮಯದಲ್ಲಿ ಗಮನಿಸಬಹುದು.
ಇದಲ್ಲದೆ, ಎತ್ತುಗೆಗಳು, ಇಸವಿಗಳು, ಅಡಿಬರಹಗಳು ಮೊದಲಾದುವನ್ನು ಸರಿಯಾಗಿ ಕೊಡಲಾಗಿದೆಯೇ ಎಂಬುದನ್ನೂ ಈ ಸಮಯಲ್ಲಿ ಗಮನಿಸಬಹುದು. ಬರಹದಲ್ಲಿ ಒಳಒಕ್ಕಣೆಗಳಿದ್ದು, ಅವಕ್ಕೆ ಅಂಕೆಗಳನ್ನು ಕೊಟ್ಟಿದ್ದಲ್ಲಿ, ಅವು ಸರಿಯಾಗಿ ಬಂದಿವೆಯೇ ಎಂಬುದನ್ನು ಗಮನಿಸಬಹುದು. ದಪ್ಪಬರಿಗೆ, ತೆಳು ಬರಿಗೆ ಮೊದಲಾದುವನ್ನು ಬಳಸಿದ್ದಲ್ಲಿ, ಅವುಗಳ ಬಳಕೆ ಬರಹದುದ್ದಕ್ಕೂ
ಒಂದೇ ಬಗೆಯದಾಗಿದೆಯೇ ಎಂಬುದನ್ನು ಪರಿಶೀಲಿಸಬಹುದು. ಬರಹದ ಅಂಚುಗಳು, ಪುಟ ಎಣಿಕೆ ಮೊದಲಾದವುಗಳನ್ನೂ ಈ ಸಮಯದಲ್ಲಿ ಸರಿಪಡಿಸ ಬಹುದು.
3.5.1 ಬರಹದ ಗುರುತುಗಳ ಬಳಕೆ
ಮೇಲೆ ಎರಡನೇ ಪಸುಗೆಯಲ್ಲಿ (2.2.3ರಲ್ಲಿ) ವಿವರಿಸಿದ ಹಾಗೆ, ಮಾತಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳಿವೆ. ಮಾತಿನಲ್ಲಿ ಕಯ್ಸನ್ನೆ, ಕಣ್ಣುಸನ್ನೆ, ಉಲಿಯ ಏರಿಳಿತ ಮೊದಲಾದವುಗಳನ್ನು ಬಳಸಬಲ್ಲೆವು, ಮತ್ತು ಅವುಗಳ ಮೂಲಕ ಹಲವು ಬಗೆಯ ಹುರುಳುಗಳನ್ನು ತಿಳಿಸಬಲ್ಲೆವು. ಆದರೆ, ಬರಹದಲ್ಲಿ ಇವೊಂದೂ ಬರಲಾರವು. ಅವು ಕೊಡುವ ಹುರುಳುಗಳಲ್ಲಿ ಕೆಲವನ್ನಾದರೂ ಬರಹಗಳಲ್ಲಿ ತಿಳಿಸಬೇಕಾಗುವುದಾದ ಕಾರಣ, ಅದಕ್ಕಾಗಿ ಹಲವು ಬಗೆಯ ಬರಹದ ಗುರುತುಗಳನ್ನು ಬಳಸಬೇಕಾಗುತ್ತದೆ.
ಎತ್ತುಗೆಗಾಗಿ, ಒಂದು ಸೊಲ್ಲು ಮುಗಿಯಿತೆಂಬುದನ್ನು ಮಾತಿನಲ್ಲಿ ಉಲಿಯ ಇಳಿತದ ಮೂಲಕ ತಿಳಿಸುತ್ತೇವೆ. ಆದರೆ, ಬರಹದಲ್ಲಿ ಇದಕ್ಕಾಗಿ ಕೊನೆ ಗುರುತನ್ನು (.) ಬಳಸಬೇಕಾಗುತ್ತದೆ. ಸೊಲ್ಲು ಒಂದು ಕೇಳ್ವಿಯಾಗಿದ್ದರೆ, ಅದರ ಕೊನೆಯಲ್ಲಿ ಉಲಿ ತುಸು ಮೇಲೇರುತ್ತದೆ ಇಲ್ಲವೇ ಕೆಳಗಿಳಿಯ ದಿರುತ್ತದೆ. ಇದನ್ನು ತಿಳಿಸುವುದಕ್ಕಾಗಿ ಬರಹದಲ್ಲಿ ಕೇಳ್ವಿಯ (?) ಗುರುತನ್ನು ಬಳಸಬೇಕಾಗುತ್ತದೆ.
ಸೊಲ್ಲನ್ನು ಆಡುವ ಬಗೆಯಲ್ಲೇ ಅದನ್ನು ಆಡುಗರು ಬೆರಗಿನಿಂದ ಹೇಳು ತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ; ಆದರೆ, ಬರಹದಲ್ಲಿ ಇದು ಗೊತ್ತಾಗ ಬೇಕಿದ್ದಲ್ಲಿ ಸೊಲ್ಲಿನ ಕೊನೆಯಲ್ಲಿ ಬೆರಗಿನ (!) ಗುರುತನ್ನು ಬಳಸಬೇಕಾಗುತ್ತದೆ. ಬೇರೊಬ್ಬರ ಮಾತನ್ನು ಎತ್ತಿ ಹೇಳುವುದಕ್ಕಾಗಿ ಒಂದು ಸೊಲ್ಲನ್ನು ಬಳಸಿದೆಯಾದರೆ, ಬರಹದಲ್ಲಿ ಅದರ ಮೊದಲಿಗೆ ಮತ್ತು ಕೊನೆಗೆ ಎತ್ತುಗೆಯ (“ ”) ಗುರುತುಗಳನ್ನು ಬಳಸಬೇಕಾಗುತ್ತದೆ.
ಇದಲ್ಲದೆ, ಸೊಲ್ಲಿನ ಒಳಗೂ ತಡೆ (,), ಅರೆಕೊನೆ (;), ಅಡ್ಡಗೆರೆ (-), ಕಳೆತ (…..) ಮೊದಲಾದ ಬೇರೆ ಹಲವು ಬರಹದ ಗುರುತುಗಳನ್ನು ಬಳಸಬೇಕಾಗುತ್ತದೆ. ಇವೆಲ್ಲವೂ ಬರಹವನ್ನು ಯಾವ ರೀತಿ ಓದಬೇಕು ಎಂಬುದನ್ನು ತಿಳಿಸುವುದಕ್ಕಾಗಿ ಬಳಕೆಯಾಗುತ್ತವೆ. ಈ ಗುರುತುಗಳನ್ನು ಸರಿಯಾಗಿ ಬಳಸದಿದ್ದಲ್ಲಿ, ಓದುಗರಿಗೆ ಬರಹವನ್ನು ಹೇಗೆ ಓದಬೇಕು ಎಂಬುದು
ಗೊತ್ತಾಗುವುದಿಲ್ಲ, ಮತ್ತು ಬರಹಗಾರರು ತಿಳಿಸಿರುವುದೊಂದು ಮತ್ತು ಓದುಗರು ತಿಳಿದುಕೊಳ್ಳುವುದಿನ್ನೊಂದು ಎಂದಾಗುತ್ತದೆ.
ಎತ್ತುಗೆಗಾಗಿ, ಅಲ್ಲಿಗೆ ಹೋಗಿ ಬಂದವರನ್ನು ಮಾತನಾಡಿಸಿದ ಎಂಬ ಸೊಲ್ಲಿಗೆ ಎರಡು ಹುರುಳುಗಳಿರಬಲ್ಲುದು. ಅಲ್ಲಿಗೆ ಹೋಗಿ ಬಂದ ಜನರನ್ನು ಆತ ಮಾತನಾಡಿಸಿದ ಎಂಬುದು ಒಂದು ಹುರುಳು ಮತ್ತು ಆತ ಅಲ್ಲಿಗೆ ಹೋಗಿ, (ಬೇರೆಲ್ಲಿಂದಲೋ) ಬಂದ ಜನರನ್ನು ಮಾತನಾಡಿಸಿದ ಎಂಬುದು ಇನ್ನೊಂದು ಹುರುಳು. ಈ ವ್ಯತ್ಯಾಸ ಮಾತಿನಲ್ಲಿ ಸುಳುವಾಗಿ ಗೊತ್ತಾಗುತ್ತದೆ. ಬರಹದಲ್ಲೂ ಇದನ್ನು ಗೊತ್ತುಮಾಡಬೇಕಿದ್ದರೆ, ಎರಡನೇ ಹುರುಳಿರುವಲ್ಲಿ ಹೋಗಿ ಪದದ ಬಳಿಕ ಒಂದು ತಡೆ ಗುರುತನ್ನು ಬಳಸ ಬೇಕಾಗುತ್ತದೆ (ಅಲ್ಲಿಗೆ ಹೋಗಿ, ಬಂದವರನ್ನು ಮಾತನಾಡಿಸಿದ). ಸೊಲ್ಲನ್ನು ಎಲ್ಲಿ ಒಡೆಯಬೇಕು ಎಂಬುದನ್ನು ಈ ಗುರುತು ತಿಳಿಸುತ್ತದೆ.
ಆದರೆ, ಕವಿತೆ, ಹಾಡು ಮೊದಲಾದವುಗಳಲ್ಲಿ ಇಂತಹ ಬರಹದ ಗುರುತುಗಳಲ್ಲಿ ಹೆಚ್ಚಿನವನ್ನೂ ಬಳಸಲು ಬರುವುದಿಲ್ಲ. ಇದಕ್ಕೆ ಕಾರಣ ವೇನೆಂದರೆ, ಅವಕ್ಕೆ ಅವುಗಳದೇ ಆದ ತಾಳದ ಕಟ್ಟು ಇರುತ್ತದೆ. ತಡೆ (,), ಕೊನೆ (.) ಮೊದಲಾದ ಗುರುತುಗಳನ್ನು ಅವುಗಳ ಸಾಲುಗಳಲ್ಲಿ ಸೇರಿಸಿ ಕೊಂಡಲ್ಲಿ, ಅವನ್ನು ಓದುವಾಗ ಇಲ್ಲವೇ ಹಾಡುವಾಗ ಬಳಸಬೇಕಾಗಿರುವ ತಾಳದ ಕಟ್ಟು ಕೆಟ್ಟುಹೋಗಬಲ್ಲುದು. ಹಾಗಾಗಿ, ತಮ್ಮದೇ ಆದ ತಾಳದ ಕಟ್ಟಿಲ್ಲದ ಬರಹಗಳಲ್ಲಿ ಮಾತ್ರ ಮೇಲೆ ವಿವರಿಸಿದ ಬರಹದ ಗುರುತುಗಳನ್ನು ಬಳಸಬೇಕಾಗುತ್ತದೆ.
ಶಾಲೆಗಳಲ್ಲಿ ಓದುಬರಹ ಕಲಿಸುವವರು ಈ ಗುರುತುಗಳನ್ನು ಸರಿಯಾಗಿ ಬಳಸುವುದು ಹೇಗೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಯಾಕೆಂದರೆ ಮುಂದೆ ದೊಡ್ಡವರಾದ ಮೇಲೆ, ಒಪ್ಪಂದಗಳು, ಕಾನೂನುಗಳು, ತೀರ್ಪುಗಳು ಮೊದಲಾದುವನ್ನು ಬರೆಯಬೇಕಾದಾಗ, ಈ ಗುರುತುಗಳನ್ನು ಸರಿಯಾಗಿ ಬಳಸಲು ಗೊತ್ತಿಲ್ಲದಿದ್ದರೆ ತುಂಬಾ ತೊಂದರೆಗಳುಂಟಾಗಬಲ್ಲುವು. ಎತ್ತುಗೆಗಾಗಿ, ತನ್ನ ಒಪ್ಪಂದವೊಂದರಲ್ಲಿ ಒಂದು ತಡೆ ಗುರುತನ್ನು ತಪ್ಪಾಗಿ ಬಳಸಿದುದರಿಂದಾಗಿ, ಕೆನಡಾದ ಒಂದು ಸಂಸ್ತೆ ಎರಡು ಮಿಲಿಯಕ್ಕಿಂತಲೂ ಹೆಚ್ಚು ಡಾಲರುಗಳನ್ನು ಕಳೆದುಕೊಳ್ಳುವಂತಹ ಸಂದರ್ಬ ಒದಗಿಬಂದಿತ್ತು!
ಬರಹದ ಗುರುತುಗಳನ್ನು ಸರಿಯಾಗಿ ಬಳಸಬೇಕಿದ್ದಲ್ಲಿ, ಬರಹಗಾರರಿಗೆ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ ಎಂಬುದು ಕೆಳಗೆ ಕೊಟ್ಟಿರುವ ಪರಿಶೀಲನೆಯಿಂದ ಗೊತ್ತಾಗುತ್ತದೆ.
3.5.2 ಕುರಳುಗಳ ಇಟ್ಟಳ
ಕನ್ನಡದ ಹಲವು ಮಂದಿ ಬರಹಗಾರರಿಗೆ ತಮ್ಮ ಬರಹವನ್ನು ಕುರಳು(ಪಾರಾ) ಗಳಾಗಿ ಒಡೆಯುವುದು ಹೇಗೆ ಎಂಬುದೇ ತಿಳಿದಿರುವುದಿಲ್ಲ. ಅವರ ಬರಹದಲ್ಲಿ ಕೆಲವು ಕುರಳುಗಳು ಒಂದೆರಡು ಪುಟಗಳಶ್ಟು ಉದ್ದ ಇರುತ್ತವೆ. ಒಳ್ಳೇ ಬರಹಗಾರರೂ ಕೂಡ ಈ ತಪ್ಪನ್ನು ಮಾಡುತ್ತಿರುತ್ತಾರೆ; ಇದರಿಂದಾಗಿ ತಮ್ಮ ಓದುಗರಿಗೆ ಎಶ್ಟು ತೊಂದರೆಯಾಗುತ್ತದೆ ಎಂಬುದನ್ನು ಅವರು ಗಮನಿಸುವುದೇ
ಎತ್ತುಗೆಗಾಗಿ, ಎಸ್.ಎಲ್. ಭೈರಪ್ಪನವರ ಪರ್ವ ಕಾದಂಬರಿಯಲ್ಲಿ ಒಂಬತ್ತು ಪುಟಗಳ ಕೊನೆಯ ಪಸುಗೆಯನ್ನು ಒಂದೇ ಕುರಳಾಗಿ ಅಚ್ಚುಹಾಕ ಲಾಗಿದೆ! ಈ ಒಂಬತ್ತು ಪುಟಗಳಲ್ಲಿ ಒಂದೇ ವಿಶಯ ಬಂದಿದೆಯೆಂದೇನೂ ಹೇಳಲು ಬರುವುದಿಲ್ಲ. ಯಾಕೆಂದರೆ, ಅದರಲ್ಲಿ ಒಂದು ಕಡೆ ನಡೆದ ಸಂಗತಿಯನ್ನು ವಿವರಿಸಿ, ಆಮೇಲೆ ಕತೆ ಇದ್ದಕ್ಕಿದ್ದಂತೆ ಇನ್ನೊಂದು ಕಡೆ ನಡೆಯುವ ಸಂಗತಿಗೆ ನೆಗೆಯುತ್ತದೆ; ಹಾಗಿದ್ದರೂ, ಕುರಳು ಬದಲಾಗುವುದಿಲ್ಲ ವಾದ ಕಾರಣ, ಓದುಗರು ಗೊಂದಲದಲ್ಲಿ ಬೀಳುತ್ತಾರೆ. ಇದಲ್ಲದೆ, ಕೆಲವು ನಡುನುಡಿ(ಸಂಬಾಶಣೆ)ಗಳೂ ಈ ಒಂದು ಕುರುಳಿನೊಳಗೇನೇ ಸೇರಿಕೊಂಡಿವೆ! ಪುಟಗಳ ಎಣಿಕೆಯನ್ನು ಕಡಿಮೆ ಮಾಡುವುದಕ್ಕಾಗಿ ಹೀಗೆ ಮಾಡಿದ್ದಾರೋ, ಇಲ್ಲವೇ ಹೇಗೆ ಅಚ್ಚು ಹಾಕಿದರೂ ಓದುಗರು ಓದದೆ ಇರುವುದಿಲ್ಲ ಎಂಬ ಅನಿಸಿಕೆಯಲ್ಲಿ ಹೀಗೆ ಮಾಡಿದ್ದಾರೋ ತಿಳಿಯುವುದಿಲ್ಲ.
ಕುರಳುಗಳು ಓದುಗರಿಗೆ ನಡುನಡುವೆ ಬಿಡುವು ಕೊಡುತ್ತವೆ, ಮತ್ತು ಒಂದರಲ್ಲಿ ಹೇಳಿದುದನ್ನು ಅರಗಿಸಿಕೊಂಡು ಇನ್ನೊಂದರಲ್ಲಿ ಹೇಳುವುದನ್ನು ತಿಳಿಯತೊಡಗಲು ಅವರಿಗೆ ಸಮಯ ಸಿಗುವಂತೆ ಮಾಡುತ್ತವೆ. ಇದಲ್ಲದೆ, ಬರಹವನ್ನು ಕುರಳುಗಳಾಗಿ ಒಡೆಯುವ ಕೆಲಸವನ್ನು ಸರಿಯಾಗಿ ನಡೆಸಿದಲ್ಲಿ ಬರಹಗಾರರು ತಿಳಿಸುತ್ತಿರುವುದೇನು ಎಂಬುದೂ ಓದುಗರಿಗೆ ಹೆಚ್ಚು ಚನ್ನಾಗಿ ಗೊತ್ತಾಗುತ್ತದೆ.
ಕುರಳುಗಳನ್ನು ಉಂಟುಮಾಡುವಾಗ, ಒಂದು ಮುಕ್ಯ ವಿಶಯವನ್ನು ನೆನಪಿನಲ್ಲಿರಿಸಿಕೊಳ್ಳಬೇಕು: ಒಂದು ಕುರಳಿನಲ್ಲಿ ಒಂದು ವಿಶಯ ಮಾತ್ರ ಇರಬೇಕು. ಆ ವಿಶಯವನ್ನು ಬೆಂಬಲಿಸುವಂತಹ ಬೇರೆ ಒಂದೆರಡು ವಿಶಯಗಳನ್ನು ತಿಳಿಸಬೇಕೆಂದಿದ್ದಲ್ಲಿ, ಅವನ್ನೂ ಅದೇ ಕುರಳಿನಲ್ಲಿ ಸೇರಿಸಬಹುದು. ಆದರೆ, ಇದರಿಂದಾಗಿ ಕುರಳಿನ ಉದ್ದ ಹೆಚ್ಚುತ್ತಿದೆಯಾದರೆ, ಅವನ್ನು ಬೇರೊಂದು ಕುರಳಿನಲ್ಲಿ ಇರಿಸುವುದೇ ಒಳ್ಳೆಯದು.
ಕುರಳಿನಲ್ಲಿ ಹೊದ್ದಿಕೆ(ಸಂಬದ್ದತೆ)ಯಿರಬೇಕು. ಅದು ಮೊದಲಿಗೆ ಯಾವ ವಿಶಯಕ್ಕೆ ಒತ್ತು ಕೊಡಲು ತೊಡಗುತ್ತದೆಯೋ, ಅದಕ್ಕೇನೇ ಕೊನೆಯವರೆಗೂ ಒತ್ತು ಕೊಡುತ್ತಿರಬೇಕು. ಒಂದು ವಿಶಯದಿಂದ ಇನ್ನೊಂದು ವಿಶಯಕ್ಕೆ ನೆಗೆಯುತ್ತಿರಬಾರದು. ಇದಲ್ಲದೆ, ಕುರಳಿನಲ್ಲಿ ಬರುವ ಸೊಲ್ಲುಗಳೆಲ್ಲ ಒಂದಕ್ಕೊಂದು ಸಂಬಂದಿಸಿವೆಯೆಂಬುದನ್ನು ಸೂಚಿಸುವಂತಹ ಆದರೆ, ಆದುದರಿಂದ, ಆಮೇಲೆ, ಇದಲ್ಲದೆ, ಹಾಗಾಗಿ ಮೊದಲಾದ ಕೊಂಡಿಪದಗಳನ್ನು ಬಳಸಿದಲ್ಲಿ, ಕುರಳಿನ ಹೊದ್ದಿಕೆ ಓದುಗರಿಗೆ ಹೆಚ್ಚು ಸುಳುವಾಗಿ ಗೊತ್ತಾಗುತ್ತದೆ.
ಬರಹದಲ್ಲಿ ಬರುವ ಎಲ್ಲಾ ಕುರಳುಗಳಿಗೂ ಅವುಗಳದೇ ಆದ ಗುರಿ ಯಿರಬೇಕು. ಹಿಂದಿನ ಕುರಳಿನಲ್ಲಿ ಹೇಳಿದ ವಿಶಯವನ್ನು ಬಿಡಿಸಿ ಹೇಳುವುದು ಇಲ್ಲವೇ ಬೇರೊಂದು ರೀತಿಯಲ್ಲಿ ಹೇಳುವುದು, ಅದನ್ನು ಬೆಂಬಲಿಸುವ ಇಲ್ಲವೇ ಬೆಂಬಲಿಸದ ಬೇರೆ ಸಂಗತಿಗಳನ್ನು ಕೊಡುವುದು, ಅದಕ್ಕೆ ಎತ್ತುಗೆ ಗಳನ್ನು ಕೊಡುವುದು ಮೊದಲಾದ ಗುರಿಗಳು ಅವಕ್ಕಿರಬಹುದು. ಇಂತಹ ಯಾವ ಗುರಿಯೂ ಇಲ್ಲದ ಕುರಳುಗಳು ಬರಹದಲ್ಲಿವೆಯಾದರೆ, ಅವನ್ನು ತೆಗೆದುಹಾಕುವುದೇ ಒಳ್ಳೆಯದು.
ಕುರಳುಗಳ ಇಟ್ಟಳ (ಒಳರಚನೆ) ಸ್ವಲ್ಪ ಮಟ್ಟಿಗೆ ಅವು ಯಾವ ಬಗೆಯ ಬರಹದಲ್ಲಿ ಬರುತ್ತಿವೆ ಎಂಬುದನ್ನು ಅವಲಂಬಿಸಿದೆ. ಸಾಮಾನ್ಯವಾಗಿ, ಒಂದು ವಿಶಯವನ್ನು ತಿಳಿಸುವ ಬರಹಗಳಲ್ಲಿ ಮೊದಲಿಗೆ ಕುರಳಿನ ಗುರಿಯನ್ನು ತಿಳಿಸುವ ಸೊಲ್ಲು ಬರುತ್ತದೆ; ಮತ್ತು ಆಮೇಲೆ, ಗುರಿಸೊಲ್ಲಿನ ಮೂಲಕ ಓದುಗರ ಮುಂದಿರಿಸಿರುವ ವಿಶಯವನ್ನು ಬೆಳೆಸುವಂತಹ ಸೊಲ್ಲುಗಳು, ಮತ್ತು ಎತ್ತುಗೆ, ಕಾರಣ, ಪರಿಣಾಮ ಮೊದಲಾದವುಗಳನ್ನು ತಿಳಿಸುವ ಸೊಲ್ಲುಗಳು ಬರುತ್ತವೆ. ಕುರಳಿನ ಮೊದಲಿಗೆ ಬರುವ ಗುರಿಸೊಲ್ಲು ಅದು ಸೂಚಿಸುವ ವಿಶಯದ ಕುರಿತು ಹೆಚ್ಚಿನ ಸಂಗತಿಗಳನ್ನು ತಿಳಿಯಬೇಕೆಂಬ ಕುತೂಹಲವನ್ನು ಓದುಗರಲ್ಲಿ ಮೂಡಿಸುವಂತಿರಬೇಕು, ಮತ್ತು ಆಮೇಲೆ ಬರುವ ಸೊಲ್ಲುಗಳು ಈ ಕುತೂಹಲವನ್ನು ತಣಿಸುವಂತಿರಬೇಕು.
ಒಂದು ಬರಹದ ಕುರಳುಗಳಲ್ಲಿ ಬರುವ ಗುರಿಸೊಲ್ಲುಗಳನ್ನೆಲ್ಲ ಒಟ್ಟುಸೇರಿಸಿ ಪರಿಶೀಲಿಸಿದಲ್ಲಿ, ಅದರ ಹಮ್ಮುಗೆ ಸರಿಯಿದೆಯೋ ಎಂಬುದು ಗೊತ್ತಾಗುತ್ತದೆ. ಹಮ್ಮುಗೆ ಸರಿಯಿಲ್ಲದಿದ್ದಲ್ಲಿ ಅದನ್ನು ಮಾರ್ಪಡಿಸಲು, ಮತ್ತು ಕುರಳುಗಳು ಒಂದರೊಡನೊಂದು ಹೊಂದಿಕೊಳ್ಳುವಂತೆ ಮಾಡಲು ಈ ರೀತಿ ಬರಹದ ಗುರಿಸೊಲ್ಲುಗಳನ್ನೆಲ್ಲ ಒಟ್ಟುಸೇರಿಸುವುದು ನೆರವಾಗುತ್ತದೆ.
ಕತೆ, ಕಾದಂಬರಿ ಮೊದಲಾದ ನಲ್ಬರಹಗಳಲ್ಲಿ ಬರುವ ಕುರಳುಗಳು ಬೇರೆ ಬಗೆಯವಾಗಿರುತ್ತವೆ. ಅವು ಸ್ವಲ್ಪ ಮಟ್ಟಿಗೆ ಬರಹಗಾರರ ಒಡ್ಡವ(ಶಯ್ಲಿ)ವ ನ್ನವಲಂಬಿಸಿರುತ್ತವೆ. ಇದಲ್ಲದೆ ಓದುಗರ ಗಮನವನ್ನು ತಮ್ಮ ಬರಹದ ಕಡೆಗೆ ಸೆಳೆಯುವುದಕ್ಕಾಗಿ, ಅವರು ಅದರಲ್ಲಿ ಹಲವು ಬಗೆಯ ಮಾರ್ಪಾಡು ಗಳನ್ನೂ ಮಾಡಿಕೊಳ್ಳಬಹುದು. ಆದರೆ, ಇಂತಹ ಮಾರ್ಪಾಡುಗಳು ಕುರಳುಗಳ ಮೂಲ ಗುರಿಗೆ ತಡೆಯಾದಲ್ಲಿ, ಅವು ಓದುಗರನ್ನು ದೂರಮಾಡಬಲ್ಲುವು.
3.5.3 ಸೊಲ್ಲುಗಳ ಕೊನೆಯ ಗುರುತುಗಳು
ಕೊನೆ(.), ಕೇಳ್ವಿ(?) ಮತ್ತು ಬೆರಗು(!) ಎಂಬುದಾಗಿ ಮೂರು ಬಗೆಯ ಗುರುತುಗಳು ಸೊಲ್ಲುಗಳ ಕೊನೆಯಲ್ಲಿ ಬರುತ್ತವೆ. ಇವುಗಳಲ್ಲಿ ಕೊನೆ ಗುರುತು ಹೇಳಿಕೆಗಳನ್ನು ಸೂಚಿಸುವ ಮತ್ತು ಅಪ್ಪಣೆ ಕೊಡುವ ಸೊಲ್ಲುಗಳ ಕೊನೆಯಲ್ಲಿ ಬರುತ್ತದೆ; ಕೇಳ್ವಿ ಗುರುತು ನೇರವಾಗಿ ಕೇಳ್ವಿಗಳನ್ನು ಕೇಳುವ ಸೊಲ್ಲುಗಳ ಕೊನೆಯಲ್ಲಿ ಬರುತ್ತದೆ; ಮತ್ತು ಬೆರಗು ಗುರುತು ಮನಸ್ಸಿನಲ್ಲಿ ಎದ್ದಿರುವ ಕಡು ಅನಿಸಿಕೆಗಳನ್ನು ಸೂಚಿಸುವ ಸೊಲ್ಲುಗಳ ಕೊನೆಯಲ್ಲಿ ಬರುತ್ತದೆ.
ಬೆರಗು ಗುರುತುಗಳನ್ನು ಆದಶ್ಟು ಕಡಿಮೆ ಬಳಸುವುದು ಒಳ್ಳೆಯದು; ಇಲ್ಲವಾದರೆ ಅವುಗಳ ಕಸುವು ಕಡಿಮೆಯಾಗುತ್ತದೆ. ಬೆರಗು ಮತ್ತು ಕೇಳ್ವಿ ಗುರುತುಗಳ ಬಳಿಕ ಕೊನೆ ಗುರುತನ್ನು ಬಳಸಬೇಕಾಗುವುದಿಲ್ಲ; ಆದರೆ, ಈ ಗುರುತುಗಳು ಎತ್ತುಗೆಯ ಗುರುತುಗಳ ಇಲ್ಲವೇ ಕಂಸ ಗುರುತುಗಳ ಒಳಗೆ ಬಂದಿವೆಯಾದಲ್ಲಿ, ಸೊಲ್ಲಿನ ಕೊನೆಯನ್ನು ಸೂಚಿಸಲು ಕೊನೆ ಗುರುತನ್ನು ಬಳಸಬೇಕಾಗುತ್ತದೆ. ಇದನ್ನು ಕೆಳಗಿನ ಎತ್ತುಗೆಗಳಲ್ಲಿ ಕಾಣಬಹುದು:
ಅವರು ಕೇಳಿದರು: ‘‘ಯಾವಾಗ ಬಂದೆ?’. ಅವರು ಎಲ್ಲಿಗೂ ಹೋಗಲಿಲ್ಲ (ಯಾಕೆ ಹೀಗಾಯಿತು?).
3.5.4 ಸೊಲ್ಲುಗಳ ನಡುವಿನ ಗುರುತುಗಳು
ಸೊಲ್ಲುಗಳ ನಡುವೆ ಬರುವ ಗುರುತುಗಳಲ್ಲಿ ತಡೆ(,), ಅಡ್ಡಗೆರೆ (-), ಅರೆಕೊನೆ(;) ಎತ್ತುಗೆ (“ ”) ಮತ್ತು ಕಂಸ()ಗಳು ಮುಕ್ಯವಾದುವು.
ಕನ್ನಡದ ಬರಹಗಳಲ್ಲಿ ತಡೆ ಗುರುತಿನ ಬಳಕೆಯ ಮಟ್ಟಿಗೆ ತುಂಬಾ ಗೊಂದ ಲವಿದೆ. ತುಂಬಾ ಒಳ್ಳೆಯ ಬರಹಗಹಳಲ್ಲೂ ಇದನ್ನು ಎಲ್ಲಿ ಬಳಸಲಾಗಿದೆ ಮತ್ತು ಎಲ್ಲಿ ಬಳಸಿಲ್ಲ ಎಂಬುದರ ಕುರಿತಾಗಿ ಒಂದು ಕಟ್ಟಲೆಯನ್ನು ಕಾಣಲು
ಬರುವುದಿಲ್ಲ. ಆದರೆ, ನಿಜಕ್ಕೂ ಇದು ಒಂದು ತುಂಬಾ ಮುಕ್ಯವಾದ ಗುರುತು. ಇದನ್ನು ಸರಿಯಾಗಿ ಬಳಸಿದಲ್ಲಿ ಬರಹವನ್ನು ಓದುವ ಕೆಲಸ ಹೆಚ್ಚು ಸುಳುವಾಗ ಬಲ್ಲುದು ಮಾತ್ರವಲ್ಲ, ಹಲವು ಇಪ್ಪುರುಳುಗಳೂ ಇಲ್ಲವಾಗಬಲ್ಲುವು.
ಸಾಮಾನ್ಯವಾಗಿ, ಓದುತ್ತಿರುವಾಗ ಎಲ್ಲಿ ಸ್ವಲ್ಪ ಹೊತ್ತು ನಿಲ್ಲಿಸ ಬೇಕಾಗು ತ್ತದೆಯೋ ಅಲ್ಲಿ ತಡೆ ಗುರುತನ್ನು ಬಳಸಬಹುದು. ಹೆಚ್ಚಿನೆಡೆಗಳಲ್ಲೂ ಈ ಕಟ್ಟಲೆ ನಡೆಯುತ್ತದೆ; ಆದರೆ ಕೆಲವೆಡೆಗಳಲ್ಲಿ ನಡೆಯುವುದಿಲ್ಲ. ಬರೆದುದನ್ನು ಸಲೀಸಾಗಿ ಓದುವುದರಲ್ಲಿ, ಮತ್ತು ಓದಿದುದನ್ನು ಸರಿಯಾಗಿ ಮತ್ತು ಬೇಗನೆ ತಿಳಿದುಕೊಳ್ಳುವುದರಲ್ಲಿ ತಡೆ ಗುರುತಿನ ಬಳಕೆ ನೆರವಾಗುತ್ತದೆ. ಬರೆದ ಸೊಲ್ಲುಗಳು ಉದ್ದ ಇದ್ದಶ್ಟೂ, ಮತ್ತು ಸಿಕ್ಕಲು ಸಿಕ್ಕಲಾಗಿದ್ದಶ್ಟೂ ಅವುಗಳಲ್ಲಿ ಹೆಚ್ಚು ಹೆಚ್ಚು ತಡೆ ಗುರುತುಗಳು ಬೇಕಾಗುತ್ತವೆ.
ಒಂದು ವಿಶಯದ ಕುರಿತು ಹೆಚ್ಚಿನ ವಿಶಯಗಳನ್ನು ತಿಳಿಸಬೇಕೆಂದಿರುವಲ್ಲಿ, ಮತ್ತು ಒಂದು ಪಟ್ಟಿಯನ್ನು ಕೊಡಬೇಕೆಂದಿರುವಲ್ಲಿ ಕೊಗೆತ (:) ಗುರುತನ್ನು ಬಳಸಲಾಗುತ್ತದೆ. ಈ ಗುರುತಿನೊಂದಿಗೆ ಅಡ್ಡಗೆರೆ(-)ಯನ್ನು ಬಳಸಬೇಕಾಗಿಲ್ಲ, ಮತ್ತು ಇದರ ಹಿಂದೆ ಎಡೆಯನ್ನೂ ಬಿಡಬೇಕಾಗಿಲ್ಲ.
ಸೊಲ್ಲಿನ ಒಳಗೆ ಅದು ತಿಳಿಸುವ ವಿಶಯಕ್ಕೆ ನೇರವಾಗಿ ಸಂಬಂದಿಸಿಲ್ಲ ದಂತಹ ಬೇರೊಂದು ವಿಶಯವನ್ನು ತಿಳಿಸಬೇಕಾದಾಗ, ಅದನ್ನು ಎರಡು ಅಡ್ಡಗೆರೆಗಳ ಮೂಲಕ, ಇಲ್ಲವೇ ಕಂಸಗಳ ಮೂಲಕ ಬೇರ್ಪಡಿಸಲಾಗುತ್ತದೆ. ಎತ್ತುಗೆಗಾಗಿ, ಅವರಲ್ಲಿ ಮೂವರು - ರಾಜು, ಜಾನಕಿ, ಮತ್ತು ಸವಿತಾ
- ತರಗತಿಯಲ್ಲೇ ಕುಳಿತಿದ್ದರು ಎಂಬ ಸೊಲ್ಲಿನಲ್ಲಿ ಮೂವರು ಎಂಬುದರ ಕುರಿತಾಗಿ ಹೆಚ್ಚಿನ ವಿವರಣೆಯನ್ನು ಕೊಡುವ ಅಂಶವನ್ನು ಎರಡು ಅಡ್ಡಗೆರೆಗಳನ್ನು ಬಳಸಿ ಬೇರ್ಪಡಿಸಲಾಗಿದೆ.
ಎತ್ತುಗೆಯ ಗುರುತನ್ನು ಒಬ್ಬ ವ್ಯಕ್ತಿಯ ಮಾತನ್ನು ನೇರವಾಗಿ ಎತ್ತಿ ಹೇಳುವಲ್ಲಿ ಬಳಸಲಾಗುತ್ತದೆ. ಒಂದು ಎತ್ತುಗೆಯ ಒಳಗೆ ಇನ್ನೊಂದು ಎತ್ತುಗೆ ಬಂದಿದೆಯಾದರೆ ಅದನ್ನು ಓರೆತ್ತುಗೆಯ (‘ ’) ಗುರುತಿನಿಂದ ಬೇರ್ಪಡಿಸ ಬಹುದು. ಒಂದೇ ಎತ್ತುಗೆ ಎರಡು ಮೂರು ಕುರಳುಗಳಲ್ಲಿ ಕಾಣಿಸಿಕೊಳ್ಳುತ್ತದೆ ಯಾದರೆ, ಅದನ್ನು ಕೊನೆಗೊಳಿಸುವ ಗುರುತನ್ನು ಕೊನೆಯ ಕುರಳಿನಲ್ಲಿ ಮಾತ್ರ ಬಳಸಬೇಕು. ಕೆಲವರು ಇದನ್ನು ಎಲ್ಲಾ ಕುರಳುಗಳ ಕೊನೆಯಲ್ಲೂ ಬಳಸಿ, ಗೊಂದಲವುಂಟಾಗುವಂತೆ ಮಾಡುತ್ತಾರೆ.
ನೇರವಾದ ಎತ್ತುಗೆಗೂ ನೇರವಲ್ಲದ ಎತ್ತುಗೆಗೂ ನಡುವಿರುವ ವ್ಯತ್ಯಾಸ ವನ್ನು ಎತ್ತುಗೆಯ ಗುರುತುಗಳ ಮೂಲಕ ತೋರಿಸಿಕೊಡದಿದ್ದಲ್ಲಿ ಇಪ್ಪುರುಳು
ಕಾಣಿಸಿಕೊಳ್ಳುತ್ತದೆ. ಎತ್ತುಗೆಗಾಗಿ, ನೀನು ಇವತ್ತೇ ಪುಣೆಗೆ ಹೋಗ ಬೇಕೆಂದು ರಾಜು ಹೇಳಿದ್ದಾನೆ ಎಂಬ ಸೊಲ್ಲಿಗೆ ಆ ಸೊಲ್ಲಿನ ಆಡುಗನು ಪುಣೆಗೆ ಹೋಗಬೇಕು ಎಂಬ ಹುರುಳಿರಬಹುದು, ಇಲ್ಲವೇ ಅದರ ಕೇಳುಗನು ಪುಣೆಗೆ ಹೋಗಬೇಕು ಎಂಬ ಹುರುಳೂ ಇರಬಹುದು. ಅದರಲ್ಲಿ ಬಂದಿರುವ ನೀನು ಇವತ್ತೇ ಪುಣೆಗೆ ಹೋಗಬೇಕು ಎಂಬ ಸೊಲ್ಲು ನೇರವಾದ ಎತ್ತುಗೆಯಾದರೆ ಮೊದಲಿನ ಹುರುಳು ಸಿಗುತ್ತದೆ, ಮತ್ತು ನೇರವಲ್ಲದ ಎತ್ತುಗೆಯಾದರೆ ಎರಡನೆಯ ಹುರುಳು ಸಿಗುತ್ತದೆ.
ಈ ಇಪ್ಪುರುಳನ್ನು ಹೋಗಲಾಡಿಸಬೇಕೆಂದಿದ್ದಲ್ಲಿ, ನೇರವಾದ ಎತ್ತುಗೆ ಯಿರುವ ಮೊದಲನೆಯ ಹುರುಳು ಬಂದಿರುವಲ್ಲಿ “ನೀನು ಇವತ್ತೇ ಪುಣೆಗೆ ಹೋಗಬೇಕೆ”ಂದು ರಾಜು ಹೇಳಿದ್ದಾನೆ ಎಂಬುದಾಗಿ ಎತ್ತುಗೆಯ ಗುರುತನ್ನು ಬಳಸಬೇಕಾಗುತ್ತದೆ.
3.6 ತಿರುಳು
ಬರಹದಲ್ಲಿ ಬಳಕೆಯಾಗುವ ಸೊಲ್ಲುಗಳ ಇಟ್ಟಳ ಓದುಗರ ಮೇಲೆ ಎಂತಹ ಪರಿಣಾಮವನ್ನು ಬೀರಬಲ್ಲುದು ಎಂಬುದನ್ನು ಊಹಿಸಿಕೊಂಡು ಅದಕ್ಕೆ ಅನುಸಾರವಾಗಿ ಇಟ್ಟಳಗಳನ್ನು ಬದಲಾಯಿಸಿಕೊಳ್ಳಲು ಬರಹಗಾರರು ತಿಳಿದಿರಬೇಕಾಗುತ್ತದೆ.
ಬರಹದ ಗುರಿ ಮತ್ತು ವಿಶಯಗಳನ್ನು ಅನುಸರಿಸಿಯೂ ಪದ ಮತ್ತು ಇಟ್ಟಳಗಳ ಆಯ್ಕೆಯನ್ನು ನಡೆಸಬೇಕಾಗುತ್ತದೆ. ಇವು ಹೇಗೆ ಒಂದನ್ನೊಂದು ಅವಲಂಬಿಸಿರುತ್ತವೆ ಎಂಬುದನ್ನು ಸೊಲ್ಲರಿಮೆ ತಿಳಿಸುತ್ತದೆ.
ಬರಹವನ್ನು ತಿದ್ದಿ ಸರಿಪಡಿಸುವುದಕ್ಕೆ ಮತ್ತು ಬರಹದ ಗುರುತುಗಳನ್ನು ಪರಿಣಾಮಕಾರಿಯಾಗಿ ಬಳಸುವುದಕ್ಕೂ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ.