ಶಬ್ದಮಣಿದರ್ಪಣದಲ್ಲಿ ತಳಮಟ್ಟದ ತಪ್ಪುಗಳು — Blog Series

ಲೇಖಕರು: ಡಾ. ಡಿ. ಎನ್. ಶಂಕರ ಬಟ್
ಪ್ರಕಟಣೆ: dnshankarabhat.net (May–June 2017)
ಸಂಬಂಧಿತ ಗ್ರಂಥ: 14 — ನಿಜಕ್ಕು ಹಳೆಗನ್ನಡ ವ್ಯಾಕರಣ ಎಂತಹದು?
ಸರಣಿ: 7 ಭಾಗಗಳು


ಪರಿಚಯ

ಕೇಶಿರಾಜನ 13ನೇ ಶತಮಾನದ ಶಬ್ದಮಣಿದರ್ಪಣ ವ್ಯಾಕರಣದಲ್ಲಿರುವ ಮೂಲಭೂತ ತಪ್ಪುಗಳನ್ನು ಬಟ್ ಅವರು ವಿಮರ್ಶಿಸಿ ಬರೆದ ಏಳು-ಭಾಗದ ಬ್ಲಾಗ್ ಸರಣಿ. ಸಂಸ್ಕೃತ ಚೌಕಟ್ಟಿನಲ್ಲಿ ಕನ್ನಡ ವ್ಯಾಕರಣವನ್ನು ನಿರೂಪಿಸಿದ ಶಬ್ದಮಣಿದರ್ಪಣ ಕನ್ನಡಕ್ಕೆ ಯೋಗ್ಯವಾದ ವ್ಯಾಕರಣವಲ್ಲ ಎಂಬ ಬಟ್ ಅವರ ಮೂಲ ವಾದ.


ಭಾಗ 1: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 1

ದಿನಾಂಕ: 2017-05-22
ಮೂಲ URL: http://dnshankarabhat.net/%e0%b2%b6%e0%b2%ac%e0%b3%8d%e0%b2%a6%e0%b2%ae%e0%b2%a3%e0%b2%bf%e0%b2%a6%e0%b2%b0%e2%80%8d%e0%b3%8d%e0%b2%aa%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%b3%e0%b2%ae%e0%b2%9f/


ಹಳೆಗನ್ನಡದ ಮೇಲೆ ಕೇಶಿರಾಜನು 13ನೇ ಶತಮಾನದಲ್ಲಿ ಬರೆದಿದ್ದ ಶಬ್ದಮಣಿದರ‍್ಪಣವೆಂಬ ವ್ಯಾಕರಣ ಒಂದು ಒಳ್ಳೆಯ ಕನ್ನಡ ವ್ಯಾಕರಣವೆಂಬುದಾಗಿ ನಂಬಿಕೊಂಡಿರುವವರು ಇವತ್ತಿಗೂ ಹಲವು ಮಂದಿ ಇದ್ದಾರೆ. ಆದರೆ, ಈ ನಂಬಿಕೆಗೆ ಆದಾರವೇನಿಲ್ಲ.

ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳನ್ನು ಕನ್ನಡಕ್ಕೆ ಎಶ್ಟು ಸಾದ್ಯವೋ ಅಶ್ಟರ ಮಟ್ಟಿಗೆ ಅಳವಡಿಸುವಂತಹ ಒಂದು ಪ್ರಯತ್ನವನ್ನಶ್ಟೇ ಆತ ಈ ವ್ಯಾಕರಣದಲ್ಲಿ ನಡೆಸಿದ್ದ. ಕನ್ನಡ ವ್ಯಾಕರಣ, ಅದು ಹಳೆಗನ್ನಡದ್ದಿರಲಿ, ಹೊಸಗನ್ನಡದ್ದಿರಲಿ, ಸಂಸ್ಕ್ರುತ ವ್ಯಾಕರಣಕ್ಕಿಂತ ತೀರಾ ಬೇರಾದುದು; ಹಲವು ತಳಮಟ್ಟದ ವಿಶಯಗಳಲ್ಲೇನೇ ಈ ಎರಡು ವ್ಯಾಕರಣಗಳ ಕಟ್ಟಲೆಗಳ ನಡುವೆ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನೆಲ್ಲ ಗಮನಿಸಿ, ಹಳೆಗನ್ನಡಕ್ಕೆ ಅದರದೇ ಆದ ವ್ಯಾಕರಣವೊಂದನ್ನು ಬರೆದಲ್ಲಿ ಮಾತ್ರ ಅದನ್ನೊಂದು ಒಳ್ಳೆಯ ಹಳೆಗನ್ನಡ ವ್ಯಾಕರಣವೆಂದು ಕರೆಯಲು ಬರುತ್ತದೆ.

ಹಳೆಗನ್ನಡ ವ್ಯಾಕರಣಕ್ಕೂ ಸಂಸ್ಕ್ರುತ ವ್ಯಾಕರಣಕ್ಕೂ ನಡುವೆ ಇರುವ ಇಂತಹ ತಳಮಟ್ಟದ ವ್ಯತ್ಯಾಸಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಪರಿಶೀಲಿಸಲಾಗಿದೆ, ಮತ್ತು ಇವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ‍್ಪಣ ಹೇಗೆ ಸೋತುಹೋಗಿದೆ, ಮತ್ತು ಆ ರೀತಿ ಸೋತುಹೋದುದರಿಂದಾಗಿ ಅದು ಹೇಗೆ ಒಂದು ಒಳ್ಳೆಯ ಹಳೆಗನ್ನಡ ವ್ಯಾಕರಣವಾಗಲಾರದು ಎಂಬುದನ್ನು ಕೆಳಗೆ ವಿವರಿಸಲಾಗಿದೆ:

(1) ಪದಗಳ ಬಗೆಗಳು:

ಹಳೆಗನ್ನಡದಲ್ಲಿ ಮುಕ್ಯವಾಗಿ ಮೂರು ಬಗೆಯ ಪದಗಳು ಬಳಕೆಯಾಗುತ್ತವೆ; ಇವನ್ನು ಹೆಸರುಪದ (ಕೊಳ, ಬಿಲ್, ಕೋಂಟೆ, ತುಂಬಿ), ಎಸಕಪದ (ಎಱಗು, ಮೊಱೆ, ನೋಡು, ಎನ್), ಮತ್ತು ಪರಿಚೆಪದ (ಬಡ, ಚೆನ್ನ, ಎಳ, ನಲ್, ಪೊಸ) ಎಂಬುದಾಗಿ ಇವನ್ನು ಕರೆಯಬಹುದು. ಇದಕ್ಕೆ ಬದಲು, ಸಂಸ್ಕ್ರುತದಲ್ಲಿ ಹೆಸರು(ನಾಮ)ಪದ ಮತ್ತು ಎಸಕ(ಕ್ರಿಯಾ)ಪದ ಎಂಬುದಾಗಿ ಎರಡು ಬಗೆಯ ಪದಗಳು ಮಾತ್ರ ಇವೆ.

ಹಳೆಗನ್ನಡದಲ್ಲಿ ಪರಿಚೆಪದಗಳಿಗೂ ಉಳಿದ ಎರಡು ಬಗೆಯ ಪದಗಳಿಗೂ ನಡುವಿರುವ ಮುಕ್ಯವಾದ ವ್ಯತ್ಯಾಸವೇನೆಂದರೆ, ಪರಿಚೆಪದಗಳನ್ನು ನೇರವಾಗಿ ಹೆಸರುಪದಗಳೊಂದಿಗೆ ಅವುಗಳ ವಿಶೇಶಣಗಳಾಗಿ ಬಳಸಲು ಬರುತ್ತದೆ (ಬಡ ಪಾರ‍್ವಂ, ನಲ್ಲಂಬು, ಬೆಳ್ಮುಗಿಲ್); ಆದರೆ, ಹೆಸರುಪದ ಇಲ್ಲವೇ ಎಸಕಪದಗಳನ್ನು ಆ ರೀತಿ ನೇರವಾಗಿ ಹೆಸರುಪದಗಳೊಂದಿಗೆ ಅವುಗಳ ವಿಶೇಶಣಗಳಾಗಿ ಬಳಸಲು ಬರುವುದಿಲ್ಲ; ಇದಕ್ಕಾಗಿ ಅವಕ್ಕೆ ಪತ್ತುಗೆಯ ಅ ಒಟ್ಟನ್ನು (ಪ್ರತ್ಯಯವನ್ನು) ಸೇರಿಸಬೇಕಾಗುತ್ತದೆ (ಕೊಳನ ತಡಿ, ಬಿಲ್ಲ ಗೊಲೆ, ತುಂಬಿಯ ಬಂಬಲ್ಗಳ್; ಎಱಗಿದ ತರುಗಳ್, ಮೊರೆವ ತುಂಬಿಗಳ್, ಅಱಿಯದ ಮಾತು). ಇದಲ್ಲದೆ, ಪರಿಚೆಪದಗಳನ್ನು ಹೆಸರುಪದಗಳ ಜಾಗದಲ್ಲಿ ಬಳಸಬೇಕಿದ್ದರೆ ಅವಕ್ಕೆ ಒಟ್ಟುಗಳನ್ನು ಸೇರಿಸಿ ಹೆಸರುಪದವನ್ನಾಗಿ ಮಾರ‍್ಪಡಿಸಬೇಕಾಗುತ್ತದೆ (ಬಡವನ್ ವೇಡಿದನ್, ಇನಿಯಳ್ಗೆ ಅರಿಪಿದೊಡೆ, ಪೊಸತಂ ಮಾಡಿದುದು). ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಹೆಸರುಪದ ಮತ್ತು ಎಸಕಪದಗಳಿಗೂ ಪರಿಚೆಪದಗಳಿಗೂ ನಡುವೆ ಹಳೆಗನ್ನಡದಲ್ಲಿವೆ.

ಸಂಸ್ಕ್ರುತದಲ್ಲಿ ಪರಿಚೆಪದಗಳೆಂಬ ಮೂರನೇ ಬಗೆಯ ಪದಗಳಿಲ್ಲ; ಹಳೆಗನ್ನಡದಲ್ಲಿ ಪರಿಚೆ ಪದಗಳು ಎಂತಹ ಕೆಲಸವನ್ನು ನಡೆಸಬೇಕಾಗಿದೆಯೋ ಅವನ್ನು ಸಂಸ್ಕ್ರುತದಲ್ಲಿ ಹೆಸರು(ನಾಮ)ಪದಗಳೇ ನಡೆಸುತ್ತವೆ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಹೆಸರುಪದಗಳ ವಿಶೇಶಣಗಳಾಗಿ ಹೆಸರುಪದಗಳನ್ನೇ ಬಳಸಲಾಗುತ್ತದೆ, ಮತ್ತು ಈ ಕಾರಣಕ್ಕಾಗಿ ಅವಕ್ಕೂ ವಿಬಕ್ತಿಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ (ಕೃಷ್ಣಃ ಸರ್ಪಃ, ಕೃಷ್ಣಂ ಸರ್ಪಂ, ಕೃಷ್ಣೇನ ಸರ್ಪೇಣ). ಅವೆರಡನ್ನೂ ಸಮಾಸದ ಮೂಲಕ ಒಂದೇ ಪದವನ್ನಾಗಿ ಮಾಡಲಾಗಿದೆಯಾದರೆ ಮಾತ್ರ ಈ ರೀತಿ ಎರಡು ಬಾರಿ ವಿಬಕ್ತಿ ಪ್ರತ್ಯಯಗಳನ್ನು ಬಳಸಬೇಕಾಗುವುದಿಲ್ಲ.

ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ‍್ಪಣ ಸೋತುಹೋಗಿದೆ, ಮತ್ತು ಇದರಿಂದಾಗಿ ಅದು ಹಲವಾರು ಕಡೆಗಳಲ್ಲಿ ಗೊಂದಲಕ್ಕೊಳಗಾಗಿರುವುದನ್ನು ಕಾಣಬಹುದು.

ಎತ್ತುಗೆಗಾಗಿ, ಹಳೆಗನ್ನಡದಲ್ಲಿ ಎಸಕಪದಗಳ ಪರಿಚೆರೂಪ(ಕೃದಂತ)ಗಳಿಗೂ ಹೆಸರುರೂಪ(ಕೃಲ್ಲಿಂಗ)ಗಳಿಗೂ ನಡುವೆ ವ್ಯತ್ಯಾಸವಿದೆ; ಇರ‍್ದ, ಈಯದ ಎಂಬಂತಹವು ಪರಿಚೆರೂಪಗಳು, ಮತ್ತು ಇರ‍್ದನ್, ಇರ‍್ದರ್, ಈಯದನ್, ಈಯದುದು ಎಂಬಂತಹವು ಹೆಸರುರೂಪಗಳು. ಆದರೆ, ಸಂಸ್ಕ್ರುತದಲ್ಲಿ ಇಂತಹ ವ್ಯತ್ಯಾಸವಿಲ್ಲ. ಇದನ್ನು ಗಮನಿಸಲಾಗದ ಶಬ್ದಮಣಿದರ‍್ಪಣದಲ್ಲಿ ಕೃದಂತ ಮತ್ತು ಕೃಲ್ಲಿಂಗಗಳ ಕುರಿತಾಗಿ ಕೊಡುವ ಹೇಳಿಕೆಗಳೆಲ್ಲ ಸಿಕ್ಕಲು ಸಿಕ್ಕಲಾಗಿವೆ.

ಕೊಳನ, ಮರದ, ಅರಸಿನ ಎಂಬಂತಹವು ಹಳೆಗನ್ನಡದಲ್ಲಿ ಹೆಸರುಪದಗಳ ಪರಿಚೆರೂಪಗಳಲ್ಲದೆ ವಿಬಕ್ತಿರೂಪಗಳಲ್ಲ; ಅವು ಬೇರೆ ಪರಿಚೆಪದಗಳ ಹಾಗೆ ಗುರ‍್ತ (ಲಿಂಗ) ಮತ್ತು ಎಣಿಕೆ (ವಚನ) ಒಟ್ಟುಗಳೊಂದಿಗೆ ಬಳಕೆಯಾಗಬಲ್ಲುವು (ಮನೆಯನ್ ಬಂದನ್, ರಥದನ್ ಅಶ್ವತ್ಥಾಮನ್), ಮತ್ತು ಅವುಗಳ ಹೆಸರುರೂಪಗಳ ಬಳಿಕ ಪತ್ತುಗೆ (ವಿಬಕ್ತಿ) ಒಟ್ಟುಗಳನ್ನು ಬಳಸಲು ಬರುತ್ತದೆ (ಬರ‍್ದಿನಂಗೆ ಸೆರಪು ಗೆಯ್ದರ್– ಬರ‍್ದಿನನ್+ಗೆ). ಈ ವ್ಯತ್ಯಾಸವನ್ನು ಗಮನಿಸುವಲ್ಲಿ ಶಬ್ದಮಣಿದರ‍್ಪಣ ಸೋತುಹೋಗಿದೆ.

ಸಂಸ್ಕ್ರುತದಲ್ಲಿ ಮೃತ, ಕೃತ ಎಂಬಂತಹ ಕೃದಂತಗಳು, ಕೃಷ್ಣ, ಶ್ವೇತ ಎಂಬಂತಹ ಪರಿಚೆಯನ್ನು ತಿಳಿಸಬಲ್ಲ ಹೆಸರುಪದಗಳು, ಏಕ, ದ್ವಿ, ತ್ರಿ ಎಂಬಂತಹ ಎಣಿಕೆಪದಗಳು, ಸ, ತತ್ ಎಂಬಂತಹ ತೋರುಪದ(ಸರ‍್ವನಾಮ)ಗಳು ಇವೆಲ್ಲವೂ ಹೆಸರುಪದಗಳ ಹಾಗೆ ಬಳಕೆಯಾಗುತ್ತವೆ; ಅವನ್ನು ಇನ್ನೊಂದು ಹೆಸರುಪದದೊಂದಿಗೆ ಬಳಸಬೇಕಿದ್ದಲ್ಲಿ ಹೆಸರುಪದಗಳಿಗೆ ಮಾತ್ರವಲ್ಲದೆ ಅವಕ್ಕೂ ವಚನ-ವಿಬಕ್ತಿ ಒಟ್ಟುಗಳನ್ನು ಸೇರಿಸಬೇಕಾಗುತ್ತದೆ (ಮೃತಂ ಸರ‍್ಪಂ, ಕೃಷ್ಣಂ ಸರ‍್ಪಂ, ಏಕಂ ಸರ‍್ಪಂ, ತಂ ಸರ‍್ಪಂ); ಹಾಗಾಗಿ, ಹೆಸರುಪದಗಳೊಂದಿಗೆ ಅವನ್ನು ವಚನ-ವಿಬಕ್ತಿ ಒಟ್ಟುಗಳಿಲ್ಲದೆ ಬಳಸಿದಾಗ (ಮೃತಸರ‍್ಪಂ, ಕೃಷ್ಣಸರ‍್ಪಂ, ಏಕಸರ‍್ಪಂ) ಅಂತಹ ಬಳಕೆಗಳಲ್ಲಿ ಸಮಾಸ ನಡೆದಿದೆಯೆಂದು ಹೇಳಲು ಬರುತ್ತದೆ.

ಆದರೆ, ಹಳೆಗನ್ನಡದಲ್ಲಿ ಕೃದಂತಗಳು, ಪರಿಚೆಪದಗಳು, ಎಣಿಕೆಪದಗಳು ಇಲ್ಲವೇ ತೋರುಪದಗಳು ಹೆಸರುಪದಗಳೊಂದಿಗೆ ಬರುವಾಗ ಅವಕ್ಕೆ ವಿಬಕ್ತಿ ಒಟ್ಟುಗಳನ್ನು ಸೇರಿಸಲು ಬರುವುದಿಲ್ಲ; ಅವು ನೇರವಾಗಿ ಹೆಸರುಪದಗಳೊಂದಿಗೆ ಬರುತ್ತವೆ, ಮತ್ತು ಆ ರೀತಿ ನೇರವಾಗಿ ಬರುವವುಗಳೇ ಹಳೆಗನ್ನಡದ ಪದಕಂತೆಗಳಾಗಿರುತ್ತವೆ (ಬಂದ ಬಟ್ಟೆ, ಪೊಸ ಗೊಂಚಲು, ಓರಡಿ, ಆ ಪೂಗಳ್). ಸಂಸ್ಕ್ರುತಕ್ಕೂ ಹಳೆಗನ್ನಡಕ್ಕೂ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದೆ ಶಬ್ದಮಣಿದರ‍್ಪಣ ಈ ಎಲ್ಲಾ ಪದಕಂತೆಗಳನ್ನೂ ಸಮಾಸಗಳೆಂದು ಹೇಳುವ ಮೂಲಕ ಒಂದು ದೊಡ್ಡ ಗೊಂದಲವನ್ನೇ ಉಂಟುಮಾಡಿದೆ.

ಇಂತಹ ಬೇರೆಯೂ ಹಲವು ವಿಶಯಗಳಲ್ಲಿ ಮೇಲಿನ ಪರಿಚೆಪದ-ಹೆಸರುಪದ ವ್ಯತ್ಯಾಸವನ್ನು ಗಮನಿಸದಿರುವುದರಿಂದಾಗಿ ಶಬ್ದಮಣಿದರ‍್ಪಣ ಗೊಂದಲದ ಗೂಡಾಗಿದೆ.

-

  • 0 comment

  • ಇಂಗ್ಲಿಶ್ ನುಡಿಯ ಪರಿಚೆಪದಗಳು
  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 2

Comments are closed.


ಭಾಗ 2: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 2

ದಿನಾಂಕ: 2017-05-23
ಮೂಲ URL: http://dnshankarabhat.net/%e0%b2%b6%e0%b2%ac%e0%b3%8d%e0%b2%a6%e0%b2%ae%e0%b2%a3%e0%b2%bf%e0%b2%a6%e0%b2%b0%e2%80%8d%e0%b3%8d%e0%b2%aa%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%b3%e0%b2%ae-2/


(2) ಎರಡು ಪದಗಳನ್ನು ಒಟ್ಟು ಸೇರಿಸಿ ಒಂದು ಹೊಸ ಪದವನ್ನು ಉಂಟುಮಾಡುವ ಬಗೆ:

ಹಳೆಗನ್ನಡದಲ್ಲಿ ಮೂರು ಬಗೆಯ ಪದಗಳನ್ನು ಹೆಸರು(ನಾಮ)ಪದಗಳೊಂದಿಗೆ ಸೇರಿಸಿ ಜೋಡುಪದ (ಸಮಾಸ) ಎಂಬ ಹೆಸರಿನ ಹೊಸ ಪದಗಳನ್ನು ಉಂಟುಮಾಡಲು ಬರುತ್ತದೆ:

(ಕ) ಹೆಸರುಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಬಹುದು (ಕಣ್+ನೀರ್ – ಕಣ್ಣೀರ್, ನಾಡು+ನುಡಿ – ನಾಣ್ಣುಡಿ, ಬಿಸಿಲ್+ಕುದುರೆ – ಬಿಸಿಲ್ಗುದುರೆ),

(ಚ) ಎಸಕಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಬಹುದು (ಸುಡು+ಕಾಡು – ಸುಡುಗಾಡು, ಬಿಡು+ಮುಡಿ – ಬಿಡುಮುಡಿ, ಅಡು+ಕಬ್ಬು – ಅಡುಗಬ್ಬು), ಮತ್ತು

(ಟ) ಪರಿಚೆಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಬಹುದು (ಬೆಳ್+ಉಳ್ಳಿ – ಬೆಳ್ಳುಳ್ಳಿ, ಕರ್+ಪೊನ್ – ಕರ‍್ಬೊನ್, ಕಿರು+ಕುಣಿಕೆ – ಕಿರುಕುಣಿಕೆ).

ಈ ಮೂರು ಬಗೆಯ ಜೋಡುಪದಗಳಲ್ಲೂ ಎರಡನೆಯ ಹೆಸರುಪದವೇ ಮುಕ್ಯ ಪದವಾಗಿರುತ್ತದೆ. ಹಾಗಾಗಿ, ಹಳೆಗನ್ನಡದ ಜೋಡುಪದಗಳನ್ನು ಅವುಗಳ ಮೊದಲನೆಯ ಪದ ಹೆಸರುಪದವಾಗಿದೆಯೇ, ಎಸಕಪದವಾಗಿದೆಯೇ, ಇಲ್ಲವೇ ಪರಿಚೆಪದವಾಗಿದೆಯೇ ಎಂಬ ವಿಶಯದ ಮೇಲೆ ಗುಂಪಿಸುವುದೇ ಸರಿಯಾದ ದಾರಿ.

ಮೊದಲನೆಯ ಪದ ಪರಿಚೆಪದವಾಗಿರುವ ಕೆಲವು ಜೋಡುಪದಗಳಲ್ಲಿ ಎರಡನೆಯ ಹೆಸರುಪದ ಮುಕ್ಯ ಪದವಾಗಿರುವ ಬದಲು, ಅದರಲ್ಲಿ ಬಂದಿರುವ ಎರಡು ಪದಗಳಿಗಿಂತಲೂ ಬೇರಾಗಿರುವ ಪದವೊಂದು ಮುಕ್ಯ ಪದವಾಗಿರಬಲ್ಲುದು; ಎತ್ತುಗೆಗಾಗಿ, ಕಿೞ್ಪೊಡೆ ಎಂಬ ಜೋಡುಪದದಲ್ಲಿ ಪೊಡೆ ಎಂಬುದು ಮುಕ್ಯ ಪದವಲ್ಲ; ಯಾಕೆಂದರೆ, ಅದು ಕೆಳಗಿನ ಪೊಡೆಯನ್ನು ತಿಳಿಸುವುದಿಲ್ಲ; ಇದಕ್ಕೆ ಬದಲು, ಅದು ಪೊಡೆಯ ಕೆಳಬಾಗವನ್ನು ತಿಳಿಸುತ್ತದೆ; ಹಾಗಾಗಿ, ಇಲ್ಲಿ ಜೋಡುಪದಗಳ ಎರಡು ಅಂಗಗಳಿಂದ ಬೇರಾಗಿರುವ ಬಾಗ ಎಂಬ ಪದವೇ ಮುಕ್ಯ ಪದ ಎನ್ನಲು ಬರುತ್ತದೆ. ಅಂಗಯ್, ಅಂಗಾಲ್, ಮುಂಗಯ್ ಮೊದಲಾದ ಬೇರೆ ಕೆಲವು ಜೋಡುಪದಗಳಿಗೂ ಇಂತಹದೇ ಹುರುಳು ಇರುವ ಹಾಗೆ ಕಾಣಿಸುತ್ತದೆ. ಆದರೆ, ಬೇರೆಲ್ಲಾ ಪರಿಚೆ+ಹೆಸರು ಪದಗಳಿರುವ ಜೋಡುಪದಗಳಲ್ಲಿ ಎರಡನೆಯ ಪದವೇ ಮುಕ್ಯ ಪದವಾಗಿರುತ್ತದೆ.

ಮೊದಲನೆಯ ಪದ ಹೆಸರುಪದವಾಗಿರುವ ಕಲ್ಲೆರ‍್ದೆ, ಕಿತ್ತಡಿ ಎಂಬಂತಹ ಬೇರೆ ಕೆಲವು ಜೋಡುಪದಗಳಲ್ಲೂ ಮುಕ್ಯಪದ ಅವುಗಳ ಎರಡು ಅಂಗಗಳಿಂತ ಬೇರಾದುದಾಗಿರುತ್ತದೆ. ಇಂತಹ ಕೆಲವು ಹೊರಪಡಿಕೆಗಳನ್ನು ಬದಿಗಿರಿಸಿದಲ್ಲಿ, ಹಳೆಗನ್ನಡದ ಎಲ್ಲಾ ಜೋಡುಪದಗಳನ್ನೂ ಮೇಲಿನ ಮೂರು ಮುಕ್ಯ ಗುಂಪುಗಳಲ್ಲಿ ಗುಂಪಿಸಲು ಬರುತ್ತದೆ.

ಸಂಸ್ಕ್ರುತದಲ್ಲಿ ಜೋಡುಪದಗಳನ್ನು ಸಮಸ್ತಪದ ಇಲ್ಲವೇ ಸಮಾಸ ಎಂಬುದಾಗಿ ಕರೆಯಲಾಗುತ್ತದೆ, ಮತ್ತು ಇವೆಲ್ಲವನ್ನೂ ಒಂದು ಹೆಸರುಪದದೊಂದಿಗೆ ಇನ್ನೊಂದು ಹೆಸರುಪದವನ್ನು ಜೋಡಿಸುವ ಮೂಲಕ ಉಂಟುಮಾಡಲಾಗುತ್ತದೆ; ಹಳೆಗನ್ನಡದ ಹಾಗೆ ಎಸಕಪದಗಳನ್ನು ಹೆಸರುಪದಗಳೊಂದಿಗೆ ಸೇರಿಸಿ ಜೋಡುಪದಗಳನ್ನು ಉಂಟುಮಾಡಲು ಬರುವುದಿಲ್ಲ, ಮತ್ತು ಪರಿಚೆಪದಗಳೆಂಬ ಹೆಸರುಪದಗಳಿಗಿಂತ ಬೇರಾಗಿರುವ ಪದಗಳು ಸಂಸ್ಕ್ರುತದಲ್ಲಿಲ್ಲ. ಹಾಗಾಗಿ, ಸಂಸ್ಕ್ರುತದ ಸಮಾಸಗಳನ್ನು ಗುಂಪಿಸಲು ಹಳೆಗನ್ನಡಕ್ಕಿಂತ ತೀರ ಬೇರಾಗಿರುವ ಹೊಲಬನ್ನು ಬಳಸಬೇಕಾಗುತ್ತದೆ. ಎರಡು ಹೆಸರುಪದಗಳನ್ನು ಜೋಡಿಸಿರುವಲ್ಲಿ

(ಕ) ಮೊದಲನೆಯ ಪದ ಮುಕ್ಯ ಪದವಾಗಿರಬಲ್ಲುದು (ಯಥಾಶಕ್ತಿ, ಪ್ರತಿದಿನ, ಉಪರಾಜ),

(ಚ) ಎರಡನೆಯ ಪದ ಮುಕ್ಯವಾಗಿರಬಲ್ಲುದು (ಕೃಷ್ಣಸರ‍್ಪ, ರಾಜರ‍್ಷಿ, ರಾಜೇಂದ್ರ),

(ಟ) ಎರಡು ಪದಗಳೂ ಮುಕ್ಯವಾಗಿರಬಲ್ಲುವು (ರಾಮಲಕ್ಷ್ಮಣೌ, ಮಾತಾಪಿತರೌ), ಮತ್ತು

(ತ) ಎರಡೂ ಮುಕ್ಯವಾಗಿಲ್ಲದೆ ಹೊರಗಿನದೊಂದು ಪದ ಮುಕ್ಯವಾಗಿರಬಲ್ಲುದು (ಚಕ್ರಪಾಣಿ, ದತ್ತಧನ, ಪೀತಾಂಬರ).

ಈ ವ್ಯತ್ಯಾಸದ ಮೇಲೆ, ಅದರಲ್ಲಿ ಬಳಕೆಯಾಗುವ ಜೋಡುಪದಗಳನ್ನು ಅವ್ಯಯೀಬಾವ, ತತ್ಪುರುಶ, ದ್ವಂದ್ವ, ಮತ್ತು ಬಹುವ್ರೀಹಿಗಳೆಂಬ ನಾಲ್ಕು ಗುಂಪುಗಳಲ್ಲಿ ಗುಂಪಿಸಲಾಗುತ್ತದೆ. (ಅವ್ಯಯೀಬಾವ ಸಮಾಸದಲ್ಲಿ ಮೊದಲಿಗೆ ಬರುವ ಯಥಾ, ಪ್ರತಿ, ಉಪ ಮೊದಲಾದವುಗಳನ್ನು ಅವ್ಯಯಗಳೆಂದು ಕರೆಯಲಾಗುವುದಾದರೂ, ಅವನ್ನು ಹೆಸರುಪದಗಳ ಒಂದು ಬಗೆಯೆಂದು ತಿಳಿಯಲಾಗುತ್ತದೆ).

ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವೆ ಜೋಡುಪದಗಳನ್ನು ಉಂಟುಮಾಡುವಲ್ಲಿ ಈ ರೀತಿ ತಳಮಟ್ಟದ ವ್ಯತ್ಯಾಸವಿದೆ; ಇದನ್ನು ಗಮನಿಸಲಾಗದ ಶಬ್ದಮಣಿದರ‍್ಪಣ ಸಂಸ್ಕ್ರುತದಲ್ಲಿರುವಂತಹ ಸಮಾಸಗಳನ್ನೇ ಹಳೆಗನ್ನಡದಲ್ಲೂ ಕಾಣಲು ಪ್ರಯತ್ನಿಸಿ, ತುಂಬಾ ಗೊಂದಲಗಳಿಗೊಳಗಾಗಿದೆ:

(ಕ) ಹಳೆಗನ್ನಡದ ಹೆಚ್ಚಿನ ಜೋಡುಪದಗಳಲ್ಲೂ ಎರಡನೆಯ ಪದ ಮುಕ್ಯವಾಗಿರುವುದರಿಂದ, ಅವೆಲ್ಲವನ್ನೂ ತತ್ಪುರುಶ ಎಂಬುದಾಗಿ ಕರೆಯಬೇಕಾದೀತು; ಆದರೆ, ಅಂತಹ ಹಲವು ಜೋಡುಪದಗಳಲ್ಲಿ ಮೊದಲನೆಯ ಪದ ಹೆಸರುಪದವಾಗಿರದೆ ಎಸಕಪದ ಇಲ್ಲವೇ ಪರಿಚೆಪದವಾದುದರಿಂದ, ಅವನ್ನು ತತ್ಪುರುಶ ಎನ್ನುವುದು ಹೇಗೆ? (ತತ್ಪುರುಶದಲ್ಲಿ ಎರಡು ಪದಗಳೂ ಹೆಸರುಪದಗಳಾಗಿರಬೇಕು).

(ಚ) ಎಣಿಕೆಪದಗಳೊಂದಿಗೆ ಹೆಸರುಪದಗಳನ್ನು ಬಳಸಿರುವ ಜೋಡುಪದಗಳು ಸಂಸ್ಕ್ರುತದಲ್ಲಿ ತತ್ಪುರುಶದ ಒಂದು ಅಂಗವಾಗಿದ್ದು ಅದನ್ನು ದ್ವಿಗು ಎಂದು ಕರೆಯಲಾಗಿದೆ; ಹಳೆಗನ್ನಡದಲ್ಲೂ ಇಂತಹದೇ ಜೋಡುಪದ ಬರುವುದೆಂದು ಶಬ್ದಮಣಿದರ‍್ಪಣ ಹೇಳುತ್ತದೆ; ಆದರೆ, ಹಳೆಗನ್ನಡದ ಎಣಿಕೆಪದಗಳು ಪರಿಚೆಪದಗಳ ಹಾಗೆ ಬಳಕೆಯಾಗುತ್ತವಲ್ಲದೆ ಹೆಸರುಪದಗಳ ಹಾಗೆ ಬಳಕೆಯಾಗುವುದಿಲ್ಲ.

(ಟ) ಕಿೞ್ಕೆರೆ ಎಂಬಂತಹ ಪದಗಳನ್ನು ಅವ್ಯಯೀಬಾವಕ್ಕೆ ಉದಾಹರಣೆಗಳನ್ನಾಗಿ ಕೊಡಲಾಗಿದೆ; ಆದರೆ, ಹಳೆಗನ್ನಡದಲ್ಲಿ ಕಿೞ್ ಎಂಬುದು ಅವ್ಯಯವಲ್ಲ, ಪರಿಚೆಪದ; ಈ ಕಾರಣಕ್ಕಾಗಿ, ಬಟ್ಟಾಕಳಂಕನು ಇದನ್ನು ಅಂಶ-ಅಂಶಿ ಸಂಬಂದವಿರುವ ಅಂಶಿ ಸಮಾಸ ಎಂದು ಕರೆದಿದ್ದಾನೆ; ಕಿೞ್ಕೆರೆ ಎಂಬುದಕ್ಕೆ ‘ಕೆರೆಯ ಕೆಳ ಬಾಗ’ ಎಂಬ ಹುರುಳಿದೆಯಾದರೆ ಇದು ಸರಿ; ಆದರೆ, ಇಲ್ಲಿ ಕಿೞ್ ಮತ್ತು ಕೆರೆ ಎಂಬವೆರಡೂ ಮುಕ್ಯವಾಗಿಲ್ಲ, ಬಾಗ ಎಂಬ ಬೇರೊಂದು ಪದ ಮುಕ್ಯವಾಗಿದೆ, ಮತ್ತು ಈ ಕಾರಣಕ್ಕಾಗಿ, ಅದು ಅವ್ಯಯೀಬಾವವಾಗಲಾರದು, ಬಹುವ್ರೀಹಿಯಾಗಬೇಕು. ಇದಲ್ಲದೆ, ಕಿೞ್ಕೆರೆ ಎಂಬುದಕ್ಕೆ ‘ಕೆಳಗಿನ ಕೆರೆ’ ಎಂಬ ಹುರುಳೂ ಇದೆ, ಮತ್ತು ಈ ಹುರುಳಿನಲ್ಲಿ ಅದು ಅಂಶಿಯೂ ಆಗಲಾರದು.

(ತ) ಹಳೆಗನ್ನಡದ ಕರ‍್ಬುವಿಲ್ಲಂ, ಕಡುಚಾಗಿ, ಚಲವಾದಿ ಮೊದಲಾದ ಪದಗಳನ್ನು ಬಹುವ್ರೀಹಿಗೆ ಉದಾಹರಣೆಗಳನ್ನಾಗಿ ಕೊಡಲಾಗುತ್ತದೆ; ಆದರೆ, ಇಂತಹ ಪದಗಳಲ್ಲಿ ಎರಡು ಹೆಸರುಪದಗಳು ಮಾತ್ರವಲ್ಲದೆ ಒಂದು ಗುರ‍್ತ(ಲಿಂಗ)ದ ಒಟ್ಟೂ ಸೇರಿಕೊಂಡಿರುತ್ತದೆ (ಕರ‍್ಬು+ವಿಲ್+ಅಂ), ಮತ್ತು ಇವುಗಳಲ್ಲಿ ಬರುವ ಗುರ‍್ತದ ಒಟ್ಟು ಪತ್ತುಗೆ (ವಿಬಕ್ತಿ) ಒಟ್ಟಿನಿಂದ ಬೇರಾಗಿರುತ್ತದೆ; ಹಾಗಾಗಿ, ಸಂಸ್ಕ್ರುತದ ಪೀತಾಂಬರ (ಪೀತ+ಅಂಬರ) ಪದದ ಹಾಗೆ ಇಂತಹ ಪದಗಳಲ್ಲಿ ಹೊರಗಿನ ಒಂದು ಪದ ಮುಕ್ಯ ಎಂಬುದಾಗಿ ತೋರಿಸಿಕೊಡಲು ಬರುವುದಿಲ್ಲ.

ಬೇರೆಯೂ ಹಲವು ಬಗೆಯ ಗೊಂದಲಗಳು ಶಬ್ದಮಣಿದರ‍್ಪಣ ಕೊಡುವ ಹಳೆಗನ್ನಡ ಜೋಡುಪದಗಳ ವಿವರಣೆಯಲ್ಲಿದೆ ಎಂಬುದನ್ನು ಮುಂದೆ ನೋಡಲಿರುವೆವು.

-

  • 0 comment

  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 1
  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 3

Comments are closed.


ಭಾಗ 3: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 3

ದಿನಾಂಕ: 2017-05-24
ಮೂಲ URL: http://dnshankarabhat.net/%e0%b2%b6%e0%b2%ac%e0%b3%8d%e0%b2%a6%e0%b2%ae%e0%b2%a3%e0%b2%bf%e0%b2%a6%e0%b2%b0%e2%80%8d%e0%b3%8d%e0%b2%aa%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%b3%e0%b2%ae-3/


(3) ಜೋಡುಪದಗಳು ಮತ್ತು ಪದಕಂತೆಗಳು:

ಹಳೆಗನ್ನಡದಲ್ಲಿ ಜೋಡುಪದಗಳಿಗೂ ಪದಕಂತೆಗಳಿಗೂ ನಡುವೆ ವ್ಯತ್ಯಾಸವಿದೆ; ಎರಡು ಪದಗಳು ಸೇರಿ ಹೊಸದೊಂದು ಪದವಾಗಿದೆಯಾದರೆ ಅದನ್ನೊಂದು ಜೋಡುಪದವೆಂದು ಕರೆಯಬಹುದು. ಎತ್ತುಗೆಗಾಗಿ, ಬೆಳ್ ಮತ್ತು ತಿಂಗಳ್ ಎಂಬ ಎರಡು ಪದಗಳನ್ನು ಸೇರಿಸಿ ಉಂಟುಮಾಡಿರುವ ಬೆಳ್ದಿಂಗಳ್ ಎಂಬುದು ಒಂದು ಹೊಸಪದ; ಅದು ತಿಂಗಳ ಬೆಳಕನ್ನು ತಿಳಿಸುತ್ತದಲ್ಲದೆ, ಬಿಳಿಯಾದ ತಿಂಗಳನ್ನು ತಿಳಿಸುವುದಿಲ್ಲ. ಹಾಗಾಗಿ, ಅದನ್ನೊಂದು ಜೋಡುಪದವೆಂದು ಕರೆಯಲು ಬರುತ್ತದೆ. ಆದರೆ, ಬೆಳ್ ಮತ್ತು ಮುಗಿಲ್ ಎಂಬ ಎರಡು ಪದಗಳನ್ನು ಸೇರಿಸಿ ಉಂಟುಮಾಡಿರುವ ಬೆಳ್ಮುಗಿಲ್ ಎಂಬುದು ಒಂದು ಹೆಸರುಕಂತೆಯಲ್ಲದೆ ಹೊಸಪದವಲ್ಲ; ಯಾಕೆಂದರೆ, ಅದು ಮುಗಿಲು ಎಂತಹದು ಎಂಬುದನ್ನಶ್ಟೇ ತಿಳಿಸುತ್ತದೆ.

ಇಂತಹ ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ವೇದಕಾಲದ ಸಂಸ್ಕ್ರುತದಲ್ಲಿತ್ತು; ಆದರೆ, ಕಾವ್ಯ-ಶಾಸ್ತ್ರಗಳ ಕಾಲದ ಸಂಸ್ಕ್ರುತದಲ್ಲಿ ಅದು ಹೆಚ್ಚುಕಡಿಮೆ ಅಳಿದುಹೋಗಿದೆ; ಆ ಸಮಯಕ್ಕಾಗುವಾಗ, ಬರಹದ ಸಂಸ್ಕ್ರುತಕ್ಕೂ ಆಡುನುಡಿಗಳಿಗೂ ನಡುವಿರುವ ಹೊಂದಾಣಿಕೆ ಹೆಚ್ಚುಕಡಿಮೆ ಇಲ್ಲವಾದುದೇ ಇದಕ್ಕೆ ಕಾರಣವಿರಬೇಕು; ಅಂತಹ ಹೊಂದಾಣಿಕೆಯಿದ್ದಲ್ಲಿ ಮಾತ್ರ ಒಂದು ಬರಹ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳಬಲ್ಲುದು. ಜೋಡುಪದ ಮತ್ತು ಪದಕಂತೆಗಳ ನಡುವಿನ ವ್ಯತ್ಯಾಸ ಇಲ್ಲವಾದುದರಿಂದಾಗಿ ಕಾವ್ಯಗಳ ಕಾಲದ ಸಂಸ್ಕ್ರುತದಲ್ಲಿ ಎರಡು ಇಲ್ಲವೇ ಹೆಚ್ಚು ಪದಗಳು ಒಟ್ಟಿಗೆ ಸೇರಿಕೊಂಡಿರುವಲ್ಲೆಲ್ಲ ಸಮಾಸ ನಡೆದಿದೆಯೆಂದು ಹೇಳಬೇಕಾಗುತ್ತದೆ.

ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವಿರುವ ಈ ವ್ಯತ್ಯಾಸವನ್ನು ಗಮನಿಸದ ಶಬ್ದಮಣಿದರ‍್ಪಣ ಹಳೆಗನ್ನಡದಲ್ಲಿ ಎರಡು ಪದಗಳು ಒಟ್ಟಿಗೆ ಸೇರಿರುವಲ್ಲೆಲ್ಲ ಸಮಾಸವನ್ನು ಕಾಣಲು ಹೊರಟಿದೆ. ಎಳಗೊಂಬು, ಪೇರಾನೆ, ಪೊಸನೆತ್ತರ್, ನಿಡುಗಣ್ ಮೊದಲಾದುವು ಹಳೆಗನ್ನಡದಲ್ಲಿ ನಿಜಕ್ಕೂ ಪದಕಂತೆಗಳಲ್ಲದೆ ಜೋಡುಪದಗಳಲ್ಲ. ಇದಲ್ಲದೆ, ಹಳೆಗನ್ನಡದಲ್ಲಿ ಪೊಸ, ಕಿಱಿ, ಬೆಳ್, ನಿಡು ಮೊದಲಾದವುಗಳೇ ಪರಿಚೆಪದಗಳ ಮೂಲರೂಪಗಳು; ಪೊಸತು, ಕಿಱಿಯರ್, ಕಿಱಿದು ಮೊದಲಾದುವು ಅವುಗಳ ಹೆಸರುರೂಪಗಳು. ಇವುಗಳಲ್ಲಿ ಹೆಸರುರೂಪಗಳೇ ಮೂಲರೂಪಗಳೆಂದೂ, ಪರಿಚೆರೂಪಗಳು ಸಮಾಸದಲ್ಲಿ ಬಳಕೆಯಾಗುವ ಅವುಗಳ ಅಡಕರೂಪಗಳೆಂದೂ ಹೇಳುವುದೆಂದರೆ ಹಳೆಗನ್ನಡದ ವ್ಯಾಕರಣವನ್ನು ತಿರುಚಿ ಹೇಳಿದಂತೆ.

(4) ಗುರ‍್ತಗಳ ನಡುವಿನ ವ್ಯತ್ಯಾಸ:

ಹೆಸರುಪದಗಳನ್ನು ಅವುಗಳ ಬಳಕೆಗೆ ಸಂಬಂದಿಸಿದಂತೆ ಕೆಲವು ಮುಕ್ಯ ಗುಂಪುಗಳಲ್ಲಿ ವಿಂಗಡಿಸಲು ಬರುತ್ತದೆ; ಈ ವಿಂಗಡಣೆಯನ್ನು ಸಂಸ್ಕ್ರುತದಲ್ಲಿ ಲಿಂಗ ಎಂಬುದಾಗಿ ಕರೆಯಲಾಗುತ್ತದೆ; ಇದನ್ನು ಕನ್ನಡದಲ್ಲಿ ಗುರ‍್ತ ಎಂಬುದಾಗಿ ಕರೆಯಬಹುದು. ಈ ವಿಂಗಡಣೆಯ ವಿಶಯದಲ್ಲಿ ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವೆ ತಳಮಟ್ಟದ ವ್ಯತ್ಯಾಸಗಳಿವೆ:

ಹಳೆಗನ್ನಡದಲ್ಲಿ ಹೆಸರುಪದಗಳನ್ನು ಮೂರು ಗುರ‍್ತಗಳಲ್ಲಿ ವಿಂಗಡಿಸಲು ಬರುತ್ತದೆ: ಮನುಶ್ಯರನ್ನು ಗುರುತಿಸುವ ಹೆಸರುಪದಗಳು ಗಂಡಸರನ್ನು ಗುರುತಿಸುವುದಿದ್ದಲ್ಲಿ ಅವನ್ನು ಗಂಡುಗುರ‍್ತ(ಪುಲ್ಲಿಂಗ)ವೆಂಬ ಗುಂಪಿನಲ್ಲಿ ಗುಂಪಿಸಬಹುದು, ಮತ್ತು ಹೆಂಗಸರನ್ನು ಗುರುತಿಸುವುದಿದ್ದಲ್ಲಿ ಅವನ್ನು ಹೆಣ್ಣುಗುರ‍್ತ(ಸ್ತ್ರೀಲಿಂಗ)ವೆಂಬ ಗುಂಪಿನಲ್ಲಿ ಗುಂಪಿಸಬಹುದು; ಉಳಿದ ಎಲ್ಲಾ ಹೆಸರುಪದಗಳನ್ನೂ ಉಳಿಕೆಗುರ‍್ತ(ನಪುಂಸಕಲಿಂಗ)ವೆಂಬ ಮೂರನೆಯ ಗುಂಪಿನಲ್ಲಿ ಗುಂಪಿಸಬಹುದು. ಈ ರೀತಿ ಹಳೆಗನ್ನಡದಲ್ಲಿ ಪದಗಳ ಗುಂಪಿಸುವಿಕೆ (ಎಂದರೆ ಅವುಗಳ ಲಿಂಗಬೇದ) ಅವುಗಳ ಹುರುಳನ್ನು ಮಾತ್ರ ಅವಲಂಬಿಸಿರುತ್ತದೆ.

ಕೆಲವೊಮ್ಮೆ ಮನುಶ್ಯರಲ್ಲದವರನ್ನು ಸೂಚಿಸುವ ಪದಗಳ ಮೇಲೆ ಮನುಶ್ಯತನವನ್ನು ಹೊರಿಸಲಾಗುತ್ತದೆ (ರವಿ ಮೂಡಿದಂ, ಸಿರಿಯೊಲ್ವಳು), ಮತ್ತು ಮನುಶ್ಯರನ್ನು ಸೂಚಿಸುವ ಪದಗಳ ಮೇಲೂ ಪ್ರಾಣಿತನವನ್ನು ಹೊರಿಸಲಾಗುತ್ತದೆ (ಪೆಣ್ ಬಂದುದು); ಆದರೆ, ಇಂತಹ ಕಡೆಗಳಲ್ಲೂ ಪದಗಳಿಗೆ ಕೊಟ್ಟಿರುವ ಹುರುಳೇ ಅವುಗಳ ಗುರ‍್ತ ಎಂತಹದು ಎಂಬುದನ್ನು ತಿಳಿಸುತ್ತದೆ.

ಸಂಸ್ಕ್ರುತದಲ್ಲಿಯೂ ಹೆಸರುಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ, ಮತ್ತು ನಪುಂಸಕಲಿಂಗ ಎಂಬ ಮೂರು ಗುರ‍್ತಗಳಲ್ಲಿ ಗುಂಪಿಸಲಾಗುತ್ತದೆ; ಆದರೆ, ಇದು ಹಳೆಗನ್ನಡದ ಹಾಗೆ ಪದಗಳ ಹುರುಳನ್ನು ಅವಲಂಬಿಸಿಲ್ಲ; ‘ಹೆಂಡತಿ’ ಎಂಬ ಒಂದೇ ಹುರುಳಿರುವ ದಾರ ಪದ ಪುಲ್ಲಿಂಗ, ಪತ್ನಿ ಪದ ಸ್ತ್ರೀಲಿಂಗ, ಮತ್ತು ಕಲತ್ರ ಪದ ನಪುಂಸಕಲಿಂಗ. ಮನುಶ್ಯರಲ್ಲದವನ್ನು ಗುರುತಿಸುವ ಪದಗಳೂ ಈ ಮೂರು ಗುರ‍್ತಗಳಲ್ಲಿ ಬರಬಲ್ಲುವು (ಪವನ, ಪಾದ, ವಾಯು ಮೊದಲಾದವು ಪುಲ್ಲಿಂಗ; ನೌ, ನದಿ, ವಿಭಕ್ತಿ, ಮತಿ ಮೊದಲಾದವು ಸ್ತ್ರೀಲಿಂಗ; ಮತ್ತು ಹೃದಯ, ಮಧು, ಜಗತ್ ಮೊದಲಾದವು ನಪುಂಸಕಲಿಂಗ).

ಇದಲ್ಲದೆ, ಸಂಸ್ಕ್ರುತದ ಕೆಲವು ಹೆಸರುಪದಗಳು ಯಾವಾಗಲೂ ಒಂದೇ ಗುರ‍್ತದಲ್ಲಿ ಬಳಕೆಯಾಗುತ್ತವೆಯಾದರೆ, ಇನ್ನು ಕೆಲವು ಅವುಗಳೊಂದಿಗೆ ಬರುವ ಬೇರೆ ಹೆಸರುಪದಗಳ ಗುರ‍್ತವನ್ನವಲಂಬಿಸಿ ಎರಡು ಇಲ್ಲವೇ ಮೂರು ಗುರ‍್ತಗಳಲ್ಲೂ ಬರಬಲ್ಲುವು. ಈ ರೀತಿ ಒಂದಕ್ಕಿಂತ ಹೆಚ್ಚು ಗುರ‍್ತಗಳಲ್ಲಿ ಬರಬಲ್ಲ ಹೆಸರುಪದಗಳು ಒಂದೇ ಗುರ‍್ತದಲ್ಲಿ ಬರಬಲ್ಲ ಹೆಸರುಪದಗಳೊಂದಿಗೆ ಯಾವ ಗುರ‍್ತರೂಪದಲ್ಲಿ ಬರುತ್ತವೆ ಎಂಬುದರ ಮೇಲೆ ಒಂದೇ ರೂಪದಲ್ಲಿ ಬರುವ ಹೆಸರುಪದಗಳ ಗುರ‍್ತ ಯಾವುದು ಎಂಬುದನ್ನು ತಿಳಿಯಬೇಕಾಗುತ್ತದೆ. ಎತ್ತುಗೆಗಾಗಿ, ಶುಕ್ಲ ಪದ ವರ‍್ಣ ಪದದೊಂದಿಗೆ ಪುಲ್ಲಿಂಗ ರೂಪದಲ್ಲಿ (ಶುಕ್ಲಃ ವರ‍್ಣಃ), ನೌ ಪದದೊಂದಿಗೆ ಸ್ತ್ರೀಲಿಂಗದಲ್ಲಿ (ಶುಕ್ಲಾ ನೌಃ), ಮತ್ತು ವಾಸಃ ಪದದೊಂದಿಗೆ ನಪುಂಸಕಲಿಂಗದಲ್ಲಿ (ಶುಕ್ಲಂ ವಾಸಃ) ಬರುವುದರಿಂದ ವರ‍್ಣ, ನೌ, ಮತ್ತು ವಾಸ ಪದಗಳ ಗುರ‍್ತ ಪುಂ, ಸ್ತ್ರೀ ಮತ್ತು ನಪುಂಸಕ ಎಂದು ಹೇಳಬೇಕಾಗುತ್ತದೆ.

ಸಂಸ್ಕ್ರುತದಲ್ಲಿ ಹೆಸರುಪದಗಳ ಗುರ‍್ತಗಳ ಕುರಿತಾಗಿರುವ ಕಟ್ಟಲೆಗಳು ಈ ರೀತಿ ತುಂಬಾ ಸಿಕ್ಕಲು ಸಿಕ್ಕಲಾಗಿವೆಯಾದ ಕಾರಣ, ಅದರ ಪದಕೋಶಗಳಲ್ಲಿ ಪ್ರತಿಯೊಂದು ಹೆಸರುಪದದ ಎದುರೂ ಅದು ಯಾವ ಗುರ‍್ತದಲ್ಲಿ ಇಲ್ಲವೇ ಗುರ‍್ತಗಳಲ್ಲಿ ಬರಬಲ್ಲುದು ಎಂಬುದನ್ನು ತಿಳಿಸಬೇಕಾಗುತ್ತದೆ; ಇದಕ್ಕೆ ಬದಲು, ಹಳೆಗನ್ನಡದಲ್ಲಿ ಹೆಸರುಪದಗಳ ಗುರ‍್ತ ಅವುಗಳ ಹುರುಳನ್ನವಲಂಬಿಸಿದೆಯಾದ ಕಾರಣ ಅದನ್ನು ಪದಕೋಶಗಳಲ್ಲಿ ತಿಳಿಸಬೇಕಾಗಿಲ್ಲ.

ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದೆ, ಸಂಸ್ಕ್ರುತದಂತಹದೇ ಒಂಬತ್ತು ಬಗೆಯ ಗುರ‍್ತಗಳನ್ನು ಹಳೆಗನ್ನಡದಲ್ಲೂ ಕಾಣಲು ಶಬ್ದಮಣಿದರ‍್ಪಣ ಪ್ರಯತ್ನಿಸುತ್ತದೆ; ಆದರೆ, ಹಾಗೆ ಕಾಣಲು ಬರುವುದಿಲ್ಲವಾದ ಕಾರಣ, ಈ ವಿಶಯದಲ್ಲಿ ಶಬ್ದಮಣಿದರ‍್ಪಣ ಗೊಂದಲದ ಗೂಡಾಗಿದೆ.

-

  • 0 comment

  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 2
  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 4

Comments are closed.


ಭಾಗ 4: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 4

ದಿನಾಂಕ: 2017-05-26
ಮೂಲ URL: http://dnshankarabhat.net/%e0%b2%b6%e0%b2%ac%e0%b3%8d%e0%b2%a6%e0%b2%ae%e0%b2%a3%e0%b2%bf%e0%b2%a6%e0%b2%b0%e2%80%8d%e0%b3%8d%e0%b2%aa%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%b3%e0%b2%ae-4/


(5) ಎಣಿಕೆ ಮತ್ತು ಪತ್ತುಗೆಗಳು:

ಹಳೆಗನ್ನಡದಲ್ಲಿ ಹೆಸರುಪದಗಳ ಬಳಿಕ ಎಣಿಕೆ (ವಚನ) ಮತ್ತು ಪತ್ತುಗೆ(ವಿಬಕ್ತಿ)ಗಳನ್ನು ತಿಳಿಸಲು ಎರಡು ಬೇರೆ ಬೇರೆ ಒಟ್ಟುಗಳನ್ನು ಬಳಸಲಾಗುತ್ತದೆ; ಎತ್ತುಗೆಗಾಗಿ, ಅಂಬುಗಳಿಂದೆ ಎಂಬ ಪದರೂಪದಲ್ಲಿ ಅಂಬು ಎಂಬ ಹೆಸರುಪದದ ಬಳಿಕ ಎಣಿಕೆಯನ್ನು ತಿಳಿಸಲು ಗಳ್ ಎಂಬ ಒಟ್ಟನ್ನು ಬಳಸಲಾಗಿದೆ, ಮತ್ತು ಪತ್ತುಗೆಯನ್ನು ತಿಳಿಸಲು ಇಂದೆ ಎಂಬ ಇನ್ನೊಂದು ಬೇರೆಯೇ ಒಟ್ಟನ್ನು ಬಳಸಲಾಗಿದೆ.

ಇವುಗಳಲ್ಲಿ ಎಣಿಕೆ ಒಟ್ಟು ಹೆಸರುಪದ ತಿಳಿಸುವ ವ್ಯಕ್ತಿ ಇಲ್ಲವೇ ವಸ್ತುವಿನ ಎಣಿಕೆಯನ್ನು ತಿಳಿಸುತ್ತದೆ (ಅಂಬು ಎಂದರೆ ಒಂದು ಬಾಣ, ಮತ್ತು ಅಂಬುಗಳ್ ಎಂದರೆ ಒಂದಕ್ಕಿಂತ ಹೆಚ್ಚು ಬಾಣಗಳು), ಮತ್ತು ಪತ್ತುಗೆ ಒಟ್ಟು ಆ ಹೆಸರುಪದಕ್ಕೂ ಎಸಕ(ಕ್ರಿಯಾ)ಪದಕ್ಕೂ ನಡುವಿರುವ ಸಂಬಂದವನ್ನು ತಿಳಿಸುತ್ತದೆ (ಅಂಬುಗಳಿಂದೆ ಮರುೞ್ಚಿದಂ ಎಂಬ ಸೊಲ್ಲಿನಲ್ಲಿ ಇಂದೆ ಎಂಬ ಪತ್ತುಗೆ ಒಟ್ಟು ಅಂಬು ಎಂಬ ಹೆಸರುಪದಕ್ಕೂ ಮರುೞ್ಚು ಎಂಬ ಎಸಕಪದಕ್ಕೂ ನಡುವಿರುವ ಪತ್ತುಗೆಯನ್ನು ‘ಮರುಳುಗೊಳಿಸುವ ಎಸಕಕ್ಕೆ ಅಂಬು ಒಂದು ಮುಟ್ಟು(ಕರಣ)ವಾಗಿದೆ’ ಎಂಬುದಾಗಿ ತಿಳಿಸುತ್ತದೆ).

ಎಣಿಕೆ ಮತ್ತು ಪತ್ತುಗೆಗಳನ್ನು ತಿಳಿಸುವಲ್ಲಿ ಸಂಸ್ಕ್ರುತ ಹಳೆಗನ್ನಡಕ್ಕಿಂತ ಒಂದು ಮುಕ್ಯ ವಿಶಯದಲ್ಲಿ ಬೇರಾಗಿದೆ: ಅದರ ಹೆಸರುಪದಗಳ ಬಳಿಕ ಅವುಗಳ ಎಣಿಕೆ ಮತ್ತು ಪತ್ತುಗೆಗಳನ್ನು ತಿಳಿಸಲು ಒಂದೇ ಒಟ್ಟನ್ನು ಬಳಸಲಾಗುತ್ತದೆ; ನದೀಭಿಃ ಎಂಬ ಪದರೂಪದಲ್ಲಿ ನದೀ ಎಂಬುದು ಹೆಸರುಪದ; ಅದರ ಬಳಿಕ ಭಿಃ ಎಂಬ ಒಂದು ಒಟ್ಟು ಮಾತ್ರ ಬಂದಿದ್ದು, ಅದು ಪತ್ತುಗೆ (ತ್ರುತೀಯಾ) ಮತ್ತು ಎಣಿಕೆ(ಬಹುವಚನ)ಗಳೆರಡನ್ನೂ ಒಟ್ಟಾಗಿ ತಿಳಿಸುತ್ತದೆ; ನದೀಷು ಎಂಬ ಇನ್ನೊಂದು ಪದರೂಪದಲ್ಲಿ ಷು ಎಂಬ ಬೇರೊಂದು ಒಟ್ಟನ್ನು ಬಳಸಲಾಗಿದ್ದು, ಅದು ಸಪ್ತಮೀ ವಿಬಕ್ತಿ ಮತ್ತು ಬಹುವಚನಗಳೆರಡನ್ನೂ ಒಟ್ಟಾಗಿ ತಿಳಿಸುತ್ತದೆ. ಹಳೆಗನ್ನಡದ ಹಾಗೆ ಇಲ್ಲಿ ಎಣಿಕೆ ಮತ್ತು ಪತ್ತುಗೆಗಳನ್ನು ಬೇರ‍್ಪಡಿಸಿ ಎರಡು ಒಟ್ಟುಗಳಾಗಿ ತೋರಿಸಲು ಬರುವುದಿಲ್ಲ.

ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸದಿಂದಾಗಿ ಅವುಗಳ ನಡುವೆ ಬೇರೆಯೂ ಹಲವು ವ್ಯತ್ಯಾಸಗಳು ಮೂಡಿಬಂದಿವೆ:

(ಕ) ಹಳೆಗನ್ನಡದಲ್ಲಿ ಹೆಸರುಪದಗಳಿಗೂ ಎಸಕಪದಕ್ಕೂ ನಡುವಿರುವ ಸಂಬಂದ ಎಂತಹದು ಎಂಬುದು ಗೊತ್ತಾಗದಿರುವಲ್ಲಿ ಮಾತ್ರ ಪತ್ತುಗೆ ಒಟ್ಟನ್ನು ಬಳಸಿದರೆ ಸಾಕು; ಉಳಿದೆಡೆಗಳಲ್ಲಿ ಅದನ್ನು ಬಳಸದಿರಲು ಬರುತ್ತದೆ.

ಎತ್ತುಗೆಗಾಗಿ, ಎಸಕದ ಮಾಡುಗನನ್ನು ತಿಳಿಸುವ ಹೆಸರುಪದದೊಂದಿಗೆ ಯಾವ ಪತ್ತುಗೆ ಒಟ್ಟನ್ನೂ ಬಳಸಬೇಕಾಗಿಲ್ಲ; ಯಾಕೆಂದರೆ, ಎಸಕದ ಈಡು, ಜಾಗ, ಗುರಿ ಮೊದಲಾದ ಉಳಿದ ಪಾಂಗುಗಳನ್ನು ತಿಳಿಸಲು ಅಂ, ಒಳ್, ಗೆ ಮೊದಲಾದ ಪತ್ತುಗೆ ಒಟ್ಟುಗಳು ಬಳಕೆಯಲ್ಲಿದ್ದು, ಅವುಗಳಲ್ಲಿ ಒಂದೂ ಬಾರದಿರುವಲ್ಲಿ ಮಾಡುಗನನ್ನೇ ತಿಳಿಸಲಾಗಿದೆ ಎಂಬುದು ಗೊತ್ತಾಗುತ್ತದೆ.

(ಚ) ಹಳೆಗನ್ನಡದಲ್ಲಿ ‘ಒಂದಕ್ಕಿಂತ ಹೆಚ್ಚು’ ಎಂಬುದನ್ನು ತಿಳಿಸಬೇಕಾಗಿರುವಲ್ಲಿ ಮಾತ್ರ ಹಲವೆಣಿಕೆಯ ಗಳು ಇಲ್ಲವೇ ರು ಒಟ್ಟನ್ನು ಬಳಸಿದರೆ ಸಾಕು; ‘ಒಂದು’ ಎಂಬ ಹುರುಳು ಬರುವಲ್ಲಿ, ಇಲ್ಲವೇ ಎಣಿಕೆಯನ್ನು ಕಚಿತವಾಗಿ ತಿಳಿಸಬೇಕೆಂದಿಲ್ಲದಲ್ಲಿ ಎಣಿಕೆಯ ಒಟ್ಟನ್ನು ಬಳಸಬೇಕಾಗಿಲ್ಲ.

ಸಂಸ್ಕ್ರುತದಲ್ಲಿ ಎಣಿಕೆ ಮತ್ತು ಪತ್ತುಗೆಗಳನ್ನು ಒಂದೇ ಒಟ್ಟು ತಿಳಿಸುವ ಕಾರಣ, ಪತ್ತುಗೆಯನ್ನು ತಿಳಿಸಬೇಕಾಗಿಲ್ಲದಲ್ಲೂ ಎಣಿಕೆಯನ್ನು ತಿಳಿಸುವುದಕ್ಕಾಗಿ, ಮತ್ತು ಎಣಿಕೆಯನ್ನು ತಿಳಿಸಬೇಕಾಗಿಲ್ಲದಲ್ಲೂ ಪತ್ತುಗೆಯನ್ನು ತಿಳಿಸುವುದಕ್ಕಾಗಿ ಎಣಿಕೆ-ಪತ್ತುಗೆ ಒಟ್ಟನ್ನು ಬಳಸಬೇಕಾಗುತ್ತದೆ. ಹಾಗಾಗಿ, ಹೆಸರುಪದಗಳ ಎಲ್ಲಾ ಬಳಕೆಗಳಲ್ಲೂ ಅವುಗಳೊಂದಿಗೆ 21 ಎಣಿಕೆ-ಪತ್ತುಗೆ ಒಟ್ಟುಗಳಲ್ಲಿ ಒಂದನ್ನು ಬಳಸಲೇಬೇಕಾಗುತ್ತದೆ.

ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಶಬ್ದಮಣಿದರ‍್ಪಣ ಗಮನಿಸಿಲ್ಲ; ಪತ್ತುಗೆ (ವಿಬಕ್ತಿ) ಒಟ್ಟುಗಳ ಬಳಕೆ ಹಳೆಗನ್ನಡದಲ್ಲೂ ಸಂಸ್ಕ್ರುತದಲ್ಲಿರುವ ಹಾಗೆಯೇ ಇರಬಹುದು ಇಲ್ಲವೇ ಇರಬೇಕು ಎಂಬ ಅನಿಸಿಕೆಯ ಮೇಲೆ ಅದು ಹಳೆಗನ್ನಡದ ಮೇಲೆ ಕಟ್ಟಲೆಗಳನ್ನು ಹೇರುತ್ತದೆ. ಎತ್ತುಗೆಗಾಗಿ, ಹೆಸರುಪದಗಳ ಬಳಿಕ ಬರುವ ಎಣಿಕೆ ಒಟ್ಟು ಮತ್ತು ಪತ್ತುಗೆ ಒಟ್ಟು ಎಂಬ ಎರಡು ಒಟ್ಟುಗಳಲ್ಲಿ ಪತ್ತುಗೆ ಒಟ್ಟನ್ನು ಮಾತ್ರ ಪ್ರತ್ಯಯವೆಂದು ಕರೆದು, ಎಣಿಕೆ ಒಟ್ಟನ್ನು ಅದರ ಮೊದಲು ಬರುವ ‘ಆಗಮ’ವೆಂದು ಕರೆಯಲಾಗಿದೆ.

ಸಂಸ್ಕ್ರುತದಲ್ಲಿರುವ ಹಾಗೆ, ಹಳೆಗನ್ನಡದಲ್ಲೂ ಅದು ಮೊದಲನೆಯ (ಪ್ರತಮಾ) ವಿಬಕ್ತಿಯನ್ನು ಕಾಣಲು ಪ್ರಯತ್ನಿಸುತ್ತದೆ; ಎತ್ತುಗೆಗಾಗಿ, ಅರಸಂ ಎಂಬುದರ ಕೊನೆಯಲ್ಲಿ ಬರುವ o ಇಲ್ಲವೇ ಮ್ ಎಂಬುದನ್ನು ಮೊದಲನೆಯ ವಿಬಕ್ತಿಯ ಒಟ್ಟು ಎಂಬುದಾಗಿ ಹೇಳಲಾಗಿದೆ; ಆದರೆ, ಈ o ಎಂಬುದು ಅರಸಂಗೆ ಎಂಬ ಬೇರೊಂದು (ಚತುರ‍್ತೀ) ವಿಬಕ್ತಿಯ ರೂಪದಲ್ಲೂ ಬರುವುದು, ಪುಲ್, ಬಳ್ಳಿ, ಎರಲೆ ಮೊದಲಾದ ಅಕಾರವನ್ನು ಹೊರತುಪಡಿಸಿ ಬೇರೆ ತೆರೆಯುಲಿ(ಸ್ವರ)ಗಳಲ್ಲಿ ಕೊನೆಗೊಳ್ಳುವ ಪದಗಳ ಕೊನೆಯಲ್ಲಿ ಬಾರದಿರುವುದು, ಅರಸನಿಂ, ಅರಸನೊಳ್ ಎಂಬಂತಹ ಪದರೂಪಗಳಲ್ಲಿ ನಕಾರವಾಗಿ ಬರುವುದು ಮೊದಲಾದ ಹಲವಾರು ಬಿಡಿಸಲಾರದ ಸಮಸ್ಯೆಗಳಿಗೆ ಇದು ದಾರಿಮಾಡಿದೆ.

ಎಸಕದ ಈಡನ್ನು ತಿಳಿಸುವ ಅಂ ಒಟ್ಟನ್ನೂ ಮನುಶ್ಯರನ್ನು ಗುರುತಿಸುವ ಹೆಸರುಪದಗಳನ್ನು ಹೊರತುಪಡಿಸಿ ಬೇರೆ ಹೆಸರುಪದಗಳ ಬಳಿಕ ಹಳೆಗನ್ನಡದಲ್ಲಿ ಬಳಸಲೇಬೇಕೆಂದಿಲ್ಲ (ಪಾಲಂ ಕುಡಿದಂ, ಪಾಲ್ಕುಡಿದಂ; ಬಳೆಯಂ ತೊಟ್ಟಂ, ಬಳೆದೊಟ್ಟಂ); ಇಂತಹ ಸೊಲ್ಲುಗಳಲ್ಲಿ ಕುಡಿದುದು ಹಾಲನ್ನು, ಮತ್ತು ತೊಟ್ಟುದು ಬಳೆಯನ್ನು ಎಂಬ ಹುರುಳು ಅಂ ಒಟ್ಟನ್ನು ಬಳಸದಿದ್ದರೂ ಗೊತ್ತಾಗುತ್ತದೆ ಎಂಬುದೇ ಆ ರೀತಿ ಅದನ್ನು ಬಳಸದಿರುವುದಕ್ಕೆ ಕಾರಣ. ಇದನ್ನು ಗಮನಿಸದ ಶಬ್ದಮಣಿದರ‍್ಪಣ ಇಂತಹ ಕಡೆಗಳಲ್ಲಿ ಕ್ರಿಯಾಸಮಾಸ ಎಂಬ ಬೇರೊಂದು ಬಗೆಯ ಸಮಾಸವಾಗಿದೆ ಎಂಬ ವಿಚಿತ್ರವಾದ ಹೇಳಿಕೆಯನ್ನು ಕೊಡುತ್ತದೆ. ಈ ಹೇಳಿಕೆ ಅದಕ್ಕಿಂತ ಮೊದಲು ಕೊಟ್ಟಿರುವ ಸಮಾಸದ ವರ‍್ಣನೆಗೂ (ನಾಮಪದಂಗಳ್ ಅರ‍್ತದೊಳ್ ಅನುಗತಮಾಗೆ ಸಮಾಸಂ ಗಟಿಸುಗುಂ ಎಂಬುದಕ್ಕೂ) ಹೊರಪಡಿಕೆಯಾಗುತ್ತದೆ; ಯಾಕೆಂದರೆ, ಬಳೆದೊಟ್ಟಂ ಎಂಬುದರಲ್ಲಿ ಬಂದಿರುವ ಎರಡನೆಯ ಪದ (ತೊಟ್ಟಂ ಎಂಬುದು) ನಾಮಪದವಲ್ಲ.

ಇಂತಹ ಬೇರೆಯೂ ಹಲವು ಸಮಸ್ಯೆಗಳು ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದುದರಿಂದಾಗಿ ಶಬ್ದಮಣಿದರ‍್ಪಣದಲ್ಲಿ ತುಂಬಿಕೊಂಡಿವೆ.

-

  • 0 comment

  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 3
  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 5

Comments are closed.


ಭಾಗ 5: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 5

ದಿನಾಂಕ: 2017-05-27
ಮೂಲ URL: http://dnshankarabhat.net/%e0%b2%b6%e0%b2%ac%e0%b3%8d%e0%b2%a6%e0%b2%ae%e0%b2%a3%e0%b2%bf%e0%b2%a6%e0%b2%b0%e2%80%8d%e0%b3%8d%e0%b2%aa%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%b3%e0%b2%ae-5/


ಹಳೆಗನ್ನಡದಲ್ಲಿ ಅನ್ (ಅಂ) ‘ಈಡು’, ಒಳ್ ‘ಜಾಗ’, ಇನ್ ‘ಸುರು’ ಮತ್ತು ಗೆ ‘ಕೊನೆ’ ಎಂಬ ನಾಲ್ಕು ಪತ್ತುಗೆ (ವಿಬಕ್ತಿ) ಒಟ್ಟುಗಳು ಮಾತ್ರ ಬಳಕೆಯಾಗುತ್ತವೆ; ಹೆಸರುಪದಗಳಿಗೂ ಎಸಕಪದಗಳಿಗೂ ನಡುವಿರುವ ಸಂಬಂದವನ್ನು ಈ ಒಟ್ಟುಗಳು ನೇರವಾಗಿ ತಿಳಿಸುತ್ತವೆ. ಹೆಸರುಪದಗಳು ಗುರುತಿಸುವ ಪಾಂಗುಗಳ ಎಣಿಕೆಯನ್ನು ತಿಳಿಸಲು ಗಳು ಮತ್ತು ರು ಎಂಬ ಬೇರೆಯೇ ಎರಡು ಒಟ್ಟುಗಳು ಬಳಕೆಯಲ್ಲಿವೆ.

(6) ಪತ್ತುಗೆ ಒಟ್ಟುಗಳು ಮತ್ತು ಕಾರಕಗಳು:

ಇದಕ್ಕೆ ಬದಲು, ಸಂಸ್ಕ್ರುತದಲ್ಲಿ ಏಳು ವಿಬಕ್ತಿಗಳು ಮತ್ತು ಮೂರು ವಚನಗಳು ಬಳಕೆಯಾಗುತ್ತಿದ್ದು, ಇವನ್ನು ಒಟ್ಟಾಗಿ ತಿಳಿಸಲು 7×3 ಎಂದರೆ ಒಟ್ಟು 21 ಒಟ್ಟುಗಳು ಬಳಕೆಯಾಗುತ್ತವೆ. ಆದರೆ, ಈ ವಿಬಕ್ತಿ-ವಚನ ಒಟ್ಟುಗಳು ಹೆಸರುಪದ ಮತ್ತು ಎಸಕಪದಗಳ ನಡುವಿನ ಸಂಬಂದವನ್ನು ನೇರವಾಗಿ ತಿಳಿಸುವುದಿಲ್ಲ. ಇದಕ್ಕೆ ಹಲವು ಕಾರಣಗಳಿವೆ:

(ಕ) ಕೆಲವು ಒಟ್ಟುಗಳು ಒಂದಕ್ಕಿಂತ ಹೆಚ್ಚು ವಿಬಕ್ತಿ-ವಚನಗಳನ್ನು ತಿಳಿಸಬಲ್ಲುವು (ಆಸ್ಯೇಭ್ಯಃ ಎಂಬ ಪದರೂಪದಲ್ಲಿ ಬಂದಿರುವ ಭ್ಯಃ ಎಂಬುದು ಚತುರ‍್ತೀ-ಬಹುವಚನವನ್ನು ಮಾತ್ರವಲ್ಲದೆ, ಪಂಚಮೀ-ಬಹುವಚನವನ್ನೂ ತಿಳಿಸಬಲ್ಲುದು; ನದೀಭ್ಯಾಂ ಎಂಬುದರಲ್ಲಿ ಬಂದಿರುವ ಭ್ಯಾಂ ಎಂಬುದು ತ್ರುತೀಯಾ-ದ್ವಿವಚನ, ಚತುರ‍್ತೀ-ದ್ವಿವಚನ ಮತ್ತು ಪಂಚಮೀ-ದ್ವಿವಚನಗಳನ್ನು ತಿಳಿಸಬಲ್ಲದು).

(ಚ) ಶಶ್ಟೀ ವಿಬಕ್ತಿಯ ಒಟ್ಟು ಹೆಸರುಪದ-ಎಸಕಪದ ಸಂಬಂದವನ್ನು ಮಾತ್ರವಲ್ಲದೆ ಹೆಸರುಪದ-ಹೆಸರುಪದ ಸಂಬಂದವನ್ನೂ ತಿಳಿಸಬಲ್ಲುದು (ಭೀಮಸ್ಯ ಅನುಕರಿಷ್ಯಾಮಿ ಎಂಬಲ್ಲಿ ಅದು ಬೀಮನಿಗೂ ಎಸಕಕ್ಕೂ ನಡುವಿರುವ ಹೆಸರುಪದ-ಎಸಕಪದ ಸಂಬಂದವನ್ನು ತಿಳಿಸುತ್ತದೆ, ಮತ್ತು ಪಶೋಃ ಪಾದಃ ಎಂಬಲ್ಲಿ ಅದೇ ಒಟ್ಟು ಪಶುವಿಗೂ ಪಾದಕ್ಕೂ ನಡುವಿರುವ ಹೆಸರುಪದ-ಹೆಸರುಪದ ಸಂಬಂದವನ್ನು ತಿಳಿಸುತ್ತದೆ).

(ಟ) ಕೆಲವು ವಿಬಕ್ತಿ ಒಟ್ಟುಗಳ ಬಳಕೆ ಹೆಸರುಪದ-ಎಸಕಪದ ಸಂಬಂದವನ್ನು ಅವಲಂಬಿಸಿರುವ ಬದಲು ಬೇರೆ ವಿಶಯಗಳನ್ನು ಅವಲಂಬಿಸಿರುತ್ತದೆ (ಪರ‍್ವತೇ ಆಸ್ತೇ, ಪರ‍್ವತಂ ಅಧ್ಯಾಸ್ತೇ ಎಂಬ ಈ ಎರಡು ಸೊಲ್ಲುಗಳಲ್ಲೂ ಒಂದು ಪಾಂಗಿನ ಜಾಗವನ್ನು ತಿಳಿಸಲಾಗುತ್ತದೆ; ಆದರೆ, ಮೊದಲನೆಯ ಸೊಲ್ಲಿನಲ್ಲಿ ಸಪ್ತಮೀ ವಿಬಕ್ತಿ ಒಟ್ಟು ಬಂದಿದೆ ಮತ್ತು ಎರಡನೆಯದರಲ್ಲಿ, ಅಧಿ ಎಂಬ ಮುನ್ನೊಟ್ಟಿನ ಬಳಕೆಯಿಂದಾಗಿ, ದ್ವಿತೀಯಾ ವಿಬಕ್ತಿ ಒಟ್ಟು ಬಂದಿದೆ).

ಇಂತಹ ಬೇರೆಯೂ ಹಲವು ಕಾರಣಗಳಿಗಾಗಿ, ಸಂಸ್ಕ್ರುತದಲ್ಲಿ ವಿಬಕ್ತಿ ಒಟ್ಟುಗಳನ್ನು ನೇರವಾಗಿ ಹೆಸರು-ಎಸಕ ಸಂಬಂದಗಳೊಂದಿಗೆ ಹೊಂದಿಸಲು ಬರುವುದಿಲ್ಲ; ಹಾಗಾಗಿ, ಹೆಸರು-ಎಸಕ ಸಂಬಂದಗಳನ್ನು ತಿಳಿಸುವುದಕ್ಕಾಗಿ ಸಂಸ್ಕ್ರುತ ವ್ಯಾಕರಣಗಳಲ್ಲಿ ‘ಕಾರಕ’ವೆಂಬ ಬೇರೆಯೇ ಒಂದು ಕಲ್ಪಿತ ತತ್ವವನ್ನು ಬಳಸಲಾಗುತ್ತದೆ; ಕರ‍್ತ್ರು, ಕರ‍್ಮ, ಕರಣ ಮೊದಲಾದ ಇಂತಹ ಆರು ಕಾರಕಗಳನ್ನು ಕಲ್ಪಿಸಿಕೊಳ್ಳಲಾಗಿದ್ದು, ಅವುಗಳ ಮೂಲಕ ನೇರವಲ್ಲದ ಬಗೆಯಲ್ಲಿ ವಿಬಕ್ತಿ ಒಟ್ಟುಗಳನ್ನು ಹೆಸರು-ಎಸಕ ಸಂಬಂದದೊಂದಿಗೆ ಹೊಂದಿಸಬೇಕಾಗಿದೆ.

ಆದರೆ, ಹಳೆಗನ್ನಡದಲ್ಲಿ ವಿಬಕ್ತಿ ಒಟ್ಟುಗಳಿಗೂ ಈಡು, ಜಾಗ, ಸುರು ಮತ್ತು ಕೊನೆಗಳೆಂಬ ಹೆಸರು-ಎಸಕ ಸಂಬಂದಗಳಿಗೂ ನಡುವೆ ನೇರವಾದ ಹೊಂದಾಣಿಕೆಯಿದೆ; ಹಾಗಾಗಿ, ಅಂತಹ ಕಾರಕವೆಂಬ ಕಲ್ಪಿತ ತತ್ವ ಹಳೆಗನ್ನಡ ವ್ಯಾಕರಣಕ್ಕೆ ಬೇಕಾಗಿಲ್ಲ. ಇದನ್ನು ಗಮನಿಸದೆ, ಹಳೆಗನ್ನಡ ವ್ಯಾಕರಣದಲ್ಲೂ ಕಾರಕವೆಂಬ ಕಲ್ಪಿತ ತತ್ವವನ್ನು ಬಳಸಹೋಗಿ, ಹಳೆಗನ್ನಡದ ಮಟ್ಟಿಗೆ ಶಬ್ದಮಣಿದರ‍್ಪಣವೆಂಬುದು ಒಂದು ಸಿಕ್ಕಲು ಸಿಕ್ಕಲಾದ ವ್ಯಾಕರಣವಾಗಿದೆ.

ಸಂಸ್ಕ್ರುತದ ಹಾಗೆ, ಲ್ಯಾಟಿನ್, ಗ್ರೀಕ್, ಇಂಗ್ಲಿಶ್ ಮೊದಲಾದ ಬೇರೆ ಇಂಡೋ-ಯುರೋಪಿಯನ್ ನುಡಿಗಳಲ್ಲೂ ಪತ್ತುಗೆ ಒಟ್ಟುಗಳನ್ನು ನೇರವಾಗಿ ಹೆಸರು-ಎಸಕ ಸಂಬಂದಗಳೊಂದಿಗೆ ಹೊಂದಿಸಲು ಬರುವುದಿಲ್ಲ, ಮತ್ತು ಈ ಕಾರಣಕ್ಕಾಗಿ, ಆ ನುಡಿಗಳ ಸೊಲ್ಲರಿಮೆಗಳಲ್ಲೂ ಸಬ್ಜೆಕ್ಟ್, ಆಬ್ಜೆಕ್ಟ್ ಎಂಬಂತಹ ಕಲ್ಪಿತ ತತ್ವಗಳನ್ನು ಬಳಸಬೇಕಾಗಿದೆ.

ಇತ್ತೀಚೆಗಿನ ಕೆಲವು ಕನ್ನಡ ಸೊಲ್ಲರಿಮೆಗಳು ಈ ಕಲ್ಪಿತ ತತ್ವಗಳನ್ನು ಕನ್ನಡಕ್ಕೂ ಅಳವಡಿಸಲು ಪ್ರಯತ್ನಿಸಿವೆ; ಆದರೆ, ರಾಜುವಿಗೆ ಹಣ ಸಿಕ್ಕಿತು ಎಂಬಂತಹ ಸೊಲ್ಲುಗಳಲ್ಲಿ ಯಾವುದನ್ನು (ರಾಜುವಿಗೆ ಎಂಬುದನ್ನೋ, ಇಲ್ಲವೇ ಹಣ ಎಂಬುದನ್ನೋ) ಸಬ್ಜೆಕ್ಟ್ ಎಂಬುದಾಗಿ ತಿಳಿಯಬೇಕು ಎಂಬುದನ್ನು ತೀರ‍್ಮಾನಿಸಲಾಗದೆ ಸೋತುಹೋಗಿವೆ. ಸಿಕ್ಕಿತು ಎಂಬ ಹೆಸರುಪದದೊಂದಿಗೆ ಹೊಂದಾಣಿಕೆಯನ್ನು ಹಣ ಎಂಬ ಹೆಸರುಪದ ತೋರಿಸುವುದರಿಂದ ಅದನ್ನೇ ಸಬ್ಜೆಕ್ಟ್ ಎನ್ನಬೇಕಾಗುತ್ತದೆ; ಆದರೆ, ಹಣವನ್ನು ಪಡೆದಿರುವುದು ರಾಜುವಾದ ಕಾರಣ, ರಾಜುವೇ ಸೊಲ್ಲಿನ ಸಬ್ಜೆಕ್ಟ್ ಎಂದೂ ಅನಿಸುತ್ತದೆ. ಸಬ್ಜೆಕ್ಟ್, ಆಬ್ಜೆಕ್ಟ್ ಎಂಬಂತಹ ಈ ತತ್ವಗಳನ್ನು ಕನ್ನಡಕ್ಕೆ ಅಳವಡಿಸುವಲ್ಲಿ ಬೇರೆಯೂ ಕೆಲವು ತೊಂದರೆಗಳಿವೆ.

ನಿಜಕ್ಕೂ ಇವನ್ನು ಬಳಸದೆಯೇ ಕನ್ನಡದ ಸೊಲ್ಲರಿಮೆಯನ್ನು ವಿವರಿಸಲು ಬರುತ್ತದೆ; ಹಾಗಾಗಿ, ಅವನ್ನು ಬಳಸಲು ಹೋಗಿ ತೊಡಕುಗಳಿಗೆ ಯಾಕೆ ಸಿಲುಕಿಕೊಳ್ಳಬೇಕು?

-

  • 0 comment

  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 4
  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 6

Comments are closed.


ಭಾಗ 6: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 6

ದಿನಾಂಕ: 2017-05-31
ಮೂಲ URL: http://dnshankarabhat.net/%e0%b2%b6%e0%b2%ac%e0%b3%8d%e0%b2%a6%e0%b2%ae%e0%b2%a3%e0%b2%bf%e0%b2%a6%e0%b2%b0%e2%80%8d%e0%b3%8d%e0%b2%aa%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%b3%e0%b2%ae-6/


(7) ಎಸಕಪದಗಳ ರೂಪಗಳು:

ಎಸಕಪದಗಳ ಬಳಕೆಯಲ್ಲೂ ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವೆ ತಳಮಟ್ಟದ ವ್ಯತ್ಯಾಸಗಳಿವೆ:

(ಕ) ಹಳೆಗನ್ನಡದ ಎಸಕರೂಪಗಳಲ್ಲಿ ಎಸಕಪದಗಳ ಬಳಿಕ ಎಸಕದ ಹೊತ್ತನ್ನು ತಿಳಿಸುವ ‘ಹೊತ್ತಿನ ಒಟ್ಟು’ ಮತ್ತು ಅದನ್ನು ನಡೆಸಿದ ಮಾಡುಗನನ್ನು ಇಲ್ಲವೇ ಆಗುಗನನ್ನು ತಿಳಿಸುವ ‘ಗುರುತಿನ ಒಟ್ಟು’ ಎಂಬುದಾಗಿ ಎರಡು ಒಟ್ಟುಗಳು ಬಳಕೆಯಾಗುತ್ತವೆ; ಎತ್ತುಗೆಗಾಗಿ, ಪಡೆದನ್ (ಪಡೆ-ದ್-ಅನ್) ಎಂಬ ಎಸಕಪದರೂಪದಲ್ಲಿ ಪಡೆ ಎಂಬುದು ಎಸಕಪದ, ದ್ ಎಂಬುದು ಹಿಂಬೊತ್ತನ್ನು ತಿಳಿಸುವ ಹೊತ್ತಿನ ಒಟ್ಟು, ಮತ್ತು ಅನ್ ಎಂಬುದು ಗುರುತಿನ ಒಟ್ಟು; ಇರ‍್ಪಂ (ಇರ್-ಪ್-ಎಂ) ಎಂಬುದರಲ್ಲಿ ಇರ್ ಎಂಬುದು ಎಸಕಪದ, ಪ್ ಎಂಬುದು ಮುಂಬೊತ್ತನ್ನು ತಿಳಿಸುವ ಹೊತ್ತಿನ ಒಟ್ಟು, ಮತ್ತು ಎಂ ಎಂಬುದು ಗುರುತಿನ ಒಟ್ಟು.

ಇದಕ್ಕೆ ಬದಲು, ಸಂಸ್ಕ್ರುತದ ಎಸಕರೂಪಗಳಲ್ಲಿ ಎಸಕಪದದ ಬಳಿಕ ಮಾಡುಗ ಇಲ್ಲವೇ ಆಗುಗನನ್ನು ತಿಳಿಸುವ ಒಂದು ಒಟ್ಟು ಮಾತ್ರ ಬರುತ್ತದೆ; ಯಜ-ತಿ ಎಂಬ ಎಸಕರೂಪದಲ್ಲಿ ಯಜ ಎಂಬುದು ಎಸಕಪದರೂಪ, ಮತ್ತು ತಿ ಎಂಬುದು ಗುರುತಿನ ಒಟ್ಟು; ಗಚ್ಛಾ-ಮಿ ಎಂಬುದರಲ್ಲಿ ಗಚ್ಛಾ ಎಂಬುದು ಎಸಕಪದರೂಪ, ಮತ್ತು ಮಿ ಎಂಬುದು ಗುರುತಿನ ಒಟ್ಟು. ಸಂಸ್ಕ್ರುತದ ಎಸಕಪದರೂಪಗಳ ಹಾಗೆ ಹಳೆಗನ್ನಡದ ಎಸಕಪದರೂಪಗಳಲ್ಲೂ ಒಂದು ಒಟ್ಟನ್ನು ಮಾತ್ರ ಕಾಣಲು ಹೊರಟಿರುವ ಶಬ್ದಮಣಿದರ‍್ಪಣದಲ್ಲಿ ಹಳೆಗನ್ನಡದ ಎರಡು ಒಟ್ಟುಗಳಲ್ಲಿ ಒಂದನ್ನು (ಗುರುತಿನ ಒಟ್ಟನ್ನು) ಮಾತ್ರ ‘ಪ್ರತ್ಯಯ’ವೆಂದು ಕರೆಯಲಾಗಿದೆ, ಮತ್ತು ಅದರ ಮೊದಲು ಬರುವ ಹೊತ್ತಿನ ಒಟ್ಟನ್ನು ‘ಆಗಮ’ವೆಂದು ಕರೆಯಲಾಗಿದೆ.

(ಚ) ಹಳೆಗನ್ನಡದಲ್ಲಿ ಎಸಕದ ಹೊತ್ತನ್ನು ತಿಳಿಸಲು ಬೇರೆಯೇ ಒಟ್ಟನ್ನು ಬಳಸಲಾಗುತ್ತದೆಯೆಂಬುದನ್ನು ಮೇಲೆ ನೋಡಿರುವೆವು; ಇದಕ್ಕೆ ಬದಲು, ಸಂಸ್ಕ್ರುತದಲ್ಲಿ ಎಸಕಪದದ ರೂಪದಲ್ಲಿ ಇಲ್ಲವೇ ಗುರುತಿನ ಒಟ್ಟಿನ ರೂಪದಲ್ಲಿ ವ್ಯತ್ಯಾಸಗಳನ್ನು ಮಾಡುವ ಮೂಲಕ ಅದನ್ನು ತಿಳಿಸಲಾಗುತ್ತದೆ; ಇದಲ್ಲದೆ, ಹಳೆಗನ್ನಡದಲ್ಲಿ ಎಸಕದ ಸಮಯಕ್ಕೂ ಆಡುಗನ ಸಮಯಕ್ಕೂ ನಡುವಿರುವ ಸಂಬಂದವನ್ನು ಎಸಕರೂಪಗಳಲ್ಲಿ ಹೊತ್ತಿನ ಒಟ್ಟನ್ನು ಬಳಸುವ ಮೂಲಕ ತಿಳಿಸಲಾಗುತ್ತದೆ; ಬಂದೆನ್ ಎಂಬ ಎಸಕರೂಪದಲ್ಲಿ ಬಳಕೆಯಾಗಿರುವ ದ್ ಎಂಬ ಒಟ್ಟು ‘ಬರುವ ಎಸಕ’ ಆಡುಗನ ಹೊತ್ತಿಗಿಂತ ಮೊದಲು ನಡೆದಿದೆಯೆಂದು ತಿಳಿಸುತ್ತದೆ, ಮತ್ತು ಬರ‍್ಪೆನ್ ಎಂಬುದರಲ್ಲಿ ಬಳಕೆಯಾಗಿರುವ ಪ್ ಎಂಬ ಒಟ್ಟು ಅದು ಆಡುಗನ ಹೊತ್ತಿನ ಬಳಿಕ ನಡೆಯುತ್ತದೆಯೆಂದು ತಿಳಿಸುತ್ತದೆ.

ಇದಕ್ಕೆ ಬದಲು, ಸಂಸ್ಕ್ರುತದ ಎಸಕಪದರೂಪಗಳಲ್ಲಿ ಎಸಕವು ಪೂರ‍್ಣವಾದುದೋ ಇಲ್ಲವೇ ಅಪೂರ‍್ಣವಾದುದೋ ಎಂಬುದನ್ನು (ಎಂದರೆ ಹೊತ್ತಿನ ವ್ಯವಸ್ತೆಯನ್ನು) ತಿಳಿಸಲಾಗುತ್ತದೆ, ಮತ್ತು ಇದಕ್ಕಾಗಿ ಎಸಕಪದಗಳ ರೂಪಗಳಲ್ಲಿ ಮತ್ತು ಅವುಗಳ ಬಳಿಕ ಬರುವ ಗುರುತಿನ ಒಟ್ಟುಗಳಲ್ಲಿ ಮಾರ‍್ಪಾಡುಗಳನ್ನು ಮಾಡುವ ಮೂಲಕ ತಿಳಿಸಲಾಗುತ್ತದೆ. ಎತ್ತಿಗೆಗಾಗಿ, ತುದ-ತಿ ಎಂಬುದು ಕೊನೆಗೊಳ್ಳದ ಎಸಕವನ್ನು ತಿಳಿಸುತ್ತದೆ, ಮತ್ತು ತುತೋ-ದ ಎಂಬುದು ಕೊನೆಗೊಂಡ ಎಸಕವನ್ನು ತಿಳಿಸುತ್ತದೆ.

ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸಲಾಗದ ಶಬ್ದಮಣಿದರ‍್ಪಣ ಸಂಸ್ಕ್ರುತದ ಕಟ್ಟಲೆಗಳನ್ನೇ ಅಲ್ಲಲ್ಲಿ ತೇಪೆಹಾಕಿ ಹಳೆಗನ್ನಡದವೆಂದು ನಮ್ಮೆದುರಿಗಿರಿಸಿದೆ.

(ಟ) ಸಂಸ್ಕ್ರುತದಲ್ಲಿ ಗುರುತಿನ ಒಟ್ಟು (ಆಖ್ಯಾತ ಪ್ರತ್ಯಯ) ಮಾಡುಗ ಇಲ್ಲವೇ ಆಗುಗನ ಕುರಿತಾಗಿ ಆಡುಗ, ಕೇಳುಗ ಮತ್ತು ಹೆರತು ಎಂಬ ಮೂರು ಬಗೆಯ ಮಾತಾಳಿನ ವ್ಯತ್ಯಾಸವನ್ನು, ಮತ್ತು ಏಕ-ದ್ವಿ-ಬಹು ಎಂಬ ಮೂರು ಬಗೆಯ ಎಣಿಕೆಯ (ವಚನದ) ವ್ಯತ್ಯಾಸವನ್ನು ತಿಳಿಸುತ್ತದೆ; ಇದಕ್ಕೆ ಬದಲು, ಹಳೆಗನ್ನಡದಲ್ಲಿ ಗುರುತಿನ ಒಟ್ಟು ಮೂರು ಬಗೆಯ ಮಾತಾಳಿನ ವ್ಯತ್ಯಾಸ ಮತ್ತು ಎರಡು ಬಗೆಯ ಎಣಿಕೆಯ ವ್ಯತ್ಯಾಸಗಳನ್ನು ಮಾತ್ರವಲ್ಲದೆ ಮೂರು ಬಗೆಯ ಗುರ‍್ತ ವ್ಯತ್ಯಾಸವನ್ನೂ (ಗಂಡು, ಹೆಣ್ಣು, ಉಳಿಕೆ) ತೋರಿಸುತ್ತದೆ. ಸಂಸ್ಕ್ರುತದ ಗಚ್ಛತಿ ಎಂಬ ಓರೆಣಿಕೆಯ ಒಂದು ರೂಪಕ್ಕೆ ಬದಲಾಗಿ ಹಳೆಗನ್ನಡದಲ್ಲಿ ಪೋದನ್, ಪೋದಳ್ ಮತ್ತು ಪೋದುದು ಎಂಬ ಮೂರು ರೂಪಗಳಿವೆ.

ಇದನ್ನು ವಿವರಿಸುವಲ್ಲಿಯೂ ಕೂಡ, ಸಂಸ್ಕ್ರುತದ ಕಟ್ಟಲೆಗಳು ಶಬ್ದಮಣಿದರ‍್ಪಣವನ್ನು ಕಟ್ಟಿಹಾಕಿವೆ: ಹಳೆಗನ್ನಡದ ಎಸಕಪದರೂಪಗಳಲ್ಲಿ ಮಾತಾಳಿನ ಮತ್ತು ಎಣಿಕೆಯ ವ್ಯತ್ಯಾಸಗಳನ್ನು ತೋರಿಸುವ ಆರು ಒಟ್ಟುಗಳನ್ನು ಮಾತ್ರ ‘ಪ್ರತ್ಯಯ’ಗಳೆಂದು ಕರೆದು, ಗುರ‍್ತವ್ಯತ್ಯಾಸವನ್ನು ತೋರಿಸುವ ಒಟ್ಟುಗಳನ್ನು ‘ಆದೇಶ’ಗಳೆಂದು ಕರೆಯಲಾಗಿದೆ.

ಮಗು ಪದಕ್ಕೆ ಇನ ಒಟ್ಟನ್ನು ಸೇರಿಸಿದಾಗ ಅವುಗಳ ನಡುವೆ ವಕಾರ ಬರುವುದು ಮಗು+ಇನ ಎಂಬುದು ಮಗುವಿನ ಎಂದಾಗುವುದು) ಆಗಮ, ಮತ್ತು ಬಂಡೆ ಪದಕ್ಕೆ ಕಲ್ಲು ಪದವನ್ನು ಸೇರಿಸಿದಾಗ ಕಕಾರದ ಬದಲು ಗಕಾರ ಬರುವುದು (ಬಂಡೆ+ಕಲ್ಲು ಎಂಬುದು ಬಂಡೆಗಲ್ಲು ಎಂದಾಗುವುದು) ಆದೇಶ; ಎಂದರೆ, ಆಗಮ ಮತ್ತು ಆದೇಶ ಎಂಬ ಈ ಸೇರಿಕೆಯ ಮಾರ‍್ಪಾಡುಗಳು ಹುರುಳಿನ ವ್ಯತ್ಯಾಸವಿಲ್ಲದಿರುವಲ್ಲೂ ಉಲಿಗಳ ವ್ಯತ್ಯಾಸ ನಡೆದಿರುವುದನ್ನು ವಿವರಿಸಲು ಬಳಕೆಯಾಗುತ್ತವೆ. ಇಂತಹ ಸೇರಿಕೆಯ ಮಾರ‍್ಪಾಡುಗಳನ್ನು ಮೇಲೆ ವಿವರಿಸಿದ ಹಾಗೆ ಹುರುಳಿನ ವ್ಯತ್ಯಾಸ ಇರುವಲ್ಲೂ ಬಳಸುವುದು ನಿಜಕ್ಕೂ ವಿಚಿತ್ರವಾಗಿದೆ. ಪೋದನ್ ಎಂಬುದರ ಬದಲು ಪೋಪನ್ ಎಂಬುದನ್ನು ಬಳಸುವುದು, ಮತ್ತು ಪೋದನ್ ಎಂಬುದರ ಬದಲು ಪೋದಳ್ ಇಲ್ಲವೇ ಪೋದುದು ಎಂಬುದನ್ನು ಬಳಸುವುದು ಬರಿಯ ಸೇರಿಕೆ(ಸಂದಿ)ಯ ವ್ಯತ್ಯಾಸ ಹೇಗಾಗುತ್ತದೆ?

ಸಂಸ್ಕ್ರುತದ ಎಸಕಪದರೂಪಗಳಲ್ಲಿಲ್ಲದ ಹೊತ್ತಿನ ಒಟ್ಟನ್ನು ಮತ್ತು ಗುರ‍್ತವ್ಯತ್ಯಾಸವನ್ನು ಹಳೆಗನ್ನಡದ ಎಸಕಪದರೂಪಗಳಲ್ಲಿ ಕಾಣಲು ಶಬ್ದಮಣಿದರ‍್ಪಣಕ್ಕೆ ಸಾದ್ಯವಾಗದಿದ್ದುದೇ ಮೇಲಿನ ವಿಚಿತ್ರ ಹೇಳಿಕೆಗೆ ಕಾರಣವಾಗಿದೆ.

-

  • 0 comment

  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 5
  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 7

Comments are closed.


ಭಾಗ 7: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 7

ದಿನಾಂಕ: 2017-05-31
ಮೂಲ URL: http://dnshankarabhat.net/%e0%b2%b6%e0%b2%ac%e0%b3%8d%e0%b2%a6%e0%b2%ae%e0%b2%a3%e0%b2%bf%e0%b2%a6%e0%b2%b0%e2%80%8d%e0%b3%8d%e0%b2%aa%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a4%e0%b2%b3%e0%b2%ae-7/


(8) ಸೊಲ್ಲುಗಳನ್ನು ಜೋಡಿಸುವುದು:

ಎರಡು ಸೊಲ್ಲು(ವಾಕ್ಯ)ಗಳನ್ನು ಜೋಡಿಸುವುದಕ್ಕಾಗಿ ಹಳೆಗನ್ನಡದಲ್ಲಿ ಜೋಡಿಸುವ ಎಸಕರೂಪಗಳನ್ನು ಬಳಸಲಾಗುತ್ತದೆ; ಒಂದು ಎಸಕ ಇನ್ನೊಂದು ಎಸಕಕ್ಕಿಂತ ಮೊದಲು ನಡೆದಿದೆ (ಮೆಚ್ಚಿ ಪೇಳ್ದಂ, ವಂದು ಕಂಡಂ), ಬಳಿಕ ನಡೆದಿದೆ (ಕಾಣಲ್ ಪೋದಂ, ಗೆಯ್ಯಲ್ ಬಂದೆವು), ಇಲ್ಲವೇ ಅವರೆಡೂ ಒಟ್ಟಿಗೆ ನಡೆದಿವೆ (ಅಟ್ಟುತ್ತುಂ ಬಂದಂ, ನುಡಿಯುತ್ತುಂ ಪೋದಂ) ಎಂಬುದನ್ನು ತಿಳಿಸಲು ಇಂತಹ (ಎಂದರೆ, ಮೆಚ್ಚಿ, ಕಾಣಲ್, ಮತ್ತು ಅಟ್ಟುತ್ತುಂ ಎಂಬಂತಹ) ಮೂರು ಬಗೆಯ ಎಸಕರೂಪಗಳನ್ನು ಬಳಸಲಾಗುತ್ತದೆ; ಇದಲ್ಲದೆ, ಒಂದು ಎಸಕ ನಡೆಯದೆ ಇನ್ನೊಂದು ನಡೆದಿದೆ ಇಲ್ಲವೇ ನಡೆಯಲಿದೆ ಎಂಬುದನ್ನು ತಿಳಿಸಲು ಇನ್ನೊಂದು (ನಾಲ್ಕನೇ ಬಗೆಯ) ಜೋಡಿಸುವ ರೂಪವೂ ಬಳಕೆಯಲ್ಲಿದೆ (ಉಸಿರದೆ ಕುಳ್ಳಿರ‍್ದಂ, ಎವೆಯಿಕ್ಕದೆ ನೋೞ್ಪಂ).

ಇವುಗಳಲ್ಲಿ ಮೊದಲಿನ ಮೂರು (ಮೊದಲು, ಬಳಿಕ ಮತ್ತು ಒಟ್ಟಿಗೆ ಎಂಬುದನ್ನು ತಿಳಿಸುವ) ರೂಪಗಳು ಆಡುಗನ ಸಮಯಕ್ಕಿಂತ ಮೊದಲೂ ಬರಬಲ್ಲುವು ಮತ್ತು ಬಳಿಕವೂ ಬರಬಲ್ಲುವು (ಎತ್ತುಗೆಗಾಗಿ, ಮೆಚ್ಚಿ ಪೇಳ್ವೆಂ ಎಂಬ ಸೊಲ್ಲಿನಲ್ಲಿ ಮೆಚ್ಚುವ ಎಸಕ (ಮತ್ತು ಹೇಳುವ ಎಸಕ) ಆಡುಗನ ಸಮಯದ ಬಳಿಕ ನಡೆಯುತ್ತದೆ); ಹಾಗಾಗಿ, ಇವನ್ನು ಹಿಂಬೊತ್ತಿನ (ಬೂತ), ಮುಂಬೊತ್ತಿನ (ಬವಿಶ್ಯತ್), ಮತ್ತು ಈಪೊತ್ತಿನ (ವರ‍್ತಮಾನ) ರೂಪಗಳೆಂದು ಕರೆಯುವುದು ಸರಿಯಲ್ಲ. ಇದಲ್ಲದೆ, ಇವುಗಳ ಮೂಲಕ ಜೋಡಿಸಿರುವ ಸೊಲ್ಲುಗಳೆರಡರಲ್ಲೂ ಮಾಡುಗರು ನಡೆಸುವ ಎಸಕಗಳನ್ನು ತಿಳಿಸಲಾಗಿದೆಯಾದರೆ, ಆ ಎರಡು ಎಸಕಗಳಿಗೂ ಮಾಡುಗ ಒಬ್ಬನೇ ಆಗಿರಬೇಕೆಂಬ ಕಟ್ಟುಪಾಡೂ ಇದೆ. ಎಸಕಗಳ ಮಾಡುಗರು ಬೇರೆ ಬೇರಾಗಿರುವಲ್ಲಿ ಬಳಸುವುದಕ್ಕಾಗಿ ಬೇರೆಯೇ ಒಂದು ಜೋಡಿಸುವ ರೂಪ ಬಳಕೆಯಲ್ಲಿದೆ (ಪಾಂಡ್ಯನ್ ತೋಮರದಿಂದ ಇಡೆ, ಗುರುತನೂಜಂ ಎಡೆಯೊಳ್ ಕಡಿದಂ).

ಒಂದು ಎಸಕಕ್ಕೆ ಇನ್ನೊಂದು ಎಸಕ ಬೇಡಿಕೆ ಎಂಬುದನ್ನು ತಿಳಿಸುವುದಕ್ಕಾಗಿಯೂ ಜೋಡಿಸುವ ಎಸಕರೂಪವನ್ನು ಬಳಸಲಾಗುತ್ತದೆ; ಇಂತಹ ಕಡೆಗಳಲ್ಲಿ ಬೇಡಿಕೆಯಾಗಿರುವ ಎಸಕವನ್ನು ತಿಳಿಸುವ ಪದದ ಪರಿಚೆರೂಪಕ್ಕೆ ಒಡೆ ಎಂಬ ಒಟ್ಟನ್ನು ಸೇರಿಸಲಾಗುತ್ತದೆ (ಪತಿ ಸತ್ತೊಡೆ ನರಕಂಗಳೊಳ್ ಅೞ್ಗುಗುಂ, ರಾಜನಪ್ಪೊಡೆ ಕುಡುವೆಂ, ಪೇೞದೊಡೆ ಪೋಗದಿರ್). ಈ ಎಸಕರೂಪದಲ್ಲಿ ಬರುವ ದ್ ಮತ್ತು ವ್(ಪ್) ಒಟ್ಟುಗಳಿಗೆ ಬೇರೆಯೇ ಹುರುಳಿರುವುದನ್ನು ಕಾಣಬಹುದು: ಸಾಮಾನ್ಯವಾಗಿ ಇವೆರಡೂ ಮುಂಬೊತ್ತಿನ ಎಸಕಗಳನ್ನೇ ತಿಳಿಸುತ್ತವೆ; ಆದರೆ, ಬೇಡಿಕೆಯನ್ನು ತಿಳಿಸುವ ಎಸಕರೂಪದಲ್ಲಿ ದ್ ಒಟ್ಟು ಬಂದಿದೆಯಾದರೆ, ಅದು ತಿಳಿಸುವ ಎಸಕ ಅದನ್ನು ಅವಲಂಬಿಸಿರುವ ಎಸಕಕ್ಕಿಂತ ಮೊದಲೇ ನಡೆದಿರಬೇಕೆಂಬ ಹುರುಳು ಸಿಗುತ್ತದೆ, ಮತ್ತು ವ್ ಒಟ್ಟು ಬಂದಿದೆಯಾದರೆ, ಅದನ್ನು ಅವಲಂಬಿಸಿರುವ ಎಸಕದ ಬಳಿಕ ನಡೆದರೆ ಸಾಕೆಂಬ ಹುರುಳು ಸಿಗುತ್ತದೆ. (ಪತಿ ಸತ್ತೊಡೆ ನರಕಂಗಳೊಳ್ ಅೞ್ಗುಗುಂ ಎಂಬಲ್ಲಿ ಪತಿ ಸಾಯುವ ಎಸಕ ಅದನ್ನು ಅವಲಂಬಿಸಿರುವ ನರಕಗಳಲ್ಲಿ ಮುಳುಗುವ ಎಸಕಕ್ಕಿಂತ ಮೊದಲು ನಡೆದಿರಬೇಕಾಗುತ್ತದೆ; ಆದರೆ, ರಾಜನಪ್ಪೊಡೆ ಕುಡುವೆಂ ಎಂಬಲ್ಲಿ ರಾಜನಾಗುವ ಎಸಕ ಅದನ್ನು ಅವಲಂಬಿಸಿರುವ ಕೊಡುವ ಎಸಕದ ಬಳಿಕ ನಡೆಯಬಲ್ಲುದು).

ಸಂಸ್ಕ್ರುತದಲ್ಲಿಯೂ ಎರಡು ಸೊಲ್ಲುಗಳನ್ನು ಜೋಡಿಸುವುದಕ್ಕಾಗಿ ಎಸಕರೂಪಗಳನ್ನು ಬಳಸಲಾಗುತ್ತದೆ; ಆದರೆ, ಇದಕ್ಕಾಗಿ ಬಳಕೆಯಾಗುವ ಎಸಕರೂಪಗಳು ಹಲವು ಬಗೆಯವಾಗಿದ್ದು, (ಅರಣ್ಯೇ ಚರನ್ ಮೃಗಮೇಕಂ ಅಪಶ್ಯಂ, ಭೋಜನಂ ಕೃತ್ವಾ ಗ್ರಾಮಂ ಗತಃ, ತಸ್ಮಿನ್ ರಾಜ್ಞಿ ಸತಿ ಕಃ ಭೂಮಿಂ ಜಯೇತ್, ವೇತ್ತಿ ಚೇತ್ ಭವಾನ್ ವಕ್ತು), ಅವುಗಳ ಹಿಂದೆ ಹಳೆಗನ್ನಡದಲ್ಲಿರುವಂತಹ ಅಚ್ಚುಕಟ್ಟು ಕಾಣಿಸುವುದಿಲ್ಲ. ಸೊಲ್ಲುಗಳನ್ನು ಜೋಡಿಸುವ ಈ ಹೊಲಬನ್ನು ಅದು ದ್ರಾವಿಡ ನುಡಿಗಳಿಂದ ಎರವಲು ಪಡೆದುದೇ ಇದಕ್ಕೆ ಕಾರಣವಿರಬೇಕೆಂದು ಹೇಳಲಾಗುತ್ತದೆ. ಇಂಡೋ-ಯುರೋಪಿಯನ್ ಮೂಲನುಡಿಯಿಂದ ಅದು ಈ ಹೊಲಬನ್ನು ಪಡೆದಿಲ್ಲ.

ಹಾಗಾಗಿ, ಹಳೆಗನ್ನಡದ ಜೋಡಿಸುವ ರೂಪಗಳ ಹಿಂದಿರುವ ಅಚ್ಚುಕಟ್ಟನ್ನು ಗಮನಿಸುವಲ್ಲಿ ಶಬ್ದಮಣಿದರ‍್ಪಣ ಸೋತುಹೋಗಿದೆ; ಇದಲ್ಲದೆ, ಈ ಪದರೂಪಗಳ ಬಳಕೆಯ ಕುರಿತಾಗಿ ಕೆಲವು ತಪ್ಪು ಹೇಳಿಕೆಗಳನ್ನೂ ಅದು ಕೊಟ್ಟಿದ್ದು, ಅದರಲ್ಲಿ ಗೊಂದಲವೇ ಕಾಣಿಸುತ್ತದೆ.

ಮೇಲೆ ಕೊಟ್ಟಿರುವ ಎಂಟು ತಳಮಟ್ಟದ ವ್ಯತ್ಯಾಸಗಳು ಮಾತ್ರವಲ್ಲದೆ ಬೇರೆಯೂ ಹಲವು ತಳಮಟ್ಟದ ವ್ಯತ್ಯಾಸಗಳು ಹಳೆಗನ್ನಡ ಮತ್ತು ಸಂಸ್ಕ್ರುತ ವ್ಯಾಕರಣಗಳ ನಡುವೆ ಇವೆ. ಇವುಗಳ ಕುರಿತಾಗಿ ಹೆಚ್ಚಿನ ವಿವರಗಳನ್ನು ನನ್ನ ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು? ಎಂಬ ಪುಸ್ತಕದಲ್ಲಿ ನೋಡಬಹುದು. ಇಂತಹ ವ್ಯತ್ಯಾಸಗಳಲ್ಲಿ ಹೆಚ್ಚಿನವನ್ನೂ ಗಮನಿಸದ, ಮತ್ತು ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳನ್ನು ಹಳೆಗನ್ನಡದ ಪದ, ಪದರೂಪ, ಮತ್ತು ಸೊಲ್ಲುಗಳಲ್ಲಿ ಕಾಣಲು ಪ್ರಯತ್ನಿಸುವ ಶಬ್ದಮಣಿದರ‍್ಪಣ ‘ಹಳೆಗನ್ನಡದ ಒಳ್ಳೆಯ ವ್ಯಾಕರಣ’ವೆಂದೆನಿಸಲು ಸಾದ್ಯವೇ ಇಲ್ಲ.

-

  • 0 comment

  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 6

Comments are closed.