Chapters: Ch 1 · Ch 2 · Ch 3 · Ch 4 · Ch 5 · Ch 6 · Ch 7 · Ch 8 · Ch 9
ಅಧ್ಯಾಯ ಎಂಟು
ಎರವಲು ಪದಗಳ ಒಳರಚನೆ
೮.೧ ಎರಡನೆಯ ಸ್ವರೂಪ
ಕನ್ನಡದಲ್ಲಿ ಸಂಸ್ಕೃತ, ಇಂಗ್ಲಿಷ್, ಹಿಂದಿ, ಪರ್ಶಿಯನ್ ಮೊದಲಾದ ಬೇರೆ ಬೇರೆ ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳು ಹಲವಿವೆ. ಇವುಗಳ ಒಳರಚನೆ ಹಿಂದಿನ ಅಧ್ಯಾಯಗಳಲ್ಲಿ ವಿವರಿಸಿದ ಕನ್ನಡ ಪದಗಳ ಒಳರಚನೆಗಿಂತ ಭಿನ್ನ ವಾಗಿರುವುದಾದ ಕಾರಣ ಅವನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಅವಶ್ಯಕತೆಯಿದೆ. ಅಂತಹ ಪರಿಶೀಲನೆಯನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ. ಆದರೆ ಕನ್ನಡದವೇ ಆದ ಪದಗಳು ಮತ್ತು ಬೇರೆ ಭಾಷೆಗಳಿಂದ ಎರವಲಾಗಿ ಬಂದ ಪದಗಳು ಎಂಬುದಾಗಿ ಕನ್ನಡದಲ್ಲಿ ಬಳಕೆಯಲ್ಲಿರುವ ಪದ ಗಳನ್ನು ಎರಡು ಬೇರೆ ಬೇರೆ ವರ್ಗಗಳಲ್ಲಿ ವಿಭಜಿಸಿ ಹೇಳುವುದು ಮಾತ್ರ ಅಷ್ಟೊಂದು ಸುಲಭದ ಕೆಲಸವೇನಲ್ಲ. ಯಾಕೆಂದರೆ ಅನಾದಿ ಕಾಲದಿಂದಲೂ ಇಂತಹ ಪದಗಳ ಎರವಲು ನಮ್ಮ ಭಾಷೆಯಲ್ಲಿ ನಡೆಯುತ್ತಿದ್ದು, ಈ ಪ್ರಕ್ರಿಯೆಯ ಮೂಲಕ ಅದರಲ್ಲಿ ಸೇರಿಕೊಂಡಿರುವ ಪದಗಳಲ್ಲಿ ಬಹಳ ಇತ್ತೀಚೆಗೆ ಬಂದವುಗಳು ಮಾತ್ರ ತಮ್ಮತನವನ್ನು ಉಳಿಸಿಕೊಂಡು ಬೇರೆ ರೀತಿಯ ಪದಗಳ ಹಾಗೆ ಕಾಣಿಸುತ್ತವೆ. ಉಳಿದುವೆಲ್ಲ ಬೇರೆ ಬೇರೆ ಬದಲಾವಣೆಗಳ ಮೂಲಕ ಕನ್ನಡದವೇ ಆಗಿಬಿಟ್ಟಿವೆ.
೮.೧.೧ ಭಾಷೆಗಳೊಳಗೆ ಎರಡಲಿನಲ್ಲಿ ವೈವಿಧ್ಯ
ಎಲ್ಲಾ ಭಾಷೆಗಳಿಗೂ ಒಂದಲ್ಲ ಒಂದು ವಿಧದಲ್ಲಿ ಬೇರೆ ಭಾಷೆಗಳೊಂದಿಗೆ ಸಂಪರ್ಕವಿದ್ದೇ ಇರುತ್ತದೆಯಾದ ಕಾರಣ, ಎಲ್ಲಾ ಭಾಷೆಗಳಲ್ಲೂ ಎರವಲಾಗಿ ಬಂದ ಪದಗಳು ಇದ್ದೇ ಇರುತ್ತವೆ. ಕೆಲವು ಭಾಷೆಗಳಲ್ಲಿ ಇಂತಹ ಪದಗಳು ಜಾಸ್ತಿ ಇರುತ್ತವೆ, ಮತ್ತು ಬೇರೆ ಕೆಲವು ಭಾಷೆಗಳಲ್ಲಿ ಕಡಿಮೆ ಇರುತ್ತವೆ
ಎಂಬುದೇ ಈ ವಿಷಯದಲ್ಲಿ ಬೇರೆ ಬೇರೆ ಭಾಷೆಗಳ ನಡುವಿರುವ ವ್ಯತ್ಯಾಸ. ಈ ವ್ಯತ್ಯಾಸಕ್ಕೆ ಹಲವು ಕಾರಣಗಳಿವೆ.
ಪದಗಳನ್ನು ಎರವಲು ಕೊಡುವ ಭಾಷೆಗೂ ಮತ್ತು ಎರವಲು ಪಡೆಯುವ ಭಾಷೆಗೂ ನಡುವೆ ಬಹಳ ಹತ್ತಿರದ ಸಂಪರ್ಕವಿದೆಯಾದರೆ, ಮತ್ತು ಎರವಲು ಕೊಡುವ ಭಾಷೆ ಹೆಚ್ಚು ಪ್ರತಿಷ್ಠೆಯದಾದರೆ, ಹೆಚ್ಚು ಹೆಚ್ಚು ಪದಗಳು ಅದರಿಂದ ಎರಲಾಗಿ ಬಂದು ಎರವಲು ಪಡೆಯುವ ಭಾಷೆಯಲ್ಲಿ ಸೇರಿಕೊಳ್ಳಲು ಸಾಧ್ಯವಿದೆ. ಕನ್ನಡದ ಮಟ್ಟಿಗೆ ಸಂಸ್ಕೃತ ಬಹಳ ಪ್ರತಿಷ್ಠೆಯ ಭಾಷೆಯಾಗಿತ್ತಾದ ಕಾರಣ ಅದರಿಂದ ದೊಡ್ಡ ಸಂಖ್ಯೆಯಲ್ಲಿ ಪದಗಳು ಕನ್ನಡಕ್ಕೆ ಎರವಲಾಗಿ ಬಂದಿವೆ. ಇವತ್ತು ಇಂಗ್ಲಿಷ್ ಭಾಷೆ ಅಂತಹದೇ ಪ್ರತಿಷ್ಠೆಯ ಸ್ಥಾನದಲ್ಲಿದೆಯಾದ ಕಾರಣ ಅದರಿಂದಲೂ ಪದಗಳು ಹೆಚ್ಚಿನ ಸಂಖ್ಯೆಯಲ್ಲಿ ಎರವಲಾಗಿ ಬರುತ್ತಿವೆ.
ಇದಲ್ಲದೆ, ಒಂದು ಭಾಷೆಯನ್ನಾಡುವ ಜನರ ಮನಸ್ಥಿತಿಯಂತಹದು, ಅವರು ಸುಲಭವಾಗಿ ಪದಗಳ ಎರವಲಿಗೆ ಮರೆಹೊಗುವವರೇ ಅಥವಾ ಹೊಸ ಹೊಸ ಪದಗಳನ್ನು ಬಳಸಬೇಕಾಗುವ ಸಂದರ್ಭ ಬಂದಾಗಲೆಲ್ಲ ತಮ್ಮವೇ ಆದ ಪದಗಳನ್ನು ಸೃಷ್ಟಿಸಿಕೊಳ್ಳುವವರೇ ಎಂಬುದು ಈ ವ್ಯತ್ಯಾಸಕ್ಕೆ ಇನ್ನೊಂದು ಆಧಾರವಾಗುತ್ತದೆ. ತಮ್ಮ ಭಾಷೆಯ ಕುರಿತಾಗಿ ಜಾಸ್ತಿ ಅಭಿಮಾನವನ್ನು ಹೊಂದಿರುವ ಮಂದಿ ಎರವಲಿಗಿಂತಲೂ ಹೊಸ ಪದಗಳ ತಯಾರಿಕೆಗೇನೇ ಕೈ ಹಾಕುವುದು ಜಾಸ್ತಿ.
ಭಾಷೆಯಲ್ಲಿಲ್ಲದ ಹೊಸ ಪದಗಳ ಅವಶ್ಯಕತೆ ಬೇರೆ ಬೇರೆ ಕಾರಣಗಳಿಗಾಗಿ ಕಾಣಿಸಿಕೊಳ್ಳುತ್ತದೆ. ಬೇರೊಂದು ಭಾಷೆಯನ್ನಾಡುವ ಜನರಲ್ಲಿ ಬಳಕೆಯಲ್ಲಿರುವ ವಸ್ತುಗಳು ನಮ್ಮಲ್ಲಿ ಬಳಕೆಗೆ ಬಂದಾಗ, ಅಂತಹ ವಸ್ತುಗಳನ್ನು ಹೆಸರಿಸುವು ದಕ್ಕಾಗಿ ನಮಗೆ ಹೊಸ ಪದಗಳ ಅವಶ್ಯಕತೆ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ಆ ವಸ್ತುಗಳೊಂದಿಗೆ ಅವುಗಳ ಹೆಸರುಗಳನ್ನೂ ನಾವು ಆಮದು ಮಾಡಿಕೊಳ್ಳಬಹುದು, ಇಲ್ಲವೇ ನಮ್ಮವೇ ಆದ ಹೆಸರುಗಳನ್ನು ತಯಾರಿಸಿ ಅವಕ್ಕೆ ಕೊಡಬಹುದು.
ಉದಾಹರಣೆಗಾಗಿ, ಇಂಗ್ಲಿಷ್ ಭಾಷೆಯನ್ನಾಡುವ ಸಮಾಜದಿಂದ ನಾವು ರೇಡಿಯೋ, ಟಿ.ವಿ., ಬಸ್ಸು, ಕಾರು, ಪೆನ್ನು, ರೈಲು, ಕಂಪ್ಯೂಟರ್ ಮೊದಲಾದ ಹಲವಾರು ವಸ್ತುಗಳನ್ನು ಬಳಕೆಗೆ ಪಡೆದಿದ್ದು, ಅವುಗಳೊಂದಿಗೆ ಆ ವಸ್ತುಗಳ ಹೆಸರುಗಳನ್ನೂ ಎರವಲಾಗಿ ಪಡೆದುಕೊಂಡಿದ್ದೇವೆ. ಇಂತಹ ವಸ್ತುಗಳಲ್ಲಿ ಕೆಲ ವಕ್ಕೆ (ಉದಾ: ಉಗಿಬಂಡಿ) ನಮ್ಮವೇ ಆದ ಹೆಸರುಗಳನ್ನು ಕೊಟ್ಟಿರುವೆವಾದರೂ ಬೇರೆ ಕೆಲವಕ್ಕೆ ಅವುಗಳ ಹೆಸರುಗಳನ್ನೇ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಉಳಿಸಿಕೊಂಡಿದ್ದೇವೆ.
ಈ ರೀತಿ ಹೊಸ ಹೊಸ ರೀತಿಯ ವಸ್ತುಗಳನ್ನು ಬಳಕೆಗೆ ಪಡೆದುಕೊಳ್ಳು ವುದು ಮಾತ್ರವಲ್ಲ, ಹೊಸ ಹೊಸ ವಿಷಯಗಳನ್ನೂ ನಾವು ಬೇರೆ ಭಾಷೆಗಳ ನ್ನಾಡುವ ಜನರಿಂದ ತಿಳಿದುಕೊಳ್ಳುವವಾದ್ದರಿಂದ ಅಂತಹ ವಿಷಯಗಳನ್ನು
ಹೆಸರಿಸುವ ಪದಗಳೂ ನಮ್ಮ ಭಾಷೆಗೆ ಎರವಲಾಗಿ ಬರುತ್ತವೆ. ಈ ರೀತಿಯಲ್ಲಿ ಎರವಾಲಾಗಿ ಬಂದಿರುವ ನೂರಾರು ಪದಗಳನ್ನು ಶಾಸ್ತ್ರೀಯ ಗ್ರಂಥಗಳಲ್ಲಿ ಕಾಣ ಬಹುದು. ನಮ್ಮ ದಿನನಿತ್ಯದ ಬಳಕೆಯಲ್ಲಿರುವ ಭಾಷೆಯಲ್ಲೂ ಇಂತಹ ಹಲ ವಾರು ಪದಗಳು ಬೇರೆ ಭಾಷೆಗಳಿಂದ ಎರವಲಾಗಿ ಬಂದು ಸೇರಿಕೊಂಡಿರುತ್ತವೆ.
ಆ.೧.೨ ತತ್ತ್ವ ಮತ್ತು ತದ್ಭವ ಪದಗಳು
ಈ ರೀತಿ ಎರವಲಾಗಿ ಬಂದಿರುವ ಪದಗಳಲ್ಲಿ ಸಂಸ್ಕೃತ ಭಾಷೆಯಿಂದ ಬಂದವು ಗಳನ್ನು ಮಾತ್ರ ಅವುಗಳ ಸ್ವರೂಪವನ್ನಾಧರಿಸಿ ತದ್ಭವ ಮತ್ತು ತದ್ಭವ ಎಂಬುದಾಗಿ ವಿಂಗಡಿಸಿ ಹೇಳುವ ಕ್ರಮ ಕನ್ನಡದ ವ್ಯಾಕರಣಗಳಲ್ಲಿ ಮತ್ತು ಅರ್ಥಕೋಶಗಳಲ್ಲಿ ಬಳಕೆಯಲ್ಲಿದೆ. ಸಂಸ್ಕೃತದಲ್ಲಿ ಇರುವ ಹಾಗೆಯೇ ಬಳಕೆ ಯಾಗುವ ಪದಗಳು (ಎಂದರೆ ಸಂಸ್ಕೃತದ ಪದಗಳಿಗೆ ಸಮಾನವಾದ ಪದಗಳು) ತದ್ಭವಗಳು ಮತ್ತು ಅಂತಹ ಪದಗಳಲ್ಲಿ ಬೇರೆ ಬೇರೆ ರೀತಿಯ ಬದಲಾವಣೆ ಗಳಾದುದರಿಂದಾಗಿ ಅವುಗಳಿಗಿಂತ ಭಿನ್ನವಾಗಿರುವ ಪದಗಳು ತದ್ಭವಗಳು (ಎಂದರೆ ಸಂಸ್ಕೃತದಿಂದ ಜನಿಸಿದ ಪದಗಳು) ಎಂಬುದಾಗಿ ಈ ವಿಭಜನೆಯನ್ನು ವರ್ಣಿಸಬಹುದು. ಆದರೆ, ಸಾಮಾನ್ಯವಾಗಿ ಪದಗಳ ಕೊನೆಯ ಭಾಗದಲ್ಲಿ ಮಾತ್ರವೇ ಬದಲಾವಣೆಯಾಗಿದೆಯಾದರೆ, ಅಂತಹ ಪದಗಳನ್ನು ತದ್ಭವಗಳೆಂದು ಹೇಳದೆ ತದ್ಭವಗಳೆಂದು ಹೇಳುವುದೇ ರೂಢಿ (ಶ್ರೀಕಂಠಯ್ಯ ೧೯೫೨:೧೯೬ ನೋಡಿ).
ಉದಾಹರಣೆಗಾಗಿ, ಯಾವ ಬದಲಾವಣೆಯನ್ನೂ ತೋರಿಸದಿರುವ ಸತ್ಯ, ಧರ್ಮ, ಅಧಿಕಾರಿ, ಕಪಿ ಮೊದಲಾದವುಗಳನ್ನು ಮತ್ತು ಕೊನೆಯಲ್ಲಿ ಮಾತ್ರವೇ ಬದಲಾವಣೆಯನ್ನು ತೋರಿಸುವ ಶಾಲೆ (ಶಾಲಾ), ಜನನಿ (ಜನನೀ), ಮನಸ್ಸು (ಮನಸ್) ಮೊದಲಾದವುಗಳನ್ನು ತತ್ಸಮ ಪದಗಳೆಂದೂ ಮತ್ತು ಇತರ ಭಾಗಗಳಲ್ಲಿ ಬದಲಾವಣೆಗಳನ್ನು ತೋರಿಸುವ ಆಸೆ (ಆಶಾ), ನಿದ್ದೆ (ನಿದ್ರಾ), ಹುಣ್ಣಿಮೆ (ಪೂರ್ಣಿಮಾ), ಬತ್ತಿ (ವರ್ತಿ) ಮೊದಲಾದ ಪದಗಳನ್ನು ತದ್ಭವ ಪದಗಳೆಂದೂ ಕರೆಯುವ ಕ್ರಮ ರೂಢಿಯಲ್ಲಿದೆ.
ಇಂತಹ ಪದಗಳ ವಿಭಜನೆ ಇಂಡೋ-ಆರ್ಯನ್ ಎಂಬ ಭಾಷಾಕುಟುಂಬಕ್ಕೆ ಸೇರಿರುವ ಪ್ರಾಕೃತ, ಪಾಲಿ, ಹಿಂದಿ, ಮರಾಠಿ, ಗುಜರಾತಿ ಮೊದಲಾದ ಭಾಷೆಗಳ ವ್ಯಾಕರಣ ಮತ್ತು ಅರ್ಥಕೋಶಗಳ ಮಟ್ಟಿಗೆ ಬಹಳ ಉಪಯುಕ್ತವಾದುದೆಂದು ಹೇಳಲು ಸಾಧ್ಯವಿದೆ. ನಿಜಕ್ಕೂ ಈ ಭಾಷೆಗಳಲ್ಲಿ ತತ್ಸಮ ಮತ್ತು ತದ್ಭವ ಎಂಬ ಎರಡು ರೀತಿಯ ಪದಗಳು ಮಾತ್ರ ಇವೆ. ಇವುಗಳಲ್ಲಿ ತದ್ಭವ ಪದಗಳೆಲ್ಲ ಚಾರಿತ್ರಿಕವಾಗಿ ಸಂಸ್ಕೃತಕ್ಕೂ ಮತ್ತು ಅವಕ್ಕೂ ಒಟ್ಟಿಗೆ ಮೂಲ ಭಾಷೆಯಾ ಗಿರುವ ಇಂಡೋ-ಆರ್ಯನ್ನಿಂದ ಬೆಳೆದುಬಂದವುಗಳು. ಸಂಸ್ಕೃತದ ಪದಗಳಿ ಗಿಂತ ಭಿನ್ನವಾಗಿಲ್ಲದಿರುವ ತತ್ಸಮ ಪದಗಳು ಮಾತ್ರ ನೇರವಾಗಿ ಸಂಸ್ಕೃತದಿಂದ ಎರವಲಾಗಿ ಬಂದವುಗಳು ಎಂಬುದಾಗಿ ಪರಿಗಣಿಸಲು ಸಾಧ್ಯವಿದೆ.
ಆದರೆ ಕನ್ನಡ ಭಾಷೆ ಇದಕ್ಕಿಂತ ತೀರ ಭಿನ್ನವಾಗಿರುವ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿರುವ ಕಾರಣ, ಅದರಲ್ಲಿ ತತ್ಸಮ ಮತ್ತು ತದ್ಭವ ಪದಗಳು ಮಾತ್ರವಲ್ಲದೆ ಮೂಲ ಭಾಷೆಯಿಂದ ಬೆಳೆದು ಬಂದಿರುವ ದ್ರಾವಿಡ ಪದಗಳೂ ಹಲವಿವೆ. ನಿಜಕ್ಕೂ ಕನ್ನಡದಲ್ಲಿ ಕಾಣಿಸುವ ತತ್ಸಮ ಮತ್ತು ತದ್ಭವ ಪದಗಳೆರಡೂ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳೇ. ಅವುಗಳ ನಡುವಿರುವ ವ್ಯತ್ಯಾಸವೇನೆಂದರೆ, ತತ್ಸಮ ಪದಗಳಲ್ಲಿ ಕಡಿಮೆ ಬದಲಾವಣೆಗಳು ನಡೆದಿವೆ ಮತ್ತು ತದ್ಭವ ಪದಗಳಲ್ಲಿ ಜಾಸ್ತಿ ಬದಲಾವಣೆಗಳು ನಡೆದಿವೆ. ಹಾಗಾಗಿ, ಕನ್ನಡದ ವ್ಯಾಕರಣ ಇಲ್ಲವೇ ಅರ್ಥಕೋಶದ ಮಟ್ಟಿಗೆ ತತ್ಸಮ- ತದ್ಭವವೆಂಬ ಎರವಲು ಪದಗಳ ವಿಭಜನೆಯಿಂದ ವಿಶಿಷ್ಟವಾದ ಪ್ರಯೋಜನ ವೇನೂ ಇಲ್ಲ. ಕನ್ನಡದ ಮಟ್ಟಿಗೆ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳ ನ್ನೆಲ್ಲ ಒಂದೇ ವಿಭಾಗದಲ್ಲಿ ಇರಿಸಿ ಪರಿಶೀಲಿಸಿದರೆ ಸಾಕಾಗುತ್ತದೆ.
ಆ.೧.೩ ಬದಲಾವಣೆಗಳಿಗೆ ಕಾರಣಗಳು
ಎರವಲಾಗಿ ಬಂದ ಪದಗಳು ಬೇರೆ ಬೇರೆ ಕಾರಣಗಳಿಗಾಗಿ ಬದಲಾವಣೆಗಳಿಗೆ ಒಳಗಾಗುತ್ತವೆ. ಅವನ್ನು ಎರವಲಾಗಿ ಕೊಟ್ಟ ಭಾಷೆಗೂ ಮತ್ತು ಎರವಲಾಗಿ ಪಡೆದುಕೊಂಡ ಭಾಷೆಗೂ ನಡುವೆ ವರ್ಣಗಳ ಸಂಖ್ಯೆಯ ಮಟ್ಟಿಗೆ ಮತ್ತು ವರ್ಣಗಳು ಪದಗಳಲ್ಲಿ ಬರುವ ಕ್ರಮದ ಮಟ್ಟಿಗೆ ವ್ಯತ್ಯಾಸಗಳಿವೆಯಾದರೆ, ಪದಗಳನ್ನು ಎರವಲಾಗಿ ಪಡೆಯುವ ಭಾಷೆ ತನ್ನ ವರ್ಣವ್ಯವಸ್ಥೆಗೆ ಹೊಂದಿ ಕೊಳ್ಳುವಂತೆ ಅವುಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಉದಾಹರಣೆ ಗಾಗಿ ಕನ್ನಡದಲ್ಲಿ ಮಹಾಪ್ರಾಣಾಕ್ಷರಗಳು ಮೂಲತಃ ಇರಲಿಲ್ಲವಾದುದರಿಂದ, ಸಂಸ್ಕೃತದಿಂದ ಎರವಲಾಗಿ ಬಂದ ಹಲವಾರು ಪದಗಳಲ್ಲಿ ಮಹಾಪ್ರಾಣಕ್ಷರಗಳು ಅಲ್ಪಪ್ರಾಣಾಕ್ಷರಗಳಾಗಿ ಬದಲಾಗಿವೆ. ಉದಾ: ಬೀದಿ (ವೀಥಿ), ಸಂತೆ (ಸಂಸ್ಥಾ), ದಾರೆ (ಧಾರಾ), ಬಂದಿ (ಬಂಧಿ), ಇತ್ಯಾದಿ.
ಇನ್ನೊಂದು ಭಾಷೆಯಿಂದ ಜಾಸ್ತಿ ಪದಗಳನ್ನು ಎರವಲು ಪಡೆದಿರುವ ಭಾಷೆ ಅವುಗಳೊಂದಿಗೆ ಕೆಲವು ಹೊಸ ವರ್ಣಗಳನ್ನೂ ಪಡೆದುಕೊಂಡಿರಲು ಸಾಧ್ಯವಿದೆ, ಮತ್ತು ಅನಂತರ ಆ ಭಾಷೆಯಿಂದ ಎರವಲಾಗಿ ಬರುವ ಪದಗಳಲ್ಲಿ ಅಂತಹ ವರ್ಣಗಳು ಬದಲಾಗದೆ ಉಳಿಯಲು ಸಾಧ್ಯವಿದೆ. ಕನ್ನಡದ ಕೆಲವು ಪ್ರಭೇದ ಗಳಲ್ಲಿ (ಉದಾ: ಬರಹದ ಕನ್ನಡ) ಈ ರೀತಿ ಹೆಚ್ಚು ಹೆಚ್ಚು ಮಹಾ ಪ್ರಾಣಾಕ್ಷರಗಳಿರುವ ಪದಗಳು ಎರವಲಾಗಿ ಬಂದುದರಿಂದಾಗಿ ಅಂತಹ ಅಕ್ಷರ ಗಳು ಆ ಪ್ರಭೇದದ ವರ್ಣಗಳಾಗಿಬಿಟ್ಟಿವೆ. ತತ್ಸಮ ಮತ್ತು ತದ್ಭವಗಳೆಂಬ ಎರಡು ರೀತಿಯ ಎರವಲಾದ ಪದಗಳು ಕನ್ನಡದಲ್ಲಿ ಕಾಣಿಸಲು ಇದೂ ಒಂದು ಕಾರಣ. ತದ್ಭವಗಳು ಬದಲಾವಣೆ ಅವಶ್ಯವೆಂದು ಕಾಣಿಸುವ ಸಮಯದಲ್ಲಿ ಬಂದ ಪದಗಳು, ಮತ್ತು ತತ್ಸಮಗಳು ಆ ಅವಶ್ಯಕತೆ ಇಲ್ಲವಾದಾಗ ಎರವಲಾಗಿ ಬಂದ ಪದಗಳು. ಆದರೆ ಈ ರೀತಿಯ ವೈವಿಧ್ಯತೆ ಇಂಗ್ಲಿಷ್, ಹಿಂದಿ
ಮೊದಲಾದ ಭಾಷೆಗಳಿಂದ ಕನ್ನಡಕ್ಕೆ ಎರವಲಾಗಿ ಬಂದ ಪದಗಳಲ್ಲೂ ಕಾಣಿಸುತ್ತದೆ.
ಭಾಷೆಯ ವರ್ಣಗಳಲ್ಲಿ ಮತ್ತು ಅವುಗಳ ವ್ಯವಸ್ಥೆಯಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳು ನಡೆಯುತ್ತಾ ಇರುತ್ತವೆ. ಈ ಬದಲಾವಣೆಗಳು ಆ ಭಾಷೆಯವೇ ಆಗಿರುವ ಪದಗಳಲ್ಲಿ ಮಾತ್ರವಲ್ಲದೆ, ಆ ಭಾಷೆಗೆ ಬೇರೆ ಭಾಷೆ ಗಳಿಂದ ಎರವಲಾಗಿ ಬಂದಿರುವ ಪದಗಳಲ್ಲೂ ನಡೆಯುತ್ತವೆ. ಎರವಲಾಗಿ ಬಂದಿರುವ ಪದಗಳಲ್ಲಿ ಕಾಣಿಸುವ ಹಲವು ವ್ಯತ್ಯಾಸಗಳಿಗೆ ಇಂತಹ ಚಾರಿತ್ರಿಕ ಬದಲಾವಣೆ ಇನ್ನೊಂದು ಮುಖ್ಯ ಕಾರಣ.
ಉದಾಹರಣೆಗಾಗಿ, ಕನ್ನಡದಲ್ಲಿ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದೆ ಪದಗಳ ಆದಿಯಲ್ಲಿ ಬರುವ ಪಕಾರ ಹಕಾರವಾಗುವ ಬದಲಾವಣೆ ಯೊಂದು ನಡೆಯಿತು. ಈ ಬದಲಾವಣೆಯ ಫಲವನ್ನು ಕನ್ನಡದವೇ ಆದ ಪದಗಳಲ್ಲಿ ಮಾತ್ರವಲ್ಲದೆ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದ ಗಳಲ್ಲೂ ಕಾಣಬಹುದು.
- (೧) ಕನ್ನಡದ ಪದಗಳಲ್ಲಿ ಪಕಾರ ಹಕಾರವಾಗಿರುವುದು
- ಹಳೆಗನ್ನಡ ಹೊಸಗನ್ನಡ
- ಪಾಲ್ ಹಾಲು
- ಪಣ್ ಹಣ್ಣು
- ಪುಲಿ ಹುಲಿ
- ಪೋ ಹೋ(ಗು)
- (೨) ಸಂಸ್ಕೃತದಿಂದ ಎರವಲಾಗಿ ಬಂದ ಪದಗಳಲ್ಲಿ ಪಕಾರ ಹಕಾರ
- ವಾಗಿರುವುದು
- ಸಂಸ್ಕೃತ ಕನ್ನಡ
- ಪಕ್ಷಿ ಹಕ್ಕಿ
- ಪಶು ಹಸು
- ಪರ್ವ ಹಬ್ಬ
- ಪಿಷ್ಟ ಹಿಟ್ಟು
ಇದೇ ರೀತಿಯಲ್ಲಿ ಗಿಡ್ಡಸ್ವರದ ಅನಂತರ ಬರುವ ರಕಾರವು, ಅದರ ಅನಂತರ ವ್ಯಂಜನವೊಂದು ಬಂದಿದ್ದಾಗ, ಆ ವ್ಯಂಜನದೊಂದಿಗೆ ಸೇರಿ ಒತ್ತಕ್ಷರ ವಾಗುವ ಬದಲಾವಣೆ ಕನ್ನಡದವೇ ಆದ ಪದಗಳಲ್ಲಿ ಮಾತ್ರವಲ್ಲದೆ ಸಂಸ್ಕೃತ ದಿಂದ ಎರವಲಾಗಿ ಬಂದಿರುವ ಪದಗಳಲ್ಲೂ ನಡೆದಿದೆ.
| ಹಳೆಗನ್ನಡ | ಹೊಸಗನ್ನಡ | ಸಂಸ್ಕೃತ | ಕನ್ನಡ |
|---|---|---|---|
| ಸೊರ್ಕು | ಸೊಕ್ಕು | ವರ್ಣ | ಬಣ್ಣ |
| ಪರ್ಬು | ಹಬ್ಬು | ವರ್ತಿ | ಬತ್ತಿ |
| ಪೆರ್ಮೆ | ಹೆಮ್ಮೆ | ಕರ್ತರಿ | ಕತ್ತರಿ |
| ಬಿರ್ಚು | ಬಿಚ್ಚು |
ಭಾಷೆಗಳಲ್ಲಿ ನಡೆಯುವ ಇಂತಹ ಚಾರಿತ್ರಿಕ ಬದಲಾವಣೆಗಳಲ್ಲಿ ಪ್ರತಿ ಯೊಂದಕ್ಕೂ ಸಾಮಾನ್ಯವಾಗಿ ಒಂದು ಅವಧಿಯಿರುತ್ತದೆ. ಈ ಅವಧಿ ದಾಟಿದ ಮೇಲೆ ಹೊಸದಾಗಿ ಭಾಷೆಯೊಳಕ್ಕೆ ಎರವಲಾಗಿ ಬರುವ ಪದಗಳು ಆ ಬದಲಾವಣೆಗೆ ಒಳಗಾಗುವುದಿಲ್ಲ. ಉದಾಹರಣೆಗಾಗಿ ಕನ್ನಡದಲ್ಲಿ ಪಕಾರ ಹಕಾರವಾಗುವ ಬದಲಾವಣೆ ಹದಿನಾಲ್ಕು-ಹದಿನೈದನೇ ಶತಮಾನದ ಹೊತ್ತಿಗೆ ಪೂರ್ಣಗೊಂಡಿರಬೇಕೆಂದು ತೋರುತ್ತದೆ. ಅದರ ಅನಂತರ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಪಕಾರ ಹಾಗೆಯೇ ಉಳಿದಿರುವುದನ್ನು ಪಕ್ಷ, ಪಟ್ಟಿ, ಪತ್ನಿ, ಪದಾರ್ಥ, ಪುಸ್ತಕ, ಪೂರ್ವ ಮೊದಲಾದ ಪದಗಳಲ್ಲಿ ಕಾಣ ಬಹುದು. ತತ್ಸಮ ಮತ್ತು ತದ್ಭವ ಪದಗಳ ನಡುವಿರುವ ವ್ಯತ್ಯಾಸಕ್ಕೆ ಈ ರೀತಿ ಬೇರೆ ಬೇರೆ ಕಾಲಗಳಲ್ಲಿ ಸಂಸ್ಕೃತದಿಂದ ಪದಗಳು ಎರವಲಾಗಿ ಬಂದಿರುವುದು ಇನ್ನೊಂದು ಕಾರಣ.
ಭಾಷೆಯೊಂದನ್ನು ಬಳಸುವ ಜನರು ಅದಕ್ಕೆ ಎರವಲಾಗಿ ಬರುವ ಪದ ಗಳನ್ನು ಬೇರೆ ಬೇರೆ ವಿಧಾನಗಳ ಮೂಲಕ ಪಡೆಯುತ್ತಾರೆಂಬುದು ಆ ಪದಗಳಲ್ಲಿ ಕಾಣಿಸುವ (ಇಲ್ಲವೇ ಕಾಣಿಸದಿರುವ) ಬದಲಾವಣೆಗಳಿಗೆ ಇನ್ನೊಂದು ಕಾರಣ. ಉದಾಹರಣೆಗಾಗಿ, ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ಬಳಸುವ ಜನ ರಲ್ಲಿ ಕೆಲವರು ಸಂಸ್ಕೃತ ಭಾಷೆಯಲ್ಲಿ ಚೆನ್ನಾಗಿ ಪಳಗಿದವರಿರಬಹುದು ಮತ್ತು ಬೇರೆ ಕೆಲವರು ಸಂಸ್ಕೃತ ಭಾಷೆಯ ಅಲ್ಪ ಸ್ವಲ್ಪ ಜ್ಞಾನವಿರುವವರಿರಬಹುದು. ಇನ್ನುಳಿದವರಿಗೆ ಸಂಸ್ಕೃತದ ಜ್ಞಾನ ಸ್ವಲ್ಪವೂ ಇಲ್ಲದಿರಬಹುದು. ಸಂಸ್ಕೃತ ಬಲ್ಲವರು ಆ ಭಾಷೆಯ ಪದಗಳನ್ನು ಅದರಲ್ಲಿರುವಂತೆಯೇ ಬಳಸಬಲ್ಲರಾದರೆ, ಉಳಿದವರಿಗೆ ಇದು ಸಾಧ್ಯವಾಗದು.
ಎರವಲಾಗಿ ಬಂದ ಪದಗಳು ಯಾವ ರೀತಿಯಲ್ಲಿ ಮತ್ತು ಯಾವ ರೂಪದಲ್ಲಿ ಬಳಕೆಗೆ ಬರುತ್ತವೆ ಎಂಬುದು ಹೀಗೆ ಆ ಭಾಷೆಯನ್ನಾಡುವವರಿಗೆ ಎರವಲಾಗಿ ಪದಗಳನ್ನು ಕೊಡುವ ಭಾಷೆಯ ಜ್ಞಾನ ಹೇಗಿದೆ ಎಂಬುದೂ ಆಧಾರವಾಗಿರುತ್ತದೆ. ಇದು ಸಂಸ್ಕೃತ ಮಾತ್ರವಲ್ಲದೆ ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಿಗೂ ಅನ್ವಯಿಸುವಂತಹ ಸಂಗತಿ.
ಆ.೧.೪ ಪದಗಳ ವರ್ಗಭೇದ
ಭಾಷೆಯೊಂದಕ್ಕೆ ಎರವಲಾಗಿ ಬರುವ ಪದಗಳಲ್ಲಿ ಹೆಚ್ಚಿನವೂ ಪ್ರಾಣಿ, ವಸ್ತು, ವಿಷಯ ಮೊದಲಾದುವನ್ನು ಹೆಸರಿಸುವಂತಹ ರೂಢನಾಮಗಳಾಗಿರುತ್ತವೆ. ಕ್ರಿಯಾಪದ ಇಲ್ಲವೇ ಗುಣಪದಗಳಂತಹ ಬೇರೆ ಪದವರ್ಗಗಳಿಗೆ ಸೇರಿದ ಪದ ಗಳು ಈ ರೀತಿ ನಾಮಪದಗಳ ಹಾಗೆ ನೇರವಾಗಿ ಭಾಷೆಯೊಂದಕ್ಕೆ ಎರವಲಾಗಿ ಬರುವುದು ಕಡಿಮೆ. ಬರುವುದಿದ್ದರೂ ಇವು ನಾಮಪದಗಳ ಅಂಗಗಳಾಗಿ ಬಂದು ಅನಂತರ ಬೇರೆ ಪದಗಳೊಂದಿಗೆ ಬರುವಾಗ ಅವುಗಳಿಂದ ಬೇರ್ಪಟ್ಟು ಕ್ರಿಯಾಪದ ಇಲ್ಲವೇ ಗುಣಪದಗಳಾಗಿ ರೂಢಿಗೆ ಬರುವ ಸಾಧ್ಯತೆಯಿದೆ.
ಇದೇ ರೀತಿಯಲ್ಲಿ ಪದಗಳ ಅಂಗಗಳಾಗಿ ಬರುವ ಪ್ರತ್ಯಯಗಳೂ ನೇರವಾಗಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಎರವಲಾಗಿ ಬರುವುದಿಲ್ಲ. ಒಂದು ಪ್ರತ್ಯಯವನ್ನೊಳಗೊಂಡಿರುವ ಹಲವಾರು ಪದಗಳು ಎರವಲಾಗಿ ಬಂದಲ್ಲಿ, ಅವುಗಳಲ್ಲಿರುವ ಪ್ರತ್ಯಯ ಕಾಲಕ್ರಮೇಣ ಆ ಪದಗಳಿಂದ ಬೇರ್ಪಟ್ಟು ಭಾಷೆ ಯವೇ ಆದ ಬೇರೆ ಪದಗಳೊಂದಿಗೆ ಸೇರುವ ಮೂಲಕ ಆ ಭಾಷೆಯ ಪ್ರತ್ಯಯವೆಂದೆನಿಸಬಲ್ಲುದು.
ಉದಾಹರಣೆಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ನಟ-ನಟಿ, ಲೇಖಕ-ಲೇಖಕಿ, ಶಿಕ್ಷಕ-ಶಿಕ್ಷಕಿ ಮೊದಲಾದ ಪದಯುಗಗಳಲ್ಲಿ ಕಾಣಿಸುವ ಅ ಮತ್ತು ಇ ಎಂಬ ಲಿಂಗಭೇದವನ್ನು ಸೂಚಿಸುವ ಪ್ರತ್ಯಯಗಳ ಮಾದರಿಯಲ್ಲಿಯೇ ಕನ್ನಡದ ಹುಡುಗ-ಹುಡುಗಿ, ಕುರುಡ-ಕುರುಡಿ, ಮುದುಕ-ಮುದುಕಿ ಮೊದಲಾದವುಗಳಲ್ಲಿ ಕಾಣಿಸುವ ಪ್ರತ್ಯಯಗಳು ತಯಾರಾಗಿರುವಂತೆ ತೋರು ತ್ತದೆ. ಇದೇ ರೀತಿಯಲ್ಲಿ ಸಂಸ್ಕೃತದ ಧನ-ಧನಿಕ, ರಸ-ರಸಿಕ, ತರ್ಕ- ತಾರ್ಕಿಕ ಎಂಬಂತಹ ಪದಯುಗಗಳಲ್ಲಿ ಕಾಣಿಸುವ ಇಕ ಎಂಬ ಪ್ರತ್ಯಯವನ್ನನು ಸರಿಸಿ, ಕನ್ನಡದ ಗಾಣ-ಗಾಣಿಗ, ಹೆಣ್ಣು-ಹೆಣ್ಣಿಗ, ಸಾಲಿ-ಸಾಲಿಗ ಎಂಬಂತಹ ಪದಯುಗಗಳಲ್ಲಿ ಕಾಣಿಸುವ ಇಗ ಎಂಬ ಪ್ರತ್ಯಯ ತಯಾರಾಗಿರುವ ಹಾಗೆ ಕಾಣಿಸುತ್ತದೆ.
ಆದರೆ, ಸಾಮಾನ್ಯವಾಗಿ ಎರವಲಾಗಿ ಬಂದ ಇಂತಹ ಪ್ರತ್ಯಯವಿರುವ ಪದಗಳೆಲ್ಲ ಇತರ ಒಳರಚನೆಯಿಲ್ಲದ ಪದಗಳ ಹಾಗೆ ಬಳಕೆಯಾಗುವುದೇ ಜಾಸ್ತಿ.
ಆ.೨ ಎರವಲಾಗಿ ಬಂದ ಪದಗಳ ಒಳರಚನೆ
ಪದವೊಂದರ ಒಳರಚನೆ ಎಂತಹದು ಎಂಬುದನ್ನು ನಿರ್ಧರಿಸುವಲ್ಲಿ ಸಾಮಾನ್ಯ ವಾಗಿ ಅದನ್ನು ತಯಾರಿಸುವುದಕ್ಕಾಗಿ ಎಂತಹ ರಚನೆಯನ್ನು ಬಳಸಿಕೊಳ್ಳಲಾಗಿತ್ತು ಎಂಬ ಚಾರಿತ್ರಿಕ ಅಂಶಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡಬೇಕಾಗುತ್ತದೆ ಎಂಬುದನ್ನು ನಾವು ಮೇಲೆ ಮೂರನೆಯ ಅಧ್ಯಾಯದಲ್ಲಿ ನೋಡಿರುವೆವು. ಕ್ರಿಯಾಪದ ಮತ್ತು ಗುಣಪದಗಳ ಒಳರಚನೆಗಿಂತಲೂ ನಾಮಪದಗಳ ಒಳ ರಚನೆಯಲ್ಲಿ ಈ ವಿಷಯ ಎದ್ದು ಕಾಣಿಸುತ್ತದೆ. ಹೆಸರಿಸುವುದು ಮತ್ತು ವರ್ಣಿಸು
ವುದು ಎಂಬ ಎರಡು ರೀತಿಯ ಬಳಕೆಗಳಿಗೆ ನಾಮಪದಗಳು ಮಾತ್ರ ಒಳಗಾಗು ತ್ತವೆಯೆಂಬುದೇ ಇದಕ್ಕೆ ಮುಖ್ಯ ಕಾರಣ.
೮.೨.೧ ಒಳರಚನೆಯಲ್ಲಿ ವ್ಯತ್ಯಾಸ
ಆದರೆ ಎರವಲಾಗಿ ಬಂದ ಪದಗಳಿಗೂ ಮತ್ತು ಭಾಷೆಯಲ್ಲಿಯೇ ಬೆಳೆದು ಬಂದ ಪದಗಳಿಗೂ ನಡುವೆ ಈ ವಿಷಯದಲ್ಲಿ ಒಂದು ಮುಖ್ಯವಾದ ವ್ಯತ್ಯಾಸವಿದೆ. ಮೇಲೆಯೇ ಸೂಚಿಸಿರುವಂತೆ, ಎರವಲಾಗಿ ಬಂದ ಪದಗಳಿಗೆ ಅವುಗಳನ್ನು ಎರವಲಾಗಿ ಕೊಟ್ಟಿರುವ ಭಾಷೆಯಲ್ಲಿ ಒಳರಚನೆಯಿದೆಯಾದರೂ ಎರವಲಾಗಿ ಪಡೆದಿರುವ ಭಾಷೆಯಲ್ಲಿ ಅವು ಒಳರಚನೆಯಿಲ್ಲದ ಪದಗಳ ಹಾಗೆ ಬಳಕೆಯಾಗು ವುದೇ ಜಾಸ್ತಿ. ಉದಾಹರಣೆಗಾಗಿ, ರುಜುವಾತು ಎಂಬ ಪದ ಪರ್ಶಿಯನ್ ಭಾಷೆಯಲ್ಲಿ ರುಜು ಎಂಬ ಪದಕ್ಕೆ ವಾತ್ ಎಂಬ ಬಹುವಚನ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆಯಾದರೂ, ಕನ್ನಡದಲ್ಲಿ ಅದು ಒಳರಚನೆಯಿಲ್ಲದ ಪದದ ಹಾಗೆಯೇ ಬಳಕೆಯಾಗುತ್ತದೆ. ಆ ಪದಕ್ಕೆ ಬಹು ವಚನಾರ್ಥವೂ ಕನ್ನಡದಲ್ಲಿಲ್ಲ.
ಎರವಲಾಗಿ ಕೊಡುವ ಭಾಷೆಯಲ್ಲಿ ಒಳರಚನೆಯಿರುವ ಹಲವಾರು ಪದ ಗಳು ಈ ರೀತಿ ಇನ್ನೊಂದು ಭಾಷೆಗೆ ಎರವಲಾಗಿ ಬಂದಿವೆಯಾದರೆ, ಅಂತಹ ಪದಗಳ ನಡುವಿರುವ ಸಂಬಂಧವನ್ನು ಪರಿಶೀಲಿಸುವುದರ ಮೂಲಕ ಅವಕ್ಕೆ ಒಳರಚನೆಯನ್ನು ಎರವಲು ಪಡೆದ ಭಾಷೆಯಲ್ಲೂ ಕಲ್ಪಿಸಿಕೊಳ್ಳುವ ಅವಶ್ಯಕತೆ ಕಾಣಿಸಬಹುದು. ಉದಾಹರಣೆಗಾಗಿ, ಇಂಗ್ಲಿಷ್ನಿಂದ ಆಕ್ಟರ್ (ಆಕ್ಟ್ ಮಾಡು ವವನು), ಡಾನ್ಸರ್ (ಡಾನ್ಸ್ ಮಾಡುವವನು), ಶೇವರ್ (ಶೇವ್ ಮಾಡುವ ಸಾಧನ), ಮೊದಲಾದ ಹಲಕೆಲವು ಪದಗಳು ಕನ್ನಡಕ್ಕೆ ಎರವಲಾಗಿ ಬಂದಿದ್ದು, ಇವನ್ನು ಆಕ್ಟ್, ಡಾನ್ಸ್, ಶೇವ್, ಮೊದಲಾದ ಆಖ್ಯಾತ ಪದಗಳಿಗೆ ಅರ್ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ತಯಾರಾದವುಗಳೆಂದು ಹೇಳಲು ಸಾಧ್ಯ ವಿದೆ.
ಆದರೆ ಕನ್ನಡದಲ್ಲಿ ಆಕ್ಟ್, ಡಾನ್ಸ್, ಶೇವ್ ಮೊದಲಾದವುಗಳು ಕ್ರಿಯಾಪದ ಗಳಾಗಿ ಬಳಕೆಯಲ್ಲಿಲ್ಲವಾದ ಕಾರಣ (ಅವು ಮಾಡು ಎಂಬ ಕ್ರಿಯಾಪದ ದೊಂದಿಗೆ ‘ಆಖ್ಯಾತ’ಪದಗಳಾಗಿ ಮಾತ್ರ ಬಳಕೆಯಾಗುವುವಾದ ಕಾರಣ) ಇಂಗ್ಲೀಷ್ನಲ್ಲಿರುವಂತೆ ಕನ್ನಡದಲ್ಲೂ ಅವುಗಳ ಒಳರಚನೆಯಲ್ಲಿ ಕ್ರಿಯಾಪದ ಗಳಿವೆಯೆಂದು ಹೇಳಲು ಸಾಧ್ಯವಾಗದು. ಎಂದರೆ, ಚಾರಿತ್ರಿಕವಾಗಿ ಈ ಪದಗಳ ತಯಾರಿಕೆಯಲ್ಲಿ ಎಂತಹ ರಚನೆಯನ್ನು ಬಳಸಿಕೊಳ್ಳಲಾಗಿತ್ತು ಎಂಬುದಕ್ಕಿಂತಲೂ ಸದ್ಯಕ್ಕೆ ಈ ಪದಗಳಲ್ಲಿ ಎಂತಹ ರಚನೆ ಕಾಣಿಸುತ್ತಿದೆ ಎಂಬುದೇ ಇಲ್ಲಿ ಮುಖ್ಯ ವಾದ ಸಂಗತಿ.
ಇದೇ ರೀತಿಯಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳ ಒಳರಚನೆ ಎಂತಹದು ಎಂಬುದನ್ನು ತಿಳಿಯಲು ಅವು ಸಂಸ್ಕೃತ
ದಿಂದಲೇನೇ ಎರವಲಾಗಿ ಬಂದಿರುವ ಬೇರೆ ಪದಗಳೊಂದಿಗೆ ಸಂಬಂಧಗಳನ್ನು ತೋರಿಸುತ್ತಿವೆಯೇ, ಮತ್ತು ಹಾಗೆ ತೋರಿಸುತ್ತಿವೆಯಾದರೆ ಆ ಸಂಬಂಧಗಳು ಎಂತಹವು ಎಂಬುದೇ ಆಧಾರವಾಗಬಲ್ಲುದಲ್ಲದೆ, ಅಂತಹ ಪದಗಳನ್ನು ಎರವಲಾಗಿ ಕೊಟ್ಟಿರುವ ಸಂಸ್ಕೃತ ಭಾಷೆಯಲ್ಲಿ ಅವಕ್ಕೆ ಎಂತಹ ಒಳರಚನೆ ಯಿದೆ ಎಂಬುದು ಆಧಾರವಾಗಲಾರದು.
ಉದಾಹರಣೆಗಾಗಿ, ಕೃಷ್ಣಸರ್ಪ ಎಂಬ ಪದಕ್ಕೆ ಸಂಸ್ಕೃತದಲ್ಲಿ ಒಂದೇ ವಿಭಕ್ತಿಯಿರುವ ಎರಡು ನಾಮಪದಗಳನ್ನು (ಕೃಷ್ಣಃ ಮತ್ತು ಸರ್ಪಃ ಎಂಬವು ಗಳನ್ನು) ಕರ್ಮಧಾರಯವೆಂಬ ಸಮಾಸದ ಮೂಲಕ ಸೇರಿಸಿ ತಯಾರಿಸಿರು ವಂತಹ ಜೋಡುಪದ ಎಂಬುದಾಗಿ ಒಳರಚನೆಯನ್ನು ಹೇಳಲು ಸಾಧ್ಯವಿದೆ. ಆದರೆ ಕನ್ನಡದಲ್ಲಿ ಈ ಪದಕ್ಕೆ ಕೊಡಬಹುದಾದ ಒಳರಚನೆ ಇದಕ್ಕಿಂತ ತೀರ ಭಿನ್ನವಾದುದು. ಇದಕ್ಕೆ ಕಾರಣವೇನೆಂದರೆ, ಕನ್ನಡದಲ್ಲಿ ‘ಕಪ್ಪು’ ಎಂಬರ್ಥದ ಕೃಷ್ಣ ಎಂಬ ಪದ ಗುಣವಾಚಕವಾಗಿ ಬಳಕೆಯಲ್ಲಿದೆಯಲ್ಲದೆ ನಾಮಪದವಾಗಿ ಬಳಕೆಯಲ್ಲಿಲ್ಲ. ಸಂಸ್ಕೃತದ ಹಾಗೆ ಕನ್ನಡದಲ್ಲಿ ಅದಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಾಗದು. ಹಾಗಾಗಿ, ಕನ್ನಡದ ಮಟ್ಟಿಗೆ ಹೇಳುವುದಾದರೆ, ಕೃಷ್ಣಸರ್ಪ ಎಂಬ ಜೋಡುಪದದಲ್ಲಿ ಕೃಷ್ಣ ಎಂಬ ಒಂದು ಗುಣಪದವೂ ಮತ್ತು ಸರ್ಪ ಎಂಬ ಒಂದು ನಾಮಪದವೂ ಸೇರಿಕೊಂಡಿವೆ.
ಕನ್ನಡದಲ್ಲಿ ಈ ರೀತಿ ಇಂಗ್ಲಿಷ್, ಸಂಸ್ಕೃತ, ಹಿಂದಿ, ಮರಾಠಿ ಮೊದಲಾದ ಹಲವಾರು ಭಾಷೆಗಳಿಂದ ಎರವಲಾಗಿ ಬಂದಿರುವ ಪದಗಳು ಬಳಕೆಯಲ್ಲಿದ್ದು ಅವೆಲ್ಲವೂ ಎರವಲಾಗಿ ಬಂದ ಮೇಲೆ ಕನ್ನಡದವೇ ಆಗಿಬಿಟ್ಟಿವೆ. ಹಾಗಾಗಿ ಅವುಗಳ ಒಳರಚನೆಯನ್ನು ವರ್ಣಿಸುವಾಗ ಕನ್ನಡದವೇ ಆದ ಪದರಚನೆಯ ನಿಯಮಗಳನ್ನು ಅನುಸರಿಸಬೇಕಲ್ಲದೆ ಈ ಪದಗಳನ್ನು ಎರವಲಾಗಿ ಕೊಟ್ಟಿರುವ ಬೇರೆ ಬೇರೆ ಭಾಷೆಗಳಲ್ಲಿ ಬಳಕೆಯಲ್ಲಿರುವ ಪದರಚನೆಯ ನಿಯಮಗಳನ್ನು ಅನುಸರಿಸುವುದು ಸರಿಯಲ್ಲ. ಆದರೆ ಇಂತಹ ಎರವಲಾಗಿ ಬಂದ ಪದಗಳಿಂದಾಗಿ ಕನ್ನಡದ ಪದರಚನೆಯ ನಿಯಮಗಳು ಬೇರೆ ಬೇರೆ ರೀತಿಯಲ್ಲಿ ಬದಲಾಗಿರು ವುದನ್ನು ಮತ್ತು ಅವುಗಳೊಂದಿಗೆ ಬೇರೆ ಕೆಲವು ಹೊಸ ಪದರಚನೆಯ ನಿಯಮಗಳು ಸೇರಿಕೊಂಡಿರುವುದನ್ನು ಗಮನಿಸುವುದು ಅವಶ್ಯ.
ಆ.೨.೨ ಎರವಲು ಕೊಟ್ಟಿರುವ ಭಾಷೆಯ ನಿಯಮಗಳು
ಎರವಲಾಗಿ ಬಂದಿರುವ ಪದಗಳ ಮೂಲಕ ಭಾಷೆಯೊಂದರಲ್ಲಿ ಈ ರೀತಿ ಹೊಸತಾದ ಪದರಚನೆಯ ನಿಯಮಗಳು ಸೇರಿಕೊಂಡಿವೆಯಾದರೆ, ಅವುಗಳ ಸ್ವರೂಪವೇನು ಎಂಬುದನ್ನು ತಿಳಿಯಲು ಅಂತಹ ಪದಗಳ ಒಳರಚನೆ ಎರವಲು ಕೊಟ್ಟಿರುವ ಭಾಷೆಯಲ್ಲಿ ಹೇಗಿತ್ತು ಎಂಬುದನ್ನು ತಿಳಿಯುವುದು ಸ್ವಲ್ಪ ಮಟ್ಟಿಗೆ ಸಹಾಯಕವಾಗಬಲ್ಲುದು.
ಉದಾಹರಣೆಗಾಗಿ ಸಂಸ್ಕೃತದಿಂದ ಎರವಲಾಗಿ ಬಂದಿರುವ ಹಲವು ಪದಗಳಲ್ಲಿ ಅನೆ ಮತ್ತು ಅಣೆ ಎಂಬ ಎರಡು ಬೇರೆ ಬೇರೆ ರೂಪಗಳಲ್ಲಿರುವ ಪ್ರತ್ಯಯವೊಂದನ್ನು ಕಾಣಬಹುದು. (ಉದಾ: ಪ್ರಾರ್ಥನೆ-ಪ್ರಕಟಣೆ, ವರ್ಣನೆ- ಸ್ಮರಣೆ, ಕಲ್ಪನೆ-ರಕ್ಷಣೆ, ಆಲೋಚನೆ-ಆಕರ್ಷಣೆ, ಇತ್ಯಾದಿ). ಈ ಎರಡು ರೂಪಗಳ ಹಿಂದಿರುವ ನಿಯಮವೇನು ಎಂಬುದನ್ನು ತಿಳಿಯುವಲ್ಲಿ ಸಂಸ್ಕೃತದ ವೈಯಾಕರಣಿಗಳು ಈ ಪದಗಳ ಒಳರಚನೆಯನ್ನು ಹೇಗೆ ವಿವರಿಸಿದ್ದಾರೆ ಎಂಬುದನ್ನು ತಿಳಿದುಕೊಂಡಲ್ಲಿ ಸುಲಭವಾದೀತು (ಕೆಳಗೆ ೮.೩.೬ ನೋಡಿ).
ಇದೇ ರೀತಿಯಲ್ಲಿ ಸಂಸ್ಕೃತದಿಂದಲೇನೇ ಎರವಲಾಗಿ ಬಂದಿರುವ ರಾಜ್ಯ, ಶೌರ್ಯ, ವೈಚಿತ್ರ್ಯ ಮೊದಲಾದ ಬೇರೆ ಕೆಲವು ಪದಗಳಲ್ಲಿ ಯ ಎಂಬ ಒಂದು ಪ್ರತ್ಯಯದ ಬಳಕೆಯನ್ನು ಕಾಣಬಹುದು. ಈ ಪ್ರತ್ಯಯ ಸೇರಿದಾಗ ಕೆಲವು ಪದಗಳ ಸ್ವರದಲ್ಲಿ (ಉದಾ: ಶೂರ-ಶೌರ್ಯ, ಮಲಿನ-ಮಾಲಿನ್ಯ, ಇತ್ಯಾದಿ) ಬದಲಾವಣೆಯಾಗುತ್ತದೆ, ಆದರೆ ಬೇರೆ ಕೆಲವು ಪದಗಳ ಸ್ವರದಲ್ಲಿ (ಉದಾ: ರಾಜ-ರಾಜ್ಯ, ಪದ-ಪದ್ಯ, ಇತ್ಯಾದಿ) ಯಾವ ಬದಲಾವಣೆಯೂ ಆಗುವುದಿಲ್ಲ. ಇಕ ಎಂಬ ಪ್ರತ್ಯಯದ ಬಳಕೆಯಲ್ಲೂ ಇದೇ ಪರಿಸ್ಥಿತಿಯಿದೆ (ಉದಾ: ನಿಸರ್ಗ- ನೈಸರ್ಗಿಕ, ಮಂತ್ರ-ಮಾಂತ್ರಿಕ, ಲೋಕ-ಲೌಕಿಕ, ಇತ್ಯಾದಿ). ಈ ಬದಲಾವಣೆ ಗಳ ಹಿಂದಿರುವ ಪದರಚನೆಯ ನಿಯಮವೆಂತಹದು ಎಂಬುದನ್ನು ತಿಳಿಯುವಲ್ಲಿ ಸಂಸ್ಕೃತ ವ್ಯಾಕರಣಗಳ ಪರಿಶೀಲನೆ ಸಹಾಯಕವಾಗಬಲ್ಲುದು.
ಆ.೨.೩ ಪದಗಳ ವಿಭಜನೆ
ಎರವಲಾಗಿ ಬಂದಿರುವ ಪದಗಳ ಒಳರಚನೆ ಎಂತಹದು ಎಂಬುದನ್ನು ಪರಿ ಶೀಲಿಸುವ ಮೊದಲು ಅವನ್ನು ಯಾವ ಯಾವ ಭಾಷೆಗಳಿಂದ ಎರವಲಾಗಿ ಪಡೆ ಯಲಾಗಿದೆ ಎಂಬ ವಿಷಯದ ಆಧಾರದ ಮೇಲೆ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿಕೊಳ್ಳುವುದು ಅವಶ್ಯ. ಯಾಕೆಂದರೆ, ಒಂದರೊಡನೊಂದು ಸಂಬಂಧ ವನ್ನು ತೋರಿಸುವ ಪದಗಳೆಲ್ಲವೂ ಒಂದೇ ಭಾಷೆಯಿಂದ ಎರವಲಾಗಿ ಬಂದವು ಗಳಾಗಿರುವುದೇ ಜಾಸ್ತಿ.
ಉದಾಹರಣೆಗಾಗಿ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳು ಅವುಗಳೊಳಗೇನೇ ಒಂದರೊಡನೊಂದು ಸಂಬಂಧಿಸಿರಲು ಸಾಧ್ಯವಿದೆಯಲ್ಲದೆ, ಇಂಗ್ಲಿಷ್ ಇಲ್ಲವೇ ಪರ್ಶಿಯನ್ನಿಂದ ಎರವಲಾಗಿ ಬಂದಿರುವ ಪದಗಳೊಂದಿಗೆ ಸಂಬಂಧವನ್ನು ತೋರಿಸುವುದು ಬಹಳ ಅಪರೂಪವೆಂದೇ ಹೇಳಬಹುದು. ಪದಗಳ ಒಳರಚನೆಯನ್ನು ಇಂತಹ ಸಂಬಂಧಗಳ ಆಧಾರದ ಮೇಲೆ ಸಾಧಿಸ ಬೇಕಾಗಿದೆಯಾದ ಕಾರಣ, ಎರವಲು ಕೊಟ್ಟ ಭಾಷೆಗಳ ಆಧಾರದ ಮೇಲೆ ಅವನ್ನು ವಿಂಗಡಿಸಿಕೊಳ್ಳುವುದರಿಂದ ಅವುಗಳನ್ನು ವರ್ಣಿಸುವ ಕೆಲಸ ಹೆಚ್ಚು ಸುಲಭವಾಗಬಲ್ಲುದು.
ಕೆಳಗಿನ ಕೆಲವು ವಿಭಾಗಗಳಲ್ಲಿ (೮.೪-೬ರಲ್ಲಿ) ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಿಗೆ ಕನ್ನಡದಲ್ಲಿ ಎಂತಹ ಒಳರಚನೆಯಿದೆ ಎಂಬುದನ್ನು ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ. ಇದಕ್ಕೆ ಮೊದಲು ಕನ್ನಡದಲ್ಲಿ ಈ ಪದಗಳಿ ಗಿರುವ ಒಳರಚನೆ ಅವಕ್ಕೇನೇ ಸಂಸ್ಕೃತದಲ್ಲಿರುವ ಒಳರಚನೆಗಿಂತ ಯಾಕೆ ಭಿನ್ನ ವಾಗಿದೆ ಎಂಬುದನ್ನು (೮.೩ರಲ್ಲಿ) ಸ್ವಲ್ಪ ವಿವರವಾಗಿ ಪರಿಶೀಲಿಸಲಾಗಿದೆ.
ಇಂಗ್ಲಿಷ್, ಹಿಂದಿ, ಮರಾಠಿ, ಪರ್ಶಿಯನ್, ತಮಿಳು ಮೊದಲಾದ ಬೇರೆ ಹಲವು ಭಾಷೆಗಳಿಂದಲೂ ಕನ್ನಡಕ್ಕೆ ಪದಗಳು ಎರವಲಾಗಿ ಬದಿದ್ದು, ಇವನ್ನೂ ಇದೇ ರೀತಿಯಲ್ಲಿ ಬೇರೆ ಬೇರಾಗಿ ಪರಿಶೀಲಿಸುವ ಅವಶ್ಯಕತೆಯಿದೆ. ಆದರೆ ಅಂತಹ ಪ್ರಯತ್ನವನ್ನು ಈ ಪುಸ್ತಕಕ್ಕಾಗಿ ನಡೆಸಲು ಸಾಧ್ಯವಾಗಲಿಲ್ಲ.
೮.೩ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳು
ಕನ್ನಡದಲ್ಲಿ ಸಂಸ್ಕೃತದಿಂದ ಎರವಲಾಗಿ ಬಂದ ಪದಗಳು ಹಲವಿವೆ. ಇವುಗಳ ಸಂಖ್ಯೆ ಕನ್ನಡದ ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರಾಗಿದೆ. ಶಾಸ್ತ್ರೀಯ ಬರಹಗಳಲ್ಲಿ ಇಂತಹ ಪದಗಳು ಜಾಸ್ತಿ ಇವೆ ಆದರೆ ಬೇರೆ ರೀತಿಯ ಬರಹ ಗಳಲ್ಲಿ ಕಡಿಮೆ ಇವೆ. ಎರವಲಾಗಿ ಬಂದ ಈ ಪದಗಳ ಸ್ವರೂಪವೂ ಪ್ರಭೇದ ದಿಂದ ಪ್ರಭೇದಕ್ಕೆ ಭಿನ್ನ ಭಿನ್ನವಾಗಿದೆ. ಕೆಲವು ಪ್ರಭೇದಗಳಲ್ಲಿ ಇವು ಮೂಲ ಸಂಸ್ಕೃತ ರೂಪದಲ್ಲೇ ಉಳಿದಿವೆಯಾದರೆ, ಇನ್ನು ಕೆಲವು ಪ್ರಭೇದಗಳಲ್ಲಿ ಹಲವಾರು ಬದಲಾವಣೆಗಳಿಗೆ ಒಳಗಾಗುವುದರ ಮೂಲಕ ಮೂಲ ಸಂಸ್ಕೃತ ಪದಗಳಿಗಿಂತ ತೀರ ಭಿನ್ನವಾಗಿವೆ.
ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳೆಲ್ಲವೂ ಸಂಸ್ಕೃತ ದಲ್ಲಿ ಒಳರಚನೆಯುಳ್ಳವುಗಳೇ ಆಗಿರುತ್ತವೆಯೆಂದು ಹೇಳಬಹುದು. ಅವೆಲ್ಲಕ್ಕೂ ಮೂಲದಲ್ಲಿ ಬೇರೆ ಬೇರೆ ಕ್ರಿಯಾಧಾತುಗಳೇ ಆಧಾರವಾಗಿದ್ದು, ಆ ಧಾತುಗಳಿಗೆ ಬೇರೆ ಬೇರೆ ಪ್ರತ್ಯಯಗಳನ್ನು ಇಲ್ಲವೇ ಇತರ ಧಾತುಗಳನ್ನು ಸೇರಿಸುವುದರ ಮೂಲಕ ಸಂಸ್ಕೃತದಲ್ಲಿ ಈ ಪದಗಳನ್ನು ರಚಿಸಲಾಗಿದೆ.
ಆದರೆ ಕನ್ನಡದ ಮಟ್ಟಿಗೆ ಇವುಗಳಲ್ಲಿ ಕೆಲವನ್ನು ಮಾತ್ರ ಒಳರಚನೆಯಿರು ವವುಗಳೆಂದು ಪರಿಗಣಿಸಲು ಸಾಧ್ಯವಿದೆ. ಯಾಕೆಂದರೆ, ಈ ರೀತಿ ಎರವಲಾಗಿ ಬಂದಿರುವ ಪದವೊಂದಕ್ಕೆ ಒಳರಚನೆಯಿದೆಯೆಂದು ಹೇಳಬೇಕಾದರೆ, ಕನ್ನಡ ದಲ್ಲೇ ಬೇರೆ ಪದಗಳೊಂದಿಗೆ ಅದು ರೂಪ ಮತ್ತು ಅರ್ಥಗಳಲ್ಲಿ ಸಂಬಂಧ ವನ್ನು ತೋರಿಸುತ್ತಿರುವುದು ಅವಶ್ಯ.
ಈ ಕಾರಣಕ್ಕಾಗಿ ಎರವಲಾಗಿ ಬಂದಿರುವ ಒಂದು ಪದಕ್ಕೆ ಒಳರಚನೆ ಯಿದೆಯೇ ಅಥವಾ ಇಲ್ಲವೇ ಎಂಬುದು ನಾವು ಪರಿಶೀಲಿಸುತ್ತಿರುವ ಕನ್ನಡದ ಪ್ರಭೇದವನ್ನನುಸರಿಸಿ ಬೇರೆ ಬೇರಾಗಿರಲು ಸಾಧ್ಯವಿದೆ. ಉದಾಹರಣೆಗಾಗಿ, ಸತ್ಯ ಎಂಬ ಪದಕ್ಕೆ ಕೆಲವು ಪ್ರಭೇದಗಳಲ್ಲಿ ಒಳರಚನೆಯಿಲ್ಲ ಎಂದು ಹೇಳಲು ಸಾಧ್ಯ ವಿದೆ, ಆದರೆ ಬೇರೆ ಕೆಲವು ಪ್ರಭೇದಗಳಲ್ಲಿ (ಎಂದರೆ ಸತ್ ಎಂಬ ಪದವನ್ನೂ
ಎರವಲಾಗಿ ಪಡೆದಿದ್ದು, ಅದಕ್ಕೆ ಯ ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ಸತ್ಯ ಎಂಬ ಪದವನ್ನು ತಯಾರಿಸಲು ಸಾಧ್ಯವಿರುವಂತಹ ಪ್ರಭೇದ ದಲ್ಲಿ) ಅದಕ್ಕೆ ಒಳರಚನೆಯಿದೆಯೆಂದೂ ವಾದಿಸಲು ಸಾಧ್ಯವಾದೀತು. ಸಂಸ್ಕೃತ ದಿಂದ ಜಾಸ್ತಿ ಪದಗಳನ್ನು ಎರವಲಾಗಿ ಪಡೆದಿರುವ ಕನ್ನಡದ ಪ್ರಭೇದಗಳಲ್ಲಿ ಜಾಸ್ತಿ ಪದಗಳಿಗೆ ಒಳರಚನೆಯಿದೆಯೆಂದು ಪರಿಗಣಿಸಲು ಸಾಧ್ಯ ಎಂಬ ವಿಷಯ ಇದರಿಂದ ಸ್ಪಷ್ಟವಾಗುತ್ತದೆ.
ಹೀಗಿದ್ದರೂ ಮೇಲೆ ಸೂಚಿಸಿದಂತೆ, ಎರವಲಾಗಿ ಬಂದಿರುವ ಪದಗಳ ಒಳ ರಚನೆ ಅವಕ್ಕೆ ಮೂಲ ಭಾಷೆಯಲ್ಲಿ (ಎಂದರೆ ಸಂಸ್ಕೃತದಲ್ಲಿ) ಇರುವ ಒಳ ರಚನೆಗಿಂತ ತೀರ ಭಿನ್ನವಾಗಿರಲು ಸಾಧ್ಯವಿದೆಯಾದ ಕಾರಣ, ಕನ್ನಡದ ವ್ಯಾಕರಣದಲ್ಲಿ ಅವನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಅವಶ್ಯ, ಮತ್ತು ಅಂತಹ ಪರಿಶೀಲನೆಯ ಆಧಾರದ ಮೇಲೆ ಅವಕ್ಕೆ ಕನ್ನಡದವೇ ಆದ ಪದ ರಚನೆಯ ನಿಯಮಗಳನ್ನು ತಯಾರಿಸಿಕೊಳ್ಳುವುದು ಅವಶ್ಯ.
ಸಂಸ್ಕೃತದ ವೈಯಾಕರಣಿಗಳು ಕೊಡುವ ಪದರಚನೆಯ ನಿಯಮಗಳನ್ನು ಹಾಗೆಯೇ ಕನ್ನಡದ ವ್ಯಾಕರಣದೊಳಗೆ ತಂದು ಹಾಕಿದಲ್ಲಿ ಅವು ಈ ಎರವಲಾಗಿ ಬಂದ ಪದಗಳ ಒಳರಚನೆಯನ್ನು ಸರಿಯಾಗಿ ತಿಳಿಸಿಹೇಳಲಾರವು. ಕನ್ನಡ ಮತ್ತು ಸಂಸ್ಕೃತ ವ್ಯಾಕರಣಗಳ ನಡುವೆ ಹಲವಾರು ಪ್ರಾಮುಖ್ಯವಾದ ವ್ಯತ್ಯಾಸಗಳಿದ್ದು, ಎರವಲಾಗಿ ಬಂದ ಪದಗಳು ಕನ್ನಡದ ವ್ಯಾಕರಣ ನಿಯಮಗಳನ್ನನುಸರಿಸುವುದೇ ಹೀಗೆ ಮಾಡಲು ಸಾಧ್ಯವಾಗದಿರುವುದಕ್ಕೆ ಮುಖ್ಯ ಕಾರಣ.
ಸಂಸ್ಕೃತ ಮತ್ತು ಕನ್ನಡ ವ್ಯಾಕರಣಗಳ ನಡುವೆ ಪದರಚನೆಗೆ ಸಂಬಂಧಿಸಿ ದಂತಹ ವ್ಯತ್ಯಾಸಗಳಲ್ಲಿ ಪ್ರಾಮುಖ್ಯವಾದ ಕೆಲವನ್ನು ಕೆಳಗಿನ ವಿಭಾಗಗಳಲ್ಲಿ ಪರಿಚಯಿಸಲಾಗಿದೆ. ಸಂಸ್ಕೃದದಿಂದ ಎರವಲಾಗಿ ಬಂದಿರುವ ಪದಗಳ ಒಳ ರಚನೆ ಕನ್ನಡದಲ್ಲಿ ಸಂಸ್ಕೃತದಲ್ಲಿರುವುದಕ್ಕಿಂತ ಯಾಕೆ ಭಿನ್ನವಾಗಿದೆ ಮತ್ತು ಯಾವ ರೀತಿಯಲ್ಲಿ ಭಿನ್ನವಾಗಿದೆ ಎಂಬುದನ್ನು ತಿಳಿಯಲು ಈ ವ್ಯತ್ಯಾಸಗಳ ಅರಿವು ಸಹಾಯಕವಾಗಬಲ್ಲುದು.
ಆ.ಖ.೧ ಪದವರ್ಗದಲ್ಲಿ ವ್ಯತ್ಯಾಸ
ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ಗುಣಪದಗಳೆಂಬುದಾಗಿ ಮೂರು ಮುಖ್ಯವಾದ ಪದವರ್ಗಗಳಿವೆಯೆಂದೂ ಮತ್ತು ಇವುಗಳಲ್ಲಿ ಗುಣಪದಗಳು ನಾಮಪದಗಳೊಂದಿಗೆ ಸೇರಿಹೋಗುವುವಾದ ಕಾರಣ ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಮುಖ್ಯ ಪದವರ್ಗಗಳು ಮಾತ್ರ ಇವೆ ಯೆಂದೂ ನಾವು ಎರಡನೆಯ ಅಧ್ಯಾಯದಲ್ಲಿ ನೋಡಿರುವೆವು.
ಸಂಸ್ಕೃತಕ್ಕೂ ಮತ್ತು ಕನ್ನಡಕ್ಕೂ ನಡುವಿರುವ ಈ ವ್ಯತ್ಯಾಸದ ಪರಿಣಾಮ ವಾಗಿ, ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಲ್ಲಿ ಹಲವಕ್ಕೆ
ಸಂಸ್ಕೃತದಲ್ಲಿ ಕಾಣಿಸುವ ಒಳರಚನೆಗಿಂತ ಭಿನ್ನವಾದ ಒಳರಚನೆಯನ್ನು ಕಲ್ಪಿಸಿ ಕೊಡುವ ಅವಶ್ಯಕತೆ ಕಂಡುಬರುತ್ತದೆ.
ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಲ್ಲಿ ಹೆಚ್ಚಿನವೂ ನಾಮಪದಗಳೇ. ಅವುಗಳಲ್ಲಿ ಕೆಲವು ಗುಣಪದಗಳಾಗಿಯೂ ಮತ್ತು ಬೇರೆ ಕೆಲವು ನಾಮಪದಗಳಾಗಿಯೂ ಕನ್ನಡದಲ್ಲಿ ಬಳಕೆಯಾಗುತ್ತವೆ. ಉದಾಹರಣೆ ಗಾಗಿ, ನೀಲಿ, ಬೇಗ (ವೇಗ), ಮುಖ್ಯ, ಉತ್ತಮ, ಯೋಗ್ಯ ಮೊದಲಾದ ಸಂಸ್ಕೃತದ ನಾಮಪದಗಳು ಕನ್ನಡದಲ್ಲಿ ಗುಣಪದಗಳಾಗಿಯೂ ಮತ್ತು ಗ್ರಾಮ, ಕವಿ, ಪಾಠ, ವಿದ್ಯೆ, ಸೇವಕ, ಯಂತ್ರ ಮೊದಲಾದ ನಾಮಪದಗಳು ಕನ್ನಡದಲ್ಲಿ ನಾಮಪದಗಳಾಗಿಯೂ ಬಳಕೆಯಾಗುತ್ತವೆ.
ಸಂಸ್ಕೃತದ ಕ್ರಿಯಾಪದಗಳು ನೇರವಾಗಿ ಕ್ರಿಯಾಪದಗಳಾಗಿಯೇ ಕನ್ನಡಕ್ಕೆ ಎರವಲಾಗಿ ಬರುವುದಿಲ್ಲ. ಇದಕ್ಕೆ ಬದಲು ಅವು ಭೂತಕೃದಂತ (ಸಂಬಂಧಕ) ರೂಪದಲ್ಲಿ ಗುಣಪದಗಳಾಗಿ ನಾಮಪದಗಳೊಂದಿಗೆ (ಉದಾ: ದೃಢ ಮನಸ್ಸು, ಗುಪ್ತ ಜೀವನ, ಭಗ್ನ ಕನಸು, ಶಾಂತ ಚಹರೆ, ಇತ್ಯಾದಿ), ಇಲ್ಲವೇ ಇರು ಎಂಬ ಕ್ರಿಯಾಪದದೊಂದಿಗೆ (ಉದಾ: ದೃಢವಾಗು, ಗುಪ್ತವಾಗು, ಶಾಂತ ವಾಗು, ಹಿತವಾಗು, ಇತ್ಯಾದಿ) ಬರುತ್ತವೆ.
ಸಂಸ್ಕೃತದಲ್ಲಿ ನಾಮಪದ ಮತ್ತು ಕ್ರಿಯಾಪದಗಳೆಂಬ ಎರಡು ಮುಖ್ಯ ಪದ ವರ್ಗಗಳು ಮಾತ್ರವಲ್ಲದೆ, ಅವ್ಯಯವೆಂಬ ಇನ್ನೊಂದು ಅಮುಖ್ಯ ಪದವರ್ಗವೂ ಇದೆ. ಈ ಪದವರ್ಗಕ್ಕೆ ಸೇರಿದ ಪದಗಳೂ ಕನ್ನಡಕ್ಕೆ ಗುಣಪದಗಳಾಗಿ ಎರವಲಾಗುತ್ತವೆ. (ಉದಾ: ಪುನಃ, ವೃಥಾ, ನಾನಾ, ಇತ್ಯಾದಿ).
ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳ ಒಳರಚನೆ ಯೆಂಹದೆಂಬುದನ್ನು ನಿರ್ಧರಿಸುವಲ್ಲೂ ಪದವರ್ಗಗಳ ಮಟ್ಟಿಗೆ ಇವುಗಳ ನಡುವೆ ಕಾಣಿಸುವ ಈ ವ್ಯತ್ಯಾಸವನ್ನು ಪರಿಗಣಿಸುವ ಅವಶ್ಯಕತೆಯಿದೆ. ಇದನ್ನು ಮುಖ್ಯವಾಗಿ ಜೋಡುಪದಗಳ ಒಳರಚನೆಯಲ್ಲಿ ಕಾಣಬಹುದು. ಸಂಸ್ಕೃತದ ಜೋಡುಪದಗಳಿಗೆ ತತ್ಪುರುಷ, ಕರ್ಮಧಾರಯ, ದ್ವಿಗು, ದ್ವಂದ್ವ, ಬಹುವ್ರೀಹಿ ಮತ್ತು ಅವ್ಯಯಿಭಾವಗಳೆಂಬ ಆರು ಮುಖ್ಯವಾದ ಒಳರಚನೆ (ಸಮಾಸ)ಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆಯೆಂದು ಸಂಸ್ಕೃತದ ವೈಯಾಕರಣಿಗಳು ಅಭಿ ಪ್ರಾಯಪಟ್ಟಿದ್ದಾರೆ. ಆದರೆ ಕನ್ನಡದ ಜೋಡುಪದಗಳಿಗೆ ಇದಕ್ಕಿಂತ ತೀರ ಭಿನ್ನ ವಾದ ಒಳರಚನೆಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆಯೆಂಬುದನ್ನು ನಾವು ಮೇಲೆ ಆರನೆಯ ಅಧ್ಯಾಯದಲ್ಲಿ ನೋಡಿದ್ದೇವೆ.
ಕನ್ನಡದ ಜೋಡುಪದಗಳಿಗೆ ಮಾತ್ರವಲ್ಲದೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಜೋಡುಪದಗಳಿಗೂ ಕನ್ನಡದಲ್ಲಿ ಸಂಸ್ಕೃತದ ಆರು ಒಳರಚನೆ (ಸಮಾಸ)ಗಳಿಗಿಂತ ಭಿನ್ನವಾಗಿರುವ ಒಳರಚನೆಗಳನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆ ಯಿದೆ. ಉದಾಹರಣೆಗಾಗಿ, ಸಂಸ್ಕೃತದಲ್ಲಿ ತತ್ಪುರುಷ ಮತ್ತು ಕರ್ಮಧಾರಯ ಗಳೆಂಬ ಎರಡು ರೀತಿಯ ಜೋಡುಪದಗಳ ನಡುವಿರುವ ವ್ಯತ್ಯಾಸವೇನೆಂದರೆ,
ತತ್ಪುರುಷದಲ್ಲಿ ಒಟ್ಟು ಸೇರುವ ನಾಮಪದಗಳು ಬೇರೆ ಬೇರೆ ವಿಭಕ್ತಿಗಳಲ್ಲಿರು ತ್ತವೆ (ರಾಜ್ಞಃ ‘ರಾಜನ’ ಪುರುಷಃ ‘ಜನ’ ರಾಜಪುರುಷಃ), ಮತ್ತು ಕರ್ಮ ಧಾರಯದಲ್ಲಿ ಒಟ್ಟುಸೇರುವ ನಾಮಪದಗಳು ಒಂದೇ ವಿಭಕ್ತಿಯಲ್ಲಿರುತ್ತವೆ (ಕೃಷ್ಣಃ ‘ಕಪ್ಪು’ ಸರ್ಪಃ ‘ಹಾವು’ ಕೃಷ್ಣಸರ್ಪಃ).
ಆದರೆ ಕನ್ನಡಕ್ಕೆ ಎರವಲಾಗಿ ಬಂದಿರುವ ಇಂತಹ ಜೋಡುಪದಗಳಲ್ಲಿ ಕರ್ಮಧಾರಯ ಸಮಾಸವನ್ನು ತೋರಿಸುವ ಹಲವು ಪದಗಳಿಗೆ ಕನ್ನಡದಲ್ಲಿ ಬೇರೆಯೇ ಒಂದು ಒಳರಚನೆಯನ್ನು ಕಲ್ಪಿಸಿಕೊಡಬೇಕಾಗುತ್ತದೆ. ಯಾಕೆಂದರೆ, ವಿಭಕ್ತಿಯೊಂದಿಗೆ ಬರಲಾರದ ಗುಣಪದದೊಂದಿಗೆ ನಾಮಪದವೊಂದನ್ನು ಸೇರಿಸುವಂತಹ ಒಳರಚನೆ ಇವುಗಳಿಗಿದೆ. ಮೇಲೆ ಕೊಟ್ಟಿರುವ ಕೃಷ್ಣಸರ್ಪ ಎಂಬ ಪದ ಮಾತ್ರವಲ್ಲದೆ, ಪರಮಾನ್ನ, ಸದ್ಗುಣ, ಮಂದಬುದ್ಧಿ, ಮೂಲ ಧನ, ಶುಕ್ಲಪಕ್ಷ ಮೊದಲಾದವುಗಳೂ ಕನ್ನಡದಲ್ಲಿ ಇಂತಹ ಒಳರಚನೆಯನ್ನು ತೋರಿಸುತ್ತವೆ.
ಆ.ವಿ.೨ ಪೂರ್ವ ಮತ್ತು ಪರಪ್ರತ್ಯಯಗಳು
ಸಂಸ್ಕೃತದಲ್ಲಿ ಬಳಕೆಯಲ್ಲಿರುವ ಪದಗಳಲ್ಲಿ ಹೆಚ್ಚಿನವನ್ನೂ (ಕೆಲವರ ಅಭಿ ಪ್ರಾಯದಂತೆ ಎಲ್ಲಾ ಪದಗಳನ್ನೂ) ಕ್ರಿಯಾಪದವೆಂಬ ಒಂದೇ ಒಂದು ಪದ ವರ್ಗಕ್ಕೆ ಸೇರಿದ ಧಾತುಗಳಿಂದ ತಯಾರಿಸಲಾಗಿದೆ. ಬಹುಶಃ ಇದೇ ಕಾರಣಕ್ಕಾಗಿ ಸಂಸ್ಕೃತದ ಪದಗಳಲ್ಲಿ ಕಾಣಿಸಿಕೊಳ್ಳುವ ಪ್ರತ್ಯಯಗಳ ಸಂಖ್ಯೆ ಬಹಳ ದೊಡ್ಡದು. ಈ ಪ್ರತ್ಯಯಗಳು ಧಾತುವಿನ ಎಡಕ್ಕೆ ಸೇರುವುವಾದರೆ ಅವನ್ನು ಪೂರ್ವಪ್ರತ್ಯಯ (ಇಲ್ಲವೇ ಉಪಸರ್ಗ)ಗಳೆಂದೂ ಮತ್ತು ಬಲಕ್ಕೆ ಸೇರುವು ವಾದರೆ ಅವನ್ನು ಪರಪ್ರತ್ಯಯಗಳೆಂದೂ ಕರೆಯುವುದು ರೂಢಿ.
(೧) ಪೂರ್ವಪ್ರತ್ಯಯಗಳ ಬಳಕೆ
| ಹಾಸ್ಯ | ಅಪಹಾಸ್ಯ |
| ಅಪರಾಧಿ | ನಿರಪರಾಧಿ |
| ವಿವೇಕಿ | ಅವಿವೇಕಿ |
| ನಗರ | ಉಪನಗರ |
| ಶಬ್ದ | ನಿಶ್ಯಬ್ದ |
(೨) ಪರಪ್ರತ್ಯಯಗಳ ಬಳಕೆ
| (೨) ಪರ್ಯಾಯಗಳ ಬಳಕೆ | |
|---|---|
| ಅಧಿಕಾರ | ಅಧಿಕಾರಿ |
| ಪ್ರಾಂತ | ಪ್ರಾಂತ್ಯ |
| ಕೃತಜ್ಞ | ಕೃತಜ್ಞತೆ |
| ಕ್ಷಣ | ಕ್ಷಣಿಕ |
ವಿದ್ಯಾರ್ಥಿ ವಿದ್ಯಾರ್ಥಿನಿ
ಕನ್ನಡದಲ್ಲಿ ನಾಮ, ಕ್ರಿಯೆ ಮತ್ತು ಗುಣಗಳೆಂಬ ಮೂರು ಬೇರೆ ಬೇರೆ ಪದವರ್ಗಗಳಿಗೆ ಸೇರುವ ಧಾತುಗಳಿವೆಯಾದ ಕಾರಣ ಅದಕ್ಕೆ ಅಷ್ಟೊಂದು ಪ್ರತ್ಯಯಗಳ ಅವಶ್ಯಕತೆಯಿಲ್ಲವೆಂದು ಹೇಳಲು ಸಾಧ್ಯವಿದೆ. ಇದಲ್ಲದೆ ಕನ್ನಡದಲ್ಲಿ ಪರಪ್ರತ್ಯಯಗಳು ಮಾತ್ರ ಇವೆಯಲ್ಲದೆ ಪೂರ್ವಪ್ರತ್ಯಯಗಳಿಲ್ಲ. ಈ ಕಾರಣಕ್ಕಾಗಿ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲಿ ಪೂರ್ವಪ್ರತ್ಯಯವಿರುವವು ಗಳು ಕನ್ನಡದಲ್ಲಿ ಬೇರೆ ಬೇರೆ ರೀತಿಯ ಒಳರಚನೆಗಳನ್ನು ತೋರಿಸುತ್ತವೆ.
ಇಂತಹ ಪದಗಳಲ್ಲಿ ಕೆಲವನ್ನು ಕನ್ನಡದಲ್ಲಿ ಜೋಡುಪದಗಳೆಂದು ಕರೆಯು ವುದೇ ಒಳ್ಳೆಯದೆಂದು ತೋರುತ್ತದೆ. ಇವು ಕನ್ನಡದಲ್ಲಿ ಗುಣಪದ ಮತ್ತು ನಾಮ ಪದಗಳನ್ನು ಒಟ್ಟು ಸೇರಿಸಿ ರಚಿಸಿದ ಜೋಡುಪದಗಳ ಹಾಗೆ ಕಾಣಿಸುವುದೇ ಇದಕ್ಕೆ ಮುಖ್ಯ ಕಾರಣ. ಉದಾಹರಣೆಗಾಗಿ, ಸಂಸ್ಕೃತದ ಅತಿ ಎಂಬ ಪೂರ್ವ ಪ್ರತ್ಯಯ ಕನ್ನಡದಲ್ಲಿ ಅತಿ ದೊಡ್ಡ, ಅತಿಯಾಗಿ ಮೊದಲಾದ ಕಡೆಗಳಲ್ಲಿ ಗುಣ ಪದದ ಹಾಗೆ ಸ್ವತಂತ್ರವಾಗಿ ಬಳಕೆಯಾಗುತ್ತದೆ. ಹಾಗಾಗಿ, ಅತಿಕ್ರಮಣ, ಅತ್ಯಾಸ, ಅತ್ಯಂತ ಮೊದಲಾದವುಗಳಲ್ಲಿ ಸಂಸ್ಕೃತದಲ್ಲಿರುವಂತೆ ಪದ ವೊಂದಕ್ಕೆ ಪೂರ್ವ ಪ್ರತ್ಯಯ ಸೇರಿದೆಯೆಂದು ಹೇಳುವ ಬದಲು, ಗುಣಪದ ವೊಂದಕ್ಕೆ ನಾಮಪದ ಸೇರಿ ಜೋಡುಪದವಾಗಿದೆಯೆಂದು ಹೇಳುವುದೇ ಕನ್ನಡದ ಮಟ್ಟಿಗೆ ಹೆಚ್ಚು ಸರಿ.
ಇದೇ ರೀತಿಯಲ್ಲಿ ಪ್ರತಿ ಎಂಬ ಪೂರ್ವಪ್ರತ್ಯಯವೂ ಕನ್ನಡದಲ್ಲಿ ಒಂದು ಸ್ವತಂತ್ರವಾದ ಪದವಾಗಿ ಬಳಕೆಯಲ್ಲಿದ್ದು (ಉದಾ: ಪ್ರತಿಯಾಗಿ, ಪ್ರತಿಯೊಬ್ಬ), ಅದರೊಂದಿಗೆ ಬರುವ ಪದಗಳನ್ನೂ ಜೋಡುಪದಗಳೆಂದು ಕರೆಯಲು ಸಾಧ್ಯ ವಿದೆ. ಈ ರೀತಿ ಸ್ವತಂತ್ರವಾಗಿ ಬರದಿದ್ದರೂ ಪದಗಳ ಹಾಗೆ ಮುಖ್ಯವಾದ ಅರ್ಥವನ್ನೇ ಕೊಡಬಲ್ಲ ಉಪ, ದುರ್, ಸ್ವ ಮೊದಲಾದವುಗಳನ್ನೂ ಕನ್ನಡದಲ್ಲಿ ಅಸ್ವತಂತ್ರ ಪದಗಳೆಂದು ಕರೆಯಲು ಸಾಧ್ಯವಿದ್ದು, ಅವನ್ನೊಳಗೊಂಡಿರುವ ಪದ ಗಳನ್ನೂ ಕನ್ನಡದಲ್ಲಿ ಸಂಸ್ಕೃತದ ಹಾಗೆ ಪೂರ್ವಪ್ರತ್ಯಯಗಳಿರುವ ಪದಗಳೆಂದು ಹೇಳದೆ, ಜೋಡುಪದಗಳೆಂದು ಹೇಳಲು ಸಾಧ್ಯವಿದೆ. ಉದಾ:
ಪ್ರತಿ ಕ್ರಿಯೆ ಪ್ರತಿಕ್ರಿಯೆ ಸ್ಥಾಪನೆ ಪ್ರತಿಸ್ಥಾಪನೆ ಧ್ವನಿ ಪ್ರತಿಧ್ವನಿ ಪಾಲನೆ ಪ್ರತಿಪಾಲನೆ ಕೃತಿ ಪ್ರತಿಕೃತಿ
| ಕನ್ನಡ ಪದಗಳ ಒಳರಚನೆ | ||
|---|---|---|
| ಉಪ: | ಗ್ರಹ ನಗರ ಆಹಾರ ಜಾತಿ ಭಾಷೆ | ಉಪಗ್ರಹ ಉಪನಗರ ಉಪಾಹಾರ ಉಪಜಾತಿ ಉಪಭಾಷೆ |
| ದುರ್: | ಅಭಿಮಾನ ಆಲೋಚನೆ ಅಹಂಕಾರ ಬುದ್ಧಿ ಭಾಗ್ಯ | ದುರಭಿಮಾನ ದುರಾಲೋಚನೆ ದುರಹಂಕಾರ ದುರ್ಬುದ್ಧಿ ದುರ್ಭಾಗ್ಯ |
| ಸ್ವ: | ರೂಪ ಆಧೀನ ಇಚ್ಛೆ ರಾಜ್ಯ ದೇಶ | ಸ್ವರೂಪ ಸ್ವಾಧೀನ ಸ್ಟೇಚ್ಛೆ ಸ್ವರಾಜ್ಯ ಸ್ವದೇಶ |
ಆದರೆ ಇತರ ಕೆಲವು ಎರವಲಾಗಿ ಬಂದ ಪದಗಳನ್ನು ಪೂರ್ವಪ್ರತ್ಯಯ ವಿರುವ ಪದಗಳೆಂದು ಹೇಳುವುದೇ ಒಳ್ಳೆಯದೆಂದು ತೋರುತ್ತದೆ. ಉದಾಹರಣೆ ಗಾಗಿ, ಪ್ರಖ್ಯಾತ, ಪ್ರಯತ್ನ, ಮೊದಲಾದುವನ್ನು ಖ್ಯಾತ, ಯತ್ನ ಮೊದಲಾದ ವುಗಳೊಂದಿಗೆ ಹೋಲಿಸಿ ನೋಡಿದಾಗ ಅವುಗಳ ಮೊದಲನೆಯ ಅಂಗವಾದ ಪ್ರ ಎಂಬುದು ಒಂದು ಪೂರ್ವಪ್ರತ್ಯಯವಾಗಿ ಕಾಣಿಸಿಕೊಳ್ಳುತ್ತದೆ. ಇದೇ ರೀತಿಯಲ್ಲಿ, ವಿಖ್ಯಾತ, ವಿವಾದ, ವಿಜ್ಞಾನ, ವಿನಾಶ, ವಿಯೋಗ ಮೊದಲಾದವುಗಳನ್ನು ಖ್ಯಾತ, ವಾದ, ಜ್ಞಾನ, ನಾಶ ಮೊದಲಾದವುಗಳೊಂದಿಗೆ ಹೋಲಿಸಿ ನೋಡಿದಾಗ, ಅವುಗಳಲ್ಲೂ ವಿ ಎಂಬ ಮೊದಲನೆಯ ಅಂಗ ಪೂರ್ವಪ್ರತ್ಯಯ ವಾಗಿ ಕಾಣಿಸಿಕೊಳ್ಳುತ್ತದೆ. ಕನ್ನಡದಲ್ಲಿ ಇವನ್ನು ಸ್ವತಂತ್ರ ಇಲ್ಲವೇ ಅಸ್ವತಂತ್ರ ಪದಗಳೆಂದು ಹೇಳುವುದು ಕಷ್ಟವಾದ ಕಾರಣ ಇವುಗಳಿಂದಾಗಿ ಕನ್ನಡದಲ್ಲಿಲ್ಲದ ಪೂರ್ವಪ್ರತ್ಯಯಗಳು ಎರವಲಿನಿಂದಾಗಿ ಬಂದಿವೆಯೆಂದು ಹೇಳಬೇಕಾಗುತ್ತದೆ.
ಆ.ಖ.ಖ ಧಾತುಗಳಲ್ಲಿ ವ್ಯತ್ಯಾಸ
ಮೇಲೆಯೇ ಸೂಚಿಸಿರುವಂತೆ, ಸಂಸ್ಕೃತದಲ್ಲಿ ಬಳಕೆಯಾಗುವ ಪದಗಳೆಲ್ಲವೂ ಒಳರಚನೆಯುಳ್ಳವುಗಳೇ ಆಗಿದ್ದು, ಅವನ್ನೆಲ್ಲ ಒಂದಲ್ಲ ಒಂದು ಕ್ರಿಯಾಧಾತು ವಿನಿಂದ ಸಾಧಿಸಲು ಸಾಧ್ಯ ಎಂಬುದಾಗಿ ವೈಯಾಕರಣಿಗಳು ಅಭಿಪ್ರಾಯಪಟ್ಟಿ
ದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಕನ್ನಡದಲ್ಲಿ ಒಳರಚನೆಯಿಲ್ಲದಂತಹ ಹಲವಾರು ನಾಮಪದ, ಕ್ರಿಯಾಪದ ಮತ್ತು ಗುಣಪದಗಳು ಬಳಕೆಯಲ್ಲಿವೆ. ಹಾಗಾಗಿ, ಸಂಸ್ಕೃತದಲ್ಲಿ ‘ಧಾತು’ ಎಂಬ ಪದ ‘ಕ್ರಿಯಾಧಾತು’ ಎಂಬ ಒಂದು ಅರ್ಥದಲ್ಲಿ ಮಾತ್ರ ಬಳಕೆಯಾಗಬಲ್ಲುದಾದರೆ, ಕನ್ನಡದಲ್ಲಿ ನಾಮಧಾತು, ಕ್ರಿಯಾಧಾತು ಮತ್ತು ಗುಣಧಾತು ಎಂಬುದಾಗಿ ಮೂರು ಬೇರೆ ಬೇರೆ ಅರ್ಥಗಳಲ್ಲಿ ಬಳಕೆಯಾಗಬಲ್ಲುದು.
ಸಂಸ್ಕೃತದ ಪದರಚನೆಯಲ್ಲಿ ಬಳಕೆಯಾಗುವ ಪ್ರತ್ಯಯಗಳನ್ನು ಮುಖ್ಯವಾಗಿ ಎರಡು ವರ್ಗಗಳಲ್ಲಿ ವಿಂಗಡಿಸುವ ಕ್ರಮವಿದೆ. ನೇರವಾಗಿ ಕ್ರಿಯಾಧಾತುಗ ಳೊಂದಿಗೆ ಬರುವ ಪ್ರತ್ಯಯಗಳನ್ನು ಕೃತ್ ಪ್ರತ್ಯಯಗಳೆಂದೂ ಮತ್ತು ಅಂತಹ ಪ್ರತ್ಯಯಗಳನ್ನು ಸೇರಿಸಿ ತಯಾರಿಸಿದ ಪದಗಳೊಂದಿಗೆ ಬರುವ ಪ್ರತ್ಯಯಗಳನ್ನು ತದ್ದಿತ ಪ್ರತ್ಯಯಗಳೆಂದೂ ಕರೆಯುವುದು ರೂಢಿ. ಉದಾಹರಣೆಗಾಗಿ, ಧನ್ ಎಂಬ ಕ್ರಿಯಾಧಾತುವಿನಿಂದ ಧನ ಎಂಬ ನಾಮಪದವನ್ನು ತಯಾರಿಸಲು ಬಳಸುವ ಅ ಎಂಬ ಪ್ರತ್ಯಯ ಒಂದು ಕೃತ್ಪ್ರತ್ಯಯ ಮತ್ತು ಧನ ಎಂಬ ಆ ನಾಮಪದದಿಂದ ಧನವತ್ (ಧನವಾನ್) ಎಂಬ ಬೇರೊಂದು ನಾಮಪದವನ್ನು ತಯಾರಿಸಲು ಬಳಸುವ ವತ್ ಎಂಬ ಪ್ರತ್ಯಯ ಒಂದು ತದ್ದಿತ ಪ್ರತ್ಯಯ.
ಇದಲ್ಲದೆ ಉಪಸರ್ಗಗಳೆಂಬ ಪೂರ್ವಪ್ರತ್ಯಯಗಳೂ ಸಂಸ್ಕೃತ ಪದಗಳ ತಯಾರಿಕೆಯಲ್ಲಿ ಬಳಕೆಯಾಗುತ್ತವೆ. ಇವು ಕೃತ್ ಮತ್ತು ತದ್ಧಿತ ಪ್ರತ್ಯಯಗಳ ಹಾಗೆ ಪದಗಳ ಅನಂತರ (ಬಲಕ್ಕೆ) ಬರುವ ಬದಲು ಅವುಗಳ ಮೊದಲಿಗೆ (ಎಡಕ್ಕೆ) ಬರುತ್ತವೆ. ಉದಾಹರಣೆಗಾಗಿ, ಜ್ಞಾನ ಎಂಬ ಪದಕ್ಕೆ ಅ ಎಂಬ ಉಪಸರ್ಗವನ್ನು ಸೇರಿಸಿ ಅಜ್ಞಾನ ಎಂಬ ಪದವನ್ನೂ, ಸ್ವಪ್ನ ಎಂಬ ಪದಕ್ಕೆ ದುರ್ ಎಂಬ ಉಪಸರ್ಗವನ್ನು ಸೇರಿಸಿ ದುಸ್ವಪ್ನ ಎಂಬ ಪದವನ್ನೂ ಮತ್ತು ಜೀವನ ಎಂಬ ಪದಕ್ಕೆ ಉಪ ಎಂಬ ಉಪಸರ್ಗವನ್ನು ಸೇರಿಸಿ ಉಪಜೀವನ ಎಂಬ ಪದವನ್ನೂ ತಯಾರಿಸಬಹುದು.
ಕನ್ನಡದ ವೈಯಾಕರಣಿಗಳು ಸಂಸ್ಕೃತದ ಈ ವಿಧಾನವನ್ನೇ ಅನುಸರಿಸಿ ಕನ್ನಡದವೇ ಆದ ಪದಗಳ ಒಳರಚನೆಯನ್ನು ಕೃತ್ಪ್ರತ್ಯಯ ಮತ್ತು ತದ್ಧಿತ ಪ್ರತ್ಯಯಗಳೆಂಬ ಎರಡು ರೀತಿಯ ಪ್ರತ್ಯಯಗಳ ಸಹಾಯದಿಂದ ವರ್ಣಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ಕನ್ನಡ ಪದಗಳ ಮಟ್ಟಿಗೆ ಯಶಸ್ವಿಯಾಗ ಲಾರದು. ಯಾಕೆಂದರೆ, ಕನ್ನಡದಲ್ಲಿ ನಾಮಧಾತು, ಕ್ರಿಯಾಧಾತು ಮತ್ತು ಗುಣಧಾತು ಎಂಬುದಾಗಿ ಮೂರು ರೀತಿಯ ಧಾತುಗಳಿದ್ದು, ಕನ್ನಡದ ಪದಗಳನ್ನು ಈ ಮೂರು ರೀತಿಯ ಧಾತುಗಳಿಗೆ ಬೇರೆ ಬೇರೆ ರೀತಿಯ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ಸಾಧಿಸಬೇಕಾಗುತ್ತದೆ.
ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳನ್ನೂ ಕನ್ನಡದವೇ ಆದ ಒಳರಚನೆಯ ವಿಧಾನಗಳ ಮೂಲಕ ವರ್ಣಿಸಬೇಕಾಗುತ್ತದಲ್ಲದೆ ಸಂಸ್ಕೃತ ವ್ಯಾಕರಣಗಳಲ್ಲಿ ಬಳಕೆಯಲ್ಲಿರುವ ವಿಧಾನಗಳ ಮೂಲಕ ವರ್ಣಿಸಲು ಸಾಧ್ಯ
ವಾಗದು. ಯಾಕೆಂದರೆ, ಮೇಲೆ (೮.೩)ರಲ್ಲಿ ಸೂಚಿಸಿದಂತೆ ಈ ಪದಗಳ ಒಳರಚನೆ ಮುಖ್ಯವಾಗಿ ಅವಕ್ಕೂ ಕನ್ನಡದಲ್ಲಿ ಬಳಕೆಯಲ್ಲಿರುವ ಇತರ ಪದ ಗಳಿಗೂ ನಡುವಿರುವ ಸಂಬಂಧದ ಮೇಲೆ ಆಧರಿಸಿರುತ್ತದೆಯಲ್ಲದೆ ಸಂಸ್ಕೃತ ದಲ್ಲಿ ಈ ಪದಗಳಿಗಿರುವ ಒಳರಚನೆಯ ಆಧಾರದ ಮೇಲಲ್ಲ.
ಉದಾಹರಣೆಗಾಗಿ ಕನ್ನಡಕ್ಕೆ ಸಂಸ್ಕೃತದಿಂದ ಕ್ರಿಯಾಪದಗಳು ನೇರವಾಗಿ ಎರವಲಾಗುವುದಿಲ್ಲ. ಅವುಗಳೊಂದಿಗೆ ಕೃತ್ ಇಲ್ಲವೇ ತದ್ದಿತ ಪ್ರತ್ಯಯಗಳು ಸೇರಿರುವ ರೂಪದಲ್ಲಾಗಲಿ, ಇಲ್ಲವೇ ಕನ್ನಡದ ಇಸು ಎಂಬ ಪ್ರತ್ಯಯ ದೊಂದಿಗಾಗಲಿ ಅವು ಬಳಕೆಗೆ ಬರುತ್ತವೆ (ಉದಾ: ರಕ್ಷಣೆ-ರಕ್ಷಿಸು, ಆಶ್ರಯ- ಆಶ್ರಿತ-ಆಶ್ರಯಿಸು, ಇತ್ಯಾದಿ). ಹಾಗಾಗಿ, ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳ ಒಳರಚನೆಯನ್ನು ಸಂದರ್ಭಕ್ಕನುಸಾರವಾಗಿ ಕೆಲವು ಅಸ್ವತಂತ್ರವಾದ ಧಾತುಗಳನ್ನು ಕಲ್ಪಿಸುವುದರ ಮೂಲಕ ವರ್ಣಿಸಬೇಕಾಗುತ್ತದೆ. ಹೆಚ್ಚಿನಡೆಗಳಲ್ಲೂ ಈ ಧಾತುಗಳು ಯಾವ ವರ್ಗಕ್ಕೆ ಸೇರುತ್ತವೆ ಎಂಬುದನ್ನು ನಿರ್ಧರಿಸಲು ಕನ್ನಡದಲ್ಲಿ ಯಾವ ಆಧಾರವೂ ದೊರೆಯುವುದಿಲ್ಲ (೮.೫ ನೋಡಿ).
ಆ.ವಿ.ಆ ತಯಾರಿಕೆ ಮತ್ತು ಬಳಕೆ
ಕನ್ನಡ ಮತ್ತು ಸಂಸ್ಕೃತ ಪದಗಳ ನಡುವೆ ಇನ್ನೊಂದು ಪ್ರಾಮುಖ್ಯವಾದ ವ್ಯತ್ಯಾಸವಿದೆ. ಕನ್ನಡದ ನಾಮಪದಗಳಿಗೆ ತಯಾರಿಕೆ ಮತ್ತು ಬಳಕೆ ಎಂಬುದಾಗಿ ಎರಡು ಭಿನ್ನ ಭಿನ್ನವಾದ ಅವಸ್ಥೆಗಳಿದ್ದು, ಈ ಪದಗಳು ಯಾವುದಾದರೊಂದು ಸಂದರ್ಭದಲ್ಲಿ ತಯಾರಾದ ಬಳಿಕ, ಬಳಕೆಗೆ ಬಂದು ಉಳಿದರೆ ಮಾತ್ರ ಭಾಷೆಯ ಪದಗಳೆಂದೆನಿಸಬಲ್ಲುವು (೧.೬.೧ ನೋಡಿ). ಈ ಕಾರಣಕ್ಕಾಗಿ, ಒಳರಚನೆಯ ಮಟ್ಟಿಗೆ ‘ನಿಯಮಬದ್ಧ’ವಾಗಿ ಕಾಣಿಸುವ ಪ್ರತ್ಯಯವಿರುವ ನಾಮಪದ ಇಲ್ಲವೇ ಜೋಡುಪದಗಳೆಲ್ಲವೂ ಕನ್ನಡದಲ್ಲಿ ಭಾಷೆಯ ಪದಗಳಾಗುವುದಿಲ್ಲ. ಅಂತಹ ಪದಗಳು ಒಂದು ನಿಶ್ಚಿತವಾದ ಅರ್ಥದಲ್ಲಿ ರೂಢಿಗೆ ಬಂದಾಗ ಮಾತ್ರ ಅವು ಭಾಷೆಯ ಪದಗಳೆಂದೆನಿಸಬಲ್ಲುವು.
ಇದಲ್ಲದೆ, ಭಾಷೆಯಲ್ಲಿ ರೂಢಿಗೆ ಬಂದಿರುವ ಕನ್ನಡದ ಪದಗಳು ಒಳ ರಚನೆಯ ಮಟ್ಟಿಗೆ ‘ನಿಯಮಬದ್ಧ’ವಾಗಿ ಇಲ್ಲದಿರಲೂ ಸಾಧ್ಯವಿದೆ. ಪದಕ್ಕೊಂದು ನಿಯಮ ಎನ್ನುವಷ್ಟರ ಮಟ್ಟಿಗೆ ಕನ್ನಡದಲ್ಲಿ ಪ್ರತ್ಯಯವಿರುವ ಪದಗಳ ಮತ್ತು ಜೋಡುಪದಗಳ ಒಳರಚನೆ ಅನಿಯಮಿತವಾಗಿರಲು ಸಾಧ್ಯವಿದೆ. ಇದಕ್ಕೆ ಕಾರಣ ವೇನೇಂದರೆ, ಕನ್ನಡ ಭಾಷೆಯ ನಿಜವಾದ ಸ್ವರೂಪ ಮಾತಿನ ಬಳಕೆಯಲ್ಲೇನೇ ಸಿದ್ಧವಾಗುವಂತಹದು. ಬರಹದಲ್ಲಿ ಅದನ್ನು ಬಳಸುತ್ತಿರುವೆವಾದರೂ, ಮಾತಿ ಗಿರುವಷ್ಟು ಮಹತ್ವ ಬರಹಕ್ಕಿಲ್ಲ. ಕಳೆದ ಒಂದೂವರೆ-ಎರಡು ಸಾವಿರ ವರ್ಷ ಗಳಲ್ಲಿ ಕನ್ನಡ ಭಾಷೆ ಎಷ್ಟೊಂದು ಬದಲಾವಣೆಗಳಿಗೊಳಗಾಗಿದೆ (ಪೂರ್ವದ ಹಳೆಗನ್ನಡವಿದ್ದುದು ಹಳೆಗನ್ನಡವಾಗಿ, ನಡುಗನ್ನಡವಾಗಿ ಅನಂತರ ಹೊಸಗನ್ನಡ
ವಾಗಿದೆ ಮತ್ತು ಹೊಸಗನ್ನಡದಲ್ಲೂ ಊರಿಂದೂರಿಗೆ ಮತ್ತು ಜಾತಿಯಿಂದ ಜಾತಿಗೆ ಅದು ಭಿನ್ನ ಭಿನ್ನವಾಗಿದೆ) ಎಂಬುದನ್ನು ಪರಿಶೀಲಿಸಿದೆವಾದರೆ ಮಾತಿನ ಬಳಕೆಗೆ ಈ ಭಾಷೆಯ ಸ್ವರೂಪವನ್ನು ನಿರ್ಧರಿಸುವಲ್ಲಿ ಎಂತಹ ಮಹತ್ವವಿದೆ ಎಂಬ ವಿಷಯ ಸ್ಪಷ್ಟವಾದೀತು.
ಈ ಕಾರಣಕ್ಕಾಗಿ, ಕನ್ನಡದ ವ್ಯಾಕರಣ ನಿಯಮಗಳನ್ನು ರಚಿಸುವವರು ಅದು ಬರಹದಲ್ಲಿ ಮಾತ್ರವಲ್ಲದೆ ಮಾತಿನಲ್ಲೂ ಯಾವ ರೂಪದಲ್ಲಿದೆ ಎಂಬುದನ್ನು ಗಮನಿಸುವುದು ಅವಶ್ಯ. ಇನ್ನೊಂದು ಪ್ರಾಮುಖ್ಯವಾದ ಸಂಗತಿಯೇನೆಂದರೆ, ಬರಹಗಳು ಭಾಷೆಯ ಒಂದು ಚಿಕ್ಕ ಅಂಶವನ್ನು ಮಾತ್ರವೇ ಪ್ರತಿನಿಧೀಕರಿಸ ಬಲ್ಲುವು. ಉದಾಹರಣೆಗಾಗಿ, ತಿನ್ನು ಎಂಬ ಕ್ರಿಯಾಪದಕ್ಕಿರುವ ಹಲವು ರೂಪ ಗಳಲ್ಲಿ (ತಿನ್ನುತ್ತಾನೆ, ತಿಂದ, ತಿನ್ನಲಿ, ತಿನ್ನುತ್ತೇನೆ, ತಿನ್ನಲಿದ್ದೇನೆ, ತಿನ್ನುತ್ತಿದ್ದಾಳೆ, ಇತ್ಯಾದಿ) ಕೆಲವೇ ಕೆಲವನ್ನು ಮಾತ್ರ ಬರಹಗಳಲ್ಲಿ ಕಾಣ ಬಲ್ಲೆವು. ಉಳಿದ ರೂಪಗಳನ್ನು ಪಡೆಯಲು ಮಾತಿನ ಮರೆಹೊಗಬೇಕಾಗುತ್ತದೆ.
ಇದಲ್ಲದೆ ಭಾಷೆ ಮಾತಿನಲ್ಲಿ ಬದಲಾದಂತೆ ಬರಹದಲ್ಲೂ ಬದಲಾಗು ತ್ತಿದ್ದು, ಈ ವಿಷಯದಲ್ಲಿ ಬರಹ ಮಾತನ್ನನುಸರಿಸುವುದಲ್ಲದೆ, ಮಾತು ಬರಹ ವನ್ನನುಸರಿಸುವುದಿಲ್ಲ. ಕಾಲದಿಂದ ಕಾಲಕ್ಕೆ ಬರಹದ ಭಾಷೆಯಲ್ಲಿ ಬದಲಾವಣೆ ಗಳುಂಟಾಗಲು ಅದಕ್ಕೆ ಮೊದಲು ಮಾತಿನಲ್ಲಿ ಬದಲಾವಣೆಗಳುಂಟಾಗಿರುವುದೇ ಮುಖ್ಯ ಕಾರಣವಾಗಿರುತ್ತದೆ.
ಈ ವಿಷಯದಲ್ಲಿ ಸಂಸ್ಕೃತ ಭಾಷೆ ಕನ್ನಡಕ್ಕಿಂತ (ಮತ್ತು ಸಾವಿರಾರು ಇತರ ಭಾಷೆಗಳಿಗಿಂತ) ಬಹಳ ಮಟ್ಟಿಗೆ ಭಿನ್ನವಾಗಿದೆ. ಕಳೆದ ಎರಡು ಸಾವಿರ ವರ್ಷ ಗಳಲ್ಲಿ (ಪಾಣಿನಿಯ ಕಾಲದಿಂದೀಚೆಗೆ) ಸಂಸ್ಕೃತ ಭಾಷೆ ಸ್ವಲ್ಪವೂ ಬದಲಾಗದೆ ಹಾಗೆಯೇ ಉಳಿದಿದೆ. ಈ ದೀರ್ಘವಾದ ಅವಧಿಯಲ್ಲಿ ಅದರ ಪ್ರಯೋಗಗಳಿಗೆಲ್ಲ ಬರಹದ ಭಾಷೆ ಮೂಲಾಧಾರವಾಗಿದ್ದುದೇ ಇದಕ್ಕೆ ಮುಖ್ಯ ಕಾರಣ. ಎರಡು ಸಾವಿರ ವರ್ಷಗಳಷ್ಟು ಹಿಂದೆ ರಚಿತವಾಗಿದ್ದ ಪಾಣಿನಿಯ ವ್ಯಾಕರಣ ನಿಯಮ ಗಳು ಇವತ್ತಿಗೂ ಆ ಭಾಷೆಯಲ್ಲಿ ಪದಗಳನ್ನು ಮತ್ತು ಪದರೂಪಗಳನ್ನು ತಯಾರಿಸಲು ಆಧಾರವಾಗಿರುತ್ತವೆ. ಈ ನಿಯಮಗಳನ್ನು ಮೀರುವ ಪದಗಳು ಇಲ್ಲವೇ ಪದರೂಪಗಳು ಸಾಧುವೆನಿಸಬೇಕಾದರೆ, ಅವು ಮಹಾಕವಿಗಳ ಇಲ್ಲವೇ ವಿದ್ವಾಂಸರ ಬರಹಗಳಲ್ಲಿ ಕಾಣಿಸಬೇಕು, ಎಂದರೆ ಮಾನ್ಯವಾದ ಬರಹಗಳಲ್ಲಿ ರೂಢಿಗೆ ಬಂದಿರಬೇಕು.
ಪಾಣಿನಿಯ ಕಾಲದ ಸಂಸ್ಕೃತದಲ್ಲಿ ಪದಗಳ ತಯಾರಿಕೆ ಮತ್ತು ಬಳಕೆ ಗಳೆಂಬ ಎರಡು ಘಟ್ಟಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವಿತ್ತು. ಆತನ ವ್ಯಾಕರಣ ದಲ್ಲಿ ಒಂದೆರಡು ಪದಗಳ ರಚನೆಗೆ ಮಾತ್ರವೇ ಅನ್ವಯಿಸುವಂತಹ ನಿಯಮ ಗಳೂ ಹಲವಿವೆಯೆಂಬುದು ಈ ವಿಷಯವನ್ನು ಸ್ಪಷ್ಟಪಡಿಸುತ್ತವೆ. ಆದರೆ ಆತನ ಕಾಲದ ಅನಂತರದ ಕಾಲದಲ್ಲಿ ಸಂಸ್ಕೃತ ಭಾಷೆ ಬರಿಯ ಬರಹದ ಭಾಷೆಯಾಗಿ ಉಳಿದು, ಅದಕ್ಕೆ ಮಾತಿನ ಬಳಕೆಯ ಆಧಾರ ತಪ್ಪಿಹೋಯಿತು.
ಮಾತಿನಲ್ಲಿ ಆ ಭಾಷೆ ಪಾಲಿ, ಪ್ರಾಕೃತ, ಅಪಭ್ರಂಶ ಇತ್ಯಾದಿಯಾಗಿ ಬದಲಾಗುತ್ತಾ ಹೋದರೂ ಬರಹದಲ್ಲಿ ಮಾತ್ರ ಅಂತಹ ಬದಲಾವಣೆಗಳನ್ನು ಅನುಸರಿಸದೆ ಇದ್ದುದಿದ್ದಂತೆಯೇ ಉಳಿದುಕೊಂಡುದೇ ಇದಕ್ಕೆ ಕಾರಣ. ಎಂದರೆ, ಕನ್ನಡ ಬರಹ ಹಳೆಗನ್ನಡವಿದ್ದದ್ದು ನಡುಗನ್ನಡವಾಗಿ ಅನಂತರ ಹೊಸಗನ್ನಡವಾಗಿ ಬದಲಾಗಿದೆ, ಆದರೆ ಸಂಸ್ಕೃತ ಬರಹ ಸಂಸ್ಕೃತವಿದ್ದದ್ದು ಪ್ರಾಕೃತವಾಗಿ ಅನಂತರ ಹಿಂದಿ, ಮರಾಠಿ ಮೊದಲಾದವುಗಳಲ್ಲಿ ಒಂದಾಗಲಿಲ್ಲ, ಇದಕ್ಕೆ ಬದಲು ಅದು ಸಂಸ್ಕೃತವಾಗಿಯೇ ಉಳಿದುಕೊಂಡಿದೆ.
ಭಾಷೆಯ ಮಟ್ಟಿಗೆ ಹೀಗೆ ಕಾಲದಿಂದ ಕಾಲಕ್ಕೆ ಬದಲಾಗದೆ ಉಳಿಯುವುದು ಒಂದು ಅಸ್ವಾಭಾವಿಕ ಘಟನೆಯೆಂದು ಹೇಳಬಹುದು. ಈ ಕಾರಣಕ್ಕಾಗಿ ಸಂಸ್ಕೃತದ ವ್ಯಾಕರಣವೂ ಕೆಲವು ಅಸ್ವಾಭಾವಿಕ ಗುಣಧರ್ಮಗಳನ್ನು ತೋರಿಸು ಇದೆ. ಅದರ ನಾಮಪದಗಳಲ್ಲಿ ತಯಾರಿಕೆ ಮತ್ತು ಬಳಕೆ ಎಂಬ ಈ ಎರಡು ಘಟ್ಟಗಳ ನಡುವಿರುವ ವ್ಯತ್ಯಾಸ ಹೆಚ್ಚಿನ ಮಟ್ಟಿಗೆ ಇಲ್ಲವಾಗಿರುವುದು ಇಂತಹ ಗುಣಧರ್ಮಗಳಲ್ಲಿ ಪ್ರಾಮುಖ್ಯವಾದುದು. ಕನ್ನಡ ಮತ್ತು ಸಂಸ್ಕೃತ ಭಾಷೆಗಳ ನಡುವೆ ಈ ವಿಷಯದಲ್ಲಿ ಬಹಳ ಸ್ಪಷ್ಟವಾದ ವ್ಯತ್ಯಾಸವಿದೆ. ಇದನ್ನು ಈ ಎರಡು ಭಾಷೆಗಳಲ್ಲಿ ಬಳಕೆಯಾಗುವ ಜೋಡುಪದಗಳ ಪರಿಶೀಲನೆಯಿಂದ ತಿಳಿದುಕೊಳ್ಳ ಬಹುದು.
ಕನ್ನಡದಲ್ಲಿ ಜೋಡುಪದಗಳನ್ನು ತಯಾರಿಸಿದ ಕೂಡಲೇ ಅವು ಭಾಷೆಯ ಪದಗಳಾಗುವುದಿಲ್ಲ. ಹಾಗೆ ತಯಾರಿಸಿದ ಪದಗಳು ಇದಕ್ಕಾಗಿ ಭಾಷೆಯಲ್ಲಿ ರೂಢಿಗೆ ಬರುವ ಅವಶ್ಯಕತೆಯಿದೆ. ಉದಾಹರಣೆಗಾಗಿ, ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ತಯಾರಿಸಿರುವ ಬಯಲಾಟ, ನೆಲಿಗಡಲೆ, ಜೇನುಹುಳ, ತಾಯಿಮನೆ ಮೊದಲಾದ ಜೋಡುಪದಗಳನ್ನು ಗಮನಿಸಬಹುದು. ಬಯಲಿನ ಆಟ, ನೆಲದ ಕಡಲೆ, ಜೇನಿನ ಹುಳ, ತಾಯಿಯ ಮನೆ ಮೊದಲಾದ ಪದಗುಚ್ಛಗಳಲ್ಲಿ ಮೊದಲನೆಯ ಪದದೊಂದಿಗೆ ಬಂದಿರುವ ಅ ಎಂಬ ಸಂಬಂಧಕ ಪ್ರತ್ಯಯವನ್ನು ತೆಗೆದು ಹಾಕಿ ಈ ಜೋಡುಪದಗಳನ್ನು ತಯಾರಿಸ ಲಾಗಿದೆ.
ಆದರೆ ಎಲ್ಲಾ ರೀತಿಯ ಪದಗುಚ್ಛಗಳಿಂದಲೂ ಈ ರೀತಿ ಮೊದಲನೆಯ ಪದದೊಂದಿಗೆ ಬರುವ ಸಂಬಂಧಕ ಪ್ರತ್ಯಯವನ್ನು ತೆಗೆದು ಹಾಕಿ ಅವನ್ನು ಕನ್ನಡದ ಜೋಡುಪದಗಳೆಂದು ಕರೆಯಲು ಸಾಧ್ಯವಾಗದು. ಉದಾಹರಣೆಗಾಗಿ ಬಯಲಿನ ಓಟ, ನೆಲದ ಬಣ್ಣ, ಮರದ ಹುಳ, ತಾಯಿಯ ಸೀರೆ, ಮೊದಲಾದ ಪದಗುಚ್ಛಗಳಿಂದ ಅವುಗಳ ಮೊದಲನೆಯ ಪದದೊಂದಿಗೆ ಬರುವ ಸಂಬಂಧಕ ಪ್ರತ್ಯಯವನ್ನು ತೆಗೆದು ಹಾಕಿ ಬಯಲೋಟ, ನೆಲಬಣ್ಣ, ಮರಹುಳ, ತಾಯಿಸೀರೆ ಎಂಬುದಾಗಿ ಪದಗಳನ್ನು ತಯಾರಿಸಲು ಸಾಧ್ಯವಿದೆಯದರೂ ಅವು ನಿಜಕ್ಕೂ ಕನ್ನಡದ ಜೋಡುಪದಗಳಲ್ಲ. ಅಂತಹ ಪದಗಳನ್ನು ನಾವು ಕನ್ನಡದ ಅರ್ಥಕೋಶಗಳಲ್ಲಿ ಕಾಣುವುದೂ ಇಲ್ಲ.
ಬಯಲಾಟ, ನೆಲಗಡಲೆ ಮೊದಲಾ ದವುಗಳ ಹಾಗೆ ಅವಕ್ಕೊಂದು ವಿಶಿಷ್ಟವಾದ ಅರ್ಥ ದೊರಕಿದ ಮೇಲೆ ಮತ್ತು ಆ ಅರ್ಥದಲ್ಲಿ ಅವು ಭಾಷೆಯಲ್ಲಿ ಬಳಕೆಗೆ ಬಂದ ಮೇಲೆ ಮಾತ್ರವೇ ಅವನ್ನು ಕನ್ನಡದ ಜೋಡುಪದಗಳೆಂದು ಹೇಳಲು ಮತ್ತು ಕನ್ನಡದ ಅರ್ಥಕೋಶಗಳಲ್ಲಿ ಅವನ್ನು ಸೇರಿಸಿಕೊಳ್ಳಲು ಸಾಧ್ಯವಾದೀತು.
ಕ್ರಿಯಾಪದಗಳೊಂದಿಗೆ ನಾಮಪದಗಳನ್ನು ಸೇರಿಸಿ ತಯಾರಿಸಿರುವ ಜಾರು ಬಂಡಿ, ಚುಚ್ಚುಮದ್ದು, ಹುರಿಗಡಲೆ, ಬಿಚ್ಚುಗತ್ತಿ, ಹುಟ್ಟುಹಬ್ಬ ಮೊದಲಾದ ಜೋಡುಪದಗಳ ಬಳಕೆಯೂ ಇದೇ ರೀತಿಯದು. ಸಾಮಾನ್ಯವಾಗಿ ಕ್ರಿಯಾಪದ ವೊಂದನ್ನು ನಾಮಪದದೊಂದಿಗೆ ಬಳಸಬೇಕಿದ್ದಲ್ಲಿ ಅದನ್ನು ಸಂಬಂಧಕ ರೂಪ ದಲ್ಲಿರಿಸಬೇಕು. ಜಾರುವ ನೆಲ, ಚುಚ್ಚುವ ಮುಳ್ಳು, ಬಿಚ್ಚಿದ ಕೂದಲು, ಹುಟ್ಟಿದ ರಾತ್ರಿ ಮೊದಲಾದ ಪದಗುಚ್ಛಗಳಲ್ಲಿ ಇಂತಹ ರಚನೆಯನ್ನು ಕಾಣ ಬಹುದು. ಇಂತಹ ಪದಗುಚ್ಛಗಳಲ್ಲಿ ಜಾರುವ ಬಂಡಿ, ಚುಚ್ಚುವ ಮದ್ದು, ಹುರಿದ ಕಡಲೆ ಮೊದಲಾದ ಕೆಲವು ಪದಗುಚ್ಛಗಳು ಮಾತ್ರ ಅವುಗಳ ಮೊದಲನೆಯ ಪದದೊಂದಿಗೆ ಬಂದಿರುವ ಕಾಲಪ್ರತ್ಯಯ ಮತ್ತು ಸಂಬಂಧಕ ಪ್ರತ್ಯಯಗಳನ್ನು ಕಳೆದುಕೊಂಡು ಜೋಡುಪದಗಳಾಗಿ ಕನ್ನಡದಲ್ಲಿ ಬಳಕೆಗೆ ಬಂದಿವೆ.
ಜಾರುವ ನೆಲ, ಚುಚ್ಚುವ ಮುಳ್ಳು ಮೊದಲಾದ ಇತರ ಪದಗುಚ್ಛ ಗಳಿಂದಲೂ ಜಾರುನೆಲಿ, ಚುಚ್ಚುಮುಳ್ಳು ಮೊದಲಾದ ಇಂತಹ ಜೋಡುಪದ ಗಳನ್ನು ತಯಾರಿಸಲು ಸಾಧ್ಯವಿದೆಯಾದರೂ ಅವು ಕನ್ನಡದ ಜೋಡುಪದಗಳು ಎಂದೆನಿಸಬೇಕಿದ್ದಲ್ಲಿ ಅವಕ್ಕೆ ಮೇಲೆ ಹೇಳಿದಂತೆ ವಿಶಿಷ್ಟವಾದೊಂದು ಅರ್ಥ ಸಿಗಬೇಕು ಮತ್ತು ಆ ಅರ್ಥದಲ್ಲಿ ಅವು ಬಳಕೆಗೆ ಬರಬೇಕು.
ಗುಣಪದಗಳೊಂದಿಗೆ ನಾಮಪದಗಳನ್ನು ಸೇರಿಸಿ ತಯಾರಿಸಿರುವ ದೊಡ್ಡಣ್ಣ, ಅಡ್ಡದಾರಿ, ಬೆಣ್ಕಲ್ಲು ಮೊದಲಾದ ಜೋಡುಪದಗಳ ಬಳಕೆ ಇದಕ್ಕಿಂತ ಸ್ವಲ್ಪ ಭಿನ್ನವಾಗಿದೆಯಾದರೂ ತಯಾರಿಕೆ ಮತ್ತು ಬಳಕೆಗಳ ನಡುವಿರುವ ಅಂತರ ಇಲ್ಲೂ ಸ್ಪಷ್ಟವಾಗಿಯೇ ಕಾಣಿಸಿಕೊಳ್ಳುತ್ತದೆ. ಕನ್ನಡದಲ್ಲಿ ಗುಣಪದಗಳನ್ನು ನೇರವಾಗಿ ನಾಮಪದಗಳೊಂದಿಗೆ ಬಳಸಲು ಸಾಧ್ಯವಿದೆ. ಆದರೆ ಇಂತಹ ಬಳಕೆಗಳು ಬರಿಯ ಪದಗುಚ್ಛಗಳಾಗಿರುತ್ತವಲ್ಲದೆ ಜೋಡುಪದಗಳೆಂದೆನಿಸುವು ದಿಲ್ಲ. ಉದಾಹರಣೆಗಾಗಿ, ದೊಡ್ಡ ಮನೆ, ಅಡ್ಡಗೋಡೆ, ಬಿಳಿಕಲ್ಲು ಮೊದಲಾ ದವುಗಳು ಬರಿಯ ಪದಗುಚ್ಛಗಳು ಮಾತ್ರ.
ಇವು ಕನ್ನಡದಲ್ಲಿ ಜೋಡುಪದಗಳೆಂದೆನಿಸಬೇಕಾದರೆ, ಮೇಲೆ ಹೇಳಿದಂತೆ ಇವಕ್ಕೂ ಒಂದು ವಿಶಿಷ್ಟವಾದ ಅರ್ಥ ಲಭಿಸಬೇಕು ಮತ್ತು ಆ ಅರ್ಥದಲ್ಲಿ ಅವು ಬಳಕೆಗೆ ಬರಬೇಕು. ಆದರೆ ಈ ರೀತಿ ಪದಗುಚ್ಛಗಳು ಜೋಡುಪದಗಳಾಗಿ ಬದಲಾಗುವಾಗ ಇವುಗಳಲ್ಲಿ ಪ್ರತ್ಯಯಗಳಾವುವೂ ಬಿದ್ದುಹೋಗುವುದಿಲ್ಲ (ಇವು ಗಳಲ್ಲಿ ಬಿದ್ದುಹೋಗುವಂತಹ ಪ್ರತ್ಯಯಗಳೇ ಇಲ್ಲ) ಎಂಬುದೇ ಇವುಗಳಿಗೂ
ಮತ್ತು ಮೇಲೆ ಕೊಟ್ಟಿರುವ ಬೇರೆ ಎರಡು ರೀತಿಯ ಜೋಡುಪದಗಳಿಗೂ ನಡುವಿರುವ ವ್ಯತ್ಯಾಸ. ಆದರೆ ಇಂತಹ ಗುಣಪದಗಳಿರುವ ಜೋಡುಪದಗಳಲ್ಲಿ ಸಾಮಾನ್ಯವಾಗಿ ಪದಗುಚ್ಛಗಳಲ್ಲಿ ಕಾಣಿಸದಿರುವ ಕೆಲವು ಸಂಧಿಯ ನಿಯಮ ಗಳನ್ನು ಕಾಣಬಹುದು (ಉದಾ: ಬಿಳಿ-ಬೆಳ್, ಕಪ್ಪು-ಕರಿ, ಕರ್ ಇತ್ಯಾದಿ).
ಸಂಸ್ಕೃತದಲ್ಲಿ ಕಾಣಿಸುವ ಜೋಡುಪದಗಳ ಬಳಕೆ ಇದಕ್ಕಿಂತ ತೀರ ಭಿನ್ನ ವಾದುದು. ಅದರ ಕೆಲವು ಜೋಡುಪದಗಳಿಗೆ ಪದಗುಚ್ಛಗಳಿಗಿಂತ ಭಿನ್ನವಾದ ಅರ್ಥ ಇದೆಯಾದರೂ, ಅವನ್ನು ಅಂತಹ ಅರ್ಥದಲ್ಲಿ ಮಾತ್ರವಲ್ಲದೆ ಬರಿಯ ಪದಗುಚ್ಛದ ಅರ್ಥದಲ್ಲೂ ಬಳಸಲು ಸಾಧ್ಯವಿದೆ. ನಿಜಕ್ಕೂ ‘ಸಮಾಸ’ವೆಂಬ ವ್ಯಾಕರಣ ವಿಧಾನ ಸಂಸ್ಕೃತದಲ್ಲಿ ಎರಡು ಅಥವಾ ಜಾಸ್ತಿ ನಾಮಪದಗಳನ್ನು ಒಟ್ಟಿಗೆ ಸಂಕ್ಷಿಪ್ತ ರೂಪದಲ್ಲಿ ಬಳಸುವ ಒಂದು ಸಾಧನ ಮಾತ್ರ. ಅದನ್ನೊಂದು ಪದರಚನೆಯ ವಿಧಾನವನ್ನುನ್ನುವುದಕ್ಕಿಂತಲೂ ವಾಕ್ಯವನ್ನು ಸಂಕ್ಷಿಪ್ತಗೊಳಿಸುವ ಸಾಧನವೆಂದು ಹೇಳುವುದೇ ಹೆಚ್ಚು ಸಮಂಜಸವಾಗಬಲ್ಲುದು.
ಸಂಧಿಕಾರ್ಯಗಳ ಮೂಲಕ ಪದಗಳ ನಡುವೆ ಬರುವ ಅಕ್ಷರಗಳನ್ನು ತೆಗೆದು ಹಾಕಿ ಇಲ್ಲವೇ ಬದಲಾಯಿಸಿ ಆ ಪದಗಳು ಒಂದರೊಡನೊಂದು ಜೋಡಿಕೊಳ್ಳು ವಂತೆ ಮಾಡುವ ಹಾಗೆಯೇ ಸಂಸ್ಕೃತದಲ್ಲಿ ಸಮಾಸ ಕಾರ್ಯಗಳ ಮೂಲಕ ಪದಗಳ ನಡುವೆ ಬರುವ ಲಿಂಗ-ವಚನ-ವಿಭಕ್ತಿ ಪ್ರತ್ಯಯಗಳನ್ನು ತೆಗೆದು ಹಾಕಿ ಅವು ಇನ್ನಷ್ಟು ಹತ್ತಿರ ಬಂದು ಜೋಡಿಕೊಳ್ಳುವಂತೆ ಮಾಡಲು ಸಾಧ್ಯವಾಗುತ್ತದೆ. ಈ ಎರಡು ವ್ಯಾಕರಣ ಕ್ರಿಯೆಗಳಲ್ಲೂ ಸಂಸ್ಕೃತದಲ್ಲಿ ಪದಗಳ ಅನನ್ಯತೆ ನಷ್ಟ ವಾಗುವುದಿಲ್ಲ. ಸಂಸ್ಕೃತದ ಈ ಸಮಾಸ ವಿಧಾನ ಕನ್ನಡದಲ್ಲಿ ಕಾಣಿಸುವ ಸಮಾಸ ವಿಧಾನದಿಂದ ತೀರ ಭಿನ್ನವಾದುದು.
ಸಂಸ್ಕೃತದ ಜೋಡುಪದಗಳ ಬಳಕೆಯಲ್ಲಿ ತಯಾರಿಕೆ ಮತ್ತು ಬಳಕೆ ಎಂಬ ಎರಡು ಘಟ್ಟಗಳಿಲ್ಲ ಎಂಬ ವಿಷಯ ಬಾಣಭಟ್ಟನ ಕಾದಂಬರಿಯಲ್ಲಿ ಕಾಣಿಸಿ ಕೊಳ್ಳುವ ಜೋಡುಪದಗಳನ್ನು ಪರಿಶೀಲಿಸಿದಲ್ಲಿ ಬಹಳ ಸ್ಪಷ್ಟವಾಗಬಲ್ಲುದು. ಇಪ್ಪತ್ತು-ಮೂವತ್ತು ಪದಗಳನ್ನು ಒಟ್ಟುಸೇರಿಸಿ ತಯಾರಿಸಿದ ಉದ್ದುದ್ದವಾದ ಜೋಡುಪದಗಳು ಹಲವು ಆ ಗ್ರಂಥದಲ್ಲಿವೆ. ಇಂತಹ ಜೋಡುಪದಗಳಿಗೆ ತಯಾರಿಕೆಯೆಂಬ ಒಂದೇ ಒಂದು ಘಟ್ಟವಿರಲು ಸಾಧ್ಯವಿದೆಯಲ್ಲದೆ ಅದಕ್ಕಿಂತ ಭಿನ್ನವಾದ ಬಳಕೆಯೆಂಬ ಎರಡನೆಯ ಘಟ್ಟವಿರುವುದು ಅಸಾಧ್ಯ. ಯಾಕೆಂದರೆ ಅಂತಹ ಉದ್ದುದ್ದವಾಗಿರುವ ಜೋಡುಪದಗಳನ್ನು ಪುನಃ ಪುನಃ ಬಳಸುವ ಸಂದರ್ಭಗಳೇ ಬರಲಾರವು.
ಸಂಸ್ಕೃತ ಭಾಷೆಯಲ್ಲಿ ಈ ರೀತಿ ಹೊಸ ಹೊಸ ಪದಗಳನ್ನು ತಯಾರಿಸಿ ಹೇಳಲು ಮಾತಿನ ಬಳಕೆಯ ಆಧಾರ ಬೇಕಾಗಿಲ್ಲವಾದ ಕಾರಣ, ಮತ್ತು ಅಂತಹ ಪದಗಳಿಗೆ ಅರ್ಥ ಹೇಳಲು ಅವುಗಳ ಒಳರಚನೆ ಮಾತ್ರವೇ ಆಧಾರವಾಗಿರಲು ಸಾಧ್ಯವಿದೆಯಾದ ಕಾರಣ, ಕನ್ನಡದಲ್ಲಿ ಹೊಸ ಹೊಸ ಪಾರಿಭಾಷಿಕ ಪದಗಳನ್ನು ಬಳಸಬೇಕಾಗಿರುವ ಸಂದರ್ಭಗಳಲ್ಲೆಲ್ಲ ಸಂಸ್ಕೃತ ಭಾಷೆಗೆ ಮರೆಹೊಗುವ ಕ್ರಮ
ರೂಢಿಗೆ ಬಂದಿದೆ. (ಇಂಗ್ಲಿಷ್ನಲ್ಲೂ ಇದೇ ರೀತಿಯಲ್ಲಿ ಹೊಸ ಹೊಸ ಪಾರಿಭಾಷಿಕ ಪದಗಳನ್ನು ಬಳಸಬೇಕಾದಾಗಲೆಲ್ಲ ಲ್ಯಾಟಿನ್ ಇಲ್ಲವೇ ಗ್ರೀಕ್ ಭಾಷೆಗೆ ಮರೆ ಹೊಗುವ ಕ್ರಮ ರೂಢಿಯಲ್ಲಿತ್ತೆಂಬುದನ್ನು ಇಲ್ಲಿ ಗಮನಿಸ ಬಹುದು.) ಪಾರಿಭಾಷಿಕ ಪದಗಳಿಗೆ ಅವುಗಳ ಒಳರಚನೆಯಿಂದಲೇನೇ ನೇರ ವಾಗಿ ಅರ್ಥ ಸಿಗುವಂತಿದ್ದರೆ ಒಳ್ಳೆಯದೆಂಬ ಅನಿಸಿಕೆಯೇ ಹೀಗೆ ಮಾಡಲು ಒಂದು ಕಾರಣವಿರಬೇಕು.
ಸುಮಾರು ಎರಡು ಸಾವಿರ ವರ್ಷಗಳಷ್ಟು ದೀರ್ಘವಾದ ಅವಧಿಯಲ್ಲಿ ಸಂಸ್ಕೃತ ಭಾಷೆ ಮಾತಿನ ಬಳಕೆಯ ಆಧಾರ ತಪ್ಪಿಹೋಗಿ ಬರಿಯ ಬರಹದ ಬಳಕೆಯ ಆಧಾರದ ಮೇಲೆ ಮತ್ತು ವಿದ್ವಾಂಸರು ರಚಿಸಿದ ವ್ಯಾಕರಣ ನಿಯಮ ಗಳ ಆಧಾರದ ಮೇಲೆ ಮಾತ್ರವೇ ನಿಲ್ಲಬೇಕಾಗಿ ಬಂದಿದೆ. ಈ ಕಾರಣಕ್ಕಾಗಿ ಈ ಭಾಷೆ ಹರಿವು ನಿಂತ ನೀರಿನ ಹಾಗೆ ಜಡವಾಗಿದೆ ಮತ್ತು ತನ್ನ ಜೀವಂತಿಕೆಯನ್ನು ಬಹಳ ಮಟ್ಟಿಗೆ ಕಳೆದುಕೊಂಡಿದೆ. ಅದರ ವ್ಯಾಕರಣದ ಹಲವು ಭಾಗಗಳಲ್ಲಿ ಇದರಿಂದಾಗಿ ಕೃತಕತೆ ಎದ್ದು ಕಾಣಿಸುತ್ತದೆ. ಮೇಲೆ ವಿವರಿಸಿದಂತೆ ತಯಾರಿಕೆ ಮತ್ತು ಬಳಕೆಗಳೆಂಬ ಎರಡು ಘಟ್ಟಗಳ ನಡುವಿರುವ ವ್ಯತ್ಯಾಸ ಅದರ ನಾಮ ಪದಗಳ ಬಳಕೆಯಲ್ಲಿ ಕಾಣಿಸದಿರುವುದು ಇಂತಹ ಕೃತಕತೆಗೆ ಒಂದು ಉದಾ ಹರಣೆ.
ಕೆಲವರು ವಿದ್ವಾಂಸರು ಸಂಸ್ಕೃತದ ಈ ಕೃತಕತೆ ಆ ಭಾಷೆ ಇತರ ಇಲ್ಲಾ ಭಾಷೆಗಳಿಗಿಂತಲೂ ‘ಶ್ರೇಷ್ಠ’ವಾಗಿರುವುದರ ದ್ಯೋತಕವೆಂದು ಭ್ರಮಿಸಿದಂತಿದೆ. ಉದಾಹರಣೆಗಾಗಿ ಸಂಸ್ಕೃತವನ್ನು ಇತರ ಭಾಷೆಗಳಿಗಿಂತ ಹೆಚ್ಚು ಸುಲಭವಾಗಿ ಕಂಪ್ಯೂಟರ್ನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆಯೆಂಬ ವಿಷಯವನ್ನು ಪರಿಶೀಲಿಸಬಹುದು. ಸಂಸ್ಕೃತದ ವ್ಯಾಕರಣವನ್ನು ವಿವರವಾಗಿ ಮತ್ತು ವಿಸ್ತಾರ ವಾಗಿ ವರ್ಣಿಸಲಾಗಿದೆಯೆಂಬುದು ಇದಕ್ಕೆ ಒಂದು ಕಾರಣವಾದರೆ, ಸಂಸ್ಕೃತದ ನಾಮಪದಗಳಲ್ಲಿ ಹೆಚ್ಚಿನವಕ್ಕೂ ಅವುಗಳ ಒಳರಚನೆಯ ಆಧಾರದ ಮೇಲೆ ಅರ್ಥ ಹೇಳಲು ಸಾಧ್ಯ ಎಂಬುದು ಇನ್ನೊಂದು ಕಾರಣ. ಇವುಗಳಲ್ಲಿ ಎರಡನೆ ಯದು ಆ ಭಾಷೆಯ ಶ್ರೇಷ್ಠತೆಯನ್ನು ತೋರಿಸುವ ಬದಲು ಅದರ ಜಡತ್ವವನ್ನು (ಇಲ್ಲವೇ ಜೀವಂತಿಕೆಯ ಅಭಾವವನ್ನು) ತೋರಿಸುತ್ತದೆ.
ಆ.೪ ಪ್ರತ್ಯಯವಿರುವ ಪದಗಳು
ಮೇಲೆಯೇ ಸೂಚಿಸಿರುವಂತೆ, ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಿಗೆ ಒಳರಚನೆಯಿದೆಯೇ ಅಥವಾ ಇಲ್ಲವೇ ಎಂಬುದನ್ನು, ಮತ್ತು ಇದೆಯಾದರೆ ಅದು ಎಂತಹದು ಎಂಬುದನ್ನು ಮುಖ್ಯವಾಗಿ ಈ ರೀತಿ ಎರವಲಾಗಿ ಬಂದಿರುವ ಪದಗಳ ನಡುವಿರುವ ಸಂಬಂಧವೆಂತಹದು ಎಂಬ ವಿಷಯದ ಆಧಾರದ ಮೇಲೆ ನಿರ್ಧರಿಸಬೇಕಾಗುತ್ತದೆ. ಆ ಪದಗಳಿಗೆ ಸಂಸ್ಕೃತ
ವ್ಯಾಕರಣದಲ್ಲಿ ಕೊಟ್ಟಿರುವ ಒಳರಚನೆಗಳನ್ನು ಹಾಗೆಯೇ ನೇರವಾಗಿ ಕನ್ನಡದ ವ್ಯಾಕರಣದಲ್ಲಿ ತಂದು ಸೇರಿಸುವುದು ಸುಲಭವಾದರೂ ಅದು ಸರಿಯಲ್ಲ.
ಸಂಸ್ಕೃತದಲ್ಲಿ ಹೆಚ್ಚು ಕಡಿಮೆ ಎಲ್ಲಾ ನಾಮಪದಗಳನ್ನೂ ಕ್ರಿಯಾಧಾತುಗಳಿಗೆ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ, ಇಲ್ಲವೇ ಎರಡು ಅಥವಾ ಜಾಸ್ತಿ ನಾಮಪದಗಳನ್ನು ಒಟ್ಟಿಗೆ ಸೇರಿಸಿ ಜೋಡುಪದಗಳನ್ನು ರಚಿಸುವುದರ ಮೂಲಕ ತಯಾರಿಸಲಾಗಿದೆ. ಆದರೆ ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿರುವ ನಾಮಪದಗಳಲ್ಲಿ ಹಲವು ಕನ್ನಡದ ಮಟ್ಟಿಗೆ ಒಳರಚನೆಯಿಲ್ಲದ ಪದಗಳೆಂದೇ ಹೇಳಬೇಕಾಗುತ್ತದೆ. ಅವುಗಳೊಂದಿಗೆ ಸಂಬಂಧವನ್ನು ತೋರಿಸುವ ಬೇರೆ ಸಂಸ್ಕೃತ ಪದಗಳು ಕನ್ನಡಕ್ಕೆ ಎರವಲಾಗಿ ಬಂದಿಲ್ಲವೆಂಬುದೇ ಇದಕ್ಕೆ ಕಾರಣ.
ಉದಾಹರಣೆಗಾಗಿ, ಅನ್ನ ಎಂಬ ನಾಮಪದವನ್ನು ಸಂಸ್ಕೃತದಲ್ಲಿ ‘ತಿನ್ನು’ ಎಂಬ ಅರ್ಥದಲ್ಲಿರುವ ಅದ್ ಎಂಬ ಕ್ರಿಯಾಧಾತುವಿಗೆ ಕೃತ್ಪ್ರತ್ಯಯವೊಂದನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆ. ಆದರೆ, ಕನ್ನಡಕ್ಕೆ ಈ ಅದ್ ಎಂಬ ಕ್ರಿಯಾಪದ ಸಂಸ್ಕೃತದಿಂದ ಎರವಲಾಗಿ ಬಂದಿಲ್ಲವಾದ ಕಾರಣ (೮.೫ ನೋಡಿ), ಅನ್ನ ಎಂಬುದಕ್ಕೆ ಕನ್ನಡದಲ್ಲಿ ಒಳರಚನೆಯಿಲ್ಲವೆಂದೇ ಹೇಳಬೇಕಾಗುತ್ತದೆ. ಇದೇ ರೀತಿಯಲ್ಲಿ ಕ್ಷೀ ಎಂಬ ಧಾತುವಿನಿಂದ ತಯಾರಾದ ಕ್ಷೀಣ ಎಂಬ ನಾಮ ಪದ, ನದ್ ಎಂಬ ಧಾತುವಿನಿಂದ ತಯಾರಾದ ನದಿ ಎಂಬ ನಾಮಪದ, ಮುಹ್ ಎಂಬ ಧಾತುವಿನಿಂದ ತಯಾರಾದ ಮೂಢ ಎಂಬ ನಾಮಪದ, ಶುಧ್ ಎಂಬ ಧಾತುವಿನಿಂದ ತಯಾರಾದ ಶುದ್ಧ ಎಂಬ ನಾಮಪದ, ಮೊದಲಾದವು ಗಳಿಗೂ ಕನ್ನಡದಲ್ಲಿ ಒಳರಚನೆಯಿದೆಯೆಂದು ಹೇಳಲು ಆಧಾರ ಕಾಣಿಸುವುದಿಲ್ಲ.
ಆ.೪.೧ ಪೂರ್ವಪ್ರತ್ಯಯಗಳು
ಸಂಸ್ಕೃತದಲ್ಲಿ ಪೂರ್ವಪ್ರತ್ಯಯ (ಉಪಸರ್ಗ) ಮತ್ತು ಪರಪ್ರತ್ಯಯಗಳೆಂಬ ಎರಡು ರೀತಿಯ ಪ್ರತ್ಯಯಗಳನ್ನೊಳಗೊಂಡಿರುವ ಪದಗಳಿದ್ದು, ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳಲ್ಲೂ ಈ ಎರಡು ರೀತಿಯ ಪ್ರತ್ಯಯಗಳನ್ನು ಕಾಣಬಹುದು. ಆದರೆ ಮೇಲೆ (೮.೩.೨ರಲ್ಲಿ) ಸೂಚಿಸಿರು ವಂತೆ, ಕನ್ನಡದವೇ ಆದ ಪದಗಳಲ್ಲಿ ಪೂರ್ವಪ್ರತ್ಯಯಗಳ ಬಳಕೆಯಿಲ್ಲವಾದ ಕಾರಣ, ಸಂಸ್ಕೃತದಿಂದ ಎರವಲಾಗಿ ಬಂದಿರುವ ಈ ಪದಗಳಲ್ಲೂ ಕೆಲವು ಪೂರ್ವ ಪ್ರತ್ಯಯಗಳು ಸ್ವತಂತ್ರ ಇಲ್ಲವೇ ಅಸ್ವತಂತ್ರ ಪದಗಳ ಹಾಗೆ ಬಳಕೆಗೆ ಬಂದಿವೆ, ಮತ್ತು ಅಂತಹ ಪ್ರತ್ಯಯಗಳನ್ನೊಳಗೊಂಡಿರುವ ಪದಗಳು ಜೋಡು ಪದಗಳ ಹಾಗೆ ಕಾಣಿಸುತ್ತವೆ.
ಆದರೆ ಬೇರೆ ಕೆಲವು ಪೂರ್ವಪ್ರತ್ಯಯಗಳು ಪ್ರತ್ಯಯಗಳ ಹಾಗೆಯೇ ವರ್ತಿಸುತ್ತಿದ್ದು, ಅವನ್ನೊಳಗೊಂಡಿರುವ ಪದಗಳನ್ನು ಪ್ರತ್ಯಯವಿರುವ ಪದ ಗಳೆಂದು ಹೇಳಲು ಸಾಧ್ಯವಿದೆ. ಇಂತಹ ಪೂರ್ವಪ್ರತ್ಯಯಗಳಲ್ಲಿ ಅ, ನಿರ್, ವಿ, ಸಂ ಮತ್ತು ಸು ಎಂಬವುಗಳು ಮುಖ್ಯವಾದವುಗಳು.
- (೧) ಅ ಪ್ರತ್ಯಯ
- ಈ ಪ್ರತ್ಯಯವನ್ನು ಒಂದು ನಾಮಪದದೊಂದಿಗೆ ಬಳಸಿದಾಗ, ಆ ಪದದ
- ವಿರುದ್ಧಾರ್ಥ ಸಿಗುತ್ತದೆ. ಇದಕ್ಕೆ ಸ್ವರದಲ್ಲಿ ಪ್ರಾರಂಭವಾಗುವ ಪದಗಳೆದುರು
- ಅನ್ ಎಂಬ ರೂಪವಿದೆ. ಉದಾ:
- ಅ ಎಂಬ ರೂಪದಲ್ಲಿ
- ತೃಪ್ತಿ ಅತೃಪ್ತಿ
- ಸಾಧ್ಯ ಅಸಾಧ್ಯ
- ಹಿಂಸೆ ಅಹಿಂಸೆ
- ಕಾಲ ಅಶಾಲಿ
- ಜ್ಞಾನ ಅಜ್ಞಾನ
- ನ್ಯಾಯ ಅನ್ಯಾಯ
- (೨) ನಿರ್ ಪ್ರತ್ಯಯ
- ಈ ಪೂರ್ವಪ್ರತ್ಯಯ ಮೇಲಿನದರ ಹಾಗೆ ವಿರುದ್ಧಾರ್ಥವನ್ನು ಕೊಡುವ ಬದಲು
- ನಿಷೇಧಾರ್ಥವನ್ನು ಕೊಡುತ್ತದೆ. ಉದಾ:
- ದಯೆ ನಿರ್ದಯೆ
- ಭಯ ನಿರ್ಭಯ
- ಭಾಗ್ಯ ನಿರ್ಭಾಗ್ಯ
- ಜೀವಿ ನಿರ್ಜೀವಿ
- ಆಶ್ರಿತ ನಿರಾಶ್ರಿತ
- ಉದ್ಯೋಗಿ ನಿರುದ್ಯೋಗಿ
- ಅಪರಾಧಿ ನಿರಪರಾಧಿ
- ಉಪಯುಕ್ತ ನಿರುಪಯುಕ್ತ
- (೩) ವಿ ಪ್ರತ್ಯಯ
- ಇದು ಒಂದು ಪದಕ್ಕೆ ‘ವಿಶೇಷವಾದ’ ಇಲ್ಲವೇ ‘ಹೆಚ್ಚಿನ’ ಎಂಬ ಅರ್ಥವನ್ನು
- ಕೊಡಬಲ್ಲುದು. ಉದಾ:
- ಖ್ಯಾತ ವಿಖ್ಯಾತ
- ಜಿಯ ವಿಜಯ
- ಮುಕ್ತಿ ವಿಮುಕ್ತಿ
- ನಾಶ ವಿನಾಶ
- ಜ್ಞಾನ ವಿಜ್ಞಾನ
- ವಿಧ ವಿವಿಧ
- ಲೀನ ವಿಲೀನ
- ನೂತನ ವಿನೂತನ
- ಒಂದು ಸ್ವರದಲ್ಲಿ ಪ್ರಾರಂಭವಾಗುವ ಪದಗಳೆದುರು ಇದರ ಇಕಾರ ಯಕಾರ
- ವಾಗುತ್ತದೆ. ಉದಾ:
| ಅಖ್ಯಾನ | ವ್ಯಾಖ್ಯಾನ | ಅತಿರಿಕ್ತ | ವ್ಯತಿರಿಕ್ತ |
|---|---|---|---|
| ಉತ್ಪತ್ತಿ | ವ್ಯುತ್ಪತ್ತಿ | ಆಸಂಗ | ವ್ಯಾಸಂಗ |
- (೪) ಸಂ ಪ್ರತ್ಯಯ
- ಈ ಪ್ರತ್ಯಯಕ್ಕೆ ‘ಒಳ್ಳೆಯ’ ಇಲ್ಲವೇ ‘ಶುಭಕರವಾದ’ ಎಂಬ ಅರ್ಥವಿದೆ. ಉದಾ:
- ರಕ್ಷಣೆ ಸಂರಕ್ಷಣೆ ಪೂರ್ಣ ಸಂಪೂರ್ಣ
- ಘಟನೆ ಸಂಘಟನೆ ಗೀತ ಸಂಗೀತ
- ಬಂಧ ಸಂಬಂಧ ತಾಪ ಸಂತಾಪ
- (೫) ಸು ಪ್ರತ್ಯಯ
- ಈ ಪ್ರತ್ಯಯಕ್ಕೂ ಮೇಲಿನದರ ಹಾಗೆ ‘ಒಳ್ಳೆಯ’ ಇಲ್ಲವೇ ‘ಶುಭಕರವಾದ’
- ಎಂಬ ಅರ್ಥವಿದೆ. ಉದಾ:
- ಗಂಧ ಸುರಂಧ ರಕ್ಷಿತ ಸುರಕ್ಷಿತ
- ಪ್ರಭಾತ ಸುಪ್ರಭಾತ ವರ್ಣ ಸುವರ್ಣ
- ಸ್ವಾಗತ ಸುಸ್ವಾಗತ ಜನ ಸುಜನ
- ಶಿಕ್ಷಿತ ಸುಶಿಕ್ಷಿತ ಹೃದಯ ಸುಹೃದಯ
- ಸ್ವರದಲ್ಲಿ ಪ್ರಾರಂಭವಾಗುವ ಪದಗಳೆದುರು ಈ ಪ್ರತ್ಯಯದ ಉಕಾರ ವಕಾರ
- ವಾಗುತ್ತದೆ. ಉದಾ:
- ಅಲ್ಪ ಸ್ವಲ್ಪ
- ಆಗತ ಸ್ವಾಗತ
- ಮೇಲೆ ಕೊಟ್ಟಿರುವ ಅರ್ಥಗಳು ಈ ಪೂರ್ವಪ್ರತ್ಯಯಗಳ ಬಳಕೆಯಲ್ಲಿ ಕಾಣಿಸುವ
- ಪ್ರಾಮುಖ್ಯವಾದ ಅರ್ಥಗಳು. ಕೆಲವು ಪದಗಳಲ್ಲಿ ಇವು ಯಾವ ವಿಶಿಷ್ಟವಾದ
- ಅರ್ಥವನ್ನೂ ಕೊಡುವುದಿಲ್ಲ. ಇನ್ನು ಕೆಲವು ಪದಗಳಲ್ಲಿ ಅನಿಯಮಿತವಾಗಿ ಬೇರೆ
- ಕೆಲವು ಅರ್ಥಗಳನ್ನೂ ಕೊಡಬಲ್ಲುವು ಎಂಬುದನ್ನು ಕೆಳಗಿನ ಉದಾಹರಣೆಗಳಲ್ಲಿ
- ಕಾಣಬಹುದು.
- ಆಯಾತ ನಿರ್ಯಾತ ಕ್ರಯ ವಿಕ್ರಯ
- ಜ್ಞಾನ ವಿಜ್ಞಾನ ರಸ ವಿರಸ
| ಯೋಗ | ವಿಯೋಗ | ವಾದ | ಸಂವಾದ |
|---|---|---|---|
| ಸ್ಥಾನ | ಸಂಸ್ಥಾನ | ಭಿಕ್ಷೆ | ಸುಭಿಕ್ಷೆ |
ಆ.೪.೨ ಪರಪ್ರತ್ಯಯಗಳು
ಸಂಸ್ಕೃತದಿಂದ ಎರವಲಾಗಿ ಬಂದಿರುವ ನಾಮಪದಗಳಲ್ಲಿ ಕಾಣಿಸುವ ಪರ ಪ್ರತ್ಯಯಗಳಲ್ಲಿ ತೆ, ಇ, ಯ ಮತ್ತು ಇಕ ಎಂಬವುಗಳು ಪ್ರಾಮುಖ್ಯವಾದವು ಗಳು. ಇದಲ್ಲದೆ ಲಿಂಗಭೇದವನ್ನು ಸೂಚಿಸುವ ಕೆಲವು ಪ್ರತ್ಯಯಗಳೂ ಸಂಸ್ಕೃತ ದಿಂದ ಎರವಲಾಗಿ ಬಂದ ಪದಗಳಲ್ಲಿ ಕಾಣಿಸುತ್ತವೆ. ಈ ಪ್ರತ್ಯಯಗಳಲ್ಲಿ ಕೆಲವನ್ನು (ಪ್ರಾಮುಖ್ಯವಾಗಿ ಯ ಮತ್ತು ಇಕ ಎಂಬ ಪ್ರತ್ಯಯಗಳನ್ನು) ಬಳಸಿದಾಗ ಪದಗಳಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಈ ಬದಲಾವಣೆ ಗಳನ್ನು ಕೆಳಗೆ (೮.೪.೩ರಲ್ಲಿ) ವಿವರಿಸಲಾಗಿದೆ.
(೧) ತೆ ಪ್ರತ್ಯಯ
- (೧) ತ ಪ್ರತ್ಯಯ
- ಈ ಪ್ರತ್ಯಯದ ಮೂಲಕ ನಾಮಪದಗಳು ಹೆಸರಿಸುವ ವ್ಯಕ್ತಿ, ವಸ್ತು ಮೊದಲಾ
- ದವುಗಳ ಗುಣಧರ್ಮವನ್ನು ಹೆಸರಿಸುವಂತಹ ಬೇರೊಂದು ನಾಮಪದವನ್ನು
- ತಯಾರಿಸಬಹುದು. ಉದಾ:
- ಅಧ್ಯಕ್ಷ ಅಧ್ಯಕ್ಷತೆ
- ಕೃತಜ್ಞ ಕೃತಜ್ಞತೆ
- ಅರ್ಹ ಅರ್ಹತೆ
- ಅಸ್ಪೃಶ್ಯ ಅಸ್ಪೃಶ್ಯತೆ
- ಯೋಗ್ಯ ಯೋಗ್ಯತೆ
- ತೀಕ್ಷ್ಣ ತೀಕ್ಷ್ಣತೆ
- (೨) ಇ ಪ್ರತ್ಯಯ
- ಈ ಪ್ರತ್ಯಯಕ್ಕೆ ಎರಡು ರೀತಿಯ ಬಳಕೆಗಳಿವೆಯೆಂದು (ಇಲ್ಲವೇ ಇ ಎಂಬ
- ರೂಪದಲ್ಲಿರುವ ಎರಡು ಬೇರೆ ಬೇರೆ ಪ್ರತ್ಯಯಗಳಿವೆಯೆಂದು) ಹೇಳಲು
- ಸಾಧ್ಯವಿದೆ. ಈ ಎರಡು ಬಳಕೆಗಳಲ್ಲೂ ಇದು ಅಕಾರದಲ್ಲಿ ಕೊನೆಗೊಳ್ಳುವ
- ನಾಮಪದದೊಂದಿಗೆ ಅವುಗಳ ಕೊನೆಯ ಅಕಾರಕ್ಕೆ ಬದಲಾಗಿ ಬರುತ್ತದೆ.
- ವಸ್ತು, ವಿಷಯ ಮೊದಲಾದವುಗಳನ್ನು ಹೆಸರಿಸುವ ನಾಮಪದಗಳಿಗೆ ಈ
- ಪ್ರತ್ಯಯವನ್ನು ಸೇರಿಸಿ ಅವಕ್ಕೆ ಸಂಬಂಧಿಸಿರುವ ವ್ಯಕ್ತಿಗಳನ್ನು ಹೆಸರಿಸಲು ಸಾಧ್ಯ
- ವಿದೆ. ಇದು ಈ ಪ್ರತ್ಯಯಕ್ಕಿರುವ ಮೊದಲನೆಯ ಬಳಕೆ. ಉದಾ:
- ಅಧಿಕಾರ ಅಧಿಕಾರಿ ಜೀವ ಜೀವಿ
ಆರೋಪ ಆರೋಪಿ ಧನ ಧ್ವನಿ ಅಪರಾಧ ಅಪರಾಧಿ ಪ್ರಾಣ ಪ್ರಾಣಿ ವಿರಹ ವಿರಹಿ ರೋಗ ರೋಗಿ ವ್ಯಾಪಾರ ವ್ಯಾಪಾರಿ ದಾನ ದಾನಿ
ವ್ಯಕ್ತಿಗಳನ್ನು ಗುರುತಿಸುವ ನಾಮಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ ಅಂತಹ ವ್ಯಕ್ತಿಗಳ ಗುಣಧರ್ಮವನ್ನು ಹೆಸರಿಸಲು ಸಾಧ್ಯವಿದೆ. ಇದು ಈ ಪ್ರತ್ಯಯಕ್ಕಿರುವ ಎರಡನೆಯ ಬಳಕೆ. ಉದಾ:
| ಅತೃಪ್ತ | ಅತೃಪ್ತಿ | ಭಕ್ತ | ಭಕ್ತಿ |
| ಆಸಕ್ತ | ಆಸಕ್ತಿ | ಅಶಕ್ತ | ಅಶಕ್ತಿ |
| ನಿವೃತ್ತ | ನಿವೃತ್ತಿ | ತೃಪ್ತ | ತೃಪ್ತಿ |
ಈ ಎರಡನೆಯ ಬಳಕೆಯಲ್ಲಿ ಬರುವ ನಾಮಪದಗಳಲ್ಲೆಲ್ಲ ಕೊನೆಯ ವ್ಯಂಜನವಾಗಿ ತಕಾರ ಬಂದಿರುವುದನ್ನು ಗಮನಿಸಬಹುದು. ಹಾಗಾಗಿ ಈ ನಾಮಪದಗಳಲ್ಲಿ ವ್ಯಕ್ತಿಗಳನ್ನು ಗುರುತಿಸುವವುಗಳು ತ ಎಂಬ ಪ್ರತ್ಯಯ ದೊಂದಿಗೂ ಮತ್ತು ವ್ಯಕ್ತಿಗಳ ಗುಣಧರ್ಮವನ್ನು ಗುರುತಿಸುವವುಗಳು ತಿ ಎಂಬ ಪ್ರತ್ಯಯದೊಂದಿಗೂ ಬರುವುವೆಂದೂ ಕೂಡ ಹೇಳಲು ಸಾಧ್ಯವಿದೆ. ಇದೇ ರೀತಿಯಲ್ಲಿ ಇದಕ್ಕೆ ಹಿಂದೆ ಕೊಟ್ಟಿರುವ ನಾಮಪದಗಳಲ್ಲಿ ವ್ಯಕ್ತಿ, ವಸ್ತು ಮೊದಲಾದುವನ್ನು ಗುರುತಿಸುವವುಗಳು ಅ ಎಂಬ ಪ್ರತ್ಯಯದೊಂದಿಗೂ ಮತ್ತು ಅಂತಹ ವ್ಯಕ್ತಿ, ವಸ್ತು ಮೊದಲಾದುವಕ್ಕೆ ಸಂಬಂಧಿಸಿದವರನ್ನು ಗುರುತಿಸು ವವುಗಳು ಇ ಎಂಬ ಪ್ರತ್ಯಯದೊಂದಿಗೂ ಬರುವುವೆಂದೂ ಕೂಡ ಹೇಳಲು ಸಾಧ್ಯವಿದೆ.
(೩) ಯ ಪ್ರತ್ಯಯ
ಈ ಪ್ರತ್ಯಯಕ್ಕೂ ಎರಡು ಪ್ರಾಮುಖ್ಯವಾದ ಬಳಕೆಗಳಿವೆ. ಹೆಸರಿಸುವ ನಾಮ ಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ, ಅವುಗಳಿಗೆ ಸಂಬಂಧಿಸಿರುವ ವಸ್ತು, ವಿಷಯ ಇಲ್ಲವೇ ಗುಣಧರ್ಮವನ್ನು ಹೆಸರಿಸುವ ನಾಮಪದವನ್ನು ತಯಾರಿಸು ವುದು ಈ ಪ್ರತ್ಯಯದ ಮೊದಲನೆಯ ಬಳಕೆ. ಉದಾ:
| ಕವಿ | ಕಾವ್ಯ | ವೇದ | ವೈದ್ಯ |
| ರಾಜ | ರಾಜ್ಯ | ದೇಶ | ದೇಶ್ಯ |
| ಗ್ರಾಮ | ಗ್ರಾಮ್ಯ | ಚರಿತ್ರೆ | ಚಾರಿತ್ರ್ಯ |
ಗುಣಧರ್ಮವನ್ನು ಸೂಚಿಸುವ ಗುಣಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ, ಅವು ಸೂಚಿಸುವ ಗುಣಧರ್ಮವನ್ನು ಹೆಸರಿಸುವಂತಹ ನಾಮಪದಗಳನ್ನು ತಯಾರಿಸುವುದು ಈ ಪ್ರತ್ಯಯದ ಎರಡನೆಯ ಬಳಕೆ. ಉದಾ:
| ಪ್ರಧಾನ | ಪ್ರಾಧಾನ್ಯ | ಶಿಥಿಲ | ಶೈಥಿಲ್ಯ |
| ಉಚಿತ | ಔಚಿತ್ಯ | ಸ್ವತಂತ್ರ | ಸ್ವಾತಂತ್ರ್ಯ |
| ಉನ್ನತ | ಔನ್ನತ್ಯ | ಪ್ರಮುಖ | ಪ್ರಾಮುಖ್ಯ |
| ಕ್ರೂರ | ಕ್ರೌರ್ಯ | ಸಮರ್ಥ | ಸಾಮರ್ಥ್ಯ |
ಮೇಲೆ ಕೊಟ್ಟಿರುವ ಗುಣಪದಗಳಲ್ಲಿ ಕೆಲವು (ಉದಾ: ತರುಣ, ಸಮರ್ಥ) ಕನ್ನಡದಲ್ಲಿ ನಾಮಪದಗಳಾಗಿಯೂ ಬಳಕೆಯಲ್ಲಿವೆಯಾದ ಕಾರಣ, ಅಂತಹ ಸಂದರ್ಭಗಳಲ್ಲಿ ಒಂದು ನಾಮಪದದಿಂದ ಇನ್ನೊಂದು ನಾಮಪದವನ್ನು ತಯಾರಿಸುವ ಮೊದಲನೆಯ ಬಳಕೆ ಬಂದಿದೆಯೆಂದೂ ಹೇಳಲು ಸಾಧ್ಯವಿದೆ. (ಈ ಪದಗಳನ್ನು ಎರವಲಾಗಿ ಕೊಟ್ಟಿರುವ ಸಂಸ್ಕೃತದಲ್ಲಿ ಇಂತಹ ಗುಣಪದ - ನಾಮಪದ ಭೇದವಿಲ್ಲವಾದ ಕಾರಣ ಇದು ಕನ್ನಡದಲ್ಲಿ ಕಾಣಿಸಿಕೊಳ್ಳುವ ವೈಶಿಷ್ಟ್ಯ ಮಾತ್ರ ಎಂಬುದನ್ನಿಲ್ಲಿ ಗಮನಿಸಬಹುದು).
ಕೆಲವು ಬಳಕೆಗಳಲ್ಲಿ ಈ ಪ್ರತ್ಯಯವನ್ನು ಸೇರಿಸುವುದರಿಂದ ನಾಮಪದಕ್ಕೆ ಯಾವ ಹೊಸ ಅರ್ಥವೂ ಸೇರಿಕೊಳ್ಳುವುದಿಲ್ಲ. ಉದಾ:
ಪದ ಪದ್ಯ ಪ್ರಾಂತ ಪ್ರಾಂತ್ಯ
(ಆ) ಇಕ ಪ್ರತ್ಯಯ
ಈ ಪ್ರತ್ಯಯ ಪ್ರಾಮುಖ್ಯವಾಗಿ ನಾಮಪದಗಳಿಂದ ಗುಣಪದಗಳನ್ನು ತಯಾರಿಸು ವುದಕ್ಕಾಗಿ ಕನ್ನಡದಲ್ಲಿ ಬಳಕೆಯಾಗುತ್ತದೆ. ಆದರೆ, ಕೆಲವು ನಾಮಪದಗಳು ಮಾತ್ರ ಈ ಪ್ರತ್ಯಯ ಸೇರಿದಾಗಲೂ ನಾಮಪದಗಳಾಗಿಯೇ ಉಳಿದುಕೊಳ್ಳುತ್ತವೆ. (ಸಂಸ್ಕೃತದಲ್ಲಿ ಈ ಪ್ರತ್ಯಯದ ಮೂಲಕ ತಯಾರಾಗುವ ಪದಗಳೆಲ್ಲವೂ ನಾಮ ಪದಗಳೇ ಎಂಬುದನ್ನು ಬೇರೆ ಹೇಳಬೇಕಾಗಿಲ್ಲವಷ್ಟೆ!)
ನಾಮಪದಗಳು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವುಗಳ ಗುಣಧರ್ಮ ವೊಂದನ್ನು ಅಂತಹ ನಾಮಪದಗಳಿಗೆ ಈ ಪ್ರತ್ಯಯವನ್ನು ಸೇರಿಸಿ ತಯಾರಿಸಿದ ಗುಣಪದಗಳು ಸೂಚಿಸುತ್ತವೆ. ಉದಾ:
| ಸಮಾಜ | ಸಾಮಾಜಿಕ | ಶಿಕ್ಷಣ | ಶೈಕ್ಷಣಿಕ |
|---|---|---|---|
| ಲೋಕ | ಲೌಕಿಕ | ಧರ್ಮ | ಧಾರ್ಮಿಕ |
| ನಿಸರ್ಗ | ನೈಸರ್ಗಿಕ | ವರ್ಷ | ವಾರ್ಷಿಕ |
|---|---|---|---|
| ದೇಹ | ದೈಹಿಕ | ವಿವಾಹ | |
| ವೈವಾಹಿಕ | ಯಂತ್ರ | ವ್ಯವಹಾರ | |
| ಯಾಂತ್ರಿಕ | ವ್ಯಾವಹಾರಿಕ | ||
ಕೆಲವು ಬಳಕೆಗಳಲ್ಲಿ ಈ ಪ್ರತ್ಯಯವನ್ನೊಳಗೊಂಡ ಪದಗಳು ಕನ್ನಡದಲ್ಲಿ ನಾಮಪದಗಳಾಗಿಯೂ ಬಳಕೆಯಾಗಬಲ್ಲುವು ಮತ್ತು ಗುಣಪದಗಳಾಗಿಯೂ ಬಳಕೆಯಾಗಬಲ್ಲುವು. ಉದಾ:
| ರಸ | ರಸಿಕ | ವಿಮಾನ | ವೈಮಾನಿಕ |
| ಮಂತ್ರ | ಮಾಂತ್ರಿಕ | ವೇದ | ವೈದಿಕ |
| ಧರ್ಮ | ಧಾರ್ಮಿಕ | ಪ್ರಮಾಣ | ಪ್ರಾಮಾಣಿಕ |
| ಪೂರ್ವ | ಪೂರ್ವಿಕ | ತರ್ಕ | ತಾರ್ಕಿಕ |
ವೈದಿಕನ, ವೈದಿಕನಿಗೆ ಎಂಬಂತಹ ವಿಭಕ್ತಿ ಪ್ರತ್ಯಯವನ್ನೊಳಗೊಂಡಿರುವ ರೂಪಗಳಲ್ಲಿ ವೈದಿಕ ಎಂಬ ಪದ ನಾಮಪದವಾಗಿಯೂ ಮತ್ತು ವೈದಿಕ ವೃತ್ತಿ ಎಂಬ ಪದಗುಚ್ಛದಲ್ಲಿ ಅದು ಗುಣಪದವಾಗಿಯೂ ಬಂದಿರುವುದನ್ನು ಕಾಣ ಬಹುದು. ಇತರ ಪದಗಳ ಬಳಕೆಯೂ ಹೀಗೆಯೇ ಇದೆ.
(೫) ಲಿಂಗಭೇದವನ್ನು ಸೂಚಿಸುವ ಪ್ರತ್ಯಯಗಳು
ಮೇಲೆ ವಿವರಿಸಿದ ಪ್ರತ್ಯಯಗಳು ಮಾತ್ರವಲ್ಲದೆ, ‘ಗಂಡಸು-ಹೆಂಗಸು’ ಎಂಬ ಅರ್ಥವ್ಯತ್ಯಾಸವನ್ನು ತೋರಿಸುವ ಕೆಲವು ಪದಯುಗ್ಮಗಳು ಸಂಸ್ಕೃತದಿಂದ ಕನ್ನಡಕ್ಕೆ ಎರವಲಾಗಿ ಬಂದಿದ್ದು, ಅ ‘ಗಂಡಸು’ ಮತ್ತು ಇ ‘ಹೆಂಗಸು’ ಎಂಬ ಎರಡು ಪ್ರತ್ಯಯಗಳಲ್ಲಿ ಕೊನೆಗೊಳ್ಳುವುವು ಅವುಗಳಲ್ಲಿ ಪ್ರಾಮುಖ್ಯವಾದವುಗಳು.
| ತರುಣ | ತರುಣಿ | ಬಾಲಕ | ಬಾಲಕಿ |
| ನಟ | ನಟಿ | ಶಿಕ್ಷಕ | ಶಿಕ್ಷಕಿ |
| ಲೇಖಕ | ಲೇಖಕಿ | ಸುಂದರ | ಸುಂದರಿ |
| ಸೇವಕ | ಸೇವಕಿ | ಭಿಕ್ಷುಕ | ಭಿಕ್ಷುಕಿ |
ಈ ಅರ್ಥವ್ಯತ್ಯಾಸವನ್ನು ತೋರಿಸುವ ಬೇರೆಯೂ ಕೆಲವು ಪ್ರತ್ಯಯಗಳನ್ನು ಸಂಸ್ಕೃತದಿಂದ ಎರವಲಾಗಿ ಬಂದಿರುವ ವಿದ್ಯಾರ್ಥಿ-ವಿದ್ಯಾರ್ಥಿನಿ, ಸನ್ಯಾಸಿ- ಸನ್ಯಾಸಿನಿ, ಅಧ್ಯಕ್ಷ-ಅಧ್ಯಕ್ಷಿಣಿ, ಅಧಿಕಾರಿ-ಅಧಿಕಾರಿಣಿ, ಕತೆಗಾರ-ಕತೆ
ಗಾರಿ, ಬುದ್ಧಿವಂತ-ಬುದ್ಧಿವಂತೆ, ವೈದ್ಯ-ವೈದ್ಯೆ, ಮೊದಲಾದ ಪದಯುಗ್ಮ ಗಳಲ್ಲಿ ಕಾಣಬಹುದು.
- ೪.೩ ಪದಗಳಲ್ಲಿ ಬದಲಾವಣೆ
- ನಾಮಪದ ಇಲ್ಲವೇ ಗುಣಪದಗಳಿಗೆ ಯ ಇಲ್ಲವೇ ಇಕ ಎಂಬ ಪ್ರತ್ಯಯವನ್ನು
- ಸೇರಿಸಿದಾಗ ಅವುಗಳ ಮೊದಲನೆಯ ಅಕ್ಷರದಲ್ಲಿ ಬರುವ ಸ್ವರಗಳು
- ಅನಿಯಮಿತ ವಾಗಿ ಕೆಳಗೆ ಕೊಟ್ಟಿರುವ ಮೂರು ಮುಖ್ಯವಾದ ಬದಲಾವಣೆಗಳಿಗೆ
- ಒಳಗಾಗು ತ್ತವೆ.
- (೧) ಅಕಾರ ಆಕಾರವಾಗುವುದು
- ಮೊದಲನೆಯ ಅಕ್ಷರದಲ್ಲಿರುವ ಅಕಾರ ಕೆಲವು ಪದಗಳಲ್ಲಿ ಆಕಾರವಾಗಿ
- ಬದಲಾಗುತ್ತದೆ. ಉದಾ:
- ಯ ಪ್ರತ್ಯಯ
- ಚಪಲಿ ಚಾಪಲ್ಯ
- ಸಮೇಪ ಸಾಮೀಪ್ಯ
- ಸಮ ಸಾಮ್ಯ
- ಸದೃಶ ಸಾದೃಶ್ಯ
- ಮಲಿನ ಮಾಲಿನ್ಯ
- ಇಕ ಪ್ರತ್ಯಯ
- ಮಂತ್ರ ಮಾಂತ್ರಿಕ
- ಮರ್ಮ ಮಾರ್ಮಿಕ
- ಪ್ರಕೃತಿ ಪ್ರಾಕೃತಿಕ
- ಮನಸ್ಸು ಮಾನಸಿಕ
- ಯಂತ್ರ ಯಾಂತ್ರಿಕ
- ಆದರೆ ಬೇರೆ ಕೆಲವು ಪದಗಳಲ್ಲಿ ಈ ಅಕಾರ ಬದಲಾಗದೆ ಹಾಗೆಯೇ ಉಳಿದಿರು
- ವುದನ್ನು ಕೆಳಗಿನ ಉದಾಹರಣೆಗಳಲ್ಲಿ ಕಾಣಬಹುದು.
- ಪದ ಪದ್ಯ
- ವನ ವನ್ಯ
- ರಸ ರಸಿಕ
- ಕ್ಷಣ ಕ್ಷಣಿಕ
- (೨) ಇ, ಈ ಮತ್ತು ಏ ಎಂಬ ಸ್ವರಗಳು ಐ ಎಂದಾಗುವುದು
- ನಾಮಪದ ಇಲ್ಲವೇ ಗುಣಪದಗಳ ಮೊದಲನೆಯ ಅಕ್ಷರದಲ್ಲಿ ಬರುವ ಇ, ಈ
- ಮತ್ತು ಏ ಎಂಬ ಸ್ವರಗಳು ಆ ಪದಗಳೊಂದಿಗೆ ಯ ಇಲ್ಲವೇ ಇಕ ಎಂಬ
- ಪ್ರತ್ಯಯ ಸೇರಿದಾಗ, ಅನಿಯಮಿತವಾಗಿ ಐ ಎಂಬ ಸ್ವರವಾಗಿ ಬದಲಾಗುತ್ತವೆ.
- ಉದಾ:
- ಯ ಪ್ರತ್ಯಯ
- ಶಿವ ಶೈವ
- ವಿಚಿತ್ರ ವೈಚಿತ್ರ
- ಇಕ ಪ್ರತ್ಯಯ
- ನಿಸರ್ಗ ನೈಸರ್ಗಿಕ
- ಲಿಂಗ ಲೈಂಗಿಕ
| ದೀನ | ದೈನ್ಯ | ನೀತಿ | ನೈತಿಕ |
| ಶೀತ | ಶೈತ್ಯ | ವೀಣೆ | ವೈಣಿಕ |
| ಚೇತನ | ಚೈತನ್ಯ | ದೇಹ | ದೈಹಿಕ |
| ಏಕ | ಐಕ್ಯ | ದೇವ | ದೈವಿಕ |
ಇಂತಹ ಬದಲಾವಣೆ ಎಲ್ಲಾ ಪದಗಳಲ್ಲೂ ಕಾಣಿಸುವುದಿಲ್ಲವೆಂಬುದಕ್ಕೆ ದೇಶ- ದೇಶ್ಯ, ದಿವ-ದಿವ್ಯ ಎಂಬಂತಹ ಬಳಕೆಗಳನ್ನು ಉದಾಹರಣೆಯಾಗಿ ಕೊಡ ಬಹುದು.
(೩) ಉ, ಊ ಮತ್ತು ಔ ಎಂಬ ಸ್ವರಗಳು ಔ ಎಂದಾಗುವುದು
ನಾಮಪದ ಇಲ್ಲವೇ ಗುಣಪದಗಳ ಮೊದಲನೆಯ ಅಕ್ಷರದಲ್ಲಿರುವ ಉ, ಊ ಮತ್ತು ಓ ಎಂಬ ಸ್ವರಗಳು ಆ ಪದಗಳೊಂದಿಗೆ ಯ ಇಲ್ಲವೇ ಇಕ ಎಂಬ ಪ್ರತ್ಯಯ ಸೇರಿದಾಗ ಅನಿಯಮಿತವಾಗಿ ಔ ಎಂಬ ಸ್ವರವಾಗಿ ಬದಲಾಗುತ್ತವೆ. ಉದಾ:
ಯ ಪ್ರತ್ಯಯ ಇಕ ಪ್ರತ್ಯಯ ಉದಾರ ಔದಾರ್ಯ ಪುರಾಣ ಪೌರಾಣಿಕ ಸುಖ ಸೌಖ್ಯ ಮುಖ ಮೌಖಿಕ ಮೂಲ ಮೌಲ್ಯ ಪೂರ್ವಾಹ್ನ ಪೂರ್ವಾಹ್ನಿಕ ಸೋಮ ಸೌಮ್ಯ ಲೋಕ ಲೌಕಿಕ ದೂತ ದೌತ್ಯ ದೇವ ದೈವಿಕ
ಈ ಬದಲಾವಣೆಗಳೂ ಅನಿಯಮಿತ ಎಂಬುದಕ್ಕೆ ಪೂಜೆ-ಪೂಜ್ಯ ಮತ್ತು ಪೂರ್ವ-ಪೂರ್ವಿಕ ಎಂಬವುಗಳನ್ನು ಉದಾಹರಣೆಗಳನ್ನಾಗಿ ಕೊಡಬಹುದು.
೮.೫ ಕ್ರಿಯಾಪದಗಳು
ಮೇಲೆಯೇ ಸೂಚಿಸಿರುವಂತೆ, ಸಂಸ್ಕೃತದಿಂದ ಕ್ರಿಯಾಪದಗಳು ನೇರವಾಗಿ ಕನ್ನಡಕ್ಕೆ ಎರವಲಾಗಿ ಬರುವುದಿಲ್ಲ. ಇದಕ್ಕೆ ಬದಲಾಗಿ, ಅವುಗಳಿಂದ ತಯಾರಾದ ನಾಮಪದಗಳಿಗೆ ಕನ್ನಡದ ಇಸು ಎಂಬ ಪ್ರತ್ಯಯವನ್ನು ನೇರವಾಗಿ ಸೇರಿಸಿ ಇಲ್ಲವೇ ಅವುಗಳ ಕೊನೆಯಲ್ಲಿ ಕಾಣಿಸುವ ಪ್ರತ್ಯಯದ ಬದಲು ಈ ಪ್ರತ್ಯಯ ವನ್ನು ಬಳಸಿ, ಕ್ರಿಯಾಪದಗಳನ್ನು ತಯಾರಿಸಬೇಕಾಗುತ್ತದೆ.
ಉದಾಹರಣೆಗಾಗಿ, ಅನೆ ಇಲ್ಲವೇ ಅಣೆ ಎಂಬ ಪ್ರತ್ಯಯದಲ್ಲಿ ಕೊನೆ ಗೊಳ್ಳುವ ಹಲವು ನಾಮಪದಗಳು ಆ ಪ್ರತ್ಯಯದ ಬದಲು ಇಸು ಎಂಬ ಪ್ರತ್ಯಯದಲ್ಲಿ ಕೊನೆಗೊಂಡಾಗ ನಾಮಪದಗಳಾಗಿ ಕಾಣಿಸಿಕೊಳ್ಳುತ್ತವೆ. ಉದಾ:
| ಆಲೋಚಿಸು | ಆಲೋಚನೆ | ಆಕರ್ಷಿಸು | ಆಕರ್ಷಣೆ |
| ಉತ್ಪಾದಿಸು | ಉತ್ಪಾದನೆ | ಆಚರಿಸು | ಆಚರಣೆ |
| ಕಲ್ಪಿಸು | ಕಲ್ಪನೆ | ನಿರಾಕರಿಸು | ನಿರಾಕರಣೆ |
| ಚಲಿಸು | ಚಲನೆ | ಪ್ರಕಟಿಸು | ಪ್ರಕಟಣೆ |
| ನಟಿಸು | ನಟನೆ | ಮನ್ನಿಸು | ಮನ್ನಣೆ |
| ಪ್ರಾರ್ಥಿಸು | ಪ್ರಾರ್ಥನೆ | ವಿಚಾರಿಸು | ವಿಚಾರಣೆ |
| ಭಜಿಸು | ಭಜನೆ | ಸ್ವೀಕರಿಸು | ಸ್ವೀಕರಣೆ |
| ಸಹಿಸು | ಸಹನೆ | ಸ್ಮರಿಸು | ಸ್ಮರಣೆ |
| ವರ್ಣಿಸು | ವರ್ಣನೆ | ರಕ್ಷಿಸು | ರಕ್ಷಣೆ |
ಈ ಎರಡು ರೀತಿಯ ಪ್ರತ್ಯಯಗಳಲ್ಲಿ ನಕಾರ ಎಲ್ಲಿ ಬರುತ್ತದೆ ಮತ್ತು ಣಕಾರ ಎಲ್ಲಿ ಬರುತ್ತದೆ ಎಂಬುದಕ್ಕೆ ಸಂಸ್ಕೃತದಲ್ಲಿ ನಿಶ್ಚಿತವಾದ ನಿಯಮವಿದೆ. ಆದರೆ ಈ ನಿಯಮ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಲ್ಲಿ ಅಷ್ಟೊಂದು ನಿಶ್ಚಿತವಾಗಿ ಉಳಿದಿಲ್ಲ. ಸಾಮಾನ್ಯವಾಗಿ ಪ್ರತ್ಯಯದ ಎಡಗಡೆಗೆ ರಕಾರ ಇಲ್ಲವೇ ಷಕಾರ ಬಂದಿದೆಯಾದರೆ ಪ್ರತ್ಯಯದಲ್ಲಿ ನಕಾರದ ಬದಲು ಣಕಾರ ಬರುತ್ತದೆ ಎಂಬುದಾಗಿ ಕನ್ನಡಕ್ಕೆ ಎರವಲಾಗಿ ಬಂದಿರುವ ಪದಗಳಲ್ಲಿ ಒಂದು ನಿಯಮ ಇಲ್ಲವೇ ಒಲವನ್ನು ಕಾಣಲು ಸಾಧ್ಯವಿದೆ. ಆದರೆ ಮನ್ನಣೆ ಮತ್ತು ಪ್ರಕಟಣೆ ಎಂಬವುಗಳಲ್ಲಿ ಕಾಣಿಸುವ ಣಕಾರ ಈ ನಿಯಮಕ್ಕೆ ಅಪವಾದವಾಗಬಲ್ಲುದು.
ಎರವಲಾಗಿ ಬಂದ ನಾಮಪದಗಳಿಗೆ ನೇರವಾಗಿ ಇಸು ಎಂಬ ಪ್ರತ್ಯಯವನ್ನು ಸೇರಿಸುವುದರ ಮೂಲಕ ಕ್ರಿಯಾಪದಗಳನ್ನು ತಯಾರಿಸುವಲ್ಲಿ ಎರಡು ವಿಧಾನ ಗಳಿವೆ. ಆ ಪದಗಳ ಕೊನೆಯ ಅಕ್ಷರದ ಹಿಂದಿನ ಅಕ್ಷರದಲ್ಲಿ (ಎಂದರೆ ಅವುಗಳ ಉಪಾಂತಾಕ್ಷರದಲ್ಲಿ) ಉದ್ದಸ್ವರವಿದ್ದಲ್ಲಿ ಅದನ್ನು ಗಿಡ್ಡಸ್ವರವನ್ನಾಗಿ ಮಾಡಿ ಅನಂತರ ಇಸು ಪ್ರತ್ಯಯವನ್ನು ಸೇರಿಸುವುದು ಒಂದು ವಿಧಾನ; ಮತ್ತು ಅಂತಹ ಯಾವ ಬದಲಾವಣೆಯನ್ನೂ ಮಾಡದೆ ನೇರವಾಗಿ ಇಸು ಪ್ರತ್ಯಯವನ್ನು ಸೇರಿಸು ವುದು ಇನ್ನೊಂದು ವಿಧಾನ. ಉದಾ:
| ಮೊದಲನೆಯ ವಿಧಾನ | ಎರಡನೆಯ ವಿಧಾನ | ||
|---|---|---|---|
| ಉಪಚಾರ | ಉಪಚರಿಸು | ಉಪಯೋಗ | ಉಪಯೋಗಿಸು |
| ವ್ಯವಹಾರ | ವ್ಯವಹರಿಸು | ಅನುವಾದ | ಅನುವಾದಿಸು |
| ಪರಿಣಾಮ | ಪರಿಣಮಿಸು | ಅನುಮಾನ | ಅನುಮಾನಿಸು |
| ಸಂಚಾರ | ಸಂಚರಿಸು | ಸಂತೋಷ | ಸಂತೋಷಿಸು |
| ಉಚ್ಚಾರ | ಉಚ್ಚರಿಸು | ಸನ್ಮಾನ | ಸನ್ಮಾನಿಸು |
| ನಿರ್ಧಾರ | ನಿರ್ಧರಿಸು | ವಿಭಾಗ | ವಿಭಾಗಿಸು |
| ವಿಸ್ತಾರ | ವಿಸ್ತರಿಸು | ನಿರ್ದೇಶ | ನಿರ್ದೇಶಿಸು |
| ನಾಶ | ನಶಿಸು | ವಾಸ | ವಾಸಿಸು |
| ಲಾಭ | ಲಭಿಸು | ವಾದ | ವಾದಿಸು |
ಸಂಸ್ಕೃತದಲ್ಲಿ ಕೃ ‘ಮಾಡು’ ಎಂಬ ಕ್ರಿಯಾಪದದಿಂದ ತಯಾರಾದ ಹಲವು ಪದಗಳು ಕನ್ನಡದ ನಾಮಪದಗಳಲ್ಲಿ ಕಾರ ಎಂಬುದರಲ್ಲೂ ಮತ್ತು ಕ್ರಿಯಾಪದ ಗಳಲ್ಲಿ ಕರ ಎಂಬುದರಲ್ಲೂ ಕೊನೆಗೊಳ್ಳುತ್ತವೆ. ಉದಾ:
| ಅಲಂಕಾರ | ಅಲಂಕರಿಸು | ಉಪಕಾರ | ಉಪಕರಿಸು |
| ನಮಸ್ಕಾರ | ನಮಸ್ಕರಿಸು | ಬಲಾತ್ಕಾರ | ಬಲಾತ್ಕರಿಸು |
| ಸತ್ಕಾರ | ಸತ್ಕರಿಸು | ಸ್ವೀಕಾರ | ಸ್ವೀಕರಿಸು |
ಆದರೆ, ಅನೆ ಇಲ್ಲವೇ ಅಣೆ ಎಂಬ ಪ್ರತ್ಯಯದಲ್ಲಿ ಕೊನೆಗೊಳ್ಳುವ ನಾಮ ಪದಗಳಲ್ಲಿ ಇಂತಹ ಪದಗಳೂ ಕರ ಎಂಬ ರೂಪದಲ್ಲೇ ಬರುತ್ತವೆ. ಉದಾ:
ಅನುಕರಣೆ ಅನುಕರಿಸು ನಿರಾಕರಣೆ ನಿರಾಕರಿಸು ನಿಷ್ಕ್ರಮಣ ನಿಷ್ಕ್ರಮಿಸು
ಇಸು ಎಂಬ ಪ್ರತ್ಯಯ ಸೇರಿದಾಗಲೆಲ್ಲ ನಾಮಪದಗಳ ಕೊನೆಯ ಸ್ವರ ಬಿದ್ದುಹೋಗುವುದೆಂಬುದನ್ನು ಮೇಲೆ ಕೊಟ್ಟಿರುವ ಉದಾಹರಣೆಗಳಲ್ಲಿ ಮತ್ತು ಕೆಳಗೆ ಕೊಟ್ಟಿರುವ ಬೇರೆ ಕೆಲವು ಉದಾಹರಣೆಗಳಲ್ಲಿ ಕಾಣಬಹುದು. ಈ ಸ್ವರ ಅಕಾರ, ಇಕಾರ ಇಲ್ಲವೇ ಎಕಾರವಾಗಿರಲು ಸಾಧ್ಯ.
| ಕೋಪ | ಕೋಪಿಸು | ದ್ವೇಷ | ದ್ವೇಷಿಸು |
| ಜಪ | ಜಪಿಸು | ಸ್ಪರ್ಷ | ಸ್ಪರ್ಷಿಸು |
| ಸೃಷ್ಟಿ | ಸೃಷ್ಟಿಸು | ಪ್ರೀತಿ | ಪ್ರೀತಿಸು |
| ಸ್ತುತಿ | ಸ್ತುತಿಸು | ರುಚಿ | ರುಚಿಸು |
| ಪೂಜೆ | ಪೂಜಿಸು | ಶಿಕ್ಷೆ | ಶಿಕ್ಷಿಸು |
| ಚರ್ಚೆ | ಚರ್ಚಿಸು | ಕ್ಷಮಮೆ | ಕ್ಷಮಿಸು |
೮.೬ ಜೋಡುಪದಗಳು
ಕನ್ನಡಕ್ಕೆ ಸಂಸ್ಕೃತದಿಂದ ಹಲವಾರು ಜೋಡುಪದಗಳೂ ಎರವಲಾಗಿ ಬಂದಿವೆ. ಮೇಲೆ (೮.೨)ರಲ್ಲಿ ಸೂಚಿಸಿರುವಂತೆ, ಈ ಪದಗಳ ಒಳರಚನೆಯನ್ನು ಕನ್ನಡ ದಲ್ಲಿ ಇವುಗಳ ಅಂಗಗಳಾಗಿ ಬರುವ ಪದಗಳಿಗೆ ಎಂತಹ ಬಳಕೆಗಳಿವೆ ಎಂಬುದರ ಆಧಾರದ ಮೇಲೆ ಹೇಳಬೇಕಲ್ಲದೆ, ಸಂಸ್ಕೃತ ವ್ಯಾಕರಣಗಳಲ್ಲಿ ಇವಕ್ಕೆ ಎಂತಹ ಒಳರಚನೆಯನ್ನು ಕಲ್ಪಿಸಿಕೊಡಲಾಗಿದೆ ಎಂಬುದರ ಆಧಾರದ ಮೇಲೆ ಹೇಳುವುದು ಸರಿಯಲ್ಲ.
ಈ ಕಾರಣಕ್ಕಾಗಿ ಕನ್ನಡದಲ್ಲಿ ಕಾಣಿಸುವ ಕೆಲವು ಎರವಲಾಗಿ ಬಂದ ಪದ ಗಳು ಸಂಸ್ಕೃತದಲ್ಲಿ ಜೋಡುಪದಗಳಾಗಿವೆಯಾದರೂ (ಕನ್ನಡದಲ್ಲಿ ಅವುಗಳ ಅಂಗಗಳು ಸ್ವತಂತ್ರ ಇಲ್ಲವೇ ಅಸ್ವತಂತ್ರ ಪದಗಳಾಗಿ ಬಳಕೆಯಲ್ಲಿಲ್ಲವಾದರೆ) ಅವನ್ನು ಜೋಡುಪದಗಳೆಂದು ಕರೆಯದೆ ಒಳರಚನೆಯಿಲ್ಲದ ಪದಗಳೆಂದೇ ಕರೆಯಬೇಕಾಗುತ್ತದೆ.
ಒಳರಚನೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿರುವಂತಹ ಎರವಲಾಗಿ ಬಂದ ಪದಗಳು ಕನ್ನಡದಲ್ಲಿ ಪ್ರಾಮುಖ್ಯವಾಗಿ ಎರಡು ವರ್ಗಗಳಲ್ಲಿ ಕಾಣಿಸುತ್ತವೆ. ಮೊದಲನೆಯ ಅಂಗ ನಾಮಪದವಾಗಿರುವವುಗಳು ಮತ್ತು ಮೊದಲನೆಯ ಅಂಗ ಗುಣಪದವಾಗಿರುವವುಗಳು ಎಂಬುದಾಗಿ ಮೇಲೆ (೨.೬.೫)ರಲ್ಲಿ ಕನ್ನಡದ ಜೋಡುಪದಗಳನ್ನು ಹೆಸರಿಸಿದ ಹಾಗೆಯೇ ಇವನ್ನೂ ಹೆಸರಿಸಲು ಸಾಧ್ಯವಿದೆ.
ಇವುಗಳಲ್ಲಿ ಮೊದಲನೆಯ ಅಂಗ ನಾಮಪದವಾಗಿರುವ ಜೋಡುಪದಗಳು ಅವುಗಳ ಎರಡು ಅಂಗಗಳನ್ನು ಸಂಬಂಧಕ ಪ್ರತ್ಯಯದ ಮೂಲಕ ಜೋಡಿಸಿದವು ಗಳಾಗಿರುತ್ತವೆ, ಮತ್ತು ಮೊದಲನೆಯ ಅಂಗ ಗುಣಪದವಾಗಿರುವ ಜೋಡುಪದ ಗಳು ಅಂತಹ ಗುಣಪದವನ್ನು ನಾಮಪದದ ಎಡಕ್ಕೆ ನಿಲ್ಲಿಸಿ ತಯಾರಿಸಿದವುಗಳಾ ಗಿರುತ್ತವೆ. ಉದಾ:
(೧) ಮೊದಲನೆಯ ಅಂಗ ನಾಮಪದವಾಗಿರುವ ಜೋಡುಪದಗಳು
ಮಾನಹಾನಿ ಮಾನದ ಹಾನಿ ಮೂರ್ತಿಪೂಜೆ ಮೂರ್ತಿಯ ಪೂಜೆ ಲಗ್ನಪತ್ರಿಕೆ ಲಗ್ನದ ಪತ್ರಿಕೆ ವಿದ್ಯಾಭ್ಯಾಸ ವಿದ್ಯೆಯ ಅಭ್ಯಾಸ
| ಕನ್ನಡ ಪದಗಳ ಒಳರಚನೆ | |
|---|---|
| ಯುಗಾದಿ | ಯುಗದ ಆದಿ |
| ಸೂರ್ಯಗ್ರಹಣ | ಸೂರ್ಯನ ಗ್ರಹಣ |
| ದೇಹಾವಸಾನ | ದೇಹದ ಅವಸಾನ |
| ಗ್ರಾಮದೇವತೆ | ಗ್ರಾಮದ ದೇವತೆ |
| ಪಾದಪೂಜೆ | ಪಾದದ ಪೂಜೆ |
| ಗ್ರಂಥಕರ್ತೃ | ಗ್ರಂಥದ ಕರ್ತೃ |
| ಚಂದ್ರೋದಯ | ಚಂದ್ರನ ಉದಯ |
| ಜಗದ್ಗುರು | ಜಗತ್ತಿನ ಗುರು |
(೨) ಮೊದಲನೆಯ ಅಂಗ ಗುಣಪದವಾಗಿರುವ ಜೋಡುಪದಗಳು
| ಕೃಷ್ಣಸರ್ಪ | ಗಾಢನಿದ್ರೆ |
| ಪರಮಾತ್ಮ | ದೀರ್ಘಾಯುಷ್ಯ |
| ಪರಲೋಕ | ದೃಢಮನಸ್ಸು |
| ವಕ್ರಬುದ್ಧಿ | ಪೂರ್ಣವಿರಾಮ |
| ಮೂಲವ್ಯಾಧಿ | ಮೂಲನಿವಾಸಿ |
| ಮಹಾನಗರ | ಮಂದಬುದ್ಧಿ |
| ಶುಭಕಾರ್ಯ | ಸದ್ಗುಣ |
ಈ ಜೋಡುಪದಗಳಲ್ಲಿ ಕೆಲವಕ್ಕೆ ಆದ ಎಂಬ ಕ್ರಿಯಾರೂಪವನ್ನು ಬಳಸಿ ವಿಗ್ರಹ ವಾಕ್ಯವನ್ನು ಹೇಳಲು ಸಾಧ್ಯವಿದೆ (ಉದಾ: ದೃಢವಾದ ಮನಸ್ಸು, ಗಾಢವಾದ ನಿದ್ರೆ). ಆದರೆ ಇಂತಹ ಒಳರಚನೆಯಲ್ಲೂ ಮೊದಲನೆಯ ಅಂಗವಾಗಿ ಒಂದು ಗುಣಪದವೇ ಕಾಣಿಸಿಕೊಳ್ಳುತ್ತದೆ. ಅದು ವಿಗ್ರಹವಾಕ್ಯದಲ್ಲಿ ನೇರವಾಗಿ ನಾಮಪದ ದೆದುರು ಬರುವ ಬದಲು ಆಖ್ಯಾತದ ಸ್ಥಾನದಲ್ಲಿ ಬಂದಿದೆ, ಅಷ್ಟೆ.
ಎರಡಕ್ಕಿಂತ ಜಾಸ್ತಿ ಪದಗಳಿಂದ ತಯಾರಾಗಿರುವ ಜೋಡುಪದಗಳ ಬಳಕೆ ಕನ್ನಡದಲ್ಲಿ ಬಹಳ ಅಪರೂಪ. ಆದರೆ ಸಂಸ್ಕೃತದಲ್ಲಿ ಇಂತಹ ಜೋಡುಪದ ಗಳು ಹೇರಳವಾಗಿದ್ದು, ಅವುಗಳಲ್ಲಿ ಕೆಲವು ಕನ್ನಡಕ್ಕೂ ಎರವಲಾಗಿ ಬಂದಿವೆ. ಇವು ಸಾಮಾನ್ಯವಾಗಿ ಎರಡೆರಡು ಪದಗಳನ್ನು ಸೇರಿಸುವಂತಹ ಎರಡು ಅಥವಾ ಜಾಸ್ತಿ ಸ್ತರಗಳಲ್ಲಿ ತಯಾರಾಗುತ್ತವೆ.
ಉದಾಹರಣೆಗಾಗಿ, ಅರಿಷಡ್ವರ್ಗ ಎಂಬ ಪದವನ್ನು ಪರಿಶೀಲಿಸಬಹುದು. ಮೊದಲನೆಯ ಸ್ತರದಲ್ಲಿ ಷಟ್ ‘ಆರು’ ಮತ್ತು ವರ್ಗ ‘ಗುಂಪು’ ಎಂಬೆರಡು ಪದಗಳನ್ನು ಸೇರಿಸಿ ಷಡ್ವರ್ಗ ಎಂಬ ಪದವನ್ನು ತಯಾರಿಸಿ, ಅನಂತರ ಎರಡನೆಯ ಸ್ತರದಲ್ಲಿ ಆ ಪದಕ್ಕೆ ಅರಿ ‘ಶತ್ರು’ ಎಂಬ ಪದವನ್ನು ಸೇರಿಸಿ ಈ ಪದವನ್ನು ತಯಾರಿಸಲಾಗಿದೆಯೆಂದು ಹೇಳಲು ಸಾಧ್ಯವಿದೆ.
ಇದೇ ರೀತಿಯಲ್ಲಿ ಕುಶಾಗ್ರಮತಿ ಎಂಬ ಪದವನ್ನು ಮೊದಲಿಗೆ ಕುಶಾಗ್ರ ಎಂಬ ಪದವನ್ನು ತಯಾರಿಸಿ, ಅನಂತರ ಎರಡನೆಯ ಸ್ತರದಲ್ಲಿ ಅದಕ್ಕೆ ಮತಿ ಎಂಬ ಪದವನ್ನು ಸೇರಿಸುವುದರ ಮೂಲಕ ತಯಾರಿಸಲಾಗಿದೆಯೆಂದು ಹೇಳಲು ಸಾಧ್ಯವಿದೆ.
ಅ.೭ ಸಾರಾಂಶ
ಕನ್ನಡಕ್ಕೆ ಸಂಸ್ಕೃತದಿಂದ ಎರವಲಾಗಿ ಬಂದಿರುವ ಪದಗಳನ್ನು ಕನ್ನಡದ ವ್ಯಾಕರಣಗಳಲ್ಲಿ ಸಾಮಾನ್ಯವಾಗಿ ಅವಕ್ಕೆ ಸಂಸ್ಕೃತ ವ್ಯಾಕರಣಗಳಲ್ಲಿ ಕೊಟ್ಟಿರುವ ಒಳರಚನೆಗಳನ್ನೇ ಕೊಟ್ಟು ವಿವರಿಸುವುದು ರೂಢಿ. ಆದರೆ ಇದು ಸರಿಯಲ್ಲ. ಈ ಪದಗಳಿಗೆ ಕನ್ನಡದಲ್ಲಿ ಕನ್ನಡದವೇ ಆದ ಒಳರಚನೆಗಳಿವೆ.
ಸಂಸ್ಕೃತದಲ್ಲಿ ಪೂರ್ವಪ್ರತ್ಯಯವಿರುವ ಪದಗಳು ಕನ್ನಡದಲ್ಲಿ ಜೋಡು ಪದಗಳಾಗಿ ಕಾಣಿಸಿಕೊಳ್ಳಬಹುದು, ಇಲ್ಲವೇ ಪ್ರತ್ಯಯವಿರುವವುಗಳಾಗಿ ಕಾಣಿಸಿ ಕೊಳ್ಳಬಹುದು. ಪರಪ್ರತ್ಯಯವಿರುವ ಪದಗಳನ್ನು ಸಂಸ್ಕೃತದಲ್ಲಿ ಕೃತ್ ಮತ್ತು ತದ್ದಿತ ಪ್ರತ್ಯಯವಿರುವವುಗಳೆಂದು ವಿಂಗಡಿಸುವುದು ರೂಢಿ. ಆದರೆ ಕನ್ನಡದ ಮಟ್ಟಿಗೆ ಈ ವಿಂಗಡಣೆಗಿಂತಲೂ ನಾಮಪದ ಇಲ್ಲವೇ ಗುಣಪದಕ್ಕೆ ಬೇರೆ ಬೇರೆ ರೀತಿಯ ಪ್ರತ್ಯಯಗಳನ್ನು ಸೇರಿಸಿ ನಾಮಪದವನ್ನು ತಯಾರಿಸಲಾಗಿದೆಯೇ ಅಥವಾ ಗುಣಪದವನ್ನು ತಯಾರಿಸಲಾಗಿದೆಯೇ ಎಂಬ ವಿಷಯದ ಆಧಾರದ ಮೇಲೆ ಈ ಪದಗಳನ್ನು ವರ್ಣಿಸುವುದೇ ಹೆಚ್ಚು ಉಪಯುಕ್ತವಾದ ವಿಧಾನ.
ಜೋಡುಪದಗಳನ್ನು ಸಂಸ್ಕೃತದಲ್ಲಿ ಪ್ರಾಮುಖ್ಯವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದಗಳಲ್ಲಿ ಪ್ರಧಾನ ಪದ ಯಾವುದು (ಎಂದರೆ, ಕೇಂದ್ರ ಬಿಂದು ಯಾವ ಅಂಗದ ಮೇಲೆ ಬೀಳುತ್ತದೆ) ಎಂಬ ವಿಷಯದ ಆಧಾರದ ಮೇಲೆ, ತತ್ಪುರುಷ, ಬಹುವ್ರೀಹಿ, ಅವ್ಯಯೀಭಾವ, ದ್ವಂದ್ವ ಮೊದಲಾದ ಸಮಾಸಗಳಾಗಿ ವಿಂಗಡಿಸುವುದು ರೂಢಿ. ಆದರೆ, ಕನ್ನಡಕ್ಕೆ ಎರವಲಾಗಿ ಬಂದಿರುವ ಸಂಸ್ಕೃತದ ಜೋಡುಪದಗಳನ್ನು ಈ ರೀತಿ ವಿಂಗಡಿಸುವ ಬದಲು, ಅವುಗಳ ಮೊದಲನೆಯ ಅಂಗವಾಗಿ ಬಂದಿರುವ ಪದ ನಾಮಪದವೇ ಅಥವಾ ಗುಣಪದವೇ ಎಂಬ ವಿಷಯದ ಆಧಾರದ ಮೇಲೆ ವಿಂಗಡಿಸುವುದೇ ಹೆಚ್ಚು ತೃಪ್ತಿಕರವಾದ ವಿಧಾನ.