Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9 · Ch 10 · Ch 11
ನಾಲ್ಕನೇ ಪಸುಗೆ — ಅರಿಮೆಯ ಬರಹಗಳು
4.1 ಮುನ್ನೋಟ
ಸಾಮಾನ್ಯವಾಗಿ ಅರಿಮೆಯ (ವಿಜ್ನಾನದ) ಬರಹಗಳು ತುಂಬಾ ತೊಡಕು ತೊಡಕಾಗಿರುತ್ತವೆ. ಅವು ತಿಳಿಸಬೇಕಾಗಿರುವ ಅರಿಮೆಯ ವಿಶಯಗಳು ತುಂಬಾ ತೊಡಕಿನವಾಗಿರುವುದೇ ಇದಕ್ಕೆ ಕಾರಣ ಎಂಬ ಅನಿಸಿಕೆ ಹೆಚ್ಚಿನವರಲ್ಲೂ ಇದೆ. ಸ್ವಲ್ಪ ಮಟ್ಟಿಗೆ ಇದು ನಿಜವೆಂದೂ ಹೇಳಬಹುದು; ಆದರೆ, ಇಂತಹ ಬರಹಗಳನ್ನು ಬರೆಯುವವರಿಗೆ ತಿಳಿಸಬೇಕೆಂದಿರುವುದನ್ನು ತಿಳಿಯಾಗಿ ಮತ್ತು ಸರಳವಾಗಿ ತಿಳಿಸುವುದು ಹೇಗೆ ಎಂಬುದು ಗೊತ್ತಿಲ್ಲದಿರುವುದೂ ಅವರು ಬರೆದ ಬರಹಗಳು ತೊಡಕಿನವಾಗಲು ಕಾರಣವಾಗಬಲ್ಲುದು.
ಅರಿಮೆಯ ಬರಹಗಳಲ್ಲಿ ಹಲವು ಬಗೆಯ ಅರಿಮೆಯ (ಪಾರಿಬಾಶಿಕ) ಪದಗಳನ್ನು ಬಳಸಲೇಬೇಕಾಗುತ್ತದೆ. ಇವು ಬರಹದ ನುಡಿಯಲ್ಲಿಲ್ಲವಾದರೆ, ಬೇರೆ ನುಡಿಗಳಿಂದ ಅವನ್ನು ಎರವಲಾಗಿ ಪಡೆಯಬೇಕಾಗುತ್ತದೆ ಇಲ್ಲವೇ ನುಡಿಯಲ್ಲೇನೇ ಹೊಸದಾಗಿ ಉಂಟುಮಾಡಿಕೊಳ್ಳಬೇಕಾಗುತ್ತದೆ. ಈ ರೀತಿ ಎರವಲು ಪಡೆದ ಇಲ್ಲವೇ ಹೊಸದಾಗಿ ಉಂಟುಮಾಡಿದ ಪದಗಳು ನುಡಿಗೆ ತಕ್ಕುವಾಗಿಲ್ಲದಿರಬಹುದು; ಅವು ಬರಹದಲ್ಲಿ ಸರಿಯಾಗಿ ಹೊಂದಿಕೊಳ್ಳದಿರ ಬಹುದು; ಅವನ್ನು ನೆನಪಿನಲ್ಲಿರಿಸಿಕೊಳ್ಳಲು ಓದುಗರಿಗೆ ತೊಂದರೆಯಾಗುತ್ತಿರ ಬಹುದು; ಮತ್ತು ಅವು ಅರಿಮೆಯ ಬರಹಗಳಿಗೆ ಬೇಕಾಗುವಂತಹ ಕಟ್ಟುನಿಟ್ಟಿನ ಹುರುಳನ್ನು ಕೊಡದಿರಬಹುದು. ಈ ಕಾರಣಗಳಿಂದಾಗಿ, ಅವನ್ನು ಬಳಸಿರುವ ಅರಿಮೆಯ ಬರಹಗಳು ಓದುಗರಿಗೆ ಇನ್ನಶ್ಟು ತೊಡಕಿನವಾಗಿ ಕಾಣಿಸಿಕೊಳ್ಳ ಬಲ್ಲುವು.
ಮತ್ತೊಂದು ವಿಶಯದಲ್ಲೂ ಅರಿಮೆಯ ಬರಹಗಳು ಬೇರೆ ಬರಹಗಳಿಗಿಂತ ಹೆಚ್ಚು ತೊಡಕಿನವಾಗಿ ಕಾಣಿಸಿಕೊಳ್ಳಬಲ್ಲುವು: ತಿಳಿಸಬೇಕೆಂದಿರುವ ವಿಶಯ ವನ್ನು ಅವುಗಳಲ್ಲಿ ಹೆಚ್ಚು ಅಡಕವಾಗಿ ಮತ್ತು ಕಟ್ಟುನಿಟ್ಟಾಗಿ ಹೇಳಬೇಕಾಗುತ್ತದೆ, ಮತ್ತು ಇದಕ್ಕಾಗಿ ಅವುಗಳಲ್ಲಿ ಹಲವು ಬಗೆಯ ಸೊಲ್ಲರಿಮೆಯ
ಅರಿಮೆಯ ಬರಹಗಳು ಮಾರ್ಪುರುಳು(ರೂಪಕ)ಗಳನ್ನು ಬಳಸಬೇಕಾಗುತ್ತದೆ. ಇವನ್ನು ಬಳಸುವಲ್ಲಿ ಬರಹಗಾರರು ಓದುಗರ ಅಳವನ್ನು ಗಮನಿಸದಿದ್ದಲ್ಲಿ, ಅವುಗಳ ಬಳಕೆ ಯಿಂದಾಗಿಯೂ ಅರಿಮೆಯ ಬರಹಗಳು ಹೆಚ್ಚು ತೊಡಕಿನವಾಗಬಲ್ಲುವು.
4.2 ಸರಿಯಾಗಿ ತಿಳಿಸಿ ಹೇಳುವ ಬಗೆ
ಹಿಂದಿನ ಪಸುಗೆಯಲ್ಲಿ ವಿವರಿಸಿದ ಹಾಗೆ, ಬರಹಗಳಲ್ಲಿ ಬರುವ ಸೊಲ್ಲುಗಳ ನಡುವಿನ ಕೊಂಡಿ ಸರಿಯಾಗಿಲ್ಲದಿದ್ದರೆ, ಅವನ್ನು ಓದಿ ತಿಳಿಯುವ ಕೆಲಸ ತುಂಬಾ ತೊಡಕಿನದಾಗಬಲ್ಲುದು (4.2.1 ನೋಡಿ). ಈ ಕೊಂಡಿ ತಪ್ಪದ ಹಾಗೆ ನೋಡಿಕೊಳ್ಳುವುದು ಹೇಗೆ ಎಂಬುದು ಅರಿಮೆಯ ಬರಹಗಳನ್ನು ಬರೆಯುವ ಹೆಚ್ಚಿನ ತಿಳಿವಿಗರಿಗೂ ಗೊತ್ತಿರುವುದಿಲ್ಲ. ಅವರ ಬರಹಗಳು ಬೇರೆ ಬರಹಗಳಿಗಿಂತ ಹೆಚ್ಚು ತೊಡಕಿನವಾಗಿ ಕಾಣಿಸಲು ಇದು ಒಂದು
ಬರಹಗಳಲ್ಲಿ ಬರುವ ಕುರಳುಗಳ ಇಟ್ಟಳ ಮತ್ತು ಇಡೀ ಬರಹದ ಇಟ್ಟಳ
- ಇವೂ ಕೂಡ ಬರಹದ ಗುರಿಯನ್ನು ಸರಿಯಾಗಿ ಬೆಳೆಸುತ್ತಿಲ್ಲವಾದರೆ, ಅಂತಹ ಬರಹ ಓದುಗರಿಗೆ ತುಂಬಾ ತೊಡಕಿನದೆಂದು ಅನಿಸಬಲ್ಲುದು. ಚನ್ನಾಗಿ ಬರೆದಿರುವ ಕುರಳುಗಳಲ್ಲಿ ಮೊದಲನೆಯ ಸೊಲ್ಲು ಚುಟುಕಾಗಿ ಕುರಳಿನ ಗುರಿ ಎಂತಹದು ಎಂಬುದನ್ನು ಸೂಚಿಸಬೇಕು, ಮತ್ತು ಆಮೇಲೆ ಬರುವ ಸೊಲ್ಲುಗಳೆಲ್ಲ ಆ ಗುರಿಯನ್ನು ಬೆಳೆಸುವ ಕೆಲಸವನ್ನು ನಡೆಸಬೇಕು. ಕೊನೆಯ ಸೊಲ್ಲು ಈ ವಿವರಣೆಯನ್ನು ಮುಕ್ತಾಯಗೊಳಿಸಬೇಕು.
ಇಡೀ ಬರಹದ ಇಟ್ಟಳವೂ ಬರಹದ ಗುರಿಯನ್ನು ಸರಿಯಾಗಿ ಬೆಳೆಸು ವಂತಿರಬೇಕು. ಮೊದಲನೇ ಕುರಳಿನಲ್ಲಿ ಅದನ್ನು ಓದುಗರ ಮುಂದಿರಿಸಿ, ಆಮೇಲಿನ ಕುರಳುಗಳಲ್ಲಿ ಅದನ್ನು ಬೆಂಬಲಿಸುವಂತಹ ವಿಶಯಗಳನ್ನು ಕೊಡುತ್ತಾ ಹೋಗಬೇಕು. ಅದನ್ನು ಬೆಂಬಲಿಸದಿರುವಂತಹ ವಿಶಯಗಳಿದ್ದಲ್ಲಿ ಅವಕ್ಕೂ ಬೆಂಬಲಿಸುವ ವಿಶಯಗಳಿಗೂ ನಡುವಿರುವ ವ್ಯತ್ಯಾಸವನ್ನು ತಿಳಿಯ ಪಡಿಸಿ, ಬರಹದ ಕೊನೆಯಲ್ಲಿ ಒಂದು ತೀರ್ಮಾನಕ್ಕೆ ಬರಬೇಕು. ಇಂತಹ ಇಟ್ಟಳವಿರುವ ಬರಹ ಸುಳುವಾಗಿ ಓದಿಸಿಕೊಂಡು ಹೋಗುತ್ತದೆ.
ಅರಿಮೆಯ ಬರಹಗಳನ್ನು ಬರೆಯುವವರಿಗೆ ಈ ರೀತಿ ತಮ್ಮ ಬರಹವನ್ನು ಓದುಗರಿಗೆ ಅನುಕೂಲವಾಗುವ ಹಾಗೆ ಮಾರ್ಪಡಿಸುವುದು ಹೇಗೆ ಎಂಬುದು ಗೊತ್ತಿರಬೇಕು, ಮತ್ತು ಇದಕ್ಕಾಗಿ ಅವರು ತಮ್ಮ ಬರಹಗಳಲ್ಲಿ ಬರುವ
ಸೊಲ್ಲುಗಳ ಇಟ್ಟಳ ಮತ್ತು ಕುರಳುಗಳ ಇಟ್ಟಳಗಳನ್ನು ಗಮನಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತಿರಬೇಕು.
4.3 ಅರಿಮೆಯ ಪದಗಳ ಬಳಕೆ
ಅರಿಮೆಯ ಬರಹಗಳಲ್ಲಿ ನೂರಾರು ಅರಿಮೆಯ (ಪಾರಿಬಾಶಿಕ) ಪದ ಇಲ್ಲವೇ ಪದಕಂತೆಗಳನ್ನು ಬಳಸಲೇಬೇಕಾಗುತ್ತದೆ. ಇವು ಎರಡು-ಮೂರು ಸೊಲ್ಲು ಗಳಲ್ಲಿ ಇಲ್ಲವೇ ಇನ್ನೂ ಹೆಚ್ಚು ಸೊಲ್ಲುಗಳಲ್ಲಿ ಹೇಳಬೇಕಾಗುವ ವಿಶಯಗಳನ್ನು ತುಂಬಾ ಅಡಕವಾಗಿ ಒಂದೆರಡು ಪದಗಳ ಮೂಲಕ ಸೂಚಿಸಬಲ್ಲುವು, ಮತ್ತು ಎಲ್ಲಾ ಬಳಕೆಗಳಲ್ಲೂ ಒಂದು ನಿಶ್ಚಿತವಾದ ಹುರುಳನ್ನು ಮಾತ್ರವೇ ಕೊಡುತ್ತಿರಬಲ್ಲುವು. ಈ ಎರಡು ಕಾರಣಗಳಿಗಾಗಿ, ಅವು ಅರಿಮೆಯ ಬರಹಗಳಿಗೆ ತುಂಬಾ ಅವಶ್ಯವೆಂದೆನಿಸುತ್ತವೆ.
ಎತ್ತುಗೆಗಾಗಿ, ಆಗುಗ ಎಂಬ ಪದ ಸೊಲ್ಲರಿಮೆಯಲ್ಲಿ ಒಂದು ಅರಿಮೆಯ ಪದವಾಗಿದ್ದು, ಅದು ತನ್ನ ಹತೋಟಿಯಲ್ಲಿಲ್ಲದಿರುವಂತಹ ಎಸಕ ವೊಂದರಲ್ಲಿ ತೊಡಗಿಕೊಂಡಿರುವ ವ್ಯಕ್ತಿ, ವಸ್ತು ಮೊದಲಾದುವನ್ನು ಅಡಕವಾಗಿ ಸೂಚಿಸುತ್ತದೆ. ಈ ರೀತಿ ಹುರುಳುಗಳನ್ನು ತುಂಬಾ ಅಡಕವಾಗಿ ತಿಳಿಸುತ್ತವೆಯೆಂಬುದೇ ಅರಿಮೆಯ ಪದಗಳು ಓದುಗರಿಗೆ ತೊಡಕಿನವಾಗಿ ಕಾಣಿಸಲು ಮುಕ್ಯ ಕಾರಣ. ಅವು ಬರಹದಲ್ಲಿ ಬಂದಾಗಲೆಲ್ಲ ಅವುಗಳ ಹಿಂದೆ ಅಡಗಿರುವ ತೊಡಕಿನ ಹುರುಳನ್ನು ಅವರು ನೆನಪಿಗೆ ತಂದುಕೊಳ್ಳ ಬೇಕಾಗುತ್ತದೆ.
ಇದಲ್ಲದೆ, ಅರಿಮೆಯ ಪದಗಳ ಹುರುಳುಗಳು ಒಂದಕ್ಕೊಂದು ತಳಕು ಹಾಕಿಕೊಂಡಿರುವುದೂ ಅವು ಹೆಚ್ಚು ತೊಡಕಿನವಾಗಿ ಕಾಣಿಸಲು ಕಾರಣ ವಾಗುತ್ತದೆ. ಎತ್ತುಗೆಗಾಗಿ, ಕನ್ನಡದ ಸೊಲ್ಲರಿಮೆಯಲ್ಲಿ ಬರುವ ಪರಿಚೆ ಎಂಬ ಪದದ ಹುರುಳನ್ನು ತಿಳಿಯಬೇಕಿದ್ದಲ್ಲಿ ಹೆಸರು ಮತ್ತು ಎಸಕ ಎಂಬ ಬೇರೆ ಎರಡು ಪದಗಳ ಹುರುಳನ್ನೂ ತಿಳಿದಿರಬೇಕಾಗುತ್ತದೆ.
ಅರಿಮೆಯ ಪದಗಳನ್ನು ಉಂಟುಮಾಡುವವರು ಅವು ಇನ್ನಶ್ಟು ತೊಡಕಿನ ವಾಗುವಂತೆ ಮಾಡಬಲ್ಲರು. ಅವುಗಳ ಪರಿಚೆ (ಗುಣ) ನುಡಿಯಲ್ಲಿ ಬಳಕೆಯಾಗುವ ಬೇರೆ ಪದಗಳ ಪರಿಚೆಗೆ ಹೊಂದಿಕೆಯಾಗದಿದ್ದಲ್ಲಿ, ಮತ್ತು ಅವುಗಳಿಗೆ ಬೇಕಾಗುವ ಹಲವು ಬಗೆಯ ಪದರೂಪಗಳನ್ನು ನುಡಿಯಲ್ಲಿ ಬಳಕೆಯಲ್ಲಿರುವ ಸೊಲ್ಲರಿಮೆಯ ಕಟ್ಟಲೆಗಳ ಮೂಲಕವೇನೇ ಉಂಟು
ಮಾಡಲು ಬರುವುದಿಲ್ಲವಾದಲ್ಲಿ ಅವು ಓದುಗರಿಗೆ ಇನ್ನಶ್ಟು ತೊಡಕಿನವಾಗಿ ಕಾಣಿಸಬಲ್ಲುವು.
4.3.1 ಕನ್ನಡದ ಅರಿಮೆಯ ಪದಗಳು
ಅರಿಮೆಯ (ಪಾರಿಬಾಶಿಕ) ಪದಗಳನ್ನು ಬಳಸುವಲ್ಲಿ ಕನ್ನಡದ ತಿಳಿವಿಗರು ಒಂದು ದೊಡ್ಡ ತಪ್ಪನ್ನು ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ. ಇದರಿಂದಾಗಿ, ಇವತ್ತು ಕನ್ನಡದ ಅರಿಮೆಯ ಬರಹಗಳು ಅನವಶ್ಯಕವಾಗಿ ಓದುಗರಿಗೆ ತುಂಬಾ ತೊಡಕಿನ ಬರಹಗಳಾಗಿ ಕಾಣಿಸುತ್ತವೆ. ಇದನ್ನು ನಾನು ಕನ್ನಡ ಬರಹವನ್ನು ಸರಿಪಡಿಸೋಣ ಎಂಬ ಪುಸ್ತಕದಲ್ಲಿ ವಿವರವಾಗಿ ತೋರಿಸಿಕೊಟ್ಟಿದ್ದೇನೆ.
ಇಂಗ್ಲಿಶ್ನಂತಹ ಬೇರೆ ನುಡಿಗಳಲ್ಲಿರುವ ಅರಿಮೆಯ ಪದಗಳಿಗೆ ಸಮನಾ ಗಿರುವ ಪದಗಳು ಕನ್ನಡದಲ್ಲಿಲ್ಲವಾದಾಗ, ನಮ್ಮೆದುರು ಎರಡು ದಾರಿಗಳಿವೆ: ಅಂತಹ ಪದಗಳನ್ನು ಎರವಲಾಗಿ ಪಡೆದು ಬಳಸುವುದು ಮತ್ತು ಕನ್ನಡದಲ್ಲೇನೇ ಹೊಸದಾಗಿ ಪದಗಳನ್ನು ಉಂಟುಮಾಡಿಕೊಳ್ಳುವುದು.
ಪದಗಳನ್ನು ಎರವಲಾಗಿ ಪಡೆಯುವುದಿದ್ದಲ್ಲಿ, ಅವುಗಳಲ್ಲಿ ಹಲಕೆಲವು ಮಾರ್ಪಾಡುಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ. ಅವು ನಮ್ಮ ನುಡಿಗೆ ಹೊಂದಿಕೊಳ್ಳುವಂತೆ ಮಾಡಲು, ಮತ್ತು ಅವುಗಳಿಂದ ಸೊಲ್ಲುಗಳಲ್ಲಿ ಬಳಸಲು ಬೇಕಾಗುವ ಹಲವಾರು ರೂಪಗಳನ್ನು ನಮ್ಮ ನುಡಿಯವೇ ಆದ ಸೊಲ್ಲರಿಮೆಯ ಕಟ್ಟಲೆಗಳ ಮೂಲಕ ಪಡೆಯಲು ಈ ಮಾರ್ಪಾಡುಗಳು ನೆರವಾಗುತ್ತವೆ.
ನಮ್ಮ ನುಡಿಯಲ್ಲೇನೇ ಅವಕ್ಕೆ ಸಮನಾಗಿರುವ ಹೊಸ ಪದಗಳನ್ನು ಉಂಟು ಮಾಡಿಕೊಳ್ಳುವಂತಹ ಎರಡನೆಯ ದಾರಿಯನ್ನು ಆರಿಸಿಕೊಂಡಲ್ಲಿ, ಅವನ್ನು ಈ ರೀತಿ ನಮ್ಮ ನುಡಿಗೆ ಹೊಂದಿಕೊಳ್ಳುವಂತೆ ಮಾಡುವ ಕೆಲಸ ಇಲ್ಲವಾಗು ತ್ತದೆ. ಆ ಪದಗಳು ನಮ್ಮ ನುಡಿಯವೇ ಆದ ಕಾರಣ, ನಮಗೆ ಬೇಕಾಗುವ ಪದರೂಪಗಳನ್ನೆಲ್ಲ ನಮ್ಮ ನುಡಿಯ ಸೊಲ್ಲರಿಮೆಯ ಕಟ್ಟಲೆಗಳನ್ನೇ ಬಳಸಿ ಸುಳುವಾಗಿ ಉಂಟುಮಾಡಿಕೊಳ್ಳಬಹುದು.
ಆದರೆ, ಕನ್ನಡದ ತಿಳಿವಿಗರು ಈ ಎರಡನೆಯ ದಾರಿಯನ್ನು ಆರಿಸಿ ಕೊಳ್ಳುವಲ್ಲಿ ತಪ್ಪುಮಾಡಿದ್ದಾರೆ. ಕನ್ನಡದಲ್ಲಿ ಅರಿಮೆಯ ಪದಗಳನ್ನು ಎರವಲು ಪಡೆಯುವ ಬದಲು ಹೊಸದಾಗಿ ಉಂಟುಮಾಡುತ್ತೇವೆಂದು ಹೊರಟ ಈ ತಿಳಿವಿಗರು ಅದಕ್ಕಾಗಿ ಕನ್ನಡದವೇ ಆದ ಪದಗಳನ್ನು ಬಳಸುವ ಬದಲು
ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಬಳಸುತ್ತಿದ್ದಾರೆ! ಇದಲ್ಲದೆ, ಈ ಪದಗಳು ಸಂಸ್ಕ್ರುತದಲ್ಲಿ ಹೇಗಿವೆಯೋ (ಇಲ್ಲವೇ ಇರಬಲ್ಲುವೋ) ಹಾಗೆಯೇ ಕನ್ನಡದಲ್ಲೂ ಇರಬೇಕೆಂಬ ಕಟ್ಟಲೆಯನ್ನೂ ಮಾಡಿಕೊಂಡಿದ್ದಾರೆ! ಇದರಿಂದಾಗಿ, ಈ ಪದಗಳನ್ನು ಹೊಸದಾಗಿ ಉಂಟುಮಾಡಲಾಗಿದೆಯಾದರೂ ಅವು ಕನ್ನಡದ ಸೊಲ್ಲುಗಳಲ್ಲಿ ಹೊಂದಿಕೊಳ್ಳುವುದಿಲ್ಲ, ಮತ್ತು ಅವಕ್ಕಾಗಿ ಕನ್ನಡದ ಸೊಲ್ಲರಿಮೆಯ ಕಟ್ಟಲೆಗಳಿಗಿಂತ ತೀರ ಬೇರಾಗಿರುವ ಸಂಸ್ಕ್ರುತದ ಕಟ್ಟಲೆಗಳನ್ನು ಬಳಸಬೇಕಾಗುತ್ತದೆ!
ಅರಿಮೆಯ ಪದಗಳನ್ನು ಎರವಲಾಗಿ ಪಡೆಯುವ ಬದಲು ನಮ್ಮ ನುಡಿ ಯಲ್ಲೇನೇ ಹೊಸ ಪದಗಳನ್ನು ಉಂಟುಮಾಡಲು ನಾವು ಯಾಕೆ ಬಯಸುತ್ತೇವೆ, ಅದರ ಮೂಲ ಗುರಿಯೇನು ಎಂಬುದನ್ನು ಇಲ್ಲಿ ಗಮನಿಸುವುದು ಅವಶ್ಯ. ಮೇಲೆ ತಿಳಿಸಿದ ಹಾಗೆ, ನಾವು ನಮ್ಮ ನುಡಿಯಲ್ಲಿ ಉಂಟುಮಾಡಿದ ಪದಗಳು ಎರವಲು ಪದಗಳಿಗಿಂತ ಹೆಚ್ಚು ಚನ್ನಾಗಿ ನಮ್ಮ ನುಡಿಯಲ್ಲಿ ಹೊಂದಿಕೊಳ್ಳ ಬಲ್ಲುವು ಎಂಬುದು ಹಾಗೆ ಮಾಡಲು ಒಂದು ಕಾರಣ, ಮತ್ತು ಅವನ್ನು ಸೊಲ್ಲುಗಳಲ್ಲಿ ಬಳಸಲು ಬೇಕಾಗುವ ಪದರೂಪಗಳನ್ನು ನಮ್ಮ ನುಡಿಯ ಒಟ್ಟುಗಳ ಮತ್ತು ಕಟ್ಟಲೆಗಳ ಮೂಲಕವೇನೇ ಉಂಟುಮಾಡಲು ಬರುತ್ತದೆ ಎಂಬುದು ಇನ್ನೊಂದು ಕಾರಣ.
ಆದರೆ, ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ಉಂಟುಮಾಡಿರುವ ಅರಿಮೆಯ ಪದಗಳು ಕನ್ನಡದ ಸೊಲ್ಲುಗಳಲ್ಲಿ ಹೊಂದಿಕೊಳ್ಳುವುದಿಲ್ಲ; ಈ ವಿಶಯದಲ್ಲಿ ಅವು ಇಂಗ್ಲಿಶ್ ಪದಗಳಿಗಿಂತ ಬೇರಾಗಿಲ್ಲ; ಕೆಲವಂತೂ ಮೂಲ ಇಂಗ್ಲಿಶ್ ಪದಗಳಿಗಿಂತಲೂ ಹೆಚ್ಚು ತೊಡಕಿನವಾಗಿವೆ. ಇದಲ್ಲದೆ, ಅವುಗಳಿಂದ ಪದರೂಪಗಳನ್ನು ಪಡೆಯುವುದಕ್ಕಾಗಿ ಸಂಸ್ಕ್ರುತದ ಒಟ್ಟುಗಳನ್ನು ಮತ್ತು ಕಟ್ಟಲೆಗಳನ್ನು ಬಳಸಬೇಕಾಗುತ್ತದೆ. ಹಾಗಾಗಿ, ಈ ಪದಗಳನ್ನು ಬಳಸುವುದರ ಮೂಲಕ ಮೇಲೆ ಸೂಚಿಸಿದ ಎರಡು ಗುರಿಗಳನ್ನೂ ನಾವು ತಲಪುವುದೇ
4.3.2 ಸೊಲ್ಲರಿಮೆಯ ತಿಳಿವು
ಅರಿಮೆಯ ಪದಗಳನ್ನು ಹೊಸದಾಗಿ ಉಂಟುಮಾಡುವವರಿಗೆ ಆ ಪದಗಳಿಗೆ ಸಂಬಂದಿಸಿದ ಅರಿಮೆಯ ತಿಳಿವು ಮಾತ್ರವಲ್ಲದೆ, ಕನ್ನಡದ ಸೊಲ್ಲರಿಮೆಯ ತಿಳಿವೂ ಬೇಕಾಗುತ್ತದೆ. ಕನ್ನಡದಲ್ಲಿ ಅರಿಮೆಯ ಪದಗಳನ್ನು ಉಂಟುಮಾಡಿ ದವರಿಗೆ ಈ ಎರಡನೇ ಬಗೆಯ ತಿಳಿವು ಇರಲಿಲ್ಲವಾದ ಕಾರಣ, ಅವರು
ಉಂಟುಮಾಡಿರುವ ಪದಗಳಲ್ಲಿ ಹಲವು ಬಗೆಯ ಗೊಂದಲಗಳು ಮೂಡಿ ಬಂದಿವೆ. ಇದರಿಂದಾಗಿ, ಅರಿಮೆಯ ಪದಗಳಿಗೆ ಅವಶ್ಯವಾಗಿಯೂ ಬೇಕಾಗಿರುವ ಕಟ್ಟುನಿಟ್ಟು ಈ ಪದಗಳಲ್ಲಿ ಇಲ್ಲವಾಗಿದೆ. ಇದನ್ನೂ ನಾನು ಕನ್ನಡ ಬರಹವನ್ನು ಸರಿಪಡಿಸೋಣ ಪುಸ್ತಕದಲ್ಲಿ ವಿವರವಾಗಿ ತೋರಿಸಿಕೊಟ್ಟಿದ್ದೇನೆ.
ಎತ್ತುಗೆಗಾಗಿ, ಇಂಗ್ಲಿಶ್ನಲ್ಲಿ ಹೆಸರು (ಟಿouಟಿ) ಪದ ಮತ್ತು ಪರಿಚೆ (ಚಿಜರಿeಛಿಣive) ಪದಗಳ ನಡುವೆ ವ್ಯತ್ಯಾಸವಿದೆ. ಕನ್ನಡದಲ್ಲೂ ಇಂತಹದೇ ವ್ಯತ್ಯಾಸವಿದೆ. ಆದರೆ, ಸಂಸ್ಕ್ರುತದಲ್ಲಿ ಈ ವ್ಯತ್ಯಾಸವಿಲ್ಲ. ಅದರಲ್ಲಿ ಹೆಸರು ಪದವಾಗಿ ಮತ್ತು ಹೆಸರು ಪದದ ಪರಿಚೆಯನ್ನು ತಿಳಿಸುವ ಪದವಾಗಿ ಒಂದೇ ಪದ ಇಲ್ಲವೇ ಪದರೂಪವನ್ನು ಬಳಸಬೇಕಾಗುತ್ತದೆ. ನಿಜಕ್ಕೂ ಸಂಸ್ಕ್ರುತದಲ್ಲಿ ಬರುವ ಪದಕಂತೆಗಳಲ್ಲಿ ಯಾವುದು ಹೆಸರು ಪದ (ವಿಶೇಶ್ಯ) ಮತ್ತು ಯಾವುದು ಅದರ ಪರಿಚೆಯನ್ನು ತಿಳಿಸುವ ಪದ (ವಿಶೇಶಣ) ಎಂಬುದಾಗಿ ವ್ಯತ್ಯಾಸವನ್ನು ತೋರಿಸಿಕೊಡಲು ಬರುವುದೇ ಇಲ್ಲ. ಇದಲ್ಲದೆ, ಅದು ಸಂಸ್ಕ್ರುತದ ಸೊಲ್ಲು ಗಳನ್ನು ಉಂಟುಮಾಡುವಲ್ಲಿ ಬೇಕಾಗುವುದೂ ಇಲ್ಲ.
ಇಂಗ್ಲಿಶ್ ನುಡಿಯಲ್ಲಿ ಬಳಕೆಯಲ್ಲಿರುವ ಹೆಸರು ಪದಗಳಿಗೆ ಮತ್ತು ಪರಿಚೆ ಪದಗಳಿಗೆ ಬದಲಾಗಿ ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಬಳಸಿ ಕನ್ನಡಕ್ಕಾಗಿ ಅರಿಮೆಯ ಪದಗಳನ್ನು ಉಂಟುಮಾಡಲು ಹೊರಟಾಗ, ಈ ವ್ಯತ್ಯಾಸ ತುಂಬಾ ತೊಂದರೆ ಕೊಡುತ್ತದೆ. ಕನ್ನಡದ ತಿಳಿವಿಗರು ಉಂಟು ಮಾಡಿರುವ ಅರಿಮೆಯ ಪದಗಳಲ್ಲಿ ಇದರಿಂದಾಗಿ ಹಲವು ಬಗೆಯ ಗೊಂದಲಗಳು ಕಾಣಿಸಿಕೊಂಡಿವೆ.
ಎತ್ತುಗೆಗಾಗಿ, ಲಕ್ಶ್ಮಣರಾವ್ ಮತ್ತು ಕ್ರುಶ್ಣಬಟ್ ತಯಾರಿಸಿದ ಇಂಗ್ಲಿಶ್- ಕನ್ನಡ ವಿಜ್ನಾನ ಶಬ್ದಕೋಶದಲ್ಲಿ ಕೊಟ್ಟಿರುವ ಅರಿಮೆಯ ಪದಗಳನ್ನು ಗಮನಿಸಬಹುದು. ಇವುಗಳಲ್ಲಿ ಕೆಲವು ಪದಗಳು ಇಂಗ್ಲಿಶ್ನಲ್ಲಿರುವ ಮೇಲಿನ ವ್ಯತ್ಯಾಸಕ್ಕೆ ಬದಲಾಗಿ ಕನ್ನಡದಲ್ಲಿ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ; ಅವುಗಳ ತಯಾರಿಕೆಯಲ್ಲಿ ಒಂದೇ ಒಟ್ಟನ್ನು ಬಳಸಲಾಗಿದೆ.
ಹೆಸರುಪದದಲ್ಲಿ ನ/ಣ ಒಟ್ಟು ಕನ್ವರ್ಜೆನ್್ಸ ಅಭಿಸರಣ ಡಿಫರೆನ್ಶಿಯೇಶನ್ ಅವಕಲನ ಡಯ್ಜೆಶನ್ ಡಯಸ್ಟೋಲ್
ಪಚನ ವ್ಯಾಕುಂಚನ
ಪರಿಚೆಪದದಲ್ಲೂ ನ/ಣ ಒಟ್ಟು ಕನ್ವರ್ಜೆಂಟ್ ಅಭಿಸರಣ ಡಿಫರೆನ್ಶಿಯಲ್ ಅವಕಲನ ಡಯ್ಜೆಸ್ಟಿವ್ ಡಯಸ್ಟೋಲಿಕ್ ವ್ಯಾಕುಂಚನ
ಪಚನ
ಹೆಸರುಪದದಲ್ಲಿ ಕ ಒಟ್ಟು ಕ್ರಯೋಜೆನ್ ಸಪ್ಲಿಮೆಂಟ್ ರಿಫ್ಲಕ್ಟರ್ ರೆಸಿಸ್ಟರ್ ಪ್ರಜೆಕ್ಟರ್ ರೆಸೊನೇಟರ್
ಶೈತ್ಯಜನಕ ಪರಿಪೂರಕ ಪ್ರತಿಫಲಕ ರೋಧಕ ಪ್ರಕ್ಷೇಪಕ ಅನುರಣಕ
ಪರಿಚೆಪದದಲ್ಲೂ ಕ ಒಟ್ಟು ಕ್ರಯೋಜನಿಕ್ ಶೈತ್ಯಜನಕ ಸಪ್ಲಿಮೆಂಟರಿ ಪರಿಪೂರಕ ರಿಫ್ಲಕ್ಟಿವ್ ಪ್ರತಿಫಲಕ ರೆಸಿಸ್ಟೆಂಟ್ ರೋಧಕ ಪ್ರಜೆಕ್ಟಿವ್ ಪ್ರಕ್ಷೇಪಕ ರೆಸೊನೆಂಟ್ ಅನುರಣಕ
ಇನ್ನು ಕೆಲವು ಕಡೆಗಳಲ್ಲಿ ಹೆಸರುಪದ-ಪರಿಚೆಪದ ವ್ಯತ್ಯಾಸವನ್ನು ತೋರಿಸಲಾಗಿದೆಯಾದರೂ ಅದಕ್ಕಾಗಿ ಬಳಕೆಯಾಗಿರುವ ಒಟ್ಟು(ಪ್ರತ್ಯಯ)ಗಳ ವಿಶಯದಲ್ಲಿ ಯಾವ ಬಗೆಯ ಕಟ್ಟುನಿಟ್ಟೂ ಕಾಣಿಸುವುದಿಲ್ಲ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಪದಗಳಲ್ಲಿ ನ/ಣ ಒಟ್ಟನ್ನು ಹೆಸರುಪದಗಳಲ್ಲೂ ಕ ಒಟ್ಟನ್ನು ಪರಿಚೆಪದಗಳಲ್ಲೂ ಬಳಸಲಾಗಿದೆ. ಆದರೆ, ಮೇಲೆ ಕೊಟ್ಟಿರುವ ಪದಗಳಲ್ಲಿ ಇವೆರಡೂ ಹೆಸರುಪದ-ಪರಿಚೆಪದ ವ್ಯತ್ಯಾಸವನ್ನು ತೋರಿಸ ದಿರುವಲ್ಲಿ ಬಂದಿವೆ.
ಹೆಸರುಪದದಲ್ಲಿ ನ/ಣ ಒಟ್ಟು ವಿರೇಚನ ಕೆತೇರ್ಸಿಸ್ ಘಷ್ರಣ ಎಬ್ರೇಶನ್ ಸ್ತಬ್ಧನ ಎಬೋರ್ಶನ್ ಚಾಲನ ಮೋಶನ್ ಪಚನ ಡಯ್ಜೆಶನ್ ಸಂಶ್ಲೇಷಣ ಸಿಂತೆಸಿಸ್
ಪರಿಚೆಪದದಲ್ಲಿ ಕ ಒಟ್ಟು ಕತೇರ್ಟಿಕ್ ಎಬ್ರೇಸಿವ್ ಅಬೊರ್ಟಿವ್ ಮೋಟಿವ್ ಡಯ್ಜೆಸ್ಟಿವ್
ವಿರೇಚಕ ಘಷ್ರಕ ಸ್ತಬ್ಧಕ ಪಾಚಕ ಸಂಶ್ಲೇಷಕ
ಇದಕ್ಕೆ ಬದಲು, ಕೆಳಗೆ ಕೊಟ್ಟಿರುವ ಪದಗಳಲ್ಲಿ ಇದೇ ನ/ಣ ಮತ್ತು ಕ ಒಟ್ಟುಗಳೆರಡನ್ನೂ ಹೆಸರು ಪದಗಳಲ್ಲೇನೇ ಬಳಸಿದ್ದು, ಅವುಗಳ ನಡುವಿನ ವ್ಯತ್ಯಾಸವನ್ನು ಎರಡು ಬಗೆಯ ಹೆಸರು ಪದಗಳ ನಡುವಿರುವ ವ್ಯತ್ಯಾಸವನ್ನು ಸೂಚಿಸುವುದಕ್ಕಾಗಿ ಬಳಸಲಾಗಿದೆ:
ಕೆಲಸವನ್ನು ಹೆಸರಿಸಲು ನ/ಣ ಒಟ್ಟು ಕಂಡಕ್ಶನ್ ಇನ್ಸುಲೇಶನ್ ಓಸಿಲೇಶನ್
ವಹನ ನಿರೋಧನ ದೋಲನ
ವ್ಯಕ್ತಿ/ವಸ್ತುವನ್ನು ಹೆಸರಿಸಲು ಕ ಒಟ್ಟು ಕಂಡಕ್ಟರ್ ಇನ್ಸುಲೇಟರ್ ಓಸಿಲೇಟರ್
ವಾಹಕ ನಿರೋಧಕ ದೋಲಕ
ಪೋಲರಯ್ಸೇಶನ್ ಧ್ರುವೀಕರಣ ಪ್ರಪಲ್ಶನ್ ಆಲ್ಟರ್ನೇಶನ್ ಟ್ರಾನ್್ಸಮಿಶನ್
ನೋದನ ಪರ್ಯಯನ ಪ್ರೇಷಣೆ
ಪೋಲರಂii್ಸರ್ ಪ್ರಪೆಲರ್ ಆಲ್ಟರ್ನೇಟರ್ ಟ್ರಾನ್್ಸಮಿಟರ್
ಧ್ರುವೀಕಾರಕ ನೋದಕ ಪರ್ಯಯಕ ಪ್ರೇಷಕ
ಇಂಗ್ಲಿಶ್ನಲ್ಲಿರುವ ಮತ್ತು ಸಂಸ್ಕ್ರುತದಲ್ಲಿಲ್ಲದ ಹೆಸರುಪದ-ಪರಿಚೆಪದ ವ್ಯತ್ಯಾಸವನ್ನು ಕನ್ನಡಕ್ಕಾಗಿ ಈ ಅರಿಮೆಯ ಪದಗಳಲ್ಲಿ ತೋರಿಸಬೇಕಾಗಿದೆ. ಇದು ಸುಲಬದ ಕೆಲಸವಲ್ಲ ಎಂಬುದನ್ನು ಮೇಲಿನ ಪದಗಳ ರಚನೆಯಲ್ಲಿ ಕನ್ನಡದ ತಿಳಿವಿಗರು ಎಶ್ಟೆಲ್ಲಾ ಗೊಂದಲಗಳಿಗೆಡೆಯಾಗಿದ್ದಾರೆ ಎಂಬುದು ಸ್ಪಶ್ಟವಾಗಿ ತೋರಿಸಿಕೊಡುತ್ತದೆ. ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸಿ ರಚಿಸಿರುವ ಅರಿಮೆಯ ಪದಗಳಲ್ಲಿ ಇಂತಹವೇ ಬೇರೆಯೂ ಕೆಲವು ಗೊಂದಲಗಳು ಕಾಣಿಸುತ್ತಿದ್ದು, ಅರಿಮೆಯ ಪದಗಳಲ್ಲಿರಬೇಕಾದ ಕಟ್ಟುನಿಟ್ಟು ಇವುಗಳಲ್ಲಿ ಕಾಣಿಸುವುದಿಲ್ಲ ಎಂಬುದನ್ನು ಇಲ್ಲಿ ನಾವು ಗಮನಿಸಬೇಕಾಗಿರುವ ಮುಕ್ಯ ವಿಶಯ.
4.3.3 ಕನ್ನಡ ಪದಗಳ ಬಳಕೆ
ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಇಂತಹ ಅರಿಮೆಯ ಪದಗಳನ್ನು ಉಂಟುಮಾಡಿದ್ದಲ್ಲಿ, ಈ ಸಮಸ್ಯೆಗಳಾವುವೂ ಬರುತ್ತಿರಲಿಲ್ಲ. ಯಾಕೆಂದರೆ, ಕನ್ನಡಕ್ಕೆ ಬೇಕಾಗುವ ಎಲ್ಲಾ ಬಗೆಯ ವ್ಯತ್ಯಾಸಗಳನ್ನೂ ಅದರಲ್ಲಿ ಬಳಕೆಯಲ್ಲಿರುವ ಒಟ್ಟುಗಳ ಮೂಲಕ ಸೂಚಿಸಲು ಬರುತ್ತದೆ. ಸಂಸ್ಕ್ರುತದಲ್ಲಿ ಸಂಸ್ಕ್ರುತ ನುಡಿಗೆ ಬೇಕಾಗುವ ವ್ಯತ್ಯಾಸಗಳನ್ನು ಸೂಚಿಸಲು ಬರುತ್ತದೆಯಲ್ಲದೆ ಕನ್ನಡದಂತಹ ಬೇರೆ ನುಡಿಗಳಿಗೆ ಬೇಕಾಗುವ ವ್ಯತ್ಯಾಸಗಳಲ್ಲಿ ಎಲ್ಲವನ್ನೂ ಸೂಚಿಸಲು ಬರುವುದಿಲ್ಲ.
ಕನ್ನಡದವೇ ಆದ ಪದಗಳನ್ನು ಬಳಸಿ ಅರಿಮೆಯ ಪದಗಳನ್ನು ಉಂಟು ಮಾಡಿದಲ್ಲಿ ಅವು ದಿನಬಳಕೆಯಲ್ಲಿ ಕೊಡುವ ಹುರುಳಿಗೂ ಅರಿಮೆಯ ಬರಹ ಗಳಲ್ಲಿ ಕೊಡಬೇಕಾಗಿರುವ ಹುರುಳಿಗೂ ನಡುವೆ ಗೊಂದಲವುಂಟಾಗಬಲ್ಲುದು ಎಂಬುದಾಗಿ ಕೆಲವರು ವಾದಿಸುತ್ತಾರೆ. ಈ ಕಾರಣಕ್ಕಾಗಿ, ಇಂಗ್ಲಿಶ್ನಲ್ಲಿ ಲ್ಯಾಟಿನ್ ಇಲ್ಲವೇ ಗ್ರೀಕ್ ಪದಗಳನ್ನು ಬಳಸಿದ ಹಾಗೆ, ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸುವುದೇ ಸರಿಯಾದ ದಾರಿ ಎಂಬುದಾಗಿ ಇವರು ಹೇಳುತ್ತಾರೆ. ಆದರೆ, ನಿಜಕ್ಕೂ ಇಂಗ್ಲಿಶ್, ಜರ್ಮನ್ ಮೊದಲಾದ ಯುರೋಪಿನ ನುಡಿಗಳಲ್ಲಿ
ಅರಿಮೆಯ ಪದಗಳು ಹೇಗೆ ಬೆಳೆದು ಬಂದಿವೆ ಎಂಬುದರ ಸರಿಯಾದ ಅರಿವಿಲ್ಲದೆ ಅವರು ಈ ವಾದವನ್ನು ಮುಂದಿಟ್ಟಿದ್ದಾರೆ.
ಯುರೋಪಿನಲ್ಲಿ ಹದಿನೇಳನೇ ಶತಮಾನದ ಕೊನೆಯ ವರೆಗೂ ಲ್ಯಾಟಿನ್ ನಲ್ಲಿ ಬರೆದ ಪಟ್ಯಪುಸ್ತಕಗಳನ್ನೇ ಅರಿಮೆಯ (ವಿಜ್ನಾನದ) ಕಲಿಕೆಗೆ ಬಳಸ ಲಾಗುತ್ತಿತ್ತು. ಇವುಗಳಲ್ಲಿ ಬರುತ್ತಿದ್ದ ವಿಶಯಗಳಲ್ಲಿ ಹೆಚ್ಚಿನವನ್ನೂ ಗ್ರೀಕ್ ತಿಳಿವಿಗರು ಕಂಡುಹಿಡಿದಿದ್ದರು. ಈ ಎರಡು ಕಾರಣಗಳಿಗಾಗಿ, ಯುರೋಪಿನ ನುಡಿಗಳಲ್ಲಿ ಬಳಕೆಗೆ ಬಂದ ಅರಿಮೆಯ ಪದಗಳಲ್ಲಿ ಹೆಚ್ಚಿನವೂ ಗ್ರೀಕ್ ಇಲ್ಲವೇ ಲ್ಯಾಟಿನ್ ಮೂಲದವಾಗಿದ್ದುವು.
ನಮ್ಮ ದೇಶದಲ್ಲೂ ಕೂಡ, ಹಿಂದಿನ ಕಾಲದಲ್ಲಿ ಅರಿಮೆಯ ತಿಳಿವನ್ನು ಪಡೆಯಲು ಸಂಸ್ಕ್ರುತದ ಪುಸ್ತಕಗಳನ್ನೇ ಬಳಸಬೇಕಾಗುತ್ತಿತ್ತು, ಮತ್ತು ಈ ಕಾರಣಕ್ಕಾಗಿ, ನಮ್ಮ ನುಡಿಗಳಲ್ಲೂ ಇಂತಹ ತಿಳಿವಿಗೆ ಬೇಕಾಗುವ ಅರಿಮೆಯ ಪದಗಳೆಲ್ಲ ಸಂಸ್ಕ್ರುತ ಮೂಲದವಾಗಿವೆ.
ಆದರೆ, ಲ್ಯಾಟಿನ್ ಇಲ್ಲವೇ ಗ್ರೀಕ್ ನುಡಿಗಳಲ್ಲಿ ಬೆಳವಣಿಗೆಯನ್ನು ಪಡೆಯ ದಿದ್ದಂತಹ ಅರಿಮೆಗಳಿಗೆ ಬೇಕಾಗುವ ಪದಗಳನ್ನು ಯುರೋಪಿನ ತಿಳಿವಿಗರು ಲ್ಯಾಟಿನ್ ಇಲ್ಲವೇ ಗ್ರೀಕ್ನಲ್ಲಿ ಉಂಟುಮಾಡಲು ಹೋಗಿಲ್ಲ. ಎತ್ತುಗೆಗಾಗಿ, ಲೆಕ್ಕದರಿಮೆಗೆ (ಗಣಿತಶಾಸ್ತ್ರಕ್ಕೆ) ಬೇಕಾಗುವ ಹಲವಾರು ಅರಿಮೆಯ ಪದಗಳನ್ನು ಉಂಟುಮಾಡಲು ಇಂಗ್ಲಿಶ್ನವೇ ಆದ ಪದಗಳನ್ನು ಬಳಸಲಾಗಿದೆ. ಇದೇ ರೀತಿಯಲ್ಲಿ, ಎಣ್ಣುಕದ (ಕಂಪ್ಯೂಟರ್ನ) ಅರಿಮೆಗೆ ಬೇಕಾಗುವ ನೂರಾರು ಅರಿಮೆಯ ಪದಗಳನ್ನೂ ಇಂಗ್ಲಿಶ್ನಲ್ಲಿಯೇ ಉಂಟುಮಾಡಲಾಗಿದೆ. ಇದಲ್ಲದೆ, ಹೀಗೆ ಮಾಡಿದುದರಿದಾಗಿ ಈ ಅರಿಮೆಗಳ ಕಲಿಕೆಯಲ್ಲಿ ಯಾವ ಗೊಂದಲವೂ ಉಂಟಾದ ಹಾಗೆ ಕಾಣಿಸುವುದಿಲ್ಲ.
ಇನ್ನೊಂದು ವಿಶಯವೇನೆಂದರೆ, ಲ್ಯಾಟಿನ್ ಇಲ್ಲವೇ ಗ್ರೀಕ್ ನುಡಿಗಳಲ್ಲಿ ಅರಿಮೆಯ ಪದಗಳಾಗಿ ಬಳಕೆಗೆ ಬಂದಿರುವ ಪದಗಳೆಲ್ಲವೂ ಆ ನುಡಿಗಳ ಪದಗಳೇ ಆಗಿದ್ದುವಲ್ಲದೆ ಬೇರೆ ನುಡಿಯ ಪದಗಳಾಗಿರಲಿಲ್ಲ! ಇಂಗ್ಲಿಶ್, ಫ್ರಂಚ್ ಇಲ್ಲವೇ ಜರ್ಮನ್ ನುಡಿಯನ್ನು ಬಳಸುವವರಿಗೆ ಮಾತ್ರ ಅವು ತಮ್ಮ ನುಡಿಯ ಪದಗಳಲ್ಲ. ಸಂಸ್ಕ್ರುತದಲ್ಲೂ ಹೀಗೆಯೇ. ಅದರ ಪದಗಳನ್ನೇ ಯಾವ ಗೊಂದಲವೂ ಉಂಟಾಗದ ಹಾಗೆ ಅದಕ್ಕೆ ಬೇಕಾಗುವ ಅರಿಮೆಯ ಪದಗಳನ್ನು ಉಂಟುಮಾಡುವಲ್ಲಿ ಬಳಸಲಾಗಿತ್ತು. ಹಾಗಿರುವಾಗ, ಕನ್ನಡಕ್ಕೆ ಬೇಕಾಗುವ ಅರಿಮೆಯ ಪದಗಳನ್ನು ಉಂಟುಮಾಡುವುದಕ್ಕಾಗಿ ಕನ್ನಡದ್ದೇ ಆದ ಪದಗಳನ್ನು ಬಳಸಿದಲ್ಲಿ ಯಾಕೆ ಗೊಂದಲವುಂಟಾಗಬೇಕು?
4.4 ಸೊಲ್ಲರಿಮೆಯ ಮಾರ್ಪುರುಳು
ಅರಿಮೆಯ ಬರಹಗಳು ತೊಡಕಿನವಾಗಿ ಕಾಣಿಸಲು ಅವುಗಳಲ್ಲಿ ಹೆಚ್ಚು ಹೆಚ್ಚು ಸೊಲ್ಲರಿಮೆಯ ಮಾರ್ಪುರುಳುಗಳನ್ನು ಬಳಸಬೇಕಾಗುತ್ತದೆ ಎಂಬುದು ಇನ್ನೊಂದು ಕಾರಣ. ಇವುಗಳ ಮೂಲಕ ಹುರುಳನ್ನು ತುಂಬಾ ಅಡಕವಾಗಿ ಸೂಚಿಸಲು ಬರುತ್ತದೆ; ಆದರೆ, ಓದುವವರು ಈ ಪದಕಂತೆಗಳಲ್ಲಿ ಹೇಳದಿರುವ ಕೆಲವು ಹುರುಳುಗಳನ್ನೂ ಕುಳ್ಳಿಹ(ಸಂದರ್ಬ)ದಿಂದ ಊಹಿಸಿಕೊಳ್ಳ ಬೇಕಾಗುತ್ತದೆ. ಹಾಗಾಗಿ, ಅವು ಓದಿಗೆ ತೊಡಕಾಗುತ್ತವೆ.
ಸೊಲ್ಲುಗಳನ್ನು ಅವುಗಳ ಯಾವಾಗಿನ ಇಟ್ಟಳದಲ್ಲಿ ಬಳಸುವ ಬದಲು, ಬೇರೊಂದು ಬಗೆಯ ಇಟ್ಟಳದಲ್ಲಿ ಬಳಸುವುದನ್ನು ಸೊಲ್ಲರಿಮೆಯ ಮಾರ್ಪುರುಳು ಎಂಬುದಾಗಿ ಕರೆಯಲಾಗುತ್ತದೆ. ಎತ್ತುಗೆಗಾಗಿ, ಕೆಳಗೆ ಕೊಟ್ಟಿರುವ ಎರಡು ಸೊಲ್ಲುಗಳನ್ನು ಗಮನಿಸಬಹುದು:
(1ಕ) ಚಂದ್ರ ಬೂಮಿಯ ಸುತ್ತ ಸುತ್ತುತ್ತದೆ. (1ಚ) ಬೂಮಿಯ ಸುತ್ತ ಚಂದ್ರನ ಸುತ್ತುವಿಕೆ ತಿಂಗಳಿಗೊಮ್ಮೆ
ನಡೆಯುತ್ತದೆ.
ಚಂದ್ರ ಬೂಮಿಯ ಸುತ್ತ ಸುತ್ತುತ್ತದೆ ಎಂಬ ಸಂಗತಿಯನ್ನು (1ಕ)ದಲ್ಲಿ ಯಾವಾಗಿನ ಇಟ್ಟಳದಲ್ಲಿ (ಎಂದರೆ ಒಂದು ಸೊಲ್ಲಿನ ರೂಪದಲ್ಲಿ) ಹೇಳ ಲಾಗಿದೆ. ಅದನ್ನೇ (1ಚ)ದಲ್ಲಿ ಒಂದು ಹೆಸರು ಪದಕಂತೆಯಾಗಿ (ಬೂಮಿಯ ಸುತ್ತ ಚಂದ್ರನ ಸುತ್ತುವಿಕೆ ಎಂಬುದಾಗಿ) ಬದಲಾಯಿಸಿ ಹೇಳಲಾಗಿದೆ; ಹೀಗೆ ಅದನ್ನು ಬೇರೊಂದು ಇಟ್ಟಳದಲ್ಲಿ ಬಳಸಿರುವ ಕಾರಣ, (1ಚ) ಸೊಲ್ಲಿನಲ್ಲಿ ಆ ಸಂಗತಿಯನ್ನು ಮಾತ್ರವಲ್ಲದೆ ಅದರ ಕುರಿತು ಬೇರೊಂದು ಸಂಗತಿಯನ್ನೂ (ತಿಂಗಳಿಗೊಮ್ಮೆ ನಡೆಯುತ್ತದೆ ಎಂಬುದನ್ನೂ) ತಿಳಿಸಲು ಸಾದ್ಯವಾಗಿದೆ.
ಕನ್ನಡದ ಅರಿಮೆಯ ಬರಹಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಇಟ್ಟಳಗಳನ್ನು ಇಂತಹ ಸೊಲ್ಲರಿಮೆಯ ಮಾರ್ಪುರುಳುಗಳಲ್ಲಿ ಬಳಸಬಹುದು: ಮೇಲೆ ವಿವರಿಸಿದಂತಹ ಎಸಕಗಳನ್ನು (ಸೊಲ್ಲುಗಳನ್ನು) ಹೆಸರುಗಳಾಗಿ ಬದಲಾಯಿಸುವ ಇಟ್ಟಳಗಳು ಒಂದು ಬಗೆಯವು ಮತ್ತು ಎಸಕಗಳನ್ನು ಪರಿಚೆಗಳಾಗಿ ಬದಲಾಯಿಸುವ ಕೆಳಗೆ ಕೊಟ್ಟಿರುವಂತಹ ಇಟ್ಟಳಗಳು ಇನ್ನೊಂದು ಬಗೆಯವು.
ಸೂರ್ಯನು ಅರೆನೇರಳೆ ಕಿರಣಗಳನ್ನು ಬಿಡುತ್ತಾನೆ. ಸೂರ್ಯನು ಬಿಡುವ ಅರೆನೇರಳೆ ಕಿರಣಗಳು ನಮಗೆ ಕೆಡುಕ ನ್ನುಂಟುಮಾಡಬಲ್ಲುವು.
(2ಕ) ಸೊಲ್ಲು ತಿಳಿಸುವ ಸಂಗತಿಯನ್ನು (2ಚ) ಸೊಲ್ಲಿನಲ್ಲಿ ಅರೆನೇರಳೆ ಕಿರಣಗಳು ಎಂಬ ಪದಕಂತೆಯ ಪರಿಚೆಯಾಗಿ (ಸೂರ್ಯನು ಬಿಡುವ (ಅತಿನೇರಳೆ ಕಿರಣಗಳು) ಎಂಬುದಾಗಿ) ಬದಲಾಯಿಸಲಾಗಿದೆ.
4.4.1 ಎರಡು ಬಗೆಯ ಮಾರ್ಪುರುಳುಗಳು
ಹಿಂದಿನ ಕಾಲದಲ್ಲಿ ಮಾರ್ಪುರುಳು (ಸಂಸ್ಕ್ರುತದ ರೂಪಕ ಇಲ್ಲವೇ ಇಂಗ್ಲಿಶ್ನ ಮೆಟಾಫರ್) ಎಂಬ ಪರಿಕಲ್ಪನೆಯನ್ನು ಪದಗಳ ಬಳಕೆಗೆ ಮಾತ್ರವೇ ಅನ್ವಯಿಸಲಾಗುತ್ತಿತ್ತು. ಮುಕ್ಯವಾಗಿ ಕತೆ, ಕವಿತೆ ಮೊದಲಾದ ನಲ್ಬರಹಗಳಲ್ಲಿ ಪದಗಳನ್ನು ಅವುಗಳ ಯಾವಾಗಿನ ಹುರುಳಿನಲ್ಲಿ ಬಳಸುವ ಬದಲು ಹೊಸ ದೊಂದು ಹುರುಳಿನಲ್ಲಿ ಬಳಸುವುದನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು. ಎತ್ತುಗೆಗಾಗಿ, ರಾಜು ಕೋಪದಿಂದ ಕುದಿಯುತ್ತಿದ್ದ ಎಂಬ ಸೊಲ್ಲಿನಲ್ಲಿ ಕುದಿ ಪದವನ್ನು ಅದರ ಯಾವಾಗಿನ ಹುರುಳಿನಲ್ಲಿ (ನೀರು ಕುದಿಯುವುದು ಎಂಬ ಸೊಲ್ಲಿನಲ್ಲಿ ಕಾಣಿಸುವ ಹಾಗೆ) ಬಳಸದೆ, ಬೇರೆಯೇ ಒಂದು ಹುರುಳಿ ನಲ್ಲಿ ಬಳಸಲಾಗಿದ್ದು, ಅದೊಂದು ಮಾರ್ಪುರುಳಾಗಿ ಬಂದಿದೆ.
ಆದರೆ ಇತ್ತೀಚೆಗೆ, ಎಂದರೆ ಕಳೆದ ಇಪ್ಪತ್ತು ವರ್ಶಗಳಲ್ಲಿ, ಇಂತಹ ಪದಗಳ ಮಾರ್ಪುರುಳುಗಳಿಗಿಂತಲೂ ಮೇಲೆ ವಿವರಿಸಿದಂತಹ ಸೊಲ್ಲರಿಮೆಯ ಮಾರ್ಪುರುಳುಗಳು ತಿಳಿವಿಗರ ಗಮನವನ್ನು ಹೆಚ್ಚು ಹೆಚ್ಚು ಸೆಳೆಯುತ್ತಿವೆ. ಇದಕ್ಕೆ ಒಂದು ಕಾರಣವೇನೆಂದರೆ, ಇವತ್ತು ಕತೆ, ಕವಿತೆ, ಕಾದಂಬರಿ ಮೊದಲಾದ ನಲ್ಬರಹಗಳಿಗಿಂತಲೂ ಬೇರೆ ಬಗೆಯ ಬರಹಗಳಿಗೆ ಹೆಚ್ಚಿನ ಮಹತ್ವ ಸಿಗುತ್ತಿದೆ, ಮತ್ತು ಇಂತಹ ಬರಹಗಳಲ್ಲಿ, ಅದರಲ್ಲೂ ಅರಿಮೆಯ ಬರಹಗಳಲ್ಲಿ, ಸೊಲ್ಲರಿಮೆಯ ಮಾರ್ಪುರುಳುಗಳು ತುಂಬಾ ಹೆಚ್ಚು ಬಳಕೆಯಾಗುತ್ತಿವೆ.
ಪದಗಳ ಮಾರ್ಪುರುಳುಗಳಲ್ಲಿ ಹುರುಳನ್ನು ಹೋಲಿಕೆಯಿರುವ ಎರಡು ಪದಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಮಾರೆಡೆಗೊಳಿಸಲಾಗುತ್ತದೆ; ಎಂದರೆ, ಮನಸ್ಸಿನಲ್ಲಿರುವ ಹುರುಳನ್ನು ಸೂಚಿಸುವುದಕ್ಕಾಗಿ ಯಾವಾಗಿನ ಪದವನ್ನು ಬಳಸುವ ಬದಲು, ಬೇರೊಂದು ಪದವನ್ನು ಬಳಸಲಾಗುತ್ತದೆ. ಅವನಿಗೆ
ಜಾಣ್ಮೆಯಿಲ್ಲ ಎಂದು ಹೇಳುವ ಬದಲು ಅವನಿಗೆ ತಲೆಯಿಲ್ಲ ಎಂಬುದಾಗಿ ಹೇಳುವಲ್ಲಿ ಈ ರೀತಿ ಹುರುಳನ್ನು ಜಾಣ್ಮೆ ಎಂಬ ಪದದಿಂದ ತಲೆ ಎಂಬ ಪದಕ್ಕೆ ಮಾರೆಡೆಗೊಳಿಸಿರುವುದನ್ನು ಕಾಣಬಹುದು.
ಈ ರೀತಿ ಒಂದು ಹುರುಳನ್ನು ಸೂಚಿಸಲು ಯಾವಾಗಿನ ಪದದ ಬದಲು ಬೇರೊಂದು ಪದವನ್ನು ಬಳಸುವ ಬದಲು, ಮೇಲೆ ವಿವರಿಸಿದಂತಹ ಸೊಲ್ಲರಿಮೆಯ ಮಾರ್ಪುರುಳಿನಲ್ಲಿ ಯಾವಾಗಿನ ಇಟ್ಟಳದ ಬದಲು ಬೇರೊಂದು ಇಟ್ಟಳವನ್ನು ಬಳಸಲಾಗುತ್ತದೆ. ಈ ಎರಡು ಬಗೆಯ ಬಳಕೆ ಗಳಲ್ಲೂ ಹುರುಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಾರೆಡೆ ಗೊಳಿಸಲಾಗಿದೆಯಾದ ಕಾರಣ, ಅವೆರಡನ್ನೂ ಮಾರ್ಪುರುಳು ಎಂಬುದಾಗಿ ಕರೆಯಬಲ್ಲೆವು.
ನಮ್ಮ ಆಡುಮಾತಿನಲ್ಲಿ ಸೊಲ್ಲರಿಮೆಯ ಮಾರ್ಪುರುಳುಗಳು ಕಾಣಿಸಿ ಕೊಳ್ಳುವುದು ತುಂಬಾ ಅಪರೂಪ. ಹೇಳಬೇಕೆಂದಿರುವುದನ್ನು ಸಾಮಾನ್ಯವಾಗಿ ನಾವು ನೇರವಾಗಿ ಮತ್ತು ಹೆಚ್ಚು ತೊಡಕಿಲ್ಲದ ಸೊಲ್ಲುಗಳ ಮೂಲಕ ಹೇಳಲು ಬಯಸುತ್ತೇವೆ; ಮತ್ತು ಅಂತಹ ಕೆಲಸಕ್ಕೆ ಸೊಲ್ಲರಿಮೆಯ ಮಾರ್ಪುರುಳುಗಳು ಬೇಕಾಗುವುದಿಲ್ಲ.
ಆದರೆ ಬರಹಗಳಲ್ಲಿ, ಅದರಲ್ಲೂ ಅರಿಮೆಯ ಬರಹಗಳಲ್ಲಿ, ಅವು ಯಾವಾಗಲೂ ಬೇಕಾಗುತ್ತಿರುತ್ತವೆ. ಇದಕ್ಕೆ ಕಾರಣವೇನೆಂದರೆ, ಅವನ್ನು ಬಳಸುವ ಮೂಲಕ ಹೇಳಬೇಕೆಂದಿರುವ ಸಂಗತಿಯನ್ನು ತುಂಬಾ ಅಡಕವಾಗಿ ಹೇಳಲು ಬರುತ್ತದೆ, ಮತ್ತು ಒಂದೇ ಸೊಲ್ಲಿನೊಳಗೆ ಹಲವು ಸಂಗತಿಗಳನ್ನು ತುಂಬಿಸಿ ಹೇಳಲು ಬರುತ್ತದೆ.
4.4.2 ಕೆಲವು ಪ್ರಯೋಜನಗಳು
ಮೇಲೆ ಸೂಚಿಸಿದ ಹಾಗೆ, ಸೊಲ್ಲರಿಮೆಯ ಮಾರ್ಪುರುಳುಗಳ ಮೂಲಕ ಹೇಳಬೇಕೆಂದಿರುವ ಸಂಗತಿಯನ್ನು ತುಂಬಾ ಅಡಕವಾಗಿ ಹೇಳಲು ಬರುವುದೇ ಅವನ್ನು ಅರಿಮೆಯ ಬರಹಗಳಲ್ಲಿ ಹೆಚ್ಚು ಹೆಚ್ಚು ಬಳಸುತ್ತಿರುವುದಕ್ಕೆ ಮುಕ್ಯ ಕಾರಣ. ಎತ್ತುಗೆಗಾಗಿ, ಮಕ್ಕಳನ್ನು ತಾಯಂದಿರು ಸಾಕುತ್ತಾರೆ ಎಂಬುದನ್ನು ಒಮ್ಮೆ ಸೂಚಿಸಿದ ಮೇಲೆ ಅದರ ಕುರಿತಾಗಿ ಬೇರೆ ಸಂಗತಿಗಳನ್ನು ತಿಳಿಸಬೇಕಾದಾಗ, ಅದನ್ನು ಅಡಕವಾಗಿ ಮಕ್ಕಳ ಸಾಕುವಿಕೆ ಇಲ್ಲವೇ ಬರೀ ಸಾಕುವಿಕೆ ಎಂಬ ಸೊಲ್ಲರಿಮೆಯ ಮಾರ್ಪುರುಳಿನ ಮೂಲಕ ಸೂಚಿಸಲು ಬರುತ್ತದೆ.
ಇದಲ್ಲದೆ, ಎಸಕವನ್ನು ಸೂಚಿಸುವ ಒಂದು ಸೊಲ್ಲನ್ನು ಹೆಸರು ಪದಕಂತೆ ಯಾಗಿ ಬದಲಾಯಿಸಿದಾಗ, ಎಸಕದ ಮಾಡುಗರು ಯಾರು ಎಂಬುದನ್ನು ತಿಳಿಸದಿರಲು ಬರುತ್ತದೆ. ಎತ್ತುಗೆಗಾಗಿ, ಸಾಕುತ್ತಾರೆ ಎಂದು ಹೇಳಿದಲ್ಲಿ ಸಾಕುವವರು ಯಾರು ಎಂಬುದನ್ನು ಸೂಚಿಸಲೇಬೇಕಾಗುತ್ತದೆ; ಎಸಕಪದದ ಕೊನೆಯಲ್ಲಿ ಬಳಸಬೇಕಾಗಿರುವ ರೆ ಒಟ್ಟು ಇದನ್ನು ತುಂಬಾ ಅಡಕವಾಗಿ ತಿಳಿಸುತ್ತದೆ. ಆದರೆ, ಸಾಕುವಿಕೆ ಎಂದು ಹೇಳಿದಲ್ಲಿ ಅದರ ಮಾಡುಗರನ್ನು ಸೂಚಿಸದಿರಲು ಬರುತ್ತದೆ.
ಅರಿಮೆಯ ಬರಹಗಳಲ್ಲಿ ಸಾಮಾನ್ಯವಾಗಿ ಮಾಡುಗರನ್ನು ಸೂಚಿಸ ಬೇಕಾಗುವುದಿಲ್ಲ. ವಿಶಯಗಳಿಗೇನೇ ಅದರಲ್ಲಿ ಹೆಚ್ಚಿನ ಮಹತ್ವ ಕೊಡಲಾಗು ತ್ತದೆ. ಬರಹಗಾರರ ಅನಿಸಿಕೆಗಳಿಗೂ ಅವುಗಳಲ್ಲಿ ಜಾಗವಿಲ್ಲ. ಹಾಗಾಗಿ, ಮಾಡುಗರನ್ನು ಸೂಚಿಸಬೇಕಾಗುವ ಎಸಕ ಪದಗಳಿಗಿಂತಲೂ ಮಾಡುಗರನ್ನು ಸೂಚಿಸದಿರುವ ಹೆಸರು ಪದಕಂತೆಗಳನ್ನೇ ಅಂತಹ ಬರಹಗಳಲ್ಲಿ ಹೆಚ್ಚು ಹೆಚ್ಚು ಬಳಸಲಾಗುತ್ತದೆ. ಇಂತಹ ಪದಕಂತೆಗಳಲ್ಲಿ ಬರಹಗಾರರ ಅನಿಸಿಕೆ ಗಳನ್ನೂ ಸೂಚಿಸದಿರಲು ಬರುತ್ತದೆ.
ಹೆಸರು ಪದ ಇಲ್ಲವೇ ಪದಕಂತೆಗಳನ್ನು ಸೊಲ್ಲಿನ ಹಲವು ಕಡೆಗಳಲ್ಲಿ ಬಳಸಲು ಬರುತ್ತದೆ. ಅವುಗಳ ಮೂಲಕ ಎಸಕಗಳನ್ನು ಎಸಕಗಳಾಗಿ ಸೂಚಿಸುವ ಬದಲು ಹೆಸರುಗಳಾಗಿ ಸೂಚಿಸುವ ಕಾರಣ, ಅವುಗಳ ಕುರಿತು ಹಲವು ಹೆಚ್ಚಿನ ಸಂಗತಿಗಳನ್ನು ತಿಳಿಸಲು ಬರುತ್ತದೆ, ಮತ್ತು ಇದಕ್ಕಾಗಿ ಸಾಕುವಿಕೆಯನ್ನು, ಸಾಕುವಿಕೆಗೆ, ಸಾಕುವಿಕೆಯಿಂದ, ಸಾಕುವಿಕೆಯಲ್ಲಿ ಮೊದಲಾದ ಹಲವು ಪದರೂಪಗಳನ್ನೂ ಅವಕ್ಕೆ ಕೊಡಲು ಬರುತ್ತದೆ. ಅರಿಮೆಯ ಬರಹಗಳಲ್ಲಿ ಹೆಸರುಪದಗಳ ಇಲ್ಲವೇ ಪದಕಂತೆಗಳ ಬಳಕೆ ಹೆಚ್ಚಾಗಲು ಇದೂ ಒಂದು
ಇನ್ನೊಂದು ಮುಕ್ಯವಾದ ಪ್ರಯೋಜನವೇನೆಂದರೆ, ಎಸಕವನ್ನು ನೆಲೆಯಾಗಿ ಬಳಸುವಲ್ಲಿ ಸೊಲ್ಲರಿಮೆಯ ಮಾರ್ಪುರುಳು ನೆರವಾಗುತ್ತದೆ. ಹಿಂದಿನ ಪಸುಗೆಯಲ್ಲಿ ವಿವರಿಸಿದ ಹಾಗೆ, ಸೊಲ್ಲುಗಳನ್ನು ನೆಲೆ ಮತ್ತು ತಿಳಿವು ಎಂಬುದಾಗಿ ವಿಂಗಡಿಸಲು ಬರುತ್ತದೆ: ಸೊಲ್ಲಿನಲ್ಲಿ ಮೊದಲಿಗೆ ಬರುವ ಅಂಶ ಅದರ ನೆಲೆಯಾಗಿರುತ್ತದೆ ಮತ್ತು ಆಮೇಲೆ ಬರುವ ಅಂಶ ಆ ನೆಲೆಯ ಕುರಿತಾಗಿ ಏನಾದರೊಂದು ವಿಶಯವನ್ನು ತಿಳಿಸುವ ತಿಳಿವಾಗಿರುತ್ತದೆ.
ಅರಿಮೆಯ ಬರಹಗಳಲ್ಲಿ ಸಾಮಾನ್ಯವಾಗಿ ಒಂದು ಸೊಲ್ಲಿನ ತಿಳಿವನ್ನು (ಇಲ್ಲವೇ ತಿಳಿವಿನ ಒಂದು ಅಂಶವನ್ನು) ಅದರ ಮುಂದಿರುವ ಸೊಲ್ಲಿನಲ್ಲಿ
ನೆಲೆಯಾಗಿ ಬಳಸಬೇಕಾಗುತ್ತದೆ. ಅವುಗಳಲ್ಲಿ ವಿಶಯಗಳನ್ನು ಓದುಗರ ಮುಂದಿರಿಸುವ ಬಗೆಯೇ ಅಂತಹದು. ಆದರೆ, ಎಸಕಪದಗಳು ತಿಳಿವುಗಳಾಗಿ ಮಾತ್ರವೇ ಬರಬಲ್ಲುವಲ್ಲದೆ ನೆಲೆಗಳಾಗಿ ಬರಲಾರವು. ಹಾಗಾಗಿ, ಎಸಕವೊಂದನ್ನು ಸೊಲ್ಲಿನ ನೆಲೆಯಾಗಿ ಬಳಸಬೇಕಾದಾಗ, ಅದನ್ನು ಸೂಚಿಸುವ ಎಸಕಪದವನ್ನು ಹೆಸರುಪದವಾಗಿ ಇಲ್ಲವೇ ಪದಕಂತೆಯಾಗಿ ಮಾರ್ಪಡಿಸ ಬೇಕಾಗುತ್ತದೆ.
ಎತ್ತುಗೆಗಾಗಿ, ಚಂದ್ರ ಬೂಮಿಯ ಸುತ್ತ ಸುತ್ತುತ್ತದೆ ಎಂಬ ಸೊಲ್ಲಿನಲ್ಲಿ ಚಂದ್ರ ಎಂಬುದು ನೆಲೆಯಾಗಿ ಬಂದಿದೆ ಮತ್ತು ಬೂಮಿಯ ಸುತ್ತ ಸುತ್ತುತ್ತದೆ ಎಂಬುದು ಅದರ ಕುರಿತು ಸಂಗತಿಯೊಂದನ್ನು ತಿಳಿಸುವ ತಿಳಿವಾಗಿ ಬಂದಿದೆ. ಈ ತಿಳಿವನ್ನು ಮುಂದಿನ ಸೊಲ್ಲಿನಲ್ಲಿ ನೆಲೆಯಾಗಿ ಬಳಸಬೇಕಿದ್ದಲ್ಲಿ ಅದನ್ನು ಬೂಮಿಯ ಸುತ್ತ ಚಂದ್ರನ ಸುತ್ತುವಿಕೆ ಎಂಬುದಾಗಿ ಮಾರ್ಪಡಿಸಬೇಕಾಗುತ್ತದೆ. ಇಂತಹ ಬಳಕೆಯನ್ನು ಬೂಮಿಯ ಸುತ್ತ ಚಂದ್ರನ ಸುತ್ತುವಿಕೆ ಹೆಚ್ಚು ಕಡಿಮೆ ತಿಂಗಳಿಗೊಮ್ಮೆ ನಡೆಯುತ್ತದೆ ಎಂಬ ಸೊಲ್ಲಿನಲ್ಲಿ ಕಾಣಬಹುದು.
4.4.3 ತೊಡಕೆನಿಸಲು ಕಾರಣ
ಅರಿಮೆಯ ಬರಹಗಳಲ್ಲಿ ಬರುವ ಸೊಲ್ಲರಿಮೆಯ ಮಾರ್ಪುರುಳುಗಳು ತೊಡಕಿನ ವಾಗಿ ಕಾಣಿಸಲು ಮುಕ್ಯ ಕಾರಣವೇನೆಂದರೆ, ಸಾಮಾನ್ಯವಾಗಿ ನಮ್ಮ ಮಾತಿನಲ್ಲಿ ಎಸಕ(ಕ್ರಿಯಾ)ಪದಗಳು ಎಸಕಗಳನ್ನು ಸೂಚಿಸುತ್ತವೆ; ಹೆಸರು(ನಾಮ)ಪದಗಳು ವ್ಯಕ್ತಿ, ವಸ್ತು ಮೊದಲಾದುವನ್ನು ಸೂಚಿಸುತ್ತವೆ; ಮತ್ತು ಪರಿಚೆ(ಗುಣ)ಪದಗಳು ವ್ಯಕ್ತಿ ಇಲ್ಲವೇ ವಸ್ತುಗಳ ಪರಿಚೆಗಳನ್ನು ಸೂಚಿಸುತ್ತವೆ. ಆದರೆ, ಸೊಲ್ಲರಿಮೆಯ ಮಾರ್ಪುರುಳುಗಳಲ್ಲಿ ಈ ಮೂರನ್ನೂ ಹೆಸರು ಪದಗಳ (ಇಲ್ಲವೇ ಪದಕಂತೆಗಳ) ಮೂಲಕವೇನೇ ಸೂಚಿಸಲಾಗುತ್ತದೆ.
ಎಂದರೆ, ಈ ಮಾರ್ಪುರುಳುಗಳು ನಾವು ಜಗತ್ತನ್ನು ನೋಡುವ ಬಗೆಯನ್ನೇ ಬೇರೆ ಮಾಡುತ್ತವೆ: ಅವು ಎಲ್ಲವನ್ನೂ ಹೆಸರುಗಳಾಗಿ, ಎಂದರೆ ವಸ್ತು ಇಲ್ಲವೇ ವಿಶಯಗಳಾಗಿ ನೋಡುವಂತೆ ಮಾಡುತ್ತವೆ. ಅರಿಮೆಯ ಬರಹಗಳನ್ನು ಓದುವವರು ಜಗತ್ತನ್ನು ಈ ರೀತಿ ಒಂದು ಹೊಸ ಬಗೆಯಲ್ಲಿ ನೋಡಲು ಕಲಿಯಬೇಕಾಗುತ್ತದೆ. ಇದು ಸುಲಬದ ಕೆಲಸವಲ್ಲ.
ಅರಿಮೆಯ ಬರಹಗಳಲ್ಲಿ ಮಾತ್ರವಲ್ಲದೆ ಬೇರೆ ಬಗೆಯ ಬರಹಗಳಲ್ಲೂ ಸೊಲ್ಲರಿಮೆಯ ಮಾರ್ಪುರುಳುಗಳು ಬಳಕೆಯಾಗುತ್ತವೆ. ಎತ್ತುಗೆಗಾಗಿ, ಅವನು
ಒಪ್ಪಿದ ಎನ್ನುವ ಬದಲು ಅವನ ಒಪ್ಪಿಗೆ ಸಿಕ್ಕಿತು ಎಂಬಲ್ಲಿ ಒಪ್ಪು ಎಂಬ ಎಸಕ ಪದದ ಬದಲು ಒಪ್ಪಿಗೆ ಎಂಬ ಹೆಸರು ಪದವನ್ನು ಬಳಸಲಾಗಿದೆ. ಆದರೆ, ಇಂತಹ ಮಾರ್ಪುರುಳುಗಳ ಬಳಕೆ ಬೇರೆ ಬರಹಗಳಿಗಿಂತ ಅರಿಮೆಯ ಬರಹಗಳಲ್ಲಿ ತುಂಬಾ ಹೆಚ್ಚು ಕಾಣಿಸಿಕೊಳ್ಳುತ್ತದೆ.
ಎಸಕವನ್ನು ಸೂಚಿಸುವ ಒಂದು ಸೊಲ್ಲನ್ನು ಹೆಸರುಪದಕಂತೆಯಾಗಿ ಮಾರ್ಪಡಿಸಿದಾಗ, ಅದರ ಕೆಲವು ಅಂಶಗಳು ಬಿದ್ದುಹೋಗುತ್ತವೆ. ಇದರಿಂದಾಗಿ ಅ ಪದಕಂತೆಯಲ್ಲಿ ಇಪ್ಪುರುಳಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಂತಹ ಕಡೆಗಳಲ್ಲಿ ಓದುಗರು ಅದರ ನಿಜವಾದ ಹುರುಳೇನು ಎಂಬುದನ್ನು ತಾವೇ ಹಿಂದಿನ ಸೊಲ್ಲುಗಳಿಂದ ಇಲ್ಲವೇ ಬರಹದ ಕುಳ್ಳಿಹ(ಸಂದರ್ಬ)ದಿಂದ ಕಂಡು ಹಿಡಿಯ ಬೇಕಾಗುತ್ತದೆ. ಸೊಲ್ಲರಿಮೆಯ ಮಾರ್ಪುರುಳುಗಳು ತೊಡಕಿನವಾಗಿ ಕಾಣಿಸಲು ಇದೂ ಒಂದು ಕಾರಣ.
ಎತ್ತುಗೆಗಾಗಿ, ಬೂಮಿಯ ಸುತ್ತುವಿಕೆ ಎಂಬ ಪದಕಂತೆ ಬೂಮಿ ತನ್ನ ಅಕ್ಶದಲ್ಲಿ ಸುತ್ತುವುದನ್ನು ಸೂಚಿಸಬಹುದು, ಸೂರ್ಯನ ಸುತ್ತ ಸುತ್ತುವುದನ್ನು ಸೂಚಿಸಬಹುದು ಇಲ್ಲವೇ ಬೂಮಿಯ ಸುತ್ತ ಚಂದ್ರ ಸುತ್ತುವುದನ್ನು ಸೂಚಿಸಬಹುದು. ಇವುಗಳಲ್ಲಿ ಯಾವ ಹುರುಳು ಇಲ್ಲಿ ಸರಿಯಾದುದು ಎಂಬುದನ್ನು ಹಿಂದಿನ ಸೊಲ್ಲುಗಳಲ್ಲಿ ಏನು ಹೇಳಲಾಗಿದೆ ಎಂಬುದನ್ನು ನೆನಪಿನ ಲ್ಲಿರಿಸಿಕೊಂಡು ಓದುಗರೇ ತೀರ್ಮಾನಿಸಿಕೊಳ್ಳಬೇಕಾಗುತ್ತದೆ. ಇದನ್ನು ಸರಿಯಾಗಿ ನಡೆಸಲಾರದ ಓದುಗರು ಗೊಂದಲಕ್ಕೊಳಗಾಗುತ್ತಾರೆ.
ಅರಿಮೆಯ ಬರಹಗಳಲ್ಲಿ ಈ ರೀತಿ ಒಮ್ಮೆ ಹೇಳಿರುವ ಸಂಗತಿಯನ್ನು ಆಮೇಲೆ ಹಲವು ಬಾರಿ ಸೂಚಿಸುತ್ತಿರಬೇಕಾಗುತ್ತದೆ, ಮತ್ತು ಹೀಗೆ ಸೂಚಿಸುವು ದಕ್ಕೆ ತುಂಬಾ ಅಡಕವಾಗಿ ಅದನ್ನು ತಿಳಿಸಬಲ್ಲ ಹೆಸರು ಪದಕಂತೆ ತಕ್ಕುದಾಗಿದೆ. ಹಾಗಾಗಿ, ಒಮ್ಮೆ ಹೇಳಿರುವ ವಿಶಯವನ್ನು ತಮ್ಮ ನೆನಪಿನಲ್ಲಿರಿಸಿಕೊಳ್ಳಬಲ್ಲ ಓದುಗರಿಗೆ ಮಾತ್ರ ಸೊಲ್ಲರಿಮೆಯ ಮಾರ್ಪುರುಳುಗಳಲ್ಲಿ ಕಾಣಿಸಿಕೊಳ್ಳುವ ಈ ಇಪ್ಪುರುಳುಗಳು ಒಂದು ತೊಡಕೆಂದು ಅನಿಸುವುದಿಲ್ಲ.
ಅರಿಮೆಯ ಬರಹಗಳು ತೊಡಕಿನವಾಗಿ ಕಾಣಿಸಲು ಇನ್ನೊಂದು ಕಾರಣ ವೇನೆಂದರೆ, ಇಂತಹ ಬರಹಗಳಲ್ಲಿ ಬೇರೆ ಬಗೆಯ ಬರಹಗಳಲ್ಲಿ ಕಾಣಿಸುವು ದಕ್ಕಿಂತ ಪದಗಳ ತಿಣ್ಮೆ (ಸಾಂದ್ರತೆ) ಹೆಚ್ಚಿರುತ್ತದೆ. ಸೊಲ್ಲುಗಳಲ್ಲಿ ಮುಕ್ಯವಾಗಿ ಎರಡು ಬಗೆಯ ಪದಗಳು ಬಳಕೆಯಾಗುತ್ತವೆ: ಸೊಲ್ಲರಿಮೆಗೆ ಸಂಬಂದಿಸಿರುವ ಮತ್ತು, ಆದರೆ, ಇಲ್ಲವೇ, ಹಾಗೂ, ಕೆಲವು ಮೊದಲಾದ ಪದಗಳು, ಮತ್ತು ತಿಳಿವನ್ನು ಕೊಡುವ ಪದಗಳು. ಇವುಗಳಲ್ಲಿ ತಿಳಿವನ್ನು ಕೊಡುವ
ಪದಗಳು ಎಶ್ಟಿವೆ ಎಂಬುದರ ಮೇಲೆ ಪದಗಳ ತಿಣ್ಮೆ ಅವಲಂಬಿಸಿದೆ. ಇದು ಹೆಚ್ಚಿದ್ದಶ್ಟೂ ಒಂದು ಬರಹವನ್ನು ಓದಿ ತಿಳಿದುಕೊಳ್ಳುವ ಕೆಲಸ ಹೆಚ್ಚು ತೊಡಕಿನದಾಗುತ್ತದೆ. ಹೆಚ್ಚು ಹೆಚ್ಚು ಸೊಲ್ಲರಿಮೆಯ ಮಾರ್ಪುರುಳುಗಳನ್ನು ಬಳಸಿರುವ ಬರಹಗಳಲ್ಲಿ ಪದಗಳ ತಿಣ್ಮೆಯೂ ಹೆಚ್ಚಿರುತ್ತದೆ.
ಒಂದು ಅರಿಮೆಯ ಬರಹವನ್ನು ಮಂದಿಮೆಚ್ಚುವ (ಜನಪ್ರಿಯ) ಬರಹವಾಗಿ ಇಲ್ಲವೇ ಚಿಕ್ಕ ಮಕ್ಕಳ ಬರಹವಾಗಿ ಬದಲಾಯಿಸಬೇಕಿದ್ದಲ್ಲಿ, ಅದರಲ್ಲಿ ಕಾಣಿಸುವ ಮೇಲಿನ ತೊಡಕುಗಳನ್ನೆಲ್ಲ ಆದಶ್ಟು ಕಡಿಮೆ ಮಾಡಬೇಕಾಗುತ್ತದೆ: ಎಸಕಗಳನ್ನು ಹೆಸರುಗಳಾಗಿ ಮಾರ್ಪಡಿಸಿರುವಲ್ಲೆಲ್ಲ ಅವನ್ನು ತಿರುಗಿ ಎಸಕಗಳಾಗಿ ಬದಲಾಯಿಸಬೇಕಾಗುತ್ತದೆ; ಆದಶ್ಟು ಮಟ್ಟಿಗೆ ಅರಿಮೆಯ ಪದಗಳನ್ನು ತೆಗೆದುಹಾಕಿ, ಅವುಗಳ ಬದಲು ವಿವರಣೆಗಳನ್ನು ಕೊಡಬೇಕಾಗುತ್ತದೆ; ಮತ್ತು ಸೊಲ್ಲುಗಳಲ್ಲಿರುವ ಪದಗಳ ತಿಣ್ಮೆಯನ್ನು ಕಡಿಮೆ ಮಾಡಬೇಕಾಗುತ್ತದೆ.
ಇದಲ್ಲದೆ, ಮಂದಿಮೆಚ್ಚುವ ಬರಹಗಳಲ್ಲಿ ಸೊಲ್ಲುಗಳ ನಡುವಿನ ಕೊಂಡಿ ಗಳು ಹೆಚ್ಚು ಸ್ಪಶ್ಟವಾಗಿರಬೇಕು, ಮತ್ತು ಬರಹ ಸುಳುವಾಗಿ ಓದಿಸಿಕೊಂಡು ಹೋಗುವಂತಿರಬೇಕು. ಇದಕ್ಕಾಗಿ, ಹೆಚ್ಚು ತೊಡಕಾಗಿರುವ ಸೊಲ್ಲುಗಳನ್ನೆಲ್ಲ ಬಿಡಿಸಿ ಬರೆಯಬೇಕಾಗುತ್ತದೆ. ಬರಹ ಏನು ಹೇಳುತ್ತದೆ ಎಂಬುದು ಅವುಗಳಲ್ಲಿ ಒಂದೇ ಓದಿನಿಂದ ಗೊತ್ತಾಗುವ ಹಾಗಿರಬೇಕು. ಓದಿದ್ದನ್ನೇ ತಿರುತಿರುಗಿ ಓದಬೇಕಾಗುವಂತಿರಬಾರದು.
4.4.4 ಕನ್ನಡದಲ್ಲಿ ಸೊಲ್ಲರಿಮೆಯ ಮಾರ್ಪುರುಳುಗಳು
ಇವತ್ತು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಬರೆಯುವವರು ಸೊಲ್ಲರಿಮೆಯ ಮಾರ್ಪುರುಳುಗಳನ್ನು ಉಂಟುಮಾಡುವಲ್ಲಿ ಕನ್ನಡದ ಕಸುವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾಗಾಗಿ, ಅವರು ಕನ್ನಡದವೇ ಆದ ಮಾರ್ಪುರುಳುಗಳನ್ನು ಬಳಸುವ ಬದಲು, ಸಂಸ್ಕ್ರುತದ ಪದ ಮತ್ತು ಪದರೂಪಗಳನ್ನು ಅನವಶ್ಯಕವಾಗಿ ಎರವಲು ಪಡೆದು ಬಳಸಹೋಗುತ್ತಾರೆ, ಮತ್ತು ಆ ಮೂಲಕ ತಮ್ಮ ಬರಹಗಳು ಓದುಗರಿಗೆ ಇನ್ನಶ್ಟು ತೊಡಕಾಗುವ ಹಾಗೆ ಮಾಡುತ್ತಾರೆ.
ಎತ್ತುಗೆಗಾಗಿ, ಈ ಮಣ್ಣಿನಲ್ಲಿ ಕ್ಶಾರ ಇದೆ ಎಂಬ ಸೊಲ್ಲನ್ನು ಕನ್ನಡದಲ್ಲೇನೇ ಕ್ಶಾರವಿರುವ (ಇಲ್ಲವೇ ಕ್ಶಾರವುಳ್ಳ) ಮಣ್ಣು ಎಂಬುದಾಗಿ ಮಾರ್ಪಡಿಸಬಹುದು. ಆದರೆ ಇದು ಕನ್ನಡದಲ್ಲಿ ಅರಿಮೆಯ ಬರಹಗಳನ್ನು ಬರೆಯುವವರ ಗಮನಕ್ಕೇ ಬರುವುದಿಲ್ಲ. ಅದಕ್ಕೆ ಬದಲಾಗಿ ಅವರು
ಕ್ಶಾರಯುಕ್ತ ಮಣ್ಣು ಎಂಬುದಾಗಿ ಸಂಸ್ಕ್ರುತದಿಂದ ಯುಕ್ತ ಪದರೂಪವನ್ನು ಎರವಲು ಪಡೆದು ಬಳಸುತ್ತಾರೆ.
ಜೀವ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯೊಂದನ್ನು ಕೇಳಿ, ಅದರ ಮುಂದಿನ ಸೊಲ್ಲಿನಲ್ಲಿ ಜೀವದ ಹುಟ್ಟು ಎಂಬುದಾಗಿ ಅದನ್ನು ಮಾರ್ಪಡಿಸಿಕೊಳ್ಳುವ ಬದಲು, ಜೀವದ ಉಗಮ ಎಂಬುದಾಗಿ ಬರೆಯುತ್ತಾರೆ; ಎಂದರೆ, ಸಂಸ್ಕ್ರುತದ ಉಗಮ ಪದವನ್ನು ಅನವಶ್ಯಕವಾಗಿ ಎರವಲಾಗಿ ಪಡೆದು ಬಳಸುತ್ತಾರೆ. ಇದರಿಂದಾಗಿ, ಮೊದಲೇ ತೊಡಕಿನದಾಗಿ ಕಾಣಿಸುವ ಅರಿಮೆಯ ಬರಹ ಇನ್ನಶ್ಟು ತೊಡಕಿನದಾಗುತ್ತದೆ.
ಸೊಲ್ಲರಿಮೆಯ ಮಾರ್ಪುರುಳುಗಳನ್ನು ಬಳಸಿರುವಲ್ಲಿ ಓದುಗರು ಎಸಕದಿಂದ ವಿಶಯಕ್ಕೆ ನೆಗೆಯಬೇಕಾಗುತ್ತದೆ. ಯಾಕೆಂದರೆ, ಮೇಲೆ ಸೂಚಿಸಿದ ಹಾಗೆ, ಎಸಕವನ್ನು ಇಲ್ಲಿ ಎಸಕ(ಕ್ರಿಯಾ)ಪದದ ಮೂಲಕ ಒಂದು ಎಸಕವಾಗಿ ಸೂಚಿಸದೆ, ಹೆಸರು(ನಾಮ)ಪದದ ಮೂಲಕ ಒಂದು ವಿಶಯವಾಗಿ ಸೂಚಿಸ ಲಾಗುತ್ತದೆ. ಇದಲ್ಲದೆ, ಆ ರೀತಿ ಬದಲಾವಣೆಯನ್ನು ಮಾಡಲಾಗಿದೆ ಎಂಬು ದನ್ನು ಬರಹಗಳಲ್ಲಿ ಯಾವ ರೀತಿಯಲ್ಲೂ ಸೂಚಿಸುವುದಿಲ್ಲ. ಓದುಗರು ಈ ನೆಗೆತವನ್ನು ತಾವೇ ಮಾಡಿಕೊಳ್ಳಬಲ್ಲರು ಎಂಬುದಾಗಿ ತಿಳಿಯಲಾಗುತ್ತದೆ. ಆದರೆ, ಅರಿಮೆಯ ಬರಹಗಳನ್ನು ಓದಿ ಪಳಗಿಲ್ಲದ ಓದುಗರಿಗೆ ಈ ನೆಗೆತ ತೊಂದರೆಯನ್ನು ಕೊಡುತ್ತದೆ. ಕನ್ನಡದ ಅರಿಮೆಯ ಬರಹಗಳಲ್ಲಿ ಈ ನೆಗೆತದೊಂದಿಗೆ ಇನ್ನೊಂದು ನೆಗೆತವನ್ನೂ ಓದುಗರ ಮೇಲೆ ಹೊರಿಸ ಲಾಗುತ್ತದೆ: ಅವರು ಎಸಕದಿಂದ ಹೆಸರಿಗೆ ನೆಗೆಯಬೇಕಾಗುತ್ತದೆ ಮಾತ್ರವಲ್ಲ, ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೂ ನೆಗೆಯಬೇಕಾಗುತ್ತದೆ. ಎತ್ತುಗೆಗಾಗಿ, ಒಂದು ಜೀವಿ ಇನ್ನೊಂದು ಜೀವಿಯನ್ನು ಹುಟ್ಟಿಸುತ್ತದೆ ಎಂಬಲ್ಲಿಂದ ಹುಟ್ಟಿಸುವಿಕೆ ಎಂಬುದಕ್ಕೆ ಹೋಗದೆ ನೇರವಾಗಿ ಪ್ರಜನನ ಕ್ರಿಯೆ ಎಂಬುದಕ್ಕೆ ನೆಗೆಯಬೇಕಾಗುತ್ತದೆ.
ಚಿಕ್ಕ ಮಕ್ಕಳಿಗಾಗಿ ಬರೆದ ಅರಿಮೆಯ ಬರಹಗಳಲ್ಲೂ ಇಂತಹ ಹಲವಾರು ಸಂಸ್ಕ್ರುತದ ಪದರೂಪಗಳನ್ನು ಕಾಣಬಹುದು. ಇವನ್ನು ಮಕ್ಕಳು ಕಣ್ಣು ಮುಚ್ಚಿ ಬಾಯಿಪಾಟ ಮಾಡುತ್ತಾರಲ್ಲದೆ, ಅವು ನಿಜಕ್ಕೂ ಏನು ಹೇಳುತ್ತವೆ ಎಂಬುದು ಅವರ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ, ಅವರಿಗೆ ಇವುಗಳಲ್ಲಿ ಬರುವ ಎಸಕದಿಂದ ಹೆಸರಿಗೆ ಹಾರುವ ಮೊದಲ ನೆಗೆತವೇ ತೊಡಕಿನದಾಗಿ ಕಾಣಿಸುತ್ತದೆ; ಇನ್ನು ಕನ್ನಡದ ಹೆಸರಿನಿಂದ ಸಂಸ್ಕ್ರುತದ ಹೆಸರಿಗೆ ಹಾರುವ ಎರಡನೆಯ ನೆಗೆತ ಅವರ ಅಳವಿಗೆ ಮೀರಿದ್ದು.
4.4.5 ಕನ್ನಡದ ಕಸುವು
ಸೊಲ್ಲರಿಮೆಯ ಮಾರ್ಪುರುಳುಗಳನ್ನು ಉಂಟುಮಾಡುವಲ್ಲಿ ಕನ್ನಡದ ಕಸುವು ಎಂತಹದು ಎಂಬುದನ್ನು ಸರಿಯಾಗಿ ತಿಳಿದುಕೊಂಡಲ್ಲಿ, ಅವನ್ನೇ ಅರಿಮೆಯ ಬರಹಗಳಲ್ಲಿ ಬಳಸಬಹುದು, ಮತ್ತು ಹೀಗೆ ಮಾಡುವ ಮೂಲಕ, ಕನ್ನಡದ ಅರಿಮೆಯ ಬರಹಗಳು ಓದುಗರಿಗೆ ಇವತ್ತಿನ ಬರಹಗಳಶ್ಟು ತೊಡಕಿನವಾಗಿ ಕಾಣಿಸದ ಹಾಗೆ ಮಾಡಬಹುದು.
ಮೇಲೆ 4.4ರಲ್ಲಿ ತಿಳಿಸಿದ ಹಾಗೆ, ಕನ್ನಡದ ಅರಿಮೆಯ ಬರಹಗಳಿಗೆ ಮುಕ್ಯವಾಗಿ ಎರಡು ಬಗೆಯ ಸೊಲ್ಲರಿಮೆಯ ಮಾರ್ಪುರುಳುಗಳು ಬೇಕಾಗುತ್ತವೆ: ಎಸಕಗಳನ್ನು ಮತ್ತು ಪರಿಚೆಗಳನ್ನು ಹೆಸರುಗಳಾಗಿ ಮಾರ್ಪಡಿಸಿರುವವು ಇವುಗಳಲ್ಲಿ ಒಂದು ಬಗೆಯವು ಮತ್ತು ಎಸಕಗಳನ್ನು ಪರಿಚೆಗಳಾಗಿ ಮಾರ್ಪಡಿಸಿರುವವು ಇನ್ನೊಂದು ಬಗೆಯವು.
ಎಸಕ ಪದಗಳನ್ನು ಹೆಸರು ಪದಗಳಾಗಿ ಮಾರ್ಪಡಿಸಲು ಕನ್ನಡದಲ್ಲಿ ಮುಕ್ಯವಾಗಿ ಎರಡು ಹೊಲಬು(ವಿದಾನ)ಗಳು ಬಳಕೆಯಾಗುತ್ತವೆ: ಉದು ಒಟ್ಟನ್ನು ಎಸಕ ಪದಗಳ ಪತ್ತುಗೆ(ಸಂಬಂದ)ರೂಪಕ್ಕೆ ಸೇರಿಸಿ ಹೇಳುವುದು (ಮಾಡುವುದು, ತಿಂದುದು, ಹೇಳದುದು), ಮತ್ತು ಎಸಕ ಪದಕ್ಕೆ ನೇರವಾಗಿ ಇಕೆ ಒಟ್ಟನ್ನು ಸೇರಿಸಿ ಹೇಳುವುದು (ಮಾಡುವಿಕೆ, ತಿನ್ನುವಿಕೆ).
ಕನ್ನಡದ ಎಸಕ ಪದಗಳಿಗೆ ಹಿಂಬೊತ್ತಿನ ರೂಪ (ಮಾಡಿದ, ಸಾಕಿದ, ಸುತ್ತಿದ, ಹುಟ್ಟಿದ), ಮುಂಬೊತ್ತಿನ ರೂಪ (ಮಾಡುವ, ಸಾಕುವ, ಸುತ್ತುವ, ಹುಟ್ಟುವ) ಮತ್ತು ಅಲ್ಲಗಳೆಯುವ ರೂಪ (ಮಾಡದ, ಸಾಕದ, ಸುತ್ತದ, ಹುಟ್ಟದ) ಎಂಬುದಾಗಿ ಮೂರು ಬಗೆಯ ಪತ್ತುಗೆ ರೂಪಗಳಿವೆ. ಈ ಮೂರು ಬಗೆಯ ರೂಪಗಳಿಗೂ ಉದು ಒಟ್ಟನ್ನು ಸೇರಿಸಿ ಹೆಸರು ಪದಗಳನ್ನು ಉಂಟುಮಾಡಬಹುದು.
(3l)
ಕಬ್ಬಿಣದ ಚೂರುಗಳನ್ನು ಉಕ್ಕಿನ ತುಂಡು ಸೆಳೆದುದನ್ನು ಗಮನಿಸಲಾಯಿತು. ಕಬ್ಬಿಣದ ಚೂರುಗಳನ್ನು ಉಕ್ಕಿನ ತುಂಡು ಸೆಳೆಯುವುದನ್ನು ಗಮನಿಸಲಾಯಿತು. ಕಬ್ಬಿಣದ ಚೂರುಗಳನ್ನು ಉಕ್ಕಿನ ತುಂಡು ಸೆಳೆಯದುದನ್ನು ಗಮನಿಸಲಾಯಿತು.
ಅಲ್ಲಗಳೆಯುವ ಪತ್ತುಗೆ ರೂಪಕ್ಕೆ ಹಿಂಬೊತ್ತಿನ ಹುರುಳು ಮಾತ್ರ ಇದೆ. ಮುಂಬೊತ್ತಿನ ಹುರುಳನ್ನು ಪಡೆಯಬೇಕಿದ್ದಲ್ಲಿ, ಅದಕ್ಕೆ ಇರುವ ಎಂಬ ಇರು ಎಸಕಪದದ ಮುಂಬೊತ್ತಿನ ಪತ್ತುಗೆ ರೂಪವನ್ನು ಸೇರಿಸಿಕೊಳ್ಳಬೇಕಾಗುತ್ತದೆ.
ಕಬ್ಬಿಣದ ಚೂರುಗಳನ್ನು ಉಕ್ಕಿನ ತುಂಡು ಸೆಳೆಯದಿರುವುದನ್ನು ಗಮನಿಸಬೇಕು.
ಉದು ಒಟ್ಟನ್ನು ಬಳಸಿ ರಚಿಸಿರುವ ಇಂತಹ ಹೆಸರು ಪದಗಳಲ್ಲಿ ಕೆಲವು ಎರಡು ಹುರುಳುಗಳಲ್ಲಿ ಬಳಕೆಯಾಗಬಲ್ಲುವು. ಅವು ನೇರವಾಗಿ ಎಸಕ ವೊಂದನ್ನು ಹೆಸರಿಸಬಲ್ಲುವು, ಇಲ್ಲವೇ ಎಸಕವೊಂದು ನಡೆಯುವುದನ್ನು ತಿಳಿಸಬಲ್ಲುವು. ಈ ವ್ಯತ್ಯಾಸವನ್ನು ಕೆಳಗಿನ ಸೊಲ್ಲಿನಲ್ಲಿ ಕಾಣಬಹುದು.
(4)
ನಿಮ್ಮ ಕೂಟದಲ್ಲಿ ಜಾನಕಿ ಹಾಡಿದುದನ್ನು ನಾನು ಕೇಳಿದ್ದೇನೆ.
(4)ನೇ ಸೊಲ್ಲಿನಲ್ಲಿ ನಾನು ಕೇಳಿರುವುದು ಜಾನಕಿಯ ಹಾಡುವಿಕೆಯನ್ನಾಗಿರ ಬಹುದು ಇಲ್ಲವೇ ಹಾಡಿದ್ದಾಳೆಂಬ ಸಂಗತಿಯನ್ನು ಮಾತ್ರವೇ ಆಗಿರಬಹುದು. ಎಸಕಗಳನ್ನು ಹೆಸರುಗಳಾಗಿ ಮಾರ್ಪಡಿಸುವಾಗ ಇಪ್ಪುರುಳು ಕಾಣಿಸಿಕೊಳ್ಳದ ಹಾಗೆ ಮಾಡಬೇಕಿದ್ದಲ್ಲಿ, ಅದಕ್ಕಾಗಿ ಎರಡನೇ ಹೊಲಬನ್ನು ಬಳಸಬಹುದು. ಈ ಹೊಲಬಿನಲ್ಲಿ ಎಸಕ ಪದಕ್ಕೆ ನೇರವಾಗಿ ಇಕೆ ಒಟ್ಟನ್ನು ಸೇರಿಸಲಾಗುತ್ತದೆ.
(5)
ಜಾನಕಿಯ ಹಾಡುವಿಕೆಯನ್ನು ನಾನು ಕೇಳಿದ್ದೇನೆ.
(5)ನೇ ಸೊಲ್ಲಿನಲ್ಲಿ ಬಂದಿರುವ ಹಾಡುವಿಕೆ ಎಂಬ ಹೆಸರುಪದಕಂತೆಗೆ ಎಸಕವನ್ನು ತಿಳಿಸುವ ಹುರುಳಿದೆಯಲ್ಲದೆ, ಆ ಎಸಕ ನಡೆದಿದೆ ಎಂಬ ಸಂಗತಿ ಯನ್ನು ತಿಳಿಸುವ ಹುರುಳಿಲ್ಲ.
ಉದು ಮತ್ತು ಇಕೆ ಒಟ್ಟುಗಳನ್ನು ಬಳಸಿ ಪಡೆದ ಹೆಸರುಗಳ ನಡುವೆ ಬೇರೆಯೂ ಕೆಲವು ಮುಕ್ಯವಾದ ವ್ಯತ್ಯಾಸಗಳಿವೆ. ಎತ್ತುಗೆಗಾಗಿ, ಉದು ಒಟ್ಟನ್ನು ಬಳಸಿರುವ ಹೆಸರುಗಳಲ್ಲಿ ಸೊಲ್ಲುಗಳ ಹೆಚ್ಚಿನ ಪರಿಚೆಗಳೂ ಹಾಗೆಯೇ ಉಳಿದಿರುತ್ತವೆ. ಇದಕ್ಕೆ ಬದಲು, ಇಕೆ ಒಟ್ಟನ್ನು ಬಳಸಿರುವ ಹೆಸರುಗಳಲ್ಲಿ ಅವು ಹೆಚ್ಚಿನ ಮಟ್ಟಿಗೆ ಇಲ್ಲವಾಗುತ್ತವೆ.
ಎತ್ತುಗೆಗಾಗಿ, ಉದು ಒಟ್ಟನ್ನು ಬಳಸಿದಾಗ ಸೊಲ್ಲುಗಳಲ್ಲಿರುವ ಎಸಕ ಪರಿಚೆಗಳು ಬದಲಾಗದೆ ಹಾಗೆಯೇ ಉಳಿಯುತ್ತವೆ; ಆದರೆ, ಇಕೆ ಒಟ್ಟನ್ನು ಬಳಸಿದಾಗ ಅವು ಹೆಸರು ಪರಿಚೆಗಳಾಗಿ ಬದಲಾಗುತ್ತವೆ.
ಜಾನಕಿ ನಿನ್ನೆ ಹಾಡಿದ್ದಳು.
(6ಚ) ಜಾನಕಿ ನಿನ್ನೆ ಹಾಡಿದುದನ್ನು ನಾನು ಕೇಳಿದ್ದೆ. (6ಟ) ಜಾನಕಿಯ ನಿನ್ನಿನ ಹಾಡುವಿಕೆಯನ್ನು ನಾನು ಕೇಳಿದ್ದೆ.
(6ಕ) ಸೊಲ್ಲಿನಲ್ಲಿ ಬಂದಿದ್ದ ಜಾನಕಿ ಮತ್ತು ನಿನ್ನೆ ಪದಗಳು (6ಚ)ದಲ್ಲಿ ಬದಲಾಗದೆ ಹಾಗೆಯೇ ಉಳಿದಿವೆ, ಆದರೆ (6ಟ)ದಲ್ಲಿ ಅವು ಜಾನಕಿಯ ಮತ್ತು ನಿನ್ನಿನ ಎಂಬುದಾಗಿ ಬದಲಾಗಿವೆ.
ಇದಲ್ಲದೆ, ಉದು ಒಟ್ಟನ್ನು ಬಳಸಿರುವ ಹೆಸರುಗಳಲ್ಲಿ ಮುಂಬೊತ್ತು ಮತ್ತು ಹಿಂಬೊತ್ತುಗಳ ನಡುವಿನ ವ್ಯತ್ಯಾಸ ಉಳಿದಿರುತ್ತದೆ (ಹಾಡುವುದು- ಹಾಡಿದುದು); ಆದರೆ, ಇಕೆ ಒಟ್ಟನ್ನು ಬಳಸಿರುವ ಹೆಸರುಗಳಲ್ಲಿ ಈ ವ್ಯತ್ಯಾಸ ಇಲ್ಲವಾಗುತ್ತದೆ (ನಿನ್ನಿನ ಹಾಡುವಿಕೆ-ನಾಳೆಯ ಹಾಡುವಿಕೆ).
ಸೊಲ್ಲುಗಳಲ್ಲಿ ಕಾಣಿಸುವ ಅಲ್ಲಗಳೆಯುವ ಹುರುಳನ್ನು ಮಾತ್ರ ಇಕೆ ಒಟ್ಟಿರುವ ಹೆಸರುಗಳಲ್ಲೂ ಉಳಿಸಲು ಬರುತ್ತದೆ (ಹಾಡುವಿಕೆ-ಹಾಡದಿಕೆ; ಮಾಡುವಿಕೆ-ಮಾಡದಿಕೆ). ಆದರೆ, ಇಕೆ ಒಟ್ಟನ್ನು ಬಳಸಿ ಅಲ್ಲಗಳೆಯುವ ಹೆಸರನ್ನು ಉಂಟುಮಾಡುವ ಈ ಹೊಲಬು ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿಲ್ಲ. ಅರಿಮೆಯ ಬರಹಗಳಲ್ಲಿ ಇವನ್ನು ಇನ್ನಶ್ಟು ಹೆಚ್ಚು ಬಳಕೆಗೆ ತರುವುದರಲ್ಲಿ ಯಾವ ತೊಂದರೆಯೂ ಇಲ್ಲ.
ಎಸಕ ಪದಗಳಿಗೆ ಮುಂಬೊತ್ತನ್ನು ಸೂಚಿಸುವ ದ್ ಒಟ್ಟನ್ನು, ಹಿಂಬೊತ್ತನ್ನು ಸೂಚಿಸುವ ವ್ ಒಟ್ಟನ್ನು, ಇಲ್ಲವೇ ಅಲ್ಲಗಳೆಯುವ ಅದ್ ಒಟ್ಟನ್ನು, ಮತ್ತು ಅದರೊಂದಿಗೆ ಪತ್ತುಗೆಯನ್ನು ಸೂಚಿಸುವ ಅ ಒಟ್ಟನ್ನು ಸೇರಿಸಿ ಪರಿಚೆಯನ್ನು ತಿಳಿಸುವ ಪದಗಳನ್ನಾಗಿ ಮಾರ್ಪಡಿಸಲಾಗುತ್ತದೆ (ಮಾಡುವ, ಮಾಡಿದ, ಮಾಡದ; ಬರೆವ, ಬರೆದ, ಬರೆಯದ; ಕುಡಿವ, ಕುಡಿದ, ಕುಡಿಯದ, ತಿನ್ನುವ, ತಿಂದ, ತಿನ್ನದ).
ಈ ರೀತಿ ಮಾರ್ಪಡಿಸಿರುವ ಎಸಕ ಪದವನ್ನು ಯಾವುದಾದರೊಂದು ಹೆಸರು ಪದದ ಪರಿಚೆಯನ್ನು ತಿಳಿಸುವುದಕ್ಕಾಗಿ ಬಳಸಲಾಗುತ್ತದೆ (ಓಡುವ ಹುಡುಗ, ಬರೆದ ಹುಡುಗ, ಕುಡಿಯದ ಹುಡುಗ).
ಇದೇ ಹೊಲಬನ್ನು (ವಿದಾನವನ್ನು ಬಳಸಿ ಎಸಕವನ್ನು ತಿಳಿಸುವ ಸೊಲ್ಲನ್ನೂ ಬೇರೊಂದು ಹೆಸರು ಪದದ ಪರಿಚೆಯನ್ನಾಗಿ ಮಾಡಬಲ್ಲೆವು; ಇಂತಹ ಬಳಕೆ ಯನ್ನೂ ಸೊಲ್ಲರಿಮೆಯ ಮಾರ್ಪುರುಳೆಂದು ಕರೆಯಬಹುದು.
(7ಕ) ಒಂದು ಜೀವಿ ಇನ್ನೊಂದು ಜೀವಿಯನ್ನು ಹುಟ್ಟಿಸುತ್ತದೆ. (7ಚ) ಈ ಹುಟ್ಟಿಸುವ ಕೆಲಸ ಹಲವು ಬಗೆಯಲ್ಲಿ ನಡೆಯುತ್ತದೆ. (7ಟ) ಈ ರೋಗ ಬಾರದ ಮಕ್ಕಳಲ್ಲಿ ಅದನ್ನು ಎದುರಿಸುವ ಶಕ್ತಿ
ಇರುವುದಿಲ್ಲ.
(7ತ) ಇದು ಕಬ್ಬಿಣದ ಚೂರುಗಳನ್ನು ಸೆಳೆಯದ ಉಕ್ಕು.
ಈ ಸೊಲ್ಲರಿಮೆಯ ಮಾರ್ಪುರುಳುಗಳು ಇನ್ನಶ್ಟು ಅಡಕವಾಗಬೇಕಿದ್ದಲ್ಲಿ, ಅದಕ್ಕಾಗಿ ಮೇಲೆ ವಿವರಿಸಿರುವಂತಹ ಎಸಕಪದರೂಪಗಳನ್ನು ಬಳಸುವ ಬದಲು ಹೆಸರುಪದಗಳನ್ನು ಬಳಸಬಹುದು. ಎತ್ತುಗೆಗಾಗಿ, ಬೇಡು ಎಂಬ ಎಸಕ ಪದಕ್ಕೆ ಬದಲಾಗಿ ಬೇಡುವಿಕೆ ಎಂಬ ಎಸಕಪದರೂಪವನ್ನು ಬಳಸುವ ಬದಲು ಬೇಡಿಕೆ ಎಂಬುದನ್ನು ಬಳಸಬಹುದು. ಇದಕ್ಕೆ ಬೇಕಾಗುವ ಒಟ್ಟುಗಳು ಕನ್ನಡದಲ್ಲಿ ಸಾಕಶ್ಟು ಇವೆ.
4.5 ಸಿಕ್ಕಲು ಸೊಲ್ಲುಗಳು
ಅರಿಮೆಯ ಬರಹಗಳು ತೊಡಕಿನವಾಗಿ ಕಾಣಿಸಲು ಅವುಗಳಲ್ಲಿ ಬರುವ ಸೊಲ್ಲುಗಳಲ್ಲಿ ಹೆಚ್ಚಿನವೂ ಸಿಕ್ಕಲು ಸೊಲ್ಲುಗಳಾಗಿರುವುದು ಇನ್ನೊಂದು ಕಾರಣ. ಸುಳು ಸೊಲ್ಲುಗಳಲ್ಲಿ ಒಂದು ವಿಶಯವನ್ನು ಮಾತ್ರ ತಿಳಿಸಲಾಗುತ್ತದೆಯಾದರೆ, ಸಿಕ್ಕಲು ಸೊಲ್ಲುಗಳಲ್ಲಿ ಒಂದಕ್ಕಿಂತ ಹೆಚ್ಚು ವಿಶಯಗಳನ್ನು ತಿಳಿಸಲಾಗುತ್ತದೆ. ಈ ಹೆಚ್ಚಿನ ವಿಶಯಗಳನ್ನು ಒಳಸೊಲ್ಲುಗಳ ಮೂಲಕ ತಿಳಿಸಿರುವ ಕಾರಣ, ಅವು ಸಿಕ್ಕಲು ಸೊಲ್ಲುಗಳಾಗುತ್ತವೆ. ಇಂತಹ ಸೊಲ್ಲುಗಳಿರುವ ಬರಹಗಳನ್ನು ಓದಿ ತಿಳಿದುಕೊಳ್ಳುವುದು ಹೆಚ್ಚು ತೊಡಕಿನ ಕೆಲಸವೆಂದು ಓದುಗರಿಗೆ ಅನಿಸು
ಎತ್ತುಗೆಗಾಗಿ, ಎನ್.ಎಸ್. ಲೀಲಾ ಅವರು ಮಕ್ಕಳಿಗಾಗಿ ಬರೆದಿರುವ ಜೀವಜಗತ್ತಿನ ಕವ್ತುಕಗಳು ಪುಸ್ತಕದಲ್ಲಿ ಬಂದಿರುವ ಕೆಳಗಿನ ಸೊಲ್ಲನ್ನು ಗಮನಿಸಬಹುದು:
ಕೀಟಗಳು, ಕಾಳುಗಳು ಅತಿ ಹೆಚ್ಚಿನ ಪ್ರೀಟೀನ್ ಹೊಂದಿರುವುದರಿಂದ ಶೀಘ್ರವಾಗಿ ಬೆಳೆಯುವ ಕಂದಮ್ಮಗಳಿಗೆ ಸುಲಭದಲ್ಲಿ ಜೀರ್ಣಿಸಿಕೊಳ್ಳ ಬಹುದಾದ ಮೃದುವಾದ ಹುಳು-ಹುಪ್ಪಟೆಗಳನ್ನೇ ತಾಯಿ ಗುಬ್ಬಚ್ಚಿ ಮರಿಗಳಿಗೆ ನೀಡುವುದು.
ಇದೊಂದು ಸಿಕ್ಕಲು ಸೊಲ್ಲು. ಇದರಲ್ಲಿ ಕೆಳಗೆ ಕೊಟ್ಟಿರುವ ನಾಲ್ಕು
ಸುಳುಸೊಲ್ಲುಗಳು ಬಳಕೆಯಾಗಿವೆ:
(l)
ಕೀಟಗಳು (ಮತ್ತು) ಕಾಳುಗಳು ಅತಿ ಹೆಚ್ಚಿನ ಪ್ರೀಟೀನ್ ಹೊಂದಿವೆ. ಕಂದಮ್ಮಗಳು ಶೀಘ್ರವಾಗಿ ಬೆಳೆಯುತ್ತವೆ. ಮೃದುವಾದ ಹುಳು-ಹುಪ್ಪಟೆಗಳನ್ನು ಸುಲಭದಲ್ಲಿ ಜೀರ್ಣಿಸಿ ಕೊಳ್ಳಬಹುದು. (ಅವನ್ನೇ) ತಾಯಿ ಗುಬ್ಬಚ್ಚಿ ಮರಿಗಳಿಗೆ ನೀಡುವುದು.
ಇವುಗಳಲ್ಲಿ ನಾಲ್ಕನೆಯದು ಮುಕ್ಯ ಸೊಲ್ಲಾಗಿ, ಮತ್ತು ಉಳಿದ ಮೂರು ಒಳಸೊಲ್ಲುಗಳಾಗಿ ಮೇಲಿನ ಎತ್ತುಗೆಯಲ್ಲಿ ಬಳಕೆಯಾಗಿವೆ. ಈ ಸಿಕ್ಕಲು ಸೊಲ್ಲನ್ನು ಓದಿ ತಿಳಿಯಬೇಕೆಂದಿರುವವರಿಗೆ ಅದರಲ್ಲಿ ಬರುವ ಈ ನಾಲ್ಕು ಸುಳುಸೊಲ್ಲುಗಳನ್ನು ಬೇರ್ಪಡಿಸುವುದು ಹೇಗೆ ಎಂಬುದು ತಿಳಿದಿರಬೇಕು, ಮತ್ತು ಅವುಗಳಲ್ಲಿ ಮುಕ್ಯ ಸೊಲ್ಲು ಯಾವುದು (ನಾಲ್ಕನೆಯದು), ಒಳಸೊಲ್ಲುಗಳು ಯಾವುವು, ಅವುಗಳ ನಡುವಿನ ಪತ್ತುಗೆ(ಸಂಬಂದ) ಎಂತಹದು ಎಂಬುದನ್ನು ತಿಳಿದುಕೊಳ್ಳಲು ಗೊತ್ತಿರಬೇಕು. ಇದಲ್ಲದೆ, ಈ ಸಿಕ್ಕಲು ಸೊಲ್ಲಿನಲ್ಲಿ ಒಳ ಸೊಲ್ಲುಗಳು ತಿಳಿಸುವ ವಿಶಯಗಳು ಮುಕ್ಯವಾದುವಲ್ಲ, ಮುಕ್ಯ ಸೊಲ್ಲು ತಿಳಿಸುವ ವಿಶಯವೇ ಮುಕ್ಯವಾದುದು ಎಂಬುದನ್ನು ಓದುತ್ತಿರುವಂತೆ ಊಹಿಸಿ ಕೊಳ್ಳಲು ತಿಳಿದಿರಬೇಕು.
ಒಳಸೊಲ್ಲುಗಳಲ್ಲಿ ಇಪ್ಪುರುಳಿನ ಸಮಸ್ಯೆಯೂ ಹೆಚ್ಚು ಕಾಣಿಸಿಕೊಳ್ಳುತ್ತದೆ. ಓದುತ್ತಿರುವ ಹಾಗೆ, ಈ ಸಮಸ್ಯೆಯನ್ನೂ ಓದುಗರು ಬಗೆಹರಿಸಿಕೊಳ್ಳ ಬೇಕಾಗುತ್ತದೆ. ಇದಕ್ಕಾಗಿ ಕೆಲವೊಮ್ಮೆ ಸೊಲ್ಲುಗಳನ್ನು ಎರಡೆರಡು ಬಾರಿ ಓದಿನೋಡಬೇಕಾಗುತ್ತದೆ. ಹಾಗಾಗಿ, ಅರಿಮೆಯ ಬರಹಗಳು ಬೇರೆ ಬರಹಗಳ ಹಾಗೆ ಸುಳುವಾಗಿ ಓದಿಸಿಕೊಂಡು ಹೋಗುವುದಿಲ್ಲ.
ಆದರೆ, ಸಿಕ್ಕಲು ಸೊಲ್ಲುಗಳ ಮೂಲಕ ತಿಳಿಸಬೇಕೆಂದಿರುವ ವಿಶಯಗಳನ್ನು ಹೆಚ್ಚು ಅಡಕವಾಗಿ ತಿಳಿಸಲು ಬರುತ್ತದೆ, ಮತ್ತು ಅವುಗಳಲ್ಲಿ ಸೇರಿಕೊಂಡಿರುವ ಸುಳುಸೊಲ್ಲುಗಳ ನಡುವಿನ ಪತ್ತುಗೆಯನ್ನೂ ಹೆಚ್ಚು ಚನ್ನಾಗಿ ತೋರಿಸಿಕೊಡಲು ಬರುತ್ತದೆ. ಹಾಗಾಗಿ, ಅರಿಮೆಯ ಬರಹಗಳಲ್ಲಿ ಸುಳುಸೊಲ್ಲುಗಳಿಗಿಂತಲೂ ಸಿಕ್ಕಲು ಸೊಲ್ಲುಗಳೇ ಹೆಚ್ಚು ಬಳಕೆಯಾಗುತ್ತವೆ.
ಆದರೆ, ಅರಿಮೆಯ ಸಂಗತಿಗಳನ್ನು ಮಂದಿಮೆಚ್ಚುವ ಹಾಗೆ, ಇಲ್ಲವೇ ಚಿಕ್ಕ ಮಕ್ಕಳಿಗೆ ತಿಳಿಯುವ ಹಾಗೆ ಬರೆಯಬೇಕೆಂದಿರುವವರು ಆದಶ್ಟು ಮಟ್ಟಿಗೆ ತಮ್ಮ ಬರವಣಿಗೆಯಲ್ಲಿ ಸಿಕ್ಕಲು ಸೊಲ್ಲುಗಳನ್ನು ಬಳಸದಿರಬೇಕು.
4.6 ಬರಹದ ಇಟ್ಟಳ
ಅರಿಮೆಯ ಬರಹಗಳು ತೊಡಕಿನವಾಗಿ ಕಾಣಿಸಲು ಅವುಗಳಲ್ಲಿ ಹಲವು ಬಗೆಯ ಬರಹದ ಇಟ್ಟಳಗಳು ಬಳಕೆಯಾಗುತ್ತಿರುವುದೂ ಒಂದು ಕಾರಣ. ಕತೆಗಳಲ್ಲಿ ಸಾಮಾನ್ಯವಾಗಿ ಒಂದು ಬಗೆಯ ಬರಹದ ಇಟ್ಟಳ ಮಾತ್ರ ಬಳಕೆ ಯಾಗುತ್ತದೆ. ಇದು ಹೆಚ್ಚು ಕಡಿಮೆ ಕತೆಯ ಇಟ್ಟಳವನ್ನೇ ಅನುಸರಿಸುತ್ತಿರುತ್ತದೆ. ಆದರೆ, ಅರಿಮೆಯ ಬರಹಗಳಲ್ಲಿ ವರ್ಣನೆ, ಪಟ್ಟಿ, ವರಸೆ(ಅನುಕ್ರಮ), ಹೋಲಿಕೆ ಮತ್ತು ಗೆಂಟು(ವ್ಯತ್ಯಾಸ), ಕಾರಣ ಮತ್ತು ಪರಿಣಾಮ, ತೊಡಕು ಮತ್ತು ಬಗೆಹರಿತ ಮೊದಲಾದ ಹಲವು ಬಗೆಯ ಬರಹದ ಇಟ್ಟಳಗಳು ಬಳಕೆಯಾಗುತ್ತವೆ. ತಾವು ಓದುತ್ತಿರುವ ಅರಿಮೆಯ ಬರಹದಲ್ಲಿ ಎಂತಹ ಬರಹದ ಇಟ್ಟಳ ಬಳಕೆಯಾಗಿದೆ ಎಂಬುದನ್ನು ಕಂಡುಹಿಡಿಯಲು ಕಲಿಸಿ ಕೊಡದಿದ್ದರೆ ಹೆಚ್ಚಿನ ಮಕ್ಕಳಿಗೂ ಅದನ್ನು ಕಂಡುಕೊಳ್ಳಲು ಬರುವುದಿಲ್ಲ, ಮತ್ತು ಇದರಿಂದಾಗಿ ಅವರು ಓದಿನಲ್ಲಿ ಹಿಂದೆ ಬೀಳುತ್ತಾರೆ.
4.7 ಮಂದಿ ಮೆಚ್ಚುವಂತೆ ಬರೆಯುವುದು
ಅರಿಮೆಯ ಬರಹಗಳನ್ನು ಮಂದಿ ಮೆಚ್ಚುವ (ಜನಪ್ರಿಯವಾಗುವ) ಹಾಗೆ ಇಲ್ಲವೇ ಚಿಕ್ಕ ಮಕ್ಕಳಿಗೆ ಗೊತ್ತಾಗುವ ಹಾಗೆ ಬರೆಯುವುದು ಹೇಗೆ ಎಂಬುದು ಮೇಲಿನ ಪರಿಶೀಲನೆಯಿಂದ ಗೊತ್ತಾಗಿರಬಹುದು. ಬರಹಗಾರರು ಇದಕ್ಕಾಗಿ ಕೆಳಗೆ ಕೊಟ್ಟಿರುವ ಉಪಾಯಗಳನ್ನು ಬಳಸಿಕೊಳ್ಳಬೇಕಾಗುತ್ತದೆ:
(1) ಆದಶ್ಟು ಮಟ್ಟಿಗೆ ಅರಿಮೆಯ (ಪಾರಿಬಾಶಿಕ) ಪದಗಳ ಬಳಕೆಯನ್ನು
ಕಡಿಮೆ ಮಾಡಬೇಕು.
(2) ಸೊಲ್ಲರಿಮೆಯ ಮಾರ್ಪುರುಳುಗಳನ್ನು ಬಳಸದಿರಬೇಕು; ಹೆಸರು
ಪದಕಂತೆಗಳನ್ನು ಸೊಲ್ಲುಗಳಾಗಿ ಬದಲಾಯಿಸಿಕೊಳ್ಳಬೇಕು.
(3) ಸಿಕ್ಕಲು ಸೊಲ್ಲುಗಳನ್ನು ಸುಳುಸೊಲ್ಲುಗಳಾಗಿ ಬಿಡಿಸಿ ಬರೆಯಬೇಕು. (4) ಸಂಸ್ಕ್ರುತ (ತತ್ಸಮ) ಪದಗಳ ಬದಲು ಆದಶ್ಟುಮಟ್ಟಿಗೆ ಕನ್ನಡದವೇ
ಆದ ಪದಗಳನ್ನು ಬಳಸಬೇಕು.
ಶಿವರಾಮ ಕಾರಂತರ ಬಾಲಪ್ರಪಂಚವನ್ನು ಓದಿನೋಡಿ, ಅದರಲ್ಲಿ ಹೇಗೆ ಚಿಕ್ಕಮಕ್ಕಳಿಗೂ ಗೊತ್ತಾಗುವ ಹಾಗೆ ಅರಿಮೆಯ ವಿಶಯಗಳನ್ನು ತಿಳಿಸಲಾಗಿದೆ ಎಂಬುದನ್ನು ಗಮನಿಸಬೇಕು. ಆದರೆ, ಇವೆಲ್ಲವನ್ನೂ ನಡೆಸಲು ಬರಹಗಾರರಿಗೆ ಸ್ವಲ್ಪ ಮಟ್ಟಿಗಾದರೂ ಕನ್ನಡ ಸೊಲ್ಲರಿಮೆಯ ತಿಳಿವು ಬೇಕಾಗುತ್ತದೆ.
4.8 ತಿರುಳು
ಅರಿಮೆಯ ಬರಹಗಳು ಓದಲು ತೊಡಕಿನವಾಗಿ ಕಾಣಿಸಲು ಹಲವು ಕಾರಣ ಗಳಿವೆ: ಎತ್ತುಗೆಗಾಗಿ, ಅವುಗಳಲ್ಲಿ ಹಲವಾರು ಅರಿಮೆಯ ಪದಗಳನ್ನು ಬಳಸ ಬೇಕಾಗುತ್ತದೆ; ಎಸಕಗಳನ್ನು ತಿಳಿಸುವ ಸೊಲ್ಲುಗಳನ್ನು ಆಗಾಗ ಹೆಸರುಗಳಾಗಿ ಮಾರ್ಪಡಿಸಿಕೊಳ್ಳಬೇಕಾಗುತ್ತದೆ; ಹೆಚ್ಚು ಹೆಚ್ಚು ಸಿಕ್ಕಲು ಸೊಲ್ಲುಗಳನ್ನು ಬಳಸ ಬೇಕಾಗುತ್ತದೆ; ಮತ್ತು ಹಲವು ಬಗೆಯ ಬರಹದ ಇಟ್ಟಳಗಳನ್ನು ಬಳಸ ಬೇಕಾಗುತ್ತದೆ. ಇವನ್ನು ನಾವು ತಪ್ಪಿಸಲಾರೆವು.
ಅರಿಮೆಯ ಬರಹಗಳನ್ನು ಓದಿ ತಿಳಿಯಬೇಕೆಂದಿರುವವರು ಅವುಗಳಲ್ಲಿ ಬಳಕೆಯಾಗುವ ಅರಿಮೆಯ ಪದಗಳನ್ನು, ಸೊಲ್ಲರಿಮೆಯ ಮಾರ್ಪುರುಳುಗಳನ್ನು, ಸಿಕ್ಕಲು ಸೊಲ್ಲುಗಳನ್ನು, ಮತ್ತು ಬರಹದ ಇಟ್ಟಳಗಳನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಕಲಿಯಬೇಕಾಗುತ್ತದೆ. ಈ ಕಲಿಕೆಯನ್ನು ನಡೆಸುವಲ್ಲಿ ಸೊಲ್ಲರಿಮೆಯ ತಿಳಿವು ನೆರವಿಗೆ ಬರುತ್ತದೆ.
ಕನ್ನಡದ ಅರಿಮೆಯ ಬರಹಗಳು ಬೇರೆ ಕೆಲವು ಕಾರಣಗಳಿಂದಾಗಿ ಇನ್ನಶ್ಟು ತೊಡಕಿನವಾಗಿವೆ: ಇಂಗ್ಲಿಶ್ ಅರಿಮೆಯ ಪದಗಳಿಗೆ ಬದಲಾಗಿ ಕನ್ನಡದವೇ ಆದ ಪದ ಮತ್ತು ಒಟ್ಟುಗಳನ್ನು ಬಳಸಿ ಹೊಸ ಪದಗಳನ್ನು ಉಂಟುಮಾಡುವ ಬದಲು ಸಂಸ್ಕ್ರುತದ ಪದ ಮತ್ತು ಒಟ್ಟುಗಳನ್ನು ಬಳಸುವುದು, ಮತ್ತು ಕನ್ನಡದ ಮಾರ್ಪುರುಳುಗಳನ್ನು ಬಳಸುವ ಬದಲು ಸಂಸ್ಕ್ರುತದಿಂದ ಪದರೂಪಗಳನ್ನು ಎರವಲಾಗಿ ಪಡೆದು ಬಳಸುವುದು ಇವುಗಳಲ್ಲಿ ಮುಕ್ಯವಾದವುಗಳು. ಕನ್ನಡದ ಸೊಲ್ಲರಿಮೆಯ ತಿಳಿವಿಲ್ಲದೆ ಈ ತಪ್ಪುಗಳನ್ನು ಮಾಡಲಾಗುತ್ತಿದೆ.